ಇತ್ತೀಚಿನ ದಿನಮಾನಗಳಲ್ಲಿ ಸಕ್ಕರೆ ಕಾಯಿಲೆ ಎಂಬುದು ಸಾಮಾನ್ಯವಾಗಿ ಬಿಟ್ಟಿದೆ. ಈ ಕಾಯಿಲೆ ಗಂಭೀರ ಸ್ವರೂಪ ಪಡೆದುಕೊಂಡಾಗ ಗ್ಯಾಂಗ್ರಿನ್ ರೂಪ ಪಡೆದುಕೊಳ್ಳುತ್ತದೆ. ಗ್ಯಾಂಗ್ರಿನ್ ಆದಾಗ ಬಹುತೇಕ ವೈದ್ಯರು ಪ್ರಾಣ ಅಪಾಯ ಎದುರಾಗುತ್ತದೆ. ಕಾಲನ್ನು ತೆಗೆಯಬೇಕು ಎಂದು ಸಲಹೆ ನೀಡುತ್ತಾರೆ. ಆದರೆ ಮೈಸೂರಿನ ಬೋಗಾದಿ ರಸ್ತೆಯಲ್ಲಿ ಇರುವ ಮಾನಸ ಕೀಲು ಮೂಳೆ ಆಸ್ಪತ್ರೆಯ ವೈದ್ಯ ಎಸ್. ರಘುನಂದನ್ ಅವರು ಗ್ಯಾಂಗ್ರಿನ್ ಆದಾಗ ನಾವು ರೋಗಿಯ ಕಾಲನ್ನು ತೆಗೆಯುವ ಅವಶ್ಯಕತೆ ಇಲ್ಲ. ಎಲ್ಲಿ ಗಾಯವಾಗಿದೆಯೋ ಆ ಭಾಗಕ್ಕೆ ಚಿಕಿತ್ಸೆ ನೀಡಿ ಗಾಯ ವಾಸಿ ಮಾಡುತ್ತೇವೆ ಎನ್ನುತ್ತಾರೆ. ಈ ಚಿಕಿತ್ಸಾ ವಿಧಾನ ಕುರಿತು ‘ಆಂದೋಲನ’ ಸಂದರ್ಶನದಲ್ಲಿ ಹಲವು ಮಾಹಿತಿ ನೀಡಿದ್ದಾರೆ.
ಚಂದ್ರಶೇಖರ್ ಮೂರ್ತಿ ಕೆ.ಎಸ್.
ಪ್ರಶ್ನೆ: ಸಕ್ಕರೆ ಕಾಯಿಲೆಯಿಂದ ಗ್ಯಾಂಗ್ರಿನ್ ಆದಾಗ ಕಾಲನ್ನು ತೆಗೆಯದೇ ಕೇವಲ ಶಸ್ತ್ರ ಚಿಕಿತ್ಸೆ ಮೂಲಕವೇ ಗುಣಪಡಿಸಿ ಕಾಲು ಉಳಿಸುತ್ತೇವೆ ಎಂದು ಹೇಳುತ್ತೀರಿ ಇದು ಹೇಗೆ ಸಾಧ್ಯ?
