ಹನೂರು: ಮಲೆ ಮಹದೇಶ್ವರ ಬೆಟ್ಟಕ್ಕೆ ಡಿಸೆಂಬರ್ ತಿಂಗಳಲ್ಲಿ ಮುಖ್ಯಮಂತ್ರಿಗಳು ಆಗಮಿಸಲಿರುವ ಹಿನ್ನೆಲೆಯಲ್ಲಿ ಮುಕ್ತಾಯದ ಹಂತದಲ್ಲಿರುವ ಕಾಮಗಾರಿಗಳನ್ನು ಶೀಘ್ರದಲ್ಲಿಯೇ ಪೂರ್ಣಗೊಳಿಸಬೇಕು ಎಂದು ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಸಿ. ಟಿ. ಶಿಲ್ಪಾ ನಾಗ್ ತಿಳಿಸಿದರು.
ಮ. ಬೆಟ್ಟದ ನಾಗಮಲೆ ಭವನದಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು. ಮ. ಬೆಟ್ಟಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಆಗಮಿಸುತ್ತಿದ್ದು, ಕ್ಷೇತ್ರದಲ್ಲಿ ನಡೆಯುತ್ತಿರುವ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಶೀಘ್ರದಲ್ಲಿಯೇ ಪೂರ್ಣಗೊಳಿಸಿ ಉದ್ಘಾಟನೆಗೆ ಸಿದ್ಧಪಡಿಸಬೇಕು, ಯಾವುದೇ ಕಾಮಗಾರಿಗಳು ಬಾಕಿ ಇರದಂತೆ ಮುನ್ನೆಚ್ಚರಿಕೆ ಕ್ರಮ ವಹಿಸಬೇಕು. ಕಾಮಗಾರಿಗಳು ಗುಣಮಟ್ಟದಿಂದ ಕೂಡಿರಬೇಕು. ಯಾವುದಾದರೂ ಲೋಪದೋಷಗಳು ಕಂಡು ಬಂದರೆ ಸಂಬಂಧಪಟ್ಟ ಗುತ್ತಿಗೆದಾರ ಹಾಗೂ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.
ಶಾಸಕ ಎಂ. ಆರ್. ಮಂಜುನಾಥ್ ಮಾತನಾಡಿ, ಮ. ಬೆಟ್ಟಕ್ಕೆ ಬರುವಂತಹ ಭಕ್ತಾದಿಗಳಿಗೆ ತಿರುಪತಿ ಮಾದರಿಯಲ್ಲಿ ಮೂಲ ಸೌಲಭ್ಯಗಳನ್ನು ಒದಗಿಸಿಕೊಡಲು ಚಿಂತನೆ ನಡೆಸಲಾಗುತ್ತಿದೆ. ಕ್ಷೇತ್ರಕ್ಕೆ ಬಡ ಭಕ್ತಾದಿಗಳು ಆಗಮಿಸಿ ಸೇವೆ ಸಲ್ಲಿಸಿ ಹರಕೆ ಕಾಣಿಕೆ ಸಲ್ಲಿಸುತ್ತಿದ್ದಾರೆ. ಅವರ ಹರಕೆ ಹಣವನ್ನು ಯಾವುದೇ ಕಾರಣಕ್ಕೂ ಪೋಲು ಮಾಡದೆ ಸದ್ಬಳಕೆ ಮಾಡಿಕೊಳ್ಳಬೇಕು ಎಂದು ತಿಳಿಸಿದರು. ಶ್ರೀ ಮಲೆ ಮಹದೇಶ್ವರ ಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಽಕಾರದ ವತಿಯಿಂದ ನಡೆಯುತ್ತಿರುವ ಕಾಮಗಾರಿ ವೇಳೆ ಸಂಬಂಧ ಪಟ್ಟ ಅಧಿಕಾರಿಗಳು ಪರಿಶೀಲನೆ ನಡೆಸಬೇಕು. ಕಟ್ಟಡದ ವಿನ್ಯಾಸ ಅನುಮೋದನೆಯಂತೆ ನಡೆಯುತ್ತಿದೆಯೇ ಎಂಬುದರ ಬಗ್ಗೆ ಗಮನ ವಹಿಸಬೇಕು ಎಂದು ತಿಳಿಸಿದರು. ಹನೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಹೆಚ್ಚಿನ ಪ್ರವಾಸಿ ತಾಣಗಳು ಇದ್ದು, ಅವುಗಳನ್ನು ಅಭಿವೃದ್ಧಿಪಡಿಸಿ ಪ್ರವಾಸಿಗರನ್ನು ಆಕರ್ಷಣೆ ಮಾಡುವಂತೆ ಸಂಬಂಧಪಟ್ಟ ಅಧಿಕಾರಿಗಳು ಕ್ರಮ ವಹಿಸಬೇಕು ಎಂದರು.
