• ತಂಗಂ ಜಿ.ಗೋಪಿನಾಥಂ
ಮೈಸೂರು: ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ಹೆಬ್ಬಾಗಿಲು ವೀರನಹೊಸಳ್ಳಿಯಿಂದ ಈ ಬಾರಿಯ ನಾಡಹಬ್ಬ ದಸರಾ ಮಹೋತ್ಸವದ ಗಜ ಪಯಣಕ್ಕೆ ಸಂಭ್ರಮ-ಸಡಗರದಿಂದ ಚಾಲನೆ ದೊರೆಯಿತು.
ಗಜಪಡೆಗೆ ಅರ್ಚಕ ಪ್ರಹ್ಲಾದ್ ರಾವ್ ನೇತೃತ್ವದಲ್ಲಿ ಪೂಜೆ ಸಲ್ಲಿಸಲಾಯಿತು. ಆನೆಗಳ ಪಾದಗಳನ್ನು ತೊಳೆದು ಪೂಜೆಸಲ್ಲಿಸಲಾಯಿತು. ಆ ಬಳಿಕ ವನದೇವತೆ ಹಾಗೂ ಚಾಮುಂಡೇಶ್ವರಿಗೆ ಪೂಜೆ ಸಲ್ಲಿಸಲಾಯಿತು. ನಂತರ ಬೆಳಿಗ್ಗೆ 10.40ಕ್ಕೆ ತುಲಾ ಲಗ್ನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ, ಅರಣ್ಯ ಸಚಿವ ಈಶ್ವರ್ ಬಿ.ಖಂಡ್ರೆ ಆನೆಗಳಿಗೆ ಪುಷ್ಪಾ ರ್ಚನೆ ನೆರವೇರಿಸುವ ಮೂಲಕ ಗಜಪಯಣಕ್ಕೆ ಚಾಲನೆ ನೀಡಿದರು.
ಈ ವೇಳೆ ಆನೆಗಳಿಗೆ ಪ್ರಿಯವಾದ ಕಡುಬು, ಮೋದಕ, ಚಕ್ಕುಲಿ, ಕೋಡುಬಾಳೆ, ಸಜ್ಜಪ್ಪ, ಕಬ್ಬು, ಬೆಲ್ಲ ಹಾಗೂ ವಿವಿಧ ಹಣ್ಣು-ಹಂಪಲು ಗಳನ್ನು ನೀಡಲಾಯಿತು. ಗಜಪಯಣಕ್ಕೆ ಚಾಲನೆ ನೀಡುತ್ತಿದ್ದಂತೆಯೇ ಆನೆಗಳು ಸೊಂಡಿಲು ಎತ್ತಿ ನಮಸ್ಕರಿಸಿದವು. ಜನರು ಹರ್ಷೋದ್ಗಾರ ಮುಗಿಲು ಮುಟ್ಟಿತು. ಜನರು ಶಿಳ್ಳೆ, ಚಪ್ಪಾಳೆ ಮೂಲಕ ಹರ್ಷ ವ್ಯಕ್ತಪಡಿಸಿದರು.
ವೀರನಹೊಸಳ್ಳಿಯಿಂದ ಅಂಬಾರಿ ಆನೆ ಅಭಿಮನ್ಯು ನೇತೃತ್ವದಲ್ಲಿ ಆನೆಗಳು ಮೈಸೂರಿ ನತ್ತ ಆಗಮಿಸಿದವು. ಅಭಿಮನ್ಯು(ಮತ್ತಿಗೋಡು ಶಿಬಿರ)ವಿನೊಂದಿಗೆ ಮತ್ತಿಗೋಡು ಶಿಬಿರದ ಏಕಲವ್ಯ ಮತ್ತು ಭೀಮ, ರಾಮಪುರದ ಲಕ್ಷ್ಮೀ, ಭೀಮನಕಟ್ಟೆಯ ವರಲಕ್ಷ್ಮೀ, ರಾಮಪುರದ ರೋಹಿತ್, ದುಬಾರೆ ಶಿಬಿರದ ಕಂಜನ್, ಧನಂ ಜಯ ಹಾಗೂ ಗೋಪಿ ಆನೆಗಳು ಅರಮನೆ ನಗರಿ ಮೈಸೂರಿನತ್ತ ಪಯಣ ಬೆಳೆಸಿದವು. ಒಟ್ಟು 7 ಗಂಡಾನೆಗಳು ಹಾಗೂ 2 ಹೆಣ್ಣಾನೆಗಳು ತಂಡದಲ್ಲಿ ಇವೆ.
