Andolana originals

ಸರ್ಕಾರಿ ಇಲಾಖೆಗಳ ನಂಟು; ದುಸ್ಥಿತಿಯ ಕಗ್ಗಂಟು

ಸೂಕ್ತ ನಿರ್ವಹಣೆ ಇಲ್ಲದೆ ಸೊರಗುತ್ತಿರುವ ಪಾರಂಪರಿಕ ಕಟ್ಟಡಗಳು

ಬಿ.ಎಂ ಹೇಮಂತ್‌ ಕುಮರ್

ಮೈಸೂರು ಅನೇಕ ಐತಿಹಾಸಿಕ ಕಟ್ಟಡಗಳಿರುವ ತಾಣವಾಗಿದ್ದು, ಅವು ನಗರದ ಸಮೃದ್ಧ ಇತಿ ಹಾಸ ಮತ್ತು ವಾಸ್ತುಶಿಲ್ಪದ ವೈಭವವನ್ನು ಪ್ರತಿ ಬಿಂಬಿಸುತ್ತಿವೆ. ಈ ಪುರಾತನ ಕಟ್ಟಡಗಳಲ್ಲಿ ಹಲ ವಾರು ಇಂದಿಗೂ ಸರ್ಕಾರಿ ಕಚೇರಿಗಳಾಗಿ ಕಾರ್ಯ ನಿರ್ವಹಿಸುತ್ತಿದ್ದು, ಆಡಳಿತಾತ್ಮಕವಾಗಿ ಮಹತ್ವವನ್ನು ಹೊಂದಿರುವ ಜೊತೆಗೆ ಮೈಸೂರಿನ ಸಾಂಸ್ಕ ತಿಕ ಪರಂಪರೆಯನ್ನು ಪ್ರತಿನಿಧಿಸುತ್ತಿವೆ. ಅವುಗಳಲ್ಲಿ ಕಾಡಾ ಕಚೇರಿ, ಮಹಾನಗರ ಪಾಲಿಕೆ, ಸಿವಿಲ್ ನ್ಯಾಯಾಲಯ, ಹಳೆಯ ಡಿಸಿ ಕಚೇರಿಗಳು ಪ್ರಮುಖವಾಗಿವೆ. ಆದರೆ, ಸರ್ಕಾರದ ನಿರ್ಲಕ್ಷ್ಯ ಮತ್ತು ಸೂಕ್ತ ನಿರ್ವಹಣೆಯ ಕೊರತೆಯಿಂದಾಗಿ ಈ ಪಾರಂಪರಿಕ ಕಟ್ಟಡಗಳಲ್ಲಿ ಹಲವು ಈಗ ಹದಗೆಟ್ಟ ಸ್ಥಿತಿಯಲ್ಲಿವೆ.

ಸೋರುತ್ತಿರುವ ನಗರಪಾಲಿಕೆ ಚಾವಣಿ
ಮೈಸೂರು ಮಹಾನಗರ ಪಾಲಿಕೆಯ ಕಟ್ಟಡವನ್ನು ೧೯೨೦ರಲ್ಲಿ ಆಡಳಿತಾತ್ಮಕ ಉದ್ದೇಶಗಳಿಗಾಗಿ ನಿರ್ಮಿಸಲಾಯಿತು. ಇಂಡೋ ಸಾರ್ಸನಿಕ್ ಶೈಲಿಯಲ್ಲಿ ನಿರ್ಮಿತವಾಗಿರುವ ಈ ಕಟ್ಟಡದಲ್ಲೀಗ ನಿರ್ಲಕ್ಷ್ಯ ಮತ್ತು ನಿರ್ವಹಣೆಯ ಕೊರತೆಯಿಂದಾಗಿ ಗೋಡೆಗಳಲ್ಲಿ ಬಿರುಕುಗಳು, ಚಾವಣಿಗಳಲ್ಲಿ ನೀರು ಸೋರಿಕೆ ಕಂಡುಬಂದಿದ್ದು ಇದು ಸಾರ್ವಜನಿಕರ ಸುರಕ್ಷತೆಗೆ ಅಪಾಯವನ್ನು ಉಂಟುಮಾಡುತ್ತಿದೆ. ಇತ್ತೀಚೆಗೆ ಮಹಾನಗರ ಪಾಲಿಕೆಯ ಚಾವಣಿಯಲ್ಲಿ ನೀರು ಸೋರಿಕೆ ಕಂಡುಬಂದಿತ್ತು. ಇದರಿಂದ ಕಟ್ಟಡದೊಳಗೆ ಅಲ್ಲಲ್ಲಿ ನೀರು ಜಿನುಗುತ್ತಿದ್ದು ಕಡತಗಳು ಹಾಗೂ ದಾಖಲೆಗಳು ಹಾಳಾಗುತ್ತಿವೆ. ಚಾವಣಿಯನ್ನು ಸರಿಪಡಿಸುವಷ್ಟರಲ್ಲಿಯೇ ಈಗ ಪಾಲಿಕೆ ಹಳೆಯ ಕೌನ್ಸಿಲ್ ಸಭಾಂಗಣದ ಚಾವಣಿ ಕುಸಿದಿದ್ದು, ಅಲಂಕಾರ ಮಾಡಿದ್ದ ಪ್ಲೈವುಡ್ ಶೀಟ್ ಧರಾಶಾಯಿ ಆಗಿದೆ.

