ಪ್ರಶಾಂತ್ ಎನ್.ಮಲ್ಲಿಕ್
ಇಂದಿನಿಂದ ಬಂಡೀಪುರ-ನಾಗರಹೊಳೆ ರಾಷ್ಟ್ರೀಯ ಉದ್ಯಾನವನಗಳಲ್ಲಿ ವನ್ಯಜೀವಿ ಸಫಾರಿ ಪುನರಾರಂಭ
ಮೈಸೂರು: ಬಂಡೀಪುರ ಹಾಗೂ ನಾಗರಹೊಳೆ ರಾಷ್ಟ್ರೀಯ ಉದ್ಯಾನವನಗಳಲ್ಲಿ ಕಳೆದ ಮೂರು ತಿಂಗಳಿನಿಂದ ಸ್ಥಗಿತಗೊಂಡಿದ್ದ ವನ್ಯಜೀವಿ ಸಫಾರಿಯನ್ನು ಅರಣ್ಯ ಇಲಾಖೆ ಪುನರಾರಂಭಿಸಿದೆ.
ಅರಣ್ಯ ಸಚಿವ ಈಶ್ವರ ಬಿ.ಖಂಡ್ರೆ ಅವರು ಕೆಲವು ಕಟ್ಟುನಿಟ್ಟಿನ ನಿಬಂಧನೆಗಳೊಂದಿಗೆ ಸಫಾರಿಯನ್ನು ಆರಂಭಿಸಲು ಆದೇಶ ಹೊರಡಿಸಿದ್ದಾರೆ. ಆದರೆ ಸರ್ಕಾರದ ಈ ನಿರ್ಧಾರಕ್ಕೆ ರೈತ ಮುಖಂಡರು ಹಾಗೂ ಪರಿಸರ ಪ್ರೇಮಿಗಳು ತೀವ್ರ ವಿರೋಧ ವ್ಯಕ್ತಪಡಿಸುತ್ತಿದ್ದು, ಮತ್ತೊಂದೆಡೆ ಸ್ಥಳೀಯರು ಸರ್ಕಾರದ ಈ ನಿರ್ಧಾರವನ್ನು ಸ್ವಾಗತಿಸಿದ್ದಾರೆ.
ಅರಣ್ಯ ಇಲಾಖೆಯ ತಾಂತ್ರಿಕ ಸಮಿತಿ ಸಲ್ಲಿಸಿದ ವರದಿ ಯನ್ನು ಆಧರಿಸಿ, ಮಾನವ-ವನ್ಯಜೀವಿ ಸಂಘರ್ಷ ನಿಯಂತ್ರಣ ಕ್ರಮಗಳನ್ನು ಬಲಪಡಿಸುವುದು, ಸಫಾರಿ ಮಾರ್ಗಗಳನ್ನು ಮರು ಪರಿಶೀಲಿಸುವುದು, ವಾಹನಗಳ ಸಂಖ್ಯೆಗೆ ಮಿತಿ ವಿಧಿಸುವುದು ಹಾಗೂ ಸಮಯ ನಿಯಂತ್ರಣ ಸೇರಿದಂತೆ ಹಲವು ಷರತ್ತುಗಳನ್ನು ಹೇರಿ ಸಫಾರಿ ಪುನರಾರಂಭಿಸುವ ಆದೇಶ ಹೊರಡಿಸಿದೆ.
ಈ ಬಗ್ಗೆ ರೈತ ಹೋರಾಟಗಾರರು ಪ್ರತಿಕ್ರಿಯಿಸಿ, ‘ಕಾಡಂಚಿನ ಗ್ರಾಮಗಳಲ್ಲಿ ಆತಂಕದ ವಾತಾವರಣ ಇನ್ನೂ ದೂರವಾಗಿಲ್ಲ. ವನ್ಯಜೀವಿ-ಮಾನವ ಸಂಘರ್ಷ ಸಂಪೂರ್ಣ ನಿಯಂತ್ರಣಕ್ಕೆ ಬಂದಿಲ್ಲ. ಕಾಡನ್ನು ಭವಿಷ್ಯದ ಪೀಳಿಗೆಗೆ ರಕ್ಷಿಸಬೇಕಿದೆ.
