Andolana originals

ಹೂ ಮಳೆಗಾಗಿ ಕಾದಿರುವ ಕಾಫಿ ಬೆಳೆಗಾರರು

ನವೀನ್ ಡಿಸೋಜ

ಕೆಲವೆಡೆ ಸ್ಪಿಂಕ್ಲರ್ ಮೊರೆ ಹೋದ ಕೃಷಿಕರು; ಮಳೆಯ ಮುನ್ಸೂಚನೆ ನೀಡಿದ ಹವಾಮಾನ ಇಲಾಖೆ 

ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಕಾಫಿಕೊಯ್ಲು ಬಹುತೇಕ ಮುಕ್ತಾಯಗೊಂಡಿದ್ದು, ಬೆಳೆಗಾರರೀಗ ಹೂ ಮಳೆಗಾಗಿ ಆಕಾಶ ನೋಡುತ್ತಿದ್ದಾರೆ. ಕೆಲವೆಡೆ ಮಳೆಯಾಗಿರುವುದರಿಂದ ಬೆಳೆಗಾರರು ಸಂತಸಗೊಂಡಿದ್ದರೆ, ಮಳೆಯಾಗದ ಪ್ರದೇಶಗಳಲ್ಲಿ ಸ್ಪ್ರಿಂಕ್ಲರ್ ಮೂಲಕ ನೀರು ಒದಗಿಸುವ ಕೆಲಸ ಮಾಡಲಾಗುತ್ತಿದೆ.

ಜಿಲ್ಲೆಯಲ್ಲಿ ಕಾಫಿ ಕೊಯ್ಲು ಬಹುತೇಕ ಪೂರ್ಣಗೊಂಡಿದೆ. ಈ ಸಂದರ್ಭದಲ್ಲಿ ಹೂ ಮಳೆಯಾದರೆ ಮುಂದಿನ ವರ್ಷದ ಫಸಲಿಗೆ ಅನುಕೂಲವಾಗುತ್ತದೆ. ಇಲ್ಲವಾದರೆ ಸ್ಪ್ರಿಂಕ್ಲರ್ಗಳ ಮೂಲಕ ನೀರು ಒದಗಿಸುವುದು ಅನಿವಾರ್ಯವಾಗಲಿದೆ. ದಕ್ಷಿಣ ಕೊಡಗಿನ ಕೆಲ ಭಾಗಗಳಲ್ಲಿ ಜನವರಿ ತಿಂಗಳಲ್ಲಿ ಸುರಿದ ಮಳೆಯಿಂದಾಗಿ ಕಾಫಿ ಗಿಡಗಳಲ್ಲಿ ಮೊಗ್ಗು ಕಾಣಿಸಿಕೊಂಡಿದ್ದು, ಈಗಾಗಲೇ ಬ್ಯಾಕಿಂಗ್‌ಗಾಗಿ ಬೆಳೆಗಾರರು ಸ್ಪ್ರಿಂಕ್ಲರ್ ಮೊರೆ ಹೋಗಿದ್ದಾರೆ. ಈ ಸಂದರ್ಭದಲ್ಲಿ ಮಳೆ ಬಿದ್ದರೇ ಬೆಳೆಗಾರರಿಗೆ ಭಾರೀ ಅನುಕೂಲವಾಗಲಿದ್ದು, ಎಲ್ಲರೂ ಈಗ ಮಳೆಗಾಗಿ ಆಕಾಶವನ್ನು ನೋಡುತ್ತಿದ್ದಾರೆ.

