ಹೆಚ್.ಎಸ್.ದಿನೇಶ್ ಕುಮಾರ್
ಬೆಲೆಗಳಲ್ಲಿ ಏರಿಳಿತ; ಟೊಮೋಟೋ ತುಟ್ಟಿ
ಮೈಸೂರು: ಕಳೆದ ಒಂದು ತಿಂಗಳಿನಿಂದ ತರಕಾರಿ ಬೆಲೆಗಳಲ್ಲಿ ಏರುಪೇರಾಗುತ್ತಿದ್ದು, ಮದುವೆ ಹಾಗೂ ಇನ್ನಿತರ ಸಮಾರಂಭದಲ್ಲಿ ಪ್ರಮುಖವಾಗಿ ಸಾಂಬಾರ್ ತಯಾರಿಕೆಗೆ ಬಳಸುವ ನುಗ್ಗೆ ಕಾಯಿ ಇದೇ ಪ್ರಥಮ ಬಾರಿಗೆ ಕೆಜಿಯೊಂದಕ್ಕೆ ೪೫೦ ರೂ.ನಿಂದ ೫೦೦ ರೂ. ದಾಟಿದೆ. ಎರಡು ದಿನಗಳ ಹಿಂದೆ ಒಂದು ಕೆಜಿಗೆ ೨೦ ರೂ.ಗೆ ದೊರಕುತ್ತಿದ್ದ ಟೊಮೊಟೋ ೫೦ ರೂ. ದಾಟಿದೆ.
ಪ್ರಸಕ್ತ ವರ್ಷದಲ್ಲಿ ಹೆಚ್ಚು ಮಳೆಯಾದ ಕಾರಣ ಗ್ರಾಮೀಣ ಪ್ರದೇಶದ ಬಹುತೇಕ ಕೆರೆ ಕಟ್ಟೆಗಳೆಲ್ಲವೂ ನೀರಿನಿಂದ ತುಂಬಿವೆ. ರಾಗಿ, ಜೋಳ, ಬತ್ತ, ತಂಬಾಕು ಬೆಳೆಗಳ ಜೊತೆಯಲ್ಲಿ ಉಪ ಬೆಳೆಗಳಾದ ತರಕಾರಿಯನ್ನು ಬೆಳೆಯುವ ರೈತರಿಗೆ ಕಳೆದ ಎರಡು ತಿಂಗಳಿಂದ ಮಾರುಕಟ್ಟೆಯಲ್ಲಿ ಸ್ಥಿರವಾದ ಬೆಲೆಯಿಲ್ಲದ ಕಾರಣ ತರಕಾರಿ ಬೆಳೆಯಲು ಹಿಂಜರಿಯುತ್ತಿದ್ದಾರೆ.
ಎರಡು ತಿಂಗಳುಗಳ ಹಿಂದೆ ಇದ್ದ ಬೆಲೆಗಳು ಕಳೆದ ತಿಂಗಳು ಸ್ವಲ್ಪಮಟ್ಟಿಗೆ ಇಳಿಕೆಯಾಗಿ ಮತ್ತೆ ಏರಿಕೆಯನ್ನು ಕಂಡಿವೆ. ಕೆಲ ತರಕಾರಿ ಬೆಲೆಗಳು ಸಮಸ್ಥಿತಿಯನ್ನು ಕಾಯ್ದುಕೊಂಡಿದ್ದರೆ, ಮತ್ತೆ ಕೆಲ ತರಕಾರಿಗಳು ಗಗನಕ್ಕೇರಿವೆ. ಮದುವೆ ಸಂದರ್ಭದಲ್ಲಿ ಹೆಚ್ಚು ಬಳಸಲ್ಪಡುವ ನುಗ್ಗೆಕಾಯಿಯ ಬೆಲೆ ಕೆಜಿ ಒಂದಕ್ಕೆ ೪೫೦ ರೂ.ಗಳು…! ಎರಡು ಮೂರು ದಿನಗಳ ಹಿಂದೆ ಮಾರುಕಟ್ಟೆಯಲ್ಲಿ ಒಂದು ಕೆಜಿ ಟೊಮೊಟೋ ೧೫ ರೂ. ನಿಂದ ೨೦ ರೂ. ಗಳಿಗೆ ದೊರಕುತ್ತಿತ್ತು. ಆದರೀಗ ಕೆಜಿ ಟಮೋಟೋ ೬೦ ರೂ. ಗಳ ಆಸುಪಾಸಿನಲ್ಲಿ ಮಾರಾಟವಾಗುತ್ತಿರುವುದು ಗ್ರಾಹಕರನ್ನು ಕಂಗೆಡಿಸಿದೆ.