ಸಫಾರಿ ವಾಹನಗಳ ಶಬ್ದಕ್ಕೆ ಹೆದರಿ ಪ್ರಾಣಿಗಳು ಕಾಡಿನಿಂದ ಹೊರಗಡೆ ಬರುತ್ತವೆ, ಇದರಿಂದ ಕಾಡಂಚಿನ ಭಾಗದಲ್ಲಿ ವ್ಯವಸಾಯ ಮಾಡುವ ರೈತರಿಗೆ ಹಾಗೂ ನಿವಾಸಿಗಳಿಗೆ ತೊಂದರೆ ಉಂಟಾಗಲಿದೆ, ಇಂತಹ ಸಂದರ್ಭದಲ್ಲಿ ಸಫಾರಿ ಪುನರಾರಂಭಿಸುವುದು ಸರಿಯಲ್ಲ ಎಂದರು.
ಸಫಾರಿ ಪುನರಾರಂಭದ ಹಿನ್ನೆಲೆಯಲ್ಲಿ ಸ್ಥಳೀಯರ ಬೆಂಬಲ ಇನ್ನಷ್ಟು ಗಟ್ಟಿಯಾಗುತ್ತಿದೆ. ವಿಶೇಷವಾಗಿ ಸಫಾರಿ ವಲಯಕ್ಕೆ ಹೊಂದಿಕೊಂಡಿರುವ ಗ್ರಾಮಗಳ ನಿವಾಸಿಗಳು, ಇದು ಕೇವಲ ಪ್ರವಾಸೋದ್ಯಮದ ವಿಚಾರವಲ್ಲ ತಮ್ಮ ಬದುಕಿನ ಪ್ರಶ್ನೆ ಎಂದು ಹೇಳುತ್ತಿದ್ದಾರೆ.
ಈ ಭಾಗದ ಯುವಕರಿಗೆ ಇದರಿಂದ ಉದ್ಯೋಗ ಸಿಗಲಿದೆ, ಜೀಪ್ ಚಾಲಕರು, ಮಾರ್ಗದರ್ಶಕರು, ಟಿಕೆಟ್ ಕೌಂಟರ್ ಸಿಬ್ಬಂದಿ, ಅರಣ್ಯ ವಾಚರ್ಗಳು ಸೇರಿದಂತೆ ಅನೇಕ ಯುವಕರಿಗೆ ಉದ್ಯೋಗ ಸಿಗುತ್ತದೆ. ಹೋಟೆಲ್, ಲಾಡ್ಜ್, ಹೋಂಸ್ಟೇ ಗಳಲ್ಲಿ ವ್ಯಾಪಾರ ವಹಿವಾಟು ನಡೆಯಲಿದೆ, ಇದರಿಂದ ಸ್ಥಳೀಯರಿಗೆ ಅನುಕೂಲವಾಗಿ ಮಾರಾಟಗಾರರು ಸೇರಿದಂತೆ ಹಲವಾರು ಸಣ್ಣ ವ್ಯಾಪಾರಿಗಳು ಆದಾಯ ಗಳಿಸುತ್ತಾರೆ. ಪ್ರವಾಸಿಗರ ಓಡಾಟದಿಂದ ಸಾರಿಗೆ, ಕೃಷಿ ಉತ್ಪನ್ನಗಳ ಮಾರಾಟ, ಹಾಲು ಮತ್ತು ತರಕಾರಿ ಪೂರೈಕೆ ಹೆಚ್ಚುತ್ತದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.
‘ಸಫಾರಿ ನಮಗೆ ಕೇವಲ ವೀಕ್ಷಣಾ ಕಾರ್ಯಕ್ರಮವಲ್ಲ ಇದು ನಮ್ಮ ಕುಟುಂಬಗಳ ಬದುಕಿನ ಆಧಾರ. ಮೂರು ತಿಂಗಳು ಬಂದ್ ಆಗಿದ್ದ ಪರಿಣಾಮ ಸಾಲಬಾಧೆ ಹೆಚ್ಚಾಗಿದೆ. ಯುವಕರು ನಗರಗಳಿಗೆ ವಲಸೆ ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ” ಎಂದು ಸ್ಥಳೀಯರು ಅಳಲು ತೋಡಿಕೊಡಿಕೊಂಡಿದ್ದಾರೆ.
