Andolana originals

ಓ ಅಯ್ಯಾ… ಅಮ್ಮಯ್ಯಾ… ಮಕ್ಕಳ ಭಿಕ್ಷಾಟನೆ ನಿಂತಿಲ್ಲ!

ಎಚ್.ಎಸ್.ದಿನೇಶ್‌ಕುಮಾರ್

ಜನನಿಬಿಡ ಪ್ರದೇಶಗಳಲ್ಲಿ ಮಕ್ಕಳಿಂದ ಭಿಕ್ಷಾಟನೆ

ಭಿಕ್ಷೆ ಬೇಡುವ ಮಕ್ಕಳ ಪೋಷಕರಿಗೆ ಸ್ವಯಂ ಉದ್ಯೋಗದ ತರಬೇತಿ ನೀಡಬೇಕು

ಮಕ್ಕಳ ಭಿಕ್ಷಾಟನೆ ನಿರ್ಮೂಲನೆಗೆ ಸಿಡಬ್ಲ್ಯುಸಿ/ ಪೊಲೀಸರ ಕಾರ್ಯಾಚರಣೆ

ಮೈಸೂರು: ಓ ಅಯ್ಯಾ… ಅಮ್ಮಯ್ಯಾ… ಧರ್ಮಾನೆ ತಾಯಿ ತಂದೆ, ಕಾಸೊಂದ ನೀಡು ಶಿವನೆ… ಸುಮಾರು ೪ ದಶಕಗಳ ಹಿಂದೆ ಸಿನಿಮಾವೊಂದರಲ್ಲಿ ಪುಟ್ಟ ಮಕ್ಕಳಿಬ್ಬರು ಈ ಗೀತೆಯನ್ನು ಹಾಡುತ್ತಾ, ಭಿಕ್ಷೆ ಬೇಡುತ್ತಾ ಕಾಣಿಸಿಕೊಂಡಾಗ ನೋಡುಗರ ಕರುಳು ಚುರ್ರ್ ಎನ್ನುತ್ತಿತ್ತು. ಆದರೆ, ಈಗಲೂ ಆ ರೀತಿಯಲ್ಲಿ ಹಲವಾರು ಮಕ್ಕಳು ನಿಜ ಜೀವನದಲ್ಲಿ ನಗರದ ಜನನಿಬಿಡ ಪ್ರದೇಶಗಳಲ್ಲಿ ಭಿಕ್ಷೆ ಬೇಡುತ್ತಿರುವುದನ್ನು ಕಾಣಬಹುದು.

ಸಾಂಸ್ಕೃತಿಕ ನಗರಿ ಎಂದು ಖ್ಯಾತಿ ಹೊಂದಿರುವ ಮೈಸೂರು ಜಿಲ್ಲೆಯಲ್ಲಿ ಕೂಡ ದಿನೇ ದಿನೇ ಭಿಕ್ಷಾಟನೆ ಮಾಡುವ ಮಕ್ಕಳ ಸಂಖ್ಯೆ ಹೆಚ್ಚಳವಾಗುತ್ತಿದೆ ಎಂಬುದು ವಿಪರ್ಯಾಸ. ಇದನ್ನು ನಿಯಂತ್ರಿಸಬೇಕೆಂದರೆ ಆ ಮಕ್ಕಳಿಗೆ ಪುನರ್ವಸತಿ ಕಲ್ಪಿಸುವ ತುರ್ತು ಅಗತ್ಯ ಇದೆ.

ಮೈಸೂರಿನಲ್ಲಿ ಕಳೆದ ಮೂರು ವರ್ಷಗಳ ಅವಽಯಲ್ಲಿ ಭಿಕ್ಷೆ ಬೇಡುತ್ತಿದ್ದ ೧೪೫ ಮಕ್ಕಳನ್ನು ಗುರುತಿಸಲಾಗಿದೆ. ಆ ಮಕ್ಕಳು ಹಾಗೂ ಅವರ ಪೋಷಕರಿಗೆ ತಿಳಿಹೇಳುವ ಮೂಲಕ ಭಿಕ್ಷಾಟನೆ ಮಾಡದಂತೆ ಜಾಗೃತಿ ಮೂಡಿಸಲಾಗಿದೆ.

