Andolana originals

‘ಪಾಪು’ ಕಣ್ಣಾಲಿಗಳಲ್ಲಿ ನೀರು ತುಂಬಿದ ‘ಅಪ್ಪಾಜಿ ನೆನಪುʼ

ರಶ್ಮಿ ಕೋಟಿ

ಅರವತ್ತರ ದಶಕದ ಕೊನೆಯಾರ್ಧದಲ್ಲಿ ಪಾಟೀಲ ಪುಟ್ಟಪ್ಪನವರ ‘ವಿಶ್ವವಾಣಿ’ ಹಾಗೂ ‘ಪ್ರಪಂಚ’ ಪತ್ರಿಕೆಗಳಲ್ಲಿ ಕರಡು ತಿದ್ದುವವನಾಗಿ, ವರದಿಗಾರನಾಗಿ, ಕಡೆಗೆ ಉಪ ಸಂಪಾದಕನಾಗಿ ಕಾರ್ಯ ನಿರ್ವಹಿಸಿದ್ದ ಅಪ್ಪಾಜಿ ಪತ್ರಿಕಾ ರಂಗದಲ್ಲಿ ತಾವು ಏನು ಕಲಿತಿದ್ದರೋ, ಸಾಧನೆ ಮಾಡಿದ್ದರೋ ಅದಕ್ಕೆ ಮೂಲ ತಳಹದಿಯನ್ನು ಹಾಕಿಕೊಟ್ಟ ಗುರು ಪಾಟೀಲ ಪುಟ್ಟಪ್ಪನವರು ಎಂದೇ ಭಾವಿಸಿದ್ದರು. ಅದನ್ನು ಘಂಟಾಘೋಷವಾಗಿ ಹೇಳುತ್ತಿದ್ದರೂ ಕೂಡ. ‘ಪಾಪು’ ಅವರ ಬಗ್ಗೆ ಅಪ್ಪಾಜಿಗೆ ಎಲ್ಲಿಲ್ಲದ ಗೌರವ. ಅದು ಅವರ ನುಡಿಯಲ್ಲಷ್ಟೇ ಅಲ್ಲ; ಅವರ ನಡೆಯಲ್ಲೂ ವ್ಯಕ್ತವಾಗುತ್ತಿತ್ತು. ಪಾಟೀಲ ಪುಟ್ಟಪ್ಪನವರಿಗೂ ಅಪ್ಪಾಜಿಯ ಬಗೆಗೆ ಮೆಚ್ಚುಗೆಯಷ್ಟೇ ಅಲ್ಲ, ಹೆಮ್ಮೆಯೂ ಇತ್ತು. ಅದನ್ನು ‘ಪಾಪು’ ಅವರೂ ಹಲವಾರು ಬಾರಿ ಅನೇಕ ಕಾರ್ಯಕ್ರಮಗಳಲ್ಲಿ ವ್ಯಕ್ತಪಡಿಸಿದ್ದರು ಕೂಡ. ತಮ್ಮ ಗರಡಿಯಲ್ಲಿ ಬೆಳೆದ ಅಪ್ಪಾಜಿಯ ಕುರಿತು ಅವರ ‘ಪ್ರಪಂಚ’ ಪತ್ರಿಕೆಯಲ್ಲೂ ಬರೆದಿದ್ದರು.

