Andolana originals

ಸರ್ವಜನ ಹಿತಕಾರಿ ಬಜೆಟ್

ಆರ್.ಟಿ.ವಿಠ್ಠಲಮೂರ್ತಿ

ಸಾಮಾಜಿಕ ನ್ಯಾಯದ ರಥ ಎಳೆಯಲು ಸಿಎಂ ಗರಿಷ್ಟ ಯತ್ನ 

ಬೆಂಗಳೂರು: ರಾಜ್ಯದ ಆದಾಯ ಮೂಲಗಳಿಗೆ ಹೊಡೆತ ಬಿದ್ದರೂ ಸಾಮಾಜಿಕ ನ್ಯಾಯದ ರಥವನ್ನು ಎಳೆಯಲು ಗರಿಷ್ಟ ಯತ್ನ ನಡೆಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಾಡಿನ ಸರ್ವಜನರ ಹಿತ ಕಾಪಾಡುವ ಹೊಸ ಹೊಸ ಯೋಜನೆಗಳನ್ನು ೪.೪೭ ಲಕ್ಷ ಕೋಟಿ ರೂ. ಗಾತ್ರದ ಬಜೆಟ್‌ನ್ನು ಮಂಡಿಸಿದ್ದಾರೆ.

ಪ್ರತಿಕೂಲ ಆರ್ಥಿಕ ವಿದ್ಯಮಾನಗಳ ಹಿನ್ನೆಲೆಯಲ್ಲಿಯೂ ತಮ್ಮ ಬಜೆಟ್ ಗಾತ್ರಕ್ಕೆ ಧಕ್ಕೆಯಾಗದಂತೆ ನೋಡಿಕೊಂಡಿರುವ ಮುಖ್ಯಮಂತ್ರಿಗಳು ಗ್ಯಾರಂಟಿ ಯೋಜನೆಗಳನ್ನು ಪರಿಷ್ಕರಿಸುವ ಒತ್ತಡವಿದ್ದರೂ ಅದನ್ನು ಲೆಕ್ಕಿಸದೆ, ಗ್ಯಾರಂಟಿ ಯೋಜನೆಗಳನ್ನು ಉಳಿಸಿಕೊಳ್ಳುವುದಲ್ಲದೆ ಬಡವರು, ರೈತರು, ಮಹಿಳೆಯರು, ಮಕ್ಕಳು ಉದ್ಯಮಿಗಳು ಸೇರಿದಂತೆ ಸಮಾಜದ ಸರ್ವರ ಹಿತ ಕಾಯುವ ಯತ್ನ ಮಾಡಿದ್ದಾರೆ.

ವಿಧಾನಸಭೆಯಲ್ಲಿ ಶುಕ್ರವಾರ ಅವರು ಮಂಡಿಸಿದ ಬಜೆಟ್‌ಗೆ ರಾಜ್ಯದ ಸ್ವಂತ ತೆರಿಗೆಗಳ ಮೂಲಕ ೨.೨೦ ಲಕ್ಷ ಕೋಟಿ ರೂ. ಹರಿದು ಬರಲಿದ್ದರೆ, ತೆರಿಗೆಯೇತರ ಮೂಲ ಗಳಿಂದ ೧೬ ಸಾವಿರ ಕೋಟಿ ರೂ. ಆದಾಯ ಬರಲಿದೆ.

ಇದೇ ರೀತಿ ಕೇಂದ್ರ ಸರ್ಕಾರದ ವಿವಿಧ ಬಾಬ್ತುಗಳಿಂದ ೭೯ ಸಾವಿರ ಕೋಟಿ ರೂ.ಗಳಷ್ಟು ಹಣ ದೊರೆಯಲಿದ್ದರೆ, ಸಾಲದ ಪ್ರಮಾಣ ೧.೩೨ ಲಕ್ಷ ಕೋಟಿ ರೂ.ಗಳಷ್ಟಿದ್ದು ಬಜೆಟ್‌ನ ಆದಾಯ ಮೂಲಗಳಲ್ಲಿ ನಂಬರ್ ಟೂ ಸ್ಥಾನ ಗಳಿಸಿಕೊಂಡಿದೆ.

