ಎಸ್.ಎಸ್.ಭಟ್
ಬೇಳೆ, ಎಣ್ಣೆಗೆ ಶಿಕ್ಷಣ ಇಲಾಖೆ ವಿಧಿಸಿರುವ ದರವೇ ಶಿಕ್ಷಕರಿಗೆ ಹೊರೆ
ನಂಜನಗೂಡು: ರಾಜ್ಯಾದ್ಯಂತ ಶಾಲಾ ಮಕ್ಕಳಿಗೆ ನೀಡಲಾಗುತ್ತಿರುವ ಬಿಸಿಯೂಟ ಶಿಕ್ಷಕರ ಪಾಲಿಗೆ ಅತ್ತ ಉಗುಳಲೂ ಆಗದ, ಇತ್ತ ನುಂಗಲೂ ಆಗದ ಬಿಸಿ ತುಪ್ಪದಂತಾಗಿ, ಜೇಬಿಗೆ ಹೊರೆಯಾಗಿ ಅವರೆಲ್ಲ ಪರದಾಡುವಂತಾಗಿದೆ.
ಪ್ರಾಥಮಿಕ ಹಾಗೂ ಪ್ರೌಢಶಾಲೆಗಳು ಆರಂಭವಾಗಿ ಈಗಾಗಲೇ ೧೨ ದಿನಗಳು ಕಳೆದು ಹೋಗಿವೆ. ಬಿಸಿಯೂಟಕ್ಕೆ ಸರಬರಾಜು ಮಾಡುತ್ತಿರುವ ಎಣ್ಣೆ ಹಾಗೂ ಬೇಳೆಯ ಟೆಂಡರ್ ಈಗಾಗಲೇ ಮುಗಿದಿದ್ದು, ಹೊಸ ಟೆಂಡರ್ ಆಗದೆ ಅವರೆಡೂ ಸರಬರಾಜಾಗುತ್ತಿಲ್ಲ.
ಎಣ್ಣೆ ಹಾಗೂ ಬೇಳೆಯಿಲ್ಲದೆ ಅಡುಗೆ ಹೇಗೆ? ಬಿಸಿಯೂಟ ಹೇಗೆ? ಅದಕ್ಕಾಗಿ ಸರ್ಕಾರವೇ ಬದಲಿ ವ್ಯವಸ್ಥೆಗೆ ಆದೇಶ ನೀಡಿದೆ. ಆ ಆದೇಶವೇ ಈಗ ಶಿಕ್ಷಕರ ಜೇಬಿಗೆ ಕನ್ನ ಕೊರೆಯ ತೊಡಗಿದೆ. ಈವರೆಗೂ ಶಿಕ್ಷಣ ಇಲಾಖೆಯೇ ಟೆಂಡರ್ ಮೂಲಕ ಎಣ್ಣೆ, ಬೇಳೆ ಸೇರಿದಂತೆ ಬಿಸಿಯೂಟದ ಪದಾರ್ಥಗಳನ್ನು ಸರಬರಾಜು ಮಾಡುತ್ತಿತ್ತು.
ಶಾಲಾ ಶಿಕ್ಷಣ ಇಲಾಖೆಯ ಆಯುಕ್ತರ ಕಚೇರಿಯಿಂದ ೨೨-೫-೨೦೨೬ ಹೊರಡಿಸಲಾದ ಆದೇಶದಲ್ಲಿ ಹೊಸ ಟೆಂಡರ್ ಆಗಿ ಬೇಳೆ ಮತ್ತು ಎಣ್ಣೆ ಸರಬರಾಜಾಗುವವರೆಗೆ ಪರಿವರ್ತನಾ ದರದಲ್ಲಿ ಇವೆರಡನ್ನೂ ಆಯಾ ಶಾಲೆಯ ಶಿಕ್ಷಕರೇ ಖರೀದಿಸಲು ಅನುಮತಿ ನೀಡಿದ ಇಲಾಖೆಯು ಎಣ್ಣೆ ಹಾಗೂ ಬೇಳೆಗೆ ಪ್ರತಿ ಕೆಜಿಗೆ ವಿಧಿಸಿದ ದರವೇ ಈಗ ಶಿಕ್ಷಕರ ಪಾಲಿಗೆ ನುಂಗಲಾರದ ತುತ್ತಾಗಿದೆ.
