Andolana originals

ಮೈವಿವಿ: ಖಾಯಂ ಹುದ್ದೆಗಿಲ್ಲ ಗ್ಯಾರಂಟಿ

ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿರುವ ಅತಿಥಿ ಉಪನ್ಯಾಸಕರು 

ಕೆ. ಬಿ. ರಮೇಶನಾಯಕ

ಮೈಸೂರು: ಮೈಸೂರು ವಿಶ್ವವಿದ್ಯಾನಿಲಯದಲ್ಲಿ ದಶಕಗಳಿಂದ ಬೋಧಕರ ನೇಮಕಾತಿ ಪ್ರಕ್ರಿಯೆ ನಡೆಯದೆ ಖಾಯಂ ಬೋಧಕರ ಹುದ್ದೆಗಳಿಗಿಂತ ಖಾಲಿ ಹುದ್ದೆಗಳ ಸಂಖ್ಯೆಯೇ ಜಾಸ್ತಿಯಾಗಿದೆ.

ಏಪ್ರಿಲ್-ಮೇನಲ್ಲಿ ಮತ್ತಷ್ಟು ಅಧ್ಯಾಪಕರು ನಿವೃತ್ತಿ ಆಗುತ್ತಾರೆ. ಇದರಿಂದ ಖಾಯಂ ಅಧ್ಯಾಪಕರ ಸಂಖ್ಯೆ ೨೦೦ಕ್ಕಿಂತ ಕಡಿಮೆಯಾಗಲಿದೆ. ಇದು ವಿವಿ ಆಡಳಿತ ವಲಯದಲ್ಲಿ ಚಿಂತೆಗೀಡು ಮಾಡಿಸಿದೆ. ಒಂದು ದಶಕದಿಂದ ಬೋಧಕ -ಬೋಧಕೇತರ ಸಿಬ್ಬಂದಿ ನೇಮಕಾತಿಗೆ ರಾಜ್ಯ ಸರ್ಕಾರ ಅನುಮೋದನೆ ನೀಡದ ಕಾರಣ ಅತಿಥಿ ಉಪನ್ಯಾಸಕರನ್ನೇ ನೇಮಿಸಿಕೊಂಡು ಬರುತ್ತಿರುವ ಪರಿಣಾಮ ಮುಂದೆ ವಿವಿಯ ಎಲ್ಲ ವಿಭಾಗಗಳಲ್ಲೂ ಖಾಯಂ ಬೋಧಕರಿಗಿಂತ ಅತಿಥಿ ಉಪನ್ಯಾಸಕರೇ ಹೆಚ್ಚಾಗುವ ವಾತಾವರಣ ನಿರ್ಮಾಣವಾಗಿದೆ.

ಇದರಿಂದಾಗಿ ತೀವ್ರ ಒತ್ತಡಕ್ಕೆ ಸಿಲುಕಿರುವ ಮೈಸೂರು ವಿವಿಯು ರಾಜ್ಯ ಸರ್ಕಾರಕ್ಕೆ ಪತ್ರದ ಮೇಲೆ ಪತ್ರ ಬರೆಯುತ್ತಿದ್ದರೂ ಸಕಾರಾತ್ಮಕವಾದ ಸ್ಪಂದನೆ ದೊರೆಯದೆ ಇರುವುದು ಕುಲಪತಿಗಳ ನಿದ್ದೆಗೆಡಿಸಿದೆ. ಮೈಸೂರು ವಿವಿಗೆ ದಶಕಗಳ ಹಿಂದೆ ಕೇಂದ್ರ ಸರ್ಕಾರ, ವಿಶ್ವವಿದ್ಯಾನಿಲಯ ಧನಸಹಾಯ ಆಯೋಗ ಅನುದಾನ ದೊರೆಯುತ್ತಿತ್ತು. ಜತೆಗೆ ರಾಜ್ಯ ಸರ್ಕಾರ ಕೂಡ ವಿಶೇಷ ಒತ್ತು ನೀಡುತ್ತಲೇ ಬಂದಿತ್ತು. ಅದರಲ್ಲೂ ಖಾಯಂ ಬೋಧಕರಿಗೆ ಯುಜಿಸಿ ವೇತನ ದೊರೆಯುತ್ತಿತ್ತು. ಇದಲ್ಲದೆ ನುರಿತ ಅಧ್ಯಾಪಕರನ್ನು ಹೊಂದಿದ್ದರಿಂದ ಸಂಶೋಧನೆಗೆ ಕೋಟ್ಯಂತರ ರೂಪಾಯಿ ಬಿಡುಗಡೆಯಾಗುತ್ತಿತ್ತು.

