ರಾಜೇಶ್ ಬೆಂಡರವಾಡಿ
ಸಿ.ಪುಟ್ಟರಂಗಶೆಟ್ಟಿ, ಎ.ಆರ್.ಕೃಷ್ಣಮೂರ್ತಿ ಪ್ರಬಲ ಆಕಾಂಕ್ಷಿಗಳು
ಚಾಮರಾಜನಗರ: ರಾಜ್ಯದಲ್ಲಿ ಸಚಿವ ಸಂಪುಟ ಪುನರ್ ರಚನೆ ನವೆಂಬರ್ -ಡಿಸೆಂಬರ್ನಲ್ಲಾದರೂ ಅಥವಾ ಮುಂದೆ ಯಾವಾಗ ಆದರೂ ಚಾಮರಾಜನಗರ ಶಾಸಕ ಸಿ.ಪುಟ್ಟರಂಗಶೆಟ್ಟಿ ಹಾಗೂ ಕೊಳ್ಳೇಗಾಲ ಶಾಸಕ ಎ.ಆರ್. ಕೃಷ್ಣಮೂರ್ತಿ ಅವರು ಸಚಿವ ಸ್ಥಾನಗಿಟ್ಟಿಸಲು ಪ್ರಬಲ ಪೈಪೋಟಿಗೆ ಇಳಿಯುವುದರಲ್ಲಿ ಸಂದೇಹವೇ ಇಲ್ಲ.
ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದು ನವೆಂಬರ್ಗೆ ಎರಡೂವರೆ ವರ್ಷಗಳಾಗಲಿದ್ದು, ಸಂಪುಟ ಪುನರ್ ರಚನೆ ವೇಳೆ ಹೊಸಬರಿಗೆ ಅವಕಾಶ ದೊರೆಯುವ ಲಕ್ಷಣ ಕಾಣುತ್ತಿದೆ. ಹಾಗೆ ನೋಡಿದರೆ, ಜಿಲ್ಲೆಯ ಮಟ್ಟಿಗೆ ಈ ಇಬ್ಬರೂ ಹಿರಿಯರೇ. ಮುಖ್ಯಮಂತ್ರಿ ಅವರಿಗೂ ಆಪ್ತರೇ. ಸಿ.ಪುಟ್ಟರಂಗಶೆಟ್ಟಿ ಅವರು ೨೦೦೮ರಿಂದಲೂ ಸತತವಾಗಿ ೪ ಬಾರಿಯಿಂದ ಶಾಸಕರು. ಸೋಲಿಲ್ಲದ ಸರದಾರ. ಕಾಂಗ್ರೆಸ್-ಜಾ.ದಳ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಹಿಂದುಳಿದ ವರ್ಗಗಳ ಖಾತೆ ಸಚಿವರಾಗಿದ್ದರು. ಈಗಿನ ಸರ್ಕಾರದಲ್ಲಿ ಎಂಎಸ್ಐಎಲ್ ಅಧ್ಯಕ್ಷರಾಗಿದ್ದಾರೆ.
ಎ.ಆರ್.ಕೃಷ್ಣಮೂರ್ತಿ ಅವರ ವಿಚಾರಕ್ಕೆ ಬಂದರೆ ಅವರು ಮೂರು ಬಾರಿ ಶಾಸಕರು. ವಿಸರ್ಜಿತ ಸಂತೇಮರಹಳ್ಳಿ ಕ್ಷೇತ್ರದಿಂದ ೧೯೯೪, ೧೯೯೯ರಲ್ಲಿ ಮತ್ತು ಕೊಳ್ಳೇಗಾಲದಿಂದ ೨೦೨೩ರಲ್ಲಿ ಶಾಸಕರಾದವರು. ಶಾಸನಸಭೆ ಪ್ರವೇಶಿಸಿಯೇ ಅವರು ೨ ದಶಕಗಳ ಮೇಲಾಯಿತು. ರಾಜ್ಯದಲ್ಲಿ ಆಡಳಿತ ಪಕ್ಷದ ಶಾಸಕರಿಗೆ ನಿಗಮ, ಮಂಡಳಿಯಲ್ಲಿ ಸ್ಥಾನಮಾನ ನೀಡುವ ವಿಚಾರ ಮುನ್ನೆಲೆಯಲ್ಲಿ ಬಂದಾಗ ಅದಕ್ಕೆ ನಾನು ಆಕಾಂಕ್ಷಿ ಅಲ್ಲ ಎಂದು ಮಾಧ್ಯಮದ ಮುಂದೆ ಬಹಿರಂಗವಾಗಿ ಹೇಳಿ ಅದರಿಂದ ದೂರ ಉಳಿದವರು ಕೃಷ್ಣಮೂರ್ತಿ.
