Andolana originals

ಮನುಷ್ಯನ ಮುಖವಾಡ ಕಳಚುವ ನಾಟಕ ‘ಪಾರ್ಟಿ’

ಮಹೇಶ ಎಲಕುಂಚವಾರ್ ಅವರ ಪ್ರಸಿದ್ಧ ಮರಾಠಿ ನಾಟಕವನ್ನು ರಂಗಕರ್ಮಿ ಪ್ರಸಾದ್ ಕುಂದೂರು ಕನ್ನಡಕ್ಕೆ ಅನುವಾದಿಸಿದ್ದಾರೆ

ಮರಾಠಿಯ ಮಹೇಶ ಎಲಕುಂಚವಾರ ಅವರ ಪ್ರಸಿದ್ಧ ನಾಟಕಗಳಲ್ಲಿ ಒಂದಾದ ‘ಪಾರ್ಟಿ’ ಸಮಾಜದ ಉನ್ನತ ವರ್ಗ ಎಂದುಕೊಂಡಿರುವ ಮನುಷ್ಯನ ಮುಖವಾಡಗಳನ್ನು ಕಳಚುವ ನಾಟಕ.

ಮೈಸೂರಿನ ನಿರಂತರ ರಂಗತಂಡದ ಮುಂದಾಳು ಪ್ರಸಾದ್ ಕುಂದೂರು ಅವರ ಪ್ರಯತ್ನದ ಫಲವಾಗಿ ಮರಾಠಿಯ ಅತ್ಯುತ್ತಮ ನಾಟಕವೊಂದು ಕನ್ನಡಕ್ಕೆ ಬಂದಂತೆ ಆಗಿದೆ. ಸ್ವತಃ ರಂಗ ನಿರ್ದೇಶಕರಾದ ಪ್ರಸಾದ್ ಅವರು ಅತ್ಯುತ್ತಮವಾಗಿ ಕನ್ನಡಕ್ಕೆ ತಂದಿದ್ದು. ಅನುವಾದ ಆಪ್ತವಾಗಿದೆ. ಒಂದು ರಾತ್ರಿಯಲ್ಲಿ ನಡೆಯುವ ಕಥಾಹಂದರ ಈ ನಾಟಕ ತಿರುಳು. ಕೇಂದ್ರದಲ್ಲಿ ಮಂತ್ರಿಯಾಗಿರುವವನ ಮಗಳು ದಮಯಂತಿ ಪ್ರಖ್ಯಾತ ನಾಟಕಕಾರ ದಿವಾಕರ ಬರ್ವೆಗೆ ರಾಷ್ಟ್ರೀಯ ಗೌರವ ದೊರೆತ ಕಾರಣಕ್ಕೆ ತನ್ನ ಮನೆಯಲ್ಲಿ ಪಾರ್ಟಿ ಆಯೋಜಿಸುತ್ತಾಳೆ.

ಬರ್ವೆ ತಮ್ಮ ಜೊತೆ ಏಳು ವರ್ಷಗಳಿಂದ ಸಹ ಜೀವನ ನಡೆಸುತ್ತಿರುವ ಮೋಹಿನಿಯ ಜೊತೆ ಪಾರ್ಟಿಗೆ ಆಗಮಿಸುತ್ತಾರೆ. ಮೇಲ್ನೋಟಕ್ಕೆ ಇಲ್ಲಿ ಎಲ್ಲರೂ ಸ್ನೇಹಿತರು, ಪರಿಚಿತರು. ಆದರೆ ಆಂತರಿಕವಾಗಿ ಒಬ್ಬರನ್ನು ಕಂಡರೆ ಒಬ್ಬರಿಗೆ ಆಗದವರು. ಪ್ರಸಿದ್ಧ ಕಮರ್ಷಿಯಲ್ ನಾಟಕಕಾರ ಅಗಾಷೆ, ದಮಯಂತಿಯ ಮಗಳು ಸೋನಾಳನ್ನು ಮದುವೆಯಾದರೆ ಇನ್ನೂ ಎತ್ತರಕ್ಕೆ ಬೆಳೆಯಬಹುದು ಎನ್ನುವ ಆಲೋಚನೆಯಿಂದ ಅವಳನ್ನು ಸೆಳೆಯುವ ಯತ್ನದಲ್ಲಿದ್ದಾನೆ. ಯುವ ನಾಟಕಕಾರ ಭರತ್ ಎಲ್ಲರನ್ನೂ ಪುಸಲಾಯಿಸಿ ಪ್ರಸಿದ್ಧಿ ಪಡೆಯಬೇಕು ಎಂದುಕೊಂಡಿರುವವನು. ಪ್ರಿಯಕರನಿಂದ ಮೋಸಕ್ಕೆ ಒಳಗಾಗಿ ಮಗು ಪಡೆದು ಮುಖ್ಯವಾಹಿನಿ ಸಮಾಜದಿಂದ ದೂರವಿರುವ ಸೋನಾ. ಡಾಕ್ಟರ್ ಹಾಗೂ ಸೋನಾ ಹೊರತಾಗಿ ಪಾರ್ಟಿಯೊಳಗೆ ಇರುವ ಹೆಚ್ಚಿನ ಜನ ತಮ್ಮನ್ನು ತಾವು ಬುದ್ಧಿಜೀವಿ ಎಂದು ಕರೆದುಕೊಳ್ಳುತ್ತಾರೆ. ಆದರೆ ಮೈತುಂಬ ಕ್ಷುದ್ರ ರಾಜಕೀಯ ಹೊದ್ದು ಮುಳುಗಿದ್ದಾರೆ.