ವಿವಿಗೆ ೬೬೪ ಹುದ್ದೆಗಳನ್ನು ಸೃಜಿಸಲಾಗಿದ್ದು, ಹಾಲಿ ೨೩೮ ಹುದ್ದೆಗಳು ಮಾತ್ರ ಭರ್ತಿಯಾಗಿವೆ; ೪೨೬ ಹುದ್ದೆಗಳು ಖಾಲಿ ಇವೆ. ಹೀಗಾಗಿ, ಪಿಜಿಯಲ್ಲಿ ೩೭೫, ಯುಜಿಯಲ್ಲಿ ೪೨೫ ಮಂದಿ ಸೇರಿದಂತೆ ೮೦೦ ಮಂದಿ ಯನ್ನು ಅತಿಥಿ ಉಪನ್ಯಾಸಕರನ್ನು ನೇಮಕ ಮಾಡಿಕೊಂಡು ಕಾರ್ಯ ನಿರ್ವಹಿಸುವಂತಾಗಿದೆ. ಮತ್ತೊಂದು ಆತಂಕದ ಸಂಗತಿ ಎಂದರೆ ೮೧ ಅಧ್ಯಾಪಕ ಹುದ್ದೆಗಳಲ್ಲಿ ಕೇವಲ ಐದು ಸ್ಥಾನಗಳು ಮಾತ್ರ ಉಳಿದುಕೊಂಡಿದ್ದು, ಇದರಿಂದಾಗಿ ನಿರೀಕ್ಷಿತ ಮಟ್ಟದಲ್ಲಿ ಪಿಎಚ್. ಡಿ. ಪದವಿ ಬಯಸುವ ವಿದ್ಯಾರ್ಥಿಗಳಿಗೆ ಗೈಡ್‌ಗಳ ಕೊರತೆ ದೊಡ್ಡ ಮಟ್ಟದಲ್ಲಿ ಕಾಡಲು ಶುರುವಾಗಿದೆ.

ಜಿಲ್ಲೆಗೊಂದು ವಿವಿ ಪರಿಣಾಮ: ಮೈಸೂರು ವಿವಿಯನ್ನು ವಿಭಜಿಸಿ ಅಕ್ಕಪಕ್ಕದ ಜಿಲ್ಲೆಗಳಾದ ಮಂಡ್ಯ, ಹಾಸನ, ಚಾಮರಾಜನಗರ ಹಾಗೂ ಕೊಡಗು ಜಿಲ್ಲೆಗಳಲ್ಲಿ ಪ್ರತ್ಯೇಕ ವಿವಿ ಸ್ಥಾಪನೆ ಮಾಡಲಾಗಿದೆ. ಇದರಿಂದ ಮೈಸೂರು ವಿವಿ ಕಿರಿದಾಯಿತು. ಪರಿಣಾಮ ೨೦೨೩-೨೪ರ ಶೈಕ್ಷಣಿಕ ಸಾಲಿನಲ್ಲಿ ಸ್ನಾತಕ ಹಾಗೂ ಸ್ನಾತಕೋತ್ತರ ಪದವಿ ಪ್ರವೇಶದಲ್ಲಿ ಕುಸಿತ ಕಂಡು ಬಂತು. ಪದವಿ ಹಾಗೂ ಪಿಜಿ ಎರಡೂ ಸೇರಿ ಸುಮಾರು ೧೦ ಸಾವಿರ ವಿದ್ಯಾರ್ಥಿಗಳ ಪ್ರವೇಶ ಕಡಿಮೆಯಾಯಿತು.

