Andolana originals

ನಿಯಮ ಮೀರಿ ನಿರ್ಮಿಸಿರುವ ಕಟ್ಟಡ ತೆರವಿಗೆ ಸೂಚನೆ

ಗಾಲ್ಫ್ ಕ್ಲಬ್ ಆಡಳಿತ ಮಂಡಳಿಗೆ ಮೈಸೂರು ನಗರಪಾಲಿಕೆ ನೋಟಿಸ್

ಮೈಸೂರು: ನಗರದ ಜಯಚಾಮರಾಜ ಒಡೆಯರ್ ಗಾಲ್ಛ್ ಕ್ಲಬ್ ಆವರಣದಲ್ಲಿ ನಿಯ ಮಾವಳಿ ಧಿಕ್ಕರಿಸಿ ನಿರ್ಮಿಸಿರುವ ಕಟ್ಟಡವನ್ನು ಕೂಡಲೇ ತೆರವುಗೊಳಿಸಬೇಕು ಎಂದು ಮೈಸೂರು ಮಹಾನಗರಪಾಲಿಕೆ ಆಡಳಿತ ಮಂಡಳಿಗೆ ನೋಟಿಸ್  ನೀಡಿದೆ.

ಈ ಸಂಬಂಧ ನಗರಪಾಲಿಕೆ ವಲಯ ಕಚೇರಿ ೧ರ ಸಹಾಯಕ ಆಯುಕ್ತರು, ಮೈಸೂರು ರೇಸ್ ಕ್ಲಬ್ ಅಧಿನದಲ್ಲಿ ಬರುವ ಗಾಲ್ಛ್ ಕ್ಲಬ್‌ನ ಗೌರವ ಕಾರ್ಯದರ್ಶಿ ಕೆ.ಎಸ್.ಸುಽರ್ ಭಟ್ ಅವರಿಗೆ ಜ.೩೧ರಂದು ಸೂಚನಾ ಪತ್ರ ಕಳುಹಿಸಿದ್ದಾರೆ.

ಪತ್ರ ತಲುಪಿದ ತಕ್ಷಣ ಕಟ್ಟಡವನ್ನು ತೆರವುಗೊಳಿಸಿ ನಮಗೆ ವರದಿ ನೀಡಬೇಕು. ತಪ್ಪಿದಲ್ಲಿ ನಗರಪಾಲಿಕೆ ವತಿಯಿಂದ ಕಟ್ಟಡವನ್ನು ತೆರವುಗೊಳಿಸಿ, ಅದರ ವೆಚ್ಚವನ್ನು ಕಟ್ಟಡದ ಮಾಲೀಕರಿಂದ ವಸೂಲು ಮಾಡಲು ಕ್ರಮ ಕೈಗೊಳ್ಳ ಲಾಗುವುದು ಎಂದು ನೋಟಿಸ್‌ನಲ್ಲಿ ತಿಳಿಸಿದ್ದಾರೆ.

ತಿಳಿವಳಿಕೆ ಪತ್ರದ ವಿವರ: ಸದರಿ ವಿಷಯಕ್ಕೆ ಸಂಬಂಧಿಸಿದಂತೆ, ನಂ.೧೨೯೦ -೨೬೭/೧ ೧೨೯೦ ಎನ್-೨೬೭/೧ ಎನ್-೧೪, ಮೈಸೂರು ರೇಸ್ ಕ್ಲಬ್ ಲಲಿತಮಹಲ್ ರಸ್ತೆ ಮೈಸೂರು, ಇಲ್ಲಿ ಈ ನವೀಕರಣ ಮತ್ತು ಕಟ್ಟಡ ನಿರ್ಮಾಣ ಆಗಿರುವುದು ಕಂಡುಬಂದಿರುತ್ತದೆ.

ನಗರಪಾಲಿಕೆಯಿಂದ ಕಟ್ಟಡ ನವೀಕರಣ ಮತ್ತು ನಿರ್ಮಾಣ ಮಾಡಲು ಯಾವುದೇ ನಕ್ಷೆ ಅನುಮೋದನೆ ಮತ್ತು ರಹದಾರಿ ಪಡೆಯದೇ ಹಳೇ ಕಟ್ಟಡವನ್ನು ನವೀಕರಿಸಿಕೊಂಡು ಕೆಲವು ಭಾಗಗಳನ್ನು ಹೊಸದಾಗಿ ನಿರ್ಮಿಸಿರುವುದು ಕಂಡುಬಂದಿದೆ.

