Andolana originals

ಚಾ.ನಗರ: ಮಳೆಗಾಲ ಹಾನಿ ತಡೆಗೆ ಜಿಲ್ಲಾಡಳಿತ ಸಜ್ಜು

ಪ್ರಸಾದ್ ಲಕ್ಕೂರು

* ಸಹಾಯವಾಣಿ ೧೦೭೭, ೯೪೮೦೮ ೦೪೬೦೦ ಸಂಪರ್ಕಿಸಲು ಮನವಿ ಕಂದಾಯ, ಸೆಸ್ಕ್, ಕೃಷಿ, ಆರೋಗ್ಯ ಇಲಾಖೆಗಳಿಗೆ ಜವಾಬ್ದಾರಿ

* ಮಳೆ ಮುನ್ಸೂಚನೆಯನ್ನು ಮೊಬೈಲ್‌ನಲ್ಲೇ ಗಮನಿಸಬಹುದು

* ಮಳೆಯಿಂದ ಮನೆ, ಬೆಳೆಗೆ ಹಾನಿಯಾದರೆ ತಕ್ಷಣ ವರದಿಗೆ ಡಿಸಿ ಸೂಚನೆ

ಚಾಮರಾಜನಗರ: ಜಿಲ್ಲಾದ್ಯಂತ ಆಗಾಗ್ಗೆ ಬೀಳುತ್ತಿರುವ ಪೂರ್ವ ಮುಂಗಾರು ಮಳೆ ಹಾಗೂ ಸದ್ಯವೇ ಆಗಮಿಸಲಿರುವ ಮುಂಗಾರು ಮಳೆಗಾಲದಲ್ಲಿ ಸಂಭವಿಸಬಹುದಾದ ಅನಾಹುತಗಳನ್ನು ತಡೆಗಟ್ಟಲು ಜಿಲ್ಲಾಡಳಿತವು ಹತ್ತು ಹಲವು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದೆ.

ಜಿಲ್ಲೆಯ ೫ ತಾಲ್ಲೂಕುಗಳಲ್ಲಿ ಆಯಾಯ ಸ್ಥಳೀಯ ಶಾಸಕರ ಅಧ್ಯಕ್ಷತೆಯಲ್ಲಿರುವ ವಿಪತ್ತು ನಿರ್ವಹಣಾ ಪ್ರಾಧಿಕಾರಗಳಿಗೆ ಮಳೆ ಸಂದರ್ಭದಲ್ಲಿ ಮನೆ, ಫಸಲು, ಜೀವ ಹಾನಿಯಾಗದಂತೆಎಚ್ಚರ ವಹಿಸಿ ಜನರಲ್ಲಿ ಜಾಗೃತಿ ಮೂಡಿಸಬೇಕು. ಅಕಸ್ಮಾತ್ ಏನಾದರೂ ಜೀವ ಹಾನಿ, ಫಸಲು ನಷ್ಟವಾದರೆ ತಕ್ಷಣ ಸ್ಪಂದಿಸಬೇಕು ಎಂದು ಜಿಲ್ಲಾಧಿಕಾರಿ ಸುತ್ತೋಲೆ ಹೊರಡಿಸಿದ್ದಾರೆ.

ಕಂದಾಯ, ಸೆಸ್ಕ್, ಕೃಷಿ, ತೋಟಗಾರಿಕೆ, ಪಶುಪಾಲನೆ, ಆರೋಗ್ಯ, ಪೊಲೀಸ್ ಇಲಾಖೆಗಳು, ಅಗ್ನಿಶಾಮಕ ದಳ ಸಿಬ್ಬಂದಿ ಮಳೆ ಬೀಳುವ ಸಂದರ್ಭದಲ್ಲಿಎಚ್ಚರ ವಹಿಸಬೇಕೆಂದು ಸೂಚಿಸಿದ್ದಾರೆ. ಏನಾದರೂ ಗಂಭೀರ ಸಮಸ್ಯೆಯಾದರೆ ಟೋಲ್ ಫ್ರೀ ಸಹಾಯವಾಣಿ ೧೦೭೭ ಅಥವಾ ವಾಟ್ಸಾಪ್ ಸಂಖ್ಯೆ ೯೪೮೦೮ ೦೪೬೦೦ ಸಂಪರ್ಕಿಸಬಹುದು. ಇವುಗಳು ೨೪೭ ಕೆಲಸ ಮಾಡಲಿವೆ ಎಂಬುದಾಗಿ ಸಾರ್ವಜನಿಕರ ಗಮನಕ್ಕೆ ತರಲಾಗಿದೆ.

