ನವೀನ್ ಡಿಸೋಜ
ಕೆಲವೆಡೆ ಸ್ಪಿಂಕ್ಲರ್ ಮೊರೆ ಹೋದ ಕೃಷಿಕರು; ಮಳೆಯ ಮುನ್ಸೂಚನೆ ನೀಡಿದ ಹವಾಮಾನ ಇಲಾಖೆ
ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಕಾಫಿಕೊಯ್ಲು ಬಹುತೇಕ ಮುಕ್ತಾಯಗೊಂಡಿದ್ದು, ಬೆಳೆಗಾರರೀಗ ಹೂ ಮಳೆಗಾಗಿ ಆಕಾಶ ನೋಡುತ್ತಿದ್ದಾರೆ. ಕೆಲವೆಡೆ ಮಳೆಯಾಗಿರುವುದರಿಂದ ಬೆಳೆಗಾರರು ಸಂತಸಗೊಂಡಿದ್ದರೆ, ಮಳೆಯಾಗದ ಪ್ರದೇಶಗಳಲ್ಲಿ ಸ್ಪ್ರಿಂಕ್ಲರ್ ಮೂಲಕ ನೀರು ಒದಗಿಸುವ ಕೆಲಸ ಮಾಡಲಾಗುತ್ತಿದೆ.
ಜಿಲ್ಲೆಯಲ್ಲಿ ಕಾಫಿ ಕೊಯ್ಲು ಬಹುತೇಕ ಪೂರ್ಣಗೊಂಡಿದೆ. ಈ ಸಂದರ್ಭದಲ್ಲಿ ಹೂ ಮಳೆಯಾದರೆ ಮುಂದಿನ ವರ್ಷದ ಫಸಲಿಗೆ ಅನುಕೂಲವಾಗುತ್ತದೆ. ಇಲ್ಲವಾದರೆ ಸ್ಪ್ರಿಂಕ್ಲರ್ಗಳ ಮೂಲಕ ನೀರು ಒದಗಿಸುವುದು ಅನಿವಾರ್ಯವಾಗಲಿದೆ. ದಕ್ಷಿಣ ಕೊಡಗಿನ ಕೆಲ ಭಾಗಗಳಲ್ಲಿ ಜನವರಿ ತಿಂಗಳಲ್ಲಿ ಸುರಿದ ಮಳೆಯಿಂದಾಗಿ ಕಾಫಿ ಗಿಡಗಳಲ್ಲಿ ಮೊಗ್ಗು ಕಾಣಿಸಿಕೊಂಡಿದ್ದು, ಈಗಾಗಲೇ ಬ್ಯಾಕಿಂಗ್ಗಾಗಿ ಬೆಳೆಗಾರರು ಸ್ಪ್ರಿಂಕ್ಲರ್ ಮೊರೆ ಹೋಗಿದ್ದಾರೆ. ಈ ಸಂದರ್ಭದಲ್ಲಿ ಮಳೆ ಬಿದ್ದರೇ ಬೆಳೆಗಾರರಿಗೆ ಭಾರೀ ಅನುಕೂಲವಾಗಲಿದ್ದು, ಎಲ್ಲರೂ ಈಗ ಮಳೆಗಾಗಿ ಆಕಾಶವನ್ನು ನೋಡುತ್ತಿದ್ದಾರೆ.
ಕಾಫಿ ಗಿಡಗಳಲ್ಲಿ ಜನವರಿ-ಫೆಬ್ರವರಿಯಲ್ಲಿ ಮೊಗ್ಗುಗಳು ಬಿಡುತ್ತವೆ. ಆದರೆ ಅವು ಅರಳಿ ಹೂ ಬಿಡಲು ಮಳೆಯ ಅವಶ್ಯವಿದೆ. ಈಮಳೆಯನ್ನು ಬ್ಲಾಸಮ್ ಶವರ್ ಎಂದು ಕರೆಯುತ್ತಾರೆ. ಸಾಮಾನ್ಯವಾಗಿ ಮಾರ್ಚ್ ತಿಂಗಳ ಕೊನೆಯ ವಾರದಿಂದ ಏಪ್ರಿಲ್ ಮೊದಲಾರ್ಧದೊಳಗೆ ೨೫- ೪೦ ಮಿ.ಮೀ. ಮಳೆ ಬಿದ್ದರೆ ಹೂವು ಸಮಾನವಾಗಿ ಅರಳುತ್ತದೆ. ಮಳೆ ತಡವಾದರೆ ಅಥವಾ ಸರಿಯಾಗಿ ಆಗದಿದ್ದರೆ ಹೂ ಬಿಡುವಿಕೆ ಅಸಮತೋಲನವಾಗುತ್ತದೆ. ಇದರಿಂದ ಕಾಯಿ ಕಟ್ಟುವ ಪ್ರಮಾಣ ಕಡಿಮೆಯಾಗುತ್ತದೆ.