ರಾಷ್ಟ್ರಮಟ್ಟದಲ್ಲಿ ಗೌರವಿಸುವ ನಾಟಕಕಾರ ದಿವಾಕರ ಬರ್ವೆ ಯುವ ನಾಟಕಕಾರ ಭರತ್‌ನ ಬೆಳವಣಿಗೆ ಸಹಿಸದ ಮನುಷ್ಯ. ತಾನು ಹೇಗೆ ಅಭದ್ರತೆ ಅನುಭವಿಸುತ್ತಿದ್ದೇನೆ ಎಂದು ಹೇಳುತ್ತಾ ಹೋಗುತ್ತಾನೆ. ಹೀಗೆ ಪ್ರತಿಯೊಂದು ಪಾತ್ರಗಳು ಹೇಗೆ ತಾವು ಅಸುರಕ್ಷಿತವಾಗಿದ್ದೇವೆ ಎಂದು ಅವರವರೇ ಅನಾವರಣ ಮಾಡಿಕೊಳ್ಳುತ್ತಾ ಹೋಗುತ್ತಾರೆ. ಮಾಜಿ ಕಮ್ಯುನಿಸ್ಟ್ ವೃಂದಾ, ಸೋಶಲೈಟ್ ಮಾಲವಿಕಾ ಮತ್ತು ಆಕೆಯ ವ್ಯಾಪಾರಿ ಪತಿ ನರೇಂದ್ರ, ಪತ್ರಕರ್ತ ಜೋಗದಂಡ ಹಾಗೂ ದಮಯಂತಿ ಸಹವರ್ತಿ ಡಾಕ್ಟರ್ ಹೀಗೆ ಇಷ್ಟು ಪಾತ್ರಗಳು ನಾಟಕದಲ್ಲಿವೆ. ರಂಗದ ಮೇಲೆ ಬರದೇ ಇದ್ದರೂ ಇವರೆಲ್ಲರ ಚರ್ಚೆಯ ಕೇಂದ್ರವಾಗಿ ಆದಿವಾಸಿಗಳ ಪರವಾಗಿ ಹೋರಾಟ ಮಾಡುತ್ತಿರುವ ಯುವ ಲೇಖಕ ಅಮೃತ ಚರ್ಚೆಯ ವಸ್ತುವಾಗುತ್ತಾನೆ. ಸಮಾಜದ ಸಮಸ್ಯೆಗಳಿಗೆ ಇವರ ಪ್ರತಿಕ್ರಿಯೆ ಎಷ್ಟು ಶೂನ್ಯ ಎಂದು ನಾಟಕ ಸೊಗಸಾಗಿ ಹೇಳುತ್ತದೆ. ಈ ದೇಶದಲ್ಲಿ ಏನೇ ಆದರೂ ನನಗೇನೂ ಹೊಟ್ಟೆಪಾಡು ನಡೆಯಬೇಕು ಎನ್ನುವ ವ್ಯಾಪಾರಿ ನರೇಂದ್ರ ಎಲ್ಲರ ಪ್ರತಿನಿಧಿಯಾಗಿ ಕಾಣುತ್ತಾನೆ. ಈ ನಾಟಕ ಪತ್ರಕರ್ತ ಜೋಗದಂಡ ಹೊತ್ತು ತರುವ ಕೆಟ್ಟ ಸುದ್ದಿಯ ಮೂಲಕ ಮುಗಿಯುತ್ತದೆ. ಆ ಸುದ್ದಿಗೆ ಈ ವರ್ಗದ ಜನರ ಪ್ರತಿಕ್ರಿಯೆ ಹೇಗೆ ಇರುತ್ತದೆ ಎಂದು ಕೊನೆಯಲ್ಲಿ ಚಿತ್ರಿಸಲಾಗಿದೆ.

