ಹಿಂದೊಮ್ಮೆ ನಡೆದಿತ್ತು ಮಿನಿ ಸಂಪುಟ ಸಭೆ; ರೇಷ್ಮೆ ಕೃಷಿ ಪುನಶ್ಚೇತನ, ಗ್ರಾಮಗಳ ಸ್ಥಳಾಂತರ ಇತ್ಯಾದಿ ಬೇಡಿಕೆಗಳ ಮಹಾಪೂರ
ಪ್ರಸಾದ್ ಲಕ್ಕೂರು
ಚಾಮರಾಜನಗರ: ಜಿಲ್ಲೆಯ ಯಾತ್ರಾಸ್ಥಳವಾದ ಮಲೆ ಮಹದೇಶ್ವರ ಬೆಟ್ಟದಲ್ಲಿ ರಾಜ್ಯ ಸಚಿವ ಸಂಪುಟ ಸಭೆಯು ಏ. ೨೪ರಂದು ನಡೆಯುತ್ತಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜಿಲ್ಲೆಗೆ ಹಲವು ಕೊಡುಗೆಗಳನ್ನು ಘೋಷಿಸಬಹುದು ಎಂಬ ನಿರೀಕ್ಷೆಯಲ್ಲಿ ಜನರಿದ್ದಾರೆ.
೨೦೧೩ರಲ್ಲಿ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಅವರು, ಆಗ ಸಚಿವರಾಗಿದ್ದ ಎಚ್. ಎಸ್. ಮಹದೇವ ಪ್ರಸಾದ್, ಮಾಜಿ ಸಂಸದ ಆರ್. ಧ್ರುವನಾರಾಯಣ, ಸ್ಥಳೀಯ ಶಾಸಕರ ಒತ್ತಾಸೆಯಂತೆ ೩ ಸಾವಿರ ಕೋಟಿ ರೂ. ಗಳಿಗೂ ಹೆಚ್ಚಿನ ಅನುದಾನ ಬಿಡುಗಡೆ ಮಾಡಿ ಜಿಲ್ಲೆಯ ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡಿದ್ದರು.
ಇದೀಗ ಮತ್ತೆ ಮುಖ್ಯಮಂತ್ರಿ ಆಗಿರುವ ಸಿದ್ದರಾಮಯ್ಯ ಅವರು ಜಿಲ್ಲೆಯಲ್ಲೇ ಸಚಿವ ಸಂಪುಟ ನಡೆಸುತ್ತಿದ್ದಾರೆ. ಹಾಗಾಗಿ ಜನರಲ್ಲಿ ಕುತೂಹಲ ಹೆಚ್ಚಾಗಿವೆ.
ಹಿಂದೊಮ್ಮೆ ಮಿನಿ ಸಂಪುಟ ಸಭೆ: ಎಸ್. ಎಂ. ಕೃಷ್ಣ ಅವರು ಮುಖ್ಯಮಂತ್ರಿ ಆಗಿದ್ದಾಗ ಬಿಳಿಗಿರಿ ರಂಗನಬೆಟ್ಟದಲ್ಲಿ ಮಿನಿ ಸಂಪುಟ ಸಭೆ ನಡೆಸಿದ್ದರು. ಎಚ್. ಡಿ. ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಆಗಿದ್ದಾಗ ಬಡಗಲಮೋಳೆ ಮತ್ತು ಕೊಂಬುಡಿಕ್ಕಿ ಗ್ರಾಮ ಗಳಲ್ಲಿ ವಾಸ್ತವ್ಯ ಹೂಡಿ ಸಂಚಲನ ಮೂಡಿಸಿದ್ದರು.
