Andolana originals

೩ ತಿಂಗಳಿಂದ ವಿತರಣೆಯಾಗದ ಪೌಷ್ಟಿಕ ಆಹಾರಗಳ ಕಿಟ್

ಕೃಷ್ಣ ಸಿದ್ದಾಪುರ

ಮಳೆಗಾಲದಲ್ಲಿ ಕಿಟ್ ದೊರಕದೆ ಬಡವರಿಗೆ ಸಂಕಷ್ಟ; ಸೂಕ್ತ ಕ್ರಮ ಕೈಗೊಳ್ಳದಿದ್ದಲ್ಲಿ ದಲಿತಪರ ಸಂಘಟನೆಗಳಿಂದ ಹೋರಾಟದ ಎಚ್ಚರಿಕೆ

ಸಿದ್ದಾಪುರ: ಪರಿಶಿಷ್ಟ ಪಂಗಡಗಳ ಜನಾಂಗದವರ ಹಸಿವು ಮುಕ್ತಗೊಳಿಸಿ, ಅವರು ಆರೋಗ್ಯ ಕಾಪಾಡಿಕೊಳ್ಳಲು ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆ ಮೂಲಕ ವಿತರಿಸುಲಾಗುತ್ತಿದ್ದ ಪೌಷ್ಟಿಕ ಆಹಾರದ ಕಿಟ್ ಕಳೆದ ಮೂರು ತಿಂಗಳುಗಳಿಂದ ವಿತರಣೆಯಾಗದಿರುವ ಆರೋಪ ಕೇಳಿ ಬಂದಿದೆ.

ವಿರಾಜಪೇಟೆ ತಾಲ್ಲೂಕಿನ ಮಾಲ್ದಾರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗೇಟ್ ಹಾಡಿ, ತಟ್ಟಳ್ಳಿ, ಹಣ್ಣಿನ ತೋಟ, ದಿಡ್ಡಳ್ಳಿ ಹಾಡಿಯ ಸುಮಾರು ೧೫೦ ಕುಟುಂಬಗಳು ತಮಗೆ ಕಳೆದ ಮೂರು ತಿಂಗಳುಗಳಿಂದ ಐ.ಟಿ. ಬಿ.ಟಿ ಇಲಾಖೆಯಿಂದ ಪೌಷ್ಟಿಕ ಆಹಾರ ಕಿಟ್ ದೊರಕದಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಪರಿಶಿಷ್ಟ ಪಂಗಡಗಳ ಕುಟುಂಬವೊಂದಕ್ಕೆ ಇಲಾಖೆಯಿಂದ ಮಾಸಿಕ ೨,೨೫೮.೧೪ ರೂ. ಮೊತ್ತದ ೧೪ ವಿವಿಧ ಬಗೆಯ ಪೌಷ್ಟಿಕಾಂಶವುಳ್ಳ ಪಡಿತರಗಳನ್ನು ಒಳಗೊಂಡ ಕಿಟ್‌ನ್ನು ನೀಡಲಾಗುತ್ತಿದೆ. ರಾಜ್ಯದ ಮೈಸೂರು, ಚಾಮರಾಜನಗರ, ಕೊಡಗು, ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಶಿವಮೊಗ್ಗ ಮತ್ತು ಚಿಕ್ಕಮಗಳೂರು ಜಿಲ್ಲೆಗಳಿಗೆ ೧೧ ತಿಂಗಳವರೆಗೆ ಸರಬರಾಜು ಮಾಡಲು ೧,೧೮.೮೭ ಕೋಟಿ ರೂ. ಗುತ್ತಿಗೆಯ ಟೆಂಡರ್‌ನ್ನು ಆರ್.ಆರ್ ಎಂಟರ್ ಪ್ರೈಸಸ್‌ಗೆ ೧೮.೨.೨೦೨೫ ರಂದು ನೀಡಿ ಆದೇಶಿಸಲಾಗಿದೆ. ಅರಣ್ಯ ಹಾಗೂ ಅರಣ್ಯ ದಂಚಿನಲ್ಲಿ ವಾಸಿಸುವ ಮೂಲ ನಿವಾಸಿ ಪರಿಶಿಷ್ಟ ಪಂಗಡಗಳಾದ ಕೊರಗ, ಜೇನು ಕುರುಬ, ಕಾಡು ಕುರುಬ, ಸೋಲಿಗ, ಎರವ, ಮಲೆಕುಡಿಯ ಸಿದ್ದಿ, ಹಸಲರು, ಗೌಡಲು, ಗೊಂಡ ಹಾಗೂ ಬೆಟ್ಟ ಕುರುಬ ಜನಾಂಗದವರು ಈ ಸೌಲಭ್ಯಕ್ಕೆ ಅರ್ಹರಾಗಿದ್ದಾರೆ. ಅಕ್ಕಿ, ರಾಗಿ, ಗೋಧಿ, ತೊಗರಿ ಬೇಳೆ, ಕಡಲೆಕಾಳು, ಕಡ್ಲೆಬೀಜ, ಅಲಸಂದೆ, ಹುರುಳಿ, ಹೆಸರುಕಾಳು, ಸಕ್ಕರೆ, ಬೆಲ್ಲ,ಮೊಟ್ಟೆ, ಸೂರ್ಯ ಕಾಂತಿ ಎಣ್ಣೆ, ನಂದಿನಿ ತುಪ್ಪ ಸೇರಿದಂತೆ ೧೪ ಬಗೆಯ ಪದಾರ್ಥಗಳನ್ನು ಒಳಗೊಂಡ ಕಿಟ್‌ಗಳನ್ನು ವಿತರಿಸಲಾಗುತ್ತದೆ.