ಈ ನಾಟಕ ಬರೆದು ಐವತ್ತು ವರ್ಷಗಳಾದರೂ ಇಂದಿನ ಸಮಯಕ್ಕೂ ಹೊಂದುವ ನಾಟಕವಾಗಿದೆ. ಇಂದಿನ ಸಮಾಜದ ಚರಿತ್ರೆಯನ್ನು ಸಹದರ್ಶಿಸುತ್ತದೆ. ಹೌದಲ್ಲ, ಈಗಲೂ ನಮ್ಮ ಜನರು ಇದೇ ರೀತಿ ಇದ್ದಾರೆ ಅಲ್ಲವೇ ಎನ್ನುವ ಸತ್ಯವನ್ನು ಹೊರಗೆಡಹುತ್ತದೆ. ಇಂತಹ ವಿಚಾರಗಳೇ ಈ ನಾಟಕವನ್ನು ಸಾರ್ವಕಾಲಿಕಗೊಳಿಸಿದೆ. ಇಲ್ಲಿನ ಸಂಭಾಷಣೆಗಳು ನಾಟಕವು ಕಲಾ ಜಗತ್ತಿನ ರಾಜಕೀಯ, ಪರಸ್ಪರ ಸಂಬಂಧಗಳ ಒಳಗಿನ ರಾಜಕೀಯ ಮತ್ತು ದೇಶದ ರಾಜಕೀಯ ಮೇಲಿನ ವ್ಯಾಖ್ಯೆಯನ್ನು ಪ್ರತಿಧ್ವನಿಸುತ್ತವೆ.

ಮಹೇಶ್ ಎಲಕುಂಚವಾರ್ ಮಹಾರಾಷ್ಟ್ರದ ಪರ್ವಾ ಎಂಬ ಸಣ್ಣ ಗ್ರಾಮದಲ್ಲಿ ೧೯೩೯ರ ಅ.೯ರಂದು ಜನಿಸಿದ ಮಹೇಶ್ ಎಲಕುಂಚವಾರ್ ಭಾರತೀಯ ಸಮಕಾಲೀನ ನಾಟಕಕಾರರಲ್ಲಿ ಅತ್ಯಂತ ಪ್ರಮುಖರಾಗಿದ್ದು, ಆಧುನಿಕ ಮರಾಠಿ ರಂಗಭೂಮಿಯ ಬಹುಮುಖ್ಯ ದನಿಯಾಗಿದ್ದಾರೆ.

ಇಂಗ್ಲಿಷ್ ಸಾಹಿತ್ಯದ ವಿದ್ಯಾರ್ಥಿಯಾಗಿದ್ದ ಎಲಕುಂಚವಾರ್ ಪಾಶ್ಚಾತ್ಯ ನಾಟಕ ಪರಂಪರೆ ಹಾಗೂ ಭಾರತೀಯ ಸಾಮಾಜಿಕ ವಾಸ್ತವಿಕತೆಗಳ ಪ್ರಭಾವದಿಂದ ಏಕಾಂಕ ನಾಟಕಗಳನ್ನು ಬರೆಯುವ ಮೂಲಕ ತಮ್ಮ ಸಾಹಿತ್ಯಿಕ ಪ್ರಯಾಣವನ್ನು ಆರಂಭಿಸಿದರು. ಕ್ರಮೇಣ ಆಧುನಿಕ ಭಾರತದ ಮನುಷ್ಯ ಪ್ರಜ್ಞೆಯನ್ನು ಮುಟ್ಟುವ, ಪ್ರಶ್ನಿಸುವ ಹಲವು ನಾಟಕಗಳನ್ನು ಬರೆಯುವ ಮೂಲಕ ಕೇವಲ ಮರಾಠಿಯಷ್ಟೇ ಅಲ್ಲದೇ ಭಾರತದ ಪ್ರಮುಖ ನಾಟಕಕಾರರಾಗಿ ಹೊರಹೊಮ್ಮಿದರು.