‘ಪಾಪು’ ಅವರು ಮೈಸೂರಿಗೆ ಬಂದಾಗಲೆಲ್ಲಾ ಅವರನ್ನು ಅಪ್ಪಾಜಿಯೇ ಸ್ವತಃ ರೈಲ್ವೆ ನಿಲ್ದಾಣಕ್ಕೆ ಹೋಗಿಕರೆದುಕೊಂಡು ಬರುವುದರಿಂದ ಹಿಡಿದು ಮತ್ತೆ ಅವರು ರೈಲಿನಲ್ಲಿ ಹಿಂತಿರುಗುವವರೆಗೂ ಎಷ್ಟು ಸಾಧ್ಯವೋ ಅಷ್ಟು ಸಮಯವನ್ನು ಅವರೊಂದಿಗೆ ಕಳೆಯುತ್ತಿದ್ದರು. ಅವರೊಂದಿಗೆ ಕಾರ್ಯಕ್ರಮಕ್ಕೆ ಹೋಗಿ, ಅವರು ಹೋಗಲು ಬಯಸುತ್ತಿದ್ದ ಹಲವಾರು ಗಣ್ಯರ ಮನೆಗಳಿಗೆ ಜೊತೆಯಲ್ಲೇ ಹೋಗಿ, ಕಡೆಗೆ ನಮ್ಮ ಮನೆಗೆ ಕರೆದುಕೊಂಡು ಬರುತ್ತಿದ್ದರು. ನಮ್ಮ ಮನೆಯಲ್ಲೂ ಅವರಿಬ್ಬರ ನಡುವೆ ಅನೇಕ ವಿಷಯಗಳ ಕುರಿತು ಚರ್ಚೆಗಳು ನಡೆಯುತ್ತಿದ್ದವು. ಎಲ್ಲವೂ ಕನ್ನಡ ನಾಡು ನುಡಿಯ ಬಗ್ಗೆಯೇ.

೨೦೦೫ರಲ್ಲಿ ಪುಟ್ಟಪ್ಪನವರು ಮೈಸೂರಿಗೆ ಬಂದಾಗ ಪ್ರತಿ ಬಾರಿಯಂತೆ ಅಪ್ಪಾಜಿಯೇ ರೈಲ್ವೆ ನಿಲ್ದಾಣಕ್ಕೆ ಹೋಗಿ (‘ಪಾಪು’ ಅವರು ಭಾಗವಹಿಸಲಿರುವ ಕಾರ್ಯಕ್ರಮಕ್ಕೆ ಇನ್ನೂ ಬಹಳ ಸಮಯವಿದ್ದುದರಿಂದ) ಅವರನ್ನು ನೇರವಾಗಿ ನಮ್ಮ ಮನೆಗೆ ಕರೆದುಕೊಂಡು ಬಂದಿದ್ದರು. ನಾನು ಕಂಡಂತೆ ಅವರಿಬ್ಬರ ನಡುವೆ ಪ್ರತಿಸಲವೂ ಪ್ರಚಲಿತ ವಿದ್ಯಮಾನಗಳ ಕುರಿತು ಚರ್ಚೆಗಳು ನಡೆಯುತ್ತಿದ್ದವು. ತಮ್ಮ ಅನುಭವಗಳನ್ನು, ಅನೇಕ ಪ್ರಸಂಗಗಳನ್ನು, ಟೀಕೆ-ಟಿಪ್ಪಣಿಗಳನ್ನು ಮಾಡುತ್ತಿದ್ದರು.

ಅಂದು ಕೂಡ ಅಪ್ಪಾಜಿ ಹಾಗೂ ಪಾಟೀಲ ಪುಟ್ಟಪ್ಪನವರು ಎಂದಿನಂತೆ ಪ್ರಚಲಿತ ವಿದ್ಯಮಾನವನ್ನು ಕುರಿತು ಮಾತನಾಡುತ್ತಿದ್ದರು. ಅಂದಿನ ಅವರ ಮಾತುಕತೆ ಕೆಲವು ದಿನಗಳ ಹಿಂದಷ್ಟೇ ಹಿಂದೂ ಮಹಾಸಾಗರದಲ್ಲಿ ಸಂಭವಿಸಿದ್ದ ಸುನಾಮಿಯ ಕುರಿತಾಗಿದ್ದಿತು.