ಡಾ.ಎಸ್.ರಘುನಂದನ್: ಮೊದಲನೆಯದಾಗಿ ನಾವು ಇದನ್ನು ಡಯಾಬಿಟಿಕ್ ಫೂಟ್ ಅಲ್ಸರ್ ಎಂದು ಕರೆಯುತ್ತೇವೆ. ಮೊದಲು ಗ್ಯಾಂಗ್ರಿನ್ ಅಂದಾಗ ಬೆರಳುಗಳನ್ನೇ ತೆಗೆದು ಚಿಕಿತ್ಸೆ ನೀಡಲಾಗುತಿತ್ತು. ಇದೀಗ ನಾವು ಗ್ಯಾಂಗ್ರಿನ್ ಆದ ಮೂಲ ಕಾರಣಕ್ಕೆ ಚಿಕಿತ್ಸೆ ನೀಡುತ್ತಿದ್ದೇವೆ. ಸಕ್ಕರೆ ಕಾಯಿಲೆಯಿಂದ ರಕ್ತನಾಳಗಳಲ್ಲಿ ರಕ್ತ ಸಂಚಾರ ಕಡಿಮೆ ಆಗಿರುತ್ತದೆ. ಈ ರಕ್ತ ಸಂಚಾರ ವೃದ್ಧಿಸುವುದಕ್ಕೆ ಮೂಳೆಗೆ ಶಸ್ತ್ರ ಚಿಕಿತ್ಸೆ ಮಾಡುತ್ತೇವೆ. ನಮ್ಮ ಆಸ್ಪತ್ರೆಯಲ್ಲಿ ಈ ಚಿಕಿತ್ಸೆಯನ್ನು ೨೦೧೩ರಿಂದ ಮಾಡುತ್ತಾ ಬಂದಿದ್ದೇವೆ. ಇತ್ತೀಚೆಗೆ ಈ ಚಿಕಿತ್ಸೆ ಭಾರಿ ಬೇಡಿಕೆ ಪಡೆದುಕೊಂಡಿದೆ. ಅಮೆರಿಕ ಮತ್ತುಚೀನಾದಲ್ಲಿ ಈ ಇರಿಜರೋವ್ ಟಿಟಿಟಿ ಚಿಕಿತ್ಸೆ ಬಗ್ಗೆ ಸಂಶೋಧನೆ ಮತ್ತು ಅಧ್ಯಯನ ಹೆಚ್ಚಾಗಿ ಪ್ರಚಾರಕ್ಕೆ ಬರುತ್ತದೆ. ಆದ ಕಾರಣ ಭಾರತದಲ್ಲಿಯೂ ಈ ಚಿಕಿತ್ಸೆ ಬಗ್ಗೆ ಹೆಚ್ಚು ಪ್ರಚಾರ ಆಗುತ್ತಿದೆ. ಈಗಾಗಲೇ ನಾವು ಟಿಟಿಟಿ ಚಿಕಿತ್ಸೆ ಮೂಲಕ ನೂರಾರು ರೋಗಿಗಳ ಕಾಲನ್ನು ಉಳಿಸಿದ್ದೇವೆ.
ಪ್ರಶ್ನೆ: ಈ ಇರಿಜರೋವ್ ಚಿಕಿತ್ಸೆಯನ್ನು ಯಾವೆಲ್ಲಾ ಗ್ಯಾಂಗ್ರಿನ್ಗೆ ನೀಡುತ್ತೀರಿ?
ಡಾ.ರಘುನಂದನ್: ಯಾವ ಗ್ಯಾಂಗ್ರಿನ್ ರೋಗಿಯ ಜೀವಕ್ಕೆ ಅಪಾಯ ಮಾಡುವುದಿಲ್ಲವೋ ಅಂತಹ ಗ್ಯಾಂಗ್ರಿನ್ಗೆ ಟಿಟಿಟಿ(ಟಿಬಿಯಲ್ ಕಾರ್ಟೆಕ್ಸ್ ಟ್ರಾನ್ಸ್ ವೆರ್ಸ್ ಟ್ರಾನ್ಸ್ ಪೋರ್ಟ್) ಚಿಕಿತ್ಸೆ ನೀಡುತ್ತೇವೆ. ಏಕೆಂದರೆ ಕೆಲವೊಮ್ಮೆ ಗ್ಯಾಂಗ್ರಿನ್ ಸೆಲ್ಯುಲಸ್ ಎಂಬ ಗಂಭೀರ ಸ್ವರೂಪ ಪಡೆದುಕೊಂಡು ರೋಗಿಯ ಪ್ರಾಣಕ್ಕೆ ಅಪಾಯ ತಂದೊಡ್ಡುತ್ತದೆ. ಅಂತಹ ಗ್ಯಾಂಗ್ರಿನ್ಗೆ ಟಿಟಿಟಿ ಚಿಕಿತ್ಸೆ ಸಾಧ್ಯವಿಲ್ಲ. ಯಾವುದೇ ರೋಗಿ ಆಸ್ಪತ್ರೆಗೆ ಬಂದಾಗ ನಾವು ಮೊದಲು ಗ್ಯಾಂಗ್ರಿನ್ ಯಾವ ಸ್ವರೂಪದಲ್ಲಿದೆ ಎಂಬುದನ್ನು ಪರಿಶೀಲಿಸುತ್ತೇವೆ. ಬೆರಳಿನ ಭಾಗದಲ್ಲಿ ಮಾತ್ರ ಗ್ಯಾಂಗ್ರಿನ್ ಆಗಿದ್ದರೆ ಬೆರಳಷ್ಟೇ ತೆಗೆದು ಕಾಲನ್ನು ಉಳಿಸುತ್ತೇವೆ. ಇದಕ್ಕೆ ಇಡೀ ಕಾಲನ್ನೇ ಕತ್ತರಿಸುವ ಅಗತ್ಯ ಇರುವುದಿಲ್ಲ.
