Andolana originals

ನೀರಿನ ಭಾಗ್ಯಕ್ಕಾಗಿ ಕಾದಿರುವ ಕಾರೇಪುರ ಕೆರೆ

ಚಿರಂಜೀವಿ ಸಿ.ಹುಲ್ಲಹಳ್ಳಿ

ಅಭಿವೃದ್ಧಿಯಾಗಿ ವರ್ಷವಾದರೂ ದೊರೆಯದ ಜಲ ಭಾಗ್ಯ

ಕೆರೆಗೆ ನೀರು ತುಂಬಿಸಲು ಪೈಪ್‌ಲೈನ್ ಕಾಮಗಾರಿ ಬಾಕಿ

ಕೆರೆಗೆ ನೀರು ತುಂಬಿಸಿದರೆ ಅಂತರ್ಜಲ ಸಂರಕ್ಷಣೆ

ಜಾನುವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆ 

ಮೈಸೂರು: ಮೂರು ವರ್ಷಗಳ ಹಿಂದೆ ಅಭಿವೃದ್ಧಿಯಾಗಿರುವ ಕೆರೆಗೆ ಇನ್ನೂ ನೀರು ತುಂಬಿಸಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿನಿಧಿಸುವ ವರುಣ ಕ್ಷೇತ್ರದಲ್ಲಿ ಕೆರೆ ಅಭಿವೃದ್ಧಿಗೊಂಡು ವರ್ಷ ಕಳೆದರೂ ನೀರಿನ ಭಾಗ್ಯ ಮಾತ್ರ ಸಿಕ್ಕಿಲ್ಲ.

ನಂಜನಗೂಡು ತಾಲ್ಲೂಕಿನ ದೊಡ್ಡ ಕವಲಂದೆ ಹೋಬಳಿಯ ಕಾರೇಪುರ ಗ್ರಾಮದ ಸರ್ವೆ ನಂ.೧೪೫ರಲ್ಲಿ ೬೧ ಎಕರೆ ಸರ್ಕಾರಿ ಜಮೀನಿನಲ್ಲಿ ಕೆರೆ ನಿರ್ಮಿಸಲಾಗಿದೆ. ಕೆರೆ ಅಭಿವೃದ್ಧಿಗೊಂಡು ವರ್ಷಗಳು ಉರುಳಿ ದ್ದರೂ ಪೈಪ್‌ಲೈನ್ ಅಳವಡಿಸಿ ನೀರು ತುಂಬಿಸುವ ಕಾರ್ಯ ನನೆಗುದಿಗೆ ಬಿದ್ದಿದೆ.

೪ ವರ್ಷಗಳ ಹಿಂದೆ ಡಾ.ಯತೀಂದ್ರ ಸಿದ್ದರಾಮಯ್ಯ ಶಾಸಕರಾಗಿದ್ದ ಸಂದರ್ಭದಲ್ಲಿ ಅವರು ಉಮ್ಮತ್ತೂರು ಮತ್ತು ಕಾರೇಪುರ ಕೆರೆಗಳ ಅಭಿವೃದ್ಧಿಗೆ ಶಂಕುಸ್ಥಾಪನೆ ನೆರವೇರಿಸಿದ್ದರು. ೮.೫ ಕೋಟಿ ರೂ. ಅನುದಾನ ಬಿಡುಗಡೆ ಮಾಡಿ ಕೆರೆಯಲ್ಲಿ ಹೂಳೆತ್ತುವುದು, ಏರಿಯ ಮೇಲೆ ರಸ್ತೆ ನಿರ್ಮಿಸಿ ಅಭಿವೃದ್ಧಿಪಡಿಸಲಾಗಿದ್ದು, ಕೆರೆಗೆ ಪೈಪ್‌ಲೈನ್ ಅಳವಡಿಸುವ ಕೆಲಸ ಮಾತ್ರ ಆರಂಭವೇ ಆಗಿಲ್ಲ.

