Andolana originals

ಸಫಾರಿಗೆ ಸ್ಥಳೀಯರ ಸ್ವಾಗತ… ರೈತ ಮುಖಂಡರ ವಿರೋಧ

ಪ್ರಶಾಂತ್ ಎನ್.ಮಲ್ಲಿಕ್

ಇಂದಿನಿಂದ ಬಂಡೀಪುರ-ನಾಗರಹೊಳೆ ರಾಷ್ಟ್ರೀಯ ಉದ್ಯಾನವನಗಳಲ್ಲಿ ವನ್ಯಜೀವಿ ಸಫಾರಿ ಪುನರಾರಂಭ 

ಮೈಸೂರು: ಬಂಡೀಪುರ ಹಾಗೂ ನಾಗರಹೊಳೆ ರಾಷ್ಟ್ರೀಯ ಉದ್ಯಾನವನಗಳಲ್ಲಿ ಕಳೆದ ಮೂರು ತಿಂಗಳಿನಿಂದ ಸ್ಥಗಿತಗೊಂಡಿದ್ದ ವನ್ಯಜೀವಿ ಸಫಾರಿಯನ್ನು ಅರಣ್ಯ ಇಲಾಖೆ ಪುನರಾರಂಭಿಸಿದೆ.

ಅರಣ್ಯ ಸಚಿವ ಈಶ್ವರ ಬಿ.ಖಂಡ್ರೆ ಅವರು ಕೆಲವು ಕಟ್ಟುನಿಟ್ಟಿನ ನಿಬಂಧನೆಗಳೊಂದಿಗೆ ಸಫಾರಿಯನ್ನು ಆರಂಭಿಸಲು ಆದೇಶ ಹೊರಡಿಸಿದ್ದಾರೆ. ಆದರೆ ಸರ್ಕಾರದ ಈ ನಿರ್ಧಾರಕ್ಕೆ ರೈತ ಮುಖಂಡರು ಹಾಗೂ ಪರಿಸರ ಪ್ರೇಮಿಗಳು ತೀವ್ರ ವಿರೋಧ ವ್ಯಕ್ತಪಡಿಸುತ್ತಿದ್ದು, ಮತ್ತೊಂದೆಡೆ ಸ್ಥಳೀಯರು ಸರ್ಕಾರದ ಈ ನಿರ್ಧಾರವನ್ನು ಸ್ವಾಗತಿಸಿದ್ದಾರೆ.

ಅರಣ್ಯ ಇಲಾಖೆಯ ತಾಂತ್ರಿಕ ಸಮಿತಿ ಸಲ್ಲಿಸಿದ ವರದಿ ಯನ್ನು ಆಧರಿಸಿ, ಮಾನವ-ವನ್ಯಜೀವಿ ಸಂಘರ್ಷ ನಿಯಂತ್ರಣ ಕ್ರಮಗಳನ್ನು ಬಲಪಡಿಸುವುದು, ಸಫಾರಿ ಮಾರ್ಗಗಳನ್ನು ಮರು ಪರಿಶೀಲಿಸುವುದು, ವಾಹನಗಳ ಸಂಖ್ಯೆಗೆ ಮಿತಿ ವಿಧಿಸುವುದು ಹಾಗೂ ಸಮಯ ನಿಯಂತ್ರಣ ಸೇರಿದಂತೆ ಹಲವು ಷರತ್ತುಗಳನ್ನು ಹೇರಿ ಸಫಾರಿ ಪುನರಾರಂಭಿಸುವ ಆದೇಶ ಹೊರಡಿಸಿದೆ.

ಈ ಬಗ್ಗೆ ರೈತ ಹೋರಾಟಗಾರರು ಪ್ರತಿಕ್ರಿಯಿಸಿ, ‘ಕಾಡಂಚಿನ ಗ್ರಾಮಗಳಲ್ಲಿ ಆತಂಕದ ವಾತಾವರಣ ಇನ್ನೂ ದೂರವಾಗಿಲ್ಲ. ವನ್ಯಜೀವಿ-ಮಾನವ ಸಂಘರ್ಷ ಸಂಪೂರ್ಣ ನಿಯಂತ್ರಣಕ್ಕೆ ಬಂದಿಲ್ಲ. ಕಾಡನ್ನು ಭವಿಷ್ಯದ ಪೀಳಿಗೆಗೆ ರಕ್ಷಿಸಬೇಕಿದೆ.

