Andolana originals

ನಮ್ಮೂರಲ್ಲಿ ದಸರಾ ಎಂದರೆ ಮಾರಿ ಕುಣಿತ

ಅಜಯ್‌ ಕುಮಾರ್‌ ಎಂ ಗುಂಬಳ್ಳಿ

ನಾನು ಸಣ್ಣ ಹುಡುಗನಿದ್ದಾಗಿನಿಂದಲೂ ‘ದಸರಾ’ ಬರುತ್ತಿದೆ. ದಸರಾ ಬಗ್ಗೆ ಹೆಚ್ಚೇನು ಗೊತ್ತಿಲ್ಲ. ಅನೆಗಳು ಅಂಬಾರಿ ಹೊತ್ತು ಸಾಗುತ್ತವೆ ಎಂದಷ್ಟೆ ತಿಳಿದಿತ್ತು. ಆದರೆ ಆಯುಧ ಪೂಜೆ ದಿನ ಸಣ್ಣ ಹೈಕಳಿಗೆಲ್ಲ ಎಲ್ಲಿಲ್ಲದ ಸಡಗರ.

ಮನೆಯಲ್ಲಿನ ಆರೆಕೋಲು, ಗುದ್ದಲಿ, ಎಲೆಕೊಟ್ಟು, ಉಜ್ಜರಿ, ಕುಡುಗೋಲು, ಮಚ್ಚು ಇನ್ನಿತರ ಆಯುಧಗಳಿಗೆ ಪೂಜೆ ಮಾಡುವುದು ಒಂದುಕಡೆಯಾದರೆ ವಾಹನ ಗಳಿಗೆ ಬಾಳೆದಿಂಡು, ಕಬ್ಬಿನ ತೊಂಡೆ ಕಟ್ಟಿ, ಹೂ ಹಾರಗಳಿಂದ ಅಲಂಕರಿಸಿ ಪೂಜೆ ಮಾಡುವುದು ಅತಿ ಸಂತೋಷದ ಗಳಿಗೆಯಾಗಿರುತ್ತಿತ್ತು. ನಮ್ ಊರಿನ ಕೆರೆ, ಕಾಲುವೆಗಳಲ್ಲಿ ಅಂದು ಲಾರಿ, ಟ್ರಾಕ್ಟರ್, ಟೆಂಪೋ, ಆಟೋಗಳಿಂದ ತುಂಬಿರುತ್ತಿದ್ದವು. ಅಲ್ಲಲ್ಲಿ ಬೈಕ್, ಸೈಕಲ್ ಕೂಡ ಕಾಣಿಸುತ್ತಿದ್ದವು. ನಾನು ಮತ್ತು ಸ್ನೇಹಿತರೆಲ್ಲ ದೊಡ್ಡ ವಾಹನಗಳ ಮಾಲೀಕರು ಕರೆಯುವುದನ್ನೆ ಕಾಯುತ್ತಿದ್ದು, ಅವರು ಕರೆದಾಗ ಬೀಳುವುದನ್ನೂ ಲೆಕ್ಕಿಸದೆ ಓಡುತ್ತಿದ್ದೆವು. ಯಾಕೆಂದರೆ ಸಂಜೆಗೆ ಅವರು ತಮ್ಮ ತಮ್ಮ ವಾಹನಗಳಿಗೆ ಪೂಜೆ ಮಾಡಿದಾಗ ನಮಗೆ ಬೂಂದಿ ಇಲ್ಲವೇ ಬೇರೆ ಯಾವುದಾದರು ಸಿಹಿ ಸಿಗುತ್ತಿತ್ತು. ಆಗೆಲ್ಲ ನಮಗೆ ಸ್ವೀಟು ಸಿಕ್ಕರೆ ತುಂಬಾ ಖುಷಿಪಡುತ್ತಿದ್ದೆವು. ಮಾಮೂಲಿಯಾಗಿ ಎಲ್ಲರೂ ವಾಹನಗಳ ಪೂಜೆ ನಂತರ ಕಡಲೆಪುರಿಯನ್ನೆ ನೀಡುತ್ತಿದ್ದರಿಂದ ನಮಗೆ ಸಿಹಿ ಬೇಕಿತ್ತು.