ಸಾರ್ವಜನಿಕರು ಕೂಡ ಒಂದಲ್ಲಾ ಒಂದು ರೀತಿಯಲ್ಲಿ ಪ್ರತಿ ನಿತ್ಯ ತರಕಾರಿಯನ್ನು ಬಳಸಲೇಬೇಕು.ಆದರೆ, ಬೆಲೆಗಳು ದಿನದಿಂದ ದಿನಕ್ಕೆ ಬದಲಾಗುತ್ತಿರುವ ಪರಿಣಾಮ ತಮಗೆ ಬೇಕಾದ ತರಕಾರಿಗಳನ್ನು ಕೊಳ್ಳಲು ಗ್ರಾಹಕನಿಗೆ ಸಾಧ್ಯವಾಗುತ್ತಿಲ್ಲ. ಹೀಗಾಗಿ ಮಾರುಕಟ್ಟೆಯಲ್ಲಿ ಕಡಿಮೆ ಬೆಲೆಗೆ ದೊರಕುವ ತರಕಾರಿಯನ್ನು ಗ್ರಾಹಕರು ಖರೀದಿಸುತ್ತಿದ್ದಾರೆ.
ಜಿಲ್ಲೆಯ ಹುಣಸೂರು, ಕೆ.ಆರ್.ನಗರ, ಬನ್ನೂರು, ಬೋಗಾದಿ, ಜಯಪುರ, ಪಿರಿಯಾಪಟ್ಟಣ, ಹೆಚ್.ಡಿಕೋಟೆ ಮತ್ತಿತರ ಸ್ಥಳಗಳಿಂದ ಮೈಸೂರು ನಗರದ ಮಾರುಕಟ್ಟೆಗಳಿಗೆ ತರಕಾರಿ ಪೂರೈಕೆಯಾಗುತ್ತದೆ. ಕೆಲ ರೈತರು ಮಳೆಯಾಧಾರಿತ ರೀತಿಯಲ್ಲಿ ತರಕಾರಿಗಳನ್ನು ಬೆಳೆದರೆ, ಮತ್ತೆ ಕೆಲ ರೈತರು ತರಕಾರಿ ಬೆಳೆಗೆ ಬೋರ್ ವೆಲ್ ನೀರನ್ನು ಬಳಸಿಕೊಳ್ಳುತ್ತಾರೆ. ನಾವುಗಳು ಪ್ರತಿನತ್ಯ ಬಳಸುವ ಹುರಳೀಕಾಯಿ, ಪಡುವಲಕಾಯಿ, ಸೌತೇಕಾಯಿ, ನುಗ್ಗೇಕಾಯಿ,ಕ್ಯಾರೆಟ್, ಹೂಕೋಸು, ಮೆಣಸಿನಕಾಯಿ, ಬದನೆಕಾಯಿ, ಹೀರೇಕಾಯಿ, ಕುಂಬಳಕಾಯಿ, ಹಸಿ ಬಟಾಣಿ, ಮತ್ತಿತರ ತರಕಾರಿಗಳ ಬೆಲೆಗಳಲ್ಲಿ ಕಳೆದ ಎರಡು ತಿಂಗಳಿನಿಂದ ಮೂರ್ನಾಲ್ಕು ಬಾರಿ ಏರಿಳಿತ ಕಂಡು ಬಂದಿದೆ.