ಸಫಾರಿ ವಾಹನಗಳ ಶಬ್ದಕ್ಕೆ ಹೆದರಿ ಪ್ರಾಣಿಗಳು ಕಾಡಿನಿಂದ ಹೊರಗಡೆ ಬರುತ್ತವೆ, ಇದರಿಂದ ಕಾಡಂಚಿನ ಭಾಗದಲ್ಲಿ ವ್ಯವಸಾಯ ಮಾಡುವ ರೈತರಿಗೆ ಹಾಗೂ ನಿವಾಸಿಗಳಿಗೆ ತೊಂದರೆ ಉಂಟಾಗಲಿದೆ, ಇಂತಹ ಸಂದರ್ಭದಲ್ಲಿ ಸಫಾರಿ ಪುನರಾರಂಭಿಸುವುದು ಸರಿಯಲ್ಲ ಎಂದರು.

ಸಫಾರಿ ಪುನರಾರಂಭದ ಹಿನ್ನೆಲೆಯಲ್ಲಿ ಸ್ಥಳೀಯರ ಬೆಂಬಲ ಇನ್ನಷ್ಟು ಗಟ್ಟಿಯಾಗುತ್ತಿದೆ. ವಿಶೇಷವಾಗಿ ಸಫಾರಿ ವಲಯಕ್ಕೆ ಹೊಂದಿಕೊಂಡಿರುವ ಗ್ರಾಮಗಳ ನಿವಾಸಿಗಳು, ಇದು ಕೇವಲ ಪ್ರವಾಸೋದ್ಯಮದ ವಿಚಾರವಲ್ಲ ತಮ್ಮ ಬದುಕಿನ ಪ್ರಶ್ನೆ ಎಂದು ಹೇಳುತ್ತಿದ್ದಾರೆ.

ಈ ಭಾಗದ ಯುವಕರಿಗೆ ಇದರಿಂದ ಉದ್ಯೋಗ ಸಿಗಲಿದೆ, ಜೀಪ್ ಚಾಲಕರು, ಮಾರ್ಗದರ್ಶಕರು, ಟಿಕೆಟ್ ಕೌಂಟರ್ ಸಿಬ್ಬಂದಿ, ಅರಣ್ಯ ವಾಚರ್‌ಗಳು ಸೇರಿದಂತೆ ಅನೇಕ ಯುವಕರಿಗೆ ಉದ್ಯೋಗ ಸಿಗುತ್ತದೆ. ಹೋಟೆಲ್, ಲಾಡ್ಜ್, ಹೋಂಸ್ಟೇ ಗಳಲ್ಲಿ ವ್ಯಾಪಾರ ವಹಿವಾಟು ನಡೆಯಲಿದೆ, ಇದರಿಂದ ಸ್ಥಳೀಯರಿಗೆ ಅನುಕೂಲವಾಗಿ ಮಾರಾಟಗಾರರು ಸೇರಿದಂತೆ ಹಲವಾರು ಸಣ್ಣ ವ್ಯಾಪಾರಿಗಳು ಆದಾಯ ಗಳಿಸುತ್ತಾರೆ. ಪ್ರವಾಸಿಗರ ಓಡಾಟದಿಂದ ಸಾರಿಗೆ, ಕೃಷಿ ಉತ್ಪನ್ನಗಳ ಮಾರಾಟ, ಹಾಲು ಮತ್ತು ತರಕಾರಿ ಪೂರೈಕೆ ಹೆಚ್ಚುತ್ತದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.

‘ಸಫಾರಿ ನಮಗೆ ಕೇವಲ ವೀಕ್ಷಣಾ ಕಾರ್ಯಕ್ರಮವಲ್ಲ ಇದು ನಮ್ಮ ಕುಟುಂಬಗಳ ಬದುಕಿನ ಆಧಾರ. ಮೂರು ತಿಂಗಳು ಬಂದ್ ಆಗಿದ್ದ ಪರಿಣಾಮ ಸಾಲಬಾಧೆ ಹೆಚ್ಚಾಗಿದೆ. ಯುವಕರು ನಗರಗಳಿಗೆ ವಲಸೆ ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ” ಎಂದು ಸ್ಥಳೀಯರು ಅಳಲು ತೋಡಿಕೊಡಿಕೊಂಡಿದ್ದಾರೆ.

ವನ್ಯಜೀವಿ-ಮಾನವ ಸಂಘರ್ಷದ ಹಿನ್ನೆಲೆ: 

