Andolana originals

ಗಿರಿಜನ ಆರೋಗ್ಯ ನಾವಿಕ ಯೋಜನೆ ಮುಂದುವರಿಸಿ

ಪ್ರಸಾದ್ ಲಕ್ಕೂರು

ಗಿರಿಜನ ಸಂಘಟನೆಗಳ ಮುಖಂಡರ ಒತ್ತಾಯ; ಆರೋಗ್ಯ ಕಾಪಾಡುವ ಈ ಯೋಜನೆ ವರದಾನ 

ಚಾಮರಾಜನಗರ: ಗಿರಿಜನರ ಆರೋಗ್ಯ ಸಂರಕ್ಷಣೆಗೆ ಅನುಕೂಲಕರವಾಗಿದ್ದ ಟ್ರೈಬ್ಸ್ ಹೆಲ್ತ್ ನ್ಯಾವಿಗೇಟರ್ (ಗಿರಿಜನ ಆರೋಗ್ಯ ನಾವಿಕ ಕಾರ್ಯಕರ್ತ) ಯೋಜನೆ ಮುಕ್ತಾಯದ ಹಂತದಲ್ಲಿದೆ. ಇಂತಹ ಅತ್ಯುತ್ತಮ ಪ್ರಯೋಜನಕಾರಿ ಯೋಜನೆಯನ್ನು ಸ್ಥಗಿತಗೊಳಿಸದೇ ಮುಂದುವರಿಸಬೇಕು ಎಂಬ ಒತ್ತಾಯ ಗಿರಿಜನರಿಂದ ಕೇಳಿಬಂದಿದೆ.

ರಾಜ್ಯ ಸರ್ಕಾರ ೨ ವರ್ಷಗಳ ಹಿಂದೆ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯಿಂದ ಚಾಮರಾಜನಗರ, ಮೈಸೂರು, ಕೊಡಗು, ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಜಾರಿಗೊಳಿಸಿದ ಈ ಕಾರ್ಯಕ್ರಮದಿಂದ ಗಿರಿಜನರ ಆರೋಗ್ಯ ತೊಂದರೆಗಳು ನಿವಾರಣೆಯಾಗಿವೆ. ಆದ್ದರಿಂದ ಈ ಕಾರ್ಯಕ್ರಮವನ್ನು ನಿಲ್ಲಿಸಬಾರದು ಎಂದು ಜಿಲ್ಲೆಯ ಗಿರಿಜನ ಮುಖಂಡರು ರಾಜ್ಯ ಸರ್ಕಾರವನ್ನು ಆಗ್ರಹಿಸಿದ್ದಾರೆ.

ಪಶ್ಚಿಮಘಟ್ಟ ಅರಣ್ಯ ಪ್ರದೇಶಕ್ಕೆ ಒಳಪಡುವ ಈ ೫ ಜಿಲ್ಲೆಗಳಲ್ಲಿರುವ ಸಂರಕ್ಷಿತ ಅರಣ್ಯ ಪ್ರದೇಶಗಳ ಒಳಗೆ ಹಾಗೂ ಅಂಚಿನಲ್ಲಿ ವಾಸವಿರುವ ಗಿರಿಜನರು ಅನಾರೋಗ್ಯಕ್ಕೆ ಈಡಾ ದರೆ ಅಂತಹವರನ್ನು ಗಿರಿಜನ ಆರೋಗ್ಯ ಕಾರ್ಯಕರ್ತರು ಆಸ್ಪತ್ರೆಗಳಲ್ಲಿ ಚಿಕಿತ್ಸೆ ಕೊಡಿಸುತ್ತಿದ್ದರು. ಇದರಿಂದ ಗಿರಿಜನರು ಆಸ್ಪತ್ರೆಗಳಿಂದ ದೂರ ಉಳಿಯುವುದು ಕಡಿಮೆಯಾಗಿತ್ತು.