ಪ್ರಾಧಿಕಾರದ ಕಾರ್ಯದರ್ಶಿ ಎ. ಇ. ರಘು ಮಾತನಾಡಿ, ಮ. ಬೆಟ್ಟದಲ್ಲಿ ನಿರ್ಮಾಣ ಮಾಡಿರುವ ೩೮೬ ಕೊಠಡಿಗಳ ಕಟ್ಟಡ ಕಾಮಗಾರಿ ಪೂರ್ಣವಾಗುವ ಹಂತದಲ್ಲಿದೆ. ಪ್ರತಿಯೊಂದು ಕಾಮಗಾರಿಗಳನ್ನೂ ಖುದ್ದು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದೇವೆ. ದೀಪಾವಳಿ ಜಾತ್ರಾ ಮಹೋತ್ಸವ ಮುಗಿದ ಕೂಡಲೇ ಕಾಮಗಾರಿಗಳನ್ನು ಪೂರ್ಣಗೊಳಿಸಿ ಉದ್ಘಾಟನೆಗೆ ಸಿದ್ಧಪಡಿಸಲಾಗುವುದು ಎಂದು ತಿಳಿಸಿದರು. ಮ್ಯೂಸಿಯಂ : ಮ. ಬೆಟ್ಟದ ದೀಪದಗಿರಿ ಒಡ್ಡುವಿನ ೧೦೮ ಅಡಿ ಎತ್ತರದ ಮಲೆ ಮಹದೇಶ್ವರ ಪ್ರತಿಮೆಯ ತಳಭಾಗದಲ್ಲಿ ಮಲೆ ಮಹದೇಶ್ವರ ಬಾಲ್ಯದಿಂದ ಐಕ್ಯವಾಗುವವರೆಗೂ ಮಾಡಿರುವ ಪವಾಡಗಳನ್ನು, ಶಿವಲೀಲೆಗಳನ್ನು ನಿರ್ಮಾಣ ಮಾಡಲಾಗಿದೆ. ಮ್ಯೂಸಿಯಂನಲ್ಲಿ ಮಲೆ ಮಹದೇಶ್ವರರ ಬಾಲ್ಯ, ಕಾರಯ್ಯ ಬಿಲ್ಲಯ್ಯರವರ ಜೊತೆಗಿನ ಸಂಬಂಧ, ಸಂಕಮ್ಮರವರ ಮನಃಪರಿವರ್ತನೆ, ಕುಂತೂರು ಮಠದ ಒಡನಾಟದ ಇತಿಹಾಸ, ೭೭ ಮಲೆಗಳ ಪ್ರವಾಸ, ನಾಗಮಲೆಯಲ್ಲಿ ಪವಾಡ ಸೃಷ್ಟಿ, ಹಬ್ಬ ಹರಿದಿನ ವಿಶೇಷ ದಿನಗಳ ಸಂಪೂರ್ಣ ಮಾಹಿತಿ ಇರಲಿದೆ ಎಂದರು.