ಹೀಗೆ ಹೆಚ್ಚಿನ ಸಾಲ ಮಾಡುವ ಅನಿವಾರ್ಯತೆಯ ಬಗ್ಗೆ ನಿಖರವಾಗಿ ಹೇಳದಿದ್ದರೂ ಕೇಂದ್ರ ಸರ್ಕಾರದ ಧೋರಣೆಗಳ ವಿರುದ್ಧ ಬಜೆಟ್ ಭಾಷಣದಲ್ಲಿ ಅಸಮಾಧಾನ ವ್ಯಕ್ತಪಡಿಸಿರುವ ಸಿದ್ದರಾಮಯ್ಯ ಅವರು, ಕೇಂದ್ರ ಸರ್ಕಾರದ ಧೋರಣೆಗಳು ರಾಜ್ಯಕ್ಕೆ ಯಾವ್ಯಾವ ಮೂಲಗಳಿಂದ ಹೊಡೆತ ಕೊಟ್ಟಿದೆ ಎಂಬುದನ್ನು ಸಾದ್ಯಂತವಾಗಿ ವಿವರಿಸಿದ್ದಾರೆ.

ರಾಜ್ಯ ಸರ್ಕಾರಕ್ಕೆ ಕೇಂದ್ರ ಸರ್ಕಾರದ ಪಾಲು ಕೊಡುವಿಕೆಯಲ್ಲಿ ಆಗಿರುವ ತಾರತಮ್ಯ, ಹಲವು ವಸ್ತುಗಳ ಮೇಲಿನ ಜಿ.ಎಸ್.ಟಿ. ಯನ್ನು ಕಡಿಮೆ ಮಾಡುವ ನಿರ್ಧಾರದಿಂದ ರಾಜ್ಯಕ್ಕೆ ಆಗಿರುವ ನಷ್ಟ ಮತ್ತು ಕೇಂದ್ರ ಸರ್ಕಾರದ ವಿವಿಧ ಯೋಜನೆಗಳಿಗೆ ಸಿಗುತ್ತಿದ್ದ ಪಾಲಿನಲ್ಲಿ ಕೊರತೆಯಾಗಿರುವುದೂ ಸೇರಿದಂತೆ ಕೇಂದ್ರದ ಧೋರಣೆಯಿಂದ ರಾಜ್ಯದ ಮೇಲೆ ಆರ್ಥಿಕ ಹೊರೆ ಬಿದ್ದಿದೆ. ಎಂದು ಸಿದ್ದರಾಮಯ್ಯ ಬಜೆಟ್ ಭಾಷಣದಲ್ಲಿ ವಿವರಿಸಿದ್ದಾರೆ.

ಹೀಗೆ ಕೇಂದ್ರದ ಧೋರಣೆಯ ಹಿನ್ನೆಲೆಯಲ್ಲಿ ಆಗಿರುವ ಆರ್ಥಿಕ ನಷ್ಟವನ್ನು ಮುಖ್ಯವಾಗಿಟ್ಟುಕೊಂಡಿದ್ದರೆ ಸರ್ಕಾರದ ಗ್ಯಾರಂಟಿ ಯೋಜನೆಗಳಿಗೆ ಕತ್ತರಿ ಪ್ರಯೋಗ ಮಾಡಬಹುದಿತ್ತಾದರೂ, ಸಿದ್ದರಾಮಯ್ಯ ಅದನ್ನು ಮಾಡಲು ಹೋಗಿಲ್ಲ. ಅದೇ ಕಾಲಕ್ಕೆ ಕೃಷಿ ವ್ಯವಸ್ಥೆಗೆ ಶಕ್ತಿ ತುಂಬಲು ಪ್ರಯತ್ನಿಸಿರುವ ಸಿದ್ದರಾಮಯ್ಯ ಅವರು, ಶಿಕ್ಷಣ, ಲೋಕೋಪಯೋಗಿ, ಸಮಾಜ ಕಲ್ಯಾಣ,ನೀರಾವರಿ, ಇಂಧನ, ಆರೋಗ್ಯ ಸೇರಿದಂತೆ ವಿವಿಧ ಬಾಬ್ತುಗಳಿಗೆ ಗಣನೀಯ ಪ್ರಮಾಣದ ಹಣ ನೀಡಿದ್ದಾರೆ.

ಈ ಮಧ್ಯೆ ಇಡೀ ಜಗತ್ತನ್ನು ಬೆರಗಾಗಿಸಿರುವ ಕೃತಕ ಬುದ್ಧಿಮತ್ತೆಯ ತಂತ್ರಜ್ಞಾನಕ್ಕೆ ಆದ್ಯತೆ ನೀಡಲು ನಿರ್ಧರಿಸಿರುವ ಸಿದ್ದರಾಮಯ್ಯ ಅವರ ಬಜೆಟ್ ರಾಜ್ಯದ ಸರ್ವಾಂಗೀಣ ಅಭಿವೃದ್ಧಿಯ ಕಡೆ ನೋಟ ಬೀರಿದೆ. ಹೀಗೆ ಪ್ರತಿಕೂಲ ಆರ್ಥಿಕ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಸಾಮಾಜಿಕ ನ್ಯಾಯದ ರಥದ ನಡಿಗೆಗೆ ತೊಂದರೆಯಾಗದಂತೆ ನೋಡಿಕೊಂಡಿರುವ ಅವರು, ಕರ್ನಾಟಕದ ಅಭಿವೃದ್ಧಿಗೆ ನೆರವಾಗುವ ಯೋಜನೆಗ ಳಿಗೂ ಹೆಚ್ಚು ಒತ್ತು ನೀಡಿದ್ದಾರೆ.

