Andolana originals

ಸಫಾರಿಗೆ ಸ್ಥಳೀಯರ ಸ್ವಾಗತ… ರೈತ ಮುಖಂಡರ ವಿರೋಧ

ಪ್ರಶಾಂತ್ ಎನ್.ಮಲ್ಲಿಕ್

ಇಂದಿನಿಂದ ಬಂಡೀಪುರ-ನಾಗರಹೊಳೆ ರಾಷ್ಟ್ರೀಯ ಉದ್ಯಾನವನಗಳಲ್ಲಿ ವನ್ಯಜೀವಿ ಸಫಾರಿ ಪುನರಾರಂಭ 

ಮೈಸೂರು: ಬಂಡೀಪುರ ಹಾಗೂ ನಾಗರಹೊಳೆ ರಾಷ್ಟ್ರೀಯ ಉದ್ಯಾನವನಗಳಲ್ಲಿ ಕಳೆದ ಮೂರು ತಿಂಗಳಿನಿಂದ ಸ್ಥಗಿತಗೊಂಡಿದ್ದ ವನ್ಯಜೀವಿ ಸಫಾರಿಯನ್ನು ಅರಣ್ಯ ಇಲಾಖೆ ಪುನರಾರಂಭಿಸಿದೆ.

ಅರಣ್ಯ ಸಚಿವ ಈಶ್ವರ ಬಿ.ಖಂಡ್ರೆ ಅವರು ಕೆಲವು ಕಟ್ಟುನಿಟ್ಟಿನ ನಿಬಂಧನೆಗಳೊಂದಿಗೆ ಸಫಾರಿಯನ್ನು ಆರಂಭಿಸಲು ಆದೇಶ ಹೊರಡಿಸಿದ್ದಾರೆ. ಆದರೆ ಸರ್ಕಾರದ ಈ ನಿರ್ಧಾರಕ್ಕೆ ರೈತ ಮುಖಂಡರು ಹಾಗೂ ಪರಿಸರ ಪ್ರೇಮಿಗಳು ತೀವ್ರ ವಿರೋಧ ವ್ಯಕ್ತಪಡಿಸುತ್ತಿದ್ದು, ಮತ್ತೊಂದೆಡೆ ಸ್ಥಳೀಯರು ಸರ್ಕಾರದ ಈ ನಿರ್ಧಾರವನ್ನು ಸ್ವಾಗತಿಸಿದ್ದಾರೆ.

ಅರಣ್ಯ ಇಲಾಖೆಯ ತಾಂತ್ರಿಕ ಸಮಿತಿ ಸಲ್ಲಿಸಿದ ವರದಿ ಯನ್ನು ಆಧರಿಸಿ, ಮಾನವ-ವನ್ಯಜೀವಿ ಸಂಘರ್ಷ ನಿಯಂತ್ರಣ ಕ್ರಮಗಳನ್ನು ಬಲಪಡಿಸುವುದು, ಸಫಾರಿ ಮಾರ್ಗಗಳನ್ನು ಮರು ಪರಿಶೀಲಿಸುವುದು, ವಾಹನಗಳ ಸಂಖ್ಯೆಗೆ ಮಿತಿ ವಿಧಿಸುವುದು ಹಾಗೂ ಸಮಯ ನಿಯಂತ್ರಣ ಸೇರಿದಂತೆ ಹಲವು ಷರತ್ತುಗಳನ್ನು ಹೇರಿ ಸಫಾರಿ ಪುನರಾರಂಭಿಸುವ ಆದೇಶ ಹೊರಡಿಸಿದೆ.

ಈ ಬಗ್ಗೆ ರೈತ ಹೋರಾಟಗಾರರು ಪ್ರತಿಕ್ರಿಯಿಸಿ, ‘ಕಾಡಂಚಿನ ಗ್ರಾಮಗಳಲ್ಲಿ ಆತಂಕದ ವಾತಾವರಣ ಇನ್ನೂ ದೂರವಾಗಿಲ್ಲ. ವನ್ಯಜೀವಿ-ಮಾನವ ಸಂಘರ್ಷ ಸಂಪೂರ್ಣ ನಿಯಂತ್ರಣಕ್ಕೆ ಬಂದಿಲ್ಲ. ಕಾಡನ್ನು ಭವಿಷ್ಯದ ಪೀಳಿಗೆಗೆ ರಕ್ಷಿಸಬೇಕಿದೆ.

