ಮೊದಲ ಬಾರಿಗೆ ಮಡಿಕೇರಿ ದಸರಾ ಐತಿಹಾಸಿಕ ದಶಮಂಟಪ ಸಮಿತಿಗಳ ನಡುವೆ ಕ್ರಿಕೆಟ್ ಪಂದ್ಯಾವಳಿ; ೧೧ ತಂಡಗಳು ಭಾಗಿ
ನವೀನ್ ಡಿಸೋಜ
ಮಡಿಕೇರಿ: ಇದೇ ಮೊದಲ ಬಾರಿಗೆ ಮಡಿಕೇರಿ ದಸರಾ ಐತಿಹಾಸಿಕ ದಶಮಂಟಪ ಸಮಿತಿಗಳ ನಡುವೆ ಕ್ರಿಕೆಟ್ ಪಂದ್ಯಾವಳಿ ಆಯೋಜಿಸಲಾಗಿದ್ದು, ಶನಿವಾರ ನಗರದಲ್ಲಿ ಪಂದ್ಯಾವಳಿ ಆರಂಭವಾಗಲಿದೆ.
ಮಡಿಕೇರಿಯ ದಶಮಂಟಪ ದೇವಾಲಯಗಳಲ್ಲೊಂದಾದ ಶ್ರೀ ಕೋದಂಡರಾಮ ದೇವಾಲಯ ಸಮಿತಿ ನೇತೃತ್ವದಲ್ಲಿ ಶ್ರೀ ಜ್ಯೋತಿ ಯುವಕರ ಸಂಘದಿಂದ ಮೊದಲ ಬಾರಿಗೆ ದಶಮಂಟಪ ಕ್ರಿಕೆಟ್ ಲೀಗ್ ಪಂದ್ಯಾವಳಿಯನ್ನು ಆಯೋಜಿಸಲಾಗಿದೆ. ದಸರಾ ಶೋಭಾಯಾತ್ರೆಯಲ್ಲಿ ಪಾಳ್ಗೊಳ್ಳುವ ಎಲ್ಲ ಮಂಟಪ ಸಮಿತಿಗಳಿಗೂ ಆಹ್ವಾನ ನೀಡಲಾಗಿದೆ. ಫೆ.೧೫ ಮತ್ತು ೧೬ರಂದು ಪೊಲೀಸ್ ಮೈದಾನದಲ್ಲಿ ಪಂದ್ಯಾವಳಿ ನಡೆಯಲಿದೆ. ೩ ಸಮಿತಿಗಳು ಮೊದಲ ವರ್ಷದ ಕ್ರಿಕೆಟ್ ಪಂದ್ಯಾವಳಿಯಲ್ಲಿ ಪಾಲ್ಗೊಳ್ಳುತ್ತಿಲ್ಲ. ಹೀಗಾಗಿ ಕೆಲವು ಸಮಿತಿಗಳು ಸೇರಿ ತಂಡಗಳನ್ನು ಮಾಡಿಕೊಂಡಿವೆ.
ದೇಚೂರು ಶ್ರೀ ಬಾಲಕ ಬಲರಾಮಮಂದಿರ ಸಮಿತಿ, ಶ್ರೀ ಕೋದಂಡ ರಾಮ ದೇವಾಲಯ, ಶ್ರೀ ಕಂಚಿಕಾಮಾಕ್ಷಿಯಮ್ಮ, ಶ್ರೀ ಕೋಟೆ ಮಾರಿಯಮ್ಮ, ಕುಂದುರುಮೊಟ್ಟೆ ಶ್ರೀ ಚೌಟಿ ಮಾರಿಯಮ್ಮ, ಶ್ರೀ ಕೋಟೆ ಮಹಾಗಣಪತಿ ದೇವಾಲಯ, ಶ್ರೀ ಕರವಲೆ ಭಗವತಿ ಮಹಿಷಮರ್ದಿನಿ ದೇವಸ್ಥಾನದ ಮಂಟಪ ಸಮಿತಿಗಳು ಪಂದ್ಯಾವಳಿಯಲ್ಲಿ ಪಾಲ್ಗೊಳ್ಳಲಿವೆ. ಅನಿವಾರ್ಯ ಕಾರಣಗಳಿಂದ ಪೇಟೆ ಶ್ರೀ ರಾಮಮಂದಿರ, ಶ್ರೀ ದಂಡಿನ ಮಾರಿಯಮ್ಮ ಹಾಗೂ ಶ್ರೀ ಚೌಡೇಶ್ವರಿ ದೇವಸ್ಥಾನದ ಮಂಟಪ ಸಮಿತಿಗಳು ಪಾಲ್ಗೊಳ್ಳುತ್ತಿಲ್ಲ.
