ವ್ಯಾಪಾರಕ್ಕೆ ಮಂದ ಬೆಳಕು; ಜಾಗೃತಿ ಹಿನ್ನೆಲೆಯಲ್ಲಿ ಖರೀದಿಸಲು ಆಸಕ್ತಿ ತೋರದ ಜನರು
ಭಾರತೀನಗರ: ಪಟಾಕಿ ಸಿಡಿತದಿಂದ ಉಂಟಾಗುವ ಅನಾಹುತಗಳ ಬಗ್ಗೆ ನಿರಂತರವಾಗಿ ಜನಜಾಗೃತಿ ಮೂಡಿಸುವ ಜಾಹೀರಾತುಗಳಿಂದ ಬೆಳಕಿನ ಹಬ್ಬ ದೀಪಾವಳಿಯಲ್ಲಿ ಪಟಾಕಿ ಸಿಡಿಸುವ ಸಂಭ್ರಮ ಗಣನೀಯವಾಗಿ ಕುಸಿದಿದೆ.
ಪ್ರತಿ ವರ್ಷವೂ ಭಾರತೀನಗರ ಪಟ್ಟಣದಲ್ಲಿ ವ್ಯಾಪಾರ ಬಲು ಜೋರಾಗಿ ನಡೆಯುತ್ತಿತ್ತು. ಆದರೆ ಈ ಬಾರಿ ಪಟ್ಟಣದಿಂದ ೧.೫ ಕಿ.ಮೀ. ದೂರದ ಮೆಳ್ಳಹಳ್ಳಿಯ ಬಳಿ ಜಿಲ್ಲಾಡಳಿತದ ಆದೇಶದ ಮೇರೆಗೆ ಪಟಾಕಿ ಮಾರಾಟದ ಮಳಿಗೆಗಳನ್ನು ಇಡಲಾಗಿದ್ದು, ಇದು ಹಸಿರು ಪಟಾಕಿಗೆ ಮಾತ್ರ ಸೀಮಿತವಾಗಿದೆ.
ಮದ್ದೂರು-ಮಳವಳ್ಳಿ ಸೇರಿದಂತೆ ವಿವಿಧೆಡೆ ವಿವಿಧ ಅಂಗಡಿ ಮಾಲೀಕರ ನಿರೀಕ್ಷೆಗೆ ತಕ್ಕಂತೆ ವ್ಯಾಪಾರವಾಗದೆ ಶೇ.೫೦ರಷ್ಟು ಕುಸಿತ ಕಂಡಿದೆ. ಕೆಲವರು ಮಕ್ಕಳನ್ನು ಸಂತೋಷಪಡಿಸಲು ಅಪಾಯಕಾರಿಯಲ್ಲದ ಸಣ್ಣಪುಟ್ಟ ಪಟಾಕಿಗಳನ್ನು ಖರೀದಿಸುತ್ತಿರುವುದು ಕಂಡುಬಂದಿತು.
ಅಂಗಡಿ ಮಾಲೀಕರ ನಿರೀಕ್ಷೆಯಷ್ಟು ಜನರು ಪಟಾಕಿ ಕೊಂಡುಕೊಳ್ಳದ ಕಾರಣ ಪಟಾಕಿಗಳ ಸದ್ದು, ಗದ್ದಲ ವರ್ಷದಿಂದ ವರ್ಷಕ್ಕೆ ಕಡಿಮೆಯಾಗುತ್ತಾ ಬರುತ್ತಿದೆ. ದೀಪಾವಳಿ ಶಬ್ದಮಾಲಿನ್ಯ ಮುಕ್ತವಾಗಬೇಕೆಂಬ ಅರಿವು ಎಲ್ಲೆಡೆ ಹೆಚ್ಚಾಗುತ್ತಿರುವುದರಿಂದ ಪಟಾಕಿಗಳ ಖರೀದಿಗೆ ಜನರು ಹಿಂದೇಟು ಹಾಕುತ್ತಿದ್ದಾರೆ.