ಈ ವರ್ಷ ಕೇವಲ ಸ್ನಾತಕೋತ್ತರ ಪದವಿಯಲ್ಲೇ ೮ ಸಾವಿರ ವಿದ್ಯಾರ್ಥಿಗಳ ಕುಸಿತ ಕಂಡು ಬಂದಿದೆ. ಕಲಾ ವಿಭಾಗದ ಹಲವು ಕೋರ್ಸ್‌ಗಳಿಗೆ ವಿದ್ಯಾರ್ಥಿಗಳು ಪ್ರವೇಶ ಪಡೆಯಲು ಹಿಂದೇಟು ಹಾಕಿದ್ದಾರೆ. ಕೆಲವೊಂದು ಕೋರ್ಸ್‌ಗಳಿಗೆ ಇಬ್ಬರು, ಮೂವರು ಮಾತ್ರ ಪ್ರವೇಶ ಪಡೆದಿದ್ದಾರೆ. ಪ್ರವೇಶ ಕುಸಿತ ವಿವಿಯ ಆಂತರಿಕ ಸಂಪನ್ಮೂಲಕ್ಕೆ ಕೊಡಲಿ ಪೆಟ್ಟು ನೀಡಿದೆ. ಮೈಸೂರು ವಿವಿ ವ್ಯಾಪ್ತಿಯಲ್ಲಿ ಈ ಮೊದಲು ೨೩೨ ಕಾಲೇಜುಗಳಿದ್ದವು. ಆದರೀಗ ಜಿಲ್ಲೆಗೊಂದು ವಿವಿಯಿಂದ ಪರಿಣಾಮ ಮೈಸೂರು ವಿವಿ ವ್ಯಾಪ್ತಿ ಯಲ್ಲಿ ೧೧೧ ಕಾಲೇಜುಗಳು ಮಾತ್ರ ಇವೆ.

ಮೈಸೂರು ವಿವಿಯಲ್ಲಿ ೪೦೦(ಶೇ. ೭೬)ಕ್ಕೂ ಹೆಚ್ಚು ಬೋಧಕ ಹುದ್ದೆಗಳು ಖಾಲಿ ಇವೆ. ಬ್ಯಾಕ್‌ಲಾಗ್ ಹುದ್ದೆ ಗಳನ್ನಾದರೂ ಭರ್ತಿ ಮಾಡುವಂತೆ ಸರ್ಕಾರಕ್ಕೆ ಮನವಿ ಮಾಡಲಾಗುತ್ತಿದೆ. ಆದರೆ, ಅನುಮತಿ ಸಿಕ್ಕಿಲ್ಲ. ಸದ್ಯಕ್ಕೆ ವಿವಿ ತಾತ್ಕಾಲಿಕ ಬೋಧಕರಿಂದ ಉತ್ತಮವಾಗಿ ನಡೆ ಯುತ್ತಿದೆ. ಸಂಶೋಧನೆ ಹೆಚ್ಚಾಗಬೇಕಾದರೆ ಖಾಯಂ ಬೋಧಕರ ಅಗತ್ಯವಿದೆ. –ಪ್ರೊ. ಎನ್. ಕೆ. ಲೋಕನಾಥ್, ವಿವಿ ಕುಲಪತಿ

ಆಂದೋಲನ ಡೆಸ್ಕ್

Recent Posts

ರಾಕಿಂಗ್‌ ಸ್ಟಾರ್‌ ಯಶ್‌ ನಟನೆಯ ಟಾಕ್ಸಿಕ್‌ ಸಿನಿಮಾ ಬಿಡುಗಡೆ ದಿನಾಂಕ ಮುಂದೂಡಿಕೆ

ರಾಕಿಂಗ್‌ ಸ್ಟಾರ್‌ ಯಶ್‌ ಅಭಿನಯದ ಬಿಗ್‌ ಬಜೆಟ್‌ ಸಿನಿಮಾ ಟಾಕ್ಸಿಕ್‌ ಇರಾನ್-‌ ಇಸ್ರೇಲ್‌ ಯುದ್ಧದ ಕಾರಣದಿಂದಾಗಿ ಮುಂದೂಡಲ್ಪಟ್ಟಿದೆ. ಮಾರ್ಚ್.‌19ರಂದು ಬಿಡುಗಡೆಯಾಗಬೇಕಿದ್ದ…