೨೦೦೪ರ ಡಿಸೆಂಬರ್ ೨೬ರಂದು ಹಿಂದೂ ಮಹಾಸಾಗರದಲ್ಲಿ ಸಂಭವಿಸಿದ ಸುನಾಮಿಯು ಇತಿಹಾಸದಲ್ಲಿಯೇ ಅತ್ಯಂತ ದೊಡ್ಡ ನೈಸರ್ಗಿಕ ವಿಕೋಪಗಳಲ್ಲಿ ಒಂದಾಗಿತ್ತು. ಇಂಡೋನೇಷಿಯಾ, ಶ್ರೀಲಂಕಾ, ಭಾರತ, ಮಾಲ್ಡೀವ್ಸ್ ಮತ್ತು ಥೈಲ್ಯಾಂಡ್ ಸೇರಿದಂತೆ ೧೫ ದೇಶಗಳಲ್ಲಿ ಅಂದಾಜು ೨ ಲಕ್ಷಕ್ಕೂ ಹೆಚ್ಚು ಜನರು ಸಾವಿಗೀಡಾಗಿದ್ದರು. ಸುನಾಮಿ ಸಂತ್ರಸ್ತರಿಗಾಗಿ ಇಡೀ ಮಾನವ ಕುಲವೇ ಮರುಗುತ್ತಿತ್ತು. ಪ್ರಪಂಚದ ಮೂಲೆ ಮೂಲೆಗಳಿಂದ ದೇಣಿಗೆಗಳು ಬರುತ್ತಿದ್ದವು. ‘ಪಾಪು’ ಅವರು ಸುನಾಮಿ ಸಂತ್ರಸ್ತರಿಗೆ ದೇಣಿಗೆ ನೀಡುವ ವಿಷಯವನ್ನು ಕುರಿತು ಮಾತನಾಡುತ್ತಿದ್ದರು.

ಕರ್ನಾಟಕದ ರಾಜಕಾರಣಿಯೊಬ್ಬರು ತಮ್ಮ ಹುದ್ದೆಯ ಒಂದು ತಿಂಗಳ ಸಂಬಳವನ್ನು ಸುನಾಮಿ ಸಂತ್ರಸ್ತರಿಗೆ ನೀಡುವುದಾಗಿ ಹೇಳಿದ ಮಾತುಗಳು ಮಾಧ್ಯಮಗಳಲ್ಲಿ ದೊಡ್ಡ ಸುದ್ದಿಯಾಗಿದ್ದರ ಕುರಿತು ಪಾಪು ಮತ್ತು ಅಪ್ಪಾಜಿ ಇಬ್ಬರೂ ಆಕ್ರೋಶ ವ್ಯಕ್ತಪಡಿಸುತ್ತಿದ್ದರು. “ತಮ್ಮ ಗಳಿಕೆಯ ಪೈಕಿ ಪುಟಗೋಸಿ ಒಂದು ತಿಂಗಳ ಸಂಬಳವನ್ನು ಕೊಡುತ್ತೇವೆಂದರೆ ನಾಚಿಕೆಗೇಡು. ಅದನ್ನು ಮಾಧ್ಯಮದವರು ದೊಡ್ಡದಾಗಿ ಬಿತ್ತರಿಸುತ್ತಾರೆ ಕೂಡ. ಇಂಥವರಿಗಿಂತಲೂ ಏನೂ ಇಲ್ಲದ ಒಬ್ಬ ಬಡ ಮನುಷ್ಯ ಕೊಡುವ ಒಂದು ರೂಪಾಯಿ ಅತ್ಯಂತ ಅಮೂಲ್ಯವಾದುದು” ಎಂದು ಅಪ್ಪಾಜಿ ಹೇಳಿದರೆ, “ಅಧಿಕಾರದಲ್ಲಿದ್ದಾಗ ಈ ಜನ ತಿಂದು ಹಾಕುತ್ತಾರಲ್ಲ, ಅದಕ್ಕೇನು ಕಾವು ಕೊಡುತ್ತಾರೆಯೇ” ಎಂದು ಪುಟ್ಟಪ್ಪನವರು ತಮ್ಮದೇ ಆದ ಶೈಲಿಯಲ್ಲಿ ಕುಟುಕಿದ್ದರು.