ದಶಮಂಟಪ ಪ್ರೀಮಿಯರ್ ಲೀಗ್ ಪಂದ್ಯಾವಳಿಯನ್ನು ಸೂಪರ್ ೯ ಮಾದರಿಯಲ್ಲಿ ಆಯೋಜಿಸಲಾಗಿದ್ದು, ಒಂದು ತಂಡದಲ್ಲಿ ೯ ಮತ್ತು ೨ರಂತೆ ಒಟ್ಟು ೧೧ ಮಂದಿಗೆ ಮಾತ್ರ ಆಟವಾಡಲು ಅವಕಾಶವಿದೆ. ಪಂದ್ಯಾವಳಿಯು ಲೀಗ್ ಮಾದರಿಯಲ್ಲಿ ೨ ಪೂಲ್ನಲ್ಲಿ ನಡೆಯಲಿದೆ. ಲೀಗ್ ಮಾದರಿಯಲ್ಲಿ ಪ್ರತಿ ಮ್ಯಾಚ್ಗೆ ೪ ಓವರ್ಗಳನ್ನು ನಿಗದಿ ಮಾಡಲಾಗಿದ್ದು, ಫೈನಲ್ ಹಂತದಲ್ಲಿ ೬ ಓವರ್ಗಳ ಕ್ರಿಕೆಟ್ ಮ್ಯಾಚ್ ನಡೆಯಲಿದೆ.
ಪಂದ್ಯಾವಳಿಯಲ್ಲಿ ಮಡಿಕೇರಿ ತಾಲ್ಲೂಕಿಗೆ ಸೇರಿದ ಆಟಗಾರರಿಗೆ ಮಾತ್ರ ಅವಕಾಶ ನೀಡಲಾಗಿದೆ. ಮಂಟಪ ಸಮಿತಿಗಳು ತಾಲ್ಲೂಕು ವ್ಯಾಪ್ತಿಯ ಆಟಗಾರರನ್ನು ಒಳಗೊಂಡಂತೆ ತಮ್ಮ ತಂಡವನ್ನು ಸಜ್ಜುಗೊಳಿಸಿಕೊಳ್ಳಬಹುದು. ಕೇವಲ ಮಂಟಪ ಸಮಿತಿ ಪದಾಧಿಕಾರಿಗಳು, ಸದಸ್ಯರಿಗೆ ಮಾತ್ರ ಆಟವಾಡಲು ಅವಕಾಶವೆಂದು ಮಾಡಿದಲ್ಲಿ, ಮಂಟಪ ಸಮಿತಿಗಳಿಗೆ ತಂಡಗಳನ್ನು ರಚಿಸಿಕೊಳ್ಳಲು ಕಷ್ಟವಾಗುತ್ತದೆ. ಈ ಕಾರಣದಿಂದ ತಾಲ್ಲೂಕು ಮಟ್ಟದ ಆಟಗಾರರಿಗೆ ಅವಕಾಶ ಒದಗಿಸಲಾಗಿದೆ. ಪಂದ್ಯಾವಳಿಯಲ್ಲಿ ಪಾಲ್ಗೊಳ್ಳುವ ಆಟಗಾರರು ಆಧಾರ್ ಕಾರ್ಡ್ ಹಾಜರುಪಡಿಸುವುದು ಕಡ್ಡಾಯ ಮಾಡಲಾಗಿದೆ.
ಪಂದ್ಯಾವಳಿಯಲ್ಲಿ ಪಾಲ್ಗೊಂಡು ವಿಜೇತರಾಗುವ ತಂಡಕ್ಕೆ ೫೦ ಸಾವಿರ ರೂ. ನಗದು ಮತ್ತು ಆಕರ್ಷಕ ಟ್ರೋಫಿ ನೀಡಲಾಗುತ್ತದೆ. ರನ್ನರ್ಅಪ್ ತಂಡಕ್ಕೆ ೨೫ ಸಾವಿರ ರೂ. ನಗದು ಮತ್ತು ಟ್ರೋಫಿ ನೀಡಲಾಗುವುದು. ಇದರೊಂದಿಗೆ ವಿಶೇಷ ಆಕರ್ಷಣೆಯಾಗಿ ರೋಲಿಂಗ್ ಟ್ರೋಫಿಯನ್ನು ಕೂಡ ನೀಡಲಾಗುತ್ತಿದ್ದು, ೩ ವರ್ಷಗಳ ಕಾಲ ಸತತವಾಗಿ ಗೆದ್ದವರು ಈ ಟ್ರೋಫಿಯನ್ನು ತಮ್ಮದಾಗಿಸಿಕೊಳ್ಳಬಹುದಾಗಿದೆ.
