Andolana originals

ಬೇಸಿಗೆ ತಾಪಮಾನದಲ್ಲೂ ಉತ್ತಮ ಹೈನುಗಾರಿಕೆ

ಬೇಸಿಗೆಯಲ್ಲೂ ೨.೮೦ ಲಕ್ಷ ಲೀ. ಹಾಲು ಸಂಗ್ರಹ; ಚಾಮುಲ್ ಇತಿಹಾಸದಲ್ಲಿ ಹೊಸ ಮೈಲಿಗಲ್ಲು.

ಚಾಮರಾಜನಗರ: ಚಾಮರಾಜನಗರ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ (ಚಾಮುಲ್) ಬಿರು ಬೇಸಿಗೆಯ ನಡುವೆಯೂ ಹಾಲು ಸಂಗ್ರಹದಲ್ಲಿ ಈ ಬಾರಿ ಹಿಂದೆ ಬಿದ್ದಿಲ್ಲ. ಇದೇ ಮೊದಲ ಬಾರಿಗೆ ಎಂದಿನಂತೆ  ಯಥಾಸ್ಥಿತಿ ಕಾಪಾಡಿಕೊಂಡು ಹೋಗುತ್ತಿದ್ದು ದಿನಾಲೂ ೨.೮೦ ಲಕ್ಷ ಲೀಟರ್ ಹಾಲು ಸಂಗ್ರಹವಾಗುತ್ತಿದೆ.

ಬೇಸಿಗೆಗೂ ಮೊದಲು ಡಿಸೆಂಬರ್‌ನಲ್ಲಿ ಪ್ರತಿನಿತ್ಯ ಸರಾಸರಿ ೨.೮೦ರಿಂದ ೨.೯೦ ಲಕ್ಷ ಲೀಟರ್ ಹಾಲು ಚಾಮುಲ್‌ಗೆ ರೈತರಿಂದ ಪೂರೈಕೆ ಆಗುತಿತ್ತು. ಪ್ರಸ್ತುತ ಬೇಸಿಗೆಯ ತಾಪಮಾನ ಇದ್ದಾಗಲೂ ೨.೮೦ ಲಕ್ಷ ಲೀಟರ್ ಸಂಗ್ರಹ ಆಗುತ್ತಿರುವುದು ಚಾಮುಲ್ ಇತಿಹಾಸದಲ್ಲೇ ಹೊಸ ಮೈಲಿಗಲ್ಲಾಗಿದೆ.ಸಾಮಾನ್ಯವಾಗಿ ಬೇಸಿಗೆ ದಿನಗಳಲ್ಲಿ ಮೇವು -ನೀರಿನ ಕೊರತೆಯಿಂದ ಹಾಲು ಸಂಗ್ರಹ ಕಡಿಮೆಯಾಗುತ್ತದೆ. ಎಲ್ಲೆಡೆ ಈ ವಾತಾವರಣ ಸಾಮಾನ್ಯ.

