Excessive Rainfall Causes Rot Disease in Coffee Crop
ಕೃಷಿಕರಲ್ಲಿ ಹೆಚ್ಚಾದ ಆತಂಕ; ವಿಶೇಷ ಪ್ಯಾಕೇಜ್ ಘೋಷಣೆಗೆ ಒತ್ತಾಯ
ಲಕ್ಷ್ಮಿಕಾಂತ್ ಕೊಮಾರಪ್ಪ
ಸೋಮವಾರಪೇಟೆ: ಪಶ್ಚಿಮ ಘಟ್ಟದ ಬೆಟ್ಟಶ್ರೇಣಿ ವ್ಯಾಪ್ತಿಯ ಪುಷ್ಪಗಿರಿ ಬೆಟ್ಟದ ತಪ್ಪಲಿನಲ್ಲಿ ಈ ವರ್ಷ ಭಾರಿ ಪ್ರಮಾಣದಲ್ಲಿ ಮಳೆ ಸುರಿಯುತ್ತಿದ್ದು, ಕಾಫಿಗೆ ಕೊಳೆರೋಗ ಕಾಣಿಸಿಕೊಂಡಿದೆ. ತೀವ್ರ ತೇವಾಂಶ ಹಾಗೂ ಗಾಳಿಯ ಅಬ್ಬರವು ಬೆಳೆಗಾರರ ಬದುಕನ್ನು ದಿಕ್ಕಿಲ್ಲದತ್ತ ಎಳೆಯುತ್ತಿದೆ. ಅವಧಿಗೂ ಮುನ್ನವೇ ಮಳೆಗಾಲ ಪ್ರಾರಂಭವಾಗಿದ್ದರಿಂದ ಕಾಫಿ ತೋಟಗಳಿಗೆ ಔಷಧ ಸಿಂಪಡಣೆಗೆ ತೊಂದರೆಯಾಗಿತ್ತು.
ಈ ಬಾರಿ ಕಾಫಿ ಗಿಡಕ್ಕೆ ಉತ್ತಮ ಹೂಮಳೆ ಸಿಕ್ಕಿದ ಕಾರಣ ಅರೇಬಿಕಾ ಕಾಫಿ ಬೆಳೆಗಾರರು ಉತ್ತಮವಾದ ಬೆಳೆ ಬರುವ ನಿರೀಕ್ಷೆಯಲ್ಲಿದ್ದರು. ಆದರೆ, ಈಗ ಭಾರೀ ಮಳೆ ಹೊಡೆತಕ್ಕೆ ಕಾಫಿ ಗಿಡಗಳು ಕೊಳೆ ರೋಗಕ್ಕೆ ತುತ್ತಾಗುತ್ತಿವೆ. ವಿಪರೀತ ಶೀತ ಗಾಳಿಯಿಂದ ಕಾಫಿ ಗಿಡದಲ್ಲಿ ಕಾಯಿಗಳು ಉದುರುತ್ತಿವೆ. ಹೋಬಳಿ ವ್ಯಾಪ್ತಿಯ ರೈತರು ಪ್ರತಿ ವರ್ಷವೂ ಇದೇ ಪರಿಸ್ಥಿತಿ ಎದುರಿಸುವಂತಾಗಿದೆ.
ಮೇ ಅಂತ್ಯದಲ್ಲಿ ಭಾರೀ ಮಳೆಯಾಗಿ ನಂತರ ನಾಲ್ಕೈದು ದಿನಗಳ ಕಾಲ ಬಿಸಿಲು ಬಂದಿತ್ತು. ನಂತರ ಜೂನ್ ಮೊದಲನೇ ವಾರದಿಂದಲೇ ಮಳೆ ಆರಂಭಗೊಂಡಿದ್ದು, ಇದೀಗ ಧಾರಾಕಾರವಾಗಿ ಸುರಿಯುತ್ತಿರುವ ಹಿನ್ನೆಲೆಯಲ್ಲಿ ಕಾಫಿ ಗಿಡಗಳಿಗೆ ಸ್ಪ್ರೇ ಮಾಡಲು ಬಹುತೇಕ ಮಂದಿಗೆ ಸಾಧ್ಯವಾಗಿರಲಿಲ್ಲ. ಇದರೊಂದಿಗೆ ತೋಟದಲ್ಲಿ ಚಿಗುರು, ಗಿಡಕಪಾತು ಮಾಡಲೂ ಆಗಿರಲಿಲ್ಲ. ಪ್ರಾರಂಭದಲ್ಲಿ ಸುರಿದ ಭಾರೀ ಮಳೆಯಿಂದಾಗಿ ಕೊಳೆರೋಗ ಅತೀ ಶೀಘ್ರವಾಗಿ ವ್ಯಾಪಿಸಿದೆ.