9 mins ago

ಬೆಟ್ಟಳ್ಳಿ ಮಾರಮ್ಮ ಜಾತ್ರಾ ವಿಶೇಷ: ಸಾವಿರಾರು ಭಕ್ತರ ಸಮ್ಮುಖದಲ್ಲಿ ನಡೆದ ಕಂಬ ಪ್ರತಿಷ್ಠಾಪನೆ

ಮಹಾದೇಶ್‌ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು ಹನೂರು: ಪಟ್ಟಣದ ಗ್ರಾಮದೇವತೆ ಶ್ರೀ ಬೆಟ್ಟಳ್ಳಿ ಮಾರಮ್ಮ ದೇವಸ್ಥಾನದ ಜಾತ್ರಾ ಮಹೋತ್ಸವ…

1 hour ago

ಹನೂರು| ಚಂಗಡಿ ಗ್ರಾಮದ ಸುತ್ತಮುತ್ತ ಪ್ರತಿನಿತ್ಯ ಹುಲಿ ಓಡಾಟ: ಆತಂಕದಲ್ಲಿ ಸ್ಥಳೀಯರು

ಮಹಾದೇಶ್‌ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು ಹನೂರು: ತಾಲೂಕಿನ ಮಲೆ ಮಹದೇಶ್ವರ ವನ್ಯಜೀವಿಧಾಮದ ಚಂಗಡಿ ಗ್ರಾಮದ ಸಮೀಪ ಪ್ರತಿನಿತ್ಯ…

1 hour ago

ಓದುಗರ ಪತ್ರ: ಹೆಚ್ಚುವರಿ ಬಸ್ ಸೌಲಭ್ಯ ಕಲ್ಪಿಸಿ

ಮೈಸೂರಿನ ಊಟಿ ರಸ್ತೆಯಲ್ಲಿರುವ ಜೆಎಸ್‌ಎಸ್ ಕಾಲೇಜು ಬಸ್ ನಿಲ್ದಾಣದ ಮೂಲಕ ನಂಜನಗೂಡು ಹಾಗೂ ಚಾಮರಾಜನಗರ  ಸಂಜೆಯ ವೇಳೆ ಸಾಕಷ್ಟು ಬಸ್‌ಗಳಿಲ್ಲದೆ…

1 hour ago

ಓದುಗರ ಪತ್ರ: ಸೇಡು.. ಕೇಡು !

ಸೇಡು.. ಕೇಡು ! ಯುದ್ಧವೆಂದರೆ ಏನಿದೆ ಅದರಲ್ಲಿ.. ದೇಶ-ದೇಶಗಳ ನಡುವೆ ಬರೀ ದ್ವೇಷ, ಸೇಡು ಭರಿಸಲಾಗದ ಕೇಡು ಗೆದ್ದವರ ಹಾಡು…

1 hour ago

ಓದುಗರ ಪತ್ರ: ನಿರುದ್ಯೋಗ ಸಮಸ್ಯೆ ನಿವಾರಿಸಿ

ದೇಶದಲ್ಲಿ ಸಾವಿರಾರು ಯುವಕರು ವಿದ್ಯಾವಂತರಾಗಿದ್ದರೂ ಉದ್ಯೋಗಾವಕಾಶಗಳ ಕೊರತೆಯಿಂದ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಇತ್ತೀಚಿನ ಅಂಕಿ ಅಂಶಗಳ ಪ್ರಕಾರ ಕೇಂದ್ರ ಹಾಗೂ ರಾಜ್ಯ…

1 hour ago