Andolana originals

ಮೈಸೂರಲ್ಲಿ ಜಾ.ದಳ ಕಾರ್ಯಕರ್ತರು ತಬ್ಬಿಬ್ಬು

ಮೈಸೂರು: ಬಿಜೆಪಿ ಹಾಗೂ ಜಾ.ದಳ ಮೈತ್ರಿ ಅಭ್ಯರ್ಥಿಯಾಗಿ ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಆಯ್ಕೆಯಾಗಿದ್ದಾರೆ. ಈ ಬೆಳವಣಿಗೆಯಿಂದ ನಗರ ಬಿಜೆಪಿ ಕಚೇರಿಯಲ್ಲಿ ಸಂಭ್ರಮ ಮನೆ ಮಾಡಿದೆ. ಆದರೆ, ದೋಸ್ತಿ ಪಕ್ಷ ಜಾ.ದಳದ ಕೆಲ ಮುಖಂಡರ ಹೊರತಾಗಿ ಉಳಿದವರು ಚುನಾವಣೆಯಲ್ಲಿ ನಮ್ಮ ಪಾತ್ರವೇನು ಎಂದು ತಿಳಿಯದೆ ಮೌನಕ್ಕೆ ಜಾರಿದ್ದಾರೆ.

ಹಳೆ ಮೈಸೂರು ಭಾಗದಲ್ಲಿ ಜಾ.ದಳಕ್ಕೆ ತನ್ನದೇ ಆದ ಇತಿಹಾಸವಿದೆ. ಲೋಕಸಭೆ ಹಾಗೂ ವಿಧಾನಸಭೆ ಚುನಾವಣೆಯ ವೇಳೆ ಬಹುತೇಕ ಎಲ್ಲಾ ಕ್ಷೇತ್ರಗಳಲ್ಲಿ ಕೂಡ ಜಾ.ದಳ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸುತ್ತಿತ್ತು. ಚುನಾವಣೆ ನಡೆಯುವ ಒಂದು ತಿಂಗಳ ಮುನ್ನವೇ ಕಾರ್ಯಕರ್ತರು ಮೈ ಚಳಿ ಬಿಟ್ಟು ತಮ್ಮ ಅಭ್ಯರ್ಥಿ ಪರ ಪ್ರಚಾರಕ್ಕೆ ಸಜ್ಜಾಗುತ್ತಿದ್ದರು. ಆದರೆ, ಇದೇ ಪ್ರಥಮ ಬಾರಿಗೆ ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದಲ್ಲಿ ಜಾ.ದಳ ಬಿಜೆಪಿ ಅಭ್ಯರ್ಥಿಗೆ ಬಹಿರಂಗವಾಗಿ ತನ್ನ ಬೆಂಬಲ ಘೋಷಿಸಿದೆ. ಆದರೆ ಬಿಜೆಪಿ ಅಭ್ಯರ್ಥಿ ಘೋಷಣೆ ಯಾದ ಬಳಿಕವೂ ತಮ್ಮ ಪಾತ್ರವೇನೆಂದು ತಿಳಿಯದೆ ಜಾ.ದಳ ಕಾರ್ಯಕರ್ತರು ಗೊಂದಲಕ್ಕೊಳಗಾಗಿದ್ದಾರೆ.

