Andolana originals

ಕೋಳಿ ಮೊಟ್ಟೆಗೆ ಬರ: ಏರಿದ ದರ

ಗಿರೀಶ್ ಹುಣಸೂರು

ಬಿಡಿ ಮೊಟ್ಟೆಗೆ ೭.೫೦ ರೂ.; ರಫ್ತು ಹೆಚ್ಚಳದಿಂದ ಭಾರೀ ಹೊಡೆತ 

ಮೈಸೂರು: ಮಾಗಿ ಚಳಿಗಾಲ ಆರಂಭ, ಚಂಡಮಾರುತದಿಂದ ಹವಾಮಾನ ವೈಪ ರೀತ್ಯದ ಪರಿಣಾಮ ಕೋಳಿ ಫಾರ್ಮ್‌ಗಳಲ್ಲಿ ಮೊಟ್ಟೆ ಉತ್ಪಾದನೆ ಕುಸಿತ ಕಂಡಿದ್ದು, ಜತೆಗೆ ವಿದೇಶಗಳಿಗೆ ಮೊಟ್ಟೆ ರಫ್ತು ಪ್ರಮಾಣ ಹೆಚ್ಚಿರುವುದರಿಂದ ಸ್ಥಳೀಯವಾಗಿ ಬೇಡಿಕೆಯಷ್ಟು ಮೊಟ್ಟೆ ಪೂರೈಕೆಯಾಗದೆ ಮಾರುಕಟ್ಟೆಯಲ್ಲಿ ‘ಮೊಟ್ಟೆ ಬರ’ದಿಂದ ಮೊಟ್ಟೆ ದರ ಏರಿಕೆಯಾಗಿದೆ.

ಕ್ರಿಸ್‌ಮಸ್, ವರ್ಷಾಂತ್ಯ ಮತ್ತು ಹೊಸ ವರ್ಷಾಚರಣೆ ಪಾರ್ಟಿಗಳ ಆಯೋಜನೆ, ಮದುವೆ ಸಮಾರಂಭಗಳ ಹಿನ್ನೆಲೆಯಲ್ಲಿ ದಿನೇ ದಿನೇ ಹಣ್ಣು, ತರಕಾರಿಗಳಿಗೆ ಬೇಡಿಕೆ ಹೆಚ್ಚುತ್ತಿದ್ದು, ಬೇಡಿಕೆಯಷ್ಟು ಪೂರೈಕೆಯಾಗದೆ ಇವುಗಳ ಬೆಲೆ ಗಗನಕ್ಕೇರಿದ್ದರೆ ಈ ಸಾಲಿಗೆ ಈಗ ಕೋಳಿ ಮೊಟ್ಟೆಯೂ ಸೇರ್ಪಡೆಯಾಗಿದೆ.

ಮಾಗಿಯ ಚಳಿಗಾಲದ ಹಿನ್ನೆಲೆಯಲ್ಲಿ ಮೊಟ್ಟೆ, ಮಾಂಸ, ಮೀನು ಮೊದಲಾದ ಶಾಖಾಹಾರಗಳ ಜತೆಗೆ ಮೊಟ್ಟೆಯಿಂದ ತಯಾರಿಸಿದ ಆಹಾರವನ್ನು ಸೇವಿಸುವವರ ಪ್ರಮಾಣ ಹೆಚ್ಚು. ಅದರಲ್ಲೂ ಈಗಷ್ಟೇ ಕಾರ್ತಿಕ ಮಾಸ ಮುಗಿದಿರುವುದರಿಂದ ಈ ಅವಧಿಯಲ್ಲಿ ಮಾಂಸಾಹಾರ ತ್ಯಜಿಸಿದ್ದವರು ಇದೀಗ ಸೇವನೆಗೆ ಮುಂದಾಗಿರುವುದೂ ಮಾರುಕಟ್ಟೆಯಲ್ಲಿ ಬೇಡಿಕೆ ಹೆಚ್ಚಲು ಕಾರಣವಾಗಿದೆ.

ರಫ್ತು ಹೆಚ್ಚಳದಿಂದ ಭಾರೀ ಹೊಡೆತ: ರಾಜಧಾನಿ ಬೆಂಗಳೂರಿಗೆ ತಮಿಳುನಾಡಿನ ನಾಮಕ್ಕಲ್‌ನಿಂದ ನಿತ್ಯ ೫೦ ಲಕ್ಷ ಮೊಟ್ಟೆ ಪೂರೈಕೆಯಾಗುತ್ತಿತ್ತು.