ಈ ಘಟನೆ ನಡೆದು ೧೭ ವರ್ಷಗಳ ನಂತರ, ಅಪ್ಪಾಜಿ ಕಾಲವಾದ ಬಳಿಕ ಕುವೆಂಪುನಗರದಲ್ಲಿರುವ ಆಸ್ಪತ್ರೆಯೊಂದರಲ್ಲಿ ದಾಖಲಾಗಿದ್ದ ಸಂಬಂಧಿಕರನ್ನು ನೋಡಲು ನಾನು ಹೋಗಿದ್ದೆ. ಆಗ ಅಚಾನಕ್ಕಾಗಿ ಭೇಟಿಯಾದ ನನ್ನ ಸಹೋದ್ಯೋಗಿಯಾಗಿದ್ದ (ನಾನು ಅಧ್ಯಾಪಕಿಯಾಗಿ ಕೆಲಸ ಮಾಡುತ್ತಿದ್ದ ಕಾಲೇಜಿನಲ್ಲಿ) ಸುನಿಲ್ ಕುಮಾರ್ ಅವರು, ತಮ್ಮೊಂದಿಗಿದ್ದ ಅವರ ದೊಡ್ಡಪ್ಪ ಅವರಿಗೆ ನನ್ನನ್ನು ರಾಜಶೇಖರ ಕೋಟಿ ಅವರ ಮಗಳೆಂದು ಪರಿಚಯ ಮಾಡಿಕೊಟ್ಟರು. ಅಪ್ಪಾಜಿಯ ಹೆಸರು ಕೇಳುತ್ತಿದ್ದಂತೆಯೇ ಅವರ ದೊಡ್ಡಪ್ಪ , “ನಿಮ್ಮ ತಂದೆ ನನ್ನ ಮಗನನ್ನು ಉಳಿಸಿದ ಪುಣ್ಯಾತ್ಮ” ಎಂದು ಕೈ ಮುಗಿದು ಹೇಳಿದರು. ನನಗೆ ಅತ್ಯಾಶ್ಚರ್ಯವಾಯಿತು. ಅವರನ್ನು ನಾನು ಹಿಂದೆಂದೂ ಕಂಡಿರಲಿಲ್ಲ. ಈ ಕುರಿತು ಅಪ್ಪಾಜಿ ಹೇಳಿದ ನೆನಪೂ ಇಲ್ಲ. ಹಾಗಾಗಿ ನಡೆದ ಘಟನೆಯನ್ನು ಕುತೂಹಲದಿಂದ ಕೇಳಿದೆ.

ಆಗ್ಗೆ ಎರಡು ವರ್ಷಗಳ ಹಿಂದೆ ಹುಣಸೂರು ರಸ್ತೆಯಲ್ಲಿ ನಡೆದ ಅಪಘಾತವೊಂದರಲ್ಲಿ ತೀವ್ರವಾಗಿ ಘಾಸಿಗೊಂಡಿದ್ದ ಅವರ ಮಗನನ್ನು ಆಸ್ಪತ್ರೆಯೊಂದಕ್ಕೆ ಸೇರಿಸಿದಾಗ ಅಲ್ಲಿ ಆತನಿಗೆ ಚಿಕಿತ್ಸೆ ಕೊಡುವ ಮೊದಲು ಹಣ ಭರಿಸಲು ಹೇಳಿದರಂತೆ. ಆಸ್ಪತ್ರೆಯವರು ಹೇಳಿದಷ್ಟು ಹಣ ಇವರ ಬಳಿ ಇರಲಿಲ್ಲವಂತೆ. ಹಾಗಾಗಿ ಅವರ ಮಗನಿಗೆ ಚಿಕಿತ್ಸೆ ನೀಡುವುದಕ್ಕೆ ವೈದ್ಯರು ಮುಂದಾಗಲಿಲ್ಲವಂತೆ. ಅದೇ ಸಂದರ್ಭದಲ್ಲಿ ಆಸ್ಪತ್ರೆಗೆ ಯಾವುದೋ ಕಾರಣ ನಿಮಿತ್ತ ಹೋಗಿದ್ದ ಅಪ್ಪಾಜಿ, ಇದನ್ನೆಲ್ಲಾ ಗಮನಿಸಿ ಆಸ್ಪತ್ರೆಯವರನ್ನು ತರಾಟೆಗೆ ತೆಗೆದುಕೊಂಡದ್ದಲ್ಲದೇ, ತಾವೇ ಹಣವನ್ನು ಭರಿಸಿ ಅಪಘಾತದಲ್ಲಿ ಘಾಸಿಗೊಂಡಿದ್ದ ವ್ಯಕ್ತಿಗೆ ತುರ್ತು ಚಿಕಿತ್ಸೆ ನೀಡುವಂತೆ ಹೇಳಿದರಂತೆ. ಸಮಯಕ್ಕೆ ಸರಿಯಾಗಿ ಚಿಕಿತ್ಸೆ ದೊರೆತ ಕಾರಣ ಆತ ಪ್ರಾಣಾಪಾಯದಿಂದ ಪಾರಾದನಂತೆ.