ಇಲ್ಲವಾದರೆ ಪ್ರತಿ ವರ್ಷ ಪಂದ್ಯಾವಳಿ ಸಂದರ್ಭದಲ್ಲಿ ಆಯೋಜಕರಿಗೆ ಟ್ರೋಫಿ ಹಿಂದಿರುಗಿಸಬೇಕಾಗಿದೆ. ಇದರೊಂದಿಗೆ ಬೆಸ್ಟ್ ಬೌಲರ್, ಬೆಸ್ಟ್ ಬ್ಯಾಟ್ಸ್ಮನ್, ಬೆಸ್ಟ್ ಫೀಲ್ಡರ್ ಸೇರಿದಂತೆ ಹಲವು ಪ್ರಶಸ್ತಿಗಳನ್ನು ನೀಡಲಾಗುತ್ತಿದೆ ಎಂದು ಆಯೋಜಕರು ತಿಳಿಸಿದ್ದಾರೆ.
ಫೆ.೧೫ರಂದು ಬೆಳಿಗ್ಗೆ ನಡೆಯುವ ಪಂದ್ಯಾವಳಿಯ ಉದ್ಘಾಟನಾ ಸಮಾರಂಭದಲ್ಲಿ ಶಾಸಕ ಡಾ.ಮಂಥರ್ ಗೌಡ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್, ಹಿರಿಯ ಪತ್ರಕರ್ತ ಜಿ.ರಾಜೇಂದ್ರ, ಮುಡಾ ಅಧ್ಯಕ್ಷ ಬಿ.ವೈ.ರಾಜೇಶ್, ನಗರಸಭಾ ಮಾಜಿ ಸದಸ್ಯ ಕೆ.ಎಂ.ಗಣೇಶ್, ಮಡಿಕೇರಿ ದಶ ಮಂಟಪ ಸಮಿತಿ ಅಧ್ಯಕ್ಷ ಜಗದೀಶ್, ಶ್ರೀ ಕೋದಂಡ ರಾಮ ದೇವಾಲಯ ಸಮಿತಿಯ ಪದಾಧಿಕಾರಿಗಳು, ದಶ ಮಂಟಪಗಳ ಅಧ್ಯಕ್ಷರು ಪಾಲ್ಗೊಳ್ಳುವರು.
ದಸರಾ ಬಳಿಕವೂ ಸೇರುವ ಅವಕಾಶ: ದಸರಾ ಸಂದರ್ಭದಲ್ಲಿ ತಿಂಗಳುಗಳ ಮೊದಲೇ ದೇವಾಲಯದ ಬಳಿ ಸೇರಿ ಮಂಟಪ ತಯಾರಿಕೆಯಲ್ಲಿ ತೊಡಗುವ ಪ್ರತಿ ಸಮಿತಿಯ ೩೦೦ಕ್ಕೂ ಹೆಚ್ಚಿನ ಸದಸ್ಯರು ದಸರಾ ಮರು ದಿನ ಮತ್ತೆ ತಮ್ಮ ತಮ್ಮ ಕೆಲಸಗಳಿಗೆ ತೆರಳುತ್ತಾರೆ. ಇನ್ನು ಮತ್ತೆ ಇವರು ಸೇರುವುದೇ ಮುಂದಿನ ದಸರಾದಲ್ಲಿ ಎಂಬಂತಿತ್ತು. ಆದರೆ ಇದೀಗ ದಶಮಂಟಪ ಪ್ರೀಮಿಯರ್ ಲೀಗ್ ಆರಂಭವಾದರೆ ಎಲ್ಲರಿಗೂ ಮತ್ತೆ ಸೇರಲು ಅವಕಾಶ ಸಿಕ್ಕಂತಾಗುತ್ತದೆ. ದಶಮಂಟಪಗಳ ಹೆಸರಿನಲ್ಲಿ ಪಂದ್ಯಾವಳಿ ನಡೆಯುವುದರಿಂದ ಬಹುಮಾನಕ್ಕಾಗಿ ಮಂಟಪಗಳ ಪೈಪೋಟಿಯಂತೆಯೇ ಇಲ್ಲಿಯೂ ಭಾರೀ ಸ್ಪರ್ಧೆ ಏರ್ಪಡುವ ಸಾಧ್ಯತೆ ಇದೆ.