ಏನಿದು ಯೋಜನೆ?: ಈ ಕಾರ್ಯಕ್ರಮದಡಿ ತಾಲ್ಲೂಕು ಮತ್ತು ಜಿಲ್ಲಾ ಕೇಂದ್ರಗಳಲ್ಲಿರುವ ಸರ್ಕಾರಿ ಆಸ್ಪತ್ರೆಗಳಿಗೆ ನರ್ಸಿಂಗ್ ಓದಿರುವ ಗಿರಿಜನ ಯುವಜನರನ್ನು ತಲಾ ಒಬ್ಬರಂತೆ ಗೌರವಧನದ ಆಧಾರದಲ್ಲಿ ಆರೋಗ್ಯ ಕಾರ್ಯಕರ್ತರನ್ನಾಗಿ ನೇಮಿಸುವುದು. ಗಿರಿಜನ ಪುರುಷ, ಮಹಿಳೆ, ವೃದ್ಧರು, ಮಕ್ಕಳು ಅನಾರೋಗ್ಯಕ್ಕೆ ಈಡಾದರೆ ನಾವಿಕರ ಗಮನಕ್ಕೆ ತರಲಾಗುತ್ತದೆ. ತಕ್ಷಣ ಅನಾರೋಗ್ಯಕ್ಕೆ ಈಡಾಗಿದ್ದ ಗಿರಿಜನರನ್ನು ಹತ್ತಿರದ ತಾಲ್ಲೂಕು ಅಥವಾ ಜಿಲ್ಲಾಸ್ಪತ್ರೆಗೆ ಕರೆತಂದು ತಪಾಸಣೆ, ಚಿಕಿತ್ಸೆ, ವಿವಿಧ ಪರೀಕ್ಷೆಗಳನ್ನು ಮಾಡಿಸುವುದು. ಅಗತ್ಯವಿದ್ದರೆ ಒಳರೋಗಿಯಾಗಿ ದಾಖಲಿಸಿ ಚಿಕಿತ್ಸೆಯನ್ನು ಕೊಡಿಸಿ ಗುಣಪಡಿಸಿ ಕಳುಹಿಸುವುದು.

ಗಿರಿಜನರು ಆಸ್ಪತ್ರೆಗೆ ಬಂದಾಗ ನೋಂದಣಿ ಚೀಟಿ ಪಡೆಯುವುದು, ಯಾವ ವೈದ್ಯರನ್ನು ಕಾಣಬೇಕು ಎಂಬುದೂ ಸೇರಿದಂತೆ ಇತರೆ ಕೆಲಸಗಳನ್ನು ಹೇಗೆ ಮಾಡಬೇಕು ಎಂಬುದು ತಿಳಿಯದಷ್ಟು ಮುಗ್ಧರು. ಆಸ್ಪತ್ರೆಯಲ್ಲಿರುವ ಸಿಬ್ಬಂದಿಗೆ ಗಿರಿಜನರ ಭಾಷೆ ಅರ್ಥವಾಗದು. ಇದೆಲ್ಲದರಿಂದ ಆಸ್ಪತ್ರೆಯ ಸಹವಾಸವೇ ಬೇಡ ಎಂದು ಗಿರಿಜನರು ದೂರ ಉಳಿಯುತ್ತಿದ್ದರು. ಸ್ಥಳೀಯವಾಗಿ ದೊರಕುವ ಗಿಡಮೂಲಿಕೆಗಳಿಂದ ತಮ್ಮ ಅನಾರೋಗ್ಯವನ್ನು ಗುಣಪಡಿಸಿಕೊಳ್ಳುತ್ತಿದ್ದರು. ಆದರೆ, ಅಪೌಷ್ಟಿಕತೆ, ರಕ್ತಹೀನತೆ, ಸಿಲಕಲ್‌ಸೆಲ್ ಕಾಯಿಲೆಗಳಿಂದ ಬಳಲುತ್ತಿದ್ದುದು ಹೆಚ್ಚು. ಇದನ್ನು ಮನಗಂಡು ಸರ್ಕಾರ ಈ ಗಿರಿಜನ ಆರೋಗ್ಯ ನಾವಿಕ ಯೋಜನೆ ರೂಪಿಸಿತ್ತು. ಅದರಡಿ ಕಾರ್ಯಕರ್ತರು ಚಿಕಿತ್ಸೆ ಕೊಡಿಸುತ್ತಿದ್ದರು.

” ಇದೊಂದು ಉತ್ತಮ ಯೋಜನೆ ಆಸ್ಪತ್ರೆ ಎಂದರೆ ಭಯ ಪಡುವ ಗಿರಿಜನರಿಗೆ ಅವರದೇ ಸಮುದಾಯದ ಯುವಜನರಿಂದ ಚಿಕಿತ್ಸೆ ಕೊಡಿಸಿ ಅವರ ಆರೋಗ್ಯ ಕಾಪಾಡಲು ಅನುಕೂಲವಾಗಿತ್ತು. ಆದ್ದರಿಂದ ಇದನ್ನು ಸ್ಥಗಿತಗೊಳಿಸದೆ ಮುಂದುವರಿಸಬೇಕು.”

ಡಾ.ಸಿ.ಮಾದೇಗೌಡ, ಕಾರ್ಯದರ್ಶಿ, ಜಿಲ್ಲಾ ಬುಡಕಟ್ಟು ಗಿರಿಜನ ಅಭಿವೃದ್ಧಿ ಸಂಘ, ಬಿಳಿಗಿರಿರಂಗನಬೆಟ್ಟ.