ಕಣ್ಣನ ಸೆಳೆದ ಮೆರವಣಿಗೆ: ವೀರನಹೊಸಳ್ಳಿ ತಪಾಸಣಾ ಗೇಟ್ನಿಂದ ಆರಂಭಗೊಂಡ ಗಜಪಯಣ ಜಂಬೂಸವಾರಿಯನ್ನು ನೆನಪಿಸುವ ರೀತಿಯಲ್ಲಿ ಇತ್ತು. ಗಜಪಯಣಕ್ಕೆ ನಾದಸ್ವರ, ಪಟದ ಕುಣಿತ, ಪೂಜಾ ಕುಣಿತ, ಕಂಸಾಳೆ, ಡೊಳ್ಳು, ತಮಟೆ, ಚಂಡೆ ಸೇರಿದಂತೆ ವಿವಿಧ ಕಲಾ ತಂಡಗಳು ಮೆರುಗು ನೀಡಿದವು.
ಗಜಪಯಣ ಸಂದರ್ಭದಲ್ಲಿ ಅರಣ್ಯ ಸಚಿವ ಈಶ್ವರ ಬಿ.ಖಂಡ್ರೆ, ಚಾಮರಾಜನಗರ ಸಂಸದ ಸುನಿಲ್ ಬೋಸ್, ಶಾಸಕರಾದ ಜಿ.ಡಿ.ಹರೀಶ್ ಗೌಡ, ಡಿ.ರವಿಶಂಕರ್, ಅನಿಲ್ ಚಿಕ್ಕಮಾದು, ವಿಧಾನ ಪರಿಷತ್ ಸದಸ್ಯ ಕೆ.ವಿವೇಕಾನಂದ, ಸರ್ಕಾರದ ಗ್ಯಾರಂಟಿ ಯೋಜನೆಗಳ ಅನು ಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷರಾದ ಡಾ. ಪುಷ್ಪಾ ಅಮರನಾಥ್, ಕರ್ನಾಟಕ ವಸ್ತು ಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷ ಅಯೂಬ್ ಖಾನ್, ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಕೆ. ಮರೀಗೌಡ, ಜಿಲ್ಲಾಧಿಕಾರಿ ಜಿ.ಲಕ್ಷ್ಮೀ ಕಾಂತ ರೆಡ್ಡಿ, ಜಿಪಂ ಸಿಇಒ ಕೆ.ಎಂ.ಗಾಯತ್ರಿ, ದಕ್ಷಿಣ ವಲಯ ಐಜಿಪಿ ಬೋರಲಿಂಗಯ್ಯ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಷ್ಣು ವರ್ಧನ್, ಮೈಸೂರು ವೃತ್ತದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಮಾಲತಿ ಪ್ರಿಯಾ, ಡಿಸಿಎಫ್ ಗಳಾದ ಐ.ಬಿ.ಪ್ರಭುಗೌಡ, ಕೆ.ಎನ್.ಬಸವ ರಾಜು, ಅರಮನೆ ಮಂಡಳಿ ಉಪ ನಿರ್ದೇಶಕ ಟಿ.ಎಸ್.ಸುಬ್ರಹ್ಮಣ್ಯ, ದೊಡ್ಡ ಹೆಣ್ಣೂರು ಗ್ರಾಪಂ ಅಧ್ಯಕ್ಷೆ ಅಂಬಿಕಾ ಮತ್ತಿತರರು ಹಾಜರಿದ್ದರು.
ಗಜಪಡೆಯೊಂದಿಗೆ ಫೋಟೋ ಕ್ಲಿಕಿಸಿಕೊಂಡ ಜನ: ಅಲಂಕೃತಗೊಂಡ ಆನೆಗಳನ್ನು ಕಣ್ಣುಂಬಿ ಕೊಳ್ಳಲು ಜಮಾಯಿಸಿದ್ದ ಸುತ್ತಮುತ್ತಲಿನ ಹಾಡಿ, ಗ್ರಾಮಗಳ ಜನರು, ಅಧಿಕಾರಿ ಗಳು, ವಿವಿಧ ಇಲಾಖೆ ನೌಕರರು ಗಜಪಡೆಯ ಸಾರಥಿ ಅಭಿಮನ್ಯು ಹಾಗೂ ಇತರೆ ಆನೆಗಳೊಂದಿಗೆ ಫೋಟೋ ಕ್ಲಿಕ್ಕಿಸಿಕೊಂಡು ಸಂಭ್ರಮಿಸಿದರು
ಆನೆ ಲದ್ದಿ ಸಂಗ್ರಹಿಸಿದ ವ್ಯಕ್ತಿ: ವೀರನಹೊಸಳ್ಳಿ ಅರಣ್ಯ ಇಲಾಖೆಯ ವಲಯ ಕಚೇರಿಯಿಂದ ಆಶ್ರಮ ಶಾಲೆಯವರೆಗೆ 1 ಕಿ.ಮೀ. ದೂರ ಕ್ಯಾಪ್ಟನ್ ಅಭಿಮನ್ಯು ನೇತೃತ್ವದ ಆನೆಗಳು ಹೆಜ್ಜೆ ಹಾಕಿದ್ದವು. ಈ ವೇಳೆ ಆನೆಗಳು ಹಾಕಿದ್ದ ಲದ್ದಿಯನ್ನು ವ್ಯಕ್ತಿಯೋರ್ವ ಸಂಗ್ರಹ ಮಾಡುತ್ತಿದ್ದ ದೃಶ್ಯ ಕಂಡುಬಂತು.
