Andolana originals

ನಕಲಿ ನಂದಿನಿ ತುಪ್ಪ ತಯಾರಿಕಾ ಜಾಲ: ತನಿಖೆ ಚುರುಕು

ಎಚ್.ಎಸ್.ದಿನೇಶ್‌ಕುಮಾರ್

ಮೈಸೂರಿನಲ್ಲಿ ಪತ್ತೆಯಾಗಿದ್ದ ಘಟಕಕ್ಕೂ ನಂಟು

ಬೆಂಗಳೂರಿನಲ್ಲಿ ಸಿಕ್ಕಿಬಿದ್ದಿರುವ ಕಿಂಗ್‌ಪಿನ್ ದಂಪತಿಗಳೇ ಇದರ ರೂವಾರಿಗಳು

೪ ವರ್ಷಗಳ ಹಿಂದೆ ಹೊಸಹುಂಡಿ ಗ್ರಾಮದ ಬಳಿ ತಲೆ ಎತ್ತಿದ್ದ ನಂದಿನಿ ನಕಲಿ ಘಟಕ 

ಮೈಸೂರು: ನಕಲಿ ನಂದಿನಿ ತುಪ್ಪ ತಯಾರಿಕೆ ಜಾಲ ಬೆಂಗಳೂರಿನಲ್ಲಿ ಬೆಳಕಿಗೆ ಬಂದಿದೆ. ನಾಲ್ಕು ವರ್ಷಗಳ ಹಿಂದೆ ಇಂತಹುದೇ ಪ್ರಕರಣ ನಗರದಲ್ಲಿ ಪತ್ತೆಯಾಗಿತ್ತು. ಅದೇ ಜಾಲ ಇದೀಗ ಬೆಂಗಳೂರಿನಲ್ಲಿ ನಕಲಿ ತುಪ್ಪ ತಯಾರಿಕೆ ಮಾಡುತ್ತಿತ್ತು ಎಂದು ಪೊಲೀಸರ ವಿಚಾರಣೆ ವೇಳೆ ತಿಳಿದು ಬಂದಿದೆ. ನಕಲಿ ತುಪ್ಪ ತಯಾರಿಕಾ ಘಟಕದ ಮೇಲೆ ದಾಳಿ ನಡೆಸಿರುವ ಸಿಸಿಬಿ ಪೊಲೀಸರು ತಮಿಳುನಾಡು ಮೂಲದ ಆರೋಪಿಗಳಾದ ಶಿವಕುಮಾರ್ ಹಾಗೂ ರಮ್ಯ ಅವರನ್ನು ವಶಕ್ಕೆ ಪಡೆದಿದ್ದಾರೆ.

ವಿಚಾರಣೆ ವೇಳೆ ಅವರು ಮೈಸೂರಿನಲ್ಲಿ ನಡೆಸಲಾಗುತ್ತಿದ್ದ ನಕಲಿ ತುಪ್ಪ ತಯಾರಿಕಾ ಘಟಕ ಕೂಡ ನಮ್ಮ ನೇತೃತ್ವದಲ್ಲಿಯೇ ನಡೆಯುತ್ತಿತ್ತು, ಇಲ್ಲಿಗೆ ನಮ್ಮ ತಂಡದವರನ್ನೇ ನೇಮಿಸಿ ತುಪ್ಪ ತಯಾರಿಕೆ ಮಾಡಲಾಗುತ್ತಿತ್ತು ಎಂದು ಹೇಳಿದ್ದಾರೆ ಎನ್ನಲಾಗಿದೆ.

೨೦೨೧ರ ಡಿಸೆಂಬರ್ ೧೬ ರಂದು ಚಾಮುಂಡಿ ಬೆಟ್ಟದ ತಪ್ಪಲಿನ ಹೊಸಹುಂಡಿ ಗ್ರಾಮದ ಬಳಿ ನಂದಿನಿ ತುಪ್ಪದೊಂದಿಗೆ ಡಾಲ್ಡಾ ಬೆರೆಸಿ ನಕಲಿತುಪ್ಪ ತಯಾರಿಸುತ್ತಿದ್ದ ಘಟಕದ ಮೇಲೆ ಮಾನವ ಹಕ್ಕುಗಳ ರಕ್ಷಣಾ ವೇದಿಕೆ, ಮೈಮುಲ್ಹಾಗೂ ಆಹಾರ ಸುರಕ್ಷತಾ ಇಲಾಖೆ ಅಧಿಕಾರಿಗಳು ಹಾಗೂ ಪೊಲೀಸರು ಜಂಟಿಯಾಗಿ ದಾಳಿ ನಡೆಸಿದ್ದರು