” ಜಿಲ್ಲೆಯಲ್ಲಿ ಉತ್ತಮವಾಗಿ ನಡೆಯುತ್ತಿರುವ ಈ ಯೋಜನೆಯನ್ನು ಮುಂದುವರಿಸಬೇಕೆಂದು ೨-೩ ಬಾರಿ ಇಲಾಖೆಯ ನಿರ್ದೇಶಕರು ಹಾಗೂ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದೇವೆ. ಈ ಯೋಜನೆಗೆ ವಾಹನ ಸೌಲಭ್ಯ ಮತ್ತು ಕಾರ್ಯಕರ್ತರಿಗೆ ಇನ್ನಷ್ಟು ಹೆಚ್ಚು ಗೌರವಧನ ನೀಡುವಂತೆಯೂ ಕೋರಲಾಗಿದೆ.”

ಬಿಂದಿಯಾ, ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ. ಚಾ.ನಗರ

” ೨ ವರ್ಷಗಳಿಂದ ೧೮೯೩ ಗಿರಿಜನರಿಗೆ ಚಿಕಿತ್ಸೆ ಕೊಡಿಸಲಾಗಿದೆ. ಇದರಿಂದ ಗಿರಿಜನರ ಆರೋಗ್ಯ ಸುಧಾರಣೆಗೆ ಅನುಕೂಲವಾಗಿದೆ. ಆದ್ದರಿಂದ ಈ ಯೋಜನೆಯನ್ನು ಮತ್ತಷ್ಟು ಉನ್ನತೀಕರಿಸಿ ಆರೋಗ್ಯ ಕಾರ್ಯಕರ್ತರಿಗೆ ಗೌರವಧನ ಹೆಚ್ಚಿಸಬೇಕು.”

ಜಿ.ಬೇಬಿ, ಜಿಲ್ಲಾ ಆದಿವಾಸಿ ಆರೋಗ್ಯ ಸಂಯೋಜಕರು.

ಚಾ.ನಗರ ಜಿಲ್ಲೆಯಲ್ಲಿ ಯಶಸ್ವಿ:  ಚಾಮರಾಜನಗರ ಜಿಲ್ಲೆಯಲ್ಲಿ ಈ ಯೋಜನೆ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ಅಧಿಕಾರಿಗಳ ಕಾಳಜಿ ಮತ್ತು ಗಿರಿಜನ ಮುಖಂಡರ ಸಹಕಾರದಿಂದ ಯಶಸ್ವಿಯಾಗಿದೆ. ಸಾಕಷ್ಟು ಗಿರಿಜನರು ಇದರ ಪ್ರಯೋಜನ ಪಡೆದಿದ್ಧಾರೆ. ಜಿಲ್ಲೆಯ ಗುಂಡ್ಲುಪೇಟೆ, ಕೊಳ್ಳೇಗಾಲ, ಹನೂರು, ಚಾಮರಾಜನಗರ ಆಸ್ಪತ್ರೆಗಳಿಗೆ ಕಾರ್ಯಕರ್ತರನ್ನು ನೇಮಿಸಲಾಗಿತ್ತು. ಇವರ ಉಸ್ತುವಾರಿ ನೋಡಿಕೊಳ್ಳಲು ಸಂಯೋಜಕರೊಬ್ಬರನ್ನು ಸಹ ನೇಮಿಸಲಾಗಿತ್ತು. ಇವರೆಲ್ಲರೂ ೨ ವರ್ಷಗಳಿಂದ ಗಿರಿಜನರ ಆರೋಗ್ಯ ಕಾಪಾಡುವಲ್ಲಿ ಸಾಕಷ್ಟು ಶ್ರಮ ವಹಿಸಿದ್ದಾರೆ.

ಉಳಿದ ಜಿಲ್ಲೆಗಳಲ್ಲಿ ನೀರಸ:  ಮೈಸೂರು, ಕೊಡಗು, ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ಅಧಿಕಾರಿಗಳ ನಿರಾಸಕ್ತಿ ಮತ್ತು ಗಿರಿಜನ ಮುಖಂಡರು ಸರಿಯಾಗಿ ಪ್ರೋತ್ಸಾಹ ನೀಡದ ಕಾರಣ ಗಿರಿಜನ ಆರೋಗ್ಯ ಕಾರ್ಯಕರ್ತ ಯೋಜನೆ ನಿರೀಕ್ಷಿತ ಗುರಿ ಮುಟ್ಟಲಿಲ್ಲ. ಆಸ್ಪತ್ರೆಗೊಬ್ಬರಂತೆ ಕಾರ್ಯಕರ್ತರನ್ನು ನೇಮಿಸಲಿಲ್ಲ. ಗಿರಿಜನರ ಆರೋಗ್ಯದ ಬಗ್ಗೆ ಕಾಳಜಿ ತೋರಲಿಲ್ಲ ಎಂದು ಚಾ.ನಗರ ಜಿಲ್ಲೆಯ ಗಿರಿಜನ ಮುಖಂಡರು ಬೇಸರ ವ್ಯಕ್ತಪಡಿಸಿದ್ದಾರೆ.