ಎಆರ್ಕೆ ಮತ್ತು ಸಿ.ಪುಟ್ಟರಂಗಶೆಟ್ಟಿ ಅವರು ಕ್ರಮವಾಗಿ ದಲಿತ ಹಾಗೂ ಉಪ್ಪಾರ ಸಮಾಜಕ್ಕೆ ಸೇರಿದವರು.ಎರಡೂ ಸಮುದಾಯಗಳೂ ಕಾಂಗ್ರೆಸ್ ಪಕ್ಷದ ಪ್ರಮುಖ ವೋಟ್ ಬ್ಯಾಂಕ್ಗಳು ಎಂದರೆ ತಪ್ಪಾಗಲಾರದು. ಕೃಷ್ಣಮೂರ್ತಿ ಅವರ ತಂದೆಯವರಾದ ಮಾಜಿ ರಾಜ್ಯಪಾಲ ಬಿ.ರಾಚಯ್ಯ ನನ್ನ ರಾಜಕೀಯ ಗುರುಗಳು ಎಂದು ಹಲವು ಬಾರಿ ಸಿಎಂ ಸಿದ್ದರಾಮಯ್ಯ ಅವರು ಹೇಳಿಕೊಂಡಿದ್ದಾರೆ. ಹೀಗಾಗಿ ರಾಜಕೀಯವನ್ನು ಮೀರಿದ ಆತ್ಮೀಯತೆ ರಾಚಯ್ಯ ಅವರ ಕುಟುಂಬದವರ ಜೊತೆ ಸಿಎಂಗೆ ಇದೆ ಎಂಬುದು ನಿರ್ವಿವಾದ.
೨೦೨೩ರಲ್ಲಿ ಸರ್ಕಾರ ಹೊಸದಾಗಿ ರಚನೆ ಆದ ಸಂದರ್ಭದಲ್ಲಿ ಪುಟ್ಟರಂಗಶೆಟ್ಟಿ ಅವರನ್ನು ವಿಧಾನಸಭೆ ಉಪ ಸಭಾಪತಿ ಮಾಡಿ ಆದೇಶ ಹೊರಡಿಸಲಾಗಿತ್ತು. ಪುಟ್ಟರಂಗ ಶೆಟ್ಟಿ ಅವರು ಆ ಸ್ಥಾನದಿಂದ ನಯವಾಗಿಯೇ ಹಿಂದೆ ಸರಿದಿದ್ದು ಗೊತ್ತಿರುವ ವಿಚಾರ. ಬದಲಾದ ಸನ್ನಿವೇಶದಲ್ಲಿ ಅವರನ್ನು ಎಂಎಸ್ಐಎಲ್ಅ ಧ್ಯಕ್ಷರನ್ನಾಗಿ ಮಾಡಲಾಯಿತು.