ಗುಡುಗು-ಸಿಡಿಲಿನ ಬಗ್ಗೆ ಎಚ್ಚರಿಕೆಗೆ ಮನವಿ : ಮಳೆ ಬೀಳುವ ಸಮಯದಲ್ಲಿ ಕಾಣಿಸಿಕೊಳ್ಳುವ ಗುಡುಗು- ಸಿಡಿಲಿನಿಂದಾಗುವ ಪ್ರಾಣಹಾನಿಯನ್ನು ತಡೆಯಲು ಸಾರ್ವಜನಿಕರು ಮುಂಜಾಗ್ರತೆ ವಹಿಸಬೇಕು. ಮನೆಯಿಂದ ಹೊರಗೆ ಹೋಗುವ ಅನಿವಾರ್ಯವಿದ್ದಲ್ಲಿ ಹವಾಮಾನ ಮುನ್ಸೂಚನೆಯನ್ನು ಮೊಬೈಲ್‌ನಲ್ಲಿ ಗಮನಿಸಬೇಕು ಎಂದು ಜಿಲ್ಲಾಡಳಿತ ತಿಳಿಸಿದೆ.

ಮಳೆ ಸುರಿಯುವ ವೇಳೆಯಲ್ಲಿ ಜಮೀನುಗಳಲ್ಲಿ ಕೆಲಸ ಮಾಡಲು, ಜಾನುವಾರುಗಳನ್ನು ಮೇಯಿಸಲು, ಮೀನುಗಾರಿಕೆ ಮತ್ತು ದೋಣಿಗಳನ್ನು ಓಡಿಸಲು ಅಥವಾ ಸಾಮಾನ್ಯ ಪ್ರಯಾಣಕ್ಕಾಗಿ ಮನೆಯಿಂದ ಹೊರಗೆ ಹೋಗಬಾರದು. ಗುಡುಗು-ಸಿಡಿಲಿನ ಸಂದರ್ಭದಲ್ಲಿ ಲೋಹದ ತಗಡನ್ನು ಹೊದಿಸಿರುವ ಮನೆಗಳು ಸುರಕ್ಷಿತವಲ್ಲ. ಕೆರೆ ಮತ್ತು ನದಿಗಳಿಂದ ದೂರವಿರಬೇಕು. ವಿದ್ಯುತ್ ಉಪಕರಣ ಹಾಗೂ ವಿದ್ಯುತ್ ಸರಬರಾಜು ಮಾರ್ಗ, ಮೊಬೈಲ್ ಟವರ್, ರೈಲು ಹಳಿಗಳಿಂದ ದೂರವಿರಬೇಕು ಎಂದು ಸಾರ್ವಜನಿಕರಲ್ಲಿ ಕೋರಿದೆ.

ವರದಿ ನೀಡಲು ಸೂಚನೆ : ಮಳೆಯಾದಾಗ ಆಲಿಕಲ್ಲು, ಬಿರುಗಾಳಿಯಿಂದ ಯಾವುದೇ ಫಸಲು ಹಾನಿಯಾದ ಮಾಹಿತಿ ತಿಳಿದ ತಕ್ಷಣ ಸ್ಥಳಕ್ಕೆ ತೆರಳಿ ಪರಿಶೀಲಿಸಿ ವರದಿ ನೀಡಬೇಕು ಎಂದು ಕಂದಾಯ ಇಲಾಖೆಯ ಗ್ರಾಮಾಡಳಿತ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ. ಮಳೆಯ ಹಿನ್ನೆಲೆಯಲ್ಲಿ ಸೆಸ್ಕ್ ಸಿಬ್ಬಂದಿ ವಿದ್ಯುತ್ ಮಾರ್ಗಗಳನ್ನು ಪರಿಶೀಲಿಸಬೇಕು. ಶಿಥಿಲಗೊಂಡಿರುವ ವಿದ್ಯುತ್ ಕಂಬಗಳು, ಲೈನ್ ಹಾಗೂ ದುಸ್ಥಿತಿಯಲ್ಲಿರುವ ಟ್ರಾನ್ಸ್‌ಫಾರ್ಮರ್‌ಗಳನ್ನು ಬದಲಿಸಬೇಕು. ಲೈನ್‌ಗಳಿಗೆ ತಾಕುವ ಮರದ ಕೊಂಬೆಗಳನ್ನು ಸರಿಪಡಿಸಬೇಕು ಎಂದು ಸೂಚಿಸಲಾಗಿದೆ. ಈಗಾಗಲೇ ಈ ಕಾರ್ಯ ಆರಂಭಿಸಲಾಗಿದೆ ಎಂದು ಸೆಸ್ಕ್ ಅಧಿಕಾರಿಗಳು ತಿಳಿಸಿದ್ದಾರೆ.