ಅದಕ್ಕಾಗಿ ನಾನು ಮತ್ತು ಕೆಲವು ಸ್ನೇಹಿತರು ಬೆಳಿಗ್ಗೆ ಕೆರೆಯಲ್ಲಿ ವಾಹನಗಳನ್ನು ತೊಳೆಯುವುದರಿಂದ ಹಿಡಿದು ಸಂಜೆ ಪೂಜೆ ಆಗುವವರೆಗೂ ಅಲೆದಾಡುತ್ತಲೇ ಇರುತ್ತಿದ್ದೆವು. ಇನ್ನು ನಮ್ಮ ಊರಿನಲ್ಲಿ ಕರಿಕಲ್ಲು ಕ್ವಾರಿಯಲ್ಲಿ ಭಾರಿ ಗಾತ್ರದ ಹಿಟಾಚಿ, ಕಾಗ್ ವೀಲ್‌ಗಳಿದ್ದ ದೊಡ್ಡ ದೊಡ್ಡ ಲಾರಿಗಳು, ಕಲ್ಲು ಎತ್ತುವ ಕ್ರೇನುಗಳು, ಕಲ್ಲು ಕತ್ತರಿಸುವ ಮಿಷಿನ್ನು ಮತ್ತು ಇತರ ಸಾಮಾನುಗಳಿದ್ದರಿಂದ ಅಲ್ಲಿ ಪೂಜೆಯೂ ಜೋರು, ಎರಡು ಮೂರು ಬಗೆಯ ಸ್ವೀಟು ಸಿಕ್ಕುತ್ತದೆಂದು ತಿಳಿದು ಪ್ಲಾಸ್ಟಿಕ್ ಕವರ್ ಹಿಡಿದು ಅಲ್ಲಿಗೆ ದೌಡಾಯಿಸುತ್ತಿದ್ದೆವು. ಅಲ್ಲದೆ ಅವರು ಪೂಜೆ ಮಾಡುವಾಗ ಬೂದುಗುಂಬಳಕ್ಕೆ ಚಿಲ್ಲರೆ ಹಾಕಿ ಒಡೆಯುತ್ತಿದ್ದರು. ಹೈಕಳಾದ ನಾವು ಒಡೆದು ಚೂರಾದ ಬೂದುಗುಂಬಳದಲ್ಲಿ ಚಿಲ್ಲರೆ ಕಾಸಿಗಾಗಿ ಹುಡುಕಾಟ ನಡೆಸುತ್ತಿದ್ದೆವು.

ಸಿಕ್ಕರೆ ಖುಷಿ, ಇಲ್ಲವಾದರೆ ಸ್ವೀಟು ಸಿಕ್ಕೀತೆಂಬ ಆಸೆಯಲ್ಲಿ ನಮ್ಮ ಊರಿನ ಸುತ್ತಮುತ್ತ ಇದ್ದ ಕರಿಕಲ್ಲು ಕ್ವಾರಿಗೆ ತಪ್ಪದೇ ಓಡುತ್ತಿದ್ದೆವು. ಇನ್ನು ‘ದಸರಾ’ ದಿನ ಯಾವುದೆಂದು ನಮಗೆ ಗೊತ್ತೆ ಆಗುತ್ತಿರಲಿಲ್ಲ. ಯಾಕೆಂದರೆ ನಮ್ಮ ಊರಿನಲ್ಲಿ ಮಾರಮ್ಮನ ಮೆರವಣಿಗೆ ಅಂದೇ ನಡಯುತ್ತದೆ. ಮಾರಮ್ಮನ ಗುಡಿಗೆ ತರಹೇವಾರಿ ಹೂಗಳಿಂದ ಅಲಂಕಾರ ಮಾಡುತ್ತಿದ್ದರು. ಪಲ್ಲಕ್ಕಿಯಲ್ಲಿ ಸಿಂಗಾರಗೊಂಡ ದೇವಿ ಜೊತೆ ಸತ್ತಿಗೆ, ದಾಳಗಳ ಹಿಡಿದ ಪೂಜಾರಿಗಳ ಜೊತೆ ಮಂಗಳವಾದ್ಯ ತಾಳಮೇಳಗಳ ಸದ್ದಿಗೆ ಜನರ ಗುಂಪು ಮಾರಿಕುಣಿತ ಕುಣಿಯುತ್ತ ಬೀದಿ ಬೀದಿಗಳನ್ನು ಸುತ್ತುತ್ತಿದ್ದರೆ ಮೈರೋಮಾಂಚನವಾಗುತ್ತಿತ್ತು. ಹಾಗೆಯೇ ಸಿಂಗಾರ ಗೊಂಡು ಬಂದ ಹೆಂಗಸರು ಯೌವ್ವನಿಗರ ಕಣ್ ಸೆಳೆಯುತ್ತಿದ್ದರು.