ಬಿಜೆಪಿ ಅಭ್ಯರ್ಥಿಯಾಗಿ ತಮ್ಮ ಹೆಸರು ಘೋಷಣೆ ಆಗುತ್ತಿದ್ದಂತೆ ಯದುವೀರ್ ಅವರು ಬಿಎಸ್‌ವೈ, ಹೆಚ್‌.ಡಿ.ದೇವೇಗೌಡ, ಹೆಚ್.ಡಿ.ಕುಮಾರಸ್ವಾಮಿ, ಜಿ.ಟಿ.ದೇವೇಗೌಡ, ಸಾ.ರಾ.ಮಹೇಶ್ ಮುಂತಾದ ನಾಯಕರನ್ನು ಭೇಟಿ ಮಾಡಿ ಬೆಂಬಲ ಕೋರಿದ್ದರು. ಆದರೆ, ಜಾ.ದಳ ಕಚೇರಿಗಾಗಲಿ, ಜಾ.ದಳದ ಸ್ಥಳೀಯ ಮುಖಂಡರನ್ನು ಭೇಟಿಯಾಗುವುದಾಗಲಿ ಮಾಡಿಲ್ಲ. ಸೀಟು ಹಂಚಿಕೆ ಮಾತುಕತೆ ಇನ್ನೂ ಅಂತಿಮಗೊಳ್ಳದ ಕಾರಣ ಜಾ.ದಳ ಮುಖಂಡರೂ ಇದುವರೆಗೆ ತಮ್ಮಕಾರ್ಯಕರ್ತರಿಗೆ ಯಾವುದೇ ಸೂಚನೆ ನೀಡಿಲ್ಲ. ಹೀಗಾಗಿ ಜಾ.ದಳ ಪಾಳಯದಲ್ಲಿ ಮೌನ ಕವಿದಿದೆ.

ಕಳೆದ ಎರಡು ಚುನಾವಣೆಗಳಲ್ಲಿ ಜಾ.ದಳ ಕಾರ್ಯಕರ್ತರು ಪರೋಕ್ಷವಾಗಿ ಬಿಜೆಪಿ ಅಭ್ಯರ್ಥಿ ಪ್ರತಾಪ್‌ ಸಿಂಹ ಅವರನ್ನು ಬೆಂಬಲಿಸಿದ್ದರು. ಈ ಬಗ್ಗೆ ಅವರ ಪಕ್ಷದ ಮುಖಂಡರೇ ಬಹಿರಂಗ ಹೇಳಿಕೆ ಕೂಡ ನೀಡಿದ್ದಾರೆ. ಆದರೆ, ಈ ಬಾರಿ ಕೇಸರಿ ಪಕ್ಷದ ಬೆಂಬಲಕ್ಕೆ ನಿಲ್ಲುವ ಬಗ್ಗೆ ಅಧಿಕೃತ ಘೋಷಣೆಯಾದ ಬಳಿಕವೂ ಜಾ.ದಳ ಕಾರ್ಯಕರ್ತರು ಚುನಾವಣೆ ಕಣಕ್ಕಿಳಿದಿಲ್ಲ. ಉಭಯ ಪಕ್ಷಗಳ ಮೈತ್ರಿಯಂತೆ ಕೊಡಗು- ಮೈಸೂರು ಲೋಕಸಭಾ ಕ್ಷೇತ್ರ ಬಿಜೆಪಿ ಪಾಲಾಗುತ್ತದೆ ಎಂದು ತಿಳಿದಾಗ ಜಾ.ದಳ ಕಾರ್ಯಕರ್ತರ ಮನಸ್ಸಿನಲ್ಲಿ ಇದ್ದುದು ಪ್ರತಾಪ್ ಸಿಂಹ ಅವರ ಹೆಸರು, ಪ್ರತಾಪ್ ಕೂಡ ಜಾ.ದಳ ಪಕ್ಷದ ಕಾರ್ಯಕರ್ತರು ಹಾಗೂ ಮುಖಂಡರನ್ನು ಅದಾಗಲೇ ಭೇಟಿ ಮಾಡಿ ಬೆಂಬಲ ಕೋರಿದ್ದರು. ಕಾರ್ಯಕರ್ತರೂ ಅವರಿಗೆ ಬೆಂಬಲದ ಭರವಸೆ ನೀಡಿದ್ದರು.