ಮ. ಬೆಟ್ಟದಲ್ಲಿ ಪ್ರತಿ ತಿಂಗಳು ಬಳಕೆ ಮಾಡುವ ವಿದ್ಯುತ್ ಗೆ ಸುಮಾರು ೨೫ ಲಕ್ಷ ರೂ. ಪಾವತಿ ಮಾಡಲಾಗುತ್ತಿದೆ. ಈ ನಿಟ್ಟಿನಲ್ಲಿ ಒಂದು ಮೆಗಾ ವ್ಯಾಟ್ ಸೋಲಾರ್ ಪವರ್ ಸ್ಟೇಷನ್ ಉದ್ಘಾಟನೆಗೆ ಸಿದ್ಧವಾಗಿದ್ದು ಇದರಿಂದ ಮಾಸಿಕ ೧೨ ಲಕ್ಷ ರೂ. ಉಳಿತಾಯವಾಗಲಿದೆ. ಇದಲ್ಲದೆ ಜಾತ್ರಾ ಮಹೋತ್ಸವ, ಹಬ್ಬ ಹರಿದಿನ ವಿಶೇಷ ದಿನಗಳಲ್ಲಿ ವಿದ್ಯುತ್ ಕೊರತೆ ನೀಗಲಿದೆ ಎಂದರು. ಮ. ಬೆಟ್ಟದಲ್ಲಿರುವ ದೊಡ್ಡಕೆರೆ ಮೈದಾನ ಕಾಮಗಾರಿ ಪ್ರಗತಿಯಲ್ಲಿದ್ದರಿಂದ ಕಳೆದ ೨ ವರ್ಷಗಳಿಂದ ತೆಪ್ಪೋತ್ಸವ ಸ್ಥಗಿತಗೊಂಡಿತ್ತು. ಇದೀಗ ದೊಡ್ಡ ಕೆರೆ ಕಲ್ಯಾಣಿ ಕಾಮಗಾರಿ ಪೂರ್ಣಗೊಂಡಿದ್ದು ಉದ್ಘಾಟನೆಯಾಗಲಿದೆ ಎಂದರು. ಸಭೆಗೂ ಮುನ್ನ ಕಾಮಗಾರಿ ನಡೆಯುತ್ತಿರುವ ಸ್ಥಳಗಳಿಗೆ ಶಾಸಕರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಸಾಲೂರು ಬೃಹನ್ಮಠದ ಪೀಠಾಧಿಪತಿಗಳಾದ ಶ್ರೀ ಶಾಂತ ಮಲ್ಲಿಕಾರ್ಜುನ ಸ್ವಾಮಿ, ಸಿಇಒ ಮೋನಾ ರೋತ್ ಎಸ್ಪಿ ಡಾ. ಬಿ. ಟಿ. ಕವಿತಾ, ಡಿಸಿಎಫ್ ಡಾ. ಸಂತೋಷ್ ಕುಮಾರ್, ತಹಸಿಲ್ದಾರ್ ವೈ. ಕೆ. ಗುರುಪ್ರಸಾದ್, ಎಇಇ ಚಿನ್ನಣ್ಣ ಮಹೇಶ್, ಮ. ಬೆಟ್ಟ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಜಗದೀಶ್, ಪಿಡಿಒ ಕಿರಣ್ ಅರಣ್ಯ ಇಲಾಖೆಯ ಸಿಬ್ಬಂದಿ, ಪ್ರಾಧಿಕಾರದ ಸಿಬ್ಬಂದಿ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಜರಿದ್ದರು.