ಪುಷ್ಪಗಿರಿ ಬೆಟ್ಟ ಶ್ರೇಣಿಯ ಗ್ರಾಮಗಳಾದ ಬೆಟ್ಟದಳ್ಳಿ, ಪುಷ್ಪಗಿರಿ, ಹಂಚಿನಳ್ಳಿ, ಕುಮಾರಳ್ಳಿ, ಹೆಗ್ಗಡಮನೆ, ಶಾಂತಳ್ಳಿ, ಕೂತಿ, ತೊಳೂರುಶೆಟ್ಟಳ್ಳಿ, ಚಿಕ್ಕ ತೋಳೂರು, ಕುಡಿಗಾಣ, ಬೀದಳ್ಳಿ, ಕೊತ್ನಳ್ಳಿ, ತಡ್ಡಿಕೊಪ್ಪ, ಹರಗ, ಬೆಟ್ಟದಕೊಪ್ಪ, ನಾಡ್ನಳ್ಳಿ, ಕುಂದಳ್ಳಿ, ಬೀಕಳ್ಳಿ, ಬೆಂಕಳ್ಳಿ ಗ್ರಾಮಗಳಲ್ಲಿ ಅವಧಿಗೂ ಪೂರ್ವ, ವಾಡಿಕೆಗಿಂತಲೂ ಅತೀ ಹೆಚ್ಚು ಮಳೆಯಾದ ಪರಿಣಾಮ ಕಾಫಿ ತೋಟದಲ್ಲಿ ಕೊಳೆರೋಗ ಹೆಚ್ಚಾಗಿ ಕಾಣಿಸಿಕೊಂಡಿದೆ. ಬೆಟ್ಟಶ್ರೇಣಿಯ ಪ್ರದೇಶವಾಗಿರುವ ಶಾಂತಳ್ಳಿ ವ್ಯಾಪ್ತಿಯಲ್ಲಿ ಕಾಫಿ ಹಾಗೂ ಏಲಕ್ಕಿ ಬೆಳೆಗಳನ್ನು ಬೆಳೆಯುತ್ತಿದ್ದು, ಏಲಕ್ಕಿ ಬೆಳೆಗೂ ಕೊಳೆರೋಗ ಬಾಧಿಸಿದೆ. ಅತಿವೃಷ್ಟಿಯಿಂದ ಶಾಂತಳ್ಳಿ ಹೋಬಳಿಯ ಕೃಷಿಕರಿಗೆ ಕಾಫಿ ಬೆಳೆ ನಷ್ಟದ ಆತಂಕ ಮೂಡಿಸಿದೆ. ಕೊಳೆ ರೋಗದಿಂದ ಕಾಫಿ ಬೆಳೆ ಉದುರುವಹಂತಕ್ಕೆ ಬಂದಿದ್ದು, ಸರ್ಕಾರ ವಿಶೇಷ ಪ್ಯಾಕೇಜ್ ಘೋಷಣೆ ಮಾಡಬೇಕೆಂದು ಬೆಳೆಗಾರರು ಒತ್ತಾಯಿಸಿದ್ದಾರೆ.
” ಪ್ರತಿ ವರ್ಷವೂ ಭಾರೀ ಮಳೆಯಿಂದ ಕಾಫಿ ಬೆಳೆಗಾರರು ನಷ್ಟ ಅನುಭವಿಸುತ್ತಿದ್ದೇವೆ. ಶಾಂತಳ್ಳಿ ಭಾಗದಲ್ಲಿ ಅತಿಯಾದ ಮಳೆ, ಗಾಳಿ ಮತ್ತು ಶೀತದ ಗಾಳಿ ಬೀಸುವುದರಿಂದ ಕಾಫಿ ಗಿಡಗಳಲ್ಲಿರುವ ಕಾಯಿ ಉದುರುತ್ತಿವೆ. ಸರ್ಕಾರ ಶಾಂತಳ್ಳಿ ಹೋಬಳಿ ವ್ಯಾಪ್ತಿಯ ಬೆಳೆಗಾರರಿಗೆ ವಿಶೇಷ ಪ್ಯಾಕೇಜ್ ಘೋಷಿಸಬೇಕು.”
-ಮೋಹಿತ್ ಗೌಡ, ಕಾಫಿ ಬೆಳೆಗಾರರು, ಚಿಕ್ಕತೋಳೂರು ಗ್ರಾಮ
” ಒಂದೊಮ್ಮೆ ಮಳೆ ಬಿಡುವು ನೀಡಿದರೆ ಉಳಿಕೆ ಕೆಲಸಗಳನ್ನು ಮಾಡಿಕೊಂಡು ಕೊಳೆರೋಗವನ್ನು ಹತೋಟಿಗೆ ತರಬಹುದು. ಮಳೆ ಹೀಗೇ ಮುಂದುವರಿದರೆಕಾಯಿಕಟ್ಟಿರುವ ಕಾಫಿಯೂ ನೆಲಕಚ್ಚಿ ಭಾರೀ ನಷ್ಟ ಅನುಭವಿಸಬೇಕಾಗುತ್ತದೆ.”