ಪ್ರತಿಯೊಂದು ಜಿಲ್ಲೆಯಲ್ಲಿಯೂ ಮಕ್ಕಳ ರಕ್ಷಣಾ ನಿರ್ದೇಶನಾಲಯವಿದೆ. ಜಿಲ್ಲಾ ವ್ಯಾಪ್ತಿಯಲ್ಲಿ ಭಿಕ್ಷೆ ಬೇಡುವ ಅಪ್ರಾಪ್ತ ಮಕ್ಕಳನ್ನು ಕರೆತಂದು ಪೋಷಕರ ಸಮ್ಮುಖದಲ್ಲಿ ಅವರಿಗೆ ತಿಳಿವಳಿಕೆ ನೀಡುವ ಕೆಲಸವನ್ನು ರಕ್ಷಣಾ ಘಟಕ ಮಾಡುತ್ತದೆ. ಬಡತನ, ಅಲೆಮಾರಿತನ, ಶಿಕ್ಷಣ ವಂಚಿತ ಮಕ್ಕಳೇ ಇಂದು ಭಿಕ್ಷಾಟನೆಯಲ್ಲಿ ತೊಡಗಿರುವುದು.

ನಗರದ ಬಸ್ ನಿಲ್ದಾಣ, ಆಟೋ ನಿಲ್ದಾಣ, ರೈಲ್ವೆ ನಿಲ್ದಾಣ, ದೇವಾಲಯಗಳು ಮುಂತಾದ ಜನನಿಬಿಡ ಪ್ರದೇಶಗಳಲ್ಲಿ ಮಕ್ಕಳು ಬೆಳಿಗ್ಗೆಯಿಂದ ಸಂಜೆಯವರೆಗೂ ಭಿಕ್ಷೆ ಬೇಡುತ್ತಿರುತ್ತಾರೆ. ಭಿಕ್ಷೆ ಬೇಡುವ ಮಕ್ಕಳಿಗೆ ಪೋಷಕರ ಒತ್ತಾಸೆ ಕೂಡ ಇರುತ್ತದೆ. ಅದಕ್ಕೆ ಕಾರಣ ಬಡತನ.

ಭಿಕ್ಷಾಟನೆಯಲ್ಲಿ ತೊಡಗಿರುವ ಮಕ್ಕಳನ್ನು ರಕ್ಷಣಾ ಸಮಿತಿ ಅಥವಾ ಪೊಲೀಸ್ ಇಲಾಖೆ ಗುರುತಿಸುತ್ತದೆ. ಕಾರ್ಯಾಚರಣೆ ಮೂಲಕ ಗುರುತಿಸುವ ಮಕ್ಕಳನ್ನು ಅಂತಿಮವಾಗಿ ಮಕ್ಕಳ ರಕ್ಷಣಾ ಸಮಿತಿಗೆ ಒಪ್ಪಿಸಲಾಗುತ್ತದೆ.

ಆ ಮಕ್ಕಳನ್ನು ಪೋಷಕರೊಡನೆ ಕೆಲಕಾಲ ಸ್ಟೇಟ್ ಹೋಂನಲ್ಲಿ ಇರಿಸಲಾಗುತ್ತದೆ. ಆದರೆ, ಅಲ್ಲಿ ಕೂಡ ಹೆಚ್ಚು ದಿನ ಇರಿಸಿಕೊಳ್ಳಲು ಅವಕಾಶ ಇಲ್ಲ. ಹೀಗಾಗಿ ಪೋಷಕರನ್ನು ಕರೆಸಿ, ತಿಳಿವಳಿಕೆ ನೀಡಿ, ಮಕ್ಕಳನ್ನು ಅವರೊಂದಿಗೆ ಕಳುಹಿಸಲಾಗುತ್ತದೆ. ವಿಪರ್ಯಾಸವೆಂದರೆ ಪೋಷಕರು ಕೆಲವೇ ದಿನಗಳಲ್ಲಿ ಮತ್ತೆ ತಮ್ಮ ಮಕ್ಕಳನ್ನು ಭಿಕ್ಷಾಟನೆಗೆ ದೂಡುತ್ತಾರೆ.

ತರಬೇತಿ ಕೇಂದ್ರಗಳಿಲ್ಲ: ಹೊಟ್ಟೆಪಾಡಿಗಾಗಿ ಭಿಕ್ಷಾಟನೆ ಮಾಡುವ ಮಕ್ಕಳು ಹಾಗೂ ಅವರ ಕುಟುಂಬಕ್ಕೆ ಪುನರ್ವಸತಿ ಕಲ್ಪಿಸುವ ಕೆಲಸವನ್ನು ಆಯಾ ಸರ್ಕಾರಗಳು ಮಾಡಬೇಕು. ಕುಟುಂಬದವರಿಗೆ ಕನಿಷ್ಠ ೬ ತಿಂಗಳು ಅವರಿಗೆ ವಿವಿಧ ಸ್ವಯಂ ಉದ್ಯೋಗದ ತರಬೇತಿ ನೀಡಬೇಕು. ಆ ಮೂಲಕ ಅವರಿಗೆ ಸ್ವಾವಲಂಬನೆಯ ಮಾರ್ಗವನ್ನು ತೋರಿಸಬೇಕಾಗಿದೆ.

