ಕೆ.ಬಿ.ರಮೇಶನಾಯಕ
ವೈಟ್ ಟ್ಯಾಪಿಂಗ್ ರಸ್ತೆ ನಿರ್ಮಾಣಕ್ಕೆ ಮಂಜೂರಾದ ೪೦೦ ಕೋಟಿ ರೂ.ಅನುದಾನದಲ್ಲಿ ೯೦ ಕೋಟಿರೂ. ಯುಜಿಡಿ, ನೀರಿನ ಪೈಪ್ಲೇನ್ಗೆ ಮೀಸಲು
ಮೈಸೂರು: ಪಾರಂಪರಿಕ ನಗರಿಯ ಅಂದ ಕೆಡುವಂತಿದ್ದ ವಿದ್ಯುತ್ ಕಂಬಗಳ ಮೇಲ್ಮೈನಲ್ಲಿರುವ ಎಲ್ಲಾ ವಿದ್ಯುತ್ ಮಾರ್ಗಗಳನ್ನು ಭೂಮಿಯ ಆಳಕ್ಕೆ ವರ್ಗಾಯಿಸುವ ಭೂಗತ ಕೇಬಲ್ ಅಳವಡಿಸುವ ಯೋಜನೆ (ಯುಜಿ) ಶುರುವಾಗಿದ್ದು, ನಗರದಲ್ಲಿ ೧೨೦ ಕಿಮೀ ಯುಜಿಸಿ ಅಳವಡಿಕೆಗೆ ಅಂದಾಜು ೧೨೦ ಗುಂಡಿಗಳನ್ನು (ಟ್ರಂಚ್) ತೆಗೆಯಲಾಗಿದೆ.
ಇದರಿಂದಾಗಿಯೇ ಪ್ರಮುಖ ರಸ್ತೆಗಳು, ಮಾರ್ಗಗಳಲ್ಲಿ ತೆರೆದ ಗುಂಡಿಗಳು ಬಿದ್ದು ಅವಘಡ ಹಾಗೂ ನಗರದ ಸೌಂದರ್ಯಕ್ಕೆ ಧಕ್ಕೆ ತರುವ ರೀತಿಯಲ್ಲಿ ಕಾಣುತ್ತಿರುವ ಕಾರಣ ಹದಿನೈದು ದಿನಗಳ ಕಾಲ ಕಾಮಗಾರಿಗಳನ್ನು ಸ್ಥಗಿತಗೊಳಿಸಿ ಟ್ರಂಚ್ಗಳನ್ನು ಮುಚ್ಚುವ ಕಾರ್ಯ ನಡೆಯಲಿದೆ. ಈ ಕೆಲಸವಾದ ಬಳಿಕವಷ್ಟೇ ಉಳಿದ ಕಡೆಗಳಲ್ಲಿ ಯುಜಿ ಕೇಬಲ್ ಅಳವಡಿಕೆ ಕಾಮಗಾರಿ ಮುಂದುವರಿಯಲಿದೆ. ಅದೇ ರೀತಿ ವೈಟ್ ಟ್ಯಾಪಿಂಗ್ ರಸ್ತೆ ಕಾಮಗಾರಿ ನಡೆಯುವ ಮುನ್ನ ರಸ್ತೆಯ ಎರಡು ಬದಿಗಳಲ್ಲಿ ಹಾದು ಹೋಗಿರುವ ಕುಡಿಯುವ ನೀರು, ಒಳಚರಂಡಿ ಮಾರ್ಗದ ಪೈಪ್ಗಳನ್ನು ಸ್ಥಳಾಂತರ ಮಾಡಿರುವುದನ್ನು ಖಚಿತಪಡಿಸಿದ ಬಳಿಕವಷ್ಟೇ ಗ್ರೀನ್ ಸಿಗ್ನಲ್ ಕೊಡಲಾಗುತ್ತದೆ. ಸದ್ಯಕ್ಕೆ ಮೈಸೂರು-ಮಾನಂದವಾಡಿ ರಸ್ತೆಯಲ್ಲಿ ಯಾವುದೇ ಆಕ್ಷೇಪಣೆ ಇಲ್ಲದ ಕಾರಣ ವೈಟ್ ಟ್ಯಾಪಿಂಗ್ ಕಾಮಗಾರಿಗೆ ಅನುವು ನೀಡಿದ್ದರೆ, ಬೋಗಾದಿ ರಸ್ತೆಯಲ್ಲಿ ಕಿರು ಸೇತುವೆ ಇರುವ ಕಾರಣ ಪಕ್ಕದಲ್ಲಿ ಹೊಸ ಸೇತುವೆ ನಿರ್ಮಿಸಿದ ಬಳಿಕ ರಸ್ತೆ ಕಾಮಗಾರಿ ಮಾಡಲು ಅನುಮತಿ ಕೊಡಲಾಗಿದೆ. ಸಾಂಸ್ಕೃತಿಕ ನಗರಿ ಮೈಸೂರಿನ ಎನ್.ಆರ್.