Andolana originals

‘ದಯವಿಟ್ಟು ಕಾಡಿನಿಂದ ನಾಡಿಗೆ ಸ್ಥಳಾಂತರಿಸಿ, ಪುನರ್ವಸತಿ ಕಲ್ಪಿಸಿ’; ಡಿಸಿ ಮುಂದೆ ಮೆಂದಾರೆ ಗಿರಿಜನರ ಅಳಲು

ಮಲೆ ಮಹದೇಶ್ವರ ಬೆಟ್ಟಗಳ ನಡುವಿನ ದುರ್ಗಮ ಕಾಡಿನೊಳಗೆ ಇರುವ ಮೆಂದಾರೆ ಗ್ರಾಮದಲ್ಲಿ ಮೂಲ ಸೌಕರ್ಯಗಳಿಲ್ಲ. ಜೀವನ ನಡೆಸುವುದು ದುಸ್ತರವಾಗಿದೆ. ಆದ್ದರಿಂದ ನಮ್ಮನ್ನು ಬೇರೆಡೆಗೆ ಸ್ಥಳಾಂತರಿಸಿ ಅಗತ್ಯ ಸೌಕರ್ಯಗಳನ್ನು ಕಲ್ಪಿಸಿಕೊಡಬೇಕು ಎಂದು ಮೆಂದಾರೆ ಪೋಡಿನ ಗಿರಿಜನರು ಜಿಲ್ಲಾಧಿಕಾರಿ ಸಿ.ಟಿ.ಶಿಲ್ಪಾ ನಾಗ್ ಅವರಲ್ಲಿ ಮನವಿ ಮಾಡಿಕೊಂಡರು.

ಡಿಸಿ, ಎಸ್ಟಿ ಪದ್ಮಿನಿ ಸಾಹು, ಜಿಲ್ಲಾ ಪಂಚಾಯಿತಿ ಸಿಇಒ ಆನಂದ್ ಪ್ರಕಾಶ್ ಮೀನಾ, ಜಿಲ್ಲಾ ಆರೋಗ್ಯಾಧಿಕಾರಿ ಡಾ. ಚಿದಂಬರ, ಡಿವೈಎಸ್ಪಿ ಧರ್ಮೇಂದ್ರ ಹಾಗೂ ಇತರರೊಡನೆ ಮಲೆಮಹದೇಶ್ವರ ಬೆಟ್ಟದಿಂದ ಎಂಟು ಕಿ.ಮೀ, ದೂರದಲ್ಲಿರುವ ಇಂಡಿಗನತ್ತ ಗ್ರಾಮ ತಲುಪಿ ಅಲ್ಲಿಂದ 2 ಕಿ.ಮೀ.ದೂರ ನಡೆದುಕೊಂಡೇ ಮೆಂದಾರೆ ಗ್ರಾಮಕ್ಕೆ ಭೇಟಿ ನೀಡಿ ಆದಿವಾಸಿಗಳ ಅಹವಾಲು ಆಲಿಸಿದರು.

ಗ್ರಾಮದ ಗಿರಿಜನ ಮುಖಂಡ ಮಾದಯ್ಯ ಮಾತನಾಡಿ, ಮಲೆ ಮಹದೇಶ್ವರ ಬೆಟ್ಟದಿಂದ ಇಂಡಿಗನತ್ತ ಗ್ರಾಮಕ್ಕೆ ಜೀಪ್‌ಗಳಲ್ಲಿ ಆಗಮಿಸಿ ನಂತರ 2 ಕಿ.ಮೀ. ನಡೆದುಕೊಂಡೇ ಗ್ರಾಮಕ್ಕೆ ಹೋಗಬೇಕಿದೆ. ಇದರಿಂದ ನಮಗೆ ಸಾಕಾಗಿ ಹೋಗಿದೆ ಎಂದು ಜಿಲ್ಲಾಧಿಕಾರಿಗಳ ಮುಂದೆ ಅಹವಾಲು ತೋಡಿಕೊಂಡರು.