ಪ್ರಶ್ನೆ: ಟಿಟಿಟಿ ಚಿಕಿತ್ಸೆ ನಂತರ ಭವಿಷ್ಯದಲ್ಲಿ ತೊಂದರೆ ಇದೆಯಾ?
ಡಾ.ರಘುನಂದನ್: ಟಿಟಿಟಿ ಚಿಕಿತ್ಸೆ ನಂತರ ಭವಿಷ್ಯದಲ್ಲಿ ರೋಗಿಗೆ ಯಾವುದೇ ರೀತಿಯ ತೊಂದರೆ ಆಗಬಾರದು ಅಂದರೆ ರೋಗಿಯ ಸಹಕಾರ ಅತ್ಯಗತ್ಯ. ಚಿಕಿತ್ಸೆ ನಂತರ ರೋಗಿಯು ಸಕ್ಕರೆ ಪದಾರ್ಥ ತಿನ್ನಬಾರದು, ಚಿಕಿತ್ಸೆ ನೀಡಿದ ಕಾಲಿಗೆ ಯಾವುದೇ ರೀತಿ ಗಾಯ ಮಾಡಿಕೊಳ್ಳಬಾರದು. ಚಿಕಿತ್ಸೆಗೆ ಒಳಗಾದ ಕಾಲು ಬಿಸಿಲಿಗೆ ಬೀಳದಂತೆ ನೋಡಿಕೊಳ್ಳಬೇಕು. ಬರಿಗಾಲಲ್ಲಿ ತಿರುಗಾಡಬಾರದು. ವೈದ್ಯರು ತಿಳಿಸುವ ಎಲ್ಲಾ ಮುಂಜಾಗ್ರತಾ ಕ್ರಮ ಅನುಸರಿಸಿದರೆ ತೊಂದರೆ ಇರುವುದಿಲ್ಲ. ಸಹಜ ಜೀವನ ಶೈಲಿಯಲ್ಲಿ ರೋಗಿಯು ಆರಾಮದಾಯಕವಾಗಿ ಇರಬಹುದು.
ಪ್ರಶ್ನೆ: ಇರಿಜರೋವ್ ಟಿಟಿಟಿ ಚಿಕಿತ್ಸೆಗೆ ಎಷ್ಟು ಅವಧಿ ಬೇಕು?
ಡಾ.ರಘುನಂದನ್: ಟಿಟಿಟಿ ಚಿಕಿತ್ಸೆ ಒಂದು ತಿಂಗಳ ಅವಧಿಯನ್ನು ತೆಗೆದುಕೊಳ್ಳುತ್ತದೆ. ಶಸ್ತ್ರ ಚಿಕಿತ್ಸೆಯಲ್ಲಿ ನಾವು ಒಂದು ಪಿಕ್ಸೆಟರ್ ಎಂಬ ರಾಡ್ ಅನ್ನು ಅಳವಡಿಸಿ ಇದರಲ್ಲಿ ಹದಿನೈದು ದಿನಗಳ ಕಾಲ ಹಿಗ್ಗಿಸುವಿಕೆ ಮತ್ತು ಕುಗ್ಗಿಸುವಿಕೆ ಕಾರ್ಯ ಮಾಡುತ್ತೇವೆ. ನಂತರ ಗಾಯ ವಾಸಿ ಆಗೋದಕ್ಕೆ ನಾಲ್ಕರಿಂದ ಐದು ತಿಂಗಳ ಅವಶ್ಯಕತೆ ಇರುತ್ತೆ. ಈ ಚಿಕಿತ್ಸೆ ನಂತರ ರೋಗಿಯು ಸಹಜ ಶೈಲಿ ಜೀವನ ನಡೆಸಬಹುದು. ಆದರೆ ಎಂದಿನಂತೆ ಸಕ್ಕರೆ ಕಾಯಿಲೆಗೆ ನಿಯಮಿತ ಔಷಧಿ ಉಪಚಾರ ಪಡೆಯುವುದನ್ನು ಮುಂದುರಿಸಬೇಕು.