ಕಳೆದ ಸೆಪ್ಟೆಂಬರ್, ಅಕ್ಟೋಬರ್ ಹಾಗೂ ನವೆಂಬರ್ ತಿಂಗಳುಗಳ ಮೈಸೂರು ಜಿಲ್ಲೆಯ ಎಚ್.ಡಿ. ಕೋಟೆ ಕಾಡಂಚಿನ ಪ್ರದೇಶಗಳಲ್ಲಿ ಹುಲಿ, ಚಿರತೆ ದಾಳಿಗಳು ಹೆಚ್ಚಾಗಿ ಅನೇಕ ಮಂದಿ ಪ್ರಾಣ ಕಳೆದುಕೊಂಡಿದ್ದರು. ಜೊತೆಗೆ ಸಾಕಷ್ಟು ಜಾನುವಾರುಗಳೂ ಕಾಡು ಪ್ರಾಣಿಗಳ ದಾಳಿಗೆ ಬಲಿಯಾಗಿದ್ದವು. ಈ ಘಟನೆಗಳ ಹಿನ್ನೆಲೆಯಲ್ಲಿ ಸ್ಥಳೀಯರು ಪ್ರತಿಭಟನೆ ನಡೆಸಿ, ಸಫಾರಿ ಹಾಗೂ ಅರಣ್ಯ ಪ್ರದೇಶದಲ್ಲಿನ ರೆಸಾರ್ಟ್‌ಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು. ಪರಿಸ್ಥಿತಿಯನ್ನು ಗಮನಿಸಿದ ಸಚಿವರು ಬಂಡೀಪುರ ಹಾಗೂ ನಾಗರಹೊಳೆ ಅರಣ್ಯಗಳಲ್ಲಿ ಸಫಾರಿಯನ್ನು ತಾತ್ಕಾಲಿಕವಾಗಿ ಬಂದ್ ಮಾಡುವಂತೆ ಆದೇಶಿಸಿದ್ದರು.

” ಈಗಾಗಲೇ ಹೋಟೆಲ್, ರೆಸಾರ್ಟ್‌ಗಳನ್ನು ಮುಚ್ಚಿರುವುದರಿಂದ ಸಾವಿರಾರು ಯುವಕರು ಉದ್ಯೋಗವಿಲ್ಲದೆ ಸಂಕಷ್ಟದಲ್ಲಿದ್ದಾರೆ. ಎಷ್ಟೋ ಹೋಟೆಲ್‌ಗಳು ಮುಚ್ಚಿ ಹೋಗಿವೆ. ಯುವಕರ ಉದ್ಯೋಗದ ದೃಷ್ಟಿಯಿಂದ ಸಫಾರಿ ಪುನರಾರಂಭಿಸಬೇಕು.”

-ರಾಣಿ, ಸ್ಥಳೀಯ ನಿವಾಸಿ

” ಪ್ರಾಣಿಗಳಿಗೆ ತೊಂದರೆ ಕೊಡಬಾರದು. ಸಫಾರಿ ಬಂದ್ ಆದ ನಂತರ ಹುಲಿ-ಚಿರತೆ ದಾಳಿ ನಡೆದಿಲ್ಲ. ಸಫಾರಿ ಪ್ರಾರಂಭವಾದರೆ ಪಟ್ಟಭದ್ರ ಹಿತಾಸಕ್ತಿಗಳಿಗೆ ಮಾತ್ರ ಅನುಕೂಲವಾಗಲಿದೆ. ಮುಂದಿನ ಪೀಳಿಗೆಗೆ ಅರಣ್ಯ ಉಳಿಸಲು ಸಫಾರಿ ಬಂದ್ ಮಾಡಬೇಕು.”

-ಹೊನ್ನೂರ್ ಪ್ರಕಾಶ್, ರೈತ ಮುಖಂಡ

” ಬಂಡೀಪುರ ವನ್ಯಧಾಮದಲ್ಲಿ ಹುಲಿಗಳ ಸಂತತಿ ಹೆಚ್ಚಾಗಿದೆ. ಪ್ರಾಣಿಗಳು ಆಹಾರ ಸಿಗದೆ ಅರಣ್ಯದಿಂದ ಹೊರಬರುತ್ತವೆಯೇ ಹೊರತು ಸಫಾರಿ ವಾಹನಕ್ಕೆ ಹೆದರಿ ಕಾಡಿನಿಂದ ಹೊರಬರುವುದಿಲ್ಲ.”

-ಚಿನ್ನಸ್ವಾಮಿ, ಗ್ರಾಪಂ ಸದಸ್ಯ, ಮೂಗನಹಳ್ಳಿ

” ನಾವು ಆದಿವಾಸಿಗಳು, ಕಾಡಿನಲ್ಲೇ ಹುಟ್ಟಿ ಬೆಳೆದವರು. ನಮಗೆ ಸಫಾರಿ ಬೇಕು. ಎಚ್.ಡಿ.ಕೋಟೆ ಭಾಗದಲ್ಲಿ ನಡೆದ ಚಿರತೆ, ಹುಲಿ ದಾಳಿಗೂ ಬಂಡೀಪುರಕ್ಕೂ ಸಂಬಂಧವಿಲ್ಲ. ಸಫಾರಿಯಿಂದ ನಮಗೆ ಅನುಕೂಲವಿದೆ.”

