Andolana originals

ಕೊಡಗು ಜಿಲ್ಲೆಯಲ್ಲಿ ಈ ವರ್ಷ ಉತ್ತಮ ವರ್ಷಧಾರೆ..!

ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಈ ಬಾರಿ ಉತ್ತಮ ಮಳೆಯಾಗಿದ್ದು, ಜನವರಿಯಿಂದ ಇಲ್ಲಿಯವರೆಗೆ 2733.24 ಮಿ. ಮೀ. ಸರಾಸರಿ ಮಳೆಯಾಗಿದೆ. ಇನ್ನು ಒಂದೆರೆಡು ದಿನಗಳಲ್ಲಿ ವಾರ್ಷಿಕ ವಾಡಿಕೆ ಮಳೆಗಿಂತ ಹೆಚ್ಚು ಮಳೆಯಾಗುವ ಸಾಧ್ಯತೆಯಿದೆ. ಜಿಲ್ಲೆಯ ವಾರ್ಷಿಕ ವಾಡಿಕೆ ಮಳೆ 2792 ಮಿ. ಮೀ. ಗಳಾಗಿದ್ದು, ಇನ್ನು 59 ಮಿ. ಮೀ. ಮಳೆಯಾದರೆ ವಾರ್ಷಿಕ ವಾಡಿಕೆ ಮಳೆಯಾದಂತಾಗಲಿದೆ.

ಬಳಿಕ ಆಗುವ ಮಳೆ ಹೆಚ್ಚುವರಿ ಮಳೆಯಾಗಿರಲಿದೆ. ಈಗಾಗಲೇ ಜಿಲ್ಲೆಯಲ್ಲಿ ಸಾಧಾರಣ ಮಳೆ ಮುಂದುವರಿದಿದ್ದು, ಈ ವಾರದಲ್ಲಿಯೇ ವಾಡಿಕೆ ಮಳೆಯ ಸರಾಸರಿ ದಾಟುವ ಸಾಧ್ಯತೆ ಇದೆ. ಜಿಲ್ಲೆಯಾದ್ಯಂತ ಹವಾಮಾನ ಇಲಾಖೆಯ ಮುನ್ಸೂಚನೆಯಂತೆಯೇ ಸೆಪ್ಟೆಂಬರ್ ೨ನೇ ವಾರವೂ ಮಳೆ ಮುಂದುವರಿದಿದೆ. ಗಣೇಶ ಚತುರ್ಥಿ ಸಂದರ್ಭದಲ್ಲೂ ಮಳೆಯಾಗಿದ್ದು, ಹಬ್ಬದ ಬಳಿಕವೂ ಮಳೆ ಮುಂದುವರಿದಿದೆ. ಮಡಿಕೇರಿ ಸೇರಿದಂತೆ ಹಲವೆಡೆ ದಿನವಿಡೀ ಮಳೆಯ ವಾತಾವರಣ ಕಂಡು ಬರುತ್ತಿದೆ. ಆಗೊಮ್ಮೆ- ಈಗೊಮ್ಮೆ ಸ್ವಲ್ಪ ಬಿಸಿಲು ಕಾಣಿಸಿಕೊಂಡರೂ ಬಳಿಕ ದಿಢೀರನೇ ಜೋರು ಮಳೆ ಸುರಿಯುತ್ತಿದೆ. ಸೆ. 17ರವರೆಗೂ ಮಳೆ ಮುಂದುವರಿಯುವ ಬಗ್ಗೆ ಹವಾಮಾನ ಇಲಾಖೆ ಮಾಹಿತಿ ನೀಡಿದ್ದು, ಕರಾವಳಿ ಮತ್ತು ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಅಲ್ಲಲ್ಲಿ ವ್ಯಾಪಕವಾಗಿ ಚದುರಿದ ಮತ್ತು ಸಾಧಾರಣ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಮಡಿಕೇರಿ ತಾಲ್ಲೂಕಿನಲ್ಲಿ ಈ ಬಾರಿ ಅತಿ ಹೆಚ್ಚು ಮಳೆಯಾಗಿದ್ದು, ಈಗಾಗಲೇ 3953. 12 ಮಿ. ಮೀ ಮಳೆಯಾಗಿದೆ. ತಾಲ್ಲೂಕಿನ ವಾರ್ಷಿಕ ವಾಡಿಕೆ ಮಳೆ 2923 ಮಿ. ಮೀ ಆಗಿದ್ದು, ಈಗಾಗಲೇ 959.13 ಮಿ. ಮೀ ಹೆಚ್ಚುವರಿ ಮಳೆ ಸುರಿದಿದೆ. ಈ ಬಾರಿ ಮಾನ್ಸೂನ್‌ಗೂ ಮೊದಲು ಹವಾಮಾನ ಇಲಾಖೆ ಅಂದಾಜಿಸಿದ ಪ್ರಮಾಣಕ್ಕಿಂತ ಹೆಚ್ಚಿನ ಮಳೆಯಾಗುವ ಸಾಧ್ಯತೆ ಇದೆ. ಮಡಿಕೇರಿ ಸೇರಿದಂತೆ ಜಿಲ್ಲೆಯ ಹಲವೆಡೆ ಗೌರಿ-ಗಣೇಶ ಹಬ್ಬದಂದೂ ಹೆಚ್ಚಿನ ಮಳೆಯಾಗಿತ್ತು. ಇದರಿಂದ ಗಣೇಶೋತ್ಸವದ ಪೂಜಾ ಕೈಂಕರ್ಯಗಳಿಗೆ ಸಮಸ್ಯೆಯಾಗಿತ್ತು. ಜನರು ದೇವಾಲಯಗಳಿಗೆ ತೆರಳಿ ದರ್ಶನ ಪಡೆಯುವುದಕ್ಕೂ ಅನನುಕೂಲವಾಗಿತ್ತು. ಈಗಲೂ ಮಳೆ ಮುಂದುವರಿದಿರುವುದರಿಂದ ದಸರಾ ವೇಳೆಗೂ ಮಳೆ ಕಾಡಲಿದೆಯಾ ಎಂಬ ಆತಂಕ ಸೃಷ್ಟಿಯಾಗಿದೆ. ಮಳೆಯಿದ್ದರೆ ನವರಾತ್ರಿ ಸಾಂಸ್ಕೃತಿಕ ಕಾರ್ಯಕ್ರಮಗಳ ವೀಕ್ಷಣೆಗೆ ಜನರು ಸೇರುವ ಸಾಧ್ಯತೆ ಕಡಿಮೆ. ಹಾಗಾಗಿ ದಸರಾ ಆರಂಭವಾಗುವಷ್ಟರಲ್ಲಿ ಮಳೆ ಸ್ವಲ್ಪ ವಿರಾಮ ನೀಡಲಿ ಎಂಬುದು ಜಿಲೆಯ ಜನರ ನಿರೀಕ್ಷೆಯಾಗಿದೆ. ಮತ್ತೊಂದೆಡೆ ಕೊಡಗಿನ ಪ್ರವಾಸೋದ್ಯಮವೂ ಮಳೆ ಕಡಿಮೆ ಯಾಗುವುದನ್ನೇ ಕಾಯುತ್ತಿದ್ದು, ಮಳೆ ಕಡಿಮೆಯಾದರಷ್ಟೇ ಚೇತರಿಕೆ ಕಾಣುವ ಸಾಧ್ಯತೆಯಿದೆ.

