Andolana originals

ತಗ್ಗದ ಗ್ಯಾಸ್ ಟ್ರಬಲ್; ಕೈಸುಡುತ್ತಿದೆ ತಿಂಡಿ ಬಿಲ್!

ಚಿರಂಜೀವಿ ಸಿ ಹುಲ್ಲಹಳ್ಳಿ

ಮೈಸೂರು: ಮಧ್ಯಪ್ರಾಚ್ಯ ದೇಶಗಳ ನಡುವಿನ ಯುದ್ಧದ ಪರಿಣಾಮ ಜಿಲ್ಲೆಯಲ್ಲಿ ತಿಂಗಳು ಕಳೆದರೂ ಗ್ಯಾಸ್ ಟ್ರಬಲ್ ತಗ್ಗಿಲ್ಲ. ಅಡುಗೆ ಅನಿಲ ಏಜೆನ್ಸಿಗಳು ಸಮರ್ಪಕವಾಗಿ ಸಿಲಿಂಡರ್ ಪೂರೈಕೆ ಸರಿಯಾಗಿ ಮಾಡದಿರುವುದು, ಪರೋಕ್ಷವಾಗಿ ಹೋಟೆಲ್ ತಿಂಡಿ ತಿನಿಸುಗಳ ದರಗಳು ಗಗನಮುಖಿಯಾಗಲು ಕಾರಣವಾಗಿದೆ. ಇದರ ಬಿಸಿಗೆ ಗ್ರಾಹಕರು ಕಂಗಾಲಾಗಿದ್ದಾರೆ.

ಗೃಹ ಬಳಕೆ ಗ್ಯಾಸ್ ಸಿಲಿಂಡರ್ ಪೂರೈಕೆಯಲ್ಲಿ ಅಂತಹ ವ್ಯತ್ಯಯವೇನೂ ಆಗಿಲ್ಲ. ಆದರೆ, ವಾಣಿಜ್ಯ ಬಳಕೆ ಗ್ಯಾಸ್ ಸಿಲಿಂಡರ್‌ಗಳ ಆಮದಿನಲ್ಲಿ ಅಡಚಣೆಯಾಗಿದೆ. ಇದರಿಂದ ಕೇಟರಿಂಗ್, ಫಾಸ್ಟ್ ಫುಡ್ ಸೇರಿದಂತೆ ಹೋಟೆಲ್ ಉದ್ಯಮಿಗಳ ಪರದಾಟ ಹೆಚ್ಚಾಗಿದೆ. ತೈಲ ಕಂಪೆನಿಗಳು ಶೇ.೩೦ರಷ್ಟು ವಾಣಿಜ್ಯ ಸಿಲಿಂಡರ್ ಪೂರೈಕೆಗೆ ಅಸ್ತು ಎಂದಿವೆ. ಆದರೆ, ಕೊಲ್ಲಿ ದೇಶಗಳಿಂದ ಭಾರತಕ್ಕೆ ಆಮದಾಗಬೇಕಿದ್ದ ಗ್ಯಾಸ್ ಸಿಲಿಂಡರ್‌ಗಳ ಅಭಾವ ನೀಗದೆ, ದಿನದಿಂದ ದಿನಕ್ಕೆ ಸಮಸ್ಯೆ ಬಿಗಡಾಯಿಸುತ್ತಿದೆ.

ಸರ್ಕಾರಿ ತೈಲ ಕಂಪೆನಿಗಳಾದ ಇಂಡೇನ್ (ಇಂಡಿಯನ್ ಆಯಿಲ್ ಕಾರ್ಪೊರೇಷನ್), ಭಾರತ್ ಗ್ಯಾಸ್ (ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿ.) ಮತ್ತು ಎಚ್‌ಪಿ ಗ್ಯಾಸ್ (ಹಿಂದೂಸ್ತಾನ್ ಪೆಟ್ರೋಲಿಯಂ) ಸಂಸ್ಥೆಗಳು ಅಡುಗೆ ಅನಿಲ (ಎಲ್ ಪಿಜಿ) ಸಿಲಿಂಡರ್ ಪೂರೈಕೆ ಮಾಡುತ್ತಿವೆ. ಆದರೆ, ಅದು ಆನೆ ಹೊಟ್ಟೆಗೆ ಅರೆ ಕಾಸಿನ ಮಜ್ಜಿಗೆಯಂತಾಗಿದೆ. ಎರಡು ವಾಣಿಜ್ಯ ಸಿಲಿಂಡರ್‌ಗಳನ್ನು