-ಪುಟ್ಟಮ್ಮ, ಸ್ಥಳೀಯ ನಿವಾಸಿ

 

 

ಆಂದೋಲನ ಡೆಸ್ಕ್

Recent Posts

ಪಾಕಿಸ್ತಾನದಲ್ಲಿ ಭೀಕರ ಬಾಂಬ್‌ ಸ್ಫೋಟ: 9 ಮಂದಿ ಸಾವು

ಪಾಕಿಸ್ತಾನ: ಇಲ್ಲಿನ ವಾಯುವ್ಯ ಭಾಗದ ಮಾರುಕಟ್ಟೆಯೊಂದರಲ್ಲಿ ರಿಕ್ಷಾಗೆ ಅಳವಡಿಸಿದ್ದ ಬಾಂಬ್‌ ಸ್ಫೋಟಗೊಂಡ ಪರಿಣಾಮ 9 ಮಂದಿ ಸಾವನ್ನಪ್ಪಿದ್ದು, ಹಲವರಿಗೆ ಗಂಭೀರ…

2 seconds ago

ನಾಳೆಯಿಂದ ಎರಡು ದಿನ ಸಿದ್ದರಾಮಯ್ಯ ಮೈಸೂರು ಪ್ರವಾಸ

ಮೈಸೂರು: ನಾಳೆಯಿಂದ ಎರಡು ದಿನಗಳ ಕಾಲ ಸಿಎಂ ಸಿದ್ದರಾಮಯ್ಯ ಮೈಸೂರು ಜಿಲ್ಲಾ ಪ್ರವಾಸ ಕೈಗೊಂಡಿದ್ದಾರೆ. ನಾಳೆ ಸಂಜೆ 5.30ಕ್ಕೆ ವಿಶೇಷ…

33 seconds ago

ವನ್ಯಜೀವಿ ಸಂಚಾರವಿರುವ ಚಾರಣಪಥ, ಸಂಚಾರಪಥ ಸ್ಥಗಿತಕ್ಕೆ ಸಚಿವ ಈಶ್ವರ ಖಂಡ್ರೆ ಸೂಚನೆ

ಬೆಂಗಳೂರು: ಚಾಮರಾಜನಗರದ ನಾಗಮಲೆ ಅರಣ್ಯದಲ್ಲಿ ಚಿರತೆ ದಾಳಿಯಿಂದ 10 ವರ್ಷದ ಬಾಲಕ ಮೃತಪಟ್ಟಿರುವ ಹಿನ್ನೆಲೆಯಲ್ಲಿ ವನ್ಯಜೀವಿ ಸಂಚಾರ ಇರುವ ಎಲ್ಲ…

1 min ago

ನಾಗಮಲೆ ಗ್ರಾಮದಲ್ಲಿ ಎರಡು ಮೇಕೆ ಹೊತ್ತೊಯ್ದ ಚಿರತೆ: ಮತ್ತಷ್ಟು ಆತಂಕ

ಮಹಾದೇಶ್‌ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು ಹನೂರು: ತಾಲ್ಲೂಕಿನ ಮಲೆ ಮಹದೇಶ್ವರ ಬೆಟ್ಟ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಇಂಡಿಗನತ್ತ…

2 mins ago

ಮೇ.3ರಂದು ನಡೆದಿದ್ದ ನೀಟ್‌ ಪರೀಕ್ಷೆ ರದ್ದು

ನವದೆಹಲಿ: ಮೇ.3ರಂದು ನಡೆದಿದ್ದ ನೀಟ್‌ ಯುಜಿ ಪರೀಕ್ಷೆಯನ್ನು ರಾಷ್ಟ್ರೀಯ ಪರೀಕ್ಷಾ ಏಜೆನ್ಸಿ ರದ್ದುಗೊಳಿಸಿದೆ. ಪ್ರಶ್ನೆ ಪತ್ರಿಕೆ ಸೋರಿಕೆಯಾದ ಹಿನ್ನೆಲೆಯಲ್ಲಿ ಎನ್‌ಜಿಎ…

1 hour ago

ಅಸ್ಸಾಂ ಸಿಎಂ ಆಗಿ ಹಿಮಂತ ಬಿಸ್ವಾ ಶರ್ಮಾ ಪ್ರಮಾಣವಚನ ಸ್ವೀಕಾರ

ಗುವಾಹಟಿ: ಹಿಮಂತ ಬಿಸ್ವಾ ಶರ್ಮಾ ಅವರು ಸತತ ಎರಡನೇ ಬಾರಿಗೆ ಅಸ್ಸಾಂನ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದರು. ಗುವಾಹಟಿಯ ಖಾನಾಪಾರಾದಲ್ಲಿರುವ ಪಶುವೈದ್ಯಕೀಯ…

2 hours ago