electric problem
ವಿದ್ಯುತ್ ಜಾಲ ಬಲವರ್ಧನೆ, ಕಂಬಗಳ ಬದಲಾವಣೆಗೆ ಕ್ರಮ; ಈ ಬಾರಿಯೂ ಕಾಡುತ್ತಿರುವ ಸಿಬ್ಬಂದಿ ಕೊರತೆ
ನವೀನ್ ಡಿಸೋಜ
ಮಡಿಕೇರಿ: ಮಳೆಗಾಲವನ್ನು ಎದುರಿಸಲು ನಾನಾ ಇಲಾಖೆಗಳು ಸಜ್ಜಾಗುತ್ತಿದ್ದು, ಸೆಸ್ಕ್ ಕೂಡ ಸಿದ್ಧತೆ ನಡೆಸಿಕೊಂಡಿದೆ. ವಿದ್ಯುತ್ ಜಾಲ ಬಲವರ್ಧನೆ, ಕಂಬಗಳ ಬದಲಾವಣೆ ಹಾಗೂ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿರುವ ಇಲಾಖೆಗೆ ಸಿಬ್ಬಂದಿ ಕೊರತೆ ಸಮಸ್ಯೆ ಈ ಬಾರಿಯೂ ಕಾಡುತ್ತಿದೆ.
ಮಳೆಗಾಲದಲ್ಲಿ ಕೊಡಗು ಜಿಲ್ಲೆ ಎದುರಿಸುವ ವಿವಿಧ ಸಮಸ್ಯೆಗಳ ಪೈಕಿ ವಿದ್ಯುತ್ ಕಡಿತ ಪ್ರಮುಖವಾದದ್ದು. ಕೆಲ ಗ್ರಾಮೀಣ ಭಾಗಗಳಲ್ಲಿ ಹೆಚ್ಚು ಮಳೆಯಿದ್ದಾಗ ವಾರ, ತಿಂಗಳುಗಟ್ಟಲೆ ಕರೆಂಟ್ ಇಲ್ಲದ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಮಳೆಗಾಲದಲ್ಲಿ ಅತಿ ಹೆಚ್ಚು ನಷ್ಟ ಅನುಭವಿಸುವ ಇಲಾಖೆಗಳಲ್ಲಿ ಸೆಸ್ಕ್ ಕೂಡ ಒಂದಾಗಿದೆ. ಹೀಗಾಗಿ ಮಳೆಗಾಲವನ್ನು ಸಮರ್ಥವಾಗಿ ಎದುರಿಸುವ ನಿಟ್ಟಿನಲ್ಲಿ ಇಲಾಖೆ ಕಾರ್ಯಪ್ರವೃತ್ತವಾಗಿದ್ದು, ಹಲವು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುತ್ತಿದೆ.
ಜಿಲ್ಲೆಯಲ್ಲಿ ವಿದ್ಯುತ್ ಜಾಲಗಳ ಬಲವರ್ಧನೆಗೆ ಕ್ರಮ ಕೈಗೊಳ್ಳಲಾಗಿದ್ದು, ಇತ್ತೀಚೆಗೆ ಸರ್ಕಾರದಿಂದ ೨೦೦ ಕೋಟಿ ರೂ. ವಿಶೇಷ ಅನುದಾನ ಬಿಡುಗಡೆಯಾಗಿದೆ. ಇದರಲ್ಲಿ ಹಳೆಯ ಲೈನ್ಗಳನ್ನು ನವೀಕರಿಸುವುದು, ಹೊಸ ಟ್ರಾನ್ಸ್ ಫಾರ್ಮರ್ ಅಳವಡಿಕೆ, ಉಪಕೇಂದ್ರಗಳ ಸ್ಥಾಪನೆ, ಗ್ರಾಮೀಣ ಪ್ರದೇಶಗಳ ಸಂಪರ್ಕ ಜಾಲದ ಸುಧಾರಣೆ, ಹೆಚ್ಚಿನ ಲೋಡ್ ನಿಗ್ರಹಿಸಲು ಹೈ-ಟೆನ್ಷನ್ಲೈನ್ಗಳನ್ನು ಹೆಚ್ಚಿಸುವುದು ಸೇರಿದೆ.
