ಭೇರ್ಯ ಮಹೇಶ್
ಇಂದು ಭೇರ್ಯದಲ್ಲಿ ಕರಿಯಮ್ಮ ದೊಡ್ಡಮ್ಮ ದೇವಿ ಸಿಡಿ ಉತ್ಸವ, ನಾಳೆ ಜಾತ್ರಾ ಮಹೋತ್ಸವ
ಭೇರ್ಯ: ಭೇರ್ಯ ಗ್ರಾಮದ ಗ್ರಾಮದೇವತೆ ಶ್ರೀ ಕರಿಯಮ್ಮ ದೊಡ್ಡಮ್ಮ ದೇವಿಯ ಸಿಡಿ ಮಹೋತ್ಸವವು ಏಪ್ರಿಲ್ ೭ರ ಮಂಗಳವಾರ ಮತ್ತು ಏ.೮ರ ಬುಧವಾರ ಜಾತ್ರೋತ್ಸವ ವಿಜೃಂಭಣೆಯಿಂದ ನಡೆಯಲಿದ್ದು, ಶ್ರೀ ಕರಿಯಮ್ಮ ದೊಡ್ಡಮ್ಮ ಟ್ರಸ್ಟ್ ವತಿಯಿಂದ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ.
ಗ್ರಾಮದೇವತೆ ಶ್ರೀ ಕರಿಯಮ್ಮ ದೊಡ್ಡಮ್ಮ ಸಿಡಿಗೆ ಮಂಗಳವಾರ ಸಂಜೆ ಸಂಪ್ರದಾಯದಂತೆ ಬಾಳೆಗೊನೆ ಕಟ್ಟಿ ಅಲಂಕಾರ ಮಾಡಿ, ರಾತ್ರಿ ವೇಳೆ ಸಾವಿರಾರು ಜನರ ಸಮ್ಮುಖದಲ್ಲಿ ಕೊಂಬು, ಕಹಳೆ, ಕೀಲು ಕುದುರೆ ಮತ್ತು ಡೊಳ್ಳು, ನಗಾರಿ ಮಂಗಳವಾದ್ಯದೊಂದಿಗೆ ಸುಮಾರು ಒಂದು ಕಿ.ಮೀ. ದೂರ ಎಳೆದು ತಂದು ನಂತರ ಶ್ರೀ ಕರಿಯಮ್ಮ ದೊಡ್ಡಮ್ಮ ದೇವಸ್ಥಾನದ ಸುತ್ತ ಮೂರು ಬಾರಿ ಪ್ರದಕ್ಷಿಣೆ ಹಾಕುತ್ತಾರೆ. ನಂತರ ಜನರು ತಮ್ಮ ಹರಕೆ, ಕಾಣಿಕೆ, ಮುಡುಪು ಗಳನ್ನು ಸಲ್ಲಿಸುತ್ತಾರೆ.
ಬಾಯಿ ಬೀಗ: ವಿವಿಧ ಕಾರಣಗಳಿಗೆ ಹರಕೆ ಹೊತ್ತವರು ಸಿಡಿ ಎಳೆಯುವಾಗ ಬೆಳಿಗ್ಗೆಯಿಂದಲೇ ಉಪವಾಸವಿದ್ದು, ಬಾಯಿಗೆ ಬೀಗ ಹಾಕಿಕೊಂಡು ನಡೆಯುತ್ತಾರೆ. ಮಂಗಳವಾರ ರಾತ್ರಿ ಸಿಡಿ ಎಳೆಯುವಾಗ ಮುತ್ತೈದೆಯರು ತಂಬಿಟ್ಟಿನ ಆರತಿ ಬೆಳಗುತ್ತಾರೆ. ಸುತ್ತಮುತ್ತಲಿನ ಗ್ರಾಮಗಳಲ್ಲಿ ಸಿಡಿ ಮತ್ತು ಜಾತ್ರಾ ಮಹೋತ್ಸವ ಬಹಳ ದೊಡ್ಡ ಹಬ್ಬವಾಗಿದೆ.