ಈಗಾಗಲೇ ಸುತ್ತೂರು ಬಳಿಯಲ್ಲಿ ಕಪಿಲಾ ನದಿಯಿಂದ ಚಿನ್ನಂಬಳ್ಳಿ, ತಗಡೂರು, ಹನುಮನಪುರ ಮಾರ್ಗವಾಗಿ ಉಮ್ಮತ್ತೂರು ಕೆರೆಗೆ ಪೈಪ್‌ಲೈನ್ ಅಳವಡಿಸಿ ನೀರು ತುಂಬಿಸಲಾಗಿದೆ. ಆದರೆ, ಇಲ್ಲಿಂದ ನಾಲ್ಕು ಕಿಲೋಮೀಟರ್ ದೂರವಿರುವ ಕಾರೇಪುರ ಗ್ರಾಮದ ಕೆರೆಗೆ ಪೈಪ್‌ಲೈನ್ ಅಳವಡಿಸಿಲ್ಲ. ಹೀಗಾಗಿ ಕೆರೆಗೆ ಪೈಪ್‌ಲೈನ್ ಅಳವಡಿಸಿ ಕೊಡಿ ಅಥವಾ ಗೇಟ್ ವಾಲ್ ಹಾಕಿಸಿ, ಕೆರೆಗೆ ನೀರು ತುಂಬಿಸುವಂತೆ ಸ್ಥಳೀಯರು ಮನವಿ ಮಾಡಿದ್ದಾರೆ.

ಸಿದ್ದೇಶ್ವರ ಬೆಟ್ಟ ಮತ್ತು ಉಮ್ಮತ್ತೂರು ಬೆಟ್ಟದ ಮಧ್ಯೆ ಭಾಗದಲ್ಲಿರುವ ಕಾರ್ಯ, ಕಾರೇಪುರ, ಹಾಡ್ಯ, ಜನ್ನೂರು, ಜನ್ನೂರು ಹೊಸೂರು, ಹಳ್ಳಿಕೆರೆ ಹುಂಡಿ ಗ್ರಾಮಗಳ ಜನರು ಬಟ್ಟೆ ತೊಳೆಯುವುದಕ್ಕೆ ಮತ್ತು ಜಾನುವಾರಗಳಿಗೆ ಕುಡಿಯುವ ನೀರಿಗೆ ಪರದಾಡುವಂತಾಗಿದೆ. ಇಂತಹ ಕಾರ್ಯಗಳಿಗೆ ಶುದ್ಧ ಕುಡಿಯುವ ನೀರನ್ನೇ ಬಳಸಬೇಕಾದ ಅನಿವಾರ್ಯತೆ ಎದುರಾಗಿದೆ. ಬೇಸಿಗೆ ಆರಂಭವಾಗುತ್ತಿದ್ದು, ಈಗಾಗಲೇಜಾನುವಾರುಗಳು ನೀರಿಗಾಗಿ ಪರಿತಪಿಸುತ್ತಿವೆ.

ಈಗ ಬೇಸಿಗೆ ಆಗಿರುವುದರಿಂದ ಕೆರೆಗೆ ಪೈಪ್‌ಲೈನ್ ಅಳವಡಿಸಿ ನೀರು ಹರಿಸಿದರೆ ಸಾಕಷ್ಟು ಅನುಕೂಲವಾಗುತ್ತದೆ. ಎಂಎಲ್‌ಸಿ ಯತೀಂದ್ರ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ, ಕೆರೆಗೆ ನೀರನ್ನು ತುಂಬಿಸುವಂತೆ ಮನವಿ ಮಾಡಿಕೊಂಡಿದ್ದೆವು. ಅವರೂ ಸಕಾರಾತ್ಮಕವಾಗಿ ಸ್ಪಂದಿಸಿದ್ದರು. ಆದರೆ, ಇಲ್ಲಿಯವರೆಗೂ ಕೆರೆಗೆ ನೀರು ತುಂಬಿಸಿಲ್ಲ ಎಂದು ಗ್ರಾಮಸ್ಥರು ಬೇಸರ ವ್ಯಕ್ತಪಡಿಸಿದರು.