” ಮಡಿಕೇರಿಯ ಮಲ್ಲಿಕಾರ್ಜುನ ನಗರದ ಶ್ರೀ ಕೋದಂಡರಾಮ ದೇವಾಲಯದ ಶ್ರೀ ಜ್ಯೋತಿ ಯುವಕರ ಸಂಘದ ವತಿಯಿಂದ ಇದೇ ಪ್ರಥಮ ಬಾರಿಗೆ ಕ್ರಿಕೆಟ್ ಪಂದ್ಯಾವಳಿ ಆಯೋಜಿಸಲಾಗಿದೆ. ನಗರದ ದಶಮಂಟಪಗಳಿಗೆ ಸಂಬಂಧಿಸಿದಂತೆ ದಶಮಂಟಪ ಪ್ರೀಮಿಯರ್ ಲೀಗ್ (ಡಿಪಿಎಲ್) ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿಯನ್ನು ಫೆ.೧೫ ಮತ್ತು ೧೬ರಂದು ನಗರದ ಪೊಲೀಸ್ ಮೈದಾನದಲ್ಲಿ ಆಯೋಜಿಸಲಾಗಿದೆ. ಒಟ್ಟು ೧೧ ತಂಡಗಳು ಪಾಲ್ಗೊಳ್ಳಲಿವೆ.”
-ಹೆಚ್.ಎನ್.ಮಹೇಶ್, ಉಪಾಧ್ಯಕ್ಷ, ಶ್ರೀ ಜ್ಯೋತಿ ಯುವಕರ ಸಂಘ
ತುಮಕೂರು: ರಾಜ್ಯದಲ್ಲಿ ಸಿಎಂ ಸ್ಥಾನ ಬದಲಾವಣೆ ಚರ್ಚೆ ಬೆನ್ನಲ್ಲೇ ಮಾಜಿ ಸಚಿವ ಕೆ.ಎನ್.ರಾಜಣ್ಣ ಮಹತ್ವದ ಹೇಳಿಕೆ ಕೊಟ್ಟಿದ್ದಾರೆ. ಈ ಕುರಿತು…
ಹಾಸನ: ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ದೆಹಲಿ ಪೊಲೀಸರು ನೋಟಿಸ್ ಕೊಟ್ಟ ವಿಚಾರಕ್ಕೆ ಡಿಸಿಎಂ ಡಿ.ಕೆ.ಶಿವಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ. ಈ ಕುರಿತು…
ಹಾಸನ: ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಒಂದು ವರ್ಷದೊಳಗೆ ಎಲ್ಲ ಗ್ಯಾರಂಟಿ ಯೋಜನೆಗಳನ್ನು ಯಶಸ್ವಿಯಾಗಿ ಜಾರಿಗೊಳಿಸಿದ್ದು, ಕರ್ನಾಟಕದ ಇತಿಹಾಸದಲ್ಲಿಯೇ ಕಾಂಗ್ರೆಸ್…
ನಂಜನಗೂಡು: ಜಮೀನಿನಲ್ಲಿ ಭಾರೀ ಗಾತ್ರದ ಹೆಬ್ಬಾವು ಪತ್ತೆಯಾಗಿದ್ದು, ಅರಣ್ಯ ಇಲಾಖೆ ಸಿಬ್ಬಂದಿಗಳು ರಕ್ಷಿಸಿ ಸುರಕ್ಷಿತ ಪ್ರದೇಶಕ್ಕೆ ಬಿಟ್ಟಿದ್ದಾರೆ. ಜಿಲ್ಲೆಯ ನಂಜನಗೂಡು…
ಮಂಡ್ಯ: ಸುಮಾರು 15 ತಿಂಗಳಿನಿಂದ ವೇತನ ಸಿಗದೇ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದ ಮಂಡ್ಯದ ಮೈಶುಗರ್ ಶಾಲೆಯ ಶಿಕ್ಷಕರ ಬಾಕಿ ವೇತನಕ್ಕಾಗಿ…
ಹಾಸನ: ಗ್ಯಾರಂಟಿಗೆ ಕೋಟಿಗಟ್ಟಲೇ ಹಣ ಖರ್ಚು ಮಾಡ್ತಿರೋದು ಸಮಾನತೆ ತರಲು ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಈ ಕುರಿತು ಹಾಸನದಲ್ಲಿ…