ಮರಗಳು, ವಿದ್ಯುತ್ ಕಂಬ ಉರುಳಿದಾಗ, ವಿದ್ಯುತ್ ತಂತಿ ತುಂಡಾಗಿ ಜೀವ ಹಾನಿಯಾದರೆ ಪೊಲೀಸ್, ಅಗ್ನಿಶಾಮಕ, ಆರೋಗ್ಯ ಇಲಾಖೆಗಳ ಸಿಬ್ಬಂದಿ ತಕ್ಷಣ ಸ್ಥಳಕ್ಕೆ ದೌಡಾಯಿಸಬೇಕು. ಪರಿಹಾರ ಕಾರ್ಯಗಳನ್ನು ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

ಚರಂಡಿಗಳನ್ನು ಶುಚಿಗೊಳಿಸಲು ಸೂಚನೆ: 

ಗ್ರಾಮೀಣ ಪ್ರದೇಶಗಳಲ್ಲಿ ಮಳೆಯಾದರೆ ನೀರು ಸರಾಗವಾಗಿ ಹರಿದು ಹೋಗಲು ಚರಂಡಿಗಳನ್ನು ಶುಚಿಗೊಳಿಸಬೇಕು. ಚರಂಡಿಗಳಲ್ಲಿನ ಹೂಳು ತೆಗೆಸಲು ಕ್ರಮ ವಹಿಸಬೇಕು ಎಂದು ಜಿಲ್ಲಾ ಪಂಚಾಯಿತಿ ಸಿಇಒ ಮೋನಾ ರೋತ್ ಅವರು ಗ್ರಾಮ ಪಂಚಾಯಿತಿಗಳ ಆಡಳಿತ ವರ್ಗಕ್ಕೆ ಸೂಚನೆ ನೀಡಿದ್ದಾರೆ. ನಗರ, ಪಟ್ಟಣಗಳಲ್ಲಿಯೂ ಚರಂಡಿಗಳಲ್ಲಿ ಪ್ಲಾಸ್ಟಿಕ್ ತ್ಯಾಜ್ಯ ತುಂಬಿರುತ್ತದೆ. ಇದನ್ನು ಮೊದಲು ತೆರವು ಮಾಡಿಸಬೇಕು ಎಂದು ಜಿಲ್ಲೆಯ ೧ ಪುರಸಭೆ, ೨ ಪಟ್ಟಣ ಪಂಚಾಯಿತಿಗಳ ಮುಖ್ಯಾಧಿಕಾರಿಗಳು, ೨ ನಗರಸಭೆಗಳ ಪೌರಾಯುಕ್ತರಿಗೆ ಸೂಚಿಸಿರುವುದಾಗಿ ಜಿಲ್ಲಾಧಿಕಾರಿ ತಿಳಿಸಿದ್ದಾರೆ.

” ಗ್ರಾಮಗಳಲ್ಲಿ ಚರಂಡಿಗಳ ಹೂಳು ತೆಗೆಸಿ ಮಳೆ ನೀರು ಸರಾಗವಾಗಿ ಹರಿದು ಹೋಗುವಂತೆ ಕ್ರಮ ವಹಿಸಿ ಎಂದು ಜಿಲ್ಲೆಯ ಎಲ್ಲ ೧೩೦ ಗ್ರಾಮ ಪಂಚಾಯಿತಿಗಳ ಪಿಡಿಒಗಳಿಗೆ ಸೂಚಿಸಿದ್ದೇನೆ.”

– ಮೋನಾ ರೋತ್, ಸಿಇಒ, ಜಿಲ್ಲಾ ಪಂಚಾಯಿತಿ.

