ನಂಜನಗೂಡು: ಇಲ್ಲಿನ ನಗರಸಭೆಯ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಗಳ ಚುನಾವಣೆ ಸೆ.3ರಂದು ನಡೆಯಲಿದೆ.
ಪರಿಶಿಷ್ಟ ಜಾತಿಗೆ ಅಧ್ಯಕ್ಷ, ಸಾಮಾನ್ಯ ಮಹಿಳೆಗೆ ಉಪಾಧ್ಯಕ್ಷ ಗಾದಿ ಮೀಸಲಾಗಿದ್ದು, ಮೇಲ್ನೋಟಕ್ಕೆ ಬಹುಮತ ಹೊಂದಿರುವ ಬಿಜೆಪಿ- ಜಾತ್ಯತೀತ ಜನತಾದಳ ಮೈತ್ರಿಕೂಟಕ್ಕೆ ನಗರಸಭೆಯ ಅಧಿಕಾರ ದಕ್ಕಿತೆ ಎಂಬ ಎಂಬ ಕುತೂಹಲ ನಗರದಾದ್ಯಂತ ಕಾಣಿಸಿಕೊಂಡಿದೆ.
31 ಸದಸ್ಯರ ಬಲದ ನಂಜನಗೂಡು ನಗರಸಭೆಗೆ 2019ರಲ್ಲಿ ಚುನಾವಣೆ ನಡೆದಿತ್ತು. ಬಿಜೆಪಿ 15, ಕಾಂಗ್ರೆಸ್ 10 ಮತ್ತು ಜಾ.ದಳ 3 ಹಾಗೂ ಮೂವರು ಪಕ್ಷೇತರ ಸದಸ್ಯರು ಗೆಲುವು ಸಾಧಿಸಿದ್ದರು. ಯಾವುದೇ ಪಕ್ಷಕ್ಕೂ ಬಹುಮತ ಇರದ ಕಾರಣ ಅತಂತ್ರವಾಗಿತ್ತು. ಅಲ್ಲದೆ, ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಗಳ ಮೀಸಲಾತಿ ಸಂಬಂಧ ವ್ಯಾಜ್ಯ ನ್ಯಾಯಾಲಯದ ಮೆಟ್ಟಿಲೇರಿತ್ತು. ಚುನಾವಣೆ
ನಡೆದ ಒಂದು ವರ್ಷದ ನಂತರ ಉಭಯ ಸ್ಥಾನಗಳಿಗೂ ಚುನಾವಣೆ ನಡೆಸಲು ಅನುಮತಿ ದೊರೆತಿತ್ತು.
ಆಗ ಬಿಜೆಪಿಯ ಶಾಸಕರಾಗಿದ್ದ ಹರ್ಷವರ್ಧನ್ ಹಾಗೂ ಲೋಕಸಭಾ ಸದಸ್ಯರಾಗಿದ್ದ ವಿ.ಶ್ರೀನಿವಾಸ್ ಪ್ರಸಾದರ ಬೆಂಬಲದೊಂದಿಗೆ ನಗರಸಭೆಯಲ್ಲಿ ಅಧಿಕಾರ ಹಿಡಿಯಲು ಬಿಜೆಪಿ ಶಕ್ತವಾಗಿತ್ತು.
ಈಗ ಶಾಸಕ ದರ್ಶನ್ ಧ್ರುವನಾರಾಯಣ, ಸಂಸದ ಸುನಿಲ್ ಬೋಸ್ ಇಬ್ಬರೂ ಕಾಂಗ್ರೆಸ್ ಪಕ್ಷದವರಾಗಿದ್ದಾರೆ. ಹಾಗಾಗಿ ಕಾಂಗ್ರೆಸ್ ಬಲ 12 ಕೇರಿದ್ದು, ಬಿಜೆಪಿ 15 ಸದಸ್ಯರನ್ನು ಹೊಂದಿದೆ.
ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿರುವ ಬಿಜೆಪಿ – ಜಾ.ದಳ ಮೈತ್ರಿಯು ನಗರಸಭೆಯಲ್ಲೂ ಮುಂದುವರಿದರೆ, ಜಾದಳದ ಮೂವರು ಸದಸ್ಯರ ಬೆಂಬಲದೊಂದಿಗೆ ಬಿಜೆಪಿ ಬಲ 18ಕ್ಕೆ ಹೆಚ್ಚಳವಾಗುತ್ತದೆ. ಅದರಿಂದ ಬಿಜೆಪಿ ಅಧಿಕಾರ ಉಳಿಸಿಕೊಳ್ಳುವ ಸಾಧ್ಯತೆ ಇದೆ. ಇದು ಮೇಲ್ನೋಟದ ಚಿತ್ರಣವಾಗಿದೆ. ಆದರೆ ಇಲ್ಲಿನ ಒಳ ಹೂರಣ ಮಾತ್ರ ಹಾಗಿಲ್ಲ ಎಂಬುದು ಬಿಜೆಪಿ ನಾಯಕರ ಚಿಂತೆಗೆ ಕಾರಣವಾಗಿದೆ.