ಪರಿಸರಕ್ಕೆ ಮಾರಕವಾಗಿರುವ ಹಾಗೂ ಪ್ರಾಣಿ-ಪಕ್ಷಿಗಳಿಗೆ ಕಿರಿಕಿರಿಯಾಗುವ ಪಟಾಕಿಗಳನ್ನು ಮಾರಾಟ ಮಾಡದಂತೆ ಜಿಲ್ಲಾಡಳಿತ ಸೂಚಿಸಿದೆ. ಎಲ್ಲೆಡೆ ಈ ಬಾರಿ ಪಟಾಕಿಗಳ ಅಬ್ಬರವಿಲ್ಲದೆ, ಜನರು ಮನೆಗಳಲ್ಲೇ ಹಣತೆ ಹಚ್ಚುವ ಮೂಲಕ ದೀಪಾವಳಿ ಆಚರಿಸುತ್ತಿದ್ದಾರೆ. ಹಾಗಾಗಿ ಮಕ್ಕಳ ದೃಷ್ಟಿಯಲ್ಲಿ ಪಟಾಕಿ ಹಬ್ಬವೆಂದೇ ಕರೆಯಲಾಗುವ ದೀಪಾವಳಿ ಈ ಬಾರಿ ಕಳೆಗುಂದಿದೆ.
ಇದನ್ನು ಓದಿ: ದೀಪಾವಳಿ ಜಾತ್ರೆ: ಮಾದಪ್ಪನಿಗೆ ಎಣ್ಣೆ ಮಜ್ಜನ ಸೇವೆ
ಅಗತ್ಯ ವಸ್ತುಗಳ ಬೆಲೆ ಏರಿಕೆಯ ನಡುವೆಯೂ ದೀಪಾವಳಿ ಹಬ್ಬವನ್ನು ಸಂಭ್ರಮ ಸಡಗರದಿಂದ ಆಚರಿಸುತ್ತಿರುವ ಜನತೆ ಪಟಾಕಿಗಳತ್ತ ಹೆಚ್ಚು ಮುಖ ಮಾಡದಿರುವುದು ಪಟಾಕಿ ವ್ಯಾಪಾರಸ್ಥರಲ್ಲಿ ಅಸಮಾಧಾನ ಮೂಡಿಸಿದೆ. ಅದರಲ್ಲೂ ಪಟಾಕಿ ವ್ಯಾಪಾರಿಗಳ ಉತ್ಸಾಹಕ್ಕೆ ಈ ಬಾರಿ ತಣ್ಣೀರೆರಚಿದಂತಾಗಿದೆ. ಲಾಭಗಳಿಸುವುದಿರಲಿ, ಹಾಕಿದ ಬಂಡವಾಳವೂ ಇಲ್ಲದಂತಾಗಿದೆ.
ಹೊರರಾಜ್ಯಗಳಿಂದ ಪಟಾಕಿಗಳನ್ನು ತಂದು ವ್ಯಾಪಾರ ಮಾಡುತ್ತಿರುವ ಮಾಲೀಕರು ಪಟಾಕಿಗಳನ್ನು ಹೆಚ್ಚಾಗಿ ಕೊಂಡುಕೊಳ್ಳದ ಕಾರಣ ನಷ್ಟ ಅನುಭವಿಸಬೇಕಾಗಿದೆ. ತಂದ ಬೆಲೆಗೆ ಮಾರಾಟ ಮಾಡಬೇಕಿದೆ ಎನ್ನುತ್ತಾರೆ ಸೌಭಾಗ್ಯ ಟ್ರೇಡರ್ಸ್ ಪಟಾಕಿ ಮಳಿಗೆಯ ಮಾಲೀಕ ವಿ.ರಾಘು ಹಾಗೂ ಪಟಾಕಿ ವ್ಯಾಪಾರಿ ಧನಪಾಲ್ಶೆಟ್ಟಿ. ವರ್ಷದಿಂದ ವರ್ಷಕ್ಕೆ ಹೋಲಿಸಿದರೆ ಪಟಾಕಿಯಿಂದ ಸಂಭವಿಸಿದ ಹಾನಿ ಪ್ರಮಾಣ ಕಡಿಮೆಗೊಳ್ಳುತ್ತಿದೆ ಎನ್ನುತ್ತಾರೆ ಸಮುದಾಯ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿ ಡಾ.ಅರ್ಜುನ್ ಕುಮಾರ್.
” ಪಟಾಕಿಗಳನ್ನು ಸಿಡಿಸುವುದರಿಂದ ಮನಸ್ಸಿಗೆ ಖುಷಿ ತರಬಹುದು. ಆದರೆ, ಅದೇ ಪಟಾಕಿಯಿಂದ ಪರಿಸರ ನಾಶಗೊಳ್ಳುತ್ತದೆ. ಇದರಿಂದ ಉಂಟಾಗುವ ಸಮಸ್ಯೆಗಳು ಕೆಲವು ಪ್ರತ್ಯಕ್ಷವಾದರೆ ಹಲವು ಪರೋಕ್ಷವಾಗಿ ಪರಿಣಾಮ ಬೀರುತ್ತವೆ. ಆದ್ದರಿಂದ ಎಲ್ಲರೂ ಪರಿಸರ ಪ್ರೇಮಿಗಳಾಗಿ ಅತ್ಯಮೂಲ್ಯವಾದ ಪರಿಸರವನ್ನು ಉಳಿಸಿ ಬೆಳೆಸಲು ಪಣತೊಡಬೇಕು.”