-ಬಿ.ಎನ್.ಸುಚಿತ್, ಕಾಫಿ ಕೃಷಿಕರು, ಅಬ್ಬಿಮಠ ಬಾಚಹಳ್ಳಿ
” ಮೇ ಅಂತ್ಯದಲ್ಲಿಯೇ ಭಾರೀ ಮಳೆಯಾಗಿದ್ದು, ಜೂನ್ನಲ್ಲಿ ಎಡೆಬಿಡದೇ ಮಳೆ ಸುರಿಯುತ್ತಿದೆ. ಸ್ಪ್ರೇ ಇನ್ನಿತರ ಕೆಲಸ ಕಾರ್ಯಗಳು ಬಾಕಿಯಾಗಿರುವುದರಿಂದ ಕೊಳೆರೋಗ ಹೆಚ್ಚು ಹರಡಲು ಕಾರಣವಾಗುತ್ತಿದೆ.”
–ವಿಮಲ ಪಳಂಗಪ್ಪ, ಕೃಷಿಕರು, ಚಾಮೆರಾಮನೆ
ರಂಗಕಲೆಯ ಜೀವಂತಿಕೆಯನ್ನು ಕಾಪಾಡುವ ಹೊಣೆ ವಿಶಾಲ ಸಮಾಜದ ಮೇಲಿದೆ. ನಾ.ದಿವಾಕರ ವರ್ತಮಾನದ ಸಂದರ್ಭದಲ್ಲಿ ನಮ್ಮ ಸಮಾಜ ಎದುರಿಸುತ್ತಿರುವ ಜಟಿಲ ಸಮಸ್ಯೆಗಳನ್ನು…
ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ವಿರುದ್ಧ ‘ಧರ್ಮ ಯುದ್ಧ’ ಸಾರಿರುವ ಆದಿಗುರು ಶಂಕರಾಚಾರ್ಯರೇ ಸ್ಥಾಪನೆ ಮಾಡಿದ ಜ್ಯೋತಿರ್ ಪೀಠದ…
ಶಾಲಾ-ಕಾಲೇಜುಗಳಲ್ಲಿ ಮೊಬೈಲ್ ಬಳಕೆ ನಿಷೇಧಕ್ಕೆ ಸರ್ಕಾರ ಚಿಂತನೆ ಹಿನ್ನೆಲೆ ವಿದ್ಯಾರ್ಥಿಗಳ ಮನದ ಮಾತು ಶಾಲಾ-ಕಾಲೇಜುಗಳಲ್ಲಿ ಮೊಬೈಲ್ ಬಳಕೆ ನಿಷೇಧಕ್ಕೆ ಸರ್ಕಾರ…
ಗಿರೀಶ್ ಹುಣಸೂರು ನೊಂದ ಕುಂಟುಂಬಗಳಿಗೆ ಲಕ್ಷ ಲಕ್ಷ ರೂ. ಪರಿಹಾರ ತಲುಪಿಸಿರುವ ರಾಜ್ಯ ಸರ್ಕಾರ ಶಾಶ್ವತ ಪರಿಹಾರಕ್ಕಾಗಿ ಎದುರು ನೋಡುತ್ತಿರುವ…
ಕೆ.ಬಿ.ರಮೇಶ ನಾಯಕ ಮುಖ್ಯಮಂತ್ರಿ ಸಿದ್ದರಾಮಯ್ಯ ಎದುರು ಹಲವು ಯೋಜನೆಗಳನ್ನು ಪ್ರಸ್ತಾಪಿಸಿದ ಡಿಸಿ ಮೈಸೂರು: ಬೆಂಗಳೂರು ಬಳಿಕ ವೇಗವಾಗಿ ಬೆಳೆಯುತ್ತಿರುವ ಸಾಂಸ್ಕೃತಿಕ…
ಅಮರಾವತಿ : ಹಿಂದಿನ ವೈಎಸ್ಆರ್ಸಿಪಿ ಆಡಳಿತದ ಅವಧಿಯಲ್ಲಿ ಆಂಧ್ರ ವಿಧಾನಸಭೆಯ ಪ್ರಸ್ತುತ ಉಪಸಭಾಪತಿ ಕೆ. ರಘುರಾಮ ಕೃಷ್ಣ ರಾಜು ಅವರ…