ಸಫಾರಿ ವಾಹನಗಳ ಶಬ್ದಕ್ಕೆ ಹೆದರಿ ಪ್ರಾಣಿಗಳು ಕಾಡಿನಿಂದ ಹೊರಗಡೆ ಬರುತ್ತವೆ, ಇದರಿಂದ ಕಾಡಂಚಿನ ಭಾಗದಲ್ಲಿ ವ್ಯವಸಾಯ ಮಾಡುವ ರೈತರಿಗೆ ಹಾಗೂ ನಿವಾಸಿಗಳಿಗೆ ತೊಂದರೆ ಉಂಟಾಗಲಿದೆ, ಇಂತಹ ಸಂದರ್ಭದಲ್ಲಿ ಸಫಾರಿ ಪುನರಾರಂಭಿಸುವುದು ಸರಿಯಲ್ಲ ಎಂದರು.

ಸಫಾರಿ ಪುನರಾರಂಭದ ಹಿನ್ನೆಲೆಯಲ್ಲಿ ಸ್ಥಳೀಯರ ಬೆಂಬಲ ಇನ್ನಷ್ಟು ಗಟ್ಟಿಯಾಗುತ್ತಿದೆ. ವಿಶೇಷವಾಗಿ ಸಫಾರಿ ವಲಯಕ್ಕೆ ಹೊಂದಿಕೊಂಡಿರುವ ಗ್ರಾಮಗಳ ನಿವಾಸಿಗಳು, ಇದು ಕೇವಲ ಪ್ರವಾಸೋದ್ಯಮದ ವಿಚಾರವಲ್ಲ ತಮ್ಮ ಬದುಕಿನ ಪ್ರಶ್ನೆ ಎಂದು ಹೇಳುತ್ತಿದ್ದಾರೆ.

ಈ ಭಾಗದ ಯುವಕರಿಗೆ ಇದರಿಂದ ಉದ್ಯೋಗ ಸಿಗಲಿದೆ, ಜೀಪ್ ಚಾಲಕರು, ಮಾರ್ಗದರ್ಶಕರು, ಟಿಕೆಟ್ ಕೌಂಟರ್ ಸಿಬ್ಬಂದಿ, ಅರಣ್ಯ ವಾಚರ್‌ಗಳು ಸೇರಿದಂತೆ ಅನೇಕ ಯುವಕರಿಗೆ ಉದ್ಯೋಗ ಸಿಗುತ್ತದೆ. ಹೋಟೆಲ್, ಲಾಡ್ಜ್, ಹೋಂಸ್ಟೇ ಗಳಲ್ಲಿ ವ್ಯಾಪಾರ ವಹಿವಾಟು ನಡೆಯಲಿದೆ, ಇದರಿಂದ ಸ್ಥಳೀಯರಿಗೆ ಅನುಕೂಲವಾಗಿ ಮಾರಾಟಗಾರರು ಸೇರಿದಂತೆ ಹಲವಾರು ಸಣ್ಣ ವ್ಯಾಪಾರಿಗಳು ಆದಾಯ ಗಳಿಸುತ್ತಾರೆ. ಪ್ರವಾಸಿಗರ ಓಡಾಟದಿಂದ ಸಾರಿಗೆ, ಕೃಷಿ ಉತ್ಪನ್ನಗಳ ಮಾರಾಟ, ಹಾಲು ಮತ್ತು ತರಕಾರಿ ಪೂರೈಕೆ ಹೆಚ್ಚುತ್ತದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.

‘ಸಫಾರಿ ನಮಗೆ ಕೇವಲ ವೀಕ್ಷಣಾ ಕಾರ್ಯಕ್ರಮವಲ್ಲ ಇದು ನಮ್ಮ ಕುಟುಂಬಗಳ ಬದುಕಿನ ಆಧಾರ. ಮೂರು ತಿಂಗಳು ಬಂದ್ ಆಗಿದ್ದ ಪರಿಣಾಮ ಸಾಲಬಾಧೆ ಹೆಚ್ಚಾಗಿದೆ. ಯುವಕರು ನಗರಗಳಿಗೆ ವಲಸೆ ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ” ಎಂದು ಸ್ಥಳೀಯರು ಅಳಲು ತೋಡಿಕೊಡಿಕೊಂಡಿದ್ದಾರೆ.

ವನ್ಯಜೀವಿ-ಮಾನವ ಸಂಘರ್ಷದ ಹಿನ್ನೆಲೆ: 