ಈ ಬಗ್ಗೆ ದಿನಾಂಕ: ೨೮.೦೨.೨೦೨೫ ಮತ್ತು ೨೨.೦೫.೨೦೨೫ರಂದು ನಗರಪಾಲಿಕೆಯಿಂದ ಮೈಸೂರು ರೇಸ್ ಕ್ಲಬ್ ಆಡಳಿತಾಧಿಕಾರಿಗಳಿಗೆ ನೋಟಿಸ್ ನೀಡಲಾಗಿದ್ದು, ಸದರಿ ನೋಟಿಸನ್ನು ಪ್ರಶ್ನಿಸಿ ಹೈಕೋರ್ಟ್‌ನಲ್ಲಿ ರಿಟ್ ಅರ್ಜಿ ದಾಖಲಿಸಿರುತ್ತಾರೆ. ಸದರಿ ರಿಟ್‌ನ ಉಲ್ಲೇಖದಲ್ಲಿ ನಮೂದಿಸಿರುವಂತೆ ದಿನಾಂಕ:೦೫.೦೮.೨೦೨೫ರ ನ್ಯಾಯಾಲಯವು ಅಂತಿಮ ಆದೇಶ ನೀಡಿರುತ್ತದೆ. ಸದರಿ ಆದೇಶ ಪಾಲನೆ ಮಾಡಲು ನಿಮಗೆ ತಿಳಿವಳಿಕೆ ಪತ್ರ ನೀಡಲಾಗಿದ್ದು, ಇದಕ್ಕೆ ಉತ್ತರವಾಗಿ ನೀವು ಲಿಖಿತ ಪತ್ರ ನೀಡಿದೆ. ನಿರ್ಮಾಣದ ಬಗ್ಗೆ ಈ ಕಚೇರಿಗೆ ತಿಳಿಸಿರುವುದಾಗಿ ಘಟನೋತ್ತರ ಮಂಜೂರಾತಿ ಕೋರಿರುವುದಾಗಿ ಮತ್ತು ಈ ಬಗ್ಗೆ ರಿಟ್ ಪಿಟಿಷನ್ (ಸಂಖ್ಯೆ೧೩೪೫೪/೨೦೨೦) ನ್ಯಾಯಾಲಯ ದಲ್ಲಿ ಬಾಕಿ ಇರುತ್ತದೆ ಎಂದು ಉತ್ತರ ನೀಡಿರುತ್ತೀರಿ.

ಆದರೆ, ಈ ಹಿಂದೆಯೇ ಸ್ವತ್ತಿಗೆ ಸಂಬಂಧಿಸಿದ ದಾಖಲೆಗಳನ್ನು ಹಾಜರುಪಡಿಸಿ ಅರ್ಜಿ ಸಲ್ಲಿಸಿದ್ದಲ್ಲಿ ನಕ್ಷೆ ಅನುಮೋದನೆಗೆ ಕ್ರಮವಹಿಸಲಾಗುವುದೆಂದು ಹಿಂಬರಹ ನೀಡಲಾಗಿರುತ್ತದೆ. ಮತ್ತು ತಿಳಿವಳಿಕೆ ಪತ್ರದಲ್ಲಿ ನಿಮ್ಮ ಸ್ವತ್ತಿಗೆ ಸಂಬಂಧಿಸಿದ ಮಾಲೀಕತ್ವದ ದಾಖಲಾತಿಗಳನ್ನು ಮತ್ತು ನಿರ್ಮಾಣಕ್ಕೆ ಸಂಬಂಧಿಸಿದ ದಾಖಲೆಗಳನ್ನು ಕಚೇರಿಗೆ ಹಾಜರುಪಡಿಸುವಂತೆ ತಿಳಿವಳಿಕೆ ಪತ್ರದ ಮೂಲಕ ಸೂಚನೆ ನೀಡಲಾಗಿದೆ.

ಆದರೆ ನೀವು ಯಾವುದೇ ದಾಖಲೆಗಳನ್ನು ಕಚೇರಿಗೆ ನೀಡಿಲ್ಲ. ಆದ್ದರಿಂದ ಈ ಪತ್ರ ತಲುಪಿದ ತಕ್ಷಣ ಕಟ್ಟಡವನ್ನು ತೆರವುಗೊಳಿಸಿ ಈ ಕಚೇರಿಗೆ ವರದಿ ನೀಡುವುದು. ತಪ್ಪಿದ್ದಲ್ಲಿ ನಗರ ಪಾಲಿಕೆ ವತಿಯಿಂದ ಕಟ್ಟಡ ತೆರವುಗೊಳಿಸಿ ಅದಕ್ಕೆ ತಗಲುವ ವೆಚ್ಚವನ್ನು ಕಟ್ಟಡದ ಮಾಲೀಕರಿಂದ ವಸೂಲು ಮಾಡಲಾಗುವುದು ಹಾಗೂ ೧೯೭೬ರ ಕರ್ನಾಟಕ ಮುನ್ಸಿಪಲ್ ಕಾರ್ಪೊರೇಷನ್ ಕಾಯ್ದೆ ಸೆಕ್ಷನ್-೩೨೧ರ ಪ್ರಕಾರ ಕಾನೂನು ರೀತಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಯಪಡಿಸಿದೆ ಎಂದು ನೋಟಿಸ್‌ನಲ್ಲಿ ತಿಳಿಸಲಾಗಿದೆ.

