Andolana originals

ಕೊಡಗಿನಲ್ಲಿ ಶುಂಠಿ ಬೆಳೆಯಲ್ಲಿ ಹೊಸ ರೋಗ ಪತ್ತೆ

ಪೈರಿಕ್ಯುಲೇರಿಯಾ ಎಂಬ ಶಿಲೀಂಧ್ರದಿಂದ ಹರಡುವ ರೋಗ; ಕೋಯಿಕೋಡ್‌ನ ವಿಜ್ಞಾನಿಗಳ ಸಂಶೋಧನೆಯಿಂದ ದೃಢ

ನವೀನ್ ಡಿಸೋಜ

ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಶುಂಠಿ ಬೆಳೆಯನ್ನು ಇನ್ನಿಲ್ಲದಂತೆ ಬಾಽಸಿದ್ದ ಹೊಸ ಶಿಲೀಂಧ್ರ ರೋಗವನ್ನು ಕೋಯಿಕೋಡ್‌ನ ಭಾರತೀಯ ಸಾಂಬಾರ ಬೆಳೆಗಳ ಸಂಶೋಧನಾ ಸಂಸ್ಥೆಯ ವಿಜ್ಞಾನಿಗಳು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ. ಜೊತೆಗೆ, ಇದರ ನಿಯಂತ್ರಣಕ್ಕೆ ಸಲಹೆಗಳನ್ನೂ ನೀಡಿದ್ದಾರೆ.

ಕೆಲ ತಿಂಗಳುಗಳ ಹಿಂದೆ ಶುಂಠಿ ಗಿಡದ ಎಲೆಗಳು ಹಳದಿಯಾಗಿ ಒಣಗಲು ಆರಂಭವಾಗಿತ್ತು. ಮಾತ್ರವಲ್ಲ, ಕಾಂಡದ ಒಣಗುವಿಕೆಯ ಜೊತೆಗೆ ಗೆಡ್ಡೆಗಳ ತೂಕವು ಶೇ. ೩೦ರಷ್ಟು ಕಡಿಮೆಯಾಗಿತ್ತು. ಏಕಾಏಕಿ ಇದೇ ಮೊದಲ ಬಾರಿಗೆ ಕಾಣಿಸಿಕೊಂಡ ಹೊಸ ಬಗೆಯ ಈ ರೋಗದಿಂದ ಬೆಳೆಗಾರರು ಆತಂಕದಲ್ಲಿದ್ದರು. ಇದಕ್ಕೆ ಸ್ಪಂದಿಸಿದ ಇಲ್ಲಿನ ಅಪ್ಪಂಗಳದ ಭಾರತೀಯ ಸಾಂಬಾರ ಬೆಳೆಗಳ ಸಂಶೋಧನಾ ಸಂಸ್ಥೆಯ ಪ್ರಾದೇಶಿಕ ಕಚೇರಿಯ ವಿಜ್ಞಾನಿಗಳು ರೋಗಪೀಡಿತ ಶುಂಠಿ ಸಸ್ಯಗಳ ಮಾದರಿಗಳನ್ನು ಕೋಯಿಕೋಡ್‌ನ ಪ್ರಯೋಗಾಲಯಕ್ಕೆ ಕಳುಹಿಸಿಕೊಟ್ಟಿದ್ದರು.

ಬಹಳಷ್ಟು ವೇಳೆ ಪ್ರಯೋಗಾಲಯ ತಲುಪುವ ಹೊತ್ತಿಗೆ ಸಸ್ಯವು ಒಣಗಿ ಹೋಗಿರುತ್ತಿತ್ತು. ೪-೫ ಬಾರಿ ಮಾದರಿಗಳನ್ನು ಕಳುಹಿಸಿಕೊಡಲಾಯಿತು. ಅಂತಿಮವಾಗಿ ಪ್ರಯೋಗಾಲಯಕ್ಕೆ ಮಾದರಿ ತಲುಪಿಸಿ ವಿಜ್ಞಾನಿಗಳಿಗೆ ಸಂಶೋಧನೆ ನಡೆಸಲು ಅವಕಾಶ ಲಭಿಸಿತ್ತು. ಪ್ರಯೋಗಾಲಯದಲ್ಲಿ ಇದು ಪೈರಿಕ್ಯುಲೇರಿಯಾ ಎಂಬ ಶಿಲೀಂಧ್ರದಿಂದ ಹರಡುವ ರೋಗ ಎಂಬುದು ದೃಢಪಟ್ಟಿದೆ.