ಅವರ ಮುಖ್ಯ ನಾಟಕಗಳಲ್ಲಿ ‘ವಾಡಾ ಚಿರೇಬಂದಿ’, ‘ಮಗ್ನಾ’ ‘ತಾಳ್ಯಾಕಾಠಿ’, ‘ಯುಗಾಂತ’, ‘ಗರ್ಭೋ’, ‘ಹೋಳಿ’, ‘ಪಾರ್ಟಿ’ ನಾಟಕಗಳು ಮನುಷ್ಯನ ವಿಲಕ್ಷಣತೆ, ಕೌಟುಂಬಿಕ ಸಂಘರ್ಷ, ಸೃಜನಶೀಲತೆ ಮತ್ತು ಅಸ್ತಿತ್ವದ ಸಂಕಟಗಳಂತಹ ವಿಷಯಗಳನ್ನು ಅನ್ವೇಷಿಸುತ್ತಲೇ ಸ್ವಾತಂತ್ರ್ಯೋತ್ತರ ಭಾರತೀಯ ರಂಗಭೂಮಿಯನ್ನು ರೂಪಿಸುವಲ್ಲಿ ಮಹತ್ವದ ಪಾತ್ರವಹಿಸಿವೆ. ಇವರ ನಾಟಕಗಳು ಭಾರತ ಮಾತ್ರವಲ್ಲದೆ ವಿದೇಶಗಳಲ್ಲಿಯೂ ಪ್ರದರ್ಶನಗೊಂಡಿವೆ. ಸಾಹಿತ್ಯ ಮತ್ತು ರಂಗಭೂಮಿಗೆ ನೀಡಿದ ಕೊಡುಗೆಯನ್ನು ಗೌರವಿಸಿ ಎಲಕುಂಚವಾರ್ ಅವರಿಗೆ ಸಾಹಿತ್ಯ ಅಕಾಡೆಮಿ, ಸಂಗೀತ ನಾಟಕ ಅಕಾಡೆಮಿ ಮತ್ತು ಪದ್ಮಶ್ರೀ, ಕಾಳಿದಾಸ ಸಮ್ಮಾನ್ ಸೇರಿದಂತೆ ಪ್ರತಿಷ್ಠಿತ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಗಿದೆ. ಪ್ರಸ್ತುತ ಇವರು ಮಹಾರಾಷ್ಟ್ರದ ನಾಗಪುರದಲ್ಲಿ ನೆಲೆಸಿದ್ದಾರೆ.

ಪ್ರಸಾದ್ ಕುಂದೂರು ಮೂಲತಃ ಹಾಸನ ಜಿಲ್ಲೆಯ ಕುಂದೂರಿನವರಾದ ಪ್ರಸಾದ್ ಕುಂದೂರು, ಮೈಸೂರನ್ನು ಕೇಂದ್ರವಾಗಿಸಿ ಕೊಂಡು ಕಳೆದ ನಾಲ್ಕು ದಶಕಗಳಿಂದ ಕನ್ನಡ ರಂಗ ಭೂಮಿಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ ಬಹುಮುಖ ರಂಗಪ್ರತಿಭೆ. ನಟ, ನಿರ್ದೇಶಕ, ನಾಟಕಕಾರ, ಅನುವಾದಕ, ಕವಿ, ಕಲಾವಿದ, ಗಾಯಕ, ವಾಸ್ತುಶಿಲ್ಪಿ ಹಾಗೂ ಸಾಂಸ್ಕ ತಿಕ ಕಾರ್ಯಕರ್ತನಾಗಿ ಅವರು ರಂಗಭೂಮಿಯ ವಿವಿಧ ಆಯಾಮಗಳಲ್ಲಿ ತಮ್ಮದೇ ಆದ ವಿಶಿಷ್ಟ ಛಾಪು ಮೂಡಿಸಿದ್ದಾರೆ. ಇವರು ರಚಿಸಿರುವ, ನಿರ್ದೇಶಿಸಿ, ವಿನ್ಯಾಸಗೊಳಿಸಿರುವ ಅನೇಕ ನಾಟಕಗಳು ಕರ್ನಾಟಕದಾದ್ಯಂತ ಪ್ರದರ್ಶನ ಕಂಡು ಮೆಚ್ಚುಗೆಗೆ ಪಾತ್ರವಾಗಿವೆ.