ಕೊಡಗು ಜಿಲ್ಲೆಯ ಮಡಿಕೇರಿ ತಾಲ್ಲೂಕಿನ ೫೮೬, ಸೋಮವಾರಪೇಟೆ ತಾಲ್ಲೂಕಿನ ೧,೯೦೮ ಮತ್ತು ವಿರಾಜಪೇಟೆ ತಾಲ್ಲೂಕಿನ ೭,೧೩೭ ಕುಟುಂಬಗಳೂ ಸೇರಿದಂತೆ ಒಟ್ಟು ೯,೬೩೧ ಕುಟುಂಬದವರು ಈ ಯೋಜನೆಯ ಸೌಲಭ್ಯ ಪಡೆಯಲು ಅರ್ಹರಾಗಿದ್ದಾರೆ. ಕಳೆದ ಮೂರು ತಿಂಗಳುಗಳಿಂದ ಕೊಡಗು ಜಿಲ್ಲೆಯಲ್ಲಿ ಮಳೆಯಾಗುತ್ತಿದ್ದು, ಕೆಲವೆಡೆ ಕೆಲಸವಿಲ್ಲದೆ ಸಂಕಷ್ಟ ಎದುರಾಗಿದೆ. ವೃದ್ಧರು, ಮಕ್ಕಳು, ಬಾಣಂತಿಯರು ಸೇರಿದಂತೆ ಹಾಡಿ ನಿವಾಸಿಗಳಿಗೆ ಈ ಯೋಜನೆ ದೊರೆತಲ್ಲಿ ಒಂದಷ್ಟು ಉಪಯೋಗವಾಗುತ್ತಿತ್ತು.

ಆದರೆ, ಕಳೆದ ೩ ತಿಂಗಳುಗಳಿಂದ ನಮಗೆ ಈ ಸೌಲಭ್ಯ ದೊರೆಯುತ್ತಿಲ್ಲ ಎಂದು ಸೌಲಭ್ಯಕ್ಕೆ ಆಯ್ಕೆಯಾಗಿರುವ ಫಲಾನುಭವಿಗಳು ದೂರಿದ್ದಾರೆ. ಈ ಬಗ್ಗೆ ಸಂಬಂಧಪಟ್ಟವರು ಗಮನಹರಿಸಿ ಆಹಾರ ಕಿಟ್ ದೊರಕಿಸಿಕೊಡಬೇಕೆಂದು ಹಾಡಿ ನಿವಾಸಿಗಳು ಆಗ್ರಹಿಸಿದ್ದಾರೆ.

” ಕೊಡಗು ಜಿಲ್ಲೆಯಲ್ಲಿ ವಾಸವಿರುವ ಪರಿಶಿಷ್ಟ ಪಂಗಡಗಳ ಸಮುದಾಯದ ಕುಟುಂಬಗಳಿಗೆ ಪೌಷ್ಟಿಕ ಆಹಾರ ಸಾಮಗ್ರಿಗಳನ್ನು ಸರಬರಾಜು ಮಾಡಲಾಗುತ್ತಿದೆ. ಗುಡ್ಡಗಾಡು ಪ್ರದೇಶವಾಗಿರುವುದರಿಂದ ಕೆಲೆವೆಡೆ ತಡವಾಗಿರುವ ಸಾಧ್ಯತೆ ಇದೆ. ಈ ಬಗ್ಗೆ ಪರಿಶೀಲನೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು.”

