Andolana originals

ಎರಡು ದಶಕದ ಬಳಿಕ ಮತ್ತೆ ರಾಜಮನೆತನಕ್ಕೆ ಮಣೆ

ಕೆ.ಬಿ.ರಮೇಶನಾಯಕ

ಮೈಸೂರು: ಸ್ವಾತಂತ್ರ್ಯ ಪೂರ್ವಕ್ಕೂ ಮುನ್ನ ದೇಶದಲ್ಲಿಯೇ ಮೊಟ್ಟ ಮೊದಲ ಬಾರಿಗೆ ಪ್ರಜಾಪ್ರತಿನಿಧಿ ವ್ಯವಸ್ಥೆಯನ್ನು ಜಾರಿಗೆ ತಂದ ಮೈಸೂರಿನ ಅರಸು ಮನೆತನ ಎರಡನೇ ಬಾರಿಗೆ ಪ್ರಜಾಪ್ರಭುತ್ವದಲ್ಲಿ ಜನರ ಮನಗೆಲ್ಲಲು ಮುಂದಾಗಿದೆ. ರಾಜಕೀಯ ಪ್ರವೇಶ ಇಲ್ಲ ಎನ್ನುತ್ತಲೇ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯ‌ರ್ ಕಣಕ್ಕಿಳಿದಿದ್ದಾರೆ.‌

ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಅಪ್ಪಿಕೊಂಡ ಬಳಿಕವೂ ಜನಾನುರಾಗಿಗಳಾಗಿದ್ದ ಮಹಾರಾಜರ ಮನೆತನದ ಬಗ್ಗೆ ಹಳೆಯ ಮೈಸೂರು ಪ್ರಾಂತ್ಯದಲ್ಲಿ ವಿಶೇಷ ಗೌರವವಿರುವ ಕಾರಣದಿಂದಲೇ ಯದು ಅವರ ಪೂರ್ವಾಧಿಕಾರಿ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಅವರು ನಾಲ್ಕು ಬಾರಿ ಮೈಸೂರಿನ ಸಂಸದರಾಗಿ ಸೇವೆ ಸಲ್ಲಿಸಿದ್ದರು.

ಶ್ರೀಕಂಠದತ್ತ ಒಡೆಯರ್ ಅವರು 1984 ಮತ್ತು 1989 ರಲ್ಲಿ ಕಾ೦ಗ್ರೆಸ್ ನಿ೦ದ ಗೆಲುವು ಸಾಧಿಸಿದ್ದರು. ಆದರೆ 1991ರಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ ಕಾಂಗ್ರೆಸ್‌ ಅಭ್ಯರ್ಥಿ ಚಂದ್ರಪ್ರಭಾ ಅರಸು ವಿರುದ್ಧ ಸೋಲು ಕಂಡಿದ್ದರು. ನಂತರ ಕಾಂಗ್ರೆಸ್ ಪಕ್ಷಕ್ಕೆ ಮರಳಿ 1996 ಮತ್ತು 1999ರಲ್ಲಿ ಮತ್ತೆ ಗೆಲುವು ಸಾಧಿಸಿದ್ದರು. 2004ರ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಸಿ.ಎಚ್. ವಿಜಯಶಂಕರ್ ವಿರುದ್ಧ ಸೋಲು ಕಂಡ ಬಳಿಕ ಸಕ್ರಿಯ ರಾಜಕಾರಣದಿಂದ ದೂರವಾಗಿದ್ದರು. ಅವರ ನಿಧನಾನಂತರ ರಾಜಮನೆತನದವರು ರಾಜಕೀಯ ಪ್ರವೇಶ ಮಾಡುತ್ತಾರೆಂಬ ಮಾತುಗಳು ಕೇಳಿಬಂದರೂ ರಾಜವಂಶಸ್ಥೆ ಪ್ರಮೋದಾದೇವಿ ರಾಜಕೀಯಕ್ಕಿಂತ ತಮ್ಮ ಕುಟುಂಬದ ಆಸ್ತಿ ಪಾಸ್ತಿಗಳ ಸಂರಕ್ಷಣೆಗೆ ಹೆಚ್ಚು ಗಮನ ಹರಿಸಿದ್ದರು.