ಪ್ರಶ್ನೆ: ಈ ಚಿಕಿತ್ಸೆಯ ವೆಚ್ಚ ದುಬಾರಿಯೇ?
ಡಾ.ರಘುನಂದನ್: ಬಡ ಮತ್ತು ಮಧ್ಯಮ ವರ್ಗದವರು ಕೂಡ ಟಿಟಿಟಿ ಚಿಕಿತ್ಸೆ ಪಡೆಯಬಹುದು. ಇದಕ್ಕೆ ೪೦-೫೦ ಸಾವಿರ ರೂ. ವೆಚ್ಚವಾಗುತ್ತದೆ. ರೋಗಿಗಳಿಗೆ ಚಿಕಿತ್ಸೆ ನೀಡಿ ಎರಡು ಮೂರು ದಿನಗಳಲ್ಲಿ ಡಿಸ್ಚಾರ್ಜ್ ಮಾಡುತ್ತೇವೆ. ಚಿಕಿತ್ಸೆಯಲ್ಲಿ ಪಿಕ್ಸೇಟರ್ ಎಂಬ ರಾಡ್ ಅನ್ನು ಅಳವಡಿಸಿರುತ್ತೇವೆ. ಅದನ್ನು ಯಾವ ರೀತಿ ನಿರ್ವಹಣೆ ಮಾಡಬೇಕು ಎಂಬ ಬಗ್ಗೆ ಮಾರ್ಗದರ್ಶನ ನೀಡುತ್ತೇವೆ. ಅದನ್ನು ಅನುಸರಿಸಿದರೆ ಸಾಕು.
ಪ್ರಶ್ನೆ: ಗ್ಯಾಂಗ್ರಿನ್ ಯಾವೆಲ್ಲಾ ಕಾರಣಕ್ಕೆ ಬರುತ್ತದೆ?
ಡಾ.ರಘುನಂಧನ್: ಮಧುಮೇಹಿಗಳಲ್ಲಿ ರಕ್ತದಲ್ಲಿ ಸಕ್ಕರೆ ಅಂಶ ಹೆಚ್ಚಾಗಿ ಕಾಲಿನ ಬೆರಳುಗಳಲ್ಲಿ ಕಪ್ಪು ಬಣ್ಣದಲ್ಲಿ ಸಣ್ಣ ಗಾಯಗಳು ಉಂಟಾಗಿ ಉಲ್ಬಣಗೊಳ್ಳುತ್ತವೆ. ಇದರ ಮುಂದುವರಿದ ಭಾಗವೇ ಗ್ಯಾಂಗ್ರಿನ್. ಹಾಗಾಗಿ ಕಾಲಿನ ಬೆರಳುಗಳಲ್ಲಿ ಸಣ್ಣ ಸಣ್ಣ ಗಾಯಗಳು ಕಂಡು ಬಂದರೆ ತಕ್ಷಣ\ ವೈದ್ಯರನ್ನು ಭೇಟಿ ಮಾಡಬೇಕು. ಸಾಕ್ಸ್ ಇಲ್ಲದೆ ಬರೀ ಶೂ ಧರಿಸುವುದು, ಬರಿಗಾಲಿನಲ್ಲಿ ತಿರುಗಾಡುವುದು ಸೋಂಕಿಗೆ ಆಹ್ವಾನ ಕೊಟ್ಟಂತೆ. ಅಷ್ಟೇ ಅಲ್ಲದೆ ಬೊಜ್ಜು, ಕೊಬ್ಬಿನ ಅಂಶ ಹೆಚ್ಚಾದರೆ, ಧೂಮಪಾನ ಮಾಡುವುದರಿಂದ ಕೂಡ ಗ್ಯಾಂಗ್ರಿನ್ ಅಂತಹ ಸಮಸ್ಯೆ ಕಾಡುತ್ತದೆ. ಇದನ್ನು ವೈದ್ಯಕೀಯ ಕ್ಷೇತ್ರದಲ್ಲಿ ಬರ್ಗರ್ ಡಿಸೀಸ್ ಎಂದು ಕರೆಯಲಾಗುತ್ತದೆ. ಇಂತಹ ಸಂದರ್ಭದಲ್ಲಿ ಕೂಡ ನಾವು ಟಿಟಿಟಿ ಚಿಕಿತ್ಸೆ ನೀಡುತ್ತೇವೆ.