ಅಂದು ಲಕ್ಷಾಂತರ ರೂ. ಮೌಲ್ಯದ ನಕಲಿ ತುಪ್ಪವನ್ನು ವಶಕ್ಕೆ ಪಡೆಯಲಾಗಿತ್ತು. ಆ ಪ್ರಕರಣದ ತನಿಖೆಯನ್ನು ಸಿಐಡಿ ಪೊಲೀಸರುನಡೆಸುತ್ತಿದ್ದು, ಅದಿನ್ನೂ ವಿಚಾರಣಾ ಹಂತದಲ್ಲಿಯೇ ಇದೆ. ಇದೀಗಬೆಂಗಳೂರಿನಲ್ಲಿ ನಕಲಿ ತುಪ್ಪ ತಯಾರಿಕಾ ಘಟಕದ ಮೇಲೆ ದಾಳಿ ನಡೆದಿರುವುದು ರಾಜ್ಯಾದ್ಯಂತ ಸುದ್ದಿಯಾಗಿದೆ.

ಹೊಸಹುಂಡಿ ಗ್ರಾಮದ ಸುಧಾಕರ್ ಎಂಬವರಿಗೆ ಸೇರಿದ ಜಮೀನನ್ನು ಬಾಡಿಗೆಗೆ ಪಡೆದಿದ್ದ ತಮಿಳುನಾಡು ಮೂಲದ ಮುರುಗೇಶ್ ನಕಲಿ ತುಪ್ಪ ತಯಾರಿಕಾ ಘಟಕವನ್ನು ನಡೆಸುತ್ತಿದ್ದನು. ಅವನೊಂದಿಗೆ ಅಶ್ವಿನಿ, ರಾಯಚೂರು ಮೂಲದ ರಾಘವೇಂದ್ರ, ಬೆಂಗಳೂರಿನ ಎಲ್.ಕುಮಾರ್, ಸಂತೋಷ್ ಎಂಬವರು ಅಕ್ರಮದಲ್ಲಿ ಭಾಗಿಯಾಗಿದ್ದರು. ಅಲ್ಲಿ ಏನು ನಡೆಯುತ್ತಿದೆ ಎಂಬುದು ಸ್ಥಳೀಯರಿಗೂ ತಿಳಿದಿರಲಿಲ್ಲ.

ಗೋದಾಮನ್ನು ಸಂಪೂರ್ಣವಾಗಿ ಪರಿಶೀಲಿಸಿದ್ದ ಅಧಿಕಾರಿಗಳು ನಕಲಿ ತುಪ್ಪ ತಯಾರಿಕೆಗೆ ಬಳಸುತ್ತಿದ್ದ ಯಂತ್ರಗಳು, ಕವರ್‌ಗಳು, ನಂದಿನಿ ಪೋಸ್ಟ್‌ರ್‌ಗಳು ಹೀಗೆ ಅಲ್ಲಿದ್ದ ಹಲವಾರು ವಸ್ತುಗಳನ್ನು ಜಪ್ತಿ ಮಾಡಿ ಗೋದಾಮಿಗೆ ಬೀಗ ಜಡಿದಿದ್ದರು. ಗೋದಾಮಿನಲ್ಲಿ ಅಸಲಿ ನಂದಿನಿ ತುಪ್ಪದ ಜೊತೆಗೆ ಸಾವಿರಾರು ಕೆಜಿ ಡಾಲ್ಡಾವನ್ನು ದಾಸ್ತಾನಿಡಲಾಗಿತ್ತು. ಡಾಲ್ಡ ಹಾಗೂ ತುಪ್ಪವನ್ನು ಕಾಯಿಸಲು ಯಂತ್ರಗಳು, ನಂದಿನಿ ಹೆಸರನ್ನೇ ಹೋಲುವ ಕವರ್‌ಗಳ ತಯಾರಿಕೆಯ ಯಂತ್ರ ಸ್ಥಳದಲ್ಲಿ ಪತ್ತೆಯಾಗಿದ್ದವು. ಖದೀಮರು ನಕಲಿ ತುಪ್ಪವನ್ನು ಸ್ಥಳೀಯವಾಗಿ ಮಾರಾಟ ಮಾಡುತ್ತಿದ್ದರು. ನಂದಿನಿ ಏಜೆನ್ಸಿ ಪಡೆದಿದ್ದೇನೆ ಎಂದು ಸುಳ್ಳು ಹೇಳುವ ಮೂಲಕ ಕಡಿಮೆ ದರದಲ್ಲಿ ಹಾಗೂ ಸಾಲದ ರೂಪದಲ್ಲಿ ನಕಲಿ ತುಪ್ಪವನ್ನು ಪೂರೈಕೆ ಮಾಡುತ್ತಿದ್ದರು.