ಕಳೆದ ಸೆಪ್ಟೆಂಬರ್, ಅಕ್ಟೋಬರ್ ಹಾಗೂ ನವೆಂಬರ್ ತಿಂಗಳುಗಳ ಮೈಸೂರು ಜಿಲ್ಲೆಯ ಎಚ್.ಡಿ. ಕೋಟೆ ಕಾಡಂಚಿನ ಪ್ರದೇಶಗಳಲ್ಲಿ ಹುಲಿ, ಚಿರತೆ ದಾಳಿಗಳು ಹೆಚ್ಚಾಗಿ ಅನೇಕ ಮಂದಿ ಪ್ರಾಣ ಕಳೆದುಕೊಂಡಿದ್ದರು. ಜೊತೆಗೆ ಸಾಕಷ್ಟು ಜಾನುವಾರುಗಳೂ ಕಾಡು ಪ್ರಾಣಿಗಳ ದಾಳಿಗೆ ಬಲಿಯಾಗಿದ್ದವು. ಈ ಘಟನೆಗಳ ಹಿನ್ನೆಲೆಯಲ್ಲಿ ಸ್ಥಳೀಯರು ಪ್ರತಿಭಟನೆ ನಡೆಸಿ, ಸಫಾರಿ ಹಾಗೂ ಅರಣ್ಯ ಪ್ರದೇಶದಲ್ಲಿನ ರೆಸಾರ್ಟ್‌ಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು. ಪರಿಸ್ಥಿತಿಯನ್ನು ಗಮನಿಸಿದ ಸಚಿವರು ಬಂಡೀಪುರ ಹಾಗೂ ನಾಗರಹೊಳೆ ಅರಣ್ಯಗಳಲ್ಲಿ ಸಫಾರಿಯನ್ನು ತಾತ್ಕಾಲಿಕವಾಗಿ ಬಂದ್ ಮಾಡುವಂತೆ ಆದೇಶಿಸಿದ್ದರು.

” ಈಗಾಗಲೇ ಹೋಟೆಲ್, ರೆಸಾರ್ಟ್‌ಗಳನ್ನು ಮುಚ್ಚಿರುವುದರಿಂದ ಸಾವಿರಾರು ಯುವಕರು ಉದ್ಯೋಗವಿಲ್ಲದೆ ಸಂಕಷ್ಟದಲ್ಲಿದ್ದಾರೆ. ಎಷ್ಟೋ ಹೋಟೆಲ್‌ಗಳು ಮುಚ್ಚಿ ಹೋಗಿವೆ. ಯುವಕರ ಉದ್ಯೋಗದ ದೃಷ್ಟಿಯಿಂದ ಸಫಾರಿ ಪುನರಾರಂಭಿಸಬೇಕು.”

-ರಾಣಿ, ಸ್ಥಳೀಯ ನಿವಾಸಿ

” ಪ್ರಾಣಿಗಳಿಗೆ ತೊಂದರೆ ಕೊಡಬಾರದು. ಸಫಾರಿ ಬಂದ್ ಆದ ನಂತರ ಹುಲಿ-ಚಿರತೆ ದಾಳಿ ನಡೆದಿಲ್ಲ. ಸಫಾರಿ ಪ್ರಾರಂಭವಾದರೆ ಪಟ್ಟಭದ್ರ ಹಿತಾಸಕ್ತಿಗಳಿಗೆ ಮಾತ್ರ ಅನುಕೂಲವಾಗಲಿದೆ. ಮುಂದಿನ ಪೀಳಿಗೆಗೆ ಅರಣ್ಯ ಉಳಿಸಲು ಸಫಾರಿ ಬಂದ್ ಮಾಡಬೇಕು.”

-ಹೊನ್ನೂರ್ ಪ್ರಕಾಶ್, ರೈತ ಮುಖಂಡ

” ಬಂಡೀಪುರ ವನ್ಯಧಾಮದಲ್ಲಿ ಹುಲಿಗಳ ಸಂತತಿ ಹೆಚ್ಚಾಗಿದೆ. ಪ್ರಾಣಿಗಳು ಆಹಾರ ಸಿಗದೆ ಅರಣ್ಯದಿಂದ ಹೊರಬರುತ್ತವೆಯೇ ಹೊರತು ಸಫಾರಿ ವಾಹನಕ್ಕೆ ಹೆದರಿ ಕಾಡಿನಿಂದ ಹೊರಬರುವುದಿಲ್ಲ.”

-ಚಿನ್ನಸ್ವಾಮಿ, ಗ್ರಾಪಂ ಸದಸ್ಯ, ಮೂಗನಹಳ್ಳಿ

” ನಾವು ಆದಿವಾಸಿಗಳು, ಕಾಡಿನಲ್ಲೇ ಹುಟ್ಟಿ ಬೆಳೆದವರು. ನಮಗೆ ಸಫಾರಿ ಬೇಕು. ಎಚ್.ಡಿ.ಕೋಟೆ ಭಾಗದಲ್ಲಿ ನಡೆದ ಚಿರತೆ, ಹುಲಿ ದಾಳಿಗೂ ಬಂಡೀಪುರಕ್ಕೂ ಸಂಬಂಧವಿಲ್ಲ. ಸಫಾರಿಯಿಂದ ನಮಗೆ ಅನುಕೂಲವಿದೆ.”