ಕುಂದೂರು ಅವರ ಚಿಂತನೆ ಮತ್ತು ದೃಷ್ಟಿಕೋನ ಸಮಾಜ, ಸಾಹಿತ್ಯ, ಕಲೆ ಹಾಗೂ ವಿವಿಧ ಅಭಿವ್ಯಕ್ತಿ ಮಾಧ್ಯಮಗಳ ನಡುವಿನ ಸಂಬಂಧಗಳನ್ನು ಬೆಸೆಯುವ ಬೌದ್ಧಿಕ ಕೊಂಡಿಯಾಗಿದೆ. ಕನ್ನಡದ ಪ್ರಮುಖ ಲೇಖಕರು, ಕವಿಗಳು ಮತ್ತು ಚಿಂತಕರೊಂದಿಗೆ ದೀರ್ಘಕಾಲದ ಸಂವಾದ ಹಾಗೂ ಕರ್ನಾಟಕದ ಜನಸಾಂಸ್ಕೃತಿಕ ಚಳವಳಿಗಳೊಂದಿಗೆ ಹೊಂದಿರುವ ಒಡನಾಟವು ಅವರ ಸೃಜನಾತ್ಮಕ ಅಭಿವ್ಯಕ್ತಿಗೆ ಗಾಢವಾದ ಸಾಮಾಜಿಕ ನೆಲೆಯನ್ನು ಒದಗಿಸಿದೆ. ಸಾಹಿತ್ಯ ಮತ್ತು ಕಲೆಗಳನ್ನು ಅವರು ಕೇವಲ ಮನರಂಜನೆಯ ವೇದಿಕೆಯಾಗಿ ಕಾಣದೆ, ಸಮಾಜದೊಂದಿಗೆ ನಿರಂತರ ಸಂವಾದ ನಡೆಸುವ ಸಾಂಸ್ಕ ತಿಕ ಪ್ರಕ್ರಿಯೆಯಾಗಿ ರೂಪಿಸಿದ್ದಾರೆ.

ಲೇಖಕ, ನಿರ್ದೇಶಕ ಮತ್ತು ರಂಗಚಿಂತಕರಾಗಿ ನೀಡಿದ ಕೊಡುಗೆಗಳನ್ನು ಗುರುತಿಸಿ ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ, ಸಿ.ಜಿ.ಕೆ. ಪ್ರಶಸ್ತಿ, ಕದಂಬ ರಂಗ ಪುರಸ್ಕಾರ ಸೇರಿದಂತೆ ಹಲವು ಗೌರವಗಳು ಲಭಿಸಿವೆ.

ಇಂದು ಪುಸ್ತಕ ಬಿಡುಗಡೆ ಕಾರ್ಯಕ್ರಮ:  ಪ್ರಸಾದ್ ಕುಂದೂರು ಅನುವಾದಿಸಿರುವ ಮರಾಠಿ ನಾಟಕಕಾರ ಮಹೇಶ್ ಎಲಕುಂಚವಾರ್ ಅವರ ‘ಪಾರ್ಟಿ’ ನಾಟಕ ಕೃತಿ ಬಿಡುಗಡೆ ಕಾರ್ಯಕ್ರಮವನ್ನು ಮಾ.೨೮ರ ಶನಿವಾರ ಸಂಜೆ ೫.೩೦ಕ್ಕೆ ರಂಗಾಯಣದ ವನರಂಗದಲ್ಲಿ ಆಯೋಜಿಸಲಾಗಿದೆ. ನಿರಂತರ -ಂಡೇಷನ್ ಹಾಗೂ ಅಭಿರುಚಿ ಪ್ರಕಾಶನ ಆಯೋಜಿಸಿರುವ ಈ ಕಾರ್ಯಕ್ರಮದಲ್ಲಿ ಪ್ರೊ.ಓ.ಎಲ್.ನಾಗಭೂಷಣಸ್ವಾಮಿ, ಚಿಂದಬರರಾವ್ ಜಂಬೆ, ಜಯಂತ್ ಕಾಯ್ಕಿಣಿ, ಡಿ.ಎಸ್.ಚೌಗಲೆ, ಸತೀಶ್ ತಿಪಟೂರು, ಅಭಿರುಚಿ ಗಣೇಶ್ ಭಾಗವಹಿಸಲಿದ್ದಾರೆ. ಮಾಹಿತಿಗಾಗಿ ಮೊ.ಸಂ.೯೯೮೦೨೭೩೧೬೭, ೯೬೧೧೦೭೪೪೨೪ ಸಂಪರ್ಕಿಸಬಹುದು.