ಆಗ ಮಾತ್ರ ಮಕ್ಕಳು ಭಿಕ್ಷೆ ಮಾಡುವುದನ್ನು ನಿಯಂತ್ರಿಸಬಹುದು ಎಂಬುದು ಸಾರ್ವಜನಿಕರ ಒತ್ತಾಯವಾಗಿದೆ.ಬಹಳ ಮುಖ್ಯವಾಗಿ ಭಿಕ್ಷಾಟನೆಯಲ್ಲಿ ತೊಡಗಿಕೊಂಡ ಮಕ್ಕಳನ್ನು ರಕ್ಷಿಸಿದ ನಂತರ. ಸಿಡಬ್ಲ್ಯೂಸಿ (ಮಕ್ಕಳ ಕಲ್ಯಾಣ ಸಮಿತಿ) ಮುಂದೆ ಬರಬೇಕು. ೧೯೭೫ರ ಬಿಕ್ಷಾಟನೆ ನಿರ್ಮೂಲನ ಕಾಯ್ದೆ ಅನ್ವಯ ಮಕ್ಕಳನ್ನು ಸಂರಕ್ಷಿಸಿ ಸುರಕ್ಷಿತ ತರಬೇತಿಯುಕ್ತ ಸ್ಥಳಗಳಿಗೆ ಕಳುಹಿಸಬೇಕು. ೨೦೨೦, ೨೦೨೪ರಲ್ಲಿ. ಸುಪ್ರೀಂ ಕೋರ್ಟ್ ಮತ್ತು ಹೈಕೋರ್ಟ್ ಹೇಳಿರುವುದೇನೆಂದರೆ ಇಂತಹ ಕೇಂದ್ರಗಳನ್ನು ನಗರಪಾಲಿಕೆ ಅಥವಾ ಸ್ಥಳೀಯ ಸಂಸ್ಥೆಗಳು ಮಾಡಬೇಕು. ಅಲ್ಲದೆ, ಪ್ರತಿಯೊಬ್ಬ ನಾಗರಿಕ ಕೂಡ ತೆರಿಗೆ ಹಣದಲ್ಲಿ ಭಿಕ್ಷಾಟನೆ ನಿರ್ಮೂಲನೆಗೆ ಇಂತಿಷ್ಟು ಪಾಲು ಕೊಡಲೇಬೇಕೆಂದು ನಿಯಮವಿದೆ. ಆದರೆ ಸ್ಥಳೀಯ ಸಂಸ್ಥೆಗಳು ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸುತ್ತಿಲ್ಲ.

ಮೈಸೂರು ಜಿಲ್ಲೆಯಲ್ಲಿ ಭಿಕ್ಷೆ ಬೇಡುತ್ತಿದ್ದ ೧೪೫ ಮಕ್ಕಳ ಗುರುತು

” ಕೋರ್ಟ್ ಆದೇಶ ಅನುಷ್ಠಾನ ಆಗಬೇಕು ೧೯೭೫ರ ಭಿಕ್ಷಾಟನೆ ನಿರ್ಮೂಲನ ಕಾಯ್ದೆ ಅನ್ವಯ ಮಕ್ಕಳು ತಾಯಿಯೊಡನೆ ಬೆಳೆಯಬೇಕೆಂಬ ನಿಯಮವಿದೆ. ಹಾಗಾಗಿ ಭಿಕ್ಷಾಟನೆ ಮಾಡುವ ಮಕ್ಕಳನ್ನು ತಾಯಿಯೊಡನೆ ಕಳುಹಿಸಬೇಕಾದ ಅನಿವಾರ್ಯ ಸ್ಥಿತಿ ಮಕ್ಕಳ ಕಲ್ಯಾಣ ಸಮಿತಿಯದ್ದಾಗಿದೆ. ಹಾಗಾಗಿ ಈ ಎರಡು ವರ್ಷಗಳಲ್ಲಿ ಮಕ್ಕಳು ಹೆಚ್ಚಿನ ಮಟ್ಟದಲ್ಲಿ ಭಿಕ್ಷಾಟನೆಗೆ ತೊಡಗಿಕೊಂಡಿರುವುದು ಕಂಡುಬರುತ್ತದೆ. ಭಿಕ್ಷಾಟನೆಯಲ್ಲಿ ತೊಡಗಿಕೊಂಡ ಮಕ್ಕಳಿಗೆ ವಿಶೇಷವಾದ ತರಬೇತಿಗಳನ್ನು ನೀಡಬೇಕಾಗುತ್ತದೆ. ಕಲಿಕೆಯುಕ್ತ ತರಬೇತಿ ಇಲ್ಲದಿರುವುದು ಅಸಹನೀಯವಾಗಿದೆ.”

