ಮೈಸೂರು: ನಾಡಹಬ್ಬ ದಸರಾ ಮಹೋತ್ಸವದ ಅಂಗವಾಗಿ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಪ್ರಮುಖ ಆಕರ್ಷಣೆಗಳಲ್ಲೊಂದಾದ ಸಮೂಹ ಪೊಲೀಸ್ ಬ್ಯಾಂಡ್ ತಂಡ ತನ್ನ ವಿಶೇಷ ವಾದ್ಯಗಳ ಸಂಗೀತದೊಂದಿಗೆ ದಸರಾ ಉತ್ಸವಕ್ಕೆ ಮೆರುಗು ನೀಡಿತು.
ಮಂಗಳವಾರ ಸಂಜೆ ಅರಮನೆಯ ಸಾಂಸ್ಕೃತಿಕ ವೇದಿಕೆಯಲ್ಲಿ ಸುಮಾರು ೪೫೦ ಮಂದಿ ಪೊಲೀಸ್ ಸಿಬ್ಬಂದಿ ವಿವಿಧ ವಾದ್ಯಗಳ ಮೂಲಕ ಗಂಧರ್ವ ಲೋಕವನ್ನೇ ಸೃಷ್ಟಿ ಮಾಡಿದರು. ಸಂಜೆ ೭ ಗಂಟೆಗೆ ಆರಂಭವಾದ ಪೊಲೀಸ್ ಬ್ಯಾಂಡ್ನಲ್ಲಿ ಮೈಸೂರು ಸೇರಿದಂತೆ ರಾಜ್ಯದ ವಿವಿಧ ಭಾಗಗಳ ಪೊಲೀಸರು ಕನ್ನಡ ಮತ್ತು ಇಂಗ್ಲಿಷ್ನ ಎರಡು ತಂಡಗಳಲ್ಲಿ ಸಮೂಹ ವಾದ್ಯಗಳ ಮೂಲಕ ಸುಮಾರು ಒಂದೂವರೆ ತಾಸು ಸಂಗೀತ ಕಾರ್ಯಕ್ರಮ ನೀಡಿದವು.
ಸಂಗೀತದ ಮೂಲಕ ಜನರಲ್ ಸಲ್ಯೂಟ್
ಪೊಲೀಸ್ ತಂಡವು ಬ್ಯಾಂಡ್ ಕಾರ್ಯಕ್ರಮಕ್ಕೆ ರಾಯಲ್ ಫ್ಯಾನ್ ಫೇರ್ ಕೃತಿಯ ಸಂಗೀತ ನುಡಿಸಿ ಮುಖ್ಯ ಅತಿಥಿಗಳಿಗೆ ಸ್ವಾಗತ ಕೋರುವುದರೊಂದಿಗೆ ತಮ್ಮ ಸಂಗೀತ ಕಾರ್ಯಕ್ರಮಕ್ಕೆ ಚಾಲನೆ ನೀಡಿತು. ನಂತರ ಅತಿಥಿಗಳಿಗೆ ಸಂಗೀತದ ಮೂಲಕ ಜನರಲ್ ಸಲ್ಯೂಟ್ ನಡೆಸಲಾಯಿತು. ಇದರ ನಂತರ ೪೫೦ಕ್ಕೂ ಹೆಚ್ಚು ಮಂದಿ ಸೇರಿ ವಂದೇ ಮಾತರಂ, ಏ ಮೇರಿ ವತನ್ ಕೇ ಲೋಗೋ, ಭಾರತ್ ಹಮ್ ಕೋ ಜಾನ್ಸೆ ಪ್ಯಾರ ಎಂಬ ಹಾಡುಗಳನ್ನು ವಾದ್ಯಗಳ ಮೂಲಕ ನುಡಿಸಿ ಪ್ರೇಕ್ಷಕರ ಕರತಾಡನಕ್ಕೆ ಪಾತ್ರರಾದರು. ಭಕ್ತಿಗೀತಗಳ ಮೆರುಗು ಕರ್ನಾಟಕ ವಾದ್ಯವೃಂದದಿಂದ ನಮ್ಮಮ್ಮ ಶಾರದೆ ಉಮಾ ಮಹೇಶ್ವರಿ ಎಂಬ ಹಾಡನ್ನು ನುಡಿಸಲಾಯಿತು. ಪ್ರೀಣಯಾಮೋ ವಾಸುದೇವಂ, ಶ್ರೀ ರಾಮಚಂದ್ರ ಕೃಪಾಲು ಭಜನಮ ಎಂಬ ಭಕ್ತಿಗೀತೆಗಳನ್ನು ವಾದ್ಯಗಳ ಮೂಲಕ ಪ್ರಸ್ತುತಪಡಿಸಲಾಯಿತು.