ಕಾಫಿ ಗಿಡಗಳಲ್ಲಿ ಜನವರಿ-ಫೆಬ್ರವರಿಯಲ್ಲಿ ಮೊಗ್ಗುಗಳು ಬಿಡುತ್ತವೆ. ಆದರೆ ಅವು ಅರಳಿ ಹೂ ಬಿಡಲು ಮಳೆಯ ಅವಶ್ಯವಿದೆ. ಈಮಳೆಯನ್ನು ಬ್ಲಾಸಮ್ ಶವರ್ ಎಂದು ಕರೆಯುತ್ತಾರೆ. ಸಾಮಾನ್ಯವಾಗಿ ಮಾರ್ಚ್ ತಿಂಗಳ ಕೊನೆಯ ವಾರದಿಂದ ಏಪ್ರಿಲ್ ಮೊದಲಾರ್ಧದೊಳಗೆ ೨೫- ೪೦ ಮಿ.ಮೀ. ಮಳೆ ಬಿದ್ದರೆ ಹೂವು ಸಮಾನವಾಗಿ ಅರಳುತ್ತದೆ. ಮಳೆ ತಡವಾದರೆ ಅಥವಾ ಸರಿಯಾಗಿ ಆಗದಿದ್ದರೆ ಹೂ ಬಿಡುವಿಕೆ ಅಸಮತೋಲನವಾಗುತ್ತದೆ. ಇದರಿಂದ ಕಾಯಿ ಕಟ್ಟುವ ಪ್ರಮಾಣ ಕಡಿಮೆಯಾಗುತ್ತದೆ.

ಬ್ಲಾಸಮ್ ಮಳೆಯ ನಂತರ ೧೦ – ೧೫ ದಿನಗಳಲ್ಲಿ ಮತ್ತೊಂದು ಸಮರ್ಪಕ ಮಳೆ ಅಗತ್ಯವಿದೆ. ಇದನ್ನು ಬ್ಯಾಕಿಂಗ್ ಶವರ್ ಎನ್ನುತ್ತಾರೆ. ಇದು ಹೂವು ಕಾಯಿ ಆಗಿ ಪರಿವರ್ತನೆಗೊಳ್ಳಲು ಸಹಾಯ ಮಾಡುತ್ತದೆ. ಮೊದಲ ಮಳೆಯ ಬಳಿಕ ಬಿಸಿಲು ಹೆಚ್ಚಾಗಿ, ಎರಡನೇ ಮಳೆ ಬಾರದಿದ್ದರೆ ಹೂಗಳು ಒಣಗಿ ಬೀಳುವ ಸಾಧ್ಯತೆ ಇರುತ್ತದೆ. ಇದರಿಂದ ಉತ್ಪಾದನೆ ಶೇ.೨೦ ರಿಂದ ೩೦ ರಷ್ಟು ಕುಸಿಯುವ ಸಾಧ್ಯತೆ ಇರುತ್ತದೆ. ನೀರಿನ ಮೂಲ ಇಲ್ಲದ ಸಣ್ಣ ರೈತರಿಗೆ ಇದು ಕಷ್ಟ. ಹೀಗಾಗಿ ಮಳೆ ಮೇಲಿನ ಅವಲಂಬನೆ ಇನ್ನೂ ಮುಂದುವರಿದಿದೆ.

ಮಳೆ ಮುನ್ಸೂಚನೆ…

ಕರಾವಳಿಯ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ, ಸುಬ್ರಹ್ಮಣ್ಯ ಸುತ್ತಮುತ್ತಲಿನ ಭಾಗಗಳಲ್ಲಿ ಸಂಜೆ, ರಾತ್ರಿ ಒಂದೆರಡು ಕಡೆ ತುಂತುರು ಮಳೆಯಾಗುವ ಸಾಧ್ಯತೆ ಇದೆ. ಉಳಿದಂತೆ ರಾಜ್ಯದ ಕರಾವಳಿ ಜಿಲ್ಲೆಗಳಲ್ಲಿ ಬಿಸಿಲು, ಮೋಡ ಹಾಗೂ ಸೆಕೆಯ ವಾತಾವರಣ ಮುಂದುವರಿಯಲಿದೆ. ಮಲೆನಾಡಿನ ಕೊಡಗು ಜಿಲ್ಲೆಯ ಅಲ್ಲಲ್ಲಿ ಸಂಜೆ, ರಾತ್ರಿ ತುಂತುರು ಮಳೆಯ ಮುನ್ಸೂಚನೆ ಇದೆ. ಹಾಸನ, ಚಿಕ್ಕಮಗಳೂರು ಹಾಗೂ ಶಿವಮೊಗ್ಗ ಜಿಲ್ಲೆಗಳಲ್ಲಿ ಬಿಸಿಲು ಹಾಗೂ ಅಲ್ಲಲ್ಲಿ ಮೋಡದ ವಾತಾವರಣದ ಮುನ್ಸೂಚನೆ ಇದೆ. ಈಗಿನಂತೆ ಇದೇ ವಾತಾವರಣವು ಫೆ.೨೭ರ ತನಕವೂ ಮುಂದುವರಿಯುವ ಲಕ್ಷಣಗಳಿವೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