-ಪರಶುರಾಮ್, ಒಡನಾಡಿ ಸೇವಾ ಸಂಸ್ಥೆ, ಮೈಸೂರು

ಭಿಕ್ಷಾಟನೆ: ರಾಜ್ಯದಲ್ಲಿ ಎರಡನೇ ಸ್ಥಾನದಲ್ಲಿ ಮೈಸೂರು

ಕೊಡಗು ಜಿಲ್ಲೆಯಲ್ಲಿ ಶೂನ್ಯ ನೆರೆಯ ಜಿಲ್ಲೆಯಾದ ಕೊಡಗಿನಲ್ಲಿ ಕಳೆದ ಮೂರು ವರ್ಷಗಳಿಂದ ಮಕ್ಕಳು ಭಿಕ್ಷೆ ಬೇಡಿದ್ದರ ಬಗ್ಗೆ ಯಾವುದೇ ಪ್ರಕರಣ ದಾಖಲಾಗಿಲ್ಲ. ಉಳಿದಂತೆ ಮಂಡ್ಯ ಜಿಲ್ಲೆಯಲ್ಲಿ ೩೨ ಹಾಗೂ ಚಾಮರಾಜನಗರ ಜಿಲ್ಲೆಯಲ್ಲಿ ೯ ಪ್ರಕರಣಗಳು ಮಾತ್ರ ದಾಖಲಾಗಿವೆ. ಇಡೀ ರಾಜ್ಯದಲ್ಲಿ ದಾಖಲಾಗಿರುವ ಒಟ್ಟು ಪ್ರಕರಣಗಳು ೧,೩೪೭.

ಭಿಕ್ಷೆ ಬೇಡುವ ಮಕ್ಕಳಿಗೆ ಪುನರ್ವಸತಿ ಅಗತ್ಯ

” ಭಿಕ್ಷೆ ಬೇಡುವ ಮಕ್ಕಳನ್ನು ಕರೆತಂದ ಮೇಲೆ ಅವರನ್ನು ಮಕ್ಕಳ ಕಲ್ಯಾಣ ಸಮಿತಿ ಮುಂದೆ ಹಾಜರುಪಡಿಸಲಾಗುತ್ತದೆ. ನಂತರ ಕೆಲಕಾಲ ಬಾಲಕ, ಬಾಲಕಿಯರು ಹಾಗೂ ಪೋಷಕರನ್ನು ರಾಜ್ಯ ಮಹಿಳಾ ಕೇಂದ್ರದಲ್ಲಿ ಇರಿಸಲಾಗುತ್ತದೆ. ಇದಾದ ನಂತರ ಅವರ ಪೋಷಕರನ್ನು ಕರೆಯಿಸಿ ಭಿಕ್ಷಾಟನೆ ಮಾಡಿಸಿದಲ್ಲಿ ಅದರಿಂದ ಉಂಟಾಗುವ ಕಾನೂನು ತೊಡಕುಗಳ ಬಗ್ಗೆ ತಿಳಿಹೇಳಿ ಮಕ್ಕಳನ್ನು ಅವರ ಜೊತೆಗೆ ಕಳುಹಿಸಿಕೊಡಲಾಗುತ್ತದೆ. ಆದರೆ, ಅವರಿಗೆ ಪುನರ್ವಸತಿ ಕಲ್ಪಿಸುವ ಕೆಲಸವನ್ನು ಸರ್ಕಾರ ಮಾಡಿಲ್ಲ. ಈ ಕೆಲಸ ಜರೂರಾಗಿ ಆಗಬೇಕಿದೆ.”