-ಹೊನ್ನೇಗೌಡ, ಐಟಿಡಿಪಿ ಇಲಾಖೆ ಅಧಿಕಾರಿ

” ೪ ಹಾಡಿಗಳ ೧೫೦ ಕುಟುಂಬಗಳಿಗೆ ೩ ತಿಂಗಳುಗಳಿಂದ ಪೌಷ್ಟಿಕ ಆಹಾರ ನೀಡದೆ ವಂಚಿಸಿರುವುದು ನಮ್ಮ ಗಮನಕ್ಕೆ ಬಂದಿದೆ. ಸಮುದಾಯದ ಬಡ ಕುಟುಂಬಗಳ ಆಹಾರ ಕಿಟ್ಗೆ ವ್ಯಯಿಸಬೇಕಾದ ಹಣವನ್ನು ಅರ್ಹ ಫಲಾನುಭವಿಗಳ ಕುಟುಂಬದ ಖಾತೆಗೆ ಜಮಾ ಮಾಡದೇ ಇದ್ದಲ್ಲಿ ಸಂಘಟನೆ ನೇತೃತ್ವದಲ್ಲಿ ಹೋರಾಟ ಕೈಗೊಳ್ಳಲಾಗುವುದು.”

-ರಮೇಶ್, ಜಿಲ್ಲಾಧ್ಯಕ್ಷರು, ದಲಿತ ರೈಟ್ಸ್ ಮೂಮೆಂಟ್

” ರಾಜ್ಯ ಸರ್ಕಾರವು ಬುಡಕಟ್ಟು ಜನಾಂಗದವರಿಗಾಗಿ ಪೌಷ್ಟಿಕ ಆಹಾರದ ಕಿಟ್ ವಿತರಿಸುತ್ತಿತ್ತು. ಕೆಲಸವಿಲ್ಲದೇ ಬಡತನದಿಂದ ಬಳಲುವ ಹಾಡಿ ನಿವಾಸಿಗಳಿಗೆ ಆಹಾರ ಪದಾರ್ಥಗಳು ಜೀವನ ನಿರ್ವಹಣೆಗೆ ಸಹಕಾರಿಯಾಗಿದ್ದವು. ಆದರೆ ಕಳೆದ ಮೂರು ತಿಂಗಳುಗಳಿಂದ ಯಾವುದೇ ಪದಾರ್ಥಗಳು ಸಿಕ್ಕಿಲ್ಲ. ಆಹಾರ ಕಿಟ್ ಸರಬರಾಜು ಮಾಡುವ ಟೆಂಡರ್ ಅನ್ನು ಪ್ರಾಮಾಣಿಕ ಗುತ್ತಿಗೆದಾರರಿಗೆ ನೀಡಿದರೆ ಸಮಸ್ಯೆ ಬಗೆಹರಿಯಲಿದೆ.”

-ಇಂದಿರಾ, ಹಾಡಿ ನಿವಾಸಿ

” ವಿರಾಜಪೇಟೆ ಹಾಗೂ ಪೊನ್ನಂಪೇಟೆ ತಾಲ್ಲೂಕುಗಳಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಸಮುದಾಯಕ್ಕೆ ಸೌಲಭ್ಯ ವಿಸ್ತರಿಸುವಲ್ಲಿ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿರುವುದು ಸರಿಯಲ್ಲ. ಜನಪ್ರತಿನಿಧಿಗಳ ಕಡೆಗಣನೆಯಿಂದ ಕಲ್ಯಾಣ ಕಾರ್ಯಗಳಿಗೆ ಬಳಕೆಯಾಗ ಬೇಕಿದ್ದ ಹಣ ಈ ಸಮುದಾಯದ ಕೈ ತಪ್ಪುತ್ತಿದೆ. ಸಂಬಂಧಪಟ್ಟವರು ಸೂಕ್ತ ಕ್ರಮ ಕೈಗೊಳ್ಳಬೇಕು.”