ಪ್ರತಿನಿತ್ಯ ಕೆಲಸಗಳಿಗಾಗಿ ಸಾವಿರಾರು ಸಾರ್ವಜನಿಕರು ಪಾಲಿಕೆ ಕಚೇರಿಗೆ ಭೇಟಿ ನೀಡುತ್ತಿದ್ದು, ಪಾಲಿಕೆಯ ಆಯುಕ್ತರೂ ಸೇರಿದಂತೆ ನೂರಾರು ಅಧಿಕಾರಿಗಳು ಕಾರ್ಯನಿರ್ವಹಿಸುತ್ತಿದ್ದಾರೆ. ಜನರ ಸಮಸ್ಯೆ ಆಲಿಸುವ ಅಧಿಕಾರಿಗಳೇ ಜೀವ ಭಯದಲ್ಲಿ ಬದುಕುವ ಸ್ಥಿತಿಗೆ ತಲುಪಿದ್ದಾರೆ. ಈ ಪಾರಂಪರಿಕ ಕಟ್ಟಡವನ್ನು ಉಳಿಸಲು ಮತ್ತು ಸಂರಕ್ಷಿಸಲು ಶಿಥಿಲಾವಸ್ಥೆಯಲ್ಲಿರುವ ಭಾಗಗಳನ್ನು ಗುರುತಿಸಿ, ತಕ್ಷಣದ ದುರಸ್ತಿ ಕಾರ್ಯಗಳನ್ನು ಕೈಗೊಳ್ಳಲಾಗಿದೆ. ಆದರೆ, ಭವಿಷ್ಯದಲ್ಲಿ ಇಂತಹ ಸಮಸ್ಯೆಗಳು ಉಂಟಾಗದಂತೆ ನಿಯಮಿತ ನಿರ್ವಹಣೆ ಮತ್ತು ಪರಿಶೀಲನೆ ಕಾರ್ಯಗಳನ್ನು ನಡೆಸಬೇಕಾಗಿರುವುದು ಅತ್ಯಗತ್ಯ.

ಹಳೆ ಡಿಸಿ ಕಟ್ಟಡದಲ್ಲಿ ಬಿರುಕು
ಮೈಸೂರಿನ ಹೃದಯಭಾಗದಲ್ಲಿರುವ ಪುರಾತನ ಡಿಸಿ ಕಚೇರಿಯನ್ನು ೧೮೯೫ರಲ್ಲಿ ನಿರ್ಮಿಸಲಾಯಿತು. ಈ ಸೌಧವನ್ನು ಹತ್ತನೇ ಚಾಮರಾಜ ಒಡೆಯರ್ ಅವರು ಬ್ರಿಟಿಷ್ ಅಧಿಕಾರಿಗಳ ಸಲಹೆಯೊಂದಿಗೆ ನಿರ್ಮಿಸಿದ್ದು, ಅದನ್ನು ಆರಂಭದಲ್ಲಿ ಅಠಾರ ಕಛೇರಿ ಎಂದು ಕರೆಯಲಾಗುತ್ತಿತ್ತು. ಕಾಲಕ್ರಮೇಣ, ಮೈಸೂರು ಜಿಲ್ಲೆಯ ಆಡಳಿತ ಕೇಂದ್ರವಾಗಿ ಈ ಕಟ್ಟಡವು ಪ್ರಮುಖ ಪಾತ್ರ ವಹಿಸಿತು.