-ಡಿ.ಸಿ.ತಮ್ಮಣ್ಣ, ಮಾಜಿ ಸಚಿವರು
” ಪ್ರತಿ ವರ್ಷವೂ ತಮಿಳುನಾಡಿನಿಂದ ಪಟಾಕಿಗಳನ್ನು ತಂದು ವ್ಯಾಪಾರ ಮಾಡುತ್ತಿದ್ದೆ. ಕಳೆದ ಎರಡು ಮೂರು ವರ್ಷಗಳಿಗಿಂತ ಶೇ.೫೦ರಷ್ಟು ವ್ಯಾಪಾರ ಕುಸಿತ ಕಂಡಿದೆ.”
-ವಿ.ರಾಘು, ಪಟಾಕಿ ಸ್ಟಾಲ್ ಮಾಲೀಕ
–ಅಣ್ಣೂರು ಸತೀಶ್
ಮೇಕೆದಾಟು ಯೋಜನೆಗೆ ಸಂಬಂಧಿಸಿದಂತೆ ೨೦೧೪ರ ಸುಪ್ರೀಂ ಕೋರ್ಟ್ ತೀರ್ಪಿನ ಪ್ರಕಾರ ಕರ್ನಾಟಕವು ಮೇಕೆದಾಟು ಜಲಾಶಯ ನಿರ್ಮಿಸಲು ತಮಿಳುನಾಡು ಸೇರಿದಂತೆ ಯಾವುದೇ…
ಮೈಸೂರು ನಗರದಲ್ಲಿ ಅನೇಕ ಕಡೆ ಪಾದಚಾರಿಗಳಿಗೆ ಅಡಚಣೆಯಾಗಿದ್ದ ಫುಟ್ಪಾತ್ ವ್ಯಾಪಾರಿಗಳ ಒತ್ತುವರಿ ತೆರವು ಕಾರ್ಯಾಚರಣೆ ನಡೆಯುತ್ತಿದೆ. ಆದರೆ ಬಹುತೇಕ ಕಡೆ…
ನಂಜನಗೂಡು ತಾಲ್ಲೂಕಿನ ಕೂಡ್ಲಾಪುರ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ಬರ ಪರಿಸ್ಥಿತಿಯಿಂದಾಗಿ ಕೆರೆಗಳು ಬತ್ತಿಹೋಗಿದ್ದು, ಕುಡಿಯುವ ನೀರು ಸಿಗದೆ ತೊಂದರೆಯಾಗಿದೆ. ನಂಜನಗೂಡು…
ಪ್ರಸನ್ನ ಎಂ.ಕೆ. ಖ್ಯಾತ ಕ್ಯಾನ್ಸರ್ ರೋಗ ತಜ್ಞರು, ಭಾರತ್ ಕ್ಯಾನ್ಸರ್ ಹಾಸ್ಪಿಟಲ್ ಹಾಗೂ ಎಚ್ಸಿಜಿ ಆಸ್ಪತ್ರೆ ಛೇರ್ಮನ್ ಮತ್ತು ಸಂಸ್ಥಾಪಕರು,…
ಮಾದೇಶ್ ಗೌಡ ಹದಗೆಟ್ಟ ರಸ್ತೆ ಅಭಿವೃದ್ಧಿಗೆ ಸವಾರರ ಆಗ್ರಹ; ಅಭಿವೃದ್ಧಿಯಾಗದಿದ್ದರೆ ಪ್ರತಿಭಟನೆ ಎಚ್ಚರಿಕೆ ಹನೂರು: ತಾಲ್ಲೂಕಿನ ಮೀಣ್ಯಂ ಗ್ರಾಪಂ ವ್ಯಾಪ್ತಿಯ…
ನವೀನ್ಕುಮಾರ್ ತಂಬಾಕು ಹದಗೊಳಿಸುವ ಕಾರ್ಯ ಚುರುಕು; ಉತ್ತಮ ಬೆಲೆ ನಿರೀಕ್ಷೆಯಲ್ಲಿ ರೈತರು ಪಿರಿಯಾಪಟ್ಟಣ: ತಾಲ್ಲೂಕಿನಾದ್ಯಂತ ತಂಬಾಕು ಕೃಷಿ ಚಟುವಟಿಕೆಗಳು ಗರಿಗೆದರಿವೆ.…