ಅಂಗಡಿಗಳಲ್ಲಿ ಪ್ರತಿ ಕೆಜಿ ತೊಗರಿ ಬೇಳೆಯ ದರ ಕನಿಷ್ಠ ೧೪೦ ರೂ. ಆದರೆ ಸರ್ಕಾರ ೧೦೫ ರೂ.ಗಳಲ್ಲಿ ಖರೀದಿಸಿ ಎಂದು ಆದೇಶ ನೀಡಿದೆ. ಉಳಿದ ೩೫ ರೂ. ನೀಡುವವರಾರು? ಎಂಬ ಪ್ರಶ್ನೆ ಉದ್ಭವಿಸಿದೆ. ಸೂರ್ಯಕಾಂತಿ ಎಣ್ಣೆ ಕೆಜಿಗೆ ೧೮೦ ರೂ. ಇದ್ದರೆ ಸರ್ಕಾರ ವಿಧಿಸಿರುವ ದರ ೧೬೦ ರೂ. ಹಾಗಾ ದರೆ ೨೦ ರೂ.ಗಳನ್ನು ಯಾರು ನೀಡಬೇಕು?
ಈ ಹಣವನ್ನು ಶಿಕ್ಷಕರು ಎಲ್ಲಿಂದ ಭರಿಸಬೇಕು ಎಂಬುದೇ ಈಗ ಯಕ್ಷ ಪ್ರಶ್ನೆಯಾಗಿದೆ. ಈಗಾಗಲೇ ಮೊಟ್ಟೆ ತಿನ್ನುವ ಪ್ರತಿ ವಿದ್ಯಾರ್ಥಿಗೂ ಶಿಕ್ಷಕರ ಕೈನಿಂದ ತಲಾ ೧.೪೦ ರೂ. ಹೆಚ್ಚುವರಿ ಖರ್ಚಾಗುತ್ತಿದೆ. ಸರ್ಕಾರ ತಲಾ ಒಂದು ಮೊಟ್ಟೆಗೆ ೫.೨೦ ರೂ.ದರ ನಿಗದಿಪಡಿಸಿದರೆ ಅಂಗಡಿಗಳಲ್ಲಿ ಮೊಟ್ಟೆ ಬೆಲೆ ಕನಿಷ್ಠ ೬.೬೦ ರೂ. ಇದೆ.
ಮೊಟ್ಟೆ, ಬೇಳೆ, ಎಣ್ಣೆಯಿಂದಾಗಿ ಬಿಸಿಯೂಟದ ಹೊಣೆಗಾರಿಕೆಯ ಶಿಕ್ಷಕರಿಗೆ ತಲಾ ಒಂದು ಮಗುವಿಗೆ ದಿನಕ್ಕೆ ಕನಿಷ್ಠ ೩ ರೂ. ಹೆಚ್ಚುವರಿ ಖರ್ಚಾಗುತ್ತಿದ್ದು, ೪೦ ಮಕ್ಕಳಿರುವ ಬಿಸಿಯೂಟದ ಶಿಕ್ಷಕರು ದಿನಕ್ಕೆ ೧೨೦ ರೂ.ಗಳನ್ನು ತಮ್ಮ ಜೇಬಿನಿಂದ ಖರ್ಚುಮಾಡಲೇ ಬೇಕಾಗಿರುವುದು ನಮ್ಮ ಶಿಕ್ಷಕರ ಪಾಲಿಗೆ ಬಿಸಿ ತುಪ್ಪವಾಗಿದೆ.
” ಬಿಸಿಯೂಟ ಜವಾಬ್ದಾರಿಯಿಂದ ಶಿಕ್ಷಕರನ್ನು ಬಿಡುಗಡೆಗೊಳಿಸಬೇಕು ಎಂದು ರಾಜ್ಯಾದ್ಯಂತ ಹೋರಾಟ ಮಾಡಬೇಕಾದ ಸಂದರ್ಭ ಎದುರಾಗಿದೆ. ಸರ್ಕಾರದ ಆದೇಶದಂತೆ ನಡೆದುಕೊಂಡರೆ ಬಿಸಿಯೂಟದ ಶಿಕ್ಷಕರು ತಮ್ಮ ವೇತನದ ಬಹುಪಾಲನ್ನು ಮಕ್ಕಳ ಊಟಕ್ಕೇ ವ್ಯಯಿಸಬೇಕಾಗುತ್ತದೆ. ಆದ್ದರಿಂದ ನಮಗೆ ಬಿಸಿಯೂಟದ ಉಸಾಬರಿಯೇ ಬೇಡ.”
-ಕೆ.ಬಿ.ಶಶಿಕುಮಾರ್, ಜಿಲ್ಲಾಧ್ಯಕ್ಷ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ
” ಬಿಸಿಯೂಟದ ಬೇಳೆ, ಎಣ್ಣೆ ಹಾಗೂ ಮೊಟ್ಟೆಯ ದರ ಶಿಕ್ಷಕರಿಗೆ ಹೊರೆಯಾಗಿರುವುದು ಇದೀಗ ತಮ್ಮ ಗಮನಕ್ಕೆ ಬಂದಿದ್ದು ತಕ್ಷಣ ಇಲಾಖೆಯ ಆಯುಕ್ತರೊಂದಿಗೆ ಚರ್ಚಿಸಲಾಗುವುದು.”