ಎ. ಆರ್. ರೆಹಮಾನ್ ಸಾಂಗ್ಸ್
ಮೆಡ್ಲೇ ಆಂಗ್ಲ ವಾದ್ಯವೃಂದದಿಂದ ಲೈಟ್ ಕ್ಯಾವೆಲರಿ, ರಾಖಿ ಮೆಡ್ಲೀ, ಖ್ಯಾತ ಸಂಗೀತ ನಿರ್ದೇಶಕ ಎ. ಆರ್.ರೆಹಮಾನ್ ಅವರ ಸುಪ್ರಸಿದ್ಧ ಆರು ಗೀತೆಗಳನ್ನು ಒಟ್ಟುಗೂಡಿಸಿ ಎ. ಆರ್. ರೆಹಮಾನ್ ಸಾಂಗ್ಸ್ ಮೆಡ್ಲೇ ಎಂಬ ಹೆಸರಿನಲ್ಲಿ ವಾದ್ಯಗಳನ್ನು ನುಡಿಸಿ ಪ್ರೇಕ್ಷಕರಿಂದ ಪ್ರಶಂಸೆ ಪಡೆದರು.
ಮನಸೆಳೆದ ಜುಗಲ್ ಬಂದಿ
ನಂತರ ವಯೋಲಿನ್ ಕಲಾವಿದ ಪದ್ಮಭೂಷಣ ಡಾ. ಎಲ್. ಸುಬ್ರಹ್ಮಣ್ಯ ಅವರ ಕಾನ್ವರ್ಸೆಷನ್ ಎಂಬ ಸಂಯೋಜನೆಯನ್ನು ಕರ್ನಾಟಕ ಸಂಗೀತ ಹಾಗೂ ಆಂಗ್ಲ ವಾದ್ಯವೃಂದದವರು ಜುಗಲ್ಬಂದಿ ರೂಪದಲ್ಲಿ ಪ್ರಸ್ತುತಪಡಿಸಿದ್ದು, ಸಂಗೀತ ಪ್ರಿಯರನ್ನು ತಲೆದೂಗುವಂತೆ ಮಾಡಿದರು.
ಡ್ರಮ್ಮರ್ ಡಿಲೈಟ್ ಆಕರ್ಷಣೆ
ನಂತರ ಸಮೂಹ ವಾದ್ಯ ಮೇಳದಲ್ಲಿನ ಡ್ರಮ್ಮರ್ಸ್ ಅವರಿಂದ ಡ್ರಮ್ಮರ್ ಡಿಲೈಟ್ ಎಂಬ ಕಾರ್ಯಕ್ರಮ ನೋಡುಗರನ್ನು ಸೂಜಿಗಲ್ಲಿನಂತೆ ಸೆಳೆಯುವಲ್ಲಿ ಯಶಸ್ವಿಯಾಯಿತು. ವಿಶೇಷವಾಗಿ ಕನ್ನಡ ಮತ್ತು ಇಂಗ್ಲಿಷ್ನ ಒಟ್ಟು ೧೨ ಕೃತಿಗಳು ಪೊಲೀಸ್ ಬ್ಯಾಂಡ್ ಕಾರ್ಯಕ್ರಮದಲ್ಲಿ ಪ್ರೇಕ್ಷಕರ ಮನ ಸೂರೆಗೊಂಡವು. ಸಾರೆ ಜಹಾನ್ ಸೆ ಅಚ್ಚಾ ಗೀತೆಯೊಂದಿಗೆ ಕಾರ್ಯಕ್ರಮ ಸಂಪನ್ನಗೊಂಡಿತು. ಪೊಲೀಸ್ ಬ್ಯಾಂಡ್ ಕಲಾವಿದರು ಕ್ಲಾರಿಯೋನೆಟ್, ಪಿಕೋಲೊ, ಕೊಳಲು, ಬ್ಯಾಸೂನ್, ಸ್ಯಾಕ್ಸೋಫೋನ್, ಟ್ರುಂಪೆಟ್ಸ್, ಫ್ರೆಂಚ್ ಹಾರ್ನ್, ಸರ್ಕಲ್ ಬೇಸ್, ತುಬಾ, ಡ್ರಮ್ಸ್, ಪಿಯಾನೋ, ವಯಲಿನ್, ಸೆಲೋ, ಡಬ್ಬಲ್ ಬೇಸ್, ಗ್ರೇಸಿಯನ್ ಹಾಪ್ಸ್ ಮುಂತಾದ ವಾದ್ಯಗಳನ್ನು ಬಳಸಿದ್ದರು. ಕಾರ್ಯಕ್ರಮದಲ್ಲಿ ಗೃಹಸಚಿವ ಡಾ. ಜಿ. ಪರಮೇಶ್ವರ್, ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಚ್. ಸಿ. ಮಹದೇವಪ್ಪ, ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ, ಶಾಸಕರಾದ ತನ್ವೀರ್ ಸೇಠ್, ಅನಿಲ್ ಚಿಕ್ಕಮಾದು, ಶ್ರೀವತ್ಸ, ಪೊಲೀಸ್ ಮಹಾನಿರ್ದೇಶಕ ಅಲೋಕ್ ಮೋಹನ್, ಸೇರಿದಂತೆ ಹಿರಿಯ, ಕಿರಿಯ ಅಽಕಾರಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