” ಮಳೆಯಿಂದ ಸಂಭವಿಸುವ ಹಾನಿ ತಡೆಗೆ ಮುನ್ನೆಚ್ಚರಿಕೆ ಕ್ರಮಗಳನ್ನು ವಹಿಸುವಂತೆ ಸಂಬಂಧಪಟ್ಟ ಇಲಾಖೆಗಳು, ವಿಪತ್ತು ನಿರ್ವಹಣ ಪ್ರಾಧಿಕಾರಗಳಿಗೂ ಸೂಚಿಸಲಾಗಿದೆ. ಈಗಾಗಲೇ ಜಿಲ್ಲಾದ್ಯಂತ ಎಚ್ಚರ ವಹಿಸಲಾಗಿದೆ.”

– ಗೀತಾ ಹುಡೇದ, ಹೆಚ್ಚುವರಿ ಜಿಲ್ಲಾಧಿಕಾರಿ.

” ನೀರು ನಿಲ್ಲದಂತೆ ಎಚ್ಚರ ವಹಿಸಲು ಮನವಿ ಮಳೆಗಾಲ ಹತ್ತಿರವಾಗುತ್ತಿರುವ ಹಿನ್ನೆಲೆಯಲ್ಲಿ ಮನೆಗಳ ಹೊರಭಾಗ, ಇತರೆ ಸ್ಥಳಗಳಲ್ಲಿ ನೀರು ನಿಂತು ಸೊಳ್ಳೆಗಳ ಆವಾಸ ಸ್ಥಾನವಾಗಲು ಅವಕಾಶವಾಗದಂತೆ ಎಚ್ಚರ ವಹಿಸಬೇಕು. ಮಲೇರಿಯಾ ಕಾಯಿಲೆಯು ಸೊಳ್ಳೆ ಕಚ್ಚುವುದರಿಂದ ಹರಡಲಿದ್ದು, ಇದರ ನಿರ್ಮೂಲನೆಗೆ ಪ್ರತಿಯೊಬ್ಬರೂ ಪ್ರತಿಯೊಂದು ಸ್ಥಳವೂ ಸ್ವಚ್ಛತೆಯಿಂದ ಕೂಡಿರುವಂತೆ ನೋಡಿಕೊಳ್ಳಬೇಕಾಗಿದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಎಸ್.ಚಿದಂಬರ ಅವರು ಜನತೆಯಲ್ಲಿ ಮನವಿ ಮಾಡಿದ್ದಾರೆ. ಅನಾಫಿಲಿಸ್ ಸೊಳ್ಳೆ ಮಳೆಗಾಲದಲ್ಲಿ ಹೆಚ್ಚಾಗಿ ಸಂತಾನೋತ್ಪತ್ತಿ ಮಾಡುತ್ತದೆ. ಆದ್ದರಿಂದ ನಮ್ಮ ಸುತ್ತಮುತ್ತಲಿನ ಪರಿಸರದಲ್ಲಿ ನೀರು ನಿಲ್ಲದಂತೆ ಸ್ವಚ್ಛವಾಗಿ ಇರಿಸಿಕೊಳ್ಳುವಂತೆ ಸಾರ್ವಜನಿಕರಿಗೆ ಆಶಾ, ಆರೋಗ್ಯ ಇಲಾಖೆ ಸಿಬ್ಬಂದಿಯಿಂದ ಜಾಗೃತಿ ಮೂಡಿಸಲಾಗುತ್ತಿದೆ. ಕೆರೆ, ಕಟ್ಟೆಗಳಿಗೆ ಲಾರ್ವಾಹಾರಿ ಮೀನುಗಳಾದ ಗ್ಯಾಂಬೂಷಿಯ ಹಾಗೂ ಗಪ್ಪಿ ಮೀನುಗಳನ್ನು ಬಿಡಲಾಗುತ್ತಿದೆ. ಮಲೇರಿಯಾದಿಂದ ಉಂಟಾಗುವ ಚಳಿ, ಜ್ವರ, ಬೆವರುವ ಲಕ್ಷಣಗಳು ಕಂಡುಬಂದರೆ ಕೂಡಲೇ ಹತ್ತಿರದ ಆರೋಗ್ಯ ಕೇಂದ್ರ ಅಥವಾ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆಯಬೇಕು ಎಂದು ಜಿಲ್ಲಾಧಿಕಾರಿ ಮನವಿ ಮಾಡಿದ್ದಾರೆ.