ಇಂತಹ ಅಕ್ರಮಗಳನ್ನು ತಡೆಯಲು ಮೈಮುಲ್‌ನ ವಿಜಿಲೆನ್ಸ್ ತಂಡವನ್ನು ಚುರುಕುಗೊಳಿಸುತ್ತೇವೆ. ಪ್ರತಿ ವಾರಕ್ಕೊಮ್ಮೆ ಎಲ್ಲಾ ಮಿಲ್ಕ್ ಪಾರ್ಲರ್‌ಗಳಿಗೆ ಭೇಟಿ ಕೊಟ್ಟು ಪರಿಶೀಲಿಸಲಾಗುವುದು. ಗುಣಮಟ್ಟ ಕಾಯ್ದುಕೊಳ್ಳುವ ಸಲುವಾಗಿ ಪ್ರತಿ ವಾರ ಉತ್ಪನ್ನಗಳನ್ನು ಲ್ಯಾಬ್‌ಗೆ ತಂದು ಪರಿಶೀಲಿಸುತ್ತೇವೆ ಎಂದು ಅಂದು ಅಧಿಕಾರಿಗಳು ತಿಳಿಸಿದ್ದರು.

ಮೈಮರೆತ ಅಧಿಕಾರಿಗಳು:  ಆದರೆ, ನಂತರದ ದಿನಗಳಲ್ಲಿ ಇಡೀ ಪ್ರಕರಣವನ್ನು ಅಧಿಕಾರಿಗಳು ಮರೆತುಬಿಟ್ಟರು. ವಿಜಿಲೆನ್ಸ್ ತಂಡ ಎಚ್ಚೆತ್ತುಕೊಳ್ಳದ ಕಾರಣ ಇಂತಹುದೇಪ್ರಕರಣ ಮತ್ತೆ ಬೆಳಕಿಗೆ ಬಂದಿದೆ. ನಂದಿನಿ ತುಪ್ಪಕ್ಕೆ ದೇಶ, ವಿದೇಶಗಳಲ್ಲಿಭಾರೀ ಬೇಡಿಕೆ ಇರುವ ಇಂತಹ ಸಂದರ್ಭದಲ್ಲಿ ಅಸಲಿ, ನಕಲಿ ತುಪ್ಪದ ಮೇಲಾಟದಲ್ಲಿ ಗ್ರಾಹಕರಿಗೆ ಎಲ್ಲಿ ನಕಲಿ ತುಪ್ಪವನ್ನು ಬಳಸುತ್ತಿದ್ದೇವೆಯೋ ಎಂದು ಗೊಂದಲ ಮೂಡುವಂತಾಗಿದೆ. ರೈತರು, ಗ್ರಾಹಕರು ಮೈಮುಲ್‌ಗೆ ಎರಡು ಕಣ್ಣುಗಳಿದ್ದಂತೆ. ಇಬ್ಬರ ವಿಶ್ವಾಸವನ್ನು ಹಾಲು ಒಕ್ಕೂಟಗಳು ಕಾಪಾಡಿಕೊಳ್ಳಬೇಕಾದ ಜವಾಬ್ದಾರಿ ಇದೆ ಎಂಬುದನ್ನು ಅಧಿಕಾರಿಗಳು ಮರೆಯಬಾರದು.