ಅಂದ ಹಾಗೆ ಸಿದ್ದರಾಮಯ್ಯ ಅವರು ೨೦೨೬-೨೭ನೇ ಸಾಲಿನ ಬಜೆಟ್ ಮಂಡಿಸುವ ಮುನ್ನ ಆರ್ಥಿಕ ತಜ್ಞರು, ಬಜೆಟ್ ಗಾತ್ರ ಕಳೆದ ಬಾರಿಗಿಂತ ಹೆಚ್ಚಾಗುವುದು ಕಷ್ಟ ಎಂಬ ಭಾವನೆ ವ್ಯಕ್ತಪಡಿಸಿದ್ದರು. ಕಳೆದ ವರ್ಷ ನಾಲ್ಕು ಲಕ್ಷದ ಏಳು ಸಾವಿರ ಕೋಟಿ ರೂಪಾಯಿಗಳ ಬಜೆಟ್ ಮಂಡಿಸಿದ್ದ ಸಿದ್ದರಾಮಯ್ಯ ಅವರು ಈ ಬಾರಿ ಕೇಂದ್ರದ ಅಸಹಕಾರ ಧೋರಣೆಯ ಹಿನ್ನೆಲೆಯಲ್ಲಿ ಕಳೆದ ವರ್ಷ ಮಂಡಿಸಿದ ಬಜೆಟ್ ಗಾತ್ರವನ್ನು ಮೀರಿ ಮುಂದೆ ಹೋಗುವುದು ಕಷ್ಟ ಎಂಬ ಲೆಕ್ಕಾಚಾರದಲ್ಲಿದ್ದರು. ಆದರೆ ವಿವಿಧ ಮೂಲಗಳಿಂದ ಸರ್ಕಾರದ ಆದಾಯವನ್ನು ಹೆಚ್ಚಳ ಮಾಡಿಕೊಂಡ ಸಿದ್ದರಾಮಯ್ಯ ಅವರು, ಆರ್ಥಿಕ ಶಿಸ್ತಿನಡಿಯಲ್ಲಿಯೇ ಸಾಲದ ಪ್ರಮಾಣವನ್ನು ನಿರ್ಧರಿಸಿ, ಅದಕ್ಕೆ ಪೂರಕವಾಗಿ ನಾಲ್ಕು ಲಕ್ಷದ ನಲವತ್ತೇಳು ಸಾವಿರ ಕೋಟಿ ರೂ. ಗಾತ್ರದ ಬಜೆಟ್ ಮಂಡಿಸಿದ್ದಾರೆ. ಆ ಮೂಲಕ ಸಾಮಾಜಿಕ ನ್ಯಾಯದ ರಥ ಎಳೆಯುತ್ತಲೇ ರಾಜ್ಯದ ಹಿತವನ್ನು ಕಾಪಾಡುವ ಪ್ರಯತ್ನ ಮಾಡಿದ್ದಾರೆ.

” ರಾಜ್ಯ ಸರ್ಕಾರಕ್ಕೆ ಕೇಂದ್ರ ಸರ್ಕಾರದ ಪಾಲು ಕೊಡುವಿಕೆಯಲ್ಲಿ ಆಗಿರುವ ತಾರತಮ್ಯ, ಹಲವು ವಸ್ತುಗಳ ಮೇಲಿನ ಜಿ.ಎಸ್.ಟಿ. ಯನ್ನು ಕಡಿಮೆ ಮಾಡುವ ನಿರ್ಧಾರದಿಂದ ರಾಜ್ಯಕ್ಕೆ ಆಗಿರುವ ನಷ್ಟ ಮತ್ತು ಕೇಂದ್ರ ಸರ್ಕಾರದ ವಿವಿಧ ಯೋಜನೆಗಳಿಗೆ ಸಿಗುತ್ತಿದ್ದ ಪಾಲಿನಲ್ಲಿ ಕೊರತೆಯಾಗಿರುವುದೂ ಸೇರಿದಂತೆ ಕೇಂದ್ರದ ಧೋರಣೆಯಿಂದ ರಾಜ್ಯದ ಮೇಲೆ ಆರ್ಥಿಕ ಹೊರೆ ಬಿದ್ದಿದೆ ಎಂದು ಸಿದ್ದರಾಮಯ್ಯ ಬಜೆಟ್ ಭಾಷಣದಲ್ಲಿ ವಿವರಿಸಿದ್ದಾರೆ.”