ನಿರ್ಲಕ್ಷ್ಯದಿಂದ ಹಾಳಾಗುತ್ತಿರುವ ಪರಂಪರೆ : ಸಾವಿರಾರು ಮಹತ್ವದ ನಿರ್ಧಾರಗಳನ್ನು ಕೈಗೊಂಡ ಈ ಐತಿಹಾಸಿಕ ಕಟ್ಟಡ ಈಗ ನಿರ್ಲಕ್ಷ್ಯ ಮತ್ತು ನಿರ್ವಹಣಾ ಕೊರತೆಯಿಂದಾಗಿ ಶಿಥಿಲಾವಸ್ಥೆಗೆ ತಲುಪುತ್ತಿದೆ. ಗೋಡೆಗಳ ಮೇಲ್ಮೈ ಕುಸಿಯಲು ಪ್ರಾರಂಭವಾಗಿದ್ದು, ಬಿರುಕುಗಳು ಕಾಣಿಸುತ್ತಿವೆ. ಚಾವಣಿಯಿಂದ ನೀರು ಸೋರುವಿಕೆ ಹಾಗೂ ಪುರಾತನ ಮರದ ಬಾಗಿಲುಗಳು ಮತ್ತು ಕಿಟಕಿಗಳು ಹಾನಿಯಾಗಿರುವುದು ಗಮನಾರ್ಹವಾಗಿದೆ.

ಜೂನ್ ೨೦೨೩ರಲ್ಲಿ ಜಿಲ್ಲಾಧಿಕಾರಿ ಕಚೇರಿಯನ್ನು ಸಿದ್ಧಾರ್ಥನಗರದ ಹೊಸ ಸಂಕೀರ್ಣಕ್ಕೆ ಸ್ಥಳಾಂತರಿಸಿದ ನಂತರ ಇಲ್ಲಿಯವರೆಗೂ ಯಾವುದಕ್ಕೂ ಬಳಕೆಯಾಗದೆ ಬೀಗ ಹಾಕಲಾಗಿದೆ. ಡಿಸಿ ಕಚೇರಿ ಕಟ್ಟಡವನ್ನು ಸಂರಕ್ಷಿಸಬೇಕು ಎಂಬ ಹಲವು ಇತಿಹಾಸಕಾರರು ಮತ್ತು ಪಾರಂಪರಿಕ ಪ್ರೇಮಿಗಳ ಒತ್ತಾಯದ ಮೇರೆಗೆ ಮೈಸೂರಿನ ಐತಿಹಾಸಿಕ ಮಹಿಮೆ, ಪರಂಪರೆ ಮತ್ತು ಸಂಸ್ಕೃತಿಯನ್ನು ಪರಿಚಯಿಸುವ ಸಂಗ್ರಹಾಲಯವನ್ನಾಗಿ ಪರಿವರ್ತಿಸುವ ನಿರ್ಣಯವನ್ನು ಸರ್ಕಾರವು ಕೈಗೊಂಡಿದೆ.

ಬಿರುಕು ಬಿಟ್ಟಿರುವ ಜಿಲ್ಲಾ ನ್ಯಾಯಾಲಯ ಕಟ್ಟಡ
ಮೈಸೂರಿನ ಕೃಷ್ಣರಾಜ ಬುಲೆವಾರ್ಡ್ ರಸ್ತೆಯಲ್ಲಿರುವ ಜಿಲ್ಲಾ ನ್ಯಾಯಾಲಯ ಕಟ್ಟಡವು ನಗರದಲ್ಲಿನ ಪ್ರಮುಖ ಪಾರಂಪರಿಕ ಕಟ್ಟಡಗಳಲ್ಲೊಂದಾಗಿದೆ. ೧೮೭೯ರಲ್ಲಿ ನಿರ್ಮಿತವಾದ ಈ ಕಟ್ಟಡವು ಆರಂಭದಲ್ಲಿ ಮುಖ್ಯ ನ್ಯಾಯಾಂಗ ಕೇಂದ್ರವಾಗಿದ್ದು, ವಿವಿಧ ನ್ಯಾಯಾಲಯಗಳು ಮತ್ತು ಕಾನೂನು ಕಚೇರಿಗಳನ್ನು ಹೊಂದಿತ್ತು. ಸೂಕ್ತ ನಿರ್ವಹಣೆಯ ಕೊರತೆಯಿಂದ ಈ ಕಟ್ಟಡದಲ್ಲೂ ಇಂದು ಬಿರುಕುಗಳು ಕಾಣತೊಡಗಿವೆ. ಕಟ್ಟಡದ ಗೋಡೆಗಳಲ್ಲಿ ಹಾಗೂ ಚಾವಣಿಗಳಲ್ಲಿ ಬಿರುಕುಗಳು ಕಂಡುಬಂದಿದ್ದು ನ್ಯಾಯದ ದೀಪ ಹಿಡಿಯುವ ನ್ಯಾಯಾಧೀಶರು, ವಕೀಲರು, ಮತ್ತು ನ್ಯಾಯಾಲಯ ಸಿಬ್ಬಂದಿಗಳು ಭಯದ ವಾತಾವರಣದಲ್ಲಿ ಕೆಲಸ ಮಾಡಬೇಕಾದ ಪರಿಸ್ಥಿತಿ ಉಂಟಾಗಿದೆ. ಜನಸಾಮಾನ್ಯರಿಗೆ ನ್ಯಾಯ ಒದಗಿಸುವ ಈ ವೃತ್ತಿಪರರು ತಾವು ಸೇವೆ ಸಲ್ಲಿಸುವ ಜಾಗದಲ್ಲಿಯೇ ಸುರಕ್ಷತೆಯ ಅಭಾವವನ್ನು ಎದುರಿಸುತ್ತಿರುವುದು ವಿಷಾದನೀಯ. ಈ ಐತಿಹಾಸಿಕ ಕಟ್ಟಡವನ್ನು ಉಳಿಸಲು, ಅಧಿಕಾರಿಗಳು ತಕ್ಷಣವೇ ಪುನಶ್ಚೇತನ ಕಾರ್ಯವನ್ನು ಕೈಗೊಳ್ಳಬೇಕಾಗಿದೆ.

