ಕೆ.ಪಿ.ಮದನ್
ಮೈಸೂರು: ಹಲವೆಡೆ ಬೀದಿ ನಾಯಿಗಳು ಸಾರ್ವಜನಿಕರಿಗೆ ತೊಂದರೆ ಕೊಡುತ್ತಿರುವ ವರದಿಗಳು ಪ್ರಕಟವಾಗುತ್ತಿವೆ. ಇತ್ತ ನಗರದ ಆಸುಪಾಸಿನಲ್ಲಿರುವ ಕೆಲ ಬಡಾವಣೆಗಳ ನಿವಾಸಿಗಳಿಗೆ ಬೀದಿ ದೀಪಗಳೂ ಕಾಟ ಕೊಡುತ್ತಿವೆ!
ರಾತ್ರಿ ವೇಳೆ ಜನರು ಹಾಗೂ ವಾಹನ ಸವಾರರು ಸರಾಗವಾಗಿ ಸಂಚರಿಸಲಿ ಎಂಬ ಉದ್ದೇಶದಿಂದ ಅಳವಡಿಸಿರುವ ಬೀದಿ ದೀಪಗಳು ಕಣ್ಣಾಮುಚ್ಚಾಲೆ ಆಡುತ್ತಿವೆ. ಇದರಿಂದ ಅನಾಹುತ, ಅಪಘಾತಗಳು, ಕಳ್ಳತನದಂತಹ ದುಷ್ಕೃತ್ಯಗಳು ನಡೆಯುವ ಸಾಧ್ಯತೆಗಳನ್ನು ತಳ್ಳಿ ಹಾಕುವಂತಿಲ್ಲ.
ಮೈಸೂರು ನಗರಕ್ಕೆ ಹೊಂದಿಕೊಂಡಂತಿರುವ ಟೋಲ್ಗೇಟ್ ರಸ್ತೆಯಿಂದ ಶ್ರೀರಾಂಪುರ, ಶಿವಪುರ, ದೇವಯ್ಯನಹುಂಡಿ, ರಿಂಗ್ ರಸ್ತೆಯ ಹೊರವಲಯದಲ್ಲಿರುವ ದಟ್ಟಗಳ್ಳಿ, ನೇತಾಜಿ ಸರ್ಕಲ್, ಆರ್.ಟಿ.ನಗರ, ರಸ್ತೆಗಳಲ್ಲಿ ಆಗಾಗ್ಗೆ ಬೀದಿ ದೀಪಗಳು ಕೆಟ್ಟು ಸಾರ್ವಜನಿಕರಿಗೆ ಆತಂಕ ತಂದೊಡ್ಡುತ್ತಿವೆ.
ಕಳವು ಪ್ರಕರಣ ಹೆಚ್ಚಳ?: ಸುಮಾರು ತಿಂಗಳುಗಳಿಂದಲೇ ಈ ಭಾಗದ ರಸ್ತೆಗಳಲ್ಲಿನ ಬೀದಿ ದೀಪಗಳು ಸರಿಯಾಗಿ ಬೆಳಗುತ್ತಿಲ್ಲ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ದೂರು ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಬೀದಿ ದೀಪಗಳು ಬೆಳಗದ ಕಾರಣ ರಾತ್ರಿ ವೇಳೆ ರಸ್ತೆ ಬದಿಯ ಅಂಗಡಿಗಳಲ್ಲಿ ಕಳ್ಳತನ ಪ್ರಕರಣಗಳು ಹೆಚ್ಚುತ್ತಿವೆ. ಆಗಾಗ್ಗೆ ಅಪಘಾತಗಳು, ಅನಾಹುತಗಳು ಸಂಭವಿಸುತ್ತಿವೆ ಎಂದು ಸ್ಥಳೀಯರು ಅಳಲು ತೋಡಿಕೊಂಡಿದ್ದಾರೆ.