” ಕೊಡಗು ಜಿಲ್ಲೆಯ ಅಲ್ಲಲ್ಲಿ ಸಂಜೆ, ರಾತ್ರಿ ತುಂತುರು ಮಳೆಯ ಮುನ್ಸೂಚನೆ ಇದೆ. ಇದೇ ವಾತಾವರಣವು ಫೆ.೨೭ರ ತನಕವೂ ಮುಂದುವರಿಯುವ ಲಕ್ಷಣಗಳಿವೆ. ದಕ್ಷಿಣ ಒಳನಾಡಿನ ಮೈಸೂರಿನ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸಂಜೆ, ರಾತ್ರಿ ತುಂತುರು ಮಳೆಯ ಸಾಧ್ಯತೆ ಇದೆ. ಉಳಿದ ಜಿಲ್ಲೆಗಳಲ್ಲಿ ಬಿಸಿಲು ಹಾಗೂ ಅಲ್ಲಲ್ಲಿ ಮೋಡದ ವಾತಾವರಣದ ಮುನ್ಸೂಚನೆ ಇದೆ. ಬಂಗಾಳಕೊಲ್ಲಿಯ ವಾಯುಭಾರ ಕುಸಿತವು ಪೂರ್ವಕ್ಕೆ ಚಲಿಸಿ ಇನ್ನೆರಡು ದಿನಗಳಲ್ಲಿ ಶಿಥಿಲಗೊಳ್ಳುವ ಲಕ್ಷಣಗಳಿವೆ. ಇದರೊಂದಿಗೆ ರಾಜ್ಯದಲ್ಲಿ ಮಳೆಯ ಸಾಧ್ಯತೆ ಕಡಿಮೆಯಾಗಿ ಕ್ರಮೇಣ ವಾತಾವರಣದ ಉಷ್ಣತೆ ಹೆಚ್ಚಾಗಬಹುದು.”

-ಡಾ.ಸುಮಂತ್ ಕುಮಾರ್, ತಾಂತ್ರಿಕ ಅಧಿಕಾರಿ, ಕೃಷಿ ಹವಾಮಾನ ಘಟಕ, ನಾಗನಹಳ್ಳಿ, ಮೈಸೂರು

” ಕಳೆದ ತಿಂಗಳು ಸುರಿದ ಮಳೆಯಿಂದ ಕೆಲವೆಡೆ ಕಾಫಿ ಗಿಡಗಳು ಹೂಬಿಟ್ಟಿವೆ. ಈಗಾಗಲೇ ಬ್ಯಾಕಿಂಗ್ ನೀಡಲಾಗುತ್ತಿದೆ. ಆದರೆ ಬಹುತೇಕ ಕಡೆ ಬ್ಲಾಸಂ ಶವರ್ ಆಗಬೇಕಾಗಿದೆ. ಇದಕ್ಕಾಗಿ ಬೆಳೆಗಾರರು ಸ್ಪ್ರಿಂಕ್ಲರ್ ಮೊರೆ ಹೋಗಿದ್ದು, ಇದು ಬಹು ವೆಚ್ಚದ ಕೆಲಸವಾಗಿರುವುದರಿಂದ ಈಗ ಮಳೆ ಬಂದರೆ ಭಾರೀ ಅನುಕೂಲ.”

-ಮನು ಸೋಮಯ್ಯ, ಬೆಳೆಗಾರ, ಜಿಲ್ಲಾ ರೈತ ಸಂಘದ ಅಧ್ಯಕ್ಷ

 

 