ಕುಸಿದಿರುವ ಅಗ್ನಿಶಾಮಕ ಕಚೇರಿಯ ತೆರೆದ ಮಂಟಪ
೧೮೯೮ರಲ್ಲಿ ನಿರ್ಮಾಣವಾದ ಸರಸ್ವತಿಪುರಂ ಅಗ್ನಿಶಾಮಕ ಠಾಣೆಯ ಕಟ್ಟಡವು ೬ ವರ್ಷಗಳ ಹಿಂದೆ ಕುಸಿದುಬಿದ್ದರೂ, ಇದನ್ನು ಪುನರ್ ನಿರ್ಮಾಣ ಮಾಡುವ ಸಂಬಂಽತ ಅಽಕಾರಿಗಳು ಇನ್ನೂ ಯಾವುದೇ ಕ್ರಮ ಕೈಗೊಂಡಿಲ್ಲ. ಈಗ ಕಟ್ಟಡದ ಗೋಡೆಗಳಲ್ಲಿ ಇನ್ನಷ್ಟು ಬಿರುಕುಗಳು ಕಾಣಿಸಿಕೊಂಡಿವೆ. ಮೈಸೂರಿನ ಪ್ರಮುಖ ಲ್ಯಾಂಡ್‌ಮಾರ್ಕ್‌ಗಳಲ್ಲಿ ಒಂದಾಗಿರುವ ಈ ಕಟ್ಟಡದ ಮುಂಭಾಗವು ಈಗ ಸಂಪೂರ್ಣವಾಗಿ ಮಣ್ಣು ಮಿಶ್ರಿತ ಅವಶೇಷವಾಗಿ ಬಿದ್ದಿದೆ. ಕಟ್ಟಡದ ಮುಂಭಾಗದ ತೆರೆದ ಮುಖಮಂಟಪ ಕುಸಿದ ನಂತರ ತುರ್ತು ಸೇವೆಗಳ ಕಚೇರಿಯನ್ನು ಹೆಬ್ಬಾಳ ಅಗ್ನಿಶಾಮಕ ದಳಕ್ಕೆ ಸ್ಥಳಾಂತರಿಸಿ, ಪ್ರಾದೇಶಿಕ ಹಾಗೂ ಜಿಲ್ಲಾ ಅಗ್ನಿಶಾಮಕ ಅಧಿಕಾರಿಗಳ ಕಚೇರಿಗಳನ್ನು ಬನ್ನಿಮಂಟಪದ ಅಗ್ನಿಶಾಮಕ ಕಚೇರಿಗೆ ಸ್ಥಳಾಂತರಿಸಲಾ ಯಿತು. ಆದರೂ ೬೦ಕ್ಕೂ ಹೆಚ್ಚು ಸಿಬ್ಬಂದಿಗಳು ಈ ಅಪಾಯಕಾರಿ ಕಟ್ಟಡದಲ್ಲೇ ಇಂದಿಗೂ ಕಾರ್ಯನಿರ್ವಹಿಸುತ್ತಿದ್ದಾರೆ.