ಮೊಹಲ್ಲಾ ಹಾಗೂ ಚಾಮುಂಡಿಪುರಂ ಉಪವಿಭಾಗ, ಕುವೆಂಪುನಗರ, ಹೂಟಗಳ್ಳಿ, ರಾಮಕೃಷ್ಣನಗರ ಉಪ ವಿಭಾಗ, ವಿವಿ ಮೊಹಲ್ಲಾ ವಿಭಾಗದ ವ್ಯಾಪ್ತಿಯಲ್ಲಿ ಭೂಗತ ಕೇಬಲ್ ಅಳವಡಿಕೆಗೆ ೪೫೮ ಕೋಟಿ ರೂ. ಮಂಜೂರಾಗಿದ್ದು, ಎರಡು ವರ್ಷಗಳಲ್ಲಿ ಕಾಮಗಾರಿ ಮುಗಿಸುವ ಗುರಿ ನೀಡಲಾಗಿದೆ. ಕಳೆದ ಆರು ತಿಂಗಳಿಂದ ಈತನಕ ೧೨೦ ಕಿಮೀ ಯುಜಿ ಕೇಬಲ್ ಕಾರ್ಯ ಮುಗಿದಿದ್ದು,ಅಂದಾಜು ೪೦೦ ರಿಂದ ೪೨೦ ಟ್ರಂಚ್ಗಳನ್ನು ತೆಗೆಯಲಾಗಿದೆ. ಓವರ್ಹೆಡ್ ಪವರ್ಲೇನ್, ಎಲ್ಟಿ ಓವರ್ಹೆಡ್ಲೇನ್ಗಳಿಗೆ ಎಬಿ ಕೇಬಲ್, ಎಚ್ಟಿ ಲೇನ್ಗಳಿಗೆ ಅಂಡರ್ಗ್ರೌಂಡ್ ಕೇಬಲ್ ಲೇನ್ಗಳಾಗಿ ಪರಿವರ್ತಿಸಲು ಟ್ರಂಚ್ಗಳನ್ನು ತೆಗೆಯಲಾಗಿದೆ. ಓವರ್ಹೆಡ್ ಪವರ್ಲೇನ್ಗೆ ತೆಗೆದಿರುವ ಗುಂಡಿಗಳಿಂದ ಮತ್ತೊಂದು ಭಾಗದ ಎಲ್ಟಿ ಓವರ್ ಹೆಡ್ ಲೇನ್ಗೆ ಸಂಪರ್ಕ ಕಲ್ಪಿಸುವ ತನಕ ಗುಂಡಿ ಮುಚ್ಚಿರಬಾರದು. ಹಾಗಾಗಿಯೇ, ಎಲ್ಟಿ ಓವರ್ಹೆಡ್ ಲೇನ್ಗೆ ಸಂಪರ್ಕ ಕಲ್ಪಿಸುವ ಜಾಗಗಳಲ್ಲಿ ತೆಗೆದಿದ್ದ ಟ್ರಂಚ್ಗಳನ್ನು ಮುಚ್ಚದೆ ಬಿಡಲಾಗಿತ್ತು. ಇದರಿಂದಾಗಿ, ಸಾರ್ವಜನಿಕರು ಸಾಕಷ್ಟು ದೂರುಗಳನ್ನು ನೀಡುವ ಜತೆಗೆ, ಸ್ವಚ್ಛ ಸರ್ವೇಕ್ಷಣ್ ಸರ್ವೆಯ ವೇಳೆ ಸ್ವಚ್ಛತೆ ಕಾಪಾಡಬೇಕಿರುವ ಕಾರಣ ಜಿಲ್ಲಾಡಳಿತ ಇಂತಹ ನಿರ್ಧಾರ ಕೈಗೊಂಡಿದೆ. ಮೊದಲಿಗೆ ಈಗ ತೆಗೆದಿರುವ ಅಂದಾಜು ೪೨೦ ಗುಂಡಿ ಗಳನ್ನು ಮುಚ್ಚಿ ಅದನ್ನು ಡಾಂಬರೀಕರಣ ಮಾಡಿದ ಬಳಿಕ ಉಳಿದ ಕಾಮಗಾರಿ ಕೈಗೊಳ್ಳುವಂತೆ ಹೇಳಿರುವುದರಿಂದಾಗಿ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮದ ಅಧಿಕಾರಿಗಳು ಸದ್ಯಕ್ಕೆ ಗುಂಡಿ ಮುಚ್ಚಿಸಲು ಮುಂದಾಗಿದ್ದಾರೆ ಎಂದು ಹೇಳಲಾಗಿದೆ.
ರಾಮಾನುಜ ರಸ್ತೆ, ಚಾಮರಾಜ ಜೋಡಿ ರಸ್ತೆ, ಚಾಮುಂಡಿಪುರಂ,ನಜರ್ಬಾದ್, ಇರ್ವೀನ್ ರಸ್ತೆ, ಸೀತಾವಿಲಾಸ ರಸ್ತೆ ಮತ್ತಿತರ ಕಡೆಗಳಲ್ಲಿ ಮೊದಲ ಹಂತದಲ್ಲಿ ಟ್ರಂಚ್ಗಳನ್ನು ಮುಚ್ಚಿಸಿ,ಉಳಿದ ಕಡೆಗಳಲ್ಲಿ ನಿಗದಿತ ದಿನಗಳೊಳಗೆ ಮುಗಿಸಲಾಗುತ್ತದೆ ಎನ್ನುತ್ತಾರೆ ಅಧೀಕ್ಷಕ ಅಭಿಯಂತರರು.