ಸದ್ಯ ಮಾರ್ಚ್‌ಗೆ ಕಾಲಿಟ್ಟು ಬಿಸಿಲು ದಿನೇ ದಿನೇ ಏರುಗತಿಯಲ್ಲಿ ಸಾಗುತ್ತಿದ್ದಾಗ್ಯೂ ಹೆಚ್ಚು ಹಾಲು ಸಂಗ್ರಹ ವಾಗುತ್ತಿರುವುದು ಗಮನಾರ್ಹ ಸಂಗತಿಯೇ ಸರಿ. ರೈತರು ಸರಬರಾಜು ಮಾಡುವ ಪ್ರತಿ ಲೀಟರ್ ಹಾಲಿಗೆ ಸದ್ಯ ೩೫.೨೦ ರೂ. ನೀಡಲಾಗುತ್ತಿದೆ. ಇದರೊಟ್ಟಿಗೆ ರಾಜ್ಯ ಸರ್ಕಾರ ಲೀಟರ್ ಹಾಲಿಗೆ ೫ ರೂ. ಪ್ರೊತ್ಸಾಹಧನ ನೀಡುತ್ತಿದೆ. ಹಾಲಿಗೆ ದರ ನೀಡುವಾಗ ಅದರ ಗುಣಮಟ್ಟ ಪರಿಶೀಲಿಸಲಾಗುತ್ತದೆ. ಇದುವರೆಗಿನ ಹಳೆ ಪದ್ಧತಿ ಕೈ ಬಿಟ್ಟು ಆಟೋ ಮ್ಯಾಟಿಕ್ ಮಿಲ್ಕ್ ಕಲೆಕ್ಷನ್ ಸಾಫ್ಟ್ ವೇರ್ (ತಂತ್ರಾಂಶ) ಮುಖೇನ ಹಾಲಿನ ಗುಣಮಟ್ಟವನ್ನು ಈಗ ಪರೀಕ್ಷೆ ಮಾಡಲಾಗುತ್ತಿದೆ. ಕೆಲವೇ ಸೆಕೆಂಡ್‌ಗಳಲ್ಲಿ ಹಾಲಿನ ಪ್ಯಾಟ್, ಜಿಡ್ಡಿನ ಅಂಶ ಇತ್ಯಾದಿ ತಿಳಿಯುವ ಈ ಆಧುನಿಕ ವ್ಯವಸ್ಥೆ ಜಿಲ್ಲೆಯ ೪೬೫ ಹಾಲು ಉತ್ಪಾದಕರ ಸಹಕಾರ ಸಂಘ (ಡೇರಿ)ಗಳ ಪೈಕಿ ೪೧೦ರಲ್ಲಿ ಈಗಾಗಲೇ ಜಾರಿಯಲ್ಲಿದ್ದು, ಉಳಿದೆಡೆ ಇಷ್ಟರಲ್ಲೇ ಅಳವಡಿಸಲಾಗುವುದು ಎಂದು ಚಾಮುಲ್ ಅಧ್ಯಕ್ಷರಾದ ಎಂ.ನಂಜುಂಡಸ್ವಾಮಿ ಮಾಹಿತಿ ನೀಡಿದರು.

ಜಿಲ್ಲೆಯಲ್ಲಿ ೩೩ ಸಾವಿರ ಹಾಲು ಉತ್ಪಾದಕರು ಇದ್ದಾರೆ. ಚಾಮುಲ್ ಹಾಲು ಉತ್ಪಾದನೆಗೆ ಉತ್ತೇಜನ ನೀಡುವ ಕೆಲಸವನ್ನು ಮಾಡುತ್ತಾ ಬಂದಿದೆ. ಮೇವು ತುಂಡರಿಸುವ ಯಂತ್ರ, ಹಾಲು ಕರೆಯುವ ಯಂತ್ರ ಹೀಗೆ ಉತ್ಪಾದನೆಗೆ ಪೂರಕವಾದ ಪರಿಕರ, ಯಂತ್ರ ಇತ್ಯಾದಿ ಖರೀದಿಸುವ ರೈತರಿಗೆ ಖರೀದಿ ವಸ್ತುವಿನ ಒಟ್ಟು ಬೆಲೆಯಲ್ಲಿ ಶೇ.೫೦ರಷ್ಟು ಹಣವನ್ನು ಚಾಮುಲ್ ಭರಿಸುತ್ತಿದೆ. ಕಳೆದ ವರ್ಷ ಇದಕ್ಕಾಗಿ ಸುಮಾರು ೧೫ ಲಕ್ಷ ರೂ. ಅನುದಾನ ವಿನಿಯೋಗ ಮಾಡಲಾಗಿತ್ತು. ಈ ವರ್ಷ ೧.೫೦ ಕೋಟಿ ರೂ. ಅನುದಾನ ಬಳಕೆ ಮಾಡಲಾಗುತ್ತಿದ್ದು, ೭೦೦ ರೈತರು ಶೇ.೫೦ರ ಅನುದಾನದ ಪ್ರಯೋಜನವನ್ನು ಈ ಬಾರಿ ಪಡೆಯುತ್ತಿರುವುದು ಹೆಗ್ಗಳಿಕೆ ವಿಚಾರ ಎಂದು ಚಾಮುಲ್ ವ್ಯವಸ್ಥಾಪಕ ನಿರ್ದೇಶಕ ಕೆ. ರಾಜಕುಮಾರ್ ತಿಳಿಸಿದರು. ಚಾಮುಲ್ ವಾರ್ಷಿಕ ವಹಿವಾಟು ಹಿಂದಿನ ವರ್ಷಕ್ಕಿಂತ ಈ ಬಾರಿ ಇನ್ನೂ ಉತ್ತಮವಾಗಿದೆ. ಕಳೆದ ವರ್ಷ ೪೯೮.೬೪ ಕೋಟಿ ರೂ. ವಹಿವಾಟು ನಡೆಸಿತ್ತು. ಈ ಬಾರಿ ೫೮೦ ಕೋಟಿ ರೂ. ವಹಿವಾಟು ನಿರೀಕ್ಷಿಸಿದ್ದು ಗುರಿ ತಲುಪುತ್ತೇವೆ ಎಂಬ ವಿಶ್ವಾಸವನ್ನು ರಾಜಕುಮಾರ್ ವ್ಯಕ್ತಪಡಿಸಿದ್ದಾರೆ.