ಮನೆಗಳಿಗೆ ದಿನಸಿ ಪದಾರ್ಥಗಳನ್ನು ತರಬೇಕೆಂದರೂ ಬೆಟ್ಟಕ್ಕೆ ಹೋಗಲು ನಡೆದು ಹೋಗಬೇಕು. ಹಲವು ಬಾರಿ ಕಾಡಾನೆ, ಚಿರತೆಗಳು ಎದುರಾಗಿವೆ. ಯಾರಾದರೂ ಅನಾರೋಗ್ಯಕ್ಕೆ ಈಡಾದರೆ ಡೋಲಿ ಮೂಲಕ ಬೆಟ್ಟಕ್ಕೆ ಹೊತ್ತುಕೊಂಡು ಹೋಗಬೇಕಿದೆ. ವಿದ್ಯುತ್ ಸೌಲಭ್ಯವೂ ಇಲ್ಲ. ಮನೆಗಳಿಗೆ ಅಳವಡಿಸಿರುವ ಸೋಲಾರ್ ದೀಪಗಳು ಸರಿಯಾಗಿ ಉರಿಯುವುದಿಲ್ಲ. ನಮ್ಮ ಸ್ಥಿತಿ ಅತ್ಯಂತ ಶೋಚನೀಯವಾಗಿದೆ ಎಂದು ಅಲವತ್ತುಕೊಂಡರು.

ಮಂದಾರೆ ಪೋಡಿನಲ್ಲಿ ಸುಮಾರು 80 ಮನೆಗಳಿವೆ. ಒಬ್ಬರಿಗೂ ಸ್ವಂತ ಜಮೀನಿಲ್ಲ. ಎಲ್ಲರೂ ಕೂಲಿ ಮಾಡಿ, ಅರಣ್ಯದ ಕಿರು ಉತ್ಪನ್ನಗಳನ್ನು ಸಂಗ್ರಹಿಸಿ ಮಾರಾಟ ಮಾಡಿ ಬದುಕುತ್ತಿದ್ದೇವೆ. ಸುಮಾರು 60 ಕುಟುಂಬಗಳಿಗೆ ವೈಯಕ್ತಿಕ ಹಾಗೂ ಸಮುದಾಯ ಅರಣ್ಯ ಹಕ್ಕುಪತ್ರ ಸಿಕ್ಕಿದೆ. ಉಳಿದವರಿಗೆ ದೊರೆತಿಲ್ಲ. ನಮ್ಮ ಬದುಕು ಪ್ರಾಣಿಗಳಿಗಿಂತಲೂ ಕೀಳಾಗಿದೆ ಎಂದು ನೋವು ತೋಡಿಕೊಂಡರು.

ರಸ್ತೆ ಮತ್ತು ವಿದ್ಯುತ್ ಸಂಪರ್ಕವೇ ನಮಗೆ ಪ್ರಮುಖ ಸಮಸ್ಯೆಯಾಗಿದೆ. ಇಂತಹ ಕಷ್ಟದಲ್ಲಿ ಬದುಕು ನಡೆಸುವುದು ಬೇಡ ಎಂದು ತೀರ್ಮಾನಿಸಿದ್ದೇವೆ. ಆದ್ದರಿಂದ ನಮ್ಮನ್ನು ಅರಣ್ಯದಿಂದ ಹೊರಗೆ ಸ್ಥಳಾಂತರಿಸಿ ಪುನರ್ವಸತಿ ಕಲ್ಪಿಸಬೇಕು ಎಂದು ಗಿರಿಜನರು ಪರಿಪರಿಯಾಗಿ ವಿನಂತಿಸಿಕೊಂಡರು.

ಸರಿಯಾದ ರಸ್ತೆಯಿಲ್ಲದ ಕಾರಣ ಗ್ರಾಮಕ್ಕೆ ಬಸ್ ಅಥವಾ ಇತರೆ ವಾಹನ ಸಂಚಾರವಿಲ್ಲ. ಆದ್ದರಿಂದ ನಮ್ಮ ಮಕ್ಕಳು ಸಹ ಹೈಸ್ಕೂಲ್, ಕಾಲೇಜು ಶಿಕ್ಷಣ ಪಡೆಯಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ ಈ ಅರಣ್ಯದಿಂದ ನಮ್ಮನ್ನು ಸ್ಥಳಾಂತರಿಸಿದರೆ ಸಾಕು ಎಂದು ಕೋರಿಕೊಂಡರು.

ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ: ಡಿಸಿ ಭರವಸೆ ಮಂದಾರೆ ಗಿರಿಜನರ ಮನವಿ ಆಲಿಸಿದ ಜಿಲ್ಲಾಧಿಕಾರಿ ಶಿಲ್ಪಾನಾಗ್ ಅವರು, ಮೆಂದಾರೆಯನ್ನು ಸ್ಥಳಾಂತರ ಮಾಡಬೇಕಾದರೆ, ಅರಣ್ಯದಿಂದ ಹೊರಗೆ ಸರ್ಕಾರಿ ಭೂಮಿ ಗುರುತಿಸಬೇಕು. ಮೆಂದಾರೆಯಲ್ಲಿ ಎಷ್ಟು ಮನೆಗಳಿವೆ, ಅವರಿಗೆ ಹೊರಗಡೆ ಎಷ್ಟು ಭೂಮಿ ಅವಶ್ಯಕವಿದೆ ಎಂಬುದರ ಬಗ್ಗೆ ಸಂಪೂರ್ಣ ವರದಿ ತಯಾರಿಸಬೇಕು. ಪುನರ್ವಸತಿ ಕಲ್ಪಿಸಲು ಎಷ್ಟು ಜಾಗ, ಅನುದಾನ ಬೇಕೆಂಬ ಬಗ್ಗೆ ಸರ್ಕಾರಕ್ಕೆ ಅಂದಾಜು ಪಟ್ಟಿ ತಯಾರಿಸಿ ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಬೇಕು. ಗಿರಿಜನರ ಮನವಿಯಂತೆ ಆದಷ್ಟು ಬೇಗ ಅಂದಾಜುಪಟ್ಟಿ ತಯಾರಿಸಿ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ಭರವಸೆ ನೀಡಿದರು.

ಗ್ರಾಮದ ಸಮಸ್ಯೆ ಬಗೆಹರಿಸಲು ಕ್ರಮ: ಕಳೆದ ಏಪ್ರಿಲ್ 26ರಂದು ನಡೆದ ಇಂಡಿಗನತ್ತ ಮತಗಟ್ಟೆ ಧ್ವಂಸ ಪ್ರಕರಣದಲ್ಲಿ ಇಂಡಿಗನತ್ತ ಗ್ರಾಮಸ್ಥರು ಮೆಂದಾರೆ ಗ್ರಾಮದವರ ಮೇಲೆ ಹಲ್ಲೆ ಮಾಡಿದ್ದರಿಂದ ಕೆಲವರು ಗಾಯಗೊಂಡಿದ್ದರು. ಇವರಿಗೆ ಮರುದಿನ ಚಿಕಿತ್ಸೆ ನೀಡಲಾಗಿತ್ತು. ಇದಲ್ಲದೆ ಗ್ರಾಮದಲ್ಲಿಯೇ ಎರಡು ಬಾರಿ ಆರೋಗ್ಯ ತಪಾಸಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ‘ಆಂದೋಲನ’ ವರದಿ ಬಳಿಕ ಇದೀಗ ಮತ್ತೊಮ್ಮೆ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡಿ ಅವರಿಗೆ ಧೈರ್ಯ ತುಂಬಿದಲ್ಲದೆ ಗ್ರಾಮದ ಸಮಸ್ಯೆಗಳನ್ನು ಬಗೆಹರಿಸುವುದಾಗಿ ಭರವಸೆ ನೀಡಿದ್ದಾರೆ.

andolana

Recent Posts

ತಿ.‌ ನರಸೀಪುರ: ಬೈಕ್ ಡಿಕ್ಕಿ ಚಿರತೆ ಸಾವು

ತಿ. ನರಸೀಪುರ: ತಾಲೂಕಿನ ಬನ್ನೂರು ಹೋಬಳಿಯ ಬಸವನಹಳ್ಳಿ ಗ್ರಾಮದ ಸಮೀಪದ ಮುಖ್ಯರಸ್ತೆಯಲ್ಲಿ ದ್ವಿಚಕ್ರ ವಾಹನ ಚಿರತೆಗೆ ಡಿಕ್ಕಿ ಹೊಡೆದ ಪರಿಣಾಮ…