ವರುಣ ವಿಧಾನಸಭೆ ಕ್ಷೇತ್ರಾಭಿವೃದ್ಧಿಗಾಗಿ ೫೦೧ ಕೋಟಿ ರೂ.ಅನುದಾನ ಬಿಡುಗಡೆಯಾಗಿದ್ದು, ಇದರಲ್ಲಿ ಕಾರೇಪುರ ಕೆರೆಯ ಪೈಪ್‌ಲೈನ್ ಅಳವಡಿಸಲು ಅನುದಾನ ನಿಗದಿಪಡಿಸಲಾಗಿದೆ ಎಂಬ ಮಾಹಿತಿ ಇದೆ. ಈಗಲಾದರೂ ಅಧಿಕಾರಿಗಳು ಕೆರೆಗೆ ಪೈಪ್ ಲೈನ್ ಅಳವಡಿಸಿದರೆ, ಬೇಸಿಗೆಯಲ್ಲಿ ಜಾನುವಾರುಗಳು ಅನುಭವಿಸುತ್ತಿರುವ ನೀರಿನ ಹಾಹಾಕಾರವನ್ನು ನಿವಾರಿಸಬಹುದು.

ಅಂತರ್ಜಲ ಕುಸಿತ: ಈಗಾಗಲೇ ಕಾರೇಪುರ, ಹಾಡ್ಯ, ಜನ್ನೂರು, ಜನ್ನೂರು ಹೊಸೂರು, ಹಳ್ಳಿಕೆರೆಹುಂಡಿ ಗ್ರಾಮಗಳಲ್ಲಿ ರೈತರ ಕೊಳವೆ ಬಾವಿಗಳು ಬತ್ತಿ ಹೋಗಿದ್ದು, ಬೆಳೆಗಳಿಗೆ, ಜಾನುವಾರಗಳಿಗೆ ಮತ್ತು ಕುಡಿಯುವ ನೀರಿಗೆ ಅಭಾವ ಸೃಷ್ಟಿಯಾಗಿದೆ. ಅಂತರ್ಜಲ ಕುಸಿಯುತ್ತಿದೆ. ಇದನ್ನು ಅರಿತು ಅಧಿಕಾರಿಗಳು ಕೆರೆ ತುಂಬಿಸಲು ಮುಂದಾಗಬೇಕಿದೆ.

ಕೆರೆ ಒತ್ತುವರಿಗೆ ತೆರವುಗೊಳಿಸಿದ್ದ ಸಿಎಂ ಆದೇಶ: ೯೧ ಎಕರೆ ಕೆರೆಯನ್ನು ಕೆಲವರು ಒತ್ತುವರಿ ಮಾಡಿಕೊಂಡಿದ್ದರು. ಯತೀಂದ್ರ ಸಿದ್ದರಾಮಯ್ಯ ಮುತುವರ್ಜಿ ವಹಿಸಿ ಒತ್ತು ವರಿ ಮಾಡಿಕೊಂಡಿದ್ದ ಪ್ರದೇಶವನ್ನು ತೆರವು ಗೊಳಿಸಲಾಯಿತು. ಈಗ ೭೪ ಎಕರೆಯಲ್ಲಿ ಕೆರೆ ಅಭಿವೃದ್ಧಿಪಡಿಸಲಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗ್ರಾಮದಲ್ಲಿ ಕಣ್ಮರೆಯಾಗುವ ಆತಂಕದಲ್ಲಿದ್ದ ಕೆರೆಯನ್ನು ಪುನರ್ ನಿರ್ಮಾಣ ಮಾಡಿ ಮಹತ್ವ ಪೂರ್ಣ ಕೆಲಸ ಮಾಡಿದ್ದಾರೆ. ಈಗ ಕೆರೆಗೆ ನೀರು ತುಂಬಿಸಲು ಕ್ರಮ ವಹಿಸಬೇಕು ಎಂಬುದು ಸ್ಥಳೀಯರ ಒತ್ತಾಯವಾಗಿದೆ.