ಆಂದೋಲನ ಡೆಸ್ಕ್

Recent Posts

ಫೆ.26, 27ಕ್ಕೆ ಕಡಬೂರಿನಲ್ಲಿ ಶಿವ, ಗಣೇಶ ದೇವಸ್ಥಾನ ಲೋಕಾರ್ಪಣೆ

ಮಹೇಂದ್ರ ಹಸಗೂಲಿ ಗುಂಡ್ಲುಪೇಟೆ: ತಾಲ್ಲೂಕಿನ ಕಡಬೂರು ಗ್ರಾಮದಲ್ಲಿ ಫೆ.೨೬ ಮತ್ತು ೨೭ರಂದು ನೂತನವಾಗಿ ನಿರ್ಮಾಣವಾಗಿರುವ ಶಿವ ಮತ್ತು ಗಣೇಶ ದೇವಾಲಯದ…

10 mins ago

ಅವ್ಯವಸ್ಥೆಯಿಂದ ಕೂಡಿದ ಚರಂಡಿ ಕಾಮಗಾರಿ: ಆರೋಪ

ಮಂಜು ಕೋಟೆ ಕೋಟೆ: ಅಧಿಕಾರಿಗಳು, ಗುತ್ತಿಗೆದಾರರ ವಿರುದ್ಧ ಸಾರ್ವಜನಿಕರ ಆಕ್ರೋಶ ಎಚ್.ಡಿ.ಕೋಟೆ: ಅಧಿಕಾರಿಗಳ ಬೇಜವಾಬ್ದಾರಿ, ಗುತ್ತಿಗೆದಾರರ ನಿರ್ಲಕ್ಷ್ಯದಿಂದ ಲಕ್ಷಾಂತರ ರೂ.…

14 mins ago

ನಾ.ದಿವಾಕರ ಅವರ ವಾರದ ಅಂಕಣ: ಎಳೆ ಪ್ರತಿಭೆಗೆ ಸಾಕ್ಷಿಯಾದ ರಂಗ ಪ್ರಯೋಗ

ರಂಗಕಲೆಯ ಜೀವಂತಿಕೆಯನ್ನು ಕಾಪಾಡುವ ಹೊಣೆ ವಿಶಾಲ ಸಮಾಜದ ಮೇಲಿದೆ.  ನಾ.ದಿವಾಕರ ವರ್ತಮಾನದ ಸಂದರ್ಭದಲ್ಲಿ ನಮ್ಮ ಸಮಾಜ ಎದುರಿಸುತ್ತಿರುವ ಜಟಿಲ ಸಮಸ್ಯೆಗಳನ್ನು…

19 mins ago

ಶಂಕರಾಚಾರ್ಯರ ಬಂಧನಕ್ಕೆ ವೇದಿಕೆ ಸಿದ್ಧ!

ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ವಿರುದ್ಧ ‘ಧರ್ಮ ಯುದ್ಧ’ ಸಾರಿರುವ ಆದಿಗುರು ಶಂಕರಾಚಾರ್ಯರೇ ಸ್ಥಾಪನೆ ಮಾಡಿದ ಜ್ಯೋತಿರ್ ಪೀಠದ…

24 mins ago

ಮೊಬೈಲ್ ಮಿತ ಬಳಕೆ; ವಿದ್ಯಾರ್ಥಿಗಳ ಬಯಕೆ

ಶಾಲಾ-ಕಾಲೇಜುಗಳಲ್ಲಿ ಮೊಬೈಲ್ ಬಳಕೆ ನಿಷೇಧಕ್ಕೆ ಸರ್ಕಾರ ಚಿಂತನೆ ಹಿನ್ನೆಲೆ ವಿದ್ಯಾರ್ಥಿಗಳ ಮನದ ಮಾತು ಶಾಲಾ-ಕಾಲೇಜುಗಳಲ್ಲಿ ಮೊಬೈಲ್ ಬಳಕೆ ನಿಷೇಧಕ್ಕೆ ಸರ್ಕಾರ…

54 mins ago

ಪರಿಹಾರ ಧನ ಪರಿಹಾರವಲ್ಲ..!

ಗಿರೀಶ್ ಹುಣಸೂರು ನೊಂದ ಕುಂಟುಂಬಗಳಿಗೆ ಲಕ್ಷ ಲಕ್ಷ ರೂ. ಪರಿಹಾರ ತಲುಪಿಸಿರುವ ರಾಜ್ಯ ಸರ್ಕಾರ ಶಾಶ್ವತ ಪರಿಹಾರಕ್ಕಾಗಿ ಎದುರು ನೋಡುತ್ತಿರುವ…

58 mins ago