ಕೆ.ಆರ್.ನಗರ, ಸಾಲಿಗ್ರಾಮ ತಾಲ್ಲೂಕುಗಳಲ್ಲಿ ತೆಂಗು ಬೆಳೆದ ರೈತರಿಗೆ ಸಂಕಷ್ಟ; ಅಧಿಕಾರಿಗಳಿಂದ ಸಲಹೆ
• ಭೇರ್ಯ ಮಹೇಶ್
ಕೆ.ಆರ್.ನಗರ: ಕಳೆದ ವರ್ಷದಿಂದ ಸರಿಯಾಗಿ ಮಳೆ- ಬೆಳೆಯಿಲ್ಲದೆ ಸಂಕಷ್ಟಕ್ಕೀಡಾಗಿದ್ದ ರೈತರಿಗೆ ಇದೀಗ ತೆಂಗು ಬೆಳೆಗೆ ತಗುಲಿರುವ ಕಪ್ಪುತಲೆ ಹುಳುವಿನ ಬಾಧೆ ಚಿಂತೆಗೀಡು ಮಾಡಿದೆ.
ಈಗ ಫಸಲು ಬೇಡ, ಮರ ಉಳಿದರೆ ಸಾಕು ಎನ್ನುತ್ತಿದ್ದಾರೆ ಅವಳಿತಾಲ್ಲೂಕುಗಳ ರೈತರು. ಅವಳಿ ತಾಲ್ಲೂಕುಗಳ ಬಹುತೇಕ ಕಡೆಗಳಲ್ಲಿ ತೆಂಗು ಬೆಳೆಗೆ ಕಪ್ಪು ತಲೆ ಹುಳುವಿನ ಬಾಧೆ ಹೆಚ್ಚಾಗಿದ್ದು, ತೋಟ ಗಾರಿಕೆ ಇಲಾಖೆ ಅಧಿಕಾರಿಗಳು ಮೋನೋಕ್ರೋಟೊಪಾಸ್ ಅಥವಾ ಅಜಾಡಿರೆಕ್ಷನ್ ಕೀಟನಾಶಕವನ್ನು ಸಿಂಪಡಣೆ ಮಾಡಲು ರೈತರಿಗೆ ಸಲಹೆ ನೀಡಿದ್ದಾರೆ.
ದಶಕಗಳಿಂದ ಕಪ್ಪುತಲೆ ಹುಳು ಬಾಧೆಯಿಂದ ಮರಗಳ ಗರಿ, ಸುಳಿ ಒಣಗಿ ಇಳುವರಿ ಕುಂಠಿತವಾಗುತ್ತಿದೆ ಎಂಬುದು ರೈತರ ಅಳಲು.
ಮರಗಳನ್ನು ರೋಗದಿಂದ ರಕ್ಷಿಸಲಾಗದೆ ಹಲವು ರೈತರು ಮರವನ್ನೇ ಕಡಿಯಲು ಮುಂದಾಗುತ್ತಾರೆ. ಇದರ ಜೊತೆಗೆ ನುಸಿಪೀಡೆ, ಬೆಂಕಿ ರೋಗ, ಗಿಡಗಳ ಸುಳಿ ರೋಗಗಳಿಂದಲೂ ರೈತರು ಕಂಗಾಲಾಗಿದ್ದಾರೆ.
ಕೆ.ಆರ್.ನಗರ ಮತ್ತು ಸಾಲಿಗ್ರಾಮ ಅವಳಿ ತಾಲ್ಲೂಕುಗಳಲ್ಲಿ ಅಂದಾಜು 1 ಸಾವಿರ ಎಕರೆಗೂ ಹೆಚ್ಚು ಪ್ರದೇಶದಲ್ಲಿ ಕಪ್ಪುತಲೆ ಹುಳುವಿನ ಬಾಧೆ ಕಾಣಿಸಿಕೊಂಡಿದ್ದು, ರೈತರು ತೋಟಗಾರಿಕೆ ಇಲಾಖೆಗೆ ಭೇಟಿ ನೀಡಿ ಬಾಧೆ ತಪ್ಪಿಸಲು ಸಮಗ್ರ ಮಾಹಿತಿ ಪಡೆದುಕೊಳ್ಳಬೇಕಾಗಿದೆ.