ಈ ಕಾಮಗಾರಿ ಪೈಕಿ ಈಗಾಗಲೇ ೫೦ ಕೋಟಿ ರೂ. ವೆಚ್ಚದಲ್ಲಿ ವಿದ್ಯುತ್ ವಾಹಕಗಳ ಬದಲಾವಣೆ, ಹಳೆಯ ಲೈನ್ಗಳ ನವೀಕರಣ ಪ್ರಕ್ರಿಯೆ ನಡೆದಿದ್ದು, ಅಂದಾಜು ೨೦೦ ಕಿ.ಮೀ. ವಿದ್ಯುತ್ ಜಾಲದ ಬಲವರ್ಧನೆ ಮಾಡಲಾಗಿದೆ. ವಿದ್ಯುತ್ ಪರಿವರ್ತಕಗಳ ಬದಲಾವಣೆ, ಹೊಸ ಪರಿವರ್ತಕಗಳ ಅಳವಡಿಕೆ ಕಾರ್ಯ ಇನ್ನಷ್ಟೇ ಆಗಬೇಕಿದೆ.
ಮಳೆಗಾಲದ ಸಮಸ್ಯೆಗಳನ್ನು ಎದುರಿಸುವ ಸಲುವಾಗಿ ಜಿಲ್ಲೆಗೆ ೭೫ ಗ್ಯಾಂಗ್ಮನ್ಗಳನ್ನು ಹೆಚ್ಚುವರಿಯಾಗಿ ಒದಗಿಸಿದ್ದು, ಇವರು ಈಗಾಗಲೇ ಕಾರ್ಯನಿರ್ವಹಿಸುತ್ತಿದ್ದಾರೆ. ಜಿಲ್ಲೆಯಾದ್ಯಂತ ವಿದ್ಯುತ್ ತಂತಿಗಳಿಗೆ ಸಮೀಪದಲ್ಲಿರುವ ಮರದ ಕೊಂಬೆ, ರೆಂಬೆಗಳನ್ನು ಕತ್ತರಿಸುವುದು, ಅಪಾಯಕಾರಿ ಮರಗಳ ತೆರವು ಸೇರಿದಂತೆ ನಾನಾ ಮುಂಜಾಗ್ರತಾ ಕ್ರಮಗಳನ್ನು ಇಲಾಖೆ ಕೈಗೊಂಡಿದೆ.
ಇಲಾಖೆಯಲ್ಲಿ ಶೇ.೩೫ರಷ್ಟು ಮಾತ್ರ ಖಾಯಂ ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದು, ಶೇ.೬೫ರಷ್ಟು ಹುದ್ದೆಗಳು ಭರ್ತಿಯಾಗಬೇಕಿದೆ. ಇದರೊಂದಿಗೆ ಇರುವ ೭೫ ಗ್ಯಾಂಗ್ಮನ್ಗಳಿಂದ ಕೆಲಸ ಕಷ್ಟವಾಗಲಿದ್ದು, ಇನ್ನೂ ಹೆಚ್ಚುವರಿಯಾಗಿ ೨೫ ಮಂದಿ ಗ್ಯಾಂಗ್ಮನ್ಗಳ ನೇಮಕಕ್ಕೆ ಬೇಡಿಕೆ ಸಲ್ಲಿಸಲಾಗಿದೆ.
ಕಳೆದ ಸಾಲಿನಲ್ಲಿ ೬.೫ ಕೋಟಿ ರೂ. ನಷ್ಟ
” ಕಳೆದ ಸಾಲಿನಲ್ಲಿ ಜಿಲ್ಲೆಯಲ್ಲಿ ಹೆಚ್ಚು ಮಳೆಯಾದ ಪರಿಣಾಮ ವಿದ್ಯುತ್ ಇಲಾಖೆಗೂ ಹೆಚ್ಚು ನಷ್ಟ ಸಂಭವಿಸಿತ್ತು. ಸಾವಿರಾರು ಕಂಬಗಳು ನೆಲಕ್ಕುರುಳಿದ್ದವಲ್ಲದೇ ನೂರಾರು ಟ್ರಾನ್ಸ್ ಫಾರ್ಮರ್ಗಳಿಗೂ ಹಾನಿಯಾಗಿತ್ತು. ಇದಲ್ಲದೇ ಮಳೆ, ನಾನಾ ಕಾರಣಗಳಿಂದ ಒಟ್ಟು ೯ ಮಂದಿ ವಿದ್ಯುತ್ ಅವಘಡದಲ್ಲಿ ಮೃತ ಪಟ್ಟಿದ್ದರು. ೨೪ ಜಾನುವಾರುಗಳು ಪ್ರಾಣ ಕಳೆದುಕೊಂಡಿದ್ದವು. ಒಟ್ಟಾರೆಯಾಗಿ ಇಲಾಖೆಗೆ ಅಂದಾಜು ೬.೫ ಕೋಟಿ ರೂ. ಗೂ ಹೆಚ್ಚು ನಷ್ಟವಾಗಿತ್ತು ಎಂದು ಅಂದಾಜಿಸಲಾಗಿದೆ.”