ಆಂದೋಲನ ಡೆಸ್ಕ್

Recent Posts

ಬಾ.ನಾ.ಸುಬ್ರಹ್ಮಣ್ಯ ಅವರ ವಾರದ ಅಂಕಣ ; ಪ್ರತಿಷ್ಠಿತ ಕಾನ್‌ ಚಿತ್ರೋತ್ಸವದಲ್ಲಿ ಭಾರತ ಚಿತ್ರೋದ್ಯಮ

ಉತ್ಸವಗಳ ಉತ್ಸವ ಎಂದೇ ಪ್ರತೀತಿ ಪಡೆದಿರುವ ಅಂತಾರಾಷ್ಟ್ರೀಯ ಚಿತ್ರೋತ್ಸವ ಫ್ರಾನ್ಸ್‌ನ ಕಾನ್‌ನದು. ಇದೀಗ ಮೊನ್ನೆ ಅದರ ೭೯ನೇ ಆವೃತ್ತಿಗೆ ಚಾಲನೆ…

49 mins ago

ಗಗನಮುಖಿಯಾಗಿದ್ದ ತೆಂಗಿನ ಕಾಯಿ ದರ ಕುಸಿತ

ಎಚ್‌.ಎಸ್.ದಿನೇಶ್‌ ಕುಮಾರ್‌ ಮೈಸೂರು : ಕಳೆದ ವರ್ಷ ಗಗನಕ್ಕೇರಿದ್ದ ತೆಂಗಿನಕಾಯಿ ಬೆಲೆ ಇದೀಗ ಶೇ. ೫೦ರಷ್ಟು ದರ ಇಳಿದಿದೆ. ಇದರಿಂದಾಗಿ…

1 hour ago

ಮಹಾಪಂಚ್‌ ಕಾರ್ಟೂನ್‌

ಮಹಾಪಂಚ್‌ ಕಾರ್ಟೂನ್‌ | ಮೇ.15  ಶುಕ್ರವಾರ

1 hour ago

ತಮಿಳುನಾಡಿನಲ್ಲಿ ಮದ್ಯ ಖರೀದಿ ಮತ್ತು ಸೇವನೆಗೆ 21 ವರ್ಷ ವಯಸ್ಸು ಕಡ್ಡಾಯ

ಚೆನ್ನೈ: ರಾಜ್ಯದಲ್ಲಿ ಅಪ್ರಾಪ್ತ ವಯಸ್ಕರಲ್ಲಿ ಹೆಚ್ಚುತ್ತಿರುವ ಮದ್ಯ ಸೇವನೆಯನ್ನು ತಡೆಯಲು, ತಮಿಳುನಾಡು ಸರ್ಕಾರವು ಎಲ್ಲಾ ರೀತಿಯ ಮದ್ಯ ಖರೀದಿ ಮತ್ತು…

14 hours ago

ಮುಂದಿನ ಐದು ದಿನಗಳ ಕಾಲ ರಾಜ್ಯದಲ್ಲಿ ಭಾರೀ ಮಳೆ: ಹವಾಮಾನ ಇಲಾಖೆ ಮುನ್ಸೂಚನೆ

ಬೆಂಗಳೂರು: ದಕ್ಷಿಣ ಒಳನಾಡು ಹಾಗೂ ಉತ್ತರ ಒಳನಾಡಿನ ಕೆಲವು ಜಿಲ್ಲೆಗಳಿಗೆ ಪೂರ್ವ ಮುಂಗಾರು ಆರ್ಭಟ ಮುಂದುವರಿದಿದೆ. ನಾಳೆ ಮತ್ತಷ್ಟು ತೀವ್ರತೆ…

15 hours ago

ಉತ್ತರ ಪ್ರದೇಶದಲ್ಲಿ ಮಳೆ ಅವಾಂತರ: ಸಾವಿನ ಸಂಖ್ಯೆ 104ಕ್ಕೆ ಏರಿಕೆ

ಲಕ್ನೋ: ಉತ್ತರ ಪ್ರದೇಶದಾದ್ಯಂತ ಭಾರೀ ಮಳೆ ಮತ್ತು ಬಿರುಗಾಳಿಗೆ ಈವರೆಗೆ 104 ಜನರು ಸಾವನ್ನಪ್ಪಿದ್ದಾರೆ. ಮಳೆ ಹೊಡೆತಕ್ಕೆ 53 ಜನರಿಗೆ…

15 hours ago