ತಾಲೂಕುವಾರು ಮಳೆ ವಿವರ ( ಜನವರಿಯಿಂದ ಇಲ್ಲಿಯವರೆಗೆ ): ಮಡಿಕೇರಿ – ಈ ವರ್ಷ: 3953. 12, ಕಳೆದ ವರ್ಷ: 2407.50. ವಿರಾಜಪೇಟೆ- ಈ ವರ್ಷ: 2430, ಕಳೆದ ವರ್ಷ: 1084.21. ಪೊನ್ನಂಪೇಟೆ – ಈ ವರ್ಷ: 2556.99, ಕಳೆದ ವರ್ಷ: 1205.07. ಸೋಮವಾರಪೇಟೆ- ಈ ವರ್ಷ: 3093.91, ಕಳೆದ ವರ್ಷ: 1468.14. ಕುಶಾಲನಗರ – ಈ ವರ್ಷ: 1631.50, ಕಳೆದ ವರ್ಷ: 838.40.

 

ನವೀನ್‌ ಡಿಸೋಜ

ಕೊಡಗು ಜಿಲ್ಲೆಯ ಮಡಿಕೇರಿ ತಾಲ್ಲೂಕಿನವನಾದ ನಾನು ಮೈಸೂರಿನ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದಲ್ಲಿ ಬಿಎ ಪದವಿ ಮಾಡಿ ಕಳೆದ 10 ವರ್ಷಗಳಿಂದ ಪತ್ರಿಕೋದ್ಯಮ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ. ರಾಜ್ಯಮಟ್ಟದ ವಾಹಿನಿಗಳಾದ ಸುದ್ದಿಟಿವಿ, ಸಮಯ ಟಿವಿ, ಸ್ಥಳೀಯ ವಾಹಿನಿಗಳಾದ ಕೊಡಗು ಚಾನಲ್, ಚಾನಲ್ 24 ಕರ್ನಾಟಕ ವಾಹಿನಿಗಳಲ್ಲಿ ಜಿಲ್ಲಾ ವರದಿಗಾರ, ಪತ್ರಿಕೆಗಳಾದ ಕನ್ನಡಪ್ರಭ, ಕಾವೇರಿ ಟೈಮ್ಸ್ ಸಂಸ್ಥೆಗಳಲ್ಲಿ ವರದಿಗಾರನಾಗಿ ಕಾರ್ಯ ನಿರ್ವಹಿಸಿರುವ ಅನುಭವ ಹೊಂದಿದ್ದೇನೆ. ಸದ್ಯ ಆಂದೋಲನ ಪತ್ರಿಕೆಯಲ್ಲಿ ಕಳೆದ ಸುಮಾರು 5 ವರ್ಷಗಳಿಂದ ಜಿಲ್ಲಾ ವರದಿಗಾರನಾಗಿ ಕಾರ್ಯನಿರ್ವಹಿಸುತ್ತಿದ್ದೇನೆ. ಪುಸ್ತಕ ಓದುವುದರೊಂದಿಗೆ ಕ್ರೀಡೆಯಲ್ಲಿ ಹೆಚ್ಚಿನ ಆಸಕ್ತಿಯಿದ್ದು, ಕ್ರಿಕೆಟ್, ಷಟಲ್ ಬ್ಯಾಡ್ಮಿಂಟನ್, ಕೇರಂ ನೆಚ್ಚಿನ ಕ್ರೀಡೆಗಳಾಗಿವೆ.