 

 

ಆಂದೋಲನ ಡೆಸ್ಕ್

Recent Posts

ಮುತ್ತತ್ತಿಯಲ್ಲಿ ಘೋರ ದುರಂತ: ಒಂದೇ ಕುಟುಂಬದ ನಾಲ್ವರು ಮಹಿಳೆಯರು ಸೇರಿ ಐವರು ನೀರುಪಾಲು

ಹಲಗೂರು: ಸಮೀಪದ ಪ್ರವಾಸಿ ತಾಣವಾದ ಮುತ್ತತ್ತಿಯ ಕಾವೇರಿ ನದಿಯಲ್ಲಿ ಸೆಲ್ಫಿ ತೆಗೆಯುವ ವೇಳೆ ಕಾಲು ಜಾರಿ ನೀರಿನ ಪ್ರಬಲ ಸೆಳೆತಕ್ಕೆ…

3 hours ago

ಚಾಮರಾಜನಗರ ನ್ಯಾಯಾಲಯಕ್ಕೆ ಹುಸಿ ಬಾಂಬ್ ಬೆದರಿಕೆ

ಚಾಮರಾಜನಗರ: ನಗರದ ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್ ನ್ಯಾಯಾಲಯಕ್ಕೆ ಹುಸಿ ಬಾಂಬ್ ಬೆದರಿಕೆಯ ಇ-ಮೇಲ್ ಸಂದೇಶ ಬಂದ ಹಿನ್ನೆಲೆಯಲ್ಲಿ ಪೊಲೀಸರು,…

5 hours ago

ಬಿಆರ್‌ಟಿ ವ್ಯಾಪ್ತಿಯಲ್ಲಿ ಕಾಡಾನೆ ಕಳೇಬರ ಪತ್ತೆ

ಚಾಮರಾಜನಗರ: ಬಿಆರ್‌ಟಿ ಹುಲಿ ಸಂರಕ್ಷಿತ ಪ್ರದೇಶದ ಪುಣಜನೂರು ವನ್ಯಜೀವಿ ವಲಯ ವ್ಯಾಪ್ತಿಯ ಕಾರೆಪಾಳ್ಯ ಗಸ್ತಿನ ಸಮೀಪ ಅರಣ್ಯ ಪ್ರದೇಶದಿಂದ ಸುಮಾರು…

6 hours ago

ತೊಟ್ಟಿಲುಶಾಸ್ತ್ರ, ಸಿದ್ದಪ್ಪಾಜಿ ಕಂಡಾಯೋತ್ಸವದಲ್ಲಿ ತಾರಾ, ಶಶಿಕುಮಾರ್ ಭಾಗಿ

ಮಹಾದೇಶ್‌ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು ಹನೂರು: ತಾಲ್ಲೂಕಿನ ದೊಡ್ಡಾಲತ್ತೂರು ಗ್ರಾಮದ ಶ್ರೀ ಮಕ್ಕಳೇಶ್ವರ ಸ್ವಾಮಿ ಕ್ಷೇತ್ರದಲ್ಲಿ ಹಮ್ಮಿಕೊಂಡಿದ್ದ…

6 hours ago

ಬೆಳೆಗೆ ಸಿಗದ ಬೆಲೆ: ಯುವ ರೈತ ಆತ್ಮಹತ್ಯೆ

ಕೆ.ಆರ್.ನಗರ: ತಂಬಾಕು ಬೆಳೆಗೆ ಸರಿಯಾಗಿ ಬೆಲೆ ಸಿಗದೇ ನಷ್ಟವಾದ ಹಿನ್ನೆಲೆಯಲ್ಲಿ ಮಾಡಿದ್ದ ಸಾಲ ತೀರಿಸಲಾಗದೆ ಮನನೊಂದು ರೈತರೊಬ್ಬರು ತಮ್ಮ ಜಮೀನಿನಲ್ಲಿ…

7 hours ago

ಮುಂದಿನ ಒಂದು ವಾರಗಳ ಕಾಲ ಭಾರೀ ಮಳೆ: ಹವಾಮಾನ ಇಲಾಖೆ ಮುನ್ಸೂಚನೆ

ಬೆಂಗಳೂರು: ರಾಜ್ಯದ ಹಲವು ಜಿಲ್ಲೆಗಳಲ್ಲಿ ಭಾರೀ ಗಾಳಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಚಿಕ್ಕಮಗಳೂರು, ಹಾಸನ, ಶಿವಮೊಗ್ಗ,…

8 hours ago