ಕಳೆದ ತಿಂಗಳು ೨೫ ರಿಂದ ೩೦ ರೂ. ಇದ್ದ ಕೆಜಿ ಹುರಳೀಕಾಯಿ ಬೆಲೆ ೪೦ ರೂ.ಗೆ ಏರಿಕೆಯಾಗಿದೆ. ಕ್ಯಾರೆಟ್ ೪೦ ರೂ.ಗಳಿಂದ ೬೦ ರೂ.ಗೆ, ಮೆಣಸಿನಕಾಯಿ ೪೦ ರೂ.ನಿಂದ ೬೦ ರೂ.ಗೆ, ಬದನೆ ೩೦ ರೂ.ನಿಂದ ೪೦ ರೂ.ಗೆ ಹೆಚ್ಚಳವಾಗಿದ್ದರೆ, ಕೆಜಿ ಹಸಿ ಬಟಾಣೆ ಬೆಲೆ ೬೦ರೂ.ದಾಟಿದೆ.
ಉಳಿದಂತೆ ಹೀರೇಕಾಯಿ, ಎಲೆಕೋಸು. ಬೀಟ್ ರೋಟ್, ದಪ್ಪ ಮೆಣಸಿನಕಾಯಿ, ಬೂದುಗುಂಬಳ, ತೊಗರಿಕಾಯಿ, ಸೌತೇಕಾಯಿ, ಮತ್ತಿತರ ತರಕಾರಿಗಳು ೩೦ ರಿಂದ ೪೦ ರೂ ವರೆಗೆ ಮಾರಾಟವಾಗುವ ಮೂಲಕ ಬೆಲೆಗಳಲ್ಲಿ ಸಮಸ್ಥಿತಿ ಕಾಯ್ದುಕೊಂಡಿವೆ. ಸಿಹಿ ಕುಂಬಳವನ್ನಂತೂ ಕೇಳುವವರೇ ಇಲ್ಲದಂತಾಗಿದೆ. ಗುರುವಾರ ಎಪಿಎಂಸಿ ಮಾರುಕಟ್ಟೆಯಲ್ಲಿ ಕೆಜಿ ಕುಂಬಳ ೭ ರಿಂದ ೮ ರೂ. ಗೆ ಮಾರಾಟವಾದರೆ, ಚಿಲ್ಲರೆ ಮಳಿಗೆಗಳಲ್ಲಿ ೨೦ ರೂ. ಕೆಜಿಗೆ ಮಾರಾಟವಾಗುತ್ತಿದೆ. ವಿಪರ್ಯಾಸವೆಂದರೆ ಕಳೆದ ತಿಂಗಳು ೮ ರೂ.ಗೆ ಏರಿಕೆಯಾಗಿದ್ದ ಕೊತ್ತಂಬರಿ ಹಾಗೂ ಕರಿಬೇವು ಇಂದು ೩ ರಿಂದ ೪ ರೂ.ಗೆ ದೊರಕುತ್ತಿದೆ. ಉಳಿದಂತೆ ಸಬಸಿಗೆ, ದಂಟು, ಪಾಲಕು, ಕೀರೆ ಮತ್ತಿತರ ಸೊಪ್ಪಗಳ ಬೆಲೆ ಒಂದು ಕಟ್ಟಿಗೆ ೩ ರಿಂದ ೪ ರೂ.ಗೆ ದೊರಕುತ್ತಿದೆ.
