Andolana originals

ʼಅಜ್ಜಯ್ಯʼನೆಂಬ ಪದವೀಧರ

ಭ್ರಮರ ಕೆ. ಉಡುಪ
ಅಜ್ಜಯ್ಯ ತೀರಿಹೋಗಿ ಎರಡು ವರುಷಗಳಾಗುತ್ತಾ ಬಂತು. ನಮ್ಮಜ್ಜಯ್ಯ ಸಾಮಾನ್ಯರಲ್ಲಿ ಸಾಮಾನ್ಯರು. ನಾಲ್ಕನೇ ಕ್ಲಾಸನ್ನು ಆರು ಬಾರಿ ಓದಿದ್ದ ಅವರು ‘ಒಳ್ಳೆಯ ಅಜ್ಜಯ್ಯನಾಗುವುದು ಹೇಗೆ? ’ ಎಂಬ ವಿಷಯದಲ್ಲಿ ಮಾತ್ರ ಗಮನಹರಿಸಿದ್ದರೇನೊ!

ಚಿಕ್ಕವಳಿದ್ದಾಗ ನನ್ನ ಹುಟ್ಟುಹಬ್ಬಕ್ಕೆ ಅವರೊಂದು ಕುರ್ಚಿ ಮತ್ತು ಬಿಳಿ ಬಣ್ಣದ ಮೇಲೆ ಕೇಸರಿ ವೃತ್ತಗಳಿರುವ ಫ್ರಾಕ್ ಒಂದನ್ನು ಉಡುಗೊರೆಯಾಗಿ ನೀಡಿದ್ದರು. ಅಜ್ಜಯ್ಯ ನನಗೆಂದು ಕೊಟ್ಟ ಕುರ್ಚಿಯಲ್ಲಿ ಯಾರಾದರೂ ಕುಳಿತದ್ದನ್ನು ಕಂಡರೆ ಸಿಟ್ಟಾಗುತ್ತಿದ್ದೆ. ತನ್ನೆರಡು ಕಣ್ಣುಗಳಿಂದಲೇ ಅಮ್ಮ ಸುಮ್ಮನಿರೆಂದು ಹೆದರಿಸುತ್ತಿದ್ದರೆ, ಜೋರಾಗಿ ಅಳುತ್ತಾ ಅಜ್ಜಯ್ಯನ ಮಂಡಿಗೆ ತಲೆಯನ್ನಿತ್ತು ಕೂತುಬಿಡುತ್ತಿದ್ದೆ. ಅಜ್ಜಯ್ಯನೋ ಅಮ್ಮನಿಗೆ ಬೈಯ್ಯುತ್ತಲೇ, ನನ್ನನ್ನು ಸಮಾಧಾನಪಡಿಸುತ್ತಿದ್ದರು. ಆ ದಿನ ನನ್ನ ಊಟ, ನಿದ್ದೆಯೆಲ್ಲ ಅಜ್ಜಯ್ಯನ ಪಕ್ಕದಲ್ಲಿಯೇ.