ಆಗಾಗ್ಗೆ ಕೆಡುತ್ತಿರುವ ಬೀದಿ ದೀಪಗಳು: ಪ್ರತಿದಿನ ಸಾವಿರಾರು ಜನ ಈ ರಸ್ತೆಗಳಲ್ಲಿ ಸಂಚರಿಸುತ್ತಾರೆ. ಕತ್ತಲಾಗುತ್ತಿದ್ದಂತೆ ಈ ಭಾಗದಲ್ಲಿ ಅದರಲ್ಲೂ ಶ್ರೀರಾಂಪುರ ವರ್ತುಲ ರಸ್ತೆಯಿಂದ ಲಿಂಗಾಂಬುಧಿ ಪಾಳ್ಯ, ವಿಶ್ವವಿದ್ಯಾಲಯ ಬಡಾವಣೆ ಹಾಗೂ ದಟ್ಟಗಳ್ಳಿಯವರೆಗೂ ಬೀದಿದೀಪಗಳು ಸಮರ್ಪಕವಾಗಿ ಉರಿಯದ ಕಾರಣ ಸಮಸ್ಯೆ ಎದುರಾಗಿದೆ. ಬೀದಿ ಬದಿಗಳಲ್ಲಿ ಇಂಡಕ್ಷನ್ ದೀಪಗಳನ್ನು ಅಳವಡಿಸಿದ್ದು, ಇದಕ್ಕಾಗಿ ಕೇಬಲ್ಗಳನ್ನು ಅಳವಡಿಸಿ ಸಂಪರ್ಕ ಕಲ್ಪಿಸಲಾಗಿದೆ. ದೂರವಾಣಿ ಕೇಬಲ್ ಅಳವಡಿಸುವವರು, ಒಳಚರಂಡಿ ದುರಸ್ತಿ ಮಾಡುವವರು ಪದೇಪದೇ ರಸ್ತೆ ಅಗೆಯುವುದರಿಂದ ಈ ಕೇಬಲ್ಗಳು ತುಂಡಾಗಿ ಸಂಪರ್ಕ ಕಡಿತಗೊಳ್ಳುವುದು ಸಾಮಾನ್ಯವಾಗಿದೆ. ಇದರಿಂದಾಗಿ ಬೀದಿ ದೀಪಗಳು ಆಗಾಗ್ಗೆ ಕೆಟ್ಟು ಹೋಗುತ್ತಿವೆ ಎಂಬುದು ಕೆಲ ಸ್ಥಳೀಯರ ಅಭಿಪ್ರಾಯ.
ಕತ್ತಲಲ್ಲಿ ಓಡಾಡಲು ಭಯ: ಬೀದಿ ದೀಪಗಳು ಇಲ್ಲದ ಕಾರಣ ಸಾರ್ವಜನಿಕರು ರಾತ್ರಿ ವೇಳೆ ಈ ಭಾಗದಲ್ಲಿ ಓಡಾಡಲು ಭಯಪಡುತ್ತಿದ್ದಾರೆ. ಅಲ್ಲದೆ, ಕತ್ತಲೆಯಲ್ಲಿ ಸರಗಳ್ಳತನ ಮೊದಲಾದ ದುಷ್ಕೃತ್ಯಗಳು ನಡೆಯಲು ಅವಕಾಶ ನೀಡಿದಂತಾಗಿದೆ. ಕೆಲ ವಾರಗಳ ಹಿಂದೆ ಪಾಲಿಕೆ ಅಳವಡಿಸಿದ್ದ ಬೀದಿ ದೀಪಗಳನ್ನೇ ದುಷ್ಕರ್ಮಿಗಳು ಕದ್ದೊಯ್ದಿದ್ದಾರೆ. ಈ ಭಾಗದಲ್ಲಿರುವ ಬೀದಿ ದೀಪಗಳಲ್ಲಿ ಎಷ್ಟು ಉಪಯುಕ್ತವಾಗುತ್ತಿವೆ? ಎಷ್ಟು ಹಾಳಾಗಿವೆ? ಎಂಬುದು ಲೆಕ್ಕಕ್ಕೆ ಸಿಗದಂತಾಗಿದೆ. ಈ ಬಗ್ಗೆ ಅಧಿಕಾರಿಗಳು ಗಮನಹರಿಸಬೇಕು. ಕೂಡಲೇ ಬೀದಿ ದೀಪದ ವ್ಯವಸ್ಥೆ ಕಲ್ಪಿಸಿಕೊಡಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
” ಬೀದಿ ದೀಪಗಳ ನಿರ್ವಹಣೆ ಬಗ್ಗೆ ಹೊರಗುತ್ತಿಗೆ ಸಿಬ್ಬಂದಿಗಳು ತಾತ್ಸಾರ ಮನೋ ಭಾವನೆ ಹೊಂದಿದ್ದಾರೆ. ನಾಗರಿಕರ ಸಮಸ್ಯೆಗೆ ಸ್ಪಂದಿಸುತ್ತಿಲ್ಲ. ಸ್ವತಃ ಪಾಲಿಕೆಯ ಇಂಜಿನಿಯರ್ ಸೇರಿ ದಂತೆ ಸಿಬ್ಬಂದಿ ಕರೆ ಮಾಡಿದರೂ ಸ್ಪಂದಿಸುತ್ತಿಲ್ಲ. ಈಗಾಗಲೇ ಅಳವಡಿಸಿರುವ ಬೀದಿ ದೀಪಗಳ ಸಂಪರ್ಕ ಜಾಲವು ಸರಿಪಡಿಸಲಾ ಗದಷ್ಟು ಹದಗೆಟ್ಟಿದೆ.”