ಎರಡು ತಿಂಗಳಿನಿಂದ ತರಕಾರಿ ದರಗಳಲ್ಲಿ ಏರಿಕೆ ಇಳಿಕೆ ಸಾಮಾನ್ಯ ಎಂಬಂತಾಗಿದೆ. ಎಲ್ಲೆಡೆ ನೀರಿನ ಕೊರತೆ ಹೆಚ್ಚಾಗಿ ಕಂಡುಬಾರದ ಪರಿಣಾಮ ರೈತರು ಹೆಚ್ಚು ತರಕಾರಿಗಳನ್ನು ಬೆಳೆಯುತ್ತಿದ್ದಾರೆ.
” ಮಳೆ ಹೆಚ್ಚು ಬಿದ್ದಲ್ಲಿ ನುಗ್ಗೆಕಾಯಿಯ ಇಳುವರಿ ಕಡಿಮೆಯಾಗುತ್ತದೆ. ಜೊತೆಗೆ ಮದುವೆಗಳ ಸೀಜನ್ ಇರುವ ಕಾರಣದಿಂದ ಕೂಡ ಬೆಲೆ ಹೆಚ್ಚಳವಾಗುತ್ತದೆ. ಆದರೆ, ಈ ಮಟ್ಟದಲ್ಲಿ ಬೆಲೆ ಹೆಚ್ಚಳವಾಗಿರುವುದು ಇದೇ ಪ್ರಥಮ.”
ಪ್ರಭು, ತರಕಾರಿ ಮಾರಾಟಗಾರರು.
ಮಂಡ್ಯ: ಶ್ರೀಕ್ಷೇತ್ರ ಆದಿಚುಂಚನಗಿರಿಯಲ್ಲಿ 100 ಕೋಟಿಗೂ ಅಧಿಕ ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಶ್ರೀಗುರು ಭೈರವೈಕ್ಯ ಮಂದಿರ ನಾಳೆ ಲೋಕಾರ್ಪಣೆಗೆ ಸಜ್ಜಾಗಿದೆ. ಪ್ರಧಾನಿ…
ನವದೆಹಲಿ: ದೇಶಾದ್ಯಂತ ರಣ ಬಿಸಿಲ ಝಳ ಹೆಚ್ಚುತ್ತಿದ್ದು, ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳಲ್ಲಿ ಒಂದು ವಾರಗಳ ಕಾಲ ತಾಪಮಾನ ಹೆಚ್ಚಾಗಲಿದೆ…
ಇಸ್ಲಾಮಾಬಾದ್: ಮಧ್ಯಪ್ರಾಚ್ಯ ಹಾಗೂ ಕೊಲ್ಲಿ ರಾಷ್ಟ್ರಗಳಲ್ಲಿ ನಡೆಯುತ್ತಿರುವ ಯುದ್ಧವನ್ನು ನಿಲ್ಲಿಸಲು ಇರಾನ್ ಮತ್ತು ಅಮೇರಿಕಾ ನಡುವೆ 2ನೇ ಸುತ್ತಿನ ಮಾತುಕತೆಗೆ…
ನವದೆಹಲಿ: ಇಂದು ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ 135ನೇ ಜನ್ಮ ಜಯಂತಿ. ಇದರ ಅಂಗವಾಗಿ ರಾಷ್ಟ್ರಪತಿ ದ್ರೌಪದಿ ಮುರ್ಮು, ಉಪರಾಷ್ಟ್ರಪತಿ…
ನವದೆಹಲಿ: ಈ ವರ್ಷ ದೇಶದಲ್ಲಿ ವಾಡಿಕೆಗಿಂತ ಕಡಿಮೆ ಮುಂಗಾರು ಮಳೆಯಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.…
ಬೆಂಗಳೂರು: ಸಿಎಂ ರಾಜಕೀಯ ಕಾರ್ಯದರ್ಶಿ ಹುದ್ದೆಗೆ ಎಂಎಲ್ಸಿ ನಜೀರ್ ಅಹಮ್ಮದ್ ಅವರು ರಾಜೀನಾಮೆ ನೀಡಿದ್ದಾರೆ. ನಜೀರ್ ಅಹಮ್ಮದ್ ಅವರು ಸಿಎಂ…