ಬ್ಲಾಸಮ್ ಮಳೆಯ ನಂತರ ೧೦ – ೧೫ ದಿನಗಳಲ್ಲಿ ಮತ್ತೊಂದು ಸಮರ್ಪಕ ಮಳೆ ಅಗತ್ಯವಿದೆ. ಇದನ್ನು ಬ್ಯಾಕಿಂಗ್ ಶವರ್ ಎನ್ನುತ್ತಾರೆ. ಇದು ಹೂವು ಕಾಯಿ ಆಗಿ ಪರಿವರ್ತನೆಗೊಳ್ಳಲು ಸಹಾಯ ಮಾಡುತ್ತದೆ. ಮೊದಲ ಮಳೆಯ ಬಳಿಕ ಬಿಸಿಲು ಹೆಚ್ಚಾಗಿ, ಎರಡನೇ ಮಳೆ ಬಾರದಿದ್ದರೆ ಹೂಗಳು ಒಣಗಿ ಬೀಳುವ ಸಾಧ್ಯತೆ ಇರುತ್ತದೆ. ಇದರಿಂದ ಉತ್ಪಾದನೆ ಶೇ.೨೦ ರಿಂದ ೩೦ ರಷ್ಟು ಕುಸಿಯುವ ಸಾಧ್ಯತೆ ಇರುತ್ತದೆ. ನೀರಿನ ಮೂಲ ಇಲ್ಲದ ಸಣ್ಣ ರೈತರಿಗೆ ಇದು ಕಷ್ಟ. ಹೀಗಾಗಿ ಮಳೆ ಮೇಲಿನ ಅವಲಂಬನೆ ಇನ್ನೂ ಮುಂದುವರಿದಿದೆ.
ಮಳೆ ಮುನ್ಸೂಚನೆ…
ಕರಾವಳಿಯ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ, ಸುಬ್ರಹ್ಮಣ್ಯ ಸುತ್ತಮುತ್ತಲಿನ ಭಾಗಗಳಲ್ಲಿ ಸಂಜೆ, ರಾತ್ರಿ ಒಂದೆರಡು ಕಡೆ ತುಂತುರು ಮಳೆಯಾಗುವ ಸಾಧ್ಯತೆ ಇದೆ. ಉಳಿದಂತೆ ರಾಜ್ಯದ ಕರಾವಳಿ ಜಿಲ್ಲೆಗಳಲ್ಲಿ ಬಿಸಿಲು, ಮೋಡ ಹಾಗೂ ಸೆಕೆಯ ವಾತಾವರಣ ಮುಂದುವರಿಯಲಿದೆ. ಮಲೆನಾಡಿನ ಕೊಡಗು ಜಿಲ್ಲೆಯ ಅಲ್ಲಲ್ಲಿ ಸಂಜೆ, ರಾತ್ರಿ ತುಂತುರು ಮಳೆಯ ಮುನ್ಸೂಚನೆ ಇದೆ. ಹಾಸನ, ಚಿಕ್ಕಮಗಳೂರು ಹಾಗೂ ಶಿವಮೊಗ್ಗ ಜಿಲ್ಲೆಗಳಲ್ಲಿ ಬಿಸಿಲು ಹಾಗೂ ಅಲ್ಲಲ್ಲಿ ಮೋಡದ ವಾತಾವರಣದ ಮುನ್ಸೂಚನೆ ಇದೆ. ಈಗಿನಂತೆ ಇದೇ ವಾತಾವರಣವು ಫೆ.೨೭ರ ತನಕವೂ ಮುಂದುವರಿಯುವ ಲಕ್ಷಣಗಳಿವೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
” ಕೊಡಗು ಜಿಲ್ಲೆಯ ಅಲ್ಲಲ್ಲಿ ಸಂಜೆ, ರಾತ್ರಿ ತುಂತುರು ಮಳೆಯ ಮುನ್ಸೂಚನೆ ಇದೆ. ಇದೇ ವಾತಾವರಣವು ಫೆ.೨೭ರ ತನಕವೂ ಮುಂದುವರಿಯುವ ಲಕ್ಷಣಗಳಿವೆ. ದಕ್ಷಿಣ ಒಳನಾಡಿನ ಮೈಸೂರಿನ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸಂಜೆ, ರಾತ್ರಿ ತುಂತುರು ಮಳೆಯ ಸಾಧ್ಯತೆ ಇದೆ. ಉಳಿದ ಜಿಲ್ಲೆಗಳಲ್ಲಿ ಬಿಸಿಲು ಹಾಗೂ ಅಲ್ಲಲ್ಲಿ ಮೋಡದ ವಾತಾವರಣದ ಮುನ್ಸೂಚನೆ ಇದೆ. ಬಂಗಾಳಕೊಲ್ಲಿಯ ವಾಯುಭಾರ ಕುಸಿತವು ಪೂರ್ವಕ್ಕೆ ಚಲಿಸಿ ಇನ್ನೆರಡು ದಿನಗಳಲ್ಲಿ ಶಿಥಿಲಗೊಳ್ಳುವ ಲಕ್ಷಣಗಳಿವೆ. ಇದರೊಂದಿಗೆ ರಾಜ್ಯದಲ್ಲಿ ಮಳೆಯ ಸಾಧ್ಯತೆ ಕಡಿಮೆಯಾಗಿ ಕ್ರಮೇಣ ವಾತಾವರಣದ ಉಷ್ಣತೆ ಹೆಚ್ಚಾಗಬಹುದು.”