ಪಡೆಯುತ್ತಿದ್ದವರಿಗೆ ಕೇವಲ ಒಂದನ್ನು ಕೊಡುತ್ತಿದ್ದಾರೆ. ಅದರಲ್ಲಿಯೂ ಸರಿಯಾದ ಸಮಯಕ್ಕೆ ಕೊಡುವುದಿಲ್ಲ. ಖಾಸಗಿ ಏಜೆನ್ಸಿಗಳ ಮಾತಿರಲಿ, ಸರ್ಕಾರದ ಏಜೆನ್ಸಿಗಳೇ ಸುಲಿಗೆಗೆ ಮುಂದಾಗಿವೆ. ಸರ್ಕಾರ ನಿರ್ಧರಿಸಿರುವ ಬೆಲೆಯನ್ನು ಮಾತ್ರ ನಾಮಕಾವಸ್ತೆಗೆ ಹೇಳಿ ನಮ್ಮಿಂದ ೩,೬೦೦ ರೂ.ಗಳಷ್ಟು ಬೆಲೆ ಪಡೆಯುತ್ತಿದ್ದಾರೆ ಎಂದುಹೆಸರು ಹೇಳಲು ಇಚ್ಛಿಸದ ಪ್ರಸಿದ್ಧ ಹೋಟೆಲ್‌ನ ಮಾಲೀಕರೊಬ್ಬರು ದೂರಿದರು.

ಸರ್ಕಾರ ನೆಪಮಾತ್ರಕ್ಕೆ ಅಡುಗೆ ಅನಿಲ ಸಮಸ್ಯೆಯನ್ನು ಬಗೆಹರಿಸುತ್ತಿದೆ. ಆದರೆ, ಅವರು ಹೇಳಿದಷ್ಟು ಸಿಲಿಂಡರ್‌ಗಳನ್ನು ನಮಗೆ ಪೂರೈಕೆ ಮಾಡುತ್ತಿಲ್ಲ. ಇದನ್ನೇ ಬಂಡವಾಳ ಮಾಡಿಕೊಂಡು ನಮ್ಮಿಂದ ಹೆಚ್ಚು ಹಣ ಸುಲಿಗೆ ಮಾಡುತ್ತಿದ್ದಾರೆ ಎಂದು ಮೈಸೂರು ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಸಿ.ನಾರಾಯಣಗೌಡ ಹೇಳಿದರು.

ಕೆಲವು ಹೋಟೆಲ್‌ಗಳಲ್ಲಿ ತಿಂಡಿ ತಿನಿಸುಗಳ ದರವನ್ನು ಹೆಚ್ಚಳ ಮಾಡಲಾಗಿದ್ದರೂ ಸಿಲಿಂಡರ್‌ನ ವೆಚ್ಚಕ್ಕೆ ಹೊಂದಿಸಲು ಆಗುತ್ತಿಲ್ಲ. ಏಕೆಂದರೆ ದಿನ ಬಳಕೆಯ ವಸ್ತುಗಳ ದರ ಕೂಡ ಏರಿಕೆಯಾಗಿದೆ. ಈ ಬೆಲೆ ಹೆಚ್ಚಳವನ್ನು ಗ್ಯಾಸ್ ಸಿಲಿಂಡರ್ ಅಭಾವ ನಿವಾರಣೆಯಾದ ಬಳಿಕ ಸರಿ ಮಾಡಲಾಗುವುದು ಎಂದು ಅವರು ತಿಳಿಸಿದರು.

” ವಾಣಿಜ್ಯ ಗ್ಯಾಸ್ ಸಿಲಿಂಡರ್ ಪೂರೈಕೆಯಲ್ಲಿ ವ್ಯತ್ಯಯವಾಗಿದೆ ಎಂಬ ಕಾರಣ ನೀಡಿ ಹೋಟೆಲ್ಗಳು ತಿಂಡಿ ತಿನಿಸುಗಳ ದರ ಹೆಚ್ಚಿಸಿವೆ. ಆದರೆ, ಸಮಸ್ಯೆ ನಿವಾರಣೆಯಾದರೂ ಹೋಟೆಲ್‌ಗಳಲ್ಲಿ ಆಹಾರದ ಬೆಲೆಯನ್ನು ಮಾತ್ರ ಕಡಿಮೆ ಮಾಡುವುದಿಲ್ಲ. ಈ ಬಗ್ಗೆ ಸಂಬಂಧಪಟ್ಟವರು ಗಮಹರಿಸಿ ಹೆಚ್ಚುತ್ತಿರುವ ಹೋಟೆಲ್ ತಿನಿಸುಗಳ ಬೆಲೆಗೆ ಕಡಿವಾಣ ಹಾಕಬೇಕು.”