೨೦೧೩-೧೮ರ ಅವಧಿಯಲ್ಲಿ ಪ್ರಥಮ ಬಾರಿಗೆ ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದಾಗಲೂ ಮುಖ್ಯಮಂತ್ರಿಗಳ ಸಂಸದೀಯ ಕಾರ್ಯದರ್ಶಿ ಮತ್ತು ರಾಜ್ಯ ರಸ್ತೆ ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿ ಪುಟ್ಟರಂಗಶೆಟ್ಟಿ ಕಾರ್ಯ ನಿರ್ವಹಿಸಿದ್ದರು. ಹೀಗೆ ಸಿದ್ದರಾಮಯ್ಯ ಅವರು ಅಧಿಕಾರದಲ್ಲಿ ಇದ್ದಾಗೆಲ್ಲಾ ಪುಟ್ಟರಂಗಶೆಟ್ಟಿ ಅವರಿಗೆ ಸ್ಥಾನಮಾನ ದೊರೆಯುತ್ತಲೇ ಬಂದಿದೆ ಎಂಬುದು ಅಷ್ಟೇ ವಾಸ್ತವ. ನಿರೀಕ್ಷಿಸಿದ ರೀತಿಯಲ್ಲಿ ಸಚಿವ ಸಂಪುಟ ಪುನರ್ ರಚನೆಯಾಗಿ ಸಚಿವ ಸ್ಥಾನ ನೀಡುವ ವಿಚಾರ ಮುನ್ನೆಲೆಗೆ ಬಂದಾಗ ಇಬ್ಬರೂ ಆಪ್ತರಲ್ಲಿ ಯಾರನ್ನು ಮಾಡಬಹುದು? ಎಂಬುದು ಯಕ್ಷಪ್ರಶ್ನೆಯಾಗಿದೆ.
ಚಾ.ನಗರಕ್ಕೆ ಪ್ರಾತಿನಿಧ್ಯ ಏಕೆ?:
ಮೊದಲ ಎರಡೂವರೆ ವರ್ಷಗಳ ಅವಧಿಯಲ್ಲಿ ಸಚಿವ ಸಂಪುಟದಲ್ಲಿ ಪ್ರಾತಿನಿಧ್ಯವೇ ಇಲ್ಲದ ಚಾಮರಾಜನಗರದಂತಹ ಜಿಲ್ಲೆಗಳಿಗೆ ಸದ್ಯದಲ್ಲೇ ಎದುರಾಗಲಿರುವ ನಗರ ಹಾಗೂ ಗ್ರಾಮೀಣ ಸ್ಥಳೀಯ ಸಂಸ್ಥೆಗಳ ಚುನಾವಣೆಯ ಕಾರಣಕ್ಕೆ ಆದ್ಯತೆ ನೀಡುವ ಎಲ್ಲ ಸಾಧ್ಯತೆಗಳೂ ಇವೆ. ಈ ಹಿನ್ನೆಲೆಯಲ್ಲಿ ಆಡಳಿತಾರೂಢ ಕಾಂಗ್ರೆಸ್ ಪಕ್ಷದ ಈ ಇಬ್ಬರು ಜಿಲ್ಲೆಯ ಶಾಸಕರು ಅವಕಾಶ ಸಿಕ್ಕಾಗಲೆಲ್ಲಾ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮುಂದೆ ಮತ್ತು ಅವರ ಆಪ್ತ ಸಚಿವರ ಬಳಿ ಭಿನ್ನವತ್ತಳೆ ಸಲ್ಲಿಸಿದ್ದಾರೆ ಎಂಬುದು ಬಲ್ಲ ಮೂಲಗಳಿಂದ ತಿಳಿದು ಬಂದಿದೆ.
ಆಕಾಂಕ್ಷಿ ಎಂದಿದ್ದಾರೆ, ಬೆಂಬಲಿಗರು ಸಹ ಧ್ವನಿಯಾಗಿದ್ದಾರೆ…:
ಸಚಿವ ಸಂಪುಟ ಪುನರ್ ರಚನೆ ಮತ್ತು ವಿಸ್ತರಣೆ ವಿಚಾರ ಬಂದಾಗಲೆಲ್ಲಾ ಎ.ಆರ್.ಕೃಷ್ಣಮೂರ್ತಿ ಮತ್ತು ಪುಟ್ಟರಂಗಶೆಟ್ಟಿ ಅವರ ಬೆಂಬಲಿಗರು ‘ತಮ್ಮ ನಾಯಕರನ್ನು’ ಮಂತ್ರಿ ಮಾಡುವಂತೆ ಒತ್ತಾಯ ಮಾಡುತ್ತಲೇ ಬಂದಿದ್ದಾರೆ. ಉಭಯ ಶಾಸಕರೂ ಕೂಡ ಸಚಿವ ಸ್ಥಾನಕ್ಕೆ ತಾವು ಪ್ರಬಲ ಆಕಾಂಕ್ಷಿಗಳು ಎಂಬುದನ್ನು ಸಂದರ್ಭ ಸಿಕ್ಕಾಗಲೆಲ್ಲಾ ಹೊರಹಾಕುತ್ತಲೇ ಬಂದಿದ್ದಾರೆ.