ಆದರೆ, ಪ್ರತಾಪ್ ಬದಲು ಯದುವೀರ್ ಹೆಸರು ಘೋಷಣೆಯಾದ ದಿಢೀ‌ ಬೆಳವಣಿಗೆಯಿಂದ ಜಾ.ದಳ ಕಾರ್ಯಕರ್ತರು ತಬ್ಬಿಬ್ಬಾಗಿದ್ದಾರೆ. ಜಾ.ದಳ ಕಾರಕರ್ತರಲ್ಲಿ ಒಕ್ಕಲಿಗ ಸಮುದಾಯದವರು ಹೆಚ್ಚಿದ್ದು, ಪ್ರತಾಪ್ ಇದೇ ಸಮುದಾಯಕ್ಕೆ ಸೇರಿದ್ದ ಕಾರಣ ಬೆಂಬಲ ನೀಡಲು ಒಳಗಿಂದೊಳಗೆ ಸಮತಿ ಇತ್ತು. ಆದರೆ ಇದೀಗ ಪ್ರತಾಪ್ ಬದಲು ಯದುವೀರ್ ಅವರನ್ನು ಕಣಕ್ಕಿಳಿಸಿರುವುದರಿಂದ, ರಾಜಮನೆತನದ ಪ್ರತಿನಿಧಿ ಜತೆ ನೇರ ಸಂಪರ್ಕವಿಲ್ಲದ ಕಾರ್ಯಕರ್ತರು ಗೊಂದಲಕ್ಕೆ ಬಿದ್ದಿದ್ದಾರೆ. ಇತ್ತ ಬಿಜೆಪಿ ನಾಯಕರಾರೂ ನಮ್ಮ ಪಕ್ಷದ ತಳಮಟ್ಟದ ಕಾರ್ಯಕರ್ತರನ್ನು ಭೇಟಿ ಮಾಡಿ ಬೆಂಬಲ ಕೋರುವ ಕೆಲಸ ಮಾಡಿಲ್ಲ, ಅವರೇ ಸುಮ್ಮನಿದ್ದ ಮೇಲೆ ನಾವು ಹೇಗೆ ಪ್ರಚಾರದಲ್ಲಿ ತೊಡಗಿಕೊಳ್ಳುವುದು? ಮುಂದೇನಾಗುತ್ತದೆಯೋ ನೋಡೋಣ ಎಂದು ಪಕ್ಷದ ಕಾರ್ಯಕರ್ತರು ಹೇಳುತ್ತಿದ್ದಾರೆ.

ಹೆಚ್. ಎಸ್.‌ ದಿನೇಶ್‌ ಕುಮಾರ್

ಮೈಸೂರಿನವನಾದ ನಾನು, 1994ರಲ್ಲಿ ಮೈಸೂರಿನ ಬನುಮಯ್ಯ ಕಾಲೇಜಿನಲ್ಲಿ ಬಿಕಾಂ ಮುಗಿಸಿದ ಬಳಿಕ ಪತ್ರಿಕೋದ್ಯಮ ಕ್ಷೇತ್ರದಲ್ಲಿ 22 ವರ್ಷಗಳ ಕಾಲ ಅನುಭವ ಪಡೆದಿದ್ದೇನೆ. ಮೈಸೂರಿನ ಪಾದೇಶಿಕ ಪತ್ರಿಕೆ ʼಸಂಕ್ರಾಂತಿʼಯಿಂದ ಪ್ರಾರಂಭಿಸಿ, ಇಂದು ಸಂಜೆ ಪತ್ರಿಕೆಯಲ್ಲಿ ವರದಿಗಾರ, ಮುಖ್ಯ ವರದಿಗಾರನಾಗಿ ಕೆಲಸ ಮಾಡಿದ್ದೇನೆ. ಸದ್ಯ ಮೈಸೂರಿನ ʼಆಂದೋಲನ ದಿನಪತ್ರಿಕೆಯಲ್ಲಿ ಕಳೆದ 15 ವರ್ಷಗಳಿಂದ ಅಪರಾಧ ವರದಿಗಾರನಾಗಿ ಕಾರ್ಯನಿರ್ವಹಿಸುತ್ತಿದ್ದೇನೆ. ಪುಸ್ತಕ ಓದುವುದು ನನ್ನ ನೆಚ್ಚಿನ ಹವ್ಯಾಸ.