ಕಪ್ಪುತಲೆ ಹುಳುಗಳು ತೆಂಗಿನ ಮರದ ಗರಿ ತಿನ್ನುವ ಹುಳುಗಳಾಗಿವೆ. ಇತ್ತೀಚಿನ ದಿನಗಳಲ್ಲಿ ಈ ಕೀಟ ತೆಂಗು ಬೆಳೆಯುವ ಪ್ರದೇಶದಲ್ಲಿ ಕಾಣಿಸಿಕೊಂಡು ತೆಂಗಿನ ಬೆಳೆಗೆ ಹೆಚ್ಚಾಗಿ ಹಾನಿಯನ್ನುಂಟು ಮಾಡುತ್ತಿದೆ.
ಈ ಕೀಟ ಗಾಳಿಯಲ್ಲಿ ಹರಡುವ ಮೂಲಕ ಹೆಚ್ಚು ಪ್ರದೇಶದಲ್ಲಿ ವ್ಯಾಪಿಸಿ ತೆಂಗಿನ ಮರಗಳಿಗೆ ಹಾನಿಯನ್ನುಂಟು ಮಾಡುತ್ತದೆ. ಎಲೆಯ ಹಸಿರು ಭಾಗಗಳನ್ನು ಕೆರೆದು ತಿನ್ನುತ್ತದೆ. ಈ ಹುಳುಗಳನ್ನು ಹತೋಟಿ ಮಾಡದಿದ್ದರೆ ಶೇ.60ರಷ್ಟು ಇಳುವರಿ ಕುಂಠಿತಗೊಂಡು ಕಾಲಕ್ರಮೇಣ ಮರ ಪ್ರಯೋಜನಕ್ಕೆ ಬಾರದಂತಾಗುತ್ತದೆ.
ಕೀಟಗಳಿಂದ ಮರ ಉಳಿಸಿಕೊಳ್ಳುವ ವಿಧಾನ: ತೆಂಗಿನ ಮರಗಳಲ್ಲಿ ಹಾನಿಯು ಪ್ರಾಥಮಿಕ ಹಂತದಲ್ಲಿದ್ದರೆ ತೋಟಗಳಲ್ಲಿ ಬಿದ್ದ ಗರಿಗಳು, ಇತರ ಕಸ ಕಡ್ಡಿಗಳನ್ನು ಸಂಗ್ರಹಿಸಿ ಸ್ವಚ್ಛವಾಗಿಡಬೇಕು. ಹುಳು ಇರುವ ಭಾಗಗಳು ಅಥವಾ ಗರಿಗಳನ್ನು ಕತ್ತರಿಸಿ ಸುಡಬೇಕು. ಕಪ್ಪುತಲೆ ಹುಳು ಮರಿಹುಳುವಿನ ಹಂತದಲ್ಲಿದಾಗ ಗೋನಿಯೋಜಸ್, ನೆಫಾಂಟಿಡಿಸ್ ಪರೋಪಜೀವಿಗಳನ್ನು ಕೀಟಬಾಧಿತ ಮರಕ್ಕೆ ಸುಮಾರು 15ರಿಂದ 20ರಂತೆ ಬಿಡುಗಡೆ ಮಾಡಬೇಕು.