ಮಜ್ಜಿಗೆ, ಲಸ್ಸಿ ಮಾರಾಟ ಹೆಚ್ಚಳ…: 

ಬೇಸಿಗೆ ಹಿನ್ನೆಲೆಯಲ್ಲಿ ಬಾಯಾರಿಕೆ ತಣಿಸಲು ಜನತೆ ಮಜ್ಜಿಗೆ, ಲಸ್ಸಿಯತ್ತ ಹಿಂದಿಗಿಂತ ಹೆಚ್ಚಿನ ಪ್ರಮಾಣದಲ್ಲಿ ಜಾರಿದ್ದಾರೆ. ಮಜ್ಜಿಗೆ ಎರಡೂವರೆಯಿಂದ ಮೂರು ಸಾವಿರ ಲೀಟರ್, ಲಸ್ಸಿ ೬೦೦ ಲೀಟರ್ ಮಾರಾಟ ಆಗುತ್ತಿದೆ ಎಂದು ಚಾಮುಲ್ ಮೂಲಗಳು ತಿಳಿಸಿವೆ.

” ಕಳೆದ ಏಪ್ರಿಲ್ ೧ರಿಂದ ಪ್ರತಿ ಲೀಟರ್ ಹಾಲಿಗೆ ೪ ರೂ. ಹೆಚ್ಙಳ ಮಾಡಿದ್ದು ಅದೇ ದರವನ್ನು ಹಾಲು ಉತ್ಪಾದಕರಿಗೆ ನೀಡಲಾಗುತ್ತಿದೆ. ವಿಮೆ ಸೇರಿದಂತೆ ನಾನಾ ಸೌಲಭ್ಯಗಳನ್ನು ನೀಡಲಾಗುತ್ತಿದೆ. ಇದೆಲ್ಲದರ ಪರಿಣಾಮವಾಗಿ ಬಯಲು ಮೇವು ಇಲ್ಲದಿದ್ದರೂ ಅದಕ್ಕೆ ಪರ್ಯಾಯವಾದ ಮೇವು, ತಿಂಡಿ ನೀಡಿ ರಾಸುಗಳನ್ನು ರೈತರು ಸಾಕಾಣಿಕೆ ಮಾಡುತ್ತಿರುವುದರಿಂದ ಹಾಲು ಸಂಗ್ರಹದಲ್ಲಿ ಯಾವುದೇ ಇಳಿಕೆ ಯಾಗಿ ಲ್ಲ. ಬೇಸಿಗೆಯಲ್ಲೂ ಹಿಂದಿನಷ್ಟೇ ಹಾಲು ಸಂಗ್ರಹ ಆಗುತ್ತಿರುವುದು ಒಳ್ಳೆಯ ಬೆಳವಣಿಗೆ.”

-ಎಂ.ನಂಜುಂಡಸ್ವಾಮಿ, ಚಾಮುಲ್ ಅಧ್ಯಕ್ಷರು

” ಹೈನುಗಾರಿಕೆ ಲಾಭದಾಯಕ ಉದ್ಯಮ ಎಂದು ರೈತರು ಇತ್ತ ಹೆಚ್ಚಿನ ಸಂಖ್ಯೆಯಲ್ಲಿ ಮುಖ ಮಾಡತೊಡಗಿದ್ದಾರೆ. ಚಾಮುಲ್ ಕಳೆದ ಬಾರಿ ೩.೩೪ ಕೋಟಿ ರೂ. ಲಾಭದಲ್ಲಿತ್ತು. ಈ ವರ್ಷ ಅದಕ್ಕಿಂತಲೂ ಹೆಚ್ಚಿನ ಲಾಭ ಗಳಿಸುವ ಭರವಸೆಯಲ್ಲಿ ಇದ್ದೇವೆ.”

