ನಂಜನಗೂಡಿನ ಜಾತ್ರೆ ಅಂದು ಹೇಗಿತ್ತೋ ಇಂದೂ ಹಾಗೆ ತನ್ನ ಆಚರಣೆಯ ಮುಗ್ಧತೆ ಉಳಿಸಿಕೊಂಡಿದೆ
ಡಾ.ಹೆಚ್.ಸಿ.ಮಹದೇವಪ್ಪ, ಸಚಿವರು
ನಂಜನಗೂಡಿನಿಂದ ಕೆಲವೇ ಮೈಲಿಗಳ ದೂರದಲ್ಲಿರುವ ನಮ್ಮೂರು ಹದಿನಾರು. ಇದರ ಜೊತೆಗೆ ಕಪಿಲಾ ನದಿ ದಡದ ಪಕ್ಕದಲ್ಲೇ ಇರುವ ಹೆಜ್ಜಿಗೆ ಕೂಡ ನಮ್ಮ ಸಂಬಂಧಿಗಳ ಊರಾಗಿತ್ತು. ಚಿಕ್ಕ ವಯಸ್ಸಿನಲ್ಲಿ ಹೆಜ್ಜಿಗೆಗೆ ಬರುತ್ತಿದ್ದ ಸಂದರ್ಭದಲ್ಲಿ ನಂಜನಗೂಡು ಜಾತ್ರೆಗೆ ಬಹು ಸಂಭ್ರಮದಿಂದ ಹೋಗುತ್ತಿದ್ದೆವು. ಬಡತನ ಹೆಚ್ಚಾಗಿದ್ದ ಆ ಕಾಲದಲ್ಲಿ ಉಡುವ ಬಟ್ಟೆಗಳೂ ಕಡಿಮೆ ಇದ್ದದ್ದರಿಂದ ಅಮ್ಮ ಹೊಲಿಸಿಕೊಟ್ಟ ಅಪರೂಪದ ಪ್ಯಾಂಟು ಶರ್ಟನ್ನೇ ಜೋಪಾನವಾಗಿ ಇಟ್ಟುಕೊಂಡು ಜಾತ್ರೆಗೆ ಹೋಗುತ್ತಿದ್ದ ನೆನಪು. ಆದರೆ ಈಗಿನಂತೆ ಆಗ ನದಿಯನ್ನು ದಾಟಲು ಸೇತುವೆ ಇಲ್ಲದ ಕಾರಣ, ನಾವು ನದಿಯನ್ನೇ ದಾಟಬೇಕಾಗುತ್ತಿತ್ತು. ಬೇಸಿಗೆ ಸಂದರ್ಭದಲ್ಲಿ ನೀರು ಕಡಿಮೆ ಇರುತ್ತಿದ್ದ ಕಾರಣ, ನಾವು ಹೊಸ ಪ್ಯಾಂಟು ಯಾವ ಕಾರಣಕ್ಕೂ ನೆನೆಯಬಾರದು ಎಂದು ಹೆಚ್ಚು ಕಡಿಮೆ ಮೊಣಕಾಲಿಗಿಂತಲೂ ಮೇಲಿನವರೆಗೂ ಅದನ್ನು ಮಡಿಚಿಕೊಂಡು, ನದಿ ದಾಟುತ್ತಿದ್ದೆವು.