ದೈಹಿಕವಾಗಿ ಸದೃಢರಾಗಲು ಜಿಮ್‌ಗಳಿಗೆ ಹೋಗಿ ಕಸರತ್ತು ಮಾಡುವ ಮಕ್ಕಳು, ಯುವಕರು ಪ್ರೋಟಿನ್‌ಗಾಗಿ ನಿತ್ಯ ೧೦ಕ್ಕೂ ಹೆಚ್ಚು ಮೊಟ್ಟೆ ಸೇವಿಸುತ್ತಾರೆ. ಆದರೆ, ಮಾರುಕಟ್ಟೆಯಲ್ಲಿ ಪ್ರಸ್ತುತ ಮೊಟ್ಟೆಯ ಚಿಲ್ಲರೆ ಮಾರಾಟ ದರ ೭.೫೦ ರೂ. ಇರುವುದರಿಂದ ಅವರು ಕೂಡ ಕೋಳಿ ಫಾರ್ಮ್‌ಗಳಿಗೆ ಹೋಗಿ ಕ್ರೇಟ್ ಲೆಕ್ಕದಲ್ಲಿ ಮೊಟ್ಟೆಗಳನ್ನು ಖರೀದಿಸಿ ತಂದು ಮನೆಗಳಲ್ಲಿ ಇರಿಸಿಕೊಂಡು ಸೇವಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

ಆದರೆ, ಸದ್ಯ ನಾಮಕ್ಕಲ್‌ನಿಂದ ನಿತ್ಯ ಒಂದು ಕೋಟಿ ಮೊಟ್ಟೆ ವಿದೇಶಗಳಿಗೆ ರಫ್ತು ಆಗುತ್ತಿದೆ. ಜತೆಗೆ ಕೋಲಾರ ಜಿಲ್ಲೆಯ ಮಾಲೂರಿನಲ್ಲಿರುವ ಕಾರ್ಖಾನೆಯಲ್ಲಿ ನಿತ್ಯ ೧೧ ಲಕ್ಷ ಹಳದಿ ಮತ್ತು ಬಿಳಿ ಬಣ್ಣದ ಮೊಟ್ಟೆಗಳನ್ನು ಪ್ರತ್ಯೇಕವಾಗಿ ಪುಡಿ ಮಾಡಿ ವಿದೇಶಗಳಿಗೆ ರಫ್ತು  ಮಾಡಲಾಗುತ್ತಿರುವುದರಿಂದ ಬೆಂಗಳೂರಿನ ಸಗಟು ಮಾರುಕಟ್ಟೆಯಲ್ಲಿ ಮೊಟ್ಟೆ ಬರ ಎದುರಾಗಿರುವುದರ ಪರಿಣಾಮ ಚಿಲ್ಲರೆ ಮಾರುಕಟ್ಟೆಯಲ್ಲಿ ದರ ಏರುಗತಿಯಲ್ಲಿದೆ. ಮೈಸೂರು, ಮಂಡ್ಯ, ಚಾಮರಾಜನಗರ, ಹಾಸನ, ಶಿವಮೊಗ್ಗ, ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳನ್ನು ಒಳಗೊಂಡ ಮೈಸೂರು ವಲಯಕ್ಕೆ ನಾಮಕ್ಕಲ್‌ನಿಂದ ನಿತ್ಯ ೫ ಲಕ್ಷ ಮೊಟ್ಟೆ ಪೂರೈಕೆಯಾಗುತ್ತಿತ್ತು. ಸದ್ಯ ಆ ಪ್ರಮಾಣ ಕಡಿಮೆಯಾಗಿರುವುದರಿಂದ ಮಾರುಕಟ್ಟೆಯಲ್ಲಿ ಕೋಳಿ ಮೊಟ್ಟೆ ಕೈಗೆಟುಕದಂತಾಗಿದೆ.

ಮೈಸೂರು ವಲಯದಲ್ಲಿ ಸ್ಥಳೀಯವಾಗಿ ನಿತ್ಯ ೩೦ ಲಕ್ಷ ಮೊಟ್ಟೆಗಳ ಉತ್ಪಾದನೆಯಾಗುತ್ತಿದ್ದು, ಈ ಪೈಕಿ ೨೧ ಲಕ್ಷ ಮೊಟ್ಟೆಗಳನ್ನು ಸ್ಥಳೀಯವಾಗಿ ಮಾರಾಟ ಮಾಡಲಾಗುತ್ತಿದೆ. ಈ ಪೈಕಿ ಬೆಂಗಳೂರಿಗೆ ೭ ಲಕ್ಷ, ಕೇರಳಕ್ಕೆ ೩.೫ ಲಕ್ಷ ಮೊಟ್ಟೆಗಳನ್ನು ಪೂರೈಸಲಾಗುತ್ತಿದೆ ಎನ್ನುತ್ತಾರೆ ಎನ್‌ಇಸಿಸಿ ಮಾರುಕಟ್ಟೆ ಅಭಿವೃದ್ಧಿ ಅಧಿಕಾರಿ.