ವನ್ಯಜೀವಿ-ಮಾನವ ಸಂಘರ್ಷದ ಹಿನ್ನೆಲೆ:
ಕಳೆದ ಸೆಪ್ಟೆಂಬರ್, ಅಕ್ಟೋಬರ್ ಹಾಗೂ ನವೆಂಬರ್ ತಿಂಗಳುಗಳ ಮೈಸೂರು ಜಿಲ್ಲೆಯ ಎಚ್.ಡಿ. ಕೋಟೆ ಕಾಡಂಚಿನ ಪ್ರದೇಶಗಳಲ್ಲಿ ಹುಲಿ, ಚಿರತೆ ದಾಳಿಗಳು ಹೆಚ್ಚಾಗಿ ಅನೇಕ ಮಂದಿ ಪ್ರಾಣ ಕಳೆದುಕೊಂಡಿದ್ದರು. ಜೊತೆಗೆ ಸಾಕಷ್ಟು ಜಾನುವಾರುಗಳೂ ಕಾಡು ಪ್ರಾಣಿಗಳ ದಾಳಿಗೆ ಬಲಿಯಾಗಿದ್ದವು. ಈ ಘಟನೆಗಳ ಹಿನ್ನೆಲೆಯಲ್ಲಿ ಸ್ಥಳೀಯರು ಪ್ರತಿಭಟನೆ ನಡೆಸಿ, ಸಫಾರಿ ಹಾಗೂ ಅರಣ್ಯ ಪ್ರದೇಶದಲ್ಲಿನ ರೆಸಾರ್ಟ್ಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು. ಪರಿಸ್ಥಿತಿಯನ್ನು ಗಮನಿಸಿದ ಸಚಿವರು ಬಂಡೀಪುರ ಹಾಗೂ ನಾಗರಹೊಳೆ ಅರಣ್ಯಗಳಲ್ಲಿ ಸಫಾರಿಯನ್ನು ತಾತ್ಕಾಲಿಕವಾಗಿ ಬಂದ್ ಮಾಡುವಂತೆ ಆದೇಶಿಸಿದ್ದರು.
” ಈಗಾಗಲೇ ಹೋಟೆಲ್, ರೆಸಾರ್ಟ್ಗಳನ್ನು ಮುಚ್ಚಿರುವುದರಿಂದ ಸಾವಿರಾರು ಯುವಕರು ಉದ್ಯೋಗವಿಲ್ಲದೆ ಸಂಕಷ್ಟದಲ್ಲಿದ್ದಾರೆ. ಎಷ್ಟೋ ಹೋಟೆಲ್ಗಳು ಮುಚ್ಚಿ ಹೋಗಿವೆ. ಯುವಕರ ಉದ್ಯೋಗದ ದೃಷ್ಟಿಯಿಂದ ಸಫಾರಿ ಪುನರಾರಂಭಿಸಬೇಕು.”
-ರಾಣಿ, ಸ್ಥಳೀಯ ನಿವಾಸಿ
” ಪ್ರಾಣಿಗಳಿಗೆ ತೊಂದರೆ ಕೊಡಬಾರದು. ಸಫಾರಿ ಬಂದ್ ಆದ ನಂತರ ಹುಲಿ-ಚಿರತೆ ದಾಳಿ ನಡೆದಿಲ್ಲ. ಸಫಾರಿ ಪ್ರಾರಂಭವಾದರೆ ಪಟ್ಟಭದ್ರ ಹಿತಾಸಕ್ತಿಗಳಿಗೆ ಮಾತ್ರ ಅನುಕೂಲವಾಗಲಿದೆ. ಮುಂದಿನ ಪೀಳಿಗೆಗೆ ಅರಣ್ಯ ಉಳಿಸಲು ಸಫಾರಿ ಬಂದ್ ಮಾಡಬೇಕು.”
-ಹೊನ್ನೂರ್ ಪ್ರಕಾಶ್, ರೈತ ಮುಖಂಡ
” ಬಂಡೀಪುರ ವನ್ಯಧಾಮದಲ್ಲಿ ಹುಲಿಗಳ ಸಂತತಿ ಹೆಚ್ಚಾಗಿದೆ. ಪ್ರಾಣಿಗಳು ಆಹಾರ ಸಿಗದೆ ಅರಣ್ಯದಿಂದ ಹೊರಬರುತ್ತವೆಯೇ ಹೊರತು ಸಫಾರಿ ವಾಹನಕ್ಕೆ ಹೆದರಿ ಕಾಡಿನಿಂದ ಹೊರಬರುವುದಿಲ್ಲ.”
