ಚಾಮರಾಜನಗರ: ಜಿಲ್ಲೆಯ ಗ್ರಾಮೀಣ ಭಾಗದಲ್ಲಿ ಕಾಣಿಸಿಕೊಳ್ಳುತ್ತಿರುವ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸುವ ಉದ್ದೇಶದಿಂದ ನಗರದ ಜಿಲ್ಲಾ ಪಂಚಾಯಿತಿ ಕಚೇರಿಯಲ್ಲಿ ಸಹಾಯವಾಣಿ ಆರಂಭಿಸಲಾಗಿದೆ.
ಜಿಲ್ಲಾ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಲ್ಲಿ ಮಳೆಯ ಕೊರತೆಯಿಂದ ಎದುರಾಗುವ ಕುಡಿಯುವ ನೀರಿನ ಸಮಸ್ಯೆಗಳಿಗೆ ಗ್ರಾಮೀಣ ಭಾಗದ ಸಾರ್ವಜನಿಕರು ಜಿಲ್ಲಾ ಪಂಚಾಯಿತಿಯ ಸಹಾಯವಾಣಿ ಸಂಖ್ಯೆ ೦೮೨೨೬-೨೨೪೦೧೫ ಅನ್ನು ಸಂಪರ್ಕಿಸಬಹುದು. ಜಿಲ್ಲೆಯ ಯಾವುದೇ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ಕಂಡುಬಂದರೆ ಸಹಾಯವಾಣಿಗೆ ದೂರು ನೀಡಬಹುದು. ಸ್ವೀಕರಿಸುವ ಸಿಬ್ಬಂದಿಯು ಸಂಬಂಧಪಟ್ಟ ಗ್ರಾಮ ಪಂಚಾಯಿತಿಯ ಅಭಿವೃದ್ಧಿ ಅಧಿಕಾರಿ ಹಾಗೂ ತಾಲ್ಲೂಕು ಪಂಚಾಯಿತಿಯ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಗಮನಕ್ಕೆ ತರಲಿದ್ದಾರೆ. ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಅಗತ್ಯವಿದ್ದರೆ ಟ್ಯಾಂಕರ್ ಮೂಲಕ ಕುಡಿಯುವ ನೀರು ಸರಬರಾಜು ಮಾಡಬೇಕು. ಇಲ್ಲವೇ ಬೋರ್ವೆಲ್ ಕೊರೆಸಿ ನೀರಿನ ವ್ಯವಸ್ಥೆ ಮಾಡಬೇಕು. ದಿನದ ೨೪ ಗಂಟೆಯೊಳಗೆ ನೀರಿನ ಅಭಾವವನ್ನು ನಿವಾರಿಸಬೇಕಿದೆ. ಸಹಾಯವಾಣಿಗೆ ಯಾವಾಗಲಾದರೂ ಕರೆ ಮಾಡಿ ಸಮಸ್ಯೆ ತಿಳಿಸಬಹುದು ಎಂದು ಜಿಪಂ ಅಧಿಕಾರಿಗಳು ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ಮುಂಗಾರು ಮಳೆ ನಿರೀಕ್ಷಿತ ಪ್ರಮಾಣದಲ್ಲಿ ಬೀಳದೆ ಇರುವ ಕಾರಣ ಹನೂರು ತಾಲ್ಲೂಕಿನ ವ್ಯಾಪ್ತಿಯ ೨೦ಕ್ಕೂ ಹೆಚ್ಚು ಗ್ರಾಮಗಳಲ್ಲಿ ನೀರಿನ ಸಮಸ್ಯೆ ಕಾಣಿಸಿಕೊಂಡಿದೆ. ಜಿಲ್ಲಾ ಪಂಚಾಯಿತಿಯು ಸಮಸ್ಯೆಯನ್ನು ಪರಿಹರಿಸಲು ಹಲವು ಕ್ರಮಗಳನ್ನು ಕೈಗೊಂಡಿದೆ.