ಫಲತಾಂಬೂಲ ನೀಡಿದ ಸಚಿವರು: ಗಜಪಡೆಯ ಮೊದಲ ತಂಡದ 9 ಆನೆ ಗಳ ಮಾವುತರು, ಕಾವಾಡಿಗಳಿಗೆ ಅರಣ್ಯ ಸಚಿವ ಈಶ್ವರ್ ಬಿ.ಖಂಡ್ರೆ ಫಲ ತಾಂಬೂಲ ನೀಡಿ ಆಹ್ವಾನಿಸಿದರು. ಈ ವೇಳೆ ಅರಣ್ಯ ಇಲಾಖೆಯ ಕೆಲ ಅಧಿಕಾರಿಗಳಿಗೂ ಫಲ-ತಾಂಬೂಲ ನೀಡಲಾಯಿತು.
ಆ.23ರಂದು ಅರಮನೆ ಪ್ರವೇಶ: ಆಗಸ್ಟ್ 23ರಂದು ಬೆಳಿಗ್ಗೆ 10 ಗಂಟೆಗೆ ತುಲಾ ಲಗ್ನದಲ್ಲಿ ಮೈಸೂರಿನ ಅರಮನೆಯ ಜಯಮಾರ್ತಾಂಡ ದ್ವಾರದ ಮೂಲಕ ಆರಮನೆ ಆವರಣವನ್ನು ಪ್ರವೇಶಿಸಲಿವೆ.
ಹೊಸದಿಲ್ಲಿ: ತಮಿಳುನಾಡಿನ ಕೊಯಮತ್ತೂರಿನಲ್ಲಿರುವ ಸದ್ಗುರು ಜಗ್ಗಿ ವಾಸುದೇವ್ ಅವರ ಆಶ್ರಮ ಸೇರಲು ತನ್ನ ಇಬ್ಬರು ಹೆಣ್ಣುಮಕ್ಕಳನ್ನು ಬ್ರೈನ್ವಾಶ್ ಮಾಡಲಾಗಿದೆ ಎಂಬ…
ಮಡಿಕೇರಿ: ಮಗನಿಂದಲೇ ತಂದೆ ಹತ್ಯೆಯಾದ ಘಟನೆ ಶ್ರೀಮಂಗಲ ಪೊಲೀಸ್ ಠಾಣಾ ವ್ಯಾಪ್ತಿಯ ಚಿಕ್ಕಮಂಡೂರು ಗ್ರಾಮದಲ್ಲಿ ನಡೆದಿದೆ. ಸಿ ಎನ್ ನಾಣಯ್ಯ…
ಜಾರಿ ನಿರ್ದೇಶನಾಲಯದ ದಾಳಿಗೆ ರಾಜಕೀಯ ಕಾರಣವಲ್ಲ, 3-4 ಸಾವಿರ ಕೋಟಿ ರೂ. ಅಕ್ರಮ ನಡೆದಿದೆ ಎಂದು ಹೇಳಿದ್ದೇ ಕಾಂಗ್ರೆಸ್ನವರು: ಪ್ರತಿಪಕ್ಷ…
ನವದೆಹಲಿ: ನನಗೆ ಸಹೋದರಿಯೇ ಇಲ್ಲ ಮತ್ತು ಗೋಪಾಲ್ ಜೋಶಿ ಮೇಲಿನ ಪ್ರಕರಣಕ್ಕೂ ತಮಗೂ ಯಾವುದೇ ಸಂಬಂಧವಿಲ್ಲ ಎಂದು ಕೇಂದ್ರ ಸಚಿವ…
ಮಂಡ್ಯ ಟೂ ಇಂಡಿಯಾ; ಸಕ್ಕರೆ ನಾಡಿನಲ್ಲಿ 2 ದಿನಗಳ ಬೃಹತ್ ಉದ್ಯೋಗ ಮೇಳ 150ಕ್ಕೂ ಹೆಚ್ಚು ಕಂಪನಿಗಳ ಭಾಗಿ, ಸಾವಿರಾರು…
ಮೈಸೂರು: ಮುಡಾ ಮೇಲಿನ ಇಡಿ ಕಾರ್ಯಾಚರಣೆ ಕೇವಲ ಸಿಎಂ ಸಿದ್ದರಾಮಯ್ಯ ಅವರ ಕುಟುಂಬದವರ ಪ್ರಕರಣವಲ್ಲ. ಸಂಪೂರ್ಣ ಮುಡಾ ಅಕ್ರಮದ ಬಗ್ಗೆ…