ಆಂದೋಲನ ಡೆಸ್ಕ್

Recent Posts

ಪ್ರಮಾಣ ವಚನ ಸಮಾರಂಭಕ್ಕೆ ವಿಜಯ್‌ ಪತ್ನಿ, ಮಕ್ಕಳು ಗೈರು

ಚೆನ್ನೈ : ದಳಪತಿ ವಿಜಯ್ ತಮಿಳುನಾಡಿನ ನೂತನ ಮುಖ್ಯಮಂತ್ರಿ ಆಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಸಮಾರಂಭದಲ್ಲಿ ಅನೇಕ ಗಣ್ಯರು ಸೇರಿದ್ದರು.…

8 hours ago

ಮಡಿಕೇರಿ | ನೀರಿನಲ್ಲಿ ಮುಳುಗಿ ಯುವಕ ಸಾವು

ಮಡಿಕೇರಿ : ಸ್ನಾನಕ್ಕೆ ತೆರಳಿದ್ದ ಯುವಕನೊಬ್ಬ ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ಘಟನೆ ಇಲ್ಲಿಗೆ ಸಮೀಪದ ಬಲಮುರಿ ಗ್ರಾಮದಲ್ಲಿ ಭಾನುವಾರ ನಡೆದಿದೆ.…

9 hours ago

ಗಡಿ ಜಿಲ್ಲೆಯಲ್ಲೂ ತಮಿಳು ಸಿಎಂ ವಿಜಯ್‌ ಹವಾ!

ಹನೂರು : ತಮಿಳುನಾಡಿನ ಮುಖ್ಯಮಂತ್ರಿಯಾಗಿ ಟಿವಿಕೆ ಪಕ್ಷದ ಮುಖ್ಯಸ್ಥ ಹಾಗೂ ನಟ ಸಿ.ಜೋಸೆಫ್ ವಿಜಯ್ ಅಧಿಕಾರ ಸ್ವೀಕರಿಸಿದ ಹಿನ್ನೆಲೆ ಪಟ್ಟಣದಲ್ಲಿ…

9 hours ago

ಪ್ರಧಾನಿ ಸಂಚಾರ ಮಾರ್ಗದಲ್ಲಿ ಜಿಲಿಟೆನ್ ಕಡ್ಡಿ ಪತ್ತೆ ; ಕೆಲಕಾಲ ಆತಂಕ ; ಓರ್ವ ವಶಕ್ಕೆ

ಬೆಂಗಳೂರು : ಪ್ರಧಾನಿ ನರೇಂದ್ರಮೋದಿ ಅವರು ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ನಗರಕ್ಕೆ ಬಂದಿದ್ದ ವೇಳೆ ಜಿಲಿಟಿನ್ ಕಡ್ಡಿಗಳು ಪತ್ತೆಯಾಗಿ ಕೆಲಕಾಲ…

9 hours ago

ತಮಿಳುನಾಡು | ತಿರುಚಿರಾಪಳ್ಳಿ ಕ್ಷೇತ್ರಕ್ಕೆ ವಿಜಯ್ ರಾಜೀನಾಮೆ

ಚೆನ್ನೈ : ಟಿವಿಕೆ ಮುಖ್ಯಸ್ಥ ಮತ್ತು ತಮಿಳುನಾಡು ಮುಖ್ಯಮಂತ್ರಿ ಸಿ.ಜೋಸೆಫ್ ವಿಜಯ್ ಭಾನುವಾರ ತಿರುಚಿರಾಪಳ್ಳಿ ಪೂರ್ವ ವಿಧಾನಸಭಾ ಕ್ಷೇತ್ರಕ್ಕೆ ರಾಜೀನಾಮೆ…

10 hours ago

ಹುಣಸೂರು | ಭಾರೀ ಗಾಳಿ-ಮಳೆಗೆ ಹಾರಿಹೋದ ಚಾವಣಿ

ಹುಣಸೂರು : ಬಿರುಗಾಳಿ ಮಳೆಗೆ ತಾಲ್ಲೂಕಿನ ಹನಗೋಡು ಹೋಬಳಿಯ ವದ್ಲಿ ಮನುಗನಹಳ್ಳಿಯಲ್ಲಿ ಮನೆಯ ಚಾವಣಿಗೆ ಹಾಕಿದ್ದ ಕಲ್ನಾರ್ ಶೀಟ್ ಹಾರಿಹೋಗಿದ್ದು,…

11 hours ago