-ಕೆ.ವಿ ಸುನೀಲ್, ಪರಿಶಿಷ್ಟ ಜಾತಿ ಪಂಗಡಗಳ ಹಿತರಕ್ಷಣಾ ಸಮಿತಿ ಸದಸ್ಯ

ಆಂದೋಲನ ಡೆಸ್ಕ್

Recent Posts

ಮಾದಕ ವಸ್ತು ಪತ್ತೆ ; ನಾಲ್ವರು ಸಿಸಿಬಿ ವಶಕ್ಕೆ

ಮೈಸೂರು : ಮಾದಕ ವ್ಯಸನ ಮುಕ್ತ ಮೈಸೂರು ವಿಮುಕ್ತಿ ಅಭಿಯಾನದ ಮುಂದುವರಿದ ಕಾರ್ಯಾಚರಣೆಯಲ್ಲಿ ಸಿಸಿಬಿ ಪೊಲೀಸರು ನಾಲ್ವರನ್ನು ಬಂಧಿಸಿ ಸುಮಾರು…

2 hours ago

ಏಳು ವಿದೇಶಿಯರ ಬಂಧಿಸಿದ ಎನ್‌ಐಎ

ಹೊಸದಿಲ್ಲಿ : ಭಾರತೀಯ ದಂಗೆಕೋರ ಗುಂಪುಗಳೊಂದಿಗೆ ಸಂಬಂಧ ಹೊಂದಿರುವ ಜನಾಂಗೀಯ ಯುದ್ಧ ಗುಂಪುಗಳನ್ನು ಸಂಪರ್ಕಿಸಲು ಮತ್ತು ತರಬೇತಿ ನೀಡಲು ಅಕ್ರಮವಾಗಿ…

5 hours ago

ಮೈಸೂರು | ಆಕಸ್ಮಿಕ ಬೆಂಕಿಗೆ ವ್ಯಕ್ತಿ ಸಜೀವ ದಹನ

ಮೈಸೂರು : ಸ್ಥಗಿತಗೊಂಡಿದ್ದ ಚಿತ್ರಮಂದಿರದ ಆವರಣದಲ್ಲಿ ಸಂಭವಿಸಿದ ಆಕಸ್ಮಿಕ ಅಗ್ನಿ ಅವಘಡದಲ್ಲಿ ಅಲ್ಲಿನ ವಾಚ್‌ಮನ್ ಒಬ್ಬರು ಸಜೀವ ದಹನಗೊಂಡ ದಾರುಣ…

5 hours ago

ಎಸ್‌ಎಸ್‌ಎಲ್‌ಸಿ ಪರೀಕ್ಷೆ : ವಿದ್ಯಾರ್ಥಿಗಳಿಗೆ ಶುಭಕೋರಿದ ಸಿಎಂ

ಬೆಂಗಳೂರು : 2026ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಮಾ.18ರಿಂದ ಪ್ರಾರಂಭವಾಗುತ್ತಿದ್ದು, ಪರೀಕ್ಷೆಗೆ ಹಾಜರಾಗುವ ಎಲ್ಲಾ ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು…

5 hours ago

ಮಹದೇಶ್ವರ ಬೆಟ್ಟದಲ್ಲಿ ಯುಗಾದಿ ಸಂಭ್ರಮ : ಮಾದಪ್ಪನಿಗೆ ಎಣ್ಣೆಮಜ್ಜನ

ಹನೂರು : ರಾಜ್ಯದ ಪ್ರಸಿದ್ದ ಧಾರ್ಮಿಕ ಯಾತ್ರಸ್ಥಳ ಮಲೆಮಹದೇಶ್ವರ ಬೆಟ್ಟದ ಮಾದಪ್ಪನ ಸನ್ನಿಧಿಯಲ್ಲಿ ಯುಗಾದಿ ಜಾತ್ರಾ ಮಹೋತ್ಸವ ಹಿನ್ನೆಲೆ ಮಂಗಳವಾರ…

5 hours ago

ಕುಡಿಯುವ ನೀರು ಸಮಸ್ಯೆಗೆ ಸರ್ಕಾರದ ಕ್ರಮವೇನು? : ಅಧಿವೇಶನದಲ್ಲಿ ಎಂಎಲ್‌ಎ ಮಂಜುನಾಥ್‌ ಪ್ರಶ್ನೆ

ಹನೂರು : ತಾಲೂಕು ವ್ಯಾಪ್ತಿಯ ಒಂಬತ್ತು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾಗಿದ್ದು ಶಾಶ್ವತ ಪರಿಹಾರಕ್ಕೆ ಸರ್ಕಾರ…

5 hours ago