ಆಂದೋಲನ ಡೆಸ್ಕ್

Recent Posts

ಕ್ಯಾತನಹಳ್ಳಿಯಲ್ಲಿ ಅರ್ಧಕ್ಕೆ ನಿಂತ ಕಾಮಗಾರಿಗಳು

ಮಹೇಶ್ ಕರೋಠಿ ಕಿಕ್ಕೇರಿ: ಇಲ್ಲಿಗೆ ಸಮೀಪದ ಮಂದಗೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕ್ಯಾತನಹಳ್ಳಿ ಗ್ರಾಮದಲ್ಲಿ ಕಳೆದ ೨-೩ ವರ್ಷಗಳಿಂದ ಹಲವು…

3 hours ago

ಓದುಗರ ಪತ್ರ: ಬಂದರು ಎಂದರೆ…

ನೆಂಟರಿಷ್ಟರು ಮನೆಗೆ ಬಂದರು ಎಂದರೆ... ಏನು ಎತ್ತ, ಹೇಗೆ ಅವರ ಆತಿಥ್ಯ? ಇಂಥ ಸಂಕಷ್ಟಗಳಿಗೆಲ್ಲಾ ಕಾರಣ,ಬಂದ್ ಆಗಿರುವ ಆ ಹಾರ್ಮುಜ್…

3 hours ago

ಓದುಗರ ಪತ್ರ: ರಸ್ತೆ ಡುಬ್ಬಗಳಿಗೆ ಬಿಳಿ ಬಣ್ಣ ಬಳಿಯಿರಿ

ಮೈಸೂರಿನಿಂದ ಎಚ್.ಡಿ.ಕೋಟೆ ಮಾರ್ಗದಲ್ಲಿ ಬರುವ ಮಾದಾಪುರ ಗ್ರಾಮದಿಂದ ಕೆ. ಬೆಳತ್ತೂರು ಹಾಗೂ ಲೆಂಕೆ ಗ್ರಾಮದವರೆಗೂ ರಸ್ತೆ ಡಾಂಬರೀಕರಣವಾಗಿದೆ. ಈ ರಸ್ತೆಯಲ್ಲಿ…

3 hours ago

ಓದುಗರ ಪತ್ರ: ರಾಜಕೀಯದ ಪ್ರಚಾರ ಸಾಧನವಾಗುತ್ತಿರುವ ಜಾತ್ರೆಗಳು

ಜಾತ್ರೆಗಳು ಹಾಗೂ ಹಬ್ಬಗಳು ಗ್ರಾಮದ ಎಲ್ಲಾ ಜನರು ಒಟ್ಟುಗೂಡಿ ಮಾಡುವ ಕಾರ್ಯಕ್ರಮವಾಗಿವೆ. ಇದರಲ್ಲಿ ಜನರ ಒಗ್ಗಟ್ಟು, ಪರಸ್ಪರ ಸಹಕಾರ ಕಾಣುತ್ತೇವೆ.…

3 hours ago

ಓದುಗರ ಪತ್ರ: ಸೆಸ್ಕ್ ಯುಜಿ ಕೇಬಲ್ ಮುಂಜಾಗ್ರತೆ ವಹಿಸಿ

ಮೈಸೂರಿನ ಬಹುತೇಕ ಎಲ್ಲ ಬಡಾವಣೆಗಳಲ್ಲೂ, ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ (ಸೆಸ್ಕ್)ದಿಂದ ಅಂಡರ್ ಗ್ರೌಂಡ್ ಕೇಬಲ್ ಅನ್ನು ಅಳಡಿಸುತ್ತಿದ್ದು, ಕಾಮಗಾರಿಯ…

3 hours ago

ಶಿವಾಜಿ ಗಣೇಶನ್‌ ಅವರ ವಾರದ ಅಂಕಣ: ಕೆನೆಪದರ ಪರಿಶಿಷ್ಟರಿಗೆ ಬೇಡವೆನ್ನುವ ಕೇಂದ್ರಕ್ಕೆ ಮತ್ತೆ ಸುಪ್ರೀಂ ತಾಕೀತು

ಮೀಸಲಾತಿ ವ್ಯವಸ್ಥೆ ಜಾರಿ ಸಂಬಂಧ ಪರ ಮತ್ತು ವಿರೋಧದ ಚರ್ಚೆ ಹಾದಿ ಬೀದಿ, ಹಳ್ಳಿಯ ಪಂಚಾಯಿತಿ ಕಟ್ಟೆಗಳಲ್ಲಿ ಮತ್ತು ಖಾಸಗಿಯಾಗಿ…

3 hours ago