ಕೆಲವೊಮ್ಮೆ ನೀರು ಸ್ವಲ್ಪ ಹೆಚ್ಚಾಗಿದೆ ಎನಿಸಿದಾಗ ಪ್ಯಾಂಟನ್ನು ತಲೆ ಮೇಲೆ ಹೊತ್ತು ಆ ಕಡೆ ದಡಕ್ಕೆ ಹೋದ ಮೇಲೆ ಹಾಕಿಕೊಳ್ಳುತ್ತಿದ್ದೆವು. ಇನ್ನು ಆಗ ನಮ್ಮ ಕೈಲಿ ಇರುತ್ತಿದ್ದ ೨-೩ ರೂಪಾಯಿಯಲ್ಲಿ ಜಾತ್ರೆಯಲ್ಲಿ ಬೆಂಡು ಬತ್ತಾಸು ಮತ್ತು ಕಳ್ಳೆಪುರಿಯನ್ನು ಕೊಂಡು ಅಲ್ಲೇ ಸ್ವಲ್ಪ ತಿಂದು ಮಿಕ್ಕಿದ್ದನ್ನು ಸ್ವಲ್ಪವೂ ನೆನೆಯದ ಹಾಗೆ ನದಿ ದಾಟಿಕೊಂಡು ಮನೆಗೆ ಒಯ್ಯುತ್ತಿದ್ದ ನೆನಪು ಈಗಲೂ ಮಾಸಿಲ್ಲ. ನಮ್ಮೂರು ನಂಜನಗೂಡಿನ ಜಾತ್ರೆ ಇಡೀ ಮೈಸೂರು ಚಾಮರಾಜ ನಗರ ಭಾಗಕ್ಕೆ ಬಹಳ ಜನಪ್ರಿಯವಾದ ಜಾತ್ರೆ. ಇಂತಹ ಜಾತ್ರೆಯಲ್ಲಿ ಈ ದಿನ ಪಾಲ್ಗೊಂಡಾಗ ನನ್ನೊಳಗೆ ಬಾಲ್ಯದ ನೆನಪುಗಳು ಮತ್ತೆ ಆವರಿಸಿದವು. ಬಹು ಮುಖ್ಯವಾಗಿ ನಾನು ಸಚಿವನಾದ ನಂತರದಲ್ಲಿ ಇಲ್ಲಿನ ಜನರು ಸುಲಭವಾಗಿ ನದಿ ದಾಟಲು ಅನುಕೂಲ ಅಗುವ ರೀತಿಯಲ್ಲಿ ನಂಜನಗೂಡು-ಹೆಜ್ಜಿಗೆ ಸೇತುವೆ ಮತ್ತು ನದಿಯ ಇಕ್ಕೆಲಗಳಲ್ಲಿ ಸುಸಜ್ಜಿತ ಮೆಟ್ಟಿಲುಗಳು, ಹಾಗೂ ಪರಶುರಾಮ ದೇವಾಲಯದ ಸುತ್ತ ಮಳೆ ಮತ್ತು ನದಿ ಪ್ರವಾಹದಿಂದ ಆಗುತ್ತಿದ್ದ ಕೆಸರನ್ನು ತಪ್ಪಿಸಲು ಸುತ್ತ ಕಾಂಕ್ರೀಟ್ ಹೊದಿಕೆ ನಿರ್ಮಾಣ ಹಾಗೂ ನಂಜನಗೂಡಿನ ದೇವಾಯದ ಸುತ್ತಲೂ ಉತ್ತಮ ಪಾರ್ಕಿಂಗ್ ವ್ಯವಸ್ಥೆ ಮತ್ತು ಕಾಂಕ್ರೀಟ್ ಹಾಸಿನ ವ್ಯವಸ್ಥೆಯನ್ನು ಮಾಡಿಸುವ ಅವಕಾಶ ನನ್ನದಾಗಿತ್ತು. ಬಾಲ್ಯದ ನೆನಪುಗಳನ್ನು ಹಾಗೆ ಕಾಪಾಡಿಕೊಂಡು ಅವಕಾಶ ಸಿಕ್ಕಾಗ ಅವುಗಳನ್ನು ಸಾಕಾರಗೊಳಿಸುವ ಸಂದರ್ಭ ಇದೆಯಲ್ಲಾ ಅದಕ್ಕೆ ಎಂದೂ ಬೆಲೆ ಕಟ್ಟಲು ಆಗದು. ಅದರಲ್ಲೂ ಜಾತಿ ಧರ್ಮ ಭೇದವಿಲ್ಲದೇ ಒಂದು ಮುಗ್ಧ ಆಚರಣೆಯಾಗಿ ಆಚರಿಸಲ್ಪಡುವ ನಂಜನಗೂಡಿನ ಜಾತ್ರೆ ಅಂದು ಹೇಗಿತ್ತೋ ಇಂದೂ ಹಾಗೆ ತನ್ನ ಆಚರಣೆಯ ಮುಗ್ಧತೆಯನ್ನು ಉಳಿಸಿಕೊಂಡಿದೆ. ಊರ ಜಾತ್ರೆಗೆ ಈ ದಿನ ಹೋದ ಕಾರಣ ಮನಸ್ಸಿನಲ್ಲಿ ಇದ್ದ ನೆನಪನ್ನು ಒಮ್ಮೆ ಹೇಳಿಕೊಳ್ಳಬೇಕು ಎನಿಸಿತು.