ನೀರಿನ ಸಮಸ್ಯೆ ತಲೆದೋರಿತ್ತು: ಹನೂರು ತಾಲ್ಲೂಕಿನ ದೊಮ್ಮನಗದ್ದೆ, ಬಂಡಳ್ಳಿ, ಗೊಲ್ಲರದಿಂಬ, ಸತ್ಯಮಂಗಲ, ಕೆಂಪಯ್ಯನ ಹಟ್ಟಿ, ಎಂ.ಟಿ.ದೊಡ್ಡಿ, ಪಳನಿಸ್ವಾಮಿ ದೊಡ್ಡಿ, ಕಾರಗೇರಿ ದೊಡ್ಡಿ, ಬೋಡ ಮುತ್ತುನೂರು, ಚಂಗವಾಡಿ, ಕೆವಿನ್ ದೊಡ್ಡಿ, ತೆಂಗಾಕೋಂಬು, ಪೋಂಗೋಬು, ಅಪ್ಪುಕಂಪಟ್ಟಿ, ಜಂಬೂಟ್ ಪಟ್ಟಿ, ಮಾರಿಕೊಟ್ಟಾಯಿ, ಜಲ್ಲಿಪಾಳ್ಯ, ಕೊಟ್ಟನ ಮೂಲೆ, ಕೂಡ್ಲೂರು, ಕೌದಳ್ಳಿ, ಹೊಸದೊಡ್ಡಿ, ದಂಟಳ್ಳಿ ಮೇಗನೂರು, ಕೆಳಗನೂರು, ಮೆದಗನಾಣೆ, ಕೊಂಬೈ ನಗರ, ಆಲದಮರ ಬಿದರಳ್ಳಿ, ಸುಳ್ವಾಡಿ, ಸಂದನಪಾಳ್ಯ ಅಂತೋನಿಯರ್ ಕೋವಿಲ್, ಮಾಮರ ದೊಡ್ಡಿ, ರಾಮಾಪುರ ಎರಡನೇ ವಾರ್ಡ್, ಗೋಪಿ ಶೆಟ್ಟಿಯೂರು, ಅರಬಗೆರೆ, ಹೊಸಳ್ಳಿ ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ತಲೆದೋರಿತ್ತು.
ಈಗಾಗಲೇ ಜಿಲ್ಲಾ ಪಂಚಾಯಿತಿಯ ಸಿಇಒ ಮೋನಾ ರೋತ್ ಅವರು ವಿವಿಧ ಗ್ರಾಮಗಳಿಗೆ ಖುದ್ದು ಭೇಟಿ ನೀಡಿ ಸೂಕ್ತ ಕ್ರಮ ವಹಿಸಬೇಕೆಂದು ತಾಲ್ಲೂಕು ಪಂಚಾಯಿತಿ ಇಒ ಉಮೇಶ್ ಹಾಗೂ ಸಂಬಂಧಪಟ್ಟ ಪಿಡಿಒಗಳಿಗೆ ಸೂಚಿಸಿದ್ದಾರೆ. ಶಾಸಕರಾದ ಎಂ.ಆರ್.ಮಂಜುನಾಥ್ ಇತ್ತೀಚೆಗೆ ಕೊಳ್ಳೇಗಾಲದಲ್ಲಿ ಅರಣ್ಯ ಇಲಾಖೆ ಮತ್ತು ಜಿಪಂನ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ಅಧಿಕಾರಿಗಳ ಸಭೆ ನಡೆಸಿದ್ದರು.
‘ಆಂದೋಲನ’ ವರದಿ ಪ್ರಕಟಿಸಿತ್ತು:
ಹನೂರು ತಾಲ್ಲೂಕಿನ ೩೮ ಗ್ರಾಮಗಳು ಕುಡಿಯುವ ನೀರಿನ ಸಮಸ್ಯೆ ಎದುರಿಸುತ್ತಿರುವ ಬಗ್ಗೆ ‘ಆಂದೋಲನ’ ದಿನಪತ್ರಿಕೆಯು ಸಮಗ್ರವಾಗಿ ವರದಿ ಮಾಡಿ ಗಮನ ಸೆಳೆದಿತ್ತು. ನೀರಿನ ಕೊರತೆ ಎದುರಿಸುತ್ತಿದ್ದ ಗ್ರಾಮಗಳ ಜನರನ್ನು ಮಾತನಾಡಿಸಿ ವರದಿ ಪ್ರಕಟಿಸಿತ್ತು. ಬಳಿಕ ಸಂಬಂಧಪಟ್ಟ ಜಿಲ್ಲಾ ಉಸ್ತುವಾರಿ ಸಚಿವರಾದ ಕೆ.ವೆಂಕಟೇಶ್, ಶಾಸಕರಾದ ಎ.ಆರ್.ಮಂಜುನಾಥ್ ಅವರನ್ನು ಕೂಡ ಮಾತನಾಡಿಸಿ ನೀರಿನ ಸಮಸ್ಯೆಯನ್ನು ಅವರ ಗಮನಕ್ಕೆ ತಂದಿತ್ತು.