ಕಳೆದ ವಿಧಾನ ಪರಿಷತ್ ಮತ್ತು ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಮೈತ್ರಿ ಆಗಿದ್ದರೂ ಬಿಜೆಪಿಯು, ಜಾ.ದಳದ ನಗರಸಭಾ ಸದಸ್ಯರನ್ನು ಕಡೆಗಣಿಸಿತ್ತು ಎಂಬ ಅಸಮಾಧಾನ ಜಾ.ದಳದಲ್ಲಿ ಬಲವಾಗಿ ಬೇರೂರಿದೆ.
ಇನ್ನು ಪಕ್ಷೇತರ ಸದಸ್ಯರು ಹಿಂದಿನ ಅವಧಿಯಲ್ಲಿ ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬಂತಾಗಿದ್ದು, ಈ ಬಾರಿ ಅವರು ರಾಜ್ಯದಲ್ಲಿ ಅಧಿಕಾರದಲ್ಲಿರುವ ಕಾಂಗ್ರೆಸ್ ಬೆಂಬಲಕ್ಕೆ ಧಾವಿಸಿದರೆ 10 + 3+ 2 = ಹದಿನೈದಾಗುತ್ತದೆ. ಬಿಜೆಪಿ ಸದಸ್ಯರ ಸಂಖ್ಯೆಯೂ ಅಷ್ಟೇ ಆಗಿದೆ. ಹಾಗಾಗಿ ಜಾ.ದಳ ಸದಸ್ಯರೇ ನಿರ್ಣಾಯಕರಾಗುತ್ತಾರೆ.
ಒಡೆದ ಮನೆಯಂತಾಗಿರುವ ಬಿಜೆಪಿ: ತಾಲ್ಲೂಕಿನಲ್ಲಿ ಬಿಜೆಪಿ ಒಡೆದ ಮನೆಯಂತಾಗಿದ್ದು, ಮುನಿಸಿಕೊಂಡಿರುವ ಸ್ವಪಕ್ಷೀಯರನ್ನು ಸಮಾಧಾಪಡಿಸುವ ಪ್ರಯತ್ನ ನಡೆದಿಲ್ಲದಿರುವುದು ಆತಂಕಕ್ಕೆ ಕಾರಣವಾಗಿದೆ. ರಾಜ್ಯದಲ್ಲಿ ಆಡಳಿತ ಪಕ್ಷವಾಗಿರುವ ಕಾಂಗ್ರೆಸ್ ಈಗಾಗಲೇ ಪಕ್ಷೇತರರು, ಬಿಜೆಪಿ ಮತ್ತು ಜಾ.ದಳ ಸದಸ್ಯರ ಸಂಪರ್ಕ ಸಾಧಿಸಿದೆ ಎನ್ನಲಾಗಿದೆ. ಆದರೆ, ಪಾಳೆಯದಲ್ಲಿ ಇಂತಹ ಯಾವುದೇ ಬೆಳವಣಿಗೆ ಈವರೆಗೂ ನಡೆದಿಲ್ಲ ಎಂದು ಹೇಳಲಾಗುತ್ತಿದೆ.
ಬಿಜೆಪಿಯಲ್ಲಿ ಹದಿನಾಲ್ಕು ತಿಂಗಳುಗಳ ಅಲ್ಪ ಕಾಲದ ಅಧ್ಯಕ್ಷಗಾದಿಗಾಗಿ ಮೀಸಲಾತಿಗೆ ಅರ್ಹರಾಗಿರುವ ಮಹೇಶ ಅತ್ತಿಖಾನೆ, ಗಾಯತ್ರಿ ಮುರುಗೇಶ, ಮೀನಾಕ್ಷಿ ನಾಗರಾಜ್ ವಿಜಯಲಕ್ಷ್ಮಿ ಆಕಾಂಕ್ಷಿಗಳಾಗಿದ್ದು, ಸನ್ನಿವೇಶವನ್ನಾಧರಿಸಿ ಚುನಾವಣೆಯನ್ನು ಎದುರಿಸಬಲ್ಲವರಿಗಾಗಿ ಪಕ್ಷ ಹುಡುಕಾಟ ನಡೆಸಿದೆ.