-ವಿ.ಕಿರಣ್‌ಕುಮಾರ್, ಹೋಟೆಲ್ ಗ್ರಾಹಕ, ಮೈಸೂರು

” ಜಿಲ್ಲೆಯಲ್ಲಿ ಅಡುಗೆ ಅನಿಲ ಸಮಸ್ಯೆ ಬಗೆಹರಿದಿಲ್ಲ. ಇಂಡೇನ್ ಗ್ಯಾಸ್ ಸಿಲಿಂಡರ್ಗೆ ೧,೯೬೦ ರೂ. ದರವನ್ನು ಸರ್ಕಾರ ನಿಗದಿಪಡಿಸಿದ್ದರೆ, ನಮ್ಮಿಂದ ೩,೬೦೦ ರೂ. ವಸೂಲಿ ಮಾಡುತ್ತಿದ್ದಾರೆ. ಇದರಿಂದ ಹೋಟೆಲ್ ಉದ್ಯಮ ಬಹಳಷ್ಟು ಸಂಕಷ್ಟಕ್ಕೆ ಸಿಲುಕಿದೆ. ”

ಸಿ.ನಾರಾಯಣ ಗೌಡ, ಅಧ್ಯಕ್ಷ, ಮೈಸೂರು ಹೋಟೆಲ್ ಮಾಲೀಕರ ಸಂಘ

” ಜಿಲ್ಲೆಯಲ್ಲಿ ವಾಣಿಜ್ಯ ಗ್ಯಾಸ್ ಸಿಲಿಂಡರ್ ಅಭಾವದಿನದಿಂದ ದಿನಕ್ಕೆ ಕಡಿಮೆಯಾಗುತ್ತಿದ್ದು, ಖಾಸಗಿ ಗ್ಯಾಸ್ ಏಜೆನ್ಸಿಸ್‌ಗಳವರು ಹೆಚ್ಚು ಹಣಪಡೆಯುತ್ತಿರಬಹುದು. ಇದರ ಬಗ್ಗೆ ನಮಗೆ ಮಾಹಿತಿ ಇಲ್ಲ. ಜಿಲ್ಲೆಗೆ ೨೫ ರಿಂದ ೩೦ ಸಾವಿರ ಸಿಲಿಂಡರ್‌ಗಳ ಅವಶ್ಯಕತೆ ಇದೆ. ಸಿಲಿಂಡರ್ ಅಭಾವದ ನಡುವೆಯೂ ಜಿಲ್ಲೆಯಲ್ಲಿ ಸಮಸ್ಯೆ ಬಹುತೇಕ ನಿವಾರಣೆಯಾಗಿದೆ. ಗೃಹ ಬಳಕೆಯ ಅಡುಗೆ ಅನಿಲ ಸಿಲಿಂಡರ್‌ಗೆ ಯಾವುದೇ ತೊಂದರೆ ಇಲ್ಲ.”

ಮಂಟೇಸ್ವಾಮಿ, ಜಂಟಿ ನಿರ್ದೇಶಕರ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ, ಮೈಸೂರು

ಬುಕ್ಕಿಂಗ್ ಸೇವೆ ಮತ್ತೆ ಸಕ್ರಿಯ: 

ಎಲ್‌ಪಿಜಿ ಎಚ್‌ಪಿ ಸಿಲಿಂಡರ್ ರೀಫಿಲ್ಲಿಂಗ್ (ಮರು ಪೂರಣ)ಗಾಗಿ ಎಸ್‌ಎಂಎಸ್ ಆಧಾರಿತ ಬುಕ್ಕಿಂಗ್ ಸೇವೆಯನ್ನು ಮತ್ತೆ ಸಕ್ರಿಯಗೊಳಿಸಲಾಗಿದೆ. ಗ್ರಾಹಕರು ಬುಕ್ ಎಂದು ಟೈಪ್ ಮಾಡಿ ೮೮೮೮೮ ೨೩೪೫೬ (ಐವಿಆರ್‌ಎಸ್ ಸಂಖ್ಯೆ) ಸಂದೇಶ ಕಳುಹಿಸಿ ಅಥವಾ ಮೊ.ಸಂ. ೯೪೯೩೬ ೦೨೨೨೨ಕ್ಕೆ ಮಿಸ್ಡ್ ಕಾಲ್ ಮಾಡುವ ಮೂಲಕ ಎಸ್ ಎಎಂಎಸ್ ಆಧಾರಿತ ಬುಕ್ಕಿಂಗ್ ವಿನಂತಿ ಸಲ್ಲಿಸಬಹುದು. ಯಶಸ್ವಿಯಾಗಿ ಬುಕ್ಕಿಂಗ್ ಆದ ನಂತರ ಗ್ರಾಹಕರಿಗೆ ದೃಢೀಕರಣ ಸಂದೇಶ ರವಾನೆಯಾಗಲಿದೆ ಎಂದು ಭಾರತೀಯ ಎಲ್‌ಪಿಜಿ ವಿತರಕರ ಸಂಘದ (ಎಲ್‌ಡಿಎಐ) ರಾಜ್ಯಾಧ್ಯಕ್ಷ ಮೆಹುಲ್ ಜೆ.ಪಟೇಲ್ ತಿಳಿಸಿದ್ದಾರೆ.