ಮಹೇಶ್, ಸ್ಥಳೀಯ
” ನಗರಪಾಲಿಕೆ ವ್ಯಾಪ್ತಿಯಲ್ಲಿ ಬೀದಿ ದೀಪಗಳ ನಿರ್ವಹಣೆ ಸರಿಯಾಗಿದೆ.ಮ ಒಂದೆರಡು ದೀಪಗಳು ಕೆಟ್ಟಿರಬಹುದು. ಅದನ್ನು ಕೂಡಲೇ ದುರಸ್ತಿಪಡಿಸಲಾಗುವುದು. ಬೇರೆ ಸಂಪರ್ಕಗಳನ್ನು ಸರಿಪಡಿಸುವ ಸಂದರ್ಭದಲ್ಲಿ ಬಹುಶಃ ವಿದ್ಯುತ್ ತಂತಿ ತುಂಡಾಗಿ ಈ ಸಮಸ್ಯೆ ಆಗಿರಬಹುದು. ಕೂಡಲೇ ಈ ಬಗ್ಗೆ ಗಮನಹರಿಸಲಾಗುವುದು.”
ಶೇಖ್ ತನ್ವೀರ್ ಆಸಿಫ್, ಆಯುಕ್ತ, ನಗರಪಾಲಿಕೆ, ಮೈಸೂರು
ಕೆ.ಬಿ.ರಮೇಶನಾಯಕ ಮೈಸೂರು: ತವರಿನವರೇ ಮುಖ್ಯಮಂತ್ರಿಯಾಗಿದ್ದಾಗ ಹತ್ತಾರು ಯೋಜನೆಗಳು ಮಂಜೂರಾಗಿದ್ದರೆ, ಈಗ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸಚಿವ ಸಂಪುಟದಲ್ಲಿ ಡಾ.ಯತೀಂದ್ರ ಸಿದ್ದರಾಮಯ್ಯ ಅವರಿಗೆ…
ಎಸ್.ಎಸ್.ಭಟ್ ಬೇಳೆ, ಎಣ್ಣೆಗೆ ಶಿಕ್ಷಣ ಇಲಾಖೆ ವಿಧಿಸಿರುವ ದರವೇ ಶಿಕ್ಷಕರಿಗೆ ಹೊರೆ ನಂಜನಗೂಡು: ರಾಜ್ಯಾದ್ಯಂತ ಶಾಲಾ ಮಕ್ಕಳಿಗೆ ನೀಡಲಾಗುತ್ತಿರುವ ಬಿಸಿಯೂಟ…
ಬೆಳ್ಳಿ ಖಡ್ಗ, ದೇವಿಗೆ ರೇಷ್ಮೆ ಸೀರೆ ಅರ್ಪಿಸಿ ವಿಶೇಷ ಪೂಜೆ, ಪ್ರಾರ್ಥನೆ ಉಡುಪಿ : ತಮಿಳುನಾಡು ಮುಖ್ಯಮಂತ್ರಿ ಸಿ.ಜೋಸೆಫ್ ವಿಜಯ್…
ಹಿಂದಿನ ವರ್ಷದ ಶುಲ್ಕವೇ ಈ ವರ್ಷಕ್ಕೂ ಅನ್ವಯ ಬೆಂಗಳೂರು : ಪ್ರಸಕ್ತ ಶೈಕ್ಷಣಿಕ ವರ್ಷದಿಂದ ವೈದ್ಯಕೀಯ, ದಂತ ವೈದ್ಯಕೀಯ,…
ಸಾಮಾಜಿಕ ತಾಣಗಳಲ್ಲಿ, ನವ ಮಾಧ್ಯಮಗಳಲ್ಲಿ ಅವರವರ ಭಾವಕ್ಕೆ ಅವರವರ ಅನುಭವಕ್ಕೆ ತಕ್ಕಂತೆ ಜಿಜ್ಞಾಸೆ ನಡೆದಿದೆ. ಚಿತ್ರಮಂದಿರಗಳಿಂದ ಪ್ರೇಕ್ಷಕ ದೂರವಾಗುತ್ತಿದ್ದಾನೆ; ಅವನನ್ನು…