ಬೆಂಗಳೂರು ನಗರದ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಐಪಿಎಲ್ ಕ್ರಿಕೆಟ್ ಪಂದ್ಯಕ್ಕೆ ಟಿಕೆಟ್ ಕೊಡಿಸಿ ಎಂದು ಎಲ್ಲಾ ಪಕ್ಷಗಳ ಕೆಲವು ಶಾಸಕರು…
ಎಸ್ಎಸ್ಎಲ್ಸಿ ಹಿಂದಿ ಭಾಷೆಯ ಪರೀಕ್ಷೆ ಮಾ.೩೧ರಂದು ನಡೆಯಲಿದ್ದು, ಪರೀಕ್ಷೆ ಸಂದರ್ಭದಲ್ಲಿಯೇ ಸರ್ಕಾರ ಹಿಂದಿ ವಿಷಯದಲ್ಲಿ ಅಂಕಗಳನ್ನು ಪರಿಗಣಿಸುವುದಿಲ್ಲ, ಬದಲಾಗಿ ಗ್ರೇಡ್…
ಜನರಿಂದ ಚುನಾಯಿತರಾದ ಜನಪ್ರತಿನಿಧಿಗೆ ತನ್ನ ಕ್ಷೇತ್ರಕ್ಕೆ ಮಾಡಬೇಕಾಗಿರುವ ಯೋಜನೆಗಳ ಬಗ್ಗೆ ಸಾಕಷ್ಟು ಒಲವಿರಬೇಕು ಹಾಗೂ ಬದ್ಧತೆ ಇರಬೇಕು ಎನ್ನುವುದಕ್ಕೆ ತಮಗೆ…
‘ಸಾಮ್ರಾಜ್ಯಶಾಹಿ ದಾಳಿ ಹಾಗೂ ಅದರ ಪರಿಣಾಮಗಳು’ ಕುರಿತ ವಿಚಾರಸಂಕಿರಣ ಹೊಸದಿಲ್ಲಿ: ಪಶ್ಚಿಮ ಏಷ್ಯದಲ್ಲಿ ತಲೆದೋರಿರುವ ಬಿಕ್ಕಟ್ಟಿನ ಸಂದರ್ಭದಲ್ಲಿ ಭಾರತದ ಬದಲಾದ…
ನವೀನ್ ಡಿಸೋಜ ೩ ತಿಂಗಳಲ್ಲಿ ೧೩೮ ಎನ್ಡಿಪಿಎಸ್ ಪ್ರಕರಣ ದಾಖಲು; ೬ ಕೆ.ಜಿ. ೬೬೪ ಗ್ರಾಂ ಗಾಂಜಾ, ೩೫.೬೬ ಗ್ರಾಂ…
ಮಹಾದೇಶ್ ಎಂ.ಗೌಡ ಹನೂರು: ತಾಲ್ಲೂಕಿನ ೨೫ ಗ್ರಾಮ ಪಂಚಾಯಿತಿಗಳ ಪೈಕಿ ೨೧ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ೪೭ ಶುದ್ಧ ಕುಡಿಯುವ ನೀರಿನ…