ಕೀಟಬಾಧೆಯು ತೀವ್ರತೆಯ ಹಂತ ತಲುಪಿದಾಗ ಯಾಂತ್ರಿಕ ಮತ್ತು ಜೈವಿಕ ವಿಧಾನಗಳಿಂದ ಹತೋಟಿಗೆ ಬಾರದಿದ್ದಲ್ಲಿ ರಾಸಾಯನಿಕ ವಿಧಾನ ಅವಶ್ಯವಾಗಿರುತ್ತದೆ. ಸಣ್ಣ ಮರಗಳಿಗೆ 15 ಮಿ.ಲೀ. ಮೋನೋ ಕ್ರೋಟೋ ಫಾಸ್ ಕೀಟನಾಶಕಗಳನ್ನು 10 ಲೀಟರ್ ನೀರಿನಲ್ಲಿ ಬೆರೆಸಿ ಗರಿಗಳ ಕೆಳಭಾಗ ಸಂಪೂರ್ಣ ಒದ್ದೆಯಾಗುವಂತೆ ಸಿಂಪಡಿ ಸಬೇಕು. ಮರಿಹುಳುಗಳಿಗೆ ತೆಂಗಿನ ಬೇರಿನ ಮೂಲಕ ಕೀಟನಾಶಕಗಳನ್ನು ಸಿಂಪಡಣೆ ಮಾಡಬೇಕು ಎಂದು ಈಗಾ ಗಲೇ ತೋಟಗಾರಿಕೆ ಇಲಾಖೆ ಅಧಿಕಾರಿ ಗಳು ಗ್ರಾಮ ಪಂಚಾಯಿತಿ ಮಟ್ಟದಲ್ಲಿ ನಡೆಯುವ ಸಭೆಯಲ್ಲಿ ರೈತರಿಗೆ ಮನವರಿಕೆ ಮಾಡಿ ಕೊಡುತ್ತಿದ್ದಾರೆ.
“ತೆಂಗಿನ ಮರಕ್ಕೆ ಕಪ್ಪುಹುಳುವಿನ ಬಾಧೆ ಹೆಚ್ಚಾದ ಹಿನ್ನೆಲೆಯಲ್ಲಿ ತೆಂಗಿನ ಮರಗಳಲ್ಲಿ ಇಳುವರಿ ಕಡಿಮೆಯಾಗಿದೆ. ಜೊತೆಗೆ ನುಸಿಪೀಡೆ ರೋಗ, ಬೆಂಕಿರೋಗ ಹಾಗೂ ಸುಳಿ ರೋಗಗಳಿಂದ ಈ ಬಾರಿ ತೆಂಗಿನ ಮರಗಳು ನೆಲ ಕಚ್ಚಿವೆ. ಮುಖ್ಯಮಂತ್ರಿಗಳ ತವರು ಜಿಲ್ಲೆಯಲ್ಲಿ ತೆಂಗಿನ ಮರಗಳು ಹಾನಿಯಾಗಿವೆ. ಕೂಡಲೇ ಸರ್ಕಾರ ವಿಶೇಷ ಪ್ಯಾಕೇಜ್ ಘೋಷಣೆ ಮಾಡಿ ತೆಂಗು ಬೆಳೆಗಾರರ ಹಿತ ಕಾಪಾಡಬೇಕು.”
–ಜೆ.ಎಂ.ಕುಮಾರ್, ಗೌರವಾಧ್ಯಕ್ಷ, ಕರ್ನಾಟಕ ರೈತ ಪರ್ವ ಸಂಘ.