ವಿದ್ಯುತ್ ದೀಪಾಲಂಕಾರ: ಈಗಾಗಲೇ ಮೂರು ದಿನಗಳಿಂದ ಗ್ರಾಮದ ಹಾಸನ- ಮೈಸೂರು ರಸ್ತೆ, ಸಾಲಿಗ್ರಾಮ- ಕೆ.ಆರ್.ಪೇಟೆ ರಸ್ತೆಯ ಉದ್ದಕ್ಕೂ ಎಲ್ಇಡಿ ಬಲ್ಬ್ಗಳಿಂದ ವಿದ್ಯುತ್ ದೀಪಾಲಂಕಾರ ಮಾಡಲಾಗಿದ್ದು, ಇಡೀ ಭೇರ್ಯ ಗ್ರಾಮವೇ ಜಗಜಗಿಸುತ್ತಿದೆ.
ಜಾತ್ರೆ ವಿಜೃಂಭಣೆಯಿಂದ ನಡೆಯಲಿದ್ದು, ಸಾವಿರಾರು ಜನರು ಸೇರುವ ನಿರೀಕ್ಷೆ ಇದೆ. ಹೊರರಾಜ್ಯದಿಂದ ಜನರು ಬಂದು ದೇವಿಗೆ ಹರಕೆ ಕಾಣಿಕೆ ಒಪ್ಪಿಸಿ ಹೋಗುತ್ತಾರೆ. ಜೊತೆಗೆ ಇಲ್ಲಿಯೇ ಹರಕೆ ಒಪ್ಪಿಸಿ ಪರ ಮಾಡಿ ನಾಲ್ಕಾರು ಜನರಿಗೆ ದಾಸೋಹ ಮಾಡುವುದು ಈ ದೇವಸ್ಥಾನದ ಸಂಪ್ರದಾಯವಾಗಿದೆ.
ಗ್ರಾಮವು ಮಂಗಳವಾರ ಮತ್ತು ಬುಧವಾರ ಮಧುವಣಿಗಿತ್ತಿಯಂತೆ ತಳಿರು-ತೋರಣಗಳಿಂದ ಅಲಂಕೃತಗೊಂಡು ಹಾಗೂ ವಿದ್ಯುತ್ ದೀಪಾಲಂಕಾರದಿಂದ ನೋಡುಗರ ಕಣ್ಮನ ಸೆಳೆಯುತಿದೆ. ಎಲ್ಲಾ ಜಾತಿ ಜನಾಂಗದವರು ಒಟ್ಟಾಗಿ ಸೇರಿ ಆಚರಿಸುವ ಜಾತ್ರಾ ಮಹೋತ್ಸವ ಇದಾಗಿದೆ.
ಪೌರಾಣಿಕ ನಾಟಕ: ಜಾತ್ರಾ ಮಹೋತ್ಸವ ದಿನವಾದ ಬುಧವಾರ ರಾತ್ರಿ ೯ ಗಂಟೆಗೆ ಶ್ರೀ ದೊಡ್ಡಮ್ಮ ಕರಿಯಮ್ಮ ಕೃಪಾಪೋಷಿತ ನಾಟಕ ಮಂಡಳಿಯ ಕುರುಕ್ಷೇತ್ರ ಎಂಬ ಪೌರಾಣಿಕ ನಾಟಕ ಪ್ರದರ್ಶನ ನಡೆಯಲಿದ್ದು, ಗ್ರಾಮಸ್ಥರ ಮನರಂಜಿಸಲಿದೆ.
” ನಮ್ಮ ಪೂರ್ವಿಕರ ಕಾಲದಿಂದಲೂ ಶ್ರೀ ಕರಿಯಮ್ಮ ಸಿಡಿ ಮತ್ತು ದೊಡ್ಡಮ್ಮ ಜಾತ್ರಾ ಮಹೋತ್ಸವವನ್ನು ಜಾತಿ-ಭೇದವಿಲ್ಲದೆ ಎಲ್ಲಾ ಜನಾಂಗದವರು ಒಗ್ಗೂಡಿ ಸಿಡಿ ಎಳೆಯುವ ಮೂಲಕ ಬಹಳ ವಿಜೃಂಭಣೆಯಿಂದ ಆಚರಿಸುತ್ತಿದ್ದೇವೆ. ದೇವಿಯ ಮಹಿಮೆಯನ್ನು ಮೆಚ್ಚಿ ಸಾವಿರಾರು ಭಕ್ತಾದಿಗಳು ಕಾಣಿಕೆ, ಹರಕೆ, ಮುಡುಪು, ಸಲ್ಲಿಸಲು ಆಗುಮಿಸುತ್ತಾರೆ. ಎರಡು ದಿನಗಳವರೆಗೆ ನಡೆಯುವ ಗ್ರಾಮ ದೇವತೆಯ ಜಾತ್ರೆಗೆ ವಿಶೇಷ ಮೆರುಗು ನೀಡಲಾಗುತ್ತಿದೆ.”