-ಚಿನ್ನಸ್ವಾಮಿ, ಗ್ರಾಪಂ ಸದಸ್ಯ, ಮೂಗನಹಳ್ಳಿ
” ನಾವು ಆದಿವಾಸಿಗಳು, ಕಾಡಿನಲ್ಲೇ ಹುಟ್ಟಿ ಬೆಳೆದವರು. ನಮಗೆ ಸಫಾರಿ ಬೇಕು. ಎಚ್.ಡಿ.ಕೋಟೆ ಭಾಗದಲ್ಲಿ ನಡೆದ ಚಿರತೆ, ಹುಲಿ ದಾಳಿಗೂ ಬಂಡೀಪುರಕ್ಕೂ ಸಂಬಂಧವಿಲ್ಲ. ಸಫಾರಿಯಿಂದ ನಮಗೆ ಅನುಕೂಲವಿದೆ.”
-ಪುಟ್ಟಮ್ಮ, ಸ್ಥಳೀಯ ನಿವಾಸಿ
ಇಂದಿನ ತಾಂತ್ರಿಕ ಯುಗದಲ್ಲಿ ಸರ್ಕಾರಗಳು ಕೇವಲ ನಿಯಂತ್ರಕರಾಗಿ ಉಳಿಯದೆ, ಮಾರ್ಗದರ್ಶಕ ಶಕ್ತಿಯಾಗಿಯೂ ಕಾರ್ಯನಿರ್ವಹಿಸಬೇಕಿದೆ. ಮೊದಲನೆಯದಾಗಿ ಶಿಕ್ಷಣ ವ್ಯವಸ್ಥೆಯಲ್ಲಿ ಮೂಲಭೂತ ಬದಲಾವಣೆ…
ಉಚಿತ ಕೊಡುಗೆ ಪ್ರಕಟಿಸುವ ರಾಜಕೀಯ ಪಕ್ಷಗಳ ನಡೆಗೆ ಕಳೆದ ಗುರುವಾರ ಸುಪ್ರೀಂ ಕೋರ್ಟ್ ಅಸಮಾಧಾನ ವ್ಯಕ್ತಪಡಿಸಿರುವುದು ಸ್ವಾಗತಾರ್ಹವಾಗಿದೆ. ಚುನಾವಣೆ ವೇಳೆ…
ಮಹಾದೇಶ್ ಎಂ.ಗೌಡ ಮಲೆ ಮಹದೇಶ್ವರ ಬೆಟ್ಟಕೆ ಆಗಮಿಸಿದ ಲಕ್ಷಾಂತರ ಭಕ್ತಾದಿಗಳಿಂದ ಕಾಣಿಕೆ ಅರ್ಪಣೆ ಹನೂರು: ತಾಲ್ಲೂಕಿನ ಮಲೆ ಮಹದೇಶ್ವರ ಬೆಟ್ಟದಲ್ಲಿ…
ಕೆ.ಬಿ.ರಮೇಶನಾಯಕ ಮೈಸೂರು ಜಿಲ್ಲೆಯಲ್ಲಿ ೫೧ ಪರೀಕ್ಷಾ ಕೇಂದ್ರಗಳಲ್ಲಿ ಸಿಸಿಟಿವಿ ಅಳವಡಿಕೆ ಪರೀಕ್ಷಾ ಕೇಂದ್ರಗಳ ವೀಕ್ಷಣೆಗೆ ೧೦ ಉಪನ್ಯಾಸಕರ ತಂಡ ರಚನೆ…
ಹೊಸದಿಲ್ಲಿ : ಮುಂಬರುವ ಏಪ್ರಿಲ್ನಿಂದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ರಸ್ತೆಗಳ ಟೋಲ್ ಪ್ಲಾಜಾಗಳಲ್ಲಿ ನಗದು ವಹಿವಾಟುಗಳನ್ನು ಸ್ವೀಕರಿಸುವುದಿಲ್ಲ ಎಂದು ರಸ್ತೆ…