ಕ್ಯಾಬಿನೆಟ್ ಸಭೆಗೆ ನಿರ್ಧಾರ: ಮ. ಬೆಟ್ಟಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಡಿಸೆಂಬರ್ ತಿಂಗಳ ಮೊದಲನೇ ವಾರದಲ್ಲಿ ಆಗಮಿಸಲಿದ್ದು, ದೀಪದ ಗಿರಿ ಒಡ್ಡುವಿನ ಮ್ಯೂಸಿಯಂ, ದೊಡ್ಡಕೆರೆ ಮೈದಾನ, ೩೮೬ ಕೊಠಡಿಗಳ ವಸತಿಗೃಹ, ವೇದ ಆಗಮ ಸಂಸ್ಕ ತ ಪಾಠಶಾಲೆ ಸೇರಿದಂತೆ ವಿವಿಧ ಕಟ್ಟಡಗಳನ್ನು ಉದ್ಘಾಟನೆ ಮಾಡಲಿದ್ದಾರೆ. ಈ ಬಾರಿ ಮ. ಬೆಟ್ಟದಲ್ಲಿಯೇ ಕ್ಯಾಬಿನೆಟ್ ಸಭೆ ಮಾಡಲು ನಿರ್ಧರಿಸಲಾಗಿರುವುದರಿಂದ ಸರ್ಕಾರದ ಕಾರ್ಯದರ್ಶಿಗಳು, ಸಚಿವರು, ಶಾಸಕರು, ಹಿರಿಯ ಅಧಿಕಾರಿಗಳು ಆಗಮಿಸುವ ನಿರೀಕ್ಷೆ ಇದೆ. ಅದಕ್ಕಾಗಿ ಈಗಾಗಲೇ ಅಗತ್ಯ ಸೌಲಭ್ಯಗಳನ್ನು ಮಾಡಿಕೊಳ್ಳಲಾಗುತ್ತಿದೆ. – ಸಿ. ಟಿ. ಶಿಲ್ಪಾ ನಾಗ್, ಜಿಲ್ಲಾಧಿಕಾರಿ
ವೈಡ್ ಆಂಗಲ್ ಬಾ.ನಾ.ಸುಬ್ರಹ್ಮಣ್ಯ ವರ್ಷದ ಕೊನೆಯ ವಾರ ತೆರೆಗೆ ಬಂದಿರುವ ಚಿತ್ರಗಳಲ್ಲಿ ಒಂದು ‘ಮಾರ್ಕ್’. ಚಿತ್ರದ ಮುಖ್ಯ ಪಾತ್ರ ಮಾರ್ಕಾಂಡೇಯ…
2025ರಲ್ಲಿ ವಿಧಿವಶರಾದ ಗಣ್ಯರ ಮಾಹಿತಿ ಜನವರಿ... ನಾ.ಡಿಸೋ’ಜಾ: ಕನ್ನಡದ ಪ್ರಸಿದ್ಧ ಬರಹಗಾರ ಮತ್ತು ಕಾದಂಬರಿಕಾರ ನಾ ಡಿ’ಸೋಜಾ ಅವರು ಜನವರಿ…
ಎಚ್.ಎಸ್.ದಿನೇಶ್ಕುಮಾರ್ ಮೈಸೂರು: ಸರ್ಕಾರಿ ಕಚೇರಿಯಲ್ಲಿ ಕೆಲಸ ನಿರ್ವಹಿಸುವವರು ಎಚ್ಚರಿಕೆ ವಹಿಸಿದಲ್ಲಿ ನಡೆಯ ಬಹುದಾದ ವಂಚನೆಗಳನ್ನು ಹೇಗೆ ತಪ್ಪಿಸಬಹುದು ಎಂಬುದಕ್ಕೆ ವಿಧಾನಪರಿಷತ್…
ಮೈಸೂರು : ಪ್ರವಾಸಿಗರ ದಂಡೇ ನೆರೆಯುತ್ತಿದ್ದ ಸ್ಥಳದಲ್ಲೇ ಹೀಲಿಯಂ ಬಲೂನ್ಗಾಗಿ ಬಳಸುತ್ತಿದ್ದ ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡು ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿ,…
ಕೆ.ಆರ್.ಪೇಟೆ : ರಸ್ತೆಯಲ್ಲಿ ರಾಗಿ ಒಕ್ಕಣೆ ಮಾಡುತ್ತಿದ್ದ ಸಂದರ್ಭದಲ್ಲಿ ರಾಗಿಯ ಮೇಲೆ ಕಾರು ಚಲಿಸಿದಾಗ ಕಾರು ಮಗುಚಿ ಬಿದ್ದ ಪರಿಣಾಮ…
ಮೈಸೂರು : ಎರಡು ಕಾರುಗಳ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ್ದು, ಅದೃಷ್ಟವಶಾತ್ ಯಾವುದೇ ಹೆಚ್ಚಿನ ಅನಾಹುತ ಸಂಭವಿಸಿಲ್ಲ. ವಿಜಯನಗರದ ಕೊಡವ…