-ರಶ್ಮಿ ಮಹೇಶ್, ಶಿಕ್ಷಣ ಇಲಾಖೆಯ ಮುಖ್ಯ ಕಾರ್ಯದರ್ಶಿ
” ತೊಗರಿ ಬೇಳೆ, ಎಣ್ಣೆ ಹಾಗೂ ಮೊಟ್ಟೆಯಿಂದಾಗಿ ಶಿಕ್ಷಕರ ಜೇಬಿಗೆ ಕತ್ತರಿ ಬೀಳುತ್ತಿರುವ ವಿಷಯ ಇದೀಗ ನನ್ನ ಗಮನಕ್ಕೆ ಬಂದಿದ್ದು, ಈ ಕುರಿತು ಸಂಬಂಧಿಸಿದ ಅಧಿಕಾರಿಗಳು ಹಾಗೂ ಸಿಎಂ ಗಮನಕ್ಕೂ ತಂದು ಸಮಸ್ಯೆಯ ಪರಿಹಾರಕ್ಕೆ ಪ್ರಯತ್ನಿಸಲಾಗುವುದು.”
– ಕೆ.ವಿವೇಕಾನಂದ, ವಿಧಾನ ಪರಿಷತ್ ಸದಸ್ಯ
” ಜೂ.೧೭ರಂದು ಪ್ರಾಥಮಿಕ ಶಿಕ್ಷಕರ ಸಂಘದ ಸರ್ವ ಸದಸ್ಯರ ಸಭೆ ಕರೆದಿದ್ದು, ಬಿಸಿಯೂಟದಿಂದ ಶಿಕ್ಷಕರಿಗೆ ಆಗುತ್ತಿರುವ ತೊಂದರೆ ಕುರಿತು ಚರ್ಚಿಸಿ ಮುಂದಿನ ಕ್ರಮದ ನಿರ್ಣಯ ತೆಗೆದುಕೊಳ್ಳಲಾಗುವುದು.”
– ಚಂದ್ರಶೇಖರ ನುಗ್ಲಿ, ರಾಜ್ಯಾಧ್ಯಕ್ಷ ಪ್ರಾ.ಶಾ.ಶಿ.ಸಂಘ
ಕೆ.ಪಿ.ಮದನ್ ಮೈಸೂರು: ಹಲವೆಡೆ ಬೀದಿ ನಾಯಿಗಳು ಸಾರ್ವಜನಿಕರಿಗೆ ತೊಂದರೆ ಕೊಡುತ್ತಿರುವ ವರದಿಗಳು ಪ್ರಕಟವಾಗುತ್ತಿವೆ. ಇತ್ತ ನಗರದ ಆಸುಪಾಸಿನಲ್ಲಿರುವ ಕೆಲ ಬಡಾವಣೆಗಳ…
ಬೆಳ್ಳಿ ಖಡ್ಗ, ದೇವಿಗೆ ರೇಷ್ಮೆ ಸೀರೆ ಅರ್ಪಿಸಿ ವಿಶೇಷ ಪೂಜೆ, ಪ್ರಾರ್ಥನೆ ಉಡುಪಿ : ತಮಿಳುನಾಡು ಮುಖ್ಯಮಂತ್ರಿ ಸಿ.ಜೋಸೆಫ್ ವಿಜಯ್…
ಹಿಂದಿನ ವರ್ಷದ ಶುಲ್ಕವೇ ಈ ವರ್ಷಕ್ಕೂ ಅನ್ವಯ ಬೆಂಗಳೂರು : ಪ್ರಸಕ್ತ ಶೈಕ್ಷಣಿಕ ವರ್ಷದಿಂದ ವೈದ್ಯಕೀಯ, ದಂತ ವೈದ್ಯಕೀಯ,…
ಸಾಮಾಜಿಕ ತಾಣಗಳಲ್ಲಿ, ನವ ಮಾಧ್ಯಮಗಳಲ್ಲಿ ಅವರವರ ಭಾವಕ್ಕೆ ಅವರವರ ಅನುಭವಕ್ಕೆ ತಕ್ಕಂತೆ ಜಿಜ್ಞಾಸೆ ನಡೆದಿದೆ. ಚಿತ್ರಮಂದಿರಗಳಿಂದ ಪ್ರೇಕ್ಷಕ ದೂರವಾಗುತ್ತಿದ್ದಾನೆ; ಅವನನ್ನು…