ಇದು ಒಂದೇ ಸಂದರ್ಭವಲ್ಲ, ಅಪ್ಪಾಜಿ ಕಾಲವಾದ ಮೇಲೆ ಅನೇಕರು ಮನೆಗೆ ಬಂದು, ನಮ್ಮ ಬಳಿ ತಮ್ಮ ಸಂಕಷ್ಟದ ಸಂದರ್ಭದಲ್ಲಿ ಸಹಾಯ ಹಸ್ತ ಚಾಚಿದ ಅಪ್ಪಾಜಿಯ ಮಾನವೀಯತೆಯ ಕುರಿತು, ಮನೋವೈಶಾಲ್ಯತೆಯ ಕುರಿತು ನಮಗೆ ಗೊತ್ತಿಲ್ಲದಅನೇಕ ಘಟನೆಗಳನ್ನು ಹಂಚಿಕೊಂಡಿದ್ದಾರೆ. ಆಗೆಲ್ಲ ನನಗೆ ನೆನಪಾಗುತ್ತಿದ್ದುದು ಪಾಟೀಲ ಪುಟ್ಟಪ್ಪನವರು ಹಾಗೂ ಅಪ್ಪಾಜಿಯ ನಡುವೆ ಅಂದು ನಡೆದ ಆ ಸಂಭಾಷಣೆ. ಕಷ್ಟದಲ್ಲಿರುವವರಿಗೆ ಸಹಾಯ ಮಾಡಿ ಮಾಧ್ಯಮಗಳಲ್ಲಿ ಪ್ರಚಾರ ಗಿಟ್ಟಿಸುವವರ ಕುರಿತು ಹೇಸಿಗೆಪಟ್ಟುಕೊಂಡು ಆಕ್ರೋಶಭರಿತರಾಗಿ ಆಡಿದ ಅಪ್ಪಾಜಿಯ ಮಾತುಗಳು ಕೇವಲ ಅವರ ಗುರುಗಳನ್ನು ಮೆಚ್ಚಿಸುವುದಕ್ಕಾಗಿ ಆಗಿರಲಿಲ್ಲ, ಅವರು ಅಕ್ಷರಶಃ ನುಡಿದಂತೆ ನಡೆದಿದ್ದರು. ೨೦೧೮ರಲ್ಲಿ ಮೈಸೂರಿನ ಕಲಾಮಂದಿರದಲ್ಲಿ ಹಮ್ಮಿಕೊಂಡಿದ್ದ ಅಪ್ಪಾಜಿಯ ಕುರಿತು ‘ಕೋಟಿ – ಓದುಗರ ಆಂದೋಲನ’ ಎಂಬ ಪುಸ್ತಕ ಬಿಡುಗಡೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲು ಪಾಟೀಲ ಪುಟ್ಟಪ್ಪನವರು ಬಂದಿದ್ದರು.