-ಎಂ.ರವಿಚಂದ್ರ, ಜಿಲ್ಲಾಧ್ಯಕ್ಷರು, ಮಕ್ಕಳ ಕಲ್ಯಾಣ ಸಮಿತಿ

ಆಂದೋಲನ ಡೆಸ್ಕ್

Recent Posts

ಮಂಡ್ಯ ಜಿಲ್ಲೆಯ ರಾಷ್ಟೀಯ ಹೆದ್ದಾರಿಗಳ ಕಾಮಗಾರಿ ಶೀಘ್ರ ಮುಕ್ತಾಯಗೊಳಿಸಿ : ಸಚಿವ ಎನ್.ಚಲುವರಾಯಸ್ವಾಮಿ

ಬೆಂಗಳೂರು : ಮಂಡ್ಯ ಜಿಲ್ಲೆ ಮೂಲಕ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗಳನ್ನು ಆದಷ್ಟು ಶೀಘ್ರವಾಗಿ ಮುಕ್ತಾಯಗೊಳಿಸುವಂತೆ ಕೃಷಿ ಸಚಿವರು…

1 second ago

‘ಟಿವಿಕೆ ಪ್ರವೇಶದಿಂದ ರಾಜಕೀಯ ಉದ್ವಿಗ್ನ’ : ದಳಪತಿ ವಿಜಯ್‌

ಚೆನ್ನೈ : ನಮ್ಮ ಪಕ್ಷದ ಪ್ರವೇಶದಿಂದ ತಮಿಳುನಾಡು ರಾಜಕೀಯ ಉದ್ವಿಗ್ನಗೊಂಡಿದೆ ಎಂದು ದಳಪತಿ ವಿಜಯ್ ಹೇಳಿಕೊಂಡಿದ್ದಾರೆ. ಮುಂಬರುವ ತಮಿಳುನಾಡಿನ ವಿಧಾನಸಭಾ…

18 mins ago

ಜಿಎಸ್‌ಟಿ, ಐಟಿ ಪಾವತಿದಾರರು ‘ಗ್ರಹಲಕ್ಷ್ಮಿʼಗೆ ಅರ್ಹರಲ್ಲ : ಸಚಿವೆ ಲಕ್ಷ್ಮಿ

ಬೆಂಗಳೂರು : ಆದಾಯ ತೆರಿಗೆ ಪಾವತಿಸುವವರು ಹಾಗೂ ಜಿಎಸ್‌ಟಿ ವ್ಯಾಪ್ತಿಗೆ ಒಳಪಡುವವರು ರಾಜ್ಯ ಸರ್ಕಾರದ ಮಹಾತ್ವಕಾಂಕ್ಷಿ ಯೋಜನೆ ಗೃಹಲಕ್ಷ್ಮಿ ವ್ಯಾಪ್ತಿಗೆ…

32 mins ago

ಸಾಮಾಜಿಕ ಜಾಲತಾಣ ಬಳಕೆಯಿಂದ ದುಷ್ಪರಿಣಾಮ : ಹರೆಯದವರ ಬಳಕೆ ನಿಷೇಧಕ್ಕೆ ಚಿಂತನೆ

ಬೆಂಗಳೂರು : ಆರೋಗ್ಯದ ಮೇಲೆ ವ್ಯಾಪಕ ದುಷ್ಪರಿಣಾಮ ಬೀರುತ್ತಿರುವ ಹಿನ್ನೆಲೆಯಲ್ಲಿ ಇನ್ನು ಮುಂದೆ 16 ವರ್ಷದ ಒಳಗಿನ ಮಕ್ಕಳು, ಸಾಮಾಜಿಕ…

38 mins ago

ಉದ್ಯಮಿ ಸಿ.ಜೆ.ರಾಯ್ ಆತ್ಮಹತ್ಯೆ ಪ್ರಕರಣ : ನ್ಯಾಯಾಂಗ ತನಿಖೆಗೆ ಕೇರಳ ಸಿಎಂ ಆಗ್ರಹ

ತಿರುವನಂತಪುರಂ : ಬೆಂಗಳೂರಿನಲ್ಲಿ ಆದಾಯ ತೆರಿಗೆ ಇಲಾಖೆ ನಡೆಸಿದ ಶೋಧದ ವೇಳೆ ರಿಯಲ್ ಎಸ್ಟೇಟ್ ಉದ್ಯಮಿ ಸಿ.ಜೆ.ರಾಯ್ ಅವರ ಆತ್ಮಹತ್ಯೆ…

56 mins ago

ಬೌದ್ಧ ಧರ್ಮಗುರು ದಲೈಲಾಮಾಗೆ ಪ್ರತಿಷ್ಠಿತ ಗ್ರ್ಯಾಮಿ ಪ್ರಶಸ್ತಿ ಗೌರವ

ಟಿಬೆಟ್‌ ಬೌದ್ಧ ಧರ್ಮಗುರು ಮತ್ತು ಜಾಗತಿಕ ಶಾಂತಿದೂತ ಎಂದು ಪ್ರಖ್ಯಾತರಾದ ದಲೈಲಾಮಾ ಅವರು ಪ್ರತಿಷ್ಠಿತ ಗ್ರ್ಯಾಮಿ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ. ತಮ್ಮ…

2 hours ago