೧೫೬ ವರ್ಷ ಇತಿಹಾಸ
ಪೊಲೀಸ್ ಬ್ಯಾಂಡ್ಗೆ ಸುಮಾರು ೧೫೬ ವರ್ಷಗಳ ಇತಿಹಾಸವಿದೆ. ಮೈಸೂರು ಸಂಸ್ಥಾನದ ಅಂದಿನ ಮಹಾರಾಜ ಜಯಚಾಮರಾಜೇಂದ್ರ ಒಡೆಯರ್ ಅವರು ಸಂಗೀತ ಅಭಿರುಚಿ ಉಳ್ಳವರಾಗಿದ್ದರು. ಹಾಗಾಗಿ ೧೮೬೮ ರಲ್ಲಿ ಅರಮನೆ ಬ್ಯಾಂಡ್ ಅನ್ನು ಸ್ಥಾಪಿಸಿದರು. ಸ್ವಾತಂತ್ರ್ಯಾ ನಂತರ ಅರಮನೆ ಬ್ಯಾಂಡ್ ಪೊಲೀಸ್ ಇಲಾಖೆಗೆ ಸೇರ್ಪಡೆಗೊಂಡಿತು. ಅಂದಿನಿಂದ ಇಂದಿನ ವರೆಗೂ ಈ ಪೊಲೀಸ್ ಬ್ಯಾಂಡ್ ದಸರಾ ಮಹೋತ್ಸವದಲ್ಲಿ ತನ್ನದೇ ಆದ ಪ್ರಮುಖ್ಯತೆ ಪಡೆದಿದೆ.
ಮಂಡ್ಯ : ಪ್ರಧಾನಿ ನರೇಂದ್ರ ಮೋದಿ ಅವರು ನಾಳೆ (ಏಪ್ರಿಲ್ 15) ಜಿಲ್ಲೆಯ ನಾಗಮಂಗಲ ತಾಲ್ಲೂಕಿನ ಆದಿಚುಂಚನಗಿರಿ ಶ್ರೀಕ್ಷೇತ್ರಕ್ಕೆ ಮೊದಲ…
ವಾಷಿಂಗ್ಟನ್ : ಪಾಕಿಸ್ತಾನದ ಇಸ್ಲಾಮಾಬಾದ್ನಲ್ಲಿ ನಡೆದ ಅಮೆರಿಕ-ಇರಾನ್ ಮಾತುಕತೆ ವಿಫಲವಾದ ನಂತರ, ಎರಡು ವಾರಗಳ ಕದನ ವಿರಾಮ ಕೊನೆಗೊಳ್ಳುವ ಮೊದಲು,…
ಬೆಂಗಳೂರು : ಅಸ್ಪೃಶ್ಯತೆ ಆಚರಣೆ, ಅಸಮಾನತೆ ವಿರುದ್ಧದ ಹೋರಾಟಗಳಲ್ಲಿ ಪಾಲ್ಗೊಂಡು, ಸಮ ಸಮಾಜ ನಿರ್ಮಾಣದ ಹಾದಿಯಲ್ಲಿ ಛಾಪು ಮೂಡಿಸಿದ ಐವರು…
ಟೆಹ್ರಾನ್ : ಅಮೆರಿಕ ಸರ್ಕಾರ ಹೇರಿದ ನೌಕಾ ದಿಗ್ಬಂಧನ ಎದುರಿಸಿ ಇರಾನ್ನ ಹಡಗುಗಳು ಹಾರ್ಮುಜ್ ಜಲಸಂಧಿ ದಾಟುವುದನ್ನು ಮುಂದುವರಿಸಿವೆ. ಕನಿಷ್ಠ…
ಮೈಸೂರು : ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಹೋರಾಟದ ಬದುಕು ಮತ್ತು ಅವರು ಪ್ರತಿಪಾದಿಸಿದ ಸಮಾನತೆಯ ತತ್ವಗಳನ್ನು ಪ್ರತಿಯೊಬ್ಬರೂ ತಮ್ಮ…
ಚಾಮರಾಜನಗರ : ತಾಲ್ಲೂಕಿನ ವಿ.ಸಿ.ಹೊಸೂರು ಗ್ರಾಮಸ್ಥರು ತಮ್ಮ ಊರಿಗೆ ಇನ್ನೂ ಪೂರ್ವ ಮುಂಗಾರು ಮಳೆ ಪ್ರವೇಶ ಆಗದ ಹಿನ್ನೆಲೆಯಲ್ಲಿ ಮಳೆಗಾಗಿ…