– ಕೆ.ರಾಜಕುಮಾರ್, ಚಾಮುಲ್ ವ್ಯವಸ್ಥಾಪಕ ನಿರ್ದೇಶಕ 

 

 

 

ಆಂದೋಲನ ಡೆಸ್ಕ್

Recent Posts

ಓದುಗರ ಪತ್ರ: ಮೇಕೆ.. ಡಿಕೆ !

ಮೇಕೆ.. ಡಿಕೆ ! ಅಂದು, ಹರಿಯುವ ಕಾವೇರಿ ನದಿಯ ಈ ಕಡೆಯಿಂದ ಆ ಕಡೆಗೆ ಜಿಗಿದು ದಾಟಿ ಬಿಟ್ಟಿತಂತೆ ಮೇಕೆ…

15 hours ago

ಓದುಗರ ಪತ್ರ: ಮಂತ್ರಾಲಯ ಮಠದ ಕಾರ್ಯ ಜನಮೆಚ್ಚುವಂತಹದ್ದು

ಕುಡಿಯುವ ನೀರಿನ ಸಮಸ್ಯೆ ನೀಗಿಸಲು ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿ ಮಠದ ವತಿಯಿಂದ ಸುಮಾರು ೪೦ ಎಕರೆ ಪ್ರದೇಶದಲ್ಲಿ ಜಲಾಶಯ…

15 hours ago

ಓದುಗರ ಪತ್ರ: ಕಾವೇರಿ: ಶಾಶ್ವತ ಪರಿಹಾರ ಅಗತ್ಯ

ಕಳೆದ ವಾರ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರವು ತಮಿಳುನಾಡಿಗೆ ಮುಂದಿನ ೧೫ ದಿನಗಳ ಕಾಲ, ಪ್ರತಿ ದಿನ ೩,೫೦೦ ಕ್ಯೂಸೆಕ್…

15 hours ago

ಕಾಯಕಲ್ಪಕ್ಕೆ ಕಾದಿವೆ ನಿರ್ಲಕ್ಷಿತ ಸರ್ಕಾರಿ ಆಸ್ತಿಗಳು

ವಸಂತಕುಮಾರ್ ಮೈಸೂರು ಮಠ, ಸಾಮಾಜಿಕ ಹೋರಾಟಗಾರ ಮೈಸೂರಿನಲ್ಲಿ ಹಲವೆಡೆ ದುಸ್ಥಿತಿಯಲ್ಲಿರುವ ಹಾಗೂ ಅನೈರ್ಮಲ್ಯ ತಾಣವಾಗಿರುವ ಹಲವು ಸರ್ಕಾರಿ ಕಟ್ಟಡಗಳು, ವಾಚನಾಲಯ…

15 hours ago

ಮೀಸಲಾತಿ ಸೌಲಭ್ಯಕ್ಕೆ ವಿರೋಧವೇಕೆ?

ಟಿ.ಕೆ.ಹರೀಶ್ ಸಾಮಾಜಿಕ ನ್ಯಾಯ ಒದಗಿಸುವ ಸಂವಿಧಾನಾತ್ಮಕ ವ್ಯವಸ್ಥೆ ಮೀಸಲಾತಿ ಭಾರತದಲ್ಲಿ ಮೀಸಲಾತಿ ವ್ಯವಸ್ಥೆಯನ್ನು ಸಾಮಾಜಿಕ ನ್ಯಾಯದ ಸಾಧನವಾಗಿ ಜಾರಿಗೆ ತರಲಾಗಿದೆ.…

15 hours ago

ಬಿರುಕು ಬಿಡುತ್ತಿರುವ ಕೆರೆ ಕೋಡಿಯ ಗೋಡೆ

ದೂರ ನಂಜುಂಡಸ್ವಾಮಿ ದೂರ ಗ್ರಾಮದ ಕೆರೆಯ ಪೂರ್ವಭಾಗದ ಕೋಡಿಯನ್ನು ದುರಸ್ತಿಪಡಿಸಿ, ಹೂಳು ತೆಗೆಯಲು ಆಗ್ರಹ ದೂರ: ಮೈಸೂರು ತಾಲ್ಲೂಕಿನ ಜಯಪುರ…

18 hours ago