-ಪುಟ್ಟಮ್ಮ, ಸ್ಥಳೀಯ ನಿವಾಸಿ

 

 

ಆಂದೋಲನ ಡೆಸ್ಕ್

Recent Posts

ವಿಧಾನಸಭೆಯಲ್ಲಿ ಹನೂರು ಎನ್‌ಕೌಂಟರ್‌ ಸದ್ದು: ಗದ್ದಲ ಕೋಲಾಹಲ

ಬೆಂಗಳೂರು: ವಿಧಾನಸಭೆಯ ಕಲಾಪದಲ್ಲಿಂದು ಹನೂರು ಎನ್‌ಕೌಂಟರ್‌ ಪ್ರಕರಣ ಭಾರೀ ಚರ್ಚೆಗೆ ಕಾರಣವಾಯಿತು. ಕಲಾಪ ಆರಂಭವಾದ ತಕ್ಷಣವೇ ವಿಷಯ ಪ್ರಸ್ತಾಪಿಸಿದ ಆರ್.ಅಶೋಕ್‌,…

2 hours ago

ಕಾರ್ಮಿಕರ ಮೇಲೆ ಕಾಡಾನೆ ದಾಳಿ: ಒಬ್ಬ ಸಾವು, ಮತ್ತೊಬ್ಬನ ಸ್ಥಿತಿ ಗಂಭೀರ

ಕೊಡಗು: ಸಿದ್ದಾಪುರ ವ್ಯಾಪ್ತಿಯ ಶಿಲ್ಪ ಎಸ್ಟೇಟ್‌ನಲ್ಲಿ ಕೆಲಸ ನಿರ್ವಹಿಸುತ್ತಿದ್ದ ಕಾರ್ಮಿಕರ ಮೇಲೆ ಕಾಡಾನೆ ಏಕಾಏಕಿ ದಾಳಿ ನಡೆಸಿದೆ. ಬಂಗಾಳ ಮೂಲದ…

4 hours ago

ಕಾವೇರಿ ವನ್ಯಜೀವಿಧಾಮದಲ್ಲಿ ಎನ್‌ಕೌಂಟರ್: ಮೃತ 3 ಕುಟುಂಬಗಳಿಗೆ ಶಾಸಕ ಎಂ.ಆರ್. ಮಂಜುನಾಥ್ 15 ಲಕ್ಷ ಪರಿಹಾರ

ಮಹಾದೇಶ್‌ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು ಹನೂರು: ಕಾವೇರಿ ವನ್ಯಜೀವಿಧಾಮದಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳ ಗುಂಡಿನ ದಾಳಿಗೆ ಬಲಿಯಾಗಿದ್ದ…

4 hours ago

ಹನೂರಿನಲ್ಲಿ ಮೂವರ ಎನ್‌ಕೌಂಟರ್ ಪ್ರಕರಣ: ಘಟನಾ ಸ್ಥಳಕ್ಕೆ ತನಿಖಾ ತಂಡ ಭೇಟಿ

ಮಹಾದೇಶ್‌ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು ಹನೂರು: ತಾಲ್ಲೂಕಿನ ಕಾವೇರಿ ವನ್ಯಜೀವಿ ಧಾಮ ವ್ಯಾಪ್ತಿಯಲ್ಲಿ ನಡೆದ ಎನ್‌ಕೌಂಟರ್ ಘಟನೆಯ…

5 hours ago

ವಿಚಾರಣೆ ಇಲ್ಲದೆ ಶಿಕ್ಷೆ ಕೊಡಲು ಸಂವಿಧಾನ ಒಪ್ಪುವುದಿಲ್ಲ

ಚಾಮರಾಜನಗರ ಜಿಲ್ಲೆಯ ಹನೂರು ತಾಲ್ಲೂಕಿನ ಕಾವೇರಿ ವನ್ಯಜೀವಿಧಾಮದ ಹನೂರು ವಲಯದ ಶಾಗ್ಯ ಬೀಟ್ ವ್ಯಾಪ್ತಿಯ ಹೊಳೆಮುರಿ ದಟ್ಟಿ ಅರಣ್ಯ ಪ್ರದೇಶದಲ್ಲಿ…

8 hours ago

ಆ ಮೂರು ಜೀವಗಳಿಗೂ ಬೆಲೆಯೇ ಇರಲಿಲ್ಲವೇ?

ಅನ್ಬುರಾಜ್ ಅರಣ್ಯ ಇಲಾಖೆ ಮತ್ತೆ ತನ್ನ ಇತಿಹಾಸವನ್ನು ಹಿಂದಕ್ಕೆ ಕೊಂಡೊಯ್ಯುತ್ತಿರುವಂತೆ ಕಾಣುತ್ತಿದೆ. ಜನವಿರೋಧಿ ಧೋರಣೆಯನ್ನು ಅನುಸರಿಸಿ, ಅರಣ್ಯದ ಅಂಚಿನಲ್ಲಿ ವಾಸಿಸುವ…

8 hours ago