” ಈಗಾಗಲೇ ಬೇಸಿಗೆ ಆರಂಭವಾಗಿ ನಮ್ಮ ಭಾಗದಲ್ಲಿ ಜಾನುವಾರುಗಳ ಕುಡಿಯುವ ನೀರಿಗೆ ಸಂಕಷ್ಟ ಎದುರಾಗಿದೆ. ಇಂತಹ ಸಂದರ್ಭದಲ್ಲಿ ಕೆರೆಗೆ ನೀರು ತುಂಬಿಸಿದರೆ, ಸ್ಥಳೀಯವಾಗಿ ಜಾನುವಾರುಗಳಿಗೆ, ಅದಕ್ಕಿಂತ ಪ್ರಮುಖವಾಗಿ ಅಂತರ್ಜಲ ಸಂರಕ್ಷಣೆಗೆ ಅನುಕೂಲವಾಗುತ್ತದೆ.”

– ಮರಿಯಪ್ಪ, ಗ್ರಾಮ ಪಂಚಾಯಿತಿ ಸದಸ್ಯ

” ಸುತ್ತೂರಿನ ಬಳಿ ಕಪಿಲಾ ನದಿಯಿಂದ ಹನುಮನಪುರ ಮತ್ತು ಉಮ್ಮತ್ತೂರಿನ ಕೆರೆಗಳಿಗೆ ನೀರು ತುಂಬಿಸಲಾಗಿದೆ. ನಮ್ಮೂರಿನಿಂದ ೩ ಕಿಲೋ ಮೀಟರ್ ದೂರದಲ್ಲಿರುವ ಚಿನ್ನಂಬಳ್ಳಿಗೆ ಪೈಪ್‌ಲೈನ್ ವ್ಯವಸ್ಥೆ ಮಾಡಲಾಗಿದೆ. ಇಲ್ಲಿಂದ ನಮ್ಮೂರಿನ ಕೆರೆಗೆ ಪೈಪ್‌ಲೈನ್ ಅಳವಡಿಸಿಕೊಟ್ಟರೇ ಸಾಕು. ಇಳಿಜಾರು ಆಗಿರುವುದರಿಂದ ಕೆರೆಗೆ ಸುಗಮವಾಗಿ ನೀರು ಹರಿದು ತುಂಬಲಿದೆ.”

-ಸಿದ್ದಲಿಂಗಪ್ಪ, ಕಾರೇಪುರ

 

 

ಆಂದೋಲನ ಡೆಸ್ಕ್

Recent Posts

ಕ್ರೀಡಾ ಸಂಕೀರ್ಣ ನಿರ್ಮಾಣಕ್ಕೆ ಶೀಘ್ರದಲ್ಲೇ ಚಾಲನೆ..!

ಕೊಡಗಿನಲ್ಲಿ ಕ್ರೀಡಾ ಕ್ಷೇತ್ರಕ್ಕೆ ಉತ್ತೇಜನ ನೀಡುವ ಉದ್ದೇಶ ; ಬಜೆಟ್‌ನಲ್ಲಿ ಅನುದಾನದ ಭರವಸೆ -ನವೀನ್ ಡಿಸೋಜ ಮಡಿಕೇರಿ : ಕೊಡಗಿನಲ್ಲಿ…