ಬಿಜೆಪಿ ಎಲ್ಲರ ಮುನಿಸನ್ನು ಈ ಸಮಯದಲ್ಲಿ ತಣಿಸಲು ಸಾಧ್ಯವಾದರೆ ಈಗಲೂ ಅದು ಅಧಿಕಾರ ಉಳಿಸಿಕೊಳ್ಳಬಹುದಾಗಿದೆ. ಆದರೆ, ಅಧ್ಯಕ್ಷರ ಸ್ಥಾನದ ಅಭ್ಯರ್ಥಿಯೇ ಉಪಾಧ್ಯಕ್ಷರ ಚುನಾವಣೆಯ ಭಾರವನ್ನೂ ಹೊರಬೇಕಾಗಿರುವುದು, ಅಧಿಕಾರದ ಅವಧಿಯೂ ಅಲ್ಪ ಸಮಯದ್ದಾಗಿರುವುದರಿಂದ ಹಿಂದೆ ಮುಂದೆ ನೋಡುವಂತಾಗಿದೆ. ಇಂತಹ ಸನ್ನಿವೇಶದಲ್ಲಿ ಮೇಲ್ನೋಟಕ್ಕೆ ಬಹುಮತ ಇರುವಂತೆ ಕಾಣುತ್ತಿರುವ ಬಿಜೆಪಿ- ಜಾ.ದಳ ಮೈತ್ರಿ ಅಧಿಕಾರದ ಗದ್ದಿಗೆ ಉಳಿಸಿಕೊಳ್ಳುವುದೇ ಅಥವಾ ಕಾಂಗ್ರೆಸ್ ಬೀಸುವ ಬಲೆಗೆ ಸಿಲುಕಿ ಅಧಿಕಾರ ಕಳೆದುಕೊಳ್ಳಲಿದೆಯೇ ಎಂಬುದು ಖಚಿತವಾಗಲು ಇನ್ನು ಐದು ದಿನಗಳು ಬಾಕಿ ಉಳಿದಿವೆ.
• ಸೆ.3ರಂದು ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಗಳ
ಚುನಾವಣೆ
• 14 ತಿಂಗಳ ಅಧಿಕಾರ; ಆಕಾಂಕ್ಷಿಗಳಲ್ಲೇ
ಹಿಂಜರಿಕೆ
ಬಿಜೆಪಿ ವಿರುದ್ಧ ಜಾ.ದಳ ಸದಸ್ಯರ ಅಸಮಾಧಾನ
ಬಿಜೆಪಿ ಜಿಲ್ಲಾಧ್ಯಕ್ಷ ಎಲ್.ಆರ್.ಮಹದೇವಸ್ವಾಮಿ ಅವರು ಗುರುವಾರ ಮೈಸೂರಿನಲ್ಲಿ ಸಭೆ ನಡೆಸಿ ಪಕ್ಷದ ನಗರಸಭಾ ಸದಸ್ಯರು, ಮುಖಂಡರ ಅಭಿಪ್ರಾಯಗಳನ್ನು ಪಡೆದುಕೊಂಡಿದ್ದಾರೆ. ಪಕ್ಷದಿಂದ ಆಯ್ಕೆಯಾಗಿರುವ ಎಲ್ಲ ಹದಿನೈದು ಸದಸ್ಯರಿಗೂ ವಿಪ್ ಜಾರಿ ಮಾಡಲಾಗುತ್ತದೆ. ನಂಜನಗೂಡಲ್ಲೂ ಮೈತ್ರಿ ಮುಂದುವರಿಕೆಗಾಗಿ ಜಾ.ದಳ ಜಿಲ್ಲಾಧ್ಯಕ್ಷ ಎನ್.ನರಸಿಂಹಸ್ವಾಮಿ ಅವರನ್ನು ಭೇಟಿ ಮಾಡಿ ಚರ್ಚಿಸಲಾಗುವುದು. ಶುಕ್ರವಾರ ಸಂಜೆ ಅಥವಾ ಶನಿವಾರ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಗಳ ಹುರಿಯಾಳುಗಳನ್ನು ಜಂಟಿಯಾಗಿ ಘೋಷಿಸಲಾಗುವುದು.
ಬಿ.ಹರ್ಹವರ್ಧನ್, ಮಾಜಿ ಶಾಸಕರು.