ಕಾರ್ಯಕ್ರಮದ ನಂತರ ಅಪ್ಪಾಜಿಯ ಕುರಿತು ನಾನು ಕೇಳಿದ್ದ ಘಟನೆಗಳನ್ನು ‘ಪಾಪು’ ಅವರಿಗೆ ಹೇಳಿದೆ. ೯೭ರ ಇಳಿವಯಸ್ಸಿನಲ್ಲಿಯೂ ‘ಪಾಪು’ ಅವರು ತಮ್ಮ ಗರಡಿಯಲ್ಲಿ ಬೆಳೆದ ತಮ್ಮ ಶಿಷ್ಯನ ಬಗ್ಗೆ ಹೆಮ್ಮೆಯಿಂದ ಬೀಗಿದರು. ಪಾಟೀಲ ಪುಟ್ಟಪ್ಪನವರು ಸದಾ ಹುಲಿಯಂತೆ ಅಬ್ಬರಿಸುತ್ತಿದ್ದುದನ್ನು ಕಂಡಿದ್ದ ನಾನು, ಅಂದು ಅವರ ಕಣ್ಣಾಲಿಗಳು ತುಂಬಿ ಬಂದಿದ್ದನ್ನು ಕಂಡೆ.

” ಸುನಾಮಿ ಸಂತ್ರಸ್ತರಿಗಾಗಿಇಡೀ ಮಾನವ ಕುಲವೇ ಮರುಗುತ್ತಿತ್ತು. ಪ್ರಪಂಚದ ಮೂಲೆ ಮೂಲೆಗಳಿಂದ ದೇಣಿಗೆಗಳು ಬರುತ್ತಿದ್ದವು. ಕರ್ನಾಟಕದ ರಾಜಕಾರಣಿಯೊಬ್ಬರು ತ ಹುದ್ದೆಯ ಒಂದು ತಿಂಗಳ ಸಂಬಳವನ್ನು ಸುನಾಮಿ ಸಂತ್ರಸ್ತರಿಗೆ ನೀಡುವುದಾಗಿ ಹೇಳಿದ ಮಾತುಗಳು ಮಾಧ್ಯಮಗಳಲ್ಲಿ ದೊಡ್ಡ ಸುದ್ದಿಯಾಗಿದ್ದರ ಕುರಿತು ಪಾಪು ಮತ್ತು ಅಪ್ಪಾಜಿ ಇಬ್ಬರೂ ಆಕ್ರೋಶ ವ್ಯಕ್ತಪಡಿಸುತ್ತಿದ್ದರು.”

ಆಂದೋಲನ ಡೆಸ್ಕ್

Recent Posts

ಹಣ ದ್ವಿಗುಣಗೊಳಿಸುವುದಾಗಿ ೨೮ ಲಕ್ಷ ರೂ. ವಂಚನೆ; ದೂರು ದಾಖಲು

ಕೊಳ್ಳೇಗಾಲ: ಹಣ ದ್ವಿಗುಣಗೊಳಿಸಿಕೊಡುವುದಾಗಿ ಆಮಿಷ ಒಡ್ಡಿ, ಒಟ್ಟು ೨೮.೮೮ ಲಕ್ಷ ರೂ.ಗಳನ್ನು ವಂಚಿಸಿರುವ ಬಗ್ಗೆ ಪಟ್ಟಣ ಪೊಲೀಸ್ ಠಾಣೆಯಲ್ಲಿ ಮಮತಾ…

7 hours ago

ಅಂಬಳೆ: ಚಾಮುಂಡೇಶ್ವರಿ ದೇಗುಲದಲ್ಲಿ ಕಳ್ಳತನ

ಯಳಂದೂರು:ತಾಲ್ಲೂಕಿನ ಅಂಬಳೆ ಗ್ರಾಮದಲ್ಲಿರುವ ಸುವರ್ಣಾವತಿ ನದಿ ದಡಲ್ಲಿರುವ ಐತಿಹಾಸಿಕ ಚಾಮುಂಡೇಶ್ವರಿ ದೇಗುದಲ್ಲಿ ಗುರುವಾರ ರಾತ್ರಿ ಕಳ್ಳತನ ನಡೆದಿದ್ದು, ಲಕ್ಷಾಂತರ ರೂ.…