9 mins ago

ಪಂಜು ಗಂಗೊಳ್ಳಿ ಅವರ ವಾರದ ಅಂಕಣ : ಅಲೆಮಾರಿ ಮಕ್ಕಳ ಶಿಕ್ಷಣ ಸಂಗಾತಿ ʻಲರ್ನಿಂಗ್ ಕಂಪ್ಯಾನಿಯನ್ಸ್’ ‌

ಭಾರ್ವಾಡ ಸಮುದಾಯದ ಸುಮಾರು 200 ಮಕ್ಕಳಿಗೆ ಶಿಕ್ಷಣ ಸೌಲಭ್ಯ ಮಹಾರಾಷ್ಟ್ರದ ವಿದರ್ಭಾದ ಭಾರ್ವಾಡ ಎಂಬುದು ಒಂದು ಅರೆ ಅಲೆಮಾರಿ ಸಮುದಾಯ.…

56 mins ago

ಓದುಗರ ಪತ್ರ | ಸ್ಪೀಕರ್ ಸಭಾತ್ಯಾಗ ಮಾಡುವ ಸ್ಥಿತಿ ಬಾರದಿರಲಿ

ರಾಜ್ಯ ವಿಧಾನಸಭಾ ಅಧ್ಯಕ್ಷರಾದ ಯು.ಟಿ.ಖಾದರ್, ಸಚಿವರು ಶಾಸಕರ ಪ್ರಶ್ನೆಗಳಿಗೆ ಸಮರ್ಪಕ ಉತ್ತರ ನೀಡುತ್ತಿಲ್ಲ ಎಂದು ಆರೋಪಿಸಿ, ಅಧ್ಯಕ್ಷ ಪೀಠದಿಂದ ಹೊರನಡೆದ…

1 hour ago

ಓದುಗರ ಪತ್ರ | ಎಸ್‌ಎಸ್‌ಎಲ್‌ಸಿ ಪರೀಕ್ಷೆಯನ್ನು ಸಂಭ್ರಮದಿಂದ ಬರೆಯಿರಿ

ಮಾ.18ರಿಂದ ಏ.2ರ ವರೆಗೆ 2025-26ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆ ನಡೆಯಲಿದೆ. ಈ ಪರೀಕ್ಷೆ ವಿದ್ಯಾರ್ಥಿಗಳ ಜೀವನದ ಪ್ರಮುಖ ಘಟ್ಟವಾಗಿದೆ. ಪರೀಕ್ಷೆಯ…

3 hours ago

ಮೈಮುಲ್ : ಆಡಳಿತಾಧಿಕಾರಿ ನೇಮಕಕ್ಕೆ ಹೈ ತಡೆ

ಚುನಾವಣೆ ನಡೆಯುವ ತನಕ ಹಾಲಿ ಆಡಳಿತ ಮಂಡಳಿ ಮುಂದುವರಿಕೆ ಕೆ.ಬಿ.ರಮೇಶನಾಯಕ ಮೈಸೂರು: ಐದು ವರ್ಷಗಳ ಅವಧಿ ಮುಗಿದ ಮೈಸೂರು ಜಿಲ್ಲಾ…

3 hours ago

ಶಾಲಾ ಮಕ್ಕಳಿದ್ದ ವಾಹನಕ್ಕೆ ಟಿಪ್ಪರ್‌ ಡಿಕ್ಕಿ : 9 ಮಕ್ಕಳಿಗೆ ಪೆಟ್ಟು

ಗುಂಡ್ಲುಪೇಟೆ : ತಾಲ್ಲೂಕಿನ ಚಿಕ್ಕತುಪ್ಪೂರು ಗೇಟ್ ಬಳಿ ಶಾಲಾ ಮಕ್ಕಳನ್ನು ಕರೆದೋಯ್ಯುತಿದ್ದ ಟಾಟಾ ಏಸ್ ವಾಹನಕ್ಕೆ ಟಿಪ್ಪರ್ ಡಿಕ್ಕಿಯಾದ ರಭಸಕ್ಕೆ…

4 hours ago