ನಕಲಿ ತುಪ್ಪ ಪರೀಕ್ಷೆ ಹೇಗೆ?: 

೧. ನಿಮ್ಮ ಅಂಗೈಯಲ್ಲಿ ಒಂದು ಚಮಚ ತುಪ್ಪವನ್ನು ತೆಗೆದುಕೊಂಡು ನಿಧಾನವಾಗಿ ಉಜ್ಜಿಕೊಳ್ಳಿ. ಅದು ದೇಹದ ಉಷ್ಣತೆಗೆ ಪ್ರತಿಕ್ರಿಯಿಸಿ ಕರಗಿದರೆ ಶುದ್ಧ ತುಪ್ಪ. ಅದು ಕರಗದೆ ಘನ ಪದಾರ್ಥವಾಗಿದ್ದರೆ ಕಲಬೆರಕೆಯಾಗಿರುವ ಸಾಧ್ಯತೆ ಹೆಚ್ಚು

೨. ಒಂದು ಪಾರದರ್ಶಕ ಗಾಜಿನ ಬಾಟಲಿಯಲ್ಲಿ, ಸ್ವಲ್ಪ ತುಪ್ಪ ಮತ್ತು ಸ್ವಲ್ಪ ಸಕ್ಕರೆ ಸೇರಿಸಿ ಚೆನ್ನಾಗಿ ಅಲ್ಲಾಡಿಸಿ. ಕೆಲವು ನಿಮಿಷಗಳ ನಂತರ ಬಾಟಲಿಯ ಕೆಳಭಾಗದಲ್ಲಿ ಕೆಂಪು ಗೆರೆಗಳು ಕಾಣಿಸಿಕೊಂಡರೆ, ಅದು ಕಲಬೆರಕೆ ತುಪ್ಪ ಎಂದರ್ಥ.

೩. ಸ್ವಲ್ಪ ತುಪ್ಪಕ್ಕೆ ನಾಲ್ಕು ಹನಿ ಅಯೋಡಿನ್ ಸೇರಿಸಿ. ತುಪ್ಪ ನೀಲಿ ಬಣ್ಣಕ್ಕೆ ತಿರುಗಿದರೆ ಅದನ್ನು ಪಿಷ್ಟದೊಂದಿಗೆ ಬೆರೆಸಿದ ನಕಲಿ ತುಪ್ಪ ಎಂದು ಗುರುತಿಸಬೇಕು.

೪. ನಿಮ್ಮ ಕೈಗೆ ಸ್ವಲ್ಪ ತುಪ್ಪ ಹಚ್ಚಿ ಉಜ್ಜಿಕೊಳ್ಳಿ. ಅದು ಮೃದು ಮತ್ತು ನೈಸರ್ಗಿಕ ಪರಿಮಳವನ್ನು ಹೊಂದಿದ್ದರೆ ಅದು ಶುದ್ಧ ತುಪ್ಪ. ಪರಿಮಳ ಬೇಗನೆ ಮಾಯವಾದರೆ ಅದು ಕಲಬೆರಕೆ ಪದಾರ್ಥಗಳ ಮಿಶ್ರಣವಾಗಿರಬಹುದು.

೫. ತುಪ್ಪವನ್ನು ಸ್ವಲ್ಪ ಬಿಸಿ ಮಾಡಿ ಫ್ರಿಡ್ಜ್ನಲ್ಲಿಡಿ. ಒಂದೇ ಪದರವಾದರೇ ಅದು ಶುದ್ಧ ತುಪ್ಪ. ಎರಡು ಪ್ರತ್ಯೇಕ ಪದರಗಳಲ್ಲಿದ್ದರೆ ಅದು ಕಲಬೆರಕೆ ಎಣ್ಣೆಗಳಿಂದ ಕೂಡಿದ ತುಪ್ಪ.

೬. ತುಪ್ಪವನ್ನು ಬಿಸಿ ಮಾಡಿದಾಗ, ಅದು ಎಣ್ಣೆಯಂತೆ ಹರಿಯುವಂತೆ ಕಾಣಬೇಕು. ಕರಗಿದ ತುಪ್ಪವು ತಿಳಿ ಹಳದಿ ಅಥವಾ ಬಿಳಿ ಬಣ್ಣದಲ್ಲಿದ್ದರೆ, ಅದು ಕೂಡ ಕಲಬೆರಕೆಯ ಸಂಕೇತವಾಗಿದೆ.

ಆಂದೋಲನ ಡೆಸ್ಕ್

Recent Posts

ರಾಜ್ಯದ 50 ವರ್ಷಗಳ ಹಳೆಯ ಎಲ್ಲಾ ಡ್ಯಾಂ ಗೇಟ್‌ ಬದಲಾವಣೆಗೆ ನಿರ್ಧಾರ: ಡಿಸಿಎಂ ಡಿ.ಕೆ.ಶಿವಕುಮಾರ್‌