ಅಜ್ಜಯ್ಯನ ಬೆನ್ನಿನ ಮೇಲೊಂದು ದೊಡ್ಡ ಚೆಂಡಿನಾಕಾರದ ಗೆಡ್ಡೆಯಿತ್ತು. ಹುಟ್ಟಿನಲ್ಲಿ ಚಿಕ್ಕದಾಗಿ ಕಾಣಿಸಿಕೊಂಡಿದ್ದ ಗುಳ್ಳೆ ವಯಸ್ಸಾದಂತೆ ಚೆಂಡಿನಾಕಾರವಾಗಿ ಬೆಳೆದು ನಿಂತಿತ್ತು. ಅವರು ಎಂದೂ ಅದರ ಬಗ್ಗೆ ವಿಪರೀತವಾಗಿ ಯೋಚಿಸಿದವರಲ್ಲ. ನಂಗಂತೂ ಅವರ ಬೆನ್ನೇರಿ ‘ಅಜ್ಜಯ್ಯನ ಬೆನ್ನ ಮೇಲೆ ಚೆಂಡು, ಚೆಂಡು! ’ ಎಂದು ಕುಣಿಯುವುದೇ ಕೆಲಸ. ನಾನು ನಾಲ್ಕನೇ ಕ್ಲಾಸಲ್ಲಿ ಇರುವಾಗ ನಮ್ಮೂರಿಗೆ ನಾಟಿವೈದ್ಯನೊಬ್ಬ ಬಂದಿದ್ದ. ಅದೇನೋ ಇಳಿವಯಸ್ಸಿನಲ್ಲಿ ಆಸೆಯಾಗಿ ಅವನಲ್ಲಿ ಒಂದು ಬಾಟಲಿ ತೈಲ ಕೊಂಡರು. ಅದನ್ನು ದಿನಾಲೂ ಅವರ ಬೆನ್ನಿಗೆ ತಿಕ್ಕುವುದು ನನ್ನ ಕೆಲಸ. ಆದರೆ ಆವತ್ತಿಗೆ ಅಜ್ಜಯ್ಯನ ಬೆನ್ನ ಗೆಡ್ಡೆ ಮಾಯವಾದಂತೆ ಎಂದು ಕನಸು ಕಾಣುತ್ತಿದ್ದೆ. ಸ್ವಲ್ಪ ದಿನಗಳ ನಂತರ ಗೆಡ್ಡೆ ಮೃದುವಾಯಿತು. ಆದರೆ ಗಾತ್ರ ಇನ್ನೂ ದೊಡ್ಡದಾಗುತ್ತಿರುವುದನ್ನು ಮನಗಂಡ ಅಜ್ಜಯ್ಯ ತೈಲದ ಸಹವಾಸವನ್ನೇ ಬಿಟ್ಟರು.

ಅಜ್ಜಯ್ಯ ಕೊರೊನಾ ಸಮಯದಲ್ಲಿ ಹುಷಾರಿಲ್ಲದೆ ಆಸ್ಪತ್ರೆಗೆ ಸೇರಿದಾಗ ಯಾರಿಗೂ ಅವರು ವಾಪಸ್ ಬರುವುದಿಲ್ಲವೆಂದು ಅನಿಸಿರಲಿಲ್ಲ. ಅವರು ಇನ್ನಿಲ್ಲವೆಂದು ಅಮ್ಮ ಫೋನಿನಲ್ಲಿ ಹೇಳಿದಾಗಲೂ ನಾನು ಅದೊಂದು ಕನಸೆಂದು ಭಾವಿಸಿ ಸುಮ್ಮನೆ ನಿದ್ದೆ ಮಾಡಿದ್ದೆ. ಆದರೆ ನನ್ನೊಳಗಿನ ಮೊಮ್ಮಗಳನ್ನು ವಾಸ್ತವಕ್ಕೆ ತಂದದ್ದು ಅಜ್ಜಯ್ಯನ ಕಾಲುಗಳು! ಪ್ರತಿ ಬಾರಿಯೂ ಅವರ ಉಗುರುಗಳನ್ನು ಕತ್ತರಿಸುವುದು ನನ್ನ ಇಷ್ಟದ ಕೆಲಸ. ಆದರೆ ಅವರಿಗೋ ಉಗುರು ಕತ್ತರಿಸುವುದೆಂದರೆ ಚೂರೂ ಇಷ್ಟವಿರುತ್ತಿರಲಿಲ್ಲ. ಅದೂ ಅಲ್ಲದೆ ‘ನೋವೂ! ! ! ’ ಎಂದು ಕಿರುಚುತ್ತಿದ್ದರು. ನಾನೂ ಚೆಂದ ಬೈಯುತ್ತಾ ಕೆಲಸ ಮುಂದುವರಿಸುತ್ತಿದ್ದೆ. ಆದರೆ ಕೊನೆಯ ದಿನ ನೋಡಿದ ಅವರ ಕಾಲುಗಳು, ಆ ಬೆರಳುಗಳು, ಕಪ್ಪು ಮಣ್ಣು ತುಂಬಿದ ಉಗುರುಗಳ ಚಿತ್ರ ಇನ್ನೂ ಮನಸ್ಸಿನಲ್ಲಿ ಹಾಗೇ ಇದೆ.