” ಕುಡಿಯುವ ನೀರಿನ ಸಮಸ್ಯೆ ಪರಿಹರಿಸಲು ಸಹಾಯವಾಣಿಯನ್ನು ಆರಂಭಿಸಲಾಗಿದೆ. ಗ್ರಾಮೀಣ ಭಾಗದ ಸಾರ್ವಜನಿಕರು ಇದನ್ನುಸದುಪಯೋಗ ಮಾಡಿಕೊಳ್ಳಬೇಕು. ದೂರು ನೀಡಿದ ಕೂಡಲೇ ಪರಿಹರಿಸಲು ಕ್ರಮ ಕೈಗೊಳ್ಳಲಾಗುವುದು.”
– ಶ್ರುತಿ, ಉಪ ಕಾರ್ಯದರ್ಶಿ, ಜಿಲ್ಲಾ ಪಂಚಾಯಿತಿ
ಬೆಂಡರವಾಡಿ ಕೆರೆಗೆ ಹಾರಿ ಮಂಡ್ಯ ಜಿಲ್ಲೆಯ ವ್ಯಕ್ತಿ ಆತ್ಮಹತ್ಯೆ ಚಾಮರಾಜನಗರ: ಜೀವನದಲ್ಲಿ ಜಿಗುಪ್ಸೆಗೊಂಡು ವ್ಯಕ್ತಿಯೊಬ್ಬರು ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ…
ಹೈದರಾಬಾದ್: ತಮಿಳುನಾಡು ಮಾಜಿ ಸಿಎಂ ಜಯಲಲಿತಾ ಅವರ ಹೈದರಾಬಾದ್ನಲ್ಲಿ ಅವರ ಮನೆಗೆ ಅಧಿಕಾರಿಗಳು ಬೀಗ ಹಾಕಿದ್ದಾರೆ. 2016ರಲ್ಲಿ ನಿಧನರಾದ ಜಯಲಲಿತಾ…
ಬೆಂಗಳೂರು: ಎರಡು ಕ್ಷೇತ್ರಗಳ ಉಪಚುನಾವಣೆಯಲ್ಲಿ ಬಿಜೆಪಿ ಗೆಲುವು ಪಕ್ಕಾ ಎಂದು ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ…
ಬೆಂಗಳೂರು: ಇಲ್ಲಿನ ಯಲಹಂಕ ಠಾಣೆ ಪೊಲೀಸರು, ಸುಮಾರು 2 ಕೋಟಿ ರೂ ಮೌಲ್ಯದ ಡ್ರಗ್ಸ್ ಜಪ್ತಿ ಮಾಡಿದ್ದು, ನೈಜೀರಿಯಾ ಮೂಲದ…
ಕೋಲ್ಕತ್ತಾ: ಪಶ್ಚಿಮ ಬಂಗಾಳ ಚುನಾವಣೆಗೆ ದಿನಗಣನೆ ಆರಂಭವಾಗಿರುವ ಬೆನ್ನಲ್ಲೇ ಭಾರತೀಯ ಟೆನಿಸ್ ಐಕಾನ್ ಲಿಯಾಂಡರ್ ಪೇಸ್ ಇಂದು ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ.…
ಬೆಂಗಳೂರು: ಖಾಸಗಿ ಶಾಲೆಗಳು ಪರೀಕ್ಷೆಗಳು ಮುಗಿಯುತ್ತಿದ್ದಂತೆಯೇ 2026-27ನೇ ಸಾಲಿನ ಶುಲ್ಕವನ್ನು 5-10%, ಮತ್ತೆ ಕೆಲವು 10-15% ವರೆಗೆ ಏರಿಕೆ ಮಾಡಿವೆ.…