ಪೈರಿಕ್ಯುಲೇರಿಯಾವು ಭತ್ತ, ಗೋಧಿ ಮತ್ತು ಬಾರ್ಲಿಯಂತಹ ಏಕದಳ ಸಸ್ಯಗಳಲ್ಲಿ ಬ್ಲಾಸ್ಟ್ ರೋಗವನ್ನು ಉಂಟುಮಾಡುತ್ತದೆ, ಶುಂಠಿಯಲ್ಲಿ ಇದು ಮೊದಲ ಬಾರಿಗೆ ವರದಿಯಾಗಿದೆ. ಈ ರೋಗ ಬಂದ ಶುಂಠಿ ಗಿಡದ ಎಲೆಗಳು ಹಳದಿಯಾಗಿ ಕಾಣಿಸಿಕೊಳ್ಳುತ್ತವೆ. ಆರಂಭಿಕ ಹಂತದಲ್ಲಿ ಕಪ್ಪು ಅಥವಾ ಆಲಿವ್-ಹಸಿರು ಬಣ್ಣದ ಚುಕ್ಕೆಗಳು ಜೊತೆಗೂಡಿರುತ್ತವೆ.

ಒಮ್ಮೆ ಈ ಸೋಂಕು ತಗುಲಿದರೆ, ಅದು ವೇಗವಾಗಿ ಹರಡುತ್ತದೆ ಮತ್ತು ಕೆಲವೇ ಗಂಟೆಗಳಲ್ಲಿ ಇಡೀ ಹೊಲವನ್ನು ಆವರಿಸುತ್ತದೆ. ಇದು ತೀವ್ರವಾದ ಬೆಳೆ ನಷ್ಟಕ್ಕೆ ಕಾರಣವಾಗುತ್ತದೆ. ರೋಗಪೀಡಿತ ಸಸ್ಯಗಳು ಗೆಡ್ಡೆಗಳ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ತಜ್ಞರು ಖಚಿತಪಡಿಸಿದ್ದರೂ, ಗೆಡ್ಡೆಗಳ ತೂಕ ಕಡಿಮೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.

ಇದು ಪೈರಿಕ್ಯುಲೇರಿಯಾ ಎಂಬ ಶಿಲೀಂಧ್ರದಿಂದ ಹರಡುವ ಕಾಯಿಲೆ ಎಂಬುದು ಸಂಶೋಧನೆಯಿಂದ ದೃಢಪಟ್ಟಿದೆ. ಒಮ್ಮೆ ಈ ಸೋಂಕು ತಗುಲಿದರೆ, ಅದು ವೇಗವಾಗಿ ಹರಡುತ್ತದೆ. ಮುಂಜಾಗ್ರತಾ ಕ್ರಮವಾಗಿ ಶುಂಠಿ ಗೆಡ್ಡೆಗಳನ್ನು ನೆಡುವ ಮೊದಲು ಔಷಧಗಳಿಂದ ಉಪಚರಿಸಿದರೆ ಮುಂದೆ ಈ ರೋಗ ಬಾರದಂತೆ ತಡೆಗಟ್ಟಬಹುದು. -ಡಾ. ಅಂಕೇಗೌಡ, ಮುಖ್ಯಸ್ಥ, ಭಾರತೀಯ ಸಾಂಬಾರ ಬೆಳೆಗಳ ಸಂಶೋಧನಾ ಸಂಸ್ಥೆ, ಅಪ್ಪಂಗಳ