2ನೇ ಬಾರಿಗೆ ಮನವೊಲಿಕೆಗೆ ಹೈಕಮಾಂಡ್ ಸಫಲ: 2019ರ ಚುನಾವಣೆಯಲ್ಲಿಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರನ್ನು ಚುನಾವಣೆಗೆ ನಿಲ್ಲಿಸಲು ಬಿಜೆಪಿ ಹೈಕಮಾಂಡ್ ಒಲವು ತೋರಿತ್ತು. ಆದರೆ ಯದುವೀರ್ ಆಸಕ್ತಿ ತೋರಿಸಿ ರಲಿಲ್ಲ. ನಂತರದಲ್ಲಿ ಪ್ರಮೋದಾದೇವಿ ಒಡೆಯರ್ ಅವರನ್ನು ರಾಜ್ಯಸಭೆಗೆ ಆಯ್ಕೆ ಮಾಡಲಾಗುತ್ತಿದೆ ಎನ್ನುವ ಸುದ್ದಿ ಹರಡಿತ್ತಾದರೂ ಅದು ಕಾವ್ಯರೂಪಕ್ಕೆ ಬಂದಿರಲಿಲ್ಲ. ಈ ಬಾರಿ ಬಿಜೆಪಿ ನಾಯಕರು ವ್ಯವಸ್ಥಿತವಾಗಿ ಕಾರ್ಯತಂತ್ರ ಹೆಣೆದು ಯದುವೀರ್ ಅವರನ್ನು ಕಣಕಿಳಿಸುವ ಯೋಜನೆಯನ್ನು ಕಾರ್ಯಗತಗೊಳಿಸಿ ರಾಜಸ್ಥಾನದಲ್ಲಿರುವ ಯದುವೀರ್ ಅವರ ಮಾವನ ಮನೆಯವರು ಕುಟುಂಬದವರನ್ನು ಒಪ್ಪಿ ಸುವ ಹೊಣೆ ಹೊತ್ತಿದ್ದರೆ, ಚುನಾವಣೆ ಕಣಕ್ಕಿಳಿಸಲು ಬಿಜೆಪಿಯ ಘಟಾನುಘಟಿ ನಾಯಕರೇ ಚರ್ಚೆ ಮಾಡಿದ್ದರು. ಕೇಂದ್ರ ಸಚಿವ ಭೂಪೇಂದ್ರ ಯಾದವ್, ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಸೇರಿದಂತೆ ಅನೇಕರು ಆಂತರಿಕವಾಗಿ ರಾಜಮನೆತನದ ಸದಸ್ಯರ ಜೊತೆ ಮಾತುಕತೆ ನಡೆಸಿದ್ದರು. ಮೂರು ದಿನಗಳ ಹಿಂದೆ ಸಮಯ ಕೇಳಿದ್ದ ರಾಜಮನೆತನ ಸಮ್ಮತಿ ಸೂಚಿಸುತ್ತಿ ದ್ದಂತೆ ಬಿಜೆಪಿ ಹೈಕಮಾಂಡ್ ಯದುವೀರ್ ಅವರಿಗೆ ಟಿಕೆಟ್ ಘೋಷಣೆ ಮಾಡಿದೆ. ಈ ಮೂಲಕ ಪ್ರತಾಪ್‌ ಸಿಂಹ ಅಖಾಡದಿಂದ ದೂರ ಉಳಿಯುವಂತಾಗಿದೆ.

ಯದುವೀರ್‌ ಹಿನ್ನೆಲೆ:

ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರನ್ನು ಪ್ರಮೋದಾದೇವಿಯವರು 2015ರ, ಫೆಬ್ರವರಿ 23 ರಂದು ದತ್ತುಪುತ್ರನಾಗಿ ಸ್ವೀಕರಿಸುವ ಮೂಲಕ ಅವರು ಯದುವಂಶದ 27ನೆಯ ‘ಯುವರಾಜ’ ನೆನಿಸಿದರು. ಶ್ರೀಕಂಠದತ್ತ ಒಡೆಯರ್ ಮತ್ತು ಪ್ರಮೋದಾ ದೇವಿ ದಂಪತಿಗೆ ಮಕ್ಕಳಿಲ್ಲದ್ದರಿಂದ ಈ ನಿರ್ಧಾರ ಕೈಗೊಳ್ಳಬೇಕಾಯಿತು.