ಇಡೀ ಜಿಲ್ಲೆಯ ೫ ತಾಲ್ಲೂಕುಗಳಿಗೆ ಒಂದೇ ಉಪ ವಿಭಾಗವಿದ್ದು, ಮತ್ತೊಂದು ವಿಭಾಗವನ್ನು ರಚಿಸಬೇಕು. ಹನೂರು ತಾಲ್ಲೂಕಿನ ಮಲೆ ಮಹದೇಶ್ವರ ವನ್ಯಜೀವಿ ವಿಭಾಗದೊಳಗಿರುವ ಚಂಗಡಿ ಮತ್ತು ಮೆಂದಾರೆ ಗ್ರಾಮಗಳನ್ನು ಸ್ಥಳಾಂತರಿಸಬೇಕು ಎಂದು ಸ್ಥಳೀಯರು ಒತ್ತಾಯ ಮಾಡುತ್ತಿದ್ದಾರೆ.
ಕೊರೊನಾ ಕಾಲದಲ್ಲಿ ನಗರದಲ್ಲಿರುವ ಈಗಿನ ಸರ್ಕಾರಿ ಜಿಲ್ಲಾಸ್ಪತ್ರೆಯಲ್ಲಿ ಆಕ್ಸಿಜನ್ ಸಿಗದೆ ೩೬ಕ್ಕೂ ಹೆಚ್ಚು ಜನರು ಮೃತಪಟ್ಟರು. ಈ ದುರ್ಘಟನೆ ನಡೆದು ೪ ವರ್ಷಗಳು ಕಳೆದರೂ ಸಂತ್ರಸ್ತರಿಗೆ ನ್ಯಾಯ ಸಿಗಲಿಲ್ಲ. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ ಸಂತ್ರಸ್ತರಿಗೆ ಸರ್ಕಾರಿ ನೌಕರಿ ನೀಡುವುದಾಗಿ ಭರವಸೆ ನೀಡಿದ್ದರು. ಆದರೆ, ಕೆಲವರಿಗೆ ಹೊರಗುತ್ತಿಗೆ ನೌಕರಿ ದೊರೆತಿದೆ. ಇನ್ನು ಕೆಲವರಿಗೆ ಯಾವುದೇ ಕೆಲಸ ಸಿಕ್ಕಿಲ್ಲ.
ತಿ. ನರಸೀಪುರ ತಾಲ್ಲೂಕಿನ ಮಾಲಂಗಿಯಿಂದ ಚಾಮರಾಜನಗರಕ್ಕೆ ಎಕ್ಸ್ಪ್ರೆಸ್ ಕುಡಿಯುವ ನೀರು ಯೋಜನೆಗೆ ಅನುಮೋದನೆ ದೊರೆತಿಲ್ಲ. ಚಾಮರಾಜ ನಗರದಲ್ಲಿ ಗ್ರಾಮಾಂತರ ಬಸ್ ನಿಲ್ದಾಣ ನಿರ್ಮಾಣ ನನೆಗುದಿಗೆ ಬಿದ್ದಿದೆ. ಜಿಲ್ಲೆಯಲ್ಲಿ ೨ನೇ ಹಂತದ ಒಳಚರಂಡಿ ಯೋಜನೆಗಳ ಪ್ರಸ್ತಾವನೆ ಸರ್ಕಾರದ ಮುಂದಿದೆ.
ಮಲೆ ಮಹದೇಶ್ವರ ಬೆಟ್ಟದ ವ್ಯಾಪ್ತಿಯ ಸುಮಾರು ೨೦ ಗ್ರಾಮಗಳಲ್ಲಿ ಅನಾರೋಗ್ಯ ಪೀಡಿತರನ್ನು ಡೋಲಿ ಮೂಲಕ ಬೆಟ್ಟದ ಆಸ್ಪತ್ರೆ, ಇಲ್ಲವೇ ತಮಿಳುನಾಡಿನ ಮೆಟ್ಟೂರು, ಕೊಳತ್ತೂರಿನ ಆಸ್ಪತ್ರೆಗೆ ಸಾಗಿಸಬೇಕಿದೆ. ಈ ಸಮಸ್ಯೆ ನಿವಾರಿಸಲು ಬೆಟ್ಟದಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಮೇಲ್ದರ್ಜೆಗೆ ಏರಿಸಬೇಕು ಎಂಬ ಬೇಡಿಕೆಯೂ ಹಾಗೆಯೇ ಉಳಿದಿದೆ.