ನಿಯಂತ್ರಣ ಕ್ರಮಗಳೇನು?
ಶುಂಠಿ ಬಿತ್ತನೆಗೂ ಮುನ್ನವೇ ಬೀಜದ ಗೆಡ್ಡೆಗಳನ್ನು ಔಷಧಗಳಿಂದ ಉಪಚರಿಸಿದರೆ ಮುಂದೆ ಈ ರೋಗ ಬಾರದಂತೆ ತಡೆಗಟ್ಟಬಹುದು. ಒಂದು ಲೀಟರ್ ನೀರಿಗೆ ಶಿಲೀಂಧ್ರ ನಾಶಕ ಪ್ರೊಪಿಕೊನಜೋಲ್‌ಅನ್ನು ೧ ಎಂ. ಎಲ್. ನಷ್ಟು ಅಥವಾ ಒಂದು ಲೀಟರ್ ನೀರಿಗೆ ಕಾರ್ಬೆಂಡಜಿಮ್ ಮತ್ತು ಮ್ಯಾಂಕೋಜೆಬ್ ಸಂಯೋಜನೆಯನ್ನು ೨ ಗ್ರಾಂನಷ್ಟು ಬೆರೆಸಿ ಬೀಜದ ಗೆಡ್ಡೆಗಳನ್ನು ಈ ಶಿಲೀಂಧ್ರನಾಶಕದಲ್ಲಿ ೩೦ ನಿಮಿಷಗಳ ಕಾಲ ಅದ್ದಿ ಚೆನ್ನಾಗಿ ಗಾಳಿ ಇರುವ ಸ್ಥಳದಲ್ಲಿ ಶೇಖರಿಸಬೇಕು. ರೋಗ ನಿರೋಧಕ ಕ್ರಮವಾಗಿ ನಾಟಿ ಮಾಡಿದ ೪ ತಿಂಗಳುಗಳ ಒಳಗೆ ಒಂದು ಲೀಟರ್ ನೀರಿಗೆ ಪ್ರೊಪಿಕೊನಜೋಲ್ ಅಥವಾ ಟೆಬುಕೊನಜೋಲ್ ಅನ್ನು ಒಂದು ಲೀಟರ್ ನೀರಿಗೆ ೧ ಎಂಎಲ್‌ನಷ್ಟು ಬೆರೆಸಿ ಸಿಂಪಡಿಸಬೇಕು. ಇದರಿಂದ ರೋಗ ಬಾರದಂತೆ ತಡೆಗಟ್ಟಬಹುದು.

ರೋಗಕ್ಕೆ ಕಾರಣ ಏನು?
ಸಂಶೋಧಕರ ಪ್ರಕಾರ, ಕೊಡಗಿನಲ್ಲಿರುವ ನಿರ್ದಿಷ್ಟ ಹವಾಮಾನ ಪರಿಸ್ಥಿತಿಗಳಿಂದಾಗಿಯೇ ರೋಗ ಹರಡುವಿಕೆ ಹೆಚ್ಚಾಗಿದೆ. ಆಗಸ್ಟ್ ಮತ್ತು ಸೆಪ್ಟೆಂಬರ್ ತಿಂಗಳಲ್ಲಿ ಬೆಳಿಗ್ಗೆ ಇಬ್ಬನಿ ಬೀಳಲು ಆರಂಭಿಸಿತ್ತು. ಇದು ಶಿಲೀಂಧ್ರ ಅಭಿವೃದ್ಧಿ ಹೊಂದಲು ಮತ್ತು ಹರಡಲು ಸೂಕ್ತವಾದ ವಾತಾವರಣವನ್ನು ಒದಗಿಸಿತು. ಇದು ಕೊಡಗಿನ ಮತ್ತು ಸುತ್ತಮತ್ತಲಿನ ಕೆಲವು ಪ್ರದೇಶದ ಶುಂಠಿ ಹೊಲಗಳಲ್ಲಿ ರೋಗವು ವೇಗವಾಗಿ ಹರಡಲು ಕಾರಣವಾಯಿತು ಎಂಬುದು ಸಂಶೋಧನೆಯಿಂದ ತಿಳಿದುಬಂದಿದೆ.

ಆಂದೋಲನ ಡೆಸ್ಕ್

Recent Posts

ಬಡತನ ಪ್ರಮಾಣ ಗಣನೀಯ ಇಳಿಕೆ: ನಿರ್ಮಲಾ

ಹೊಸದಿಲ್ಲಿ: ಕಳೆದ 12 ವರ್ಷಗಳಿಂದ ಪ್ರಧಾನಿ ನರೇಂದ್ರ ಮೋದಿ ನಾಯಕತ್ವದಲ್ಲಿ ಶಿಸ್ತುಬದ್ಧ ಆರ್ಥಿಕ ನಿರ್ವಹಣೆ ನಡೆಯುತ್ತಿರುವುದರಿಂದ ಭಾರತದ ಜಿಡಿಪಿ ದರ…

2 mins ago

ಕೇಂದ್ರ ಬಜೆಟ್‌ | 17.2 ಲಕ್ಷ ಕೋಟಿ ರೂ. ಸಾಲ

ಹೊಸದಿಲ್ಲಿ : ಕೇಂದ್ರ ಸರ್ಕಾರ 2026-27 ನೇ ಸಾಲಿಗೆ 17.2 ಲಕ್ಷ ಕೋಟಿ ರೂ. ಸಾಲ ಪಡೆಯಲಿದೆ ಎಂದು ಹಣಕಾಸು…

12 mins ago

ಕೇಂದ್ರ ಬಜೆಟ್‌ | ಯಾವುದು ಅಗ್ಗ, ಯಾವುದು ದುಬಾರಿ ?

ಹೊಸದಿಲ್ಲಿ : ಹಲವು ಉತ್ಪನ್ನಗಳ ಮೇಲಿನ ತೆರಿಗೆಯನ್ನು ಇಳಿಕೆ ಮಾಡಲಾಗುವುದು ಎಂದು ಕೇಂದ್ರ ಹಣಕಾಸು ಸಚಿವರಾದ ನಿರ್ಮಲಾ ಸೀತಾರಾಮನ್ ಆಯವ್ಯಯದಲ್ಲಿ…

25 mins ago

ಕರ್ನಾಟಕ ವಿರೋಧಿ ಬಜೆಟ್‌ : ಎಚ್‌ಸಿಎಂ ವ್ಯಂಗ್ಯ

ಬೆಂಗಳೂರು : ಹಣಕಾಸು ತಜ್ಞೆ ಅಲ್ಲದ ಕೇಂದ್ರದ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಡಿಸುತ್ತಿರುವ ೯ನೇ ಕಳಪೆ ಬಜೆಟ್ ಇದಾಗಿದೆ.…

32 mins ago

ಸರ್ಕಾರ ಮಕ್ಕಳಿಗೆ ವೈಚಾರಿಕ ಶಿಕ್ಷಣ ನೀಡಲಿ: ಪ್ರೊ.ಕೆ.ಎಸ್ ಭಗವಾನ್

ಮೈಸೂರು : ಸರ್ಕಾರ ಸರ್ಕಾರಿ ಶಾಲೆಗಳ ಮುಚ್ಚುವ ಬದಲು, ಉನ್ನತಿಕರಣಗೊಳಿಸಿ ವೈಚಾರಿಕ ಶಿಕ್ಷಣ ನೀಡುವಂತಗಲಿ ಎಂದು ಚಿಂತಕ ಪ್ರೊ. ಕೆ…

2 hours ago

ಮಂಗನ ಕಾಯಿಲೆಗೆ ಮತ್ತೊಂದು ಬಲಿ

ಶಿವಮೊಗ್ಗ: ಮಲೆನಾಡು ಭಾಗದಲ್ಲಿ ಮಂಗನ ಕಾಯಿಲೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಶಿವಮೊಗ್ಗದಲ್ಲಿ ಮಂಗನ ಕಾಯಿಲೆಗೆ ಮತ್ತೋರ್ವ ಬಲಿಯಾಗಿದ್ದಾನೆ. ಈ ಬಗ್ಗೆ…

3 hours ago