ಯದುವೀರರ ಮೊದಲ ಹೆಸರು, ಯದುವೀರ್ ಗೋಪಾಲರಾಜೇ ಅರಸ್. ದತ್ತು ಸ್ವೀಕಾರ ಸಮಾರಂ ಭದ ಸಮಯದಲ್ಲಿ ಈ ಹೆಸರನ್ನು ಬದಲಾಯಿಸಲಾ ಯಿತು. ಯದುವೀರರ ತಂದೆ ಬೆಟ್ಟದ ಕೋಟೆ ಅರಸು
ಪರಂಪರೆಯವರು. ಜಯಚಾಮರಾಜ ಒಡೆಯರ ಮರಿಮಗ. ಶ್ರೀಕಂಠದತ್ತ ಒಡೆಯರ್ ಅವರ ಹಿರಿಯ ಸೋದರಿ ಗಾಯತ್ರಿ ದೇವಿ ಮತ್ತು ರಾಮಚಂದ್ರ ಅರಸ್ ಅವರ ಪುತ್ರಿ ತ್ರಿಪುರಸುಂದರಿ ದೇವಿ ಮತ್ತು ಸ್ವರೂಪ್ ಗೋಪಾಲ ರಾಜೇ ಅರಸ್ ಅವರ ಏಕೈಕ ಪುತ್ರ ಯದುವೀರ್ ಗೆ ‘ಜಯಾತ್ಮಿಕಾ’ ಹೆಸರಿನ ಸಹೋದರಿ ಇದ್ದಾಳೆ. ಪತ್ನಿ ತ್ರಿಷಿಕಾ ಕುಮಾರಿ ಜೈಪುರದ ರಾಜಮನೆತನಕ್ಕೆ ಸೇರಿದವರು. ಆದ್ಯ ಒಡೆಯರ್‌ ಈ ದಂಪತಿಯ ಪುತ್ರ.

ಶಿಕ್ಷಣ

ಬೆಂಗಳೂರಿನ ವಿದ್ಯಾನಿಕೇತನ್ ಶಿಕ್ಷಣ ಸಂಸ್ಥೆಯಲ್ಲಿ ಎಸ್ಸೆಸ್ಸೆಲ್ಸಿ ಮುಗಿಸಿ, ‘ಕೆನೆಡಿಯನ್ ಅಂತಾರಾಷ್ಟ್ರೀಯ ಶಾಲೆಯಲ್ಲಿ 12 ನೆಯ ತರಗತಿ ತೇರ್ಗಡೆಯಾಗಿದ್ದರು. ನಂತರ ಅಮೆರಿಕದಲ್ಲಿ ಬಾಸ್ಟನ್ ವಿಶ್ವವಿದ್ಯಾಲಯದಲ್ಲಿ ಅರ್ಥಶಾಸ್ತ್ರ ಮತ್ತು ಆಂಗ್ಲಭಾಷಾ ವಿಷಯಗಳಲ್ಲಿ ಬಿ.ಎ ಪದವಿ ಮಾಡಿದ್ದಾರೆ. ಇತಿಹಾಸ ಅವರ ಆಸಕ್ತಿಯ ವಿಷಯ.

andolana

Recent Posts

ಹನೂರು: ಏಕಕಾಲದಲ್ಲೇ ಕಾಣಿಸಿಕೊಂಡ ಎರಡು ಚಿರತೆಗಳು

ಹನೂರು: ತಾಲೂಕಿನ ಲೊಕ್ಕನಹಳ್ಳಿ ಹೋಬಳಿ ವ್ಯಾಪ್ತಿಯ ಮಲೆ ಮಹದೇಶ್ವರ ಅರಣ್ಯ ಪ್ರದೇಶ ವ್ಯಾಪ್ತಿಯ ಬಳಗುಡ್ಡ ಬಿಟ್ ವ್ಯಾಪ್ತಿಯಲ್ಲಿ ಏಕಕಾಲಕ್ಕೆ ಎರಡು…

9 hours ago

ನಾಳೆಯೊಳಗೆ ಪ್ರಯಾಣಿಕರಿಗೆ ಮರುಪಾವತಿ ಮಾಡಿ: ಇಂಡಿಗೋ ಏರ್‌ಲೈನ್ಸ್‌ಗೆ ಗಡುವು ನೀಡಿದ ಕೇಂದ್ರ ಸರ್ಕಾರ