ಒಂಬತ್ತು ರೂಪಾಯಿಯ ಬೀಡಿ ತರಲು ಒಂದು ರೂಪಾಯಿ ಲಂಚ ಕೊಡುತ್ತಿದ್ದದ್ದು, ಅವರ ಪುಟ್ಟ ಕೋಣೆಯಲ್ಲಿ ನನ್ನ ಮತ್ತು ಅವರ ಅಮ್ಮನ ಫೋಟೋ ಅಂಟಿಸಿಕೊಂಡಿದ್ದು, ಪಾಸು ಫೇಲಿನ ದಿನ ಪ್ರತಿ ವರ್ಷವೂ ಮರೆಯದೆ ಚಾಕಲೇಟು ತರುತ್ತಿದ್ದದ್ದು, ತಲೆಬುಡವಿಲ್ಲದ ನನ್ನ ಮಾತುಗಳಿಗೆಲ್ಲ ಹೌದೆಂದು ತಲೆ ಆಡಿಸುತ್ತಿದ್ದದ್ದು, ಕೋಲಾಟ ಇದೆಯೆಂದರೆ ಚೆಂದದ ಮರದ ಕೋಲುಗಳನ್ನು ಮಾಡಿಕೊಡುತ್ತಿದ್ದದ್ದು, ಜೀವನದ ಮುಕ್ಕಾಲು ಭಾಗ ಜೊತೆಗಿದ್ದ ಬೀಡಿಯನ್ನು ನನ್ನ ಪುಟ್ಟ ತಮ್ಮಂದಿರಿಗಾಗಿ ಒಂದೇ ದಿನದಲ್ಲಿ ತ್ಯಾಗ ಮಾಡಿದ್ದೆಲ್ಲ ಈಗ ನೆನೆದರೆ ಕಣ್ಣಂಚು ಅರಿವಿಲ್ಲದೆ ಒದ್ದೆಯಾಗುತ್ತದೆ.

ಅವರು ಹೋದಮೇಲೆ ಎಷ್ಟೋ ದಿನ ನಮ್ಮನೆಯಲ್ಲಿ ನಗುವಿರಲಿಲ್ಲ. ಕೊನೆಗೆ ನಾವೆಲ್ಲರೂ ಮನಸಾರೆ ನಕ್ಕಿದ್ದು, ಶ್ರದ್ಧಾಂಜಲಿಯ ದಿನ ಮೌನಾಚರಣೆಯ ಸಮಯದಲ್ಲಿ ನಮ್ಮೂರ ಮರ್ಯಾದಸ್ತನೊಬ್ಬ ಕುಡಿದ ಅಮಲಿನಲ್ಲಿ ‘ನಾರಾಯಣ ಉಡುಪರಿಗೆ ಜೈ ಜೈ! ’ ಎಂದು ಕಿರುಚಿದಾಗ. ಬದುಕಿದಷ್ಟು ದಿನ ಯಾರಿಗೂ ತೊಂದರೆ ಮಾಡದ, ಯಾರ ಮೇಲೂ ಹೊಟ್ಟೆಕಿಚ್ಚು ಪಡದ, ಯಾವ ಮೊಮ್ಮಕ್ಕಳ ಮದುವೆ ನೋಡಿಯೇ ಸಾಯುತ್ತೇನೆಂಬ ಮಾತುಗಳಿಂದ ಕಾಡದ ನಮ್ಮಜ್ಜಯ್ಯ ಎಂದರೆ ನಮಗೆಲ್ಲ ಬಹಳ ಹೆಮ್ಮೆ. ಅದಕ್ಕೆ ನಾವು ಎಷ್ಟೇ ದೊಡ್ಡವರಾದರೂ ಸದಾ ‘ನಾರಾಯಣ ಉಡುಪರ ಮೊಮ್ಮಕ್ಕಳು’.