-ಡಾ.ಸುಮಂತ್ ಕುಮಾರ್, ತಾಂತ್ರಿಕ ಅಧಿಕಾರಿ, ಕೃಷಿ ಹವಾಮಾನ ಘಟಕ, ನಾಗನಹಳ್ಳಿ, ಮೈಸೂರು
” ಕಳೆದ ತಿಂಗಳು ಸುರಿದ ಮಳೆಯಿಂದ ಕೆಲವೆಡೆ ಕಾಫಿ ಗಿಡಗಳು ಹೂಬಿಟ್ಟಿವೆ. ಈಗಾಗಲೇ ಬ್ಯಾಕಿಂಗ್ ನೀಡಲಾಗುತ್ತಿದೆ. ಆದರೆ ಬಹುತೇಕ ಕಡೆ ಬ್ಲಾಸಂ ಶವರ್ ಆಗಬೇಕಾಗಿದೆ. ಇದಕ್ಕಾಗಿ ಬೆಳೆಗಾರರು ಸ್ಪ್ರಿಂಕ್ಲರ್ ಮೊರೆ ಹೋಗಿದ್ದು, ಇದು ಬಹು ವೆಚ್ಚದ ಕೆಲಸವಾಗಿರುವುದರಿಂದ ಈಗ ಮಳೆ ಬಂದರೆ ಭಾರೀ ಅನುಕೂಲ.”
-ಮನು ಸೋಮಯ್ಯ, ಬೆಳೆಗಾರ, ಜಿಲ್ಲಾ ರೈತ ಸಂಘದ ಅಧ್ಯಕ್ಷ
ಶಾಲಾ ಶಿಕ್ಷಣ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಭಾಗವಹಿಸಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ, ಹೊಸದಾಗಿ ೮೦೦ ಕರ್ನಾಟಕ ಪಬ್ಲಿಕ್ ಶಾಲೆಗಳನ್ನು ತೆರೆಯಲು…
ರಾಜ್ಯಾದ್ಯಂತ ಸರ್ಕಾರಿ ಶಾಲೆಗಳು ಮೇ ೨೯ರಂದು ಪ್ರಾರಂಭವಾಗುತ್ತಿವೆ. ಸರ್ಕಾರಿ ಶಾಲೆಗಳಲ್ಲಿ ರಾಜ್ಯ ಸರ್ಕಾರ ಪ್ರತೀ ವರ್ಷ ಮಕ್ಕಳಿಗೆ ಉಚಿತ ಪಠ್ಯಪುಸ್ತಕ,…
ಕೆಲ ದಿನಗಳ ಹಿಂದಷ್ಟೇ ತಮಿಳುನಾಡಿನ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಚಿತ್ರನಟ ಜೋಸೆಫ್ ವಿಜಯ್ ಅವರು, ಸಾರ್ವಜನಿಕರಿಗೆ ತೊಂದರೆಯಾಗದಂತೆ ಒಂದೇ ರಸ್ತೆಯಲ್ಲಿ…
ನವೀನ್ ಡಿಸೋಜ ವಿಪತ್ತು ರಕ್ಷಣಾ ಕಾರ್ಯಾಚರಣೆಯ ಅಣಕು ಪ್ರದರ್ಶನ; ಸಂತ್ರಸ್ತರನ್ನು ರಕ್ಷಿಸುವ ವಿಧಾನ, ದೋಣಿ ಮೋಟಾರ್ಗಳನ್ನು ಚಾಲನೆ ಮಾಡುವ ಬಗ್ಗೆ…
ಬಾಪೂಜಿ ಮತ್ತು ವಾಜಪೇಯಿ ದಾರಿ ಬೇರೆಯಾಗಿದ್ದರೂ ನೈತಿಕತೆಗೆ ಮಾದರಿಯಾಗಿದ್ದರು ರಾಜೀವ ಹೆಗಡೆ ಗಾಂಧೀಜಿ ಕ್ವಿಟ್ ಇಂಡಿಯಾ ಚಳವಳಿ ಆರಂಭಿ ಸಿದಾಗ…
ಸುಧಾರಣೆ ನೆಪದಲ್ಲಿ ಎಚ್ಚರ ತಪ್ಪಿದೆ. ಪ್ರೌಢಶಾಲೆಯಲ್ಲಿ ನನಗೆ ಆಪ್ತ ಸ್ನೇಹಿತರು ಬಹಳ ಕಡಿಮೆಯಿದ್ದರು. ಅಲ್ಲಿ ಬೇರೆ ಬೇರೆ ಕಾಲದಲ್ಲಿ ನನಗೆ…