-ನಾಡಗೌಡ ಕುಮಾರಸ್ವಾಮಿ, ಅಧ್ಯಕ್ಷ, ಶ್ರೀಕರಿಯಮ್ಮ ದೊಡ್ಡಮ್ಮ ಟ್ರಸ್ಟ್ ಸಮಿತಿ
ಟಿ.ಕೆ.ಹರೀಶ್ ಸಮುದಾಯಗಳಿಗೆ ಸೂರು, ಶಿಕ್ಷಣ ಒದಗಿಸುವುದು ಅತ್ಯಗತ್ಯ ಭಾರತೀಯ ಅಲೆಮಾರಿ ಜನಾಂಗಗಳು ಕೇವಲ ಸಂಚಾರಿಗಳಲ್ಲ; ಅವರು ನಮ್ಮ ಶ್ರೀಮಂತ ಸಾಂಸ್ಕೃತಿಕ…
ಮೈಸೂರು ಜಿಲ್ಲೆಯ ಹೆಚ್.ಡಿ.ಕೋಟೆ ತಾಲ್ಲೂಕು ಕಚೇರಿ ಆಡಳಿತ ಸೌಧದಲ್ಲಿ ಇರುವ ನೆಮ್ಮದಿ ಕೇಂದ್ರದ ಮೂಲಕ ಜಾತಿ ಪ್ರಮಾಣ ಪತ್ರ, ಆದಾಯ…
ನಗರ ಪ್ರದೇಶಗಳ ಹೋಟೆಲ್ಗಳಲ್ಲಿ ನೀಡಲಾಗುವ ಆಹಾರ ಪಾರ್ಸೆಲ್ಗಳು ಹಾಗೂ ಆನ್ ಲೈನ್ ಮೂಲಕ ಸರಬರಾಜಾಗುವ ಶೇ.೯೦ ಕ್ಕಿಂತ ಹೆಚ್ಚು ಆಹಾರ…
ಸಾಮಾಜಿಕ ಮಾಧ್ಯಮ ಬಳಕೆದಾರರು ಬೆಂಗಳೂರಿನ ನಂತರ ಅತಿ ಹೆಚ್ಚು ಕ್ರಿಯಾಶೀಲರಾಗಿರುವುದು ಮೈಸೂರು ನಗರದಲ್ಲಿ. ಆದರೆ ಬೇಸರದ ಸಂಗತಿ ಎಂದರೆ ಇಲ್ಲಿನ…
ರಾಜ್ಯದಲ್ಲಿ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ (ಎಸ್ಐಆರ್)ಪ್ರಕ್ರಿಯೆ ಜೂ.೩೦ರಿಂದ ಆರಂಭವಾಗಿದೆ. ಆದರೆ ಮತದಾರರು ಈ ಪ್ರಕ್ರಿಯೆಯಲ್ಲಿ ಯಾವ ದಾಖಲೆಗಳನ್ನು…
ಪಂಜು ಗಂಗೊಳ್ಳಿ ಬಡಕಟ್ಟು ಜನರಿಗೆ ಅಕ್ಷರ ಕಲಿಸಿ ಬದುಕು ರೂಪಿಸಿದ ಕರುಣಾಮಯಿ ೧೯೯೦ರಲ್ಲಿ ಅಸ್ಸಾಮಿನ ಹೊಜಾಯ್ ಜಿಲ್ಲೆಯ ಲುಮ್ಡಿಂಗ್ ಗ್ರಾಮದ…