” ನಗರಪಾಲಿಕೆ ವ್ಯಾಪ್ತಿಯಲ್ಲಿ ಯಾವುದೇ ಇಲಾಖೆ, ಸಂಘ, ಸಂಸ್ಥೆ, ಖಾಸಗಿ ವ್ಯಕ್ತಿಗಳು ಕಟ್ಟಡ ನಿರ್ಮಾಣ ಮಾಡಬೇಕಾದಲ್ಲಿ ನಗರಪಾಲಿಕೆ ನಕ್ಷೆ, ಮಂಜೂರಾತಿ ಹಾಗೂ ಕಟ್ಟಡ ನಿರ್ಮಾಣಕ್ಕೆ ಅನುಮತಿ ಪಡೆಯುವುದು ಕಡ್ಡಾಯ. ಈ ಅಂಶದ ಆಧಾರದಲ್ಲಿಯೇ ಗಾಲ್ಛ್ ಕ್ಲಬ್‌ಗೆ ನೋಟಿಸ್ ನೀಡಲಾಗಿದೆ.”

-ಎಸ್.ಎನ್.ಚೇತನ, ಅಭಿವೃದ್ಧಿ ಅಧಿಕಾರಿ, ನಗರಪಾಲಿಕೆ ವಲಯ ಕಚೇರಿ ೧

ಹಿಂದೆಯೇ ಕ್ರಮ ಕೈಗೊಳ್ಳಬಹುದಿತ್ತು: ಕಟ್ಟಡ ನಿರ್ಮಾಣ ಹಂತದಲ್ಲಿಯೇ ಮೈಸೂರು ರೇಸ್ ಕ್ಲಬ್(ಎಂಆರ್‌ಸಿ) ವತಿಯಿಂದ ನಗರ ಪಾಲಿಕೆ ಆಯುಕ್ತರಿಗೆ ಅನಧಿಕೃತ ನಿರ್ಮಾಣ ತಡೆಯುವಂತೆ ದೂರು ಅರ್ಜಿಯನ್ನು ಸಲ್ಲಿಸಲಾಗಿತ್ತು. ಅಂದು ನಗರ ಪಾಲಿಕೆ ಎಂಆರ್‌ಸಿಗೆ ಇಂತಹ ನಿರ್ಮಾಣ ಸ್ಥಗಿತಗೊಳಿಸುವಂತೆಯೂ ಹಾಲಿ ನಿರ್ಮಾಣ ತೆರವುಗೊಳಿಸುವಂತೆ ಎಂಆರ್‌ಸಿಗೇ ಸೂಚನಾ ಪತ್ರ ಬರೆದು ಕೈತೊಳೆದುಕೊಂಡಿತ್ತು. ಈಗ ಕಟ್ಟಡ ಪೂರ್ಣಗೊಂಡಿದೆ. ಮತ್ತೆ ಇದನ್ನು ತೆರವುಗೊಳಿಸುವಂತೆ ಪಾಲಿಕೆಯು ಗಾಲ್ಛ್ ಕ್ಲಬ್‌ನ ಗೌರವ ಕಾರ್ಯದರ್ಶಿಗೆ ಗಡುವು ನೀಡಿದೆ. ಲೋಕೋಪಯೋಗಿ ಇಲಾಖೆಗೆ ಸೇರಿದ ಜಾಗದಲ್ಲಿ ಯಾವುದೇ ಕಟ್ಟಡ ನಿರ್ಮಾಣ ಮಾಡಬೇಕಾದಲ್ಲಿ ಇತರೇ ಇಲಾಖೆಗಳ ಅನುಮತಿ ಬೇಕಿಲ್ಲ ಎಂದು ಅಲ್ಲಿನ ಅದಿಕಾರಿಗಳು ತಿಳಿಸಿದ್ದಾರೆ. ಆದರೂ ಕೂಡ ನಾವು ಕಟ್ಟಡ ನಿರ್ಮಾಣಕ್ಕೆ ಸಂಬಂಧಿಸಿದಂತೆ ಎಲ್ಲಾ ದಾಖಲೆಗಳನ್ನು ನಗರಪಾಲಿಕೆಗೆ ನೀಡಿದ್ದೇವೆ. ಆದರೂ ನೋಟಿಸ್ ನೀಡಿದ್ದಾರೆ. ಈ ಸಂಬಂಧ ಬುಧವಾರ ವಲಯ ಕಚೇರಿ ಅಭಿವೃದ್ಧಿ ಅಧಿಕಾರಿಯನ್ನು ಭೇಟಿ ಮಾಡಿದ್ದೇವೆ. ಅವರು ಆಯುಕ್ತರ ಭೇಟಿಗೆ ಸಲಹೆ ನೀಡಿದ್ದಾರೆ. ಆಯುಕ್ತರನ್ನು ಭೇಟಿ ಮಾಡಿ ದಾಖಲೆಗಳನ್ನು ಪುನಃ ನೀಡುತ್ತೇವೆ.