 

andolana

Recent Posts

ಮುತ್ತತ್ತಿಯಲ್ಲಿ ಘೋರ ದುರಂತ: ಒಂದೇ ಕುಟುಂಬದ ನಾಲ್ವರು ಮಹಿಳೆಯರು ಸೇರಿ ಐವರು ನೀರುಪಾಲು

ಹಲಗೂರು: ಸಮೀಪದ ಪ್ರವಾಸಿ ತಾಣವಾದ ಮುತ್ತತ್ತಿಯ ಕಾವೇರಿ ನದಿಯಲ್ಲಿ ಸೆಲ್ಫಿ ತೆಗೆಯುವ ವೇಳೆ ಕಾಲು ಜಾರಿ ನೀರಿನ ಪ್ರಬಲ ಸೆಳೆತಕ್ಕೆ…

8 hours ago

ಚಾಮರಾಜನಗರ ನ್ಯಾಯಾಲಯಕ್ಕೆ ಹುಸಿ ಬಾಂಬ್ ಬೆದರಿಕೆ

ಚಾಮರಾಜನಗರ: ನಗರದ ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್ ನ್ಯಾಯಾಲಯಕ್ಕೆ ಹುಸಿ ಬಾಂಬ್ ಬೆದರಿಕೆಯ ಇ-ಮೇಲ್ ಸಂದೇಶ ಬಂದ ಹಿನ್ನೆಲೆಯಲ್ಲಿ ಪೊಲೀಸರು,…

11 hours ago

ಬಿಆರ್‌ಟಿ ವ್ಯಾಪ್ತಿಯಲ್ಲಿ ಕಾಡಾನೆ ಕಳೇಬರ ಪತ್ತೆ

ಚಾಮರಾಜನಗರ: ಬಿಆರ್‌ಟಿ ಹುಲಿ ಸಂರಕ್ಷಿತ ಪ್ರದೇಶದ ಪುಣಜನೂರು ವನ್ಯಜೀವಿ ವಲಯ ವ್ಯಾಪ್ತಿಯ ಕಾರೆಪಾಳ್ಯ ಗಸ್ತಿನ ಸಮೀಪ ಅರಣ್ಯ ಪ್ರದೇಶದಿಂದ ಸುಮಾರು…

11 hours ago

ತೊಟ್ಟಿಲುಶಾಸ್ತ್ರ, ಸಿದ್ದಪ್ಪಾಜಿ ಕಂಡಾಯೋತ್ಸವದಲ್ಲಿ ತಾರಾ, ಶಶಿಕುಮಾರ್ ಭಾಗಿ

ಮಹಾದೇಶ್‌ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು ಹನೂರು: ತಾಲ್ಲೂಕಿನ ದೊಡ್ಡಾಲತ್ತೂರು ಗ್ರಾಮದ ಶ್ರೀ ಮಕ್ಕಳೇಶ್ವರ ಸ್ವಾಮಿ ಕ್ಷೇತ್ರದಲ್ಲಿ ಹಮ್ಮಿಕೊಂಡಿದ್ದ…

11 hours ago

ಬೆಳೆಗೆ ಸಿಗದ ಬೆಲೆ: ಯುವ ರೈತ ಆತ್ಮಹತ್ಯೆ

ಕೆ.ಆರ್.ನಗರ: ತಂಬಾಕು ಬೆಳೆಗೆ ಸರಿಯಾಗಿ ಬೆಲೆ ಸಿಗದೇ ನಷ್ಟವಾದ ಹಿನ್ನೆಲೆಯಲ್ಲಿ ಮಾಡಿದ್ದ ಸಾಲ ತೀರಿಸಲಾಗದೆ ಮನನೊಂದು ರೈತರೊಬ್ಬರು ತಮ್ಮ ಜಮೀನಿನಲ್ಲಿ…

12 hours ago

ಮುಂದಿನ ಒಂದು ವಾರಗಳ ಕಾಲ ಭಾರೀ ಮಳೆ: ಹವಾಮಾನ ಇಲಾಖೆ ಮುನ್ಸೂಚನೆ

ಬೆಂಗಳೂರು: ರಾಜ್ಯದ ಹಲವು ಜಿಲ್ಲೆಗಳಲ್ಲಿ ಭಾರೀ ಗಾಳಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಚಿಕ್ಕಮಗಳೂರು, ಹಾಸನ, ಶಿವಮೊಗ್ಗ,…

13 hours ago