Recent Posts

ಚಾಮರಾಜನಗರ ನ್ಯಾಯಾಲಯಕ್ಕೆ ಹುಸಿ ಬಾಂಬ್ ಬೆದರಿಕೆ

ಚಾಮರಾಜನಗರ: ನಗರದ ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್ ನ್ಯಾಯಾಲಯಕ್ಕೆ ಹುಸಿ ಬಾಂಬ್ ಬೆದರಿಕೆಯ ಇ-ಮೇಲ್ ಸಂದೇಶ ಬಂದ ಹಿನ್ನೆಲೆಯಲ್ಲಿ ಪೊಲೀಸರು,…

2 hours ago

ಬಿಆರ್‌ಟಿ ವ್ಯಾಪ್ತಿಯಲ್ಲಿ ಕಾಡಾನೆ ಕಳೇಬರ ಪತ್ತೆ

ಚಾಮರಾಜನಗರ: ಬಿಆರ್‌ಟಿ ಹುಲಿ ಸಂರಕ್ಷಿತ ಪ್ರದೇಶದ ಪುಣಜನೂರು ವನ್ಯಜೀವಿ ವಲಯ ವ್ಯಾಪ್ತಿಯ ಕಾರೆಪಾಳ್ಯ ಗಸ್ತಿನ ಸಮೀಪ ಅರಣ್ಯ ಪ್ರದೇಶದಿಂದ ಸುಮಾರು…

2 hours ago

ತೊಟ್ಟಿಲುಶಾಸ್ತ್ರ, ಸಿದ್ದಪ್ಪಾಜಿ ಕಂಡಾಯೋತ್ಸವದಲ್ಲಿ ತಾರಾ, ಶಶಿಕುಮಾರ್ ಭಾಗಿ

ಮಹಾದೇಶ್‌ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು ಹನೂರು: ತಾಲ್ಲೂಕಿನ ದೊಡ್ಡಾಲತ್ತೂರು ಗ್ರಾಮದ ಶ್ರೀ ಮಕ್ಕಳೇಶ್ವರ ಸ್ವಾಮಿ ಕ್ಷೇತ್ರದಲ್ಲಿ ಹಮ್ಮಿಕೊಂಡಿದ್ದ…

2 hours ago

ಬೆಳೆಗೆ ಸಿಗದ ಬೆಲೆ: ಯುವ ರೈತ ಆತ್ಮಹತ್ಯೆ

ಕೆ.ಆರ್.ನಗರ: ತಂಬಾಕು ಬೆಳೆಗೆ ಸರಿಯಾಗಿ ಬೆಲೆ ಸಿಗದೇ ನಷ್ಟವಾದ ಹಿನ್ನೆಲೆಯಲ್ಲಿ ಮಾಡಿದ್ದ ಸಾಲ ತೀರಿಸಲಾಗದೆ ಮನನೊಂದು ರೈತರೊಬ್ಬರು ತಮ್ಮ ಜಮೀನಿನಲ್ಲಿ…

4 hours ago

ಮುಂದಿನ ಒಂದು ವಾರಗಳ ಕಾಲ ಭಾರೀ ಮಳೆ: ಹವಾಮಾನ ಇಲಾಖೆ ಮುನ್ಸೂಚನೆ

ಬೆಂಗಳೂರು: ರಾಜ್ಯದ ಹಲವು ಜಿಲ್ಲೆಗಳಲ್ಲಿ ಭಾರೀ ಗಾಳಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಚಿಕ್ಕಮಗಳೂರು, ಹಾಸನ, ಶಿವಮೊಗ್ಗ,…

5 hours ago

ಸಾಲಬಾಧೆ; ರೈತ ಆತ್ಮಹತ್ಯೆ

ರಾವಂದೂರು: ರೈತರೊಬ್ಬರು ತಾವು ಬೆಳೆದ ತಂಬಾಕಿಗೆ ಸೂಕ್ತ ಬೆಲೆ ಸಿಗದೆ ಮನನೊಂದು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.…

6 hours ago