ಬೆಂಗಳೂರು: ರಾಜ್ಯದಲ್ಲಿ ಇರುವ 50 ವರ್ಷ ಹಳೆಯ ಎಲ್ಲಾ ಜಲಾಶಯಗಳ ಗೇಟ್‌ಗಳನ್ನು ಬದಲಾವಣೆ ಮಾಡಲು ನಮ್ಮ ಸರ್ಕಾರ ನಿರ್ಧಾರ ಮಾಡಿದೆ…

33 mins ago

ಗೃಹ ಬಳಕೆ ಗ್ಯಾಸ್‌ ಸಿಲಿಂಡರ್‌ಗೆ ಸಮಸ್ಯೆ ಇಲ್ಲ: ಸಚಿವ ಮುನಿಯಪ್ಪ

ಬೆಂಗಳೂರು: ಸಿಲಿಕಾನ್‌ ಸಿಟಿ ಬೆಂಗಳೂರಿನಲ್ಲಿ ಗ್ಯಾಸ್‌ ಸಿಲಿಂಡರ್‌ ಕೊರತೆ ಎಂಬ ವಿಚಾರಕ್ಕೆ ಸಂಬಂಧಿಸಿದಂತೆ ಆಹಾರ ಇಲಾಖೆ ಸಚಿವ ಮುನಿಯಪ್ಪ ಪ್ರತಿಕ್ರಿಯೆ…

51 mins ago

ಗುಂಡ್ಲುಪೇಟೆ: ಬರಗಿ ಗ್ರಾಮದಲ್ಲಿ ದೇವಸ್ಥಾನದ ಬಾಗಿಲು ಮುರಿದು ದೇವರನ್ನೇ ಹೊತ್ತೋಯ್ದ ಕಳ್ಳರು

ಮಹೇಂದ್ರ ಹಸಗೂಲಿ: ಗುಂಡ್ಲುಪೇಟೆ ತಾಲ್ಲೂಕು ವರದಿಗಾರರು  ಗುಂಡ್ಲುಪೇಟೆ: ತಾಲ್ಲೂಕಿನಾದ್ಯಂತ ಗ್ರಾಮೀಣ ಭಾಗದ ದೇವಸ್ಥಾನಗಳ ಕಳ್ಳತನ ಪ್ರಕರಣ ಸಂಖ್ಯೆ ದಿನದಿಂದ ದಿನಕ್ಕೆ…

1 hour ago

ನಮ್‌ ಜೀವನ ನಮ್ದಲ್ಲಾ.? ಕನ್ನಡದಲ್ಲೇ ಪೋಸ್ಟ್‌ ಹಾಕಿದ ರಶ್ಮಿಕಾ ಮಂದಣ್ಣ

ವಿವಾಹದ ಬಳಿಕ ಭಾರೀ ಸುದ್ದಿಯಲ್ಲಿರುವ ನಟಿ ರಶ್ಮಿಕಾ ಮಂದಣ್ಣ ಅವರು ಕನ್ನಡದಲ್ಲಿಯೇ ಪೋಸ್ಟ್‌ ಒಂದನ್ನು ಹಾಕಿದ್ದಾರೆ. ಇಲ್ಲಿ ತನಕ ನನಗೆ…

1 hour ago

ಅನೈತಿಕ ಸಂಬಂಧ; ಜೋಡಿ ಕೊಲೆ: ಮಹಿಳೆ ಸೋದರನಿಂದಲೇ ಕೃತ್ಯ

ಮಡಿಕೇರಿ: ಅನೈತಿಕ ಸಂಬಂಧ ಹಿನ್ನೆಲೆ ಸಹೋದರಿ ಹಾಗೂ ಆಕೆಯ ಜೊತೆ ಸಹ ಜೀವನ ನಡೆಸುತ್ತಿದ್ದ ವ್ಯಕ್ತಿಯನ್ನು ೭೦ ವರ್ಷದ ವೃದ್ಧ…

1 hour ago

ಬಿಕ್ಲು ಶಿವ ಕೊಲೆ ಪ್ರಕರಣ: ಶಾಸಕ ಭೈರತಿ ಬಸವರಾಜುಗೆ ಜಾಮೀನು ಮಂಜೂರು

ಬೆಂಗಳೂರು: ರೌಡಿಶೀಟರ್‌ ಬಿಕ್ಲು ಶಿವ ಕೊಲೆ ಪ್ರಕರಣದಲ್ಲಿ ಬಿಜೆಪಿ ಶಾಸಕ ಭೈರತಿ ಬಸವರಾಜುಗೆ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ಕೋರ್ಟ್‌ ಜಾಮೀನು…

2 hours ago