” ಜಿಲ್ಲೆಯಲ್ಲಿ ಮಳೆಗಾಲ ಎದುರಿಸಲು ಇಲಾಖೆ ಅಗತ್ಯ ಸಿದ್ಧತೆ ಮಾಡಿಕೊಂಡಿದೆ. ಜಂಗಲ್ ಕಟ್ಟಿಂಗ್, ಲೈನ್ ಸ್ಟ್ರಂಥನಿಂಗ್ ಸೇರಿದಂತೆ ಹಲವು ಕ್ರಮಗಳನ್ನು ಕೈಗೊಳ್ಳಲಾಗಿದೆ. ನಮ್ಮ ಸಿಬ್ಬಂದಿ ಜತೆ ೭೫ ಗ್ಯಾಂಗ್ಮನ್ ಗಳು ಕೆಲಸ ಮಾಡುತ್ತಿದ್ದಾರೆ. ಇನ್ನೂ ಕನಿಷ್ಠ ೨೫ ಮಂದಿ ಗ್ಯಾಂಗ್ಮೆನ್ಗಳ ಅಗತ್ಯವಿದ್ದು, ಬೇಡಿಕೆ ಸಲ್ಲಿಸಲಾಗಿದೆ.”
– ರಾಮಚಂದ್ರ, ಕಾರ್ಯಪಾಲಕ ಇಂಜಿನಿಯರ್
ಹನೂರು: ತಾಲೂಕಿನ ಲೊಕ್ಕನಹಳ್ಳಿ ಹೋಬಳಿ ವ್ಯಾಪ್ತಿಯ ಮಲೆ ಮಹದೇಶ್ವರ ಅರಣ್ಯ ಪ್ರದೇಶ ವ್ಯಾಪ್ತಿಯ ಬಳಗುಡ್ಡ ಬಿಟ್ ವ್ಯಾಪ್ತಿಯಲ್ಲಿ ಏಕಕಾಲಕ್ಕೆ ಎರಡು…
ನವದೆಹಲಿ: ನಾಗರಿಕ ವಿಮಾನಯಾನ ಸಚಿವಾಲಯವು ಇಂಡಿಗೋದ ಬಾಕಿ ಇರುವ ಎಲ್ಲಾ ಪ್ರಯಾಣಿಕರ ಮರುಪಾವತಿಗಳನ್ನು ವಿಳಂಬವಿಲ್ಲದೇ ಪಾವತಿಸಲು ಆದೇಶಿಸಿದೆ. ರದ್ದಾದ ಅಥವಾ…
ತುಮಕೂರು: ರಾಜ್ಯದಲ್ಲಿ ಸಿಎಂ ಸ್ಥಾನ ಬದಲಾವಣೆ ಚರ್ಚೆ ಬೆನ್ನಲ್ಲೇ ಮಾಜಿ ಸಚಿವ ಕೆ.ಎನ್.ರಾಜಣ್ಣ ಮಹತ್ವದ ಹೇಳಿಕೆ ಕೊಟ್ಟಿದ್ದಾರೆ. ಈ ಕುರಿತು…
ಹಾಸನ: ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ದೆಹಲಿ ಪೊಲೀಸರು ನೋಟಿಸ್ ಕೊಟ್ಟ ವಿಚಾರಕ್ಕೆ ಡಿಸಿಎಂ ಡಿ.ಕೆ.ಶಿವಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ. ಈ ಕುರಿತು…
ಹಾಸನ: ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಒಂದು ವರ್ಷದೊಳಗೆ ಎಲ್ಲ ಗ್ಯಾರಂಟಿ ಯೋಜನೆಗಳನ್ನು ಯಶಸ್ವಿಯಾಗಿ ಜಾರಿಗೊಳಿಸಿದ್ದು, ಕರ್ನಾಟಕದ ಇತಿಹಾಸದಲ್ಲಿಯೇ ಕಾಂಗ್ರೆಸ್…
ನಂಜನಗೂಡು: ಜಮೀನಿನಲ್ಲಿ ಭಾರೀ ಗಾತ್ರದ ಹೆಬ್ಬಾವು ಪತ್ತೆಯಾಗಿದ್ದು, ಅರಣ್ಯ ಇಲಾಖೆ ಸಿಬ್ಬಂದಿಗಳು ರಕ್ಷಿಸಿ ಸುರಕ್ಷಿತ ಪ್ರದೇಶಕ್ಕೆ ಬಿಟ್ಟಿದ್ದಾರೆ. ಜಿಲ್ಲೆಯ ನಂಜನಗೂಡು…