ನವದೆಹಲಿ: ನಾಗರಿಕ ವಿಮಾನಯಾನ ಸಚಿವಾಲಯವು ಇಂಡಿಗೋದ ಬಾಕಿ ಇರುವ ಎಲ್ಲಾ ಪ್ರಯಾಣಿಕರ ಮರುಪಾವತಿಗಳನ್ನು ವಿಳಂಬವಿಲ್ಲದೇ ಪಾವತಿಸಲು ಆದೇಶಿಸಿದೆ. ರದ್ದಾದ ಅಥವಾ…

9 hours ago

ಡಿ.ಕೆ.ಶಿವಕುಮಾರ್‌ ಸಂಪುಟದಲ್ಲಿ ನನಗೆ ಸಚಿವ ಸ್ಥಾನ ಬೇಡ: ಮಾಜಿ ಸಚಿವ ಕೆ.ಎನ್.ರಾಜಣ್ಣ

ತುಮಕೂರು: ರಾಜ್ಯದಲ್ಲಿ ಸಿಎಂ ಸ್ಥಾನ ಬದಲಾವಣೆ ಚರ್ಚೆ ಬೆನ್ನಲ್ಲೇ ಮಾಜಿ ಸಚಿವ ಕೆ.ಎನ್.ರಾಜಣ್ಣ ಮಹತ್ವದ ಹೇಳಿಕೆ ಕೊಟ್ಟಿದ್ದಾರೆ. ಈ ಕುರಿತು…

9 hours ago

ನನ್ನನ್ನು ಹೆದರಿಸ್ತೀನಿ ಅಂದ್ರೆ ಅದು ಸಾಧ್ಯವಿಲ್ಲ: ಡಿಸಿಎಂ ಡಿ.ಕೆ.ಶಿವಕುಮಾರ್‌ ಪ್ರತಿಕ್ರಿಯೆ

ಹಾಸನ: ನ್ಯಾಷನಲ್‌ ಹೆರಾಲ್ಡ್‌ ಪ್ರಕರಣದಲ್ಲಿ ದೆಹಲಿ ಪೊಲೀಸರು ನೋಟಿಸ್‌ ಕೊಟ್ಟ ವಿಚಾರಕ್ಕೆ ಡಿಸಿಎಂ ಡಿ.ಕೆ.ಶಿವಕುಮಾರ್‌ ಪ್ರತಿಕ್ರಿಯೆ ನೀಡಿದ್ದಾರೆ. ಈ ಕುರಿತು…

10 hours ago

ಹೇಮಾವತಿ ಜಲಾಶಯದ ಬಳಿ ಉದ್ಯಾನವನ ನಿರ್ಮಿಸಲು ಸಿಎಂ ಸಿದ್ದರಾಮಯ್ಯ ಭರವಸೆ

ಹಾಸನ: ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಒಂದು ವರ್ಷದೊಳಗೆ ಎಲ್ಲ ಗ್ಯಾರಂಟಿ ಯೋಜನೆಗಳನ್ನು ಯಶಸ್ವಿಯಾಗಿ ಜಾರಿಗೊಳಿಸಿದ್ದು, ಕರ್ನಾಟಕದ ಇತಿಹಾಸದಲ್ಲಿಯೇ ಕಾಂಗ್ರೆಸ್…

10 hours ago

ಮೈಸೂರು| ಜಮೀನಿನಲ್ಲಿ ಭಾರೀ ಗಾತ್ರದ ಹೆಬ್ಬಾವು ಪತ್ತೆ

ನಂಜನಗೂಡು: ಜಮೀನಿನಲ್ಲಿ ಭಾರೀ ಗಾತ್ರದ ಹೆಬ್ಬಾವು ಪತ್ತೆಯಾಗಿದ್ದು, ಅರಣ್ಯ ಇಲಾಖೆ ಸಿಬ್ಬಂದಿಗಳು ರಕ್ಷಿಸಿ ಸುರಕ್ಷಿತ ಪ್ರದೇಶಕ್ಕೆ ಬಿಟ್ಟಿದ್ದಾರೆ. ಜಿಲ್ಲೆಯ ನಂಜನಗೂಡು…

11 hours ago