ಮೈಸೂರಿನ ವಿಜಯನಗರ ಎರಡನೇ ಹಂತದ ದಿವ್ಯರೂಪ ಕಲ್ಯಾಣ ಮಂಟಪದ ಸಮೀಪ ಮೂರು ವಾರಗಳಿಂದ ದಿನದಲ್ಲಿ ಆರು ಗಂಟೆಗಳ ಕಾಲ ಪ್ರತಿ…
ಡಿಸೆಂಬರ್ನಲ್ಲಿ ವಜ್ರಮಹೋತ್ಸವ ; ಸಂಭ್ರಮಕ್ಕೆ ಸಿದ್ಧತೆ ಚಿರಂಜೀವಿ ಸಿ.ಹುಲ್ಲಹಳ್ಳಿ ಕರ್ನಾಟಕದ ನೆಲ, ಜಲ, ಭಾಷೆಯ ಏಳಿಗೆಗಾಗಿ ಕಾವ್ಯ, ಸಾಹಿತ್ಯ ಮತ್ತು…
ಡಾ. ಎಂ. ಡಿ. ಉಮೇಶ, ಉಪನ್ಯಾಸಕರು, ಗಾಂಧಿ ಅಧ್ಯಯನ ಕೇಂದ್ರ ಮೈಸೂರು ವಿಶ್ವವಿದ್ಯಾನಿಲಯ, ಮೈಸೂರು ಬಳ್ಳಾರಿ ಸಿದ್ದಮ್ಮನವರು ೧೯೦೩ರಲ್ಲಿ ಬಸೆಟಪ್ಪ…
ನಾನು ನನ್ನನ್ನು ಆಳವಾಗಿ ಪರಿಶೋಧಿಸಿಕೊಂಡಂತೆಲ್ಲ ನನ್ನ ಆಂತರಿಕ ಮತ್ತು ಬಾಹ್ಯ ವಿಷಯಗಳಲ್ಲಿ ಬದಲಾವಣೆ ಮಾಡಿಕೊಳ್ಳುವ ಅವಶ್ಯಕತೆ ನನಗೆ ತೋರಿತು. ನನ್ನ…
ಇಂದಿನ ಧಾವಂತದ ಬದುಕಿನಲ್ಲಿ ನಾವೆಲ್ಲರೂ ಆಸೆಗಳ ಬೆನ್ನೇರಿ ಓಡುತ್ತಿದ್ದು, ನಮ್ಮ ಉಸಿರಿಗೆ ಆಧಾರವಾಗಿರುವ ಪ್ರಕೃತಿಯನ್ನು ಮರೆಯುತ್ತಿದ್ದೇವೆ. ಗಾಳಿ, ನೀರು, ಬೆಳಕಿಲ್ಲದೆ…
ಆರ್ಬಿಐ ಮುಂದಿನ ಹಣಕಾಸು ವರ್ಷದಿಂದ (೨೦೨೭-೨೮) ಪ್ಲಾಸ್ಟಿಕ್ (ಪಾಲಿಮರ್) ನೋಟುಗಳನ್ನು ಚಲಾವಣೆಗೆ ತರಲು ನಿರ್ಧರಿಸಿರುವುದು ಸ್ವಾಗತಾರ್ಹ ಮತ್ತು ದೂರದೃಷ್ಟಿಯ ಹೆಜ್ಜೆಯಾಗಿದೆ.…