 

ಆಂದೋಲನ ಡೆಸ್ಕ್

Recent Posts

ಹಿಟಾಚಿ ಮೇಲೆ ಬಿದ್ದ ಗೋಡೆ: ಚಾಲಕ ಪಾರು

ಮಳವಳ್ಳಿ: ಪೂರಿಗಾಲಿ ಗ್ರಾಮದಲ್ಲಿ ರಸ್ತೆ ಅಗಲೀಕರಣ ಕಾಮಗಾರಿ ಆರಂಭವಾಗಿದ್ದು, ರಸ್ತೆ ಬದಿಯ ಕಟ್ಟಡ ನೆಲಸಮ ಮಾಡುವಾಗ ಕಟ್ಟಡದ ಗೋಡೆ ಹಿಟಾಚಿ…

3 hours ago

ಕೆಎಸ್‌ಓಯುಗೆ ನೂತನ ಕುಲಪತಿಯಾಗಿ ಡಾ.ಜ್ಞಾನ ಪ್ರಕಾಶ್ ನೇಮಕ

ಮೈಸೂರು: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ನೂತನ ಕುಲಪತಿಯಾಗಿ ಶಿಕ್ಷಣತಜ್ಞ, ವಿಜ್ಞಾನಿ ಪ್ರೊ.ಎ.ಪಿ.ಜ್ಞಾನಪ್ರಕಾಶ್ ಅವರನ್ನು ನೇಮಕ ಮಾಡಿ ಆದೇಶ ಹೊರಡಿಸಲಾಗಿದೆ.…

3 hours ago

ಕಾಡಾನೆ ದಾಳಿ: ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾದ ಮಹಿಳೆ

ಕೃಷ್ಣಾ ಸಿದ್ದಾಪುರ ವಿರಾಜಪೇಟೆ: ತಾಲೂಕಿನ ಪಳ್ಳಕೆರೆ ವ್ಯಾಪ್ತಿಯಲ್ಲಿ ಕಾಡಾನೆ ದಾಳಿಯಿಂದ ಮಹಿಳೆಯೊಬ್ಬರು ಗಂಭೀರವಾಗಿ ಗಾಯಗೊಂಡ ಘಟನೆ ನಡೆದಿದೆ. ಕೆಲಸಕ್ಕೆ ತೆರಳಿದ್ದ…

5 hours ago

ಮಾಜಿ ಸಿಎಂ ದೇವರಾಜ ಅರಸು ನೂತನ ಪ್ರತಿಮೆ ಅನಾವರಣ

ಮೈಸೂರು: ಮೈಸೂರು ನಗರದ ಜಿಲ್ಲಾಧಿಕಾರಿ ಕಚೇರಿ ಆವರಣದ ಬಳಿ ಮಾಜಿ ಸಿಎಂ ದೇವರಾಜ ಅರಸು ಅವರ ನೂತನ ಪ್ರತಿಮೆಯನ್ನು ಪ್ರತಿಷ್ಠಾಪಿಸಲಾಗಿದೆ.…

5 hours ago

ತುಂಗಭದ್ರಾ ಜಲಾಶಯದ ನೂತನ ಕ್ರಸ್ಟ್ ಗೇಟ್: ಮೂವರು ಸಿಎಂಗಳಿಂದ ಲೋಕಾರ್ಪಣೆ

ವಿಜಯನಗರ: ತುಂಗಭದ್ರಾ ಜಲಾಶಯದಲ್ಲಿ ಅಳವಡಿಸಲಾಗಿರುವ ನೂತನ ಕ್ರೆಸ್ಟ್ ಗೇಟ್‌ಗಳನ್ನು ಮೂವರು ಮುಖ್ಯಮಂತ್ರಿಗಳು ಉದ್ಘಾಟಿಸಿದ ಅಪರೂಪದ ಸಮಾರಂಭಕ್ಕೆ ಸಾವಿರಾರು ಮಂದಿ ಸಾಕ್ಷಿಯಾದರು.…

6 hours ago

ಮಾವು ಬೆಳೆಗಾರರ ನೆರವಿಗೆ ಬಂದ ಕೇಂದ್ರ ಸರ್ಕಾರ: ತೋತಾಪುರಿಯ ಒಂದು ಕ್ವಿಂಟಲ್‌ಗೆ ₹1,750 ನಿಗದಿ

ನವದೆಹಲಿ: ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು ಕೇಂದ್ರದ ಕೃಷಿ ಮತ್ತು ರೈತ ಕಲ್ಯಾಣ ಖಾತೆ ಮಂತ್ರಿಗಳಾದ ಶಿವರಾಜ್ ಸಿಂಗ್…

6 hours ago