ಶಾಲಾ ಮುಖ್ಯಶಿಕ್ಷಕರ ಪರದಾಟ: ಶಾಲಾ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟದಲ್ಲಿ ಅಜೀಂ ಪ್ರೇಮ್‌ಜಿ ಪ್ರತಿಷ್ಠಾನದ ನೆರವಿನಲ್ಲಿ ನಿತ್ಯ ಮೊಟ್ಟೆ ಕೊಡಲಾಗುತ್ತಿದೆ. ಸರ್ಕಾರ ಒಂದು ಮೊಟ್ಟೆಗೆ ೬ ರೂ. ಕೊಡುತ್ತದೆ. ಇದರಲ್ಲಿ ಮೊಟ್ಟೆ ಖರೀದಿಗೆ ೫.೫೦ ರೂ., ಬೇಯಿಸಿದ ಮೊಟ್ಟೆ ಸುಲಿಯಲು ಪ್ರತಿ ಮೊಟ್ಟೆಗೆ ೩೦ ಪೈಸೆ, ಮೊಟ್ಟೆ ಬೇಯಿಸಲು ಅಡುಗೆ ಅನಿಲ ವೆಚ್ಚವಾಗಿ ಪ್ರತಿ ಮೊಟ್ಟೆಗೆ ೨೦ ಪೈಸೆ ನಿಗದಿಪಡಿಸಿದೆ. ಆದರೆ, ಸದ್ಯ ಮೊಟ್ಟೆಯ ಸಗಟು ಮಾರಾಟ ದರವೇ ೬.೭೫ ರೂ. ಇರುವುದರಿಂದ ಶಾಲೆಗಳ ಮುಖ್ಯಸ್ಥರು ಅನಿವಾರ್ಯವಾಗಿ ಕೋಳಿ -ರ್ಮ್‌ಗಳಿಗೆ ಎಡತಾಕುತ್ತಿದ್ದು, ಅಲ್ಲಿ ಆಯ್ದು ಪ್ರತ್ಯೇಕವಾಗಿರಿಸಿರುವ ಅತ್ಯಂತ ಸಣ್ಣಗಾತ್ರದ ಮೊಟ್ಟೆಗಳನ್ನು ಖರೀದಿಸಿ ತರುವಂತಾಗಿದೆ. ಕಾಲಕಾಲಕ್ಕೆ ಸರ್ಕಾರ ಮೊಟ್ಟೆ ಖರೀದಿ ದರವನ್ನು ಹೆಚ್ಚಳ ಮಾಡಬೇಕು ಎನ್ನುತ್ತಾರೆ ಶಾಲಾ ಮುಖ್ಯ ಶಿಕ್ಷಕರು.  ಒಟ್ಟಾರೆ ಮುಂದಿನ ಒಂದೂವರೆ ತಿಂಗಳ ಕಾಲ ಕೋಳಿ ಮೊಟ್ಟೆ ದರ ಕಡಿಮೆಯಾಗುವ ಸಾಧ್ಯತೆ ಇಲ್ಲ. ಮೊಟ್ಟೆ ದರ ಏರಿಕೆಯ ಭಾರ ಕ್ರಿಸ್ ಮಸ್ ಕೇಕ್ ತಿನ್ನುವವರ ಜೇಬಿಗೂ ಹೊರೆಯಾಗುವ ಸಾಧ್ಯತೆ ಇದೆ.

” ಅಪರೂಪಕ್ಕೆ ಮೊಟ್ಟೆ ದರ ಈ ಮಟ್ಟಕ್ಕೆ ಏರಿಕೆಯಾಗಿದೆ. ನಾಲ್ಕೈದು ತಿಂಗಳಲ್ಲಿ ಈ ದರ ಇರಲಿಲ್ಲ. ವಿದೇಶಗಳಿಗೆ ಮೊಟ್ಟೆ ರಫ್ತು ಪ್ರಮಾಣ ಹೆಚ್ಚಳದಿಂದ ಸ್ಥಳೀಯ ಮಾರುಕಟ್ಟೆಗೆ ಬೇಡಿಕೆಯಷ್ಟು ಪೂರೈಕೆಯಾಗದಿರುವುದು ದರ ಹೆಚ್ಚಳಕ್ಕೆ ಕಾರಣ, ಜ.೧೪ರ ನಂತರ ದರ ಇಳಿಕೆಯಾಗುವ ನಿರೀಕ್ಷೆ ಇದೆ.”