-ಎಚ್.ಎಸ್.ಅರುಣ್‌ಕುಮಾರ್, ಅಧ್ಯಕ್ಷರು, ಗಾಲ್ಛ್ ಕ್ಲಬ್

 

 

 

ಆಂದೋಲನ ಡೆಸ್ಕ್

Recent Posts

ರಸ್ತೆಗಳ ದಾರುಣತೆ: ಬೇಕಿದೆ ಇಲಾಖೆಗಳ ಸಮನ್ವಯತೆ

ಶ್ರೇಯಸ್ ದೇವನೂರು ಮಾದರಿ ಮೈಸೂರು ಉಳಿವಿಗೆ ಒಂದು ಸಮಗ್ರ ಸಭೆ, ದೀರ್ಘಕಾಲಿಕ ಯೋಜನೆ ಅಗತ್ಯ ಮೈಸೂರು - ಅರಮನೆಗಳ ನಗರ,…

2 hours ago

ಕೊಡಗು ‘ಜಿಲ್ಲೆಯಲ್ಲಿ ಜಲ್‌ಜೀವನ್ ಮಿಷನ್ ಯೋಜನೆ ಪ್ರಗತಿ’

ಪುನೀತ್ ಮಡಿಕೇರಿ ೪೫೭ ಕಾಮಗಾರಿಗಳ ಪೈಕಿ ೩೬೯ ಕಾಮಗಾರಿಗಳು ಪೂರ್ಣ ಮಡಿಕೇರಿ: ಕುಡಿಯುವ ನೀರಿನ ಗೃಹ ನಳ ನೀರು ಸಂಪರ್ಕ…

2 hours ago

ಪ್ರವಾಸಿಗರ ಆಕರ್ಷಣೆಗೆ ವರುಣ ಕೆರೆಗೆ ನವಸ್ಪರ್ಶ

ಕೆ.ಬಿ.ರಮೇಶನಾಯಕ ೧೫ ಕೋಟಿ ರೂಪಾಯಿ ವೆಚ್ಚದಲ್ಲಿ ಕೆರೆ ಸೌಂದರ್ಯೀಕರಣ  ಪ್ರವಾಸಿಗರ ಕಣ್ಮನ ಸೆಳೆಯಲು ಹತ್ತು ಹಲವು ಮನರಂಜನಾ ಚಟುವಟಿಕೆಗಳು ಮೈಸೂರಿನಿಂದ…

2 hours ago

ಮೈಸೂರು ಜಿಲ್ಲೆಯಲ್ಲಿ ಪಶು ಪಾಲನೆಗೆ ಪಶು ವೈದ್ಯರ ಬರ

ಹೆಚ್.ಎಸ್. ದಿನೇಶ್‌ಕುಮಾರ್ ಮೈಸೂರು ಜಿಲ್ಲೆಯಲ್ಲಿ ೨೭ ಮಂದಿ ಪಶು ವೈದ್ಯರ ಹುದ್ದೆ ಖಾಲಿ ಮೈಸೂರು: ಹಸು, ಎಮ್ಮೆ, ಕುರಿಗಳಂತಹ ಪ್ರಾಣಿಗಳು…

2 hours ago

ಸಿದ್ದಾಪುರ | ಕಾಡಾನೆ ದಾಳಿಗೆ ಓರ್ವ ಗಂಭೀರ

ಸಿದ್ದಾಪುರ : ಕಾಡಾನೆ ದಾಳಿಗೆ ಸಿಲುಕಿ ಬೆಳೆಗಾರರೊಬ್ಬರು ಗಂಭೀರವಾಗಿ ಗಾಯಗೊಂಡಿರುವ ಘಟನೆ ವಾಲ್ಕೂರು ತ್ಯಾಗತ್ತೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಭ್ಯತ್‌ಮಂಗಲ…

13 hours ago