Recent Posts

ಮೈಸೂರಿನಲ್ಲಿ ಫೆಬ್ರವರಿ.14ರಂದು ಹನುಮಾನ್ ಚಾಲೀಸಾ ಪಾರಾಯಣ

ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಫೆಬ್ರವರಿ.14ರಂದು ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮಿಗಳ ನೇತೃತ್ವದಲ್ಲಿ ಹನುಮಾನ್‌ ಚಾಲೀಸಾ ಪಾರಾಯಣ ಕಾರ್ಯಕ್ರಮ ನಡೆಯಲಿದೆ.…

14 mins ago

ಎಚ್.ಡಿ.ಕೋಟೆ| ಸ್ಟೇಷನರಿ ಅಂಗಡಿಯಲ್ಲಿ ಬೆಂಕಿ: 15 ಲಕ್ಷ ಮೌಲ್ಯದ ವಸ್ತುಗಳು ಬೆಂಕಿಗಾಹುತಿ

ಎಚ್.ಡಿ.ಕೋಟೆ: ಶಾರ್ಟ್‌ ಸರ್ಕ್ಯೂಟ್‌ನಿಂದ ಸ್ಟೇಷನರಿ ಅಂಗಡಿಗೆ ಬೆಂಕಿ ಕಾಣಿಸಿಕೊಂಡ ಪರಿಣಾಮ ಸುಮಾರು 25 ಲಕ್ಷ ಮೌಲ್ಯದ ವಸ್ತುಗಳು ಬೆಂಕಿಗಾಹುತಿಯಾಗಿರುವ ಘಟನೆ…

57 mins ago

ಓದುಗರ ಪತ್ರ: ಕೊರಿಯನ್ ಗೇಮ್ಸ್ ನಿಷೇಧಿಸಿ

ಕೊರಿಯನ್ ಗೇಮ್ಸ್ ವ್ಯಸನದಿಂದ ಮಕ್ಕಳು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದು ಆತಂಕಕಾರಿ ಸಂಗತಿಯಾಗಿದೆ. ಇಂದು ನಮ್ಮ ಯುವಜನತೆ ಕೆ ಪಾಪ್ ಮತ್ತು ಕೆ…

6 hours ago

ಓದುಗರ ಪತ್ರ: ಖಾಲಿ ನಿವೇಶನದಲ್ಲಿರುವ ಕಸ ತೆರವುಗೊಳಿಸಿ

ಮೈಸೂರಿನ ಶ್ರೀರಾಂಪುರ ೨ನೇ ಹಂತದಲ್ಲಿ ನಿವೇಶನನವೊಂದು ಕಳೆದ ೨೬ ವರ್ಷಗಳಿಂದ ಖಾಲಿಬಿದ್ದಿದೆ. ಈ ಖಾಲಿ ನಿವೇಶನದಲ್ಲಿ ಅಕ್ಕಪಕ್ಕದ ಮನೆಯ ನಿವಾಸಿಗಳು…

6 hours ago

ಓದುಗರ ಪತ್ರ: ಬೆಳವಾಡಿ ಕೆರೆ ಸ್ವಚ್ಛಗೊಳಿಸಿ

ಮೈಸೂರು ತಾಲ್ಲೂಕಿನ ಬೆಳವಾಡಿ ಗ್ರಾಮದಲ್ಲಿ ಮೂಲಭೂತ ಸೌಕರ್ಯಗಳ ಅಭಿವೃದ್ಧಿಯಾಗಿರುವುದು ಸ್ವಾಗತಾರ್ಹ ಸಂಗತಿ. ಆದರೆ ಗ್ರಾಮದ ನೈಸರ್ಗಿಕ ಸಂಪತ್ತಾದ ‘ಬೆಳವಾಡಿ ಕೆರೆ’ಗೆ…

6 hours ago

‘ಮಾದಕ ವಸ್ತು ಮಾರಾಟ ಮಾಡಿದರೆ ಕ್ರಮ’

ನವೀನ್ ಡಿಸೋಜ ಜನವರಿಯಲ್ಲಿ ೬೩ ಎನ್‌ಡಿಪಿಎಸ್ ಪ್ರಕರಣಗಳು ದಾಖಲು; ಪೊಲೀಸರ ಕಾರ್ಯಕ್ಕೆ ಸಾರ್ವಜನಿಕರ ಮೆಚ್ಚುಗೆ ಮಡಿಕೇರಿ: ಮಾದಕ ವಸ್ತುಗಳ ಮಾರಾಟ…

6 hours ago