7 hours ago

ತಿರುಪತಿ ಲಡ್ಡು: ತುಪ್ಪದಲ್ಲಿ ಪ್ರಾಣಿ ಕೊಬ್ಬು ಬಳಕೆ

ಅಮರಾವತಿ: ಜಗತ್‌ ಪ್ರಸಿದ್ಧ ತಿರುಪತಿ ಲಡ್ಡು ಪ್ರಸಾದದಲ್ಲಿ ಪ್ರಾಣಿಗಳ ಕೊಬ್ಬು ಹಾಗೂ ಕಳಪೆ ಗುಣಮಟ್ಟದ ಪದಾರ್ಥಗಳು ಪತ್ತೆಯಾಗಿದೆ ಎಂದು ತೆಲುಗು…

9 hours ago

ಬುರ್ಖಾಧಾರಿ ಮಹಿಳೆಯಿಂದ ಸಲ್ಮಾನ್‌ ಖಾನ್‌ ತಂದೆಗೆ ಜೀವ ಬೆದರಿಕೆ: ಮಹಿಳೆ ಸೇರಿ ಇಬ್ಬರ ಬಂಧನ

ಮುಂಬೈ:‌ ಬಾಲಿವುಡ್‌ನ ಭಾಯಿಜಾನ್ ಸಲ್ಮಾನ್‌ ಖಾನ್‌ ಅವರ ತಂದೆಗೆ ಬುರ್ಖಾ ಧರಿಸಿದ್ದ ಮಹಿಳೆ ಹಾಗೂ ಇನ್ನೊರ್ವ ವ್ಯಕ್ತಿ ಜೀವ ಬೆದರಿಕೆ…

9 hours ago

ಶಾಸಕ ಮುನಿರತ್ನಗೆ ಜಾಮೀನು: ಅತ್ಯಾಚಾರ ಪ್ರಕರಣದಲ್ಲಿ ಮತ್ತೆ ಬಂಧನ ಸಾಧ್ಯತೆ

ಬೆಂಗಳೂರು: ಗುತ್ತಿಗೆದಾರರೊಬ್ಬರಿಗೆ ಜಾತಿನಿಂದನೆ ಹಾಗೂ ಪ್ರಾಣ ಬೆದರಿಕೆ ಹಾಕಿದ ಪ್ರಕರಣದಲ್ಲಿ ಬೆಂಗಳೂರಿನ ರಾಜರಾಜೇಶ್ವರಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಮುನಿರತ್ನಗೆ…

10 hours ago

ನುಡಿ ಹಬ್ಬಕ್ಕೆ ಆಹ್ವಾನಿಸಲು ಸಿದ್ಧವಾಗಿದೆ ಕನ್ನಡ ರಥ

ಮಂಡ್ಯ: ಜಿಲ್ಲೆಯಲ್ಲಿ ಡಿಸೆಂಬರ್ 20, 21, 22 ರಂದು ನಡೆಯಲಿರುವ 87 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ…

10 hours ago

ಬಸ್‌ನಲ್ಲಿ ಪ್ರಯಾಣ: ಮಹಿಳೆಯರಿಂದ ಶಕ್ತಿಯೋಜನೆಯ ಅಭಿಪ್ರಾಯ ಪಡೆದ ಪುಷ್ಪ ಅಮರನಾಥ್‌

ಮೈಸೂರು: ರಾಜ್ಯ ಸರ್ಕಾರದ ಮಹತ್ವಕಾಂಕ್ಷೆ ಯೋಜನೆಗಳಲ್ಲಿ ಒಂದಾದ ಶಕ್ತಿಯೋಜನೆ ಫಲಾನುಭವಿಗಳ ಅಭಿಪ್ರಾಯ ಸಂಗ್ರಹಿಸಲು ಗ್ಯಾರಂಟಿ ಅನುಷ್ಠಾನ ಸಮಿತಿ ಉಪಾಧ್ಯಕ್ಷೆಯಾದ ಡಾ…

11 hours ago