ಉನ್ನಾವೋ: ಕ್ರಿಕೆಟ್ ಪಂದ್ಯದ ವೇಳೆ ಜೇನುನೊಣಗಳ ಹಿಂಡು ದಾಳಿ ಮಾಡಿದ ಪರಿಣಾಮ 65 ವರ್ಷದ ಅಂಪೈರ್ ಸಾವನ್ನಪ್ಪಿದ್ದು, ಹಲವಾರು ಆಟಗಾರರು…
ಬೆಂಗಳೂರು: ಇಲ್ಲಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 23.8 ಕೋಟಿ ರೂ ಮೌಲ್ಯದ ಕೊಕೇನ್ ಸೀಜ್ ಮಾಡಲಾಗಿದೆ. ಎನ್ಸಿಬಿ ಅಧಿಕಾರಿಗಳು…
ಬೆಂಗಳೂರು: ಕೆಜಿಎಫ್-2 ಯಶಸ್ಸಿನ ನಂತರ ಇಡೀ ದೇಶದ ಕಾತುರದಿಂದ ಕಾಯುತ್ತಿರುವ ಸಿನಿಮಾ ಎಂದರೆ ಅದು ರಾಕಿಂಗ್ ಸ್ಟಾರ್ ಯಶ್ ಅಭಿನಯದ…
ತುಮಕೂರು: ರಾಜ್ಯ ಕಾಂಗ್ರೆಸ್ನಲ್ಲಿ ಅಧಿಕಾರ ಹಸ್ತಾಂತರ ಚರ್ಚೆ ನಡುವೆಯೇ ಮಾಜಿ ಸಚಿವ ಕೆ.ಎನ್.ರಾಜಣ್ಣ ಮತ್ತೆ ದಲಿತ ಸಿಎಂ ವಿಚಾರ ಪ್ರಸ್ತಾಪಿಸಿದ್ದಾರೆ.…
ರಾಯಚೂರು: ರಾಯಚೂರು ಪ್ರವಾಸದಲ್ಲಿದ್ದ ರಾಜನಹಳ್ಳಿ ವಾಲ್ಮೀಕಿ ಗುರುಪೀಠದ ಜಗದ್ಗುರು ಡಾ.ವಾಲ್ಮೀಕಿ ಪ್ರಸನ್ನಾನಂದ ಪುರಿ ಸ್ವಾಮೀಜಿಗೆ ಲಘು ಹೃದಯಾಘಾತವಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.…
ಚಾಮರಾಜನಗರ: ಕಳೆದ ಮೂರು ತಿಂಗಳಿನಿಂದಲೂ ಬಂದ್ ಆಗಿದ್ದ ನಾಗರಹೊಳೆ ಹಾಗೂ ಬಂಡೀಪುರ ಸಫಾರಿ ಆರಂಭಕ್ಕೆ ಸರ್ಕಾರ ಗ್ರೀನ್ ಸಿಗ್ನಲ್ ನೀಡಿದೆ.…