 

 

ಆಂದೋಲನ ಡೆಸ್ಕ್

Recent Posts

ಕಾಣೆಯಾಗಿದ್ದ ವ್ಯಕ್ತಿಯ ಮೃತದೇಹ ಪತ್ತೆ

ಶನಿವಾರಸಂತೆ: ಕಾಣೆಯಾಗಿದ್ದ ವ್ಯಕ್ತಿಯೊಬ್ಬರ ಮೃತದೇಹ ಮಂಗಳವಾರ ಸಂಜೆ ಕಾಫಿ ತೋಟದಲ್ಲಿ ಪತ್ತೆಯಾಗಿದ್ದು, ಪ್ರಕರಣ ಸಂಬಂಧ ಮೂವರು ಆರೋಪಿಗಳನ್ನು ಕೊಡಗು ಜಿಲ್ಲಾ…

1 hour ago

ದೇವರಾಜ ಅರಸು ಸೇತುವೆ ಮೇಲೆ ಸಂಚಾರ ನಿರ್ಬಂಧ

ಎಸ್.ಎಸ್.ಭಟ್ ನಂ.ಗೂಡು: ಹೊಸ ಸೇತುವೆಯಲ್ಲಿ ದ್ವಿಮುಖ ಸಂಚಾರಕ್ಕೆ ಪೂರ್ವಸಿದ್ಧತೆ ಕೈಗೊಳ್ಳದಿದ್ದರೆ ಅಪಾಯದ ಭೀತಿ ನಂಜನಗೂಡು: ಕಬಿನಿ ನದಿಯ ದೇವರಾಜ ಅರಸು…

1 hour ago

2 ತಿಂಗಳಾದರೂ ಕೋಟೆ ತಾಲ್ಲೂಕು ಬಿಜೆಪಿ ಅಧ್ಯಕ್ಷ ಸ್ಥಾನ ಖಾಲಿ

ಪಕ್ಷದ ನಿಷ್ಠಾವಂತ ಕಾರ್ಯಕರ್ತರಲ್ಲಿ ಅಸಮಾಧಾನ; ಶೀಘ್ರದಲ್ಲಿ ನೇಮಕ ಮಾಡಲು ಆಗ್ರಹ  ಮಂಜು ಕೋಟೆ ಎಚ್.ಡಿ.ಕೋಟೆ: ಬಿಜೆಪಿ ತಾಲ್ಲೂಕು ಅಧ್ಯಕ್ಷ ಸ್ಥಾನ…

1 hour ago

ಶುದ್ಧ ಕುಡಿಯುವ ನೀರಿನ ಘಟಕಕ್ಕೆ ಬೇಕು ಸರ್ಜರಿ

ದೇವರಾಜ ಅರಸು ಕಾಲೋನಿ, ಪೌರಕಾರ್ಮಿಕರ ಕಾಲೋನಿಯಲ್ಲಿ ನೀರಿನ ಸಮಸ್ಯೆ ಪ್ರಶಾಂತ್ ಎಸ್. ಮೈಸೂರು: ಮಹಾನಗರ ಪಾಲಿಕೆ ವಾರ್ಡ್ ಸಂಖ್ಯೆ ೬೨ರ…

1 hour ago

ರೈಲು ಪ್ರಯಾಣಿಕರಿಗೆ ಮತ್ತೊಂದು ಶಾಕ್

೮ ಗಂಟೆ ಮೊದಲು ಟಿಕೆಟ್ ರದ್ದಾಗದಿದ್ದರೆ ಸಂಪೂರ್ಣ ಹಣ ಖೋತಾ ಹೊಸದಿಲ್ಲಿ: ರೈಲು ಪ್ರಯಾಣ ಆರಂಭವಾಗುವ ೮ ಗಂಟೆ ಮೊದಲು…

2 hours ago