ಮಲೆ ಮಹದೇಶ್ವರ ಬೆಟ್ಟ ಮತ್ತು ಕಾವೇರಿ ವನ್ಯಧಾಮಗಳ ಒಳಭಾಗದ ಜನರಿಗೆ ಅನುಕೂಲವಾಗಲಿ ಎಂಬ ಉದ್ದೇಶದಿಂದ ಹಿಂದಿನ ಡಿಸಿಎಫ್ ಏಡುಕೊಂಡಲು ಅವರು ‘ಜನ ವನ’ ವಾಹನ ಸೇವೆಯನ್ನು ಆರಂಭಿಸಿದ್ದರು. ಕೆಲವು ತಿಂಗಳು ಕಾರ್ಯನಿರ್ವಹಿಸಿದ ವಾಹನಗಳು, ವಿಮೆ ಮಾಡಿಸಿಲ್ಲ ಎಂಬ ಕಾರಣಕ್ಕೆ ಸ್ಥಗಿತವಾಗಿವೆ. ಈ ಸೇವೆಯನ್ನು ಪುನಾರಂಭಿಸಬೇಕು.
ರೇಷ್ಮೆ ಕೃಷಿ ಪುನಶ್ಚೇತನದ ಆಶಯ. . .
೩ ದಶಕಗಳ ಹಿಂದೆ ಕೊಳ್ಳೇಗಾಲ ಮತ್ತು ಯಳಂದೂರು ತಾಲ್ಲೂಕುಗಳಲ್ಲಿ ರೇಷ್ಮೆ ಕೃಷಿ ಉತ್ತುಂಗದಲ್ಲಿತ್ತು. ಪರಿಣಾಮವಾಗಿಯೇ ಸಂತೇಮರಹಳ್ಳಿ, ಮಾಂಬಳ್ಳಿ ಮತ್ತು ಕೊಳ್ಳೇಗಾಲದಲ್ಲಿ ರೇಷ್ಮೆ ಕಾರ್ಖಾನೆಗಳು ಪ್ರಾರಂಭವಾಗಿದ್ದವು. ಆದರೆ ಅವು ಕಾಲಕ್ಕೆ ತಕ್ಕಂತೆ ಬದಲಾವಣೆ ಆಗದೆ ಮರಣಶ್ಯಯೆಯಲ್ಲಿವೆ. ಇವುಗಳ ಪುನಶ್ಚೇತನಕ್ಕೆ ಸರ್ಕಾರ ಮುಂದಾಗಬೇಕು.
ಪ್ರವಾಸೋದ್ಯಮ ನೀತಿ ಬೇಕಿದೆ
ಜಿಲ್ಲೆಯಲ್ಲಿ ಹಲವು ಪ್ರವಾಸಿ ತಾಣಗಳಿವೆ. ಹಾಗಾಗಿ ಸಮಗ್ರ ಪ್ರವಾಸೋದ್ಯಮ ನೀತಿ ರೂಪಿಸಬೇಕಿದೆ. ಹೊಗೇನಕಲ್ ಜಲಪಾತದಲ್ಲಿಯೂ ಅಭಿವೃದ್ಧಿ ಕೆಲಸಗಳಾಗಬೇಕಿದೆ. ಅವಳಿ ಜಲಾಶಯಗಳಾದ ಸುವರ್ಣಾವತಿ ಮತ್ತು ಚಿಕ್ಕಹೊಳೆ ಬಳಿ ಕೆಆರ್ಎಸ್ ಮಾದರಿಯ ಉದ್ಯಾನ ನಿರ್ಮಿಸಬೇಕೆಂಬ ಬೇಡಿಕೆ ಈಡೇರಿಲ್ಲ. ಬಿಳಿಗಿರಿರಂಗನಬೆಟ್ಟ, ಹಿಮವದ್ ಗೋಪಾಲಸ್ವಾಮಿ ಬೆಟ್ಟ, ಪಾರ್ವತಾಂಬ ಬೆಟ್ಟ, ಹುಲುಗನಮುರಡಿ ವೆಂಕಟರಮಣಸ್ವಾಮಿ ಬೆಟ್ಟ, ಜೋಡಿಕೆರೆಗಳನ್ನು ಅಭಿವೃದ್ಧಿಪಡಿಸಬೇಕಿದೆ. ಚಾ. ನಗರದ ಅಭಿವೃದ್ಧಿಗೆ ವಿಶೇಷ ಪ್ಯಾಕೇಜ್, ಜಿಲ್ಲೆಯಲ್ಲೂ ಎಂಸಿಡಿಸಿಸಿ ಬ್ಯಾಂಕ್ ಸ್ಥಾಪನೆ, ಬೆಂಗ ಳೂರು-ಕನಕಪುರ-ಮಳವಳ್ಳಿ- ಕೊಳ್ಳೇಗಾಲ- ಚಾಮರಾಜನಗರ ರೈಲು ಮಾರ್ಗ ನಿರ್ಮಾಣಕ್ಕೆ ಭೂಸ್ವಾಧಿನಕ್ಕಾಗಿ ಅನುದಾನ ಮೀಸಲಿಡಬೇಕು.
ನವೀನ್ ಡಿಸೋಜ ೧,೯೪೬ ಲಸಿಕೆದಾರರು, ೮೫ ಮೇಲ್ವಿಚಾರಕರು ೯೭೩ ಮನೆ ಭೇಟಿ ನೀಡುವ ತಂಡ ರಚನೆ ಪ್ರವಾಸಿಗರು, ವಲಸೆ ಕಾರ್ಮಿಕರ…
ಸೂರ್ಯಪುತ್ರ ಯಾರಾದ್ರೂ ಮತ್ತೆ ಮತ್ತೆ ಸಿಗ್ತಾನೆ ಇದ್ರೆ ‘ಭೂಮಿ ದುಂಡಗಿದೆ, ಅದ್ಕೆ ಮತ್ತೆ ಮತ್ತೆ ಎದುರುಬದುರಾಗೋದು’ ಅನ್ನೋ ಮಾತು ಕೇಳಿರ್ತೇವೆ.…
ತೀರಿಹೋದ ಕನ್ನಡದ ಹಿರಿಯ ಸಾಹಿತಿ ಡಾ.ಎಸ್.ಎಲ್.ಭೈರಪ್ಪನವರಿಗೆ ಮೈಸೂರಿನಲ್ಲಿ ಸ್ಮಾರಕ ನಿರ್ಮಿಸಲಾಗುವುದು ಎಂದು ರಾಜ್ಯದ ಮುಖ್ಯಮಂತ್ರಿಗಳು ಘೋಷಿಸಿದ್ದಾರೆ. ಈ ಉದ್ದೇಶಿತ ಸ್ಮಾರಕದ…
ಮೈಸೂರು : ಆಧುನಿಕ ಕಾಲಕ್ಕೆ ತಕ್ಕಂತೆ ಮನ್ರೇಗಾ ಹೆಸರನ್ನು ಕೇಂದ್ರ ಸರ್ಕಾರ ಬದಲಾಯಿಸಿದೆ. ಆದರೆ, ಕಾಂಗ್ರೆಸ್ ಮಾಡುತ್ತಿರುವ ಆರೋಪಕ್ಕೆ ಯಾವ…
ಬೆಳಗಾವಿ : ರಾಜ್ಯ ಸರ್ಕಾರ ರೈತ ಪರ ಸರಕಾರವಾಗಿದ್ದು, ಕಬ್ಬು ಬೆಳೆಯುವ ಪ್ರದೇಶದಲ್ಲಿ ಮಣ್ಣಿನ ಆರೋಗ್ಯ ಮತ್ತು ನೀರಿನ ಸಮಗ್ರ…