ಭಾನುವಾರ ಅಥವಾ ಸೋಮವಾರ ಕಂಗ್ರೆಸ್ ಪಕ್ಷದ ನಗರಸಭಾ ಸದಸ್ಯರು ಹಾಗೂ ಮುಖಂಡರ ಸಭೆ ಕರೆದು ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನದ ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ನಿರ್ಧರಿಸಲಾಗಿದೆ .
-ಕಳಲೆ ಕೇಶವಮೂರ್ತಿ, ಮಾಜಿ ಶಾಸಕರು, ಕಾಂಗ್ರೆಸ್ ಪಕ್ಷದ ಮುಖಂಡರು.
ಕಾಂಗ್ರೆಸ್ ಪಕ್ಷದಿಂದ ಶ್ರೀಕಂಠ ಹಾಗೂ ಎಸ್.ಪಿ.ಮಹೇಶ ಅಧ್ಯಕ್ಷ ಗಾದಿಗೆ ಪ್ರಬಲ ಹುರಿಯಾಳುಗಳಾಗಿದ್ದಾರೆ. ಅವರಲ್ಲಿ ಒಬ್ಬರು ಆಯ್ಕೆಯಾಗಲಿದ್ದಾರೆ. ಸ್ಥಳೀಯವಾಗಿ ಜಾ.ದಳದ ಸದಸ್ಯರು ನಮ್ಮ ಪಕ್ಷವನ್ನು ಬೆಂಬಲಿಸುವ ವಿಶ್ವಾಸವಿದೆ. ಅವರೊಂದಿಗೆ ಪಕ್ಷೇತರರ ಬೆಂಬಲದೊಂದಿಗೆ ಈ ಬಾರಿ ನಮ್ಮ ಅಭ್ಯರ್ಥಿ ನಗರಸಭೆಗೆ ಅಧ್ಯಕ್ಷರಾಗಲಿದ್ದಾರೆ.
-ದರ್ಶನ್ ಧ್ರುವನಾರಾಯಣ, ಶಾಸಕರು
ಬೆಳಗಾವಿ: ರಾಜ್ಯದಲ್ಲಿ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ 59,772 ಶಿಕ್ಷಕರ ಹುದ್ದೆಗಳು ಖಾಲಿ ಇವೆ ಎಂದು ಶಾಲಾ ಶಿಕ್ಷಣ ಮತ್ತು…
ಬೆಂಗಳೂರು: ಚಿತ್ರದುರ್ಗ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜಾಮೀನು ಪಡೆದಿರುವ ನಟ ದರ್ಶನ್ ಮೈಸೂರಿಗೆ ನಾಲ್ಕು ವಾರಗಳ ಕಾಲ ತೆರಳಲು ಅನುಮತಿ…
ಬೆಳಗಾವಿ: ಸಚಿವೆ ಲಕ್ಷ್ಮಿ ಹೆಬ್ಬಾಳಕರ್ ಅವರಿಗೆ ಅಶ್ಲೀಲ ಪದ ಬಳಸಿ ನಿಂದಿಸಿರುವ ಆರೋಪದ ಮೇಲೆ ಬಂಧಿತಾರಾಗಿರುವ ಬಿಜೆಪಿ ಎಂಎಲ್ಸಿ ಸಿ.ಟಿ…
ಮೈಸೂರು: ನಗರದ ಅಲ್ ಅನ್ಸಾರ್ ಆಸ್ಪತ್ರೆಯ ವೈದ್ಯರೊಬ್ಬರ ಮೇಲೆ ದುಷ್ಕರ್ಮಿಗಳು ಬುಧವಾರ ತಡರಾತ್ರಿ ಹಲ್ಲೆ ನಡೆಸಿದ ಘಟನೆ ನಡೆದಿದೆ. ಡಾ.…
' ಗ್ರೇಸ್' ಪೋಷಕರ ದಿನಾಚರಣೆಯಲ್ಲಿ ಮೈಜಿಪಸಂ ಅಧ್ಯಕ್ಷ ಕೆ.ದೀಪಕ್ ಅಭಿಮತ ಮೈಸೂರು : ಹಣ ಆಸ್ತಿಗೆ ಹೆತ್ತವರ ಉಸಿರು ತೆಗೆಯುವ…
ಕನ್ನಡ ಸಾಹಿತ್ಯ ಸಮ್ಮೇಳನ: ಪ್ರಮುಖ ರಸ್ತೆಗಳಿಗೆ ವಿದ್ಯುತ್ ದೀಪಾಲಂಕಾರ ಮಂಡ್ಯ:ಸಕ್ಕರೆ ನಗರಿ ಮಂಡ್ಯದಲ್ಲಿ ಡಿ.20 ರಿಂದ ಮೂರು ದಿನಗಳ ಕಾಲ…