7 hours ago

ಇಂಡಿಗೋ ವಿಮಾನ ಹಾರಾಟದಲ್ಲಿ ವ್ಯತ್ಯಯ ಬೆನ್ನಲ್ಲೇ ಪೈಲಟ್‌ಗಳ ರಜಾ ನಿಯಮ ಸಡಿಲಿಸಿದ ಡಿಜಿಸಿಎ

ನವದೆಹಲಿ: ದೇಶಾದ್ಯಂತ ಇಂಡಿಗೋ ವಿಮಾನದ ಹಾರಾಟದಲ್ಲಿ ಭಾರೀ ವ್ಯತ್ಯಯ ಉಂಟಾದ ಬೆನ್ನಲ್ಲೇ ಕೇಂದ್ರ ನಾಗರಿಕ ವಿಮಾನಯಾನ ನಿರ್ದೇಶನಾಲಯ ಪೈಲಟ್‌ಗಳ ರಜಾ…

8 hours ago

ಕೆಪಿಸಿಸಿ ಅಧ್ಯಕ್ಷ ಸ್ಥಾನದ ಬಗ್ಗೆ ಚರ್ಚೆಯಾಗಿಲ್ಲ: ಸತೀಶ್‌ ಜಾರಕಿಹೊಳಿ

ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಸ್ಥಾನದ ಬಗ್ಗೆ ಚರ್ಚೆಯಾಗಿಲ್ಲ ಎಂದು ಲೋಕೋಪಯೋಗಿ ಸಚಿವ ಸತೀಶ್‌ ಜಾರಕಿಹೊಳಿ ಹೇಳಿದ್ದಾರೆ. ಈ ಕುರಿತು ಬೆಂಗಳೂರಿನಲ್ಲಿ…

9 hours ago

ಶಾಲಾ ಪಠ್ಯದಲ್ಲಿ ಭಗವದ್ಗೀತೆ ಬೋಧನೆ: ಕೇಂದ್ರದ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್‌ಗೆ ಎಚ್‌ಡಿಕೆ ಪತ್ರ

ನವದೆಹಲಿ: ಕಾಲಾತೀತ, ಮೌಲ್ಯಾಧರಿತ ಆದರ್ಶಗಳನ್ನು ಒಳಗೊಂಡಿರುವ ಭಗವದ್ಗೀತೆಯನ್ನು ವಿದ್ಯಾರ್ಥಿಗಳಿಗೆ ಬೋಧಿಸಲು ಪಠ್ಯದಲ್ಲಿ ಸೇರಿಸಬೇಕು ಎಂದು ಕೇಂದ್ರದ ಬೃಹತ್ ಕೈಗಾರಿಕೆ ಮತ್ತು…

10 hours ago

ಸೋಲು, ಗೆಲುವಿಗಿಂತ ಕ್ರೀಡೆಯಲ್ಲಿ ಭಾಗವಹಿಸುವುದು ಮುಖ್ಯ: ತಹಶೀಲ್ದಾರ್‌ ಶಿವಕುಮಾರ್‌ ಕಾಸ್ನೂರು

ನಂಜನಗೂಡು: ಸೋಲು, ಗೆಲುವಿಗಿಂತ ಕ್ರೀಡೆಯಲ್ಲಿ ಭಾಗವಹಿಸುವುದು ಮುಖ್ಯ ಎಂದು ತಹಶೀಲ್ದಾರ್‌ ಶಿವಕುಮಾರ್‌ ಕಾಸ್ನೂರು ಹೇಳಿದರು. ನಂಜನಗೂಡು ನಗರದ ಕಾಲೇಜೊಂದರಲ್ಲಿ ಆಯೋಜಿಸಿದ್ದ…

11 hours ago