-ಶೇಷನಾರಾಯಣ, ಮಾರುಕಟ್ಟೆ ಅಭಿವೃದ್ಧಿ ಅಧಿಕಾರಿ, ಎನ್‌ಇಸಿಸಿ

ಆಂದೋಲನ ಡೆಸ್ಕ್

Recent Posts

ಮಂಡ್ಯದಲ್ಲಿ ಭೀಕರ ಅಪಘಾತ: ಮೂವರು ಸ್ಥಳದಲ್ಲೇ ಸಾವು

ಮಂಡ್ಯ: ಡಿವೈಡರ್‌ಗೆ ಡಿಕ್ಕಿ ಹೊಡೆದ ಕಾರು ಪಲ್ಟಿಯಾಗಿ ಬಿದ್ದ ಪರಿಣಾಮ ಸ್ಥಳದಲ್ಲೇ ಮೂವರು ಸಾವನ್ನಪ್ಪಿರುವ ಧಾರುಣ ಘಟನೆ ಮಂಡ್ಯದಲ್ಲಿ ನಡೆದಿದೆ.…

2 hours ago

ರಾಜ್ಯದಲ್ಲಿ ಮೂರು ದಿನ ದಟ್ಟ ಮಂಜು ಕವಿದ ವಾತಾವರಣ: ತೀವ್ರ ಚಳಿ ಮುನ್ಸೂಚನೆ

ಬೆಂಗಳೂರು: ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಮುಂದಿನ ಮೂರು ದಿನಗಳ ಕಾಲ ಬೆಳಗಿನ ಜಾವ ದಟ್ಟವಾದ ಮಂಜು ಕವಿದ ವಾತಾವರಣ ಇರಲಿದೆ.…

2 hours ago

ಯೂರಿಯಾ ಗೊಬ್ಬರ ತಿಂದು 11 ಮೇಕೆಗಳು ಸಾವು

ಕೊಳ್ಳೇಗಾಲ: ಮೇಯಲು ಬಿಟ್ಟಿದ್ದ ಮೇಕೆಗಳು ಯೂರಿಯಾ ಗೊಬ್ಬರ ತಿಂದು ಸಾವನ್ನಪ್ಪಿರುವ ಘಟನೆ ಚಾಮರಾಜನಗರ ಜಿಲ್ಲೆ ಕೊಳ್ಳೇಗಾಲ ತಾಲ್ಲೂಕಿನ ಜಾಗೇರಿ ಹಳೆ…

2 hours ago

ಚಾಮರಾಜನಗರ| ಹುಚ್ಚುನಾಯಿ ದಾಳಿಯಿಂದ 7 ಮಂದಿಗೆ ಗಾಯ

ಚಾಮರಾಜನಗರ: ಪಾದಾಚಾರಿಗಳ ಮೇಲೆ ಏಕಾಏಕಿ ಹುಚ್ಚುನಾಯಿ ದಾಳಿ ನಡೆಸಿದ ಪರಿಣಾಮ 7 ಮಂದಿ ಗಾಯಗೊಂಡಿರುವ ಘಟನೆ ಯಳಂದೂರು ಪಟ್ಟಣದಲ್ಲಿ ನಡೆದಿದೆ.…

3 hours ago

ದುಬಾರಿ ಗಿಫ್ಟ್‌ ತೆಗೆದುಕೊಳ್ಳುವುದು ತಪ್ಪಾಗುತ್ತದೆ: ಸಂಸದ ಯದುವೀರ್‌ ಒಡೆಯರ್‌

ಮಡಿಕೇರಿ: ಡಿಸಿಎಂ ಡಿ.ಕೆ.ಶಿವಕುಮಾರ್‌ ಅವರು ತಮ್ಮ ವಸ್ತುಗಳು ಏನೇ ಇದ್ದರೂ ಅಫಿಡವಿಟ್‌ನಲ್ಲಿ ತೋರಿಸಿದ್ದರೆ ಯಾವುದೇ ಸಮಸ್ಯೆ ಆಗಲ್ಲ. ಈ ಹಿಂದೆ…

3 hours ago

ಕಿಚ್ಚ ಸುದೀಪ್‌ ಮಾರ್ಕ್‌ ಟ್ರೈಲರ್‌ ಅದ್ಧೂರಿ ಬಿಡುಗಡೆ

ಬೆಂಗಳೂರು: ನಟ ಕಿಚ್ಚ ಸುದೀಪ್‌ ಅಭಿನಯದ ಮಾರ್ಕ್‌ ಸಿನಿಮಾ ಟ್ರೈಲರ್‌ ಅದ್ಧೂರಿಯಾಗಿ ಬಿಡುಗಡೆ ಮಾಡಲಾಗಿದೆ. ವಿಜಯ್‌ ಕಾರ್ತಿಕೇಯ-ಸುದೀಪ್‌ ಕಾಂಬಿನೇಷನ್‌ನಲ್ಲಿ ಮೂಡಿಬಂದಿರುವ…

4 hours ago