“ಕಳೆದ ವರ್ಷ ಬರ ಇದ್ದ ಹಿನ್ನೆಲೆಯಲ್ಲಿ ತೆಂಗಿನ ಬೆಳೆಗೆ ಕಪ್ಪುತಲೆ ಹುಳುವಿನ ಬಾಧೆ ಹೆಚ್ಚಾಗಿ ಕಾಣಿಸಿಕೊಂಡಿತ್ತು. ತೆಂಗು ಬೆಳೆ ಅಭಿವೃದ್ಧಿ ಮಂಡಳಿ ವತಿಯಿಂದ ಹೋಬಳಿಯ ಯಾವುದಾದರೂ ಒಂದು ತೋಟದಲ್ಲಿ ಕಪ್ಪುತಲೆ ಹುಳುವಿನ ಬಾಧೆಯನ್ನು ಹತೋಟಿಗೆ ತರಲು ರೈತರಿಗೆ ತರಬೇತಿ ಹಾಗೂ ಪ್ರಾತ್ಯಕಿಕೆ ಕಾರ್ಯಕ್ರಮ ನಡೆಸಲಾಗುತ್ತಿದೆ. ಮಳೆ ಉತ್ತಮವಾಗಿದ್ದರೆ ಹತೋಟಿಗೆ ಬರುತ್ತದೆ. ಪೋಷಕಾಂಶ ಮತ್ತು ನೀರನ್ನು ಹೆಚ್ಚಾಗಿ ತೆಂಗಿನ ಮರಕ್ಕೆ ನೀಡಿದರೆ 3-4 ವರ್ಷಗಳಲ್ಲಿ ಹತೋಟಿಗೆ ಬರುತ್ತದೆ.”
-ಟಿ.ಎಸ್.ಭಾರತಿ, ಹಿರಿಯ ತೋಟಗಾರಿಕೆ ನಿರ್ದೇಶಕರು
ನವದೆಹಲಿ : ಹ್ಯಾಜಲ್ವುಡ್, ಭುವನೇಶ್ವರ್ ಬೌಲಿಂಗ್ ಅಬ್ಬರ, ಸಂಘಟಿತ ಫೀಲ್ಡಿಂಗ್ ನೆರವಿನಿಂದ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು…
ಮೈಸೂರು : ಕೆ-ಸೆಟ್ ಮತ್ತು ಯುಜಿಸಿ-ನೆಟ್, ಜೆಆರ್ಎಫ್ ಅರ್ಹತಾ ಪರೀಕ್ಷೆ ಬರೆಯುವವರಿಗೆ 45 ದಿನಗಳ ತರಬೇತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಕರ್ನಾಟಕ…
ಹಾಸನ : ಹಠಾತ್ ಕುಸಿದು ಬಿದ್ದು ಮೆದುಳಿನಲ್ಲಿ ತೀವ್ರ ರಕ್ತಸ್ರಾವವಾಗಿ ಕೋಮಾಗೆ ಜಾರಿದ್ದ ಸಾಫ್ಟ್ವೇರ್ ಇಂಜಿನಿಯರ್ ಯುವತಿ ಚಿಕಿತ್ಸೆ ಫಲಿಸದೆ…
ಮೈಸೂರು : ಮೈಸೂರು ಪ್ರಾಂತ್ಯದಲ್ಲೇ ಪ್ರಸೂತಿ, ಸ್ತ್ರೀರೋಗ ಮತ್ತು ಮಕ್ಕಳಿಗೆ ಗುಣಮಟ್ಟದ ಚಿಕಿತ್ಸೆ ನೀಡುವಲ್ಲಿ ಹೆಸರುವಾಸಿಯಾಗಿದ್ದ ಮೈಸೂರಿನ ಚೆಲುವಾಂಬ ಆಸ್ಪತ್ರೆಯ…
ಕೊಲ್ಕತ್ತಾ : ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯ ಎರಡನೇ ಹಂತದ ಬಹಿರಂಗ ಚುನಾವಣೆ ಸೋಮವಾರ ಅಂತ್ಯವಾಗಿದೆ. ಏ.29ರಂದು ಮತದಾನ ನಡೆಯಲಿದ್ದು,…
ಶಿವಮೊಗ್ಗ : ಎಸ್ಎಸ್ಎಲ್ಸಿ ಫಲಿತಾಂಶದಲ್ಲಿ ‘ಕಾಪಿ ಹೊಡೆಸಿ ಶೇ.94.1 ಫಲಿತಾಂಶ ತಂದಿದ್ದಾರೆ’ ಎಂಬ ಬಿಜೆಪಿ ಎಂಎಲ್ಸಿ ಎಚ್.ವಿಶ್ವನಾಥ್ ಅವರ ಹೇಳಿಕೆಗೆ…