 

 

 

ಆಂದೋಲನ ಡೆಸ್ಕ್

Recent Posts

ಮಹಿಳೆಯನ್ನು ದುರ್ಬಲ ಎಂದು ನೋಡುವ ಕಾಲ ಮುಗಿದಿದೆ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌

ಪಿರಿಯಾಪಟ್ಟಣ: ಮಹಿಳೆಯರು ಇವತ್ತು ಕಟ್ಟುಪಾಡುಗಳನ್ನು ಒಡೆದು ಮುಂದೆ ಸಾಗುತ್ತಿದ್ದಾರೆ. ಸ್ವಾಭಿಮಾನದ ಜೀವನ ಕಂಡುಕೊಂಡಿದ್ದಾರೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ…

40 mins ago

ಸಮಾಜದ ನೈತಿಕ ಬೆಳವಣಿಗೆಗೆ ಮಹನೀಯರ ಆದರ್ಶಗಳೇ ದಾರಿದೀಪ: ಎಂಎಲ್‌ಸಿ ಸಿ.ಎನ್.ಮಂಜೇಗೌಡ

ಮೈಸೂರು: ಸಮಾಜದ ನೈತಿಕ ಬೆಳವಣಿಗೆಗೆ ಮಹನೀಯರ ಆದರ್ಶಗಳೇ ದಾರಿ ದೀಪ ಎಂದು ವಿಧಾನ ಪರಿಷತ್ ಸದಸ್ಯ ಸಿ.ಎನ್. ಮಂಜೇಗೌಡ ಹೇಳಿದರು.…

1 hour ago

ಒಂದೇ ವಾರದಲ್ಲಿ 1000 ಕೋಟಿ ಕ್ಲಬ್‌ ಸೇರಿದ ಧುರಂಧರ್-‌2

ಆದಿತ್ಯ ಧರ್‌ ನಿರ್ದೇಶನದ ರಣವೀರ್‌ ಸಿಂಗ್‌ ಅಭಿನಯದ ಧುರಂಧರ್‌ 2 ಸಿನಿಮಾ ಬಿಡುಗಡೆಯಾದ ಒಂದೇ ವಾರದಲ್ಲಿ 1000 ಕೋಟಿ ರೂ…

1 hour ago

ಮೈಸೂರು | ನೂತನ ಬಸ್‌ ನಿಲ್ದಾಣ ಕಾಮಗಾರಿ ಪರಿಶೀಲಿಸಿದ ಸಚಿವ ಮಹದೇವಪ್ಪ

ಮೈಸೂರು : ಸಮಾಜ ಕಲ್ಯಾಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ:ಹೆಚ್.ಸಿ ಮಹದೇವಪ್ಪ ಅವರು ಇಂದು(ಮಾರ್ಚ್‌.28) 120 ಕೋಟಿ ರೂ…

1 hour ago

ಮೈಸೂರು | ವರ್ತುಲ ರಸ್ತೆ ಇಕ್ಕೆಲಗಳ ಸ್ವಚ್ಛತಾ ಅಭಿಯಾನಕ್ಕೆ ಚಾಲನೆ

ಮೈಸೂರು : ನಗರದ ಹೊರ ವರ್ತುಲ ರಸ್ತೆಯಲ್ಲಿ ಹಗಲು ವೇಳೆ ಸಾಕಷ್ಟು ವಾಹನಗಳು ಹಾಗೂ ಸಾರ್ವಜನಿಕರು ಓಡಾಡಲು ಸ್ವಚ್ಛತೆ ಕೊರತೆ…

2 hours ago

ನನಗೆ ಐಪಿಎಲ್‌ ಟಿಕೆಟ್‌ ಬೇಡ ಎಂದ ಸುರೇಶ್‌ ಕುಮಾರ್‌

ಬೆಂಗಳೂರು: ಐಪಿಎಲ್‌ ಪಂದ್ಯಗಳಿಗೆ ಸಂಬಂಧಿಸಿದಂತೆ ನನ್ನ ಹೆಸರಿನಲ್ಲಿ ಯಾವುದೇ ಟಿಕೆಟ್‌ ಅಥವಾ ಪಾಸ್‌ಗಳನ್ನು ವಿತರಿಸಬಾರದೆಂದು ಬಿಜೆಪಿ ಶಾಸಕ ಸುರೇಶ್‌ ಕುಮಾರ್‌…

2 hours ago