೯೦ ಕೋಟಿ ರೂಪಾಯಿ ಮೀಸಲು:ಮುಂದಿನ ೩೦-೫೦ವರ್ಷಗಳ ಹಿತದೃಷ್ಟಿಯಿಂದ ನಗರದ ೯ ರಸ್ತೆಗಳನ್ನು ಮೊದಲ ಹಂತದಲ್ಲಿ ವೈಟ್ ಟ್ಯಾಪಿಂಗ್ ಮಾಡಲು ರಾಜ್ಯಸರ್ಕಾರ ನಿರ್ಧರಿಸಿ ೪೦೦ ಕೋಟಿ ರೂಪಾಯಿ ವೆಚ್ಚದ ಯೋಜನೆಗೆ ಮಂಜೂರಾತಿ ನೀಡಿದ್ದು, ಇದರಲ್ಲೇ ಕುಡಿಯುವ ನೀರು, ಯುಜಿಡಿ ಪೈಪ್ಲೇನ್ ಸ್ಥಳಾಂತರ, ರಿಪೇರಿ ಮತ್ತಿತರ ನಿರ್ವಹಣೆಗೆ ೯೦ ಕೋಟಿ ರೂಪಾಯಿ ಮೀಸಲಿಡಲಾಗಿದೆ. ಮಾನಂದವಾಡಿ ರಸ್ತೆ ಯಲ್ಲಿ ಕುಡಿಯುವ ನೀರು,ಯುಜಿಡಿ ಲೇನ್ಹಾದು ಹೋಗಿರದ ಕಾರಣ ಕಾಮಗಾರಿ ಶುರುವಾಗಿದೆ. ಬೋಗಾದಿ ರಸ್ತೆಯಲ್ಲಿ ಕಿರು ಸೇತುವೆ ಬರುವ ಕಾರಣ ಅದನ್ನು ಪಕ್ಕಕ್ಕೆ ಸ್ಥಳಾಂತರ ಮಾಡಿ ಕಾಮಗಾರಿ ನಡೆಸಲು ಅನುಮೋದನೆ ನೀಡಿದ್ದು, ಶೀಘ್ರದಲ್ಲೇ ಅಲ್ಲಿಯೂ ಪ್ರಾರಂಭವಾಗಲಿದೆ. ವೈಟ್ ಟ್ಯಾಪಿಂಗ್ ಮಾಡುವ ರಸ್ತೆಗಳಲ್ಲಿ ಹಾದು ಹೋಗಿರುವ ಕುಡಿಯುವ ನೀರು,ಒಳಚರಂಡಿ ಪೈಪ್ಲೇನ್ಗಳಿಗೆ ಹಾನಿಯಾದರೆ ಅದನ್ನು ಪಕ್ಕಕ್ಕೆ ಸ್ಥಳಾಂತರ ಮಾಡುವುದು, ಒಂದು ವೇಳೆ ಸ್ಥಳಾಂತರ ಮಾಡಲು ಸಾಧ್ಯವಾಗದಿದ್ದರೆ ಕಾಮಗಾರಿ ಮುಗಿದ ಬಳಿಕ ನಿರ್ವಹಣೆ ಮಾಡುವುದಕ್ಕೆ ಡಿಪಿಆರ್ನಲ್ಲೇ ೯೦ ಕೋಟಿ ರೂಪಾಯಿ ಮೀಸಲಿಡಲಾಗಿದೆ. ಹೀಗಾಗಿ ಲೋಕೋಪಯೋಗಿ ಇಲಾಖೆಯು ಇದರ ಹೊಣೆಯನ್ನು ಹೊತ್ತುಕೊಂಡಿದೆ ಎಂದು ಹೇಳಲಾಗಿದೆ.
ಸಮನ್ವಯ ಸಮಿತಿ ರಚನೆ: ವೈಟ್ ಟ್ಯಾಪಿಂಗ್ ಮಾಡುವ ಮುನ್ನ ಕುಡಿಯುವ ನೀರು,ಯುಜಿಡಿ ಪೈಪ್ಲೇನ್ಗಳಿಗೆ ತೊಂದರೆ ಆಗಲಿದೆಯೇ ಅಥವಾ ಸಾರ್ವಜನಿಕರಿಗೆ ತೊಂದರೆ ಆಗದ ರೀತಿಯಲ್ಲಿ ಯಾವ ರೀತಿ ಕಾಮಗಾರಿ ನಿರ್ವಹಿಸಬೇಕು ಎನ್ನುವುದರ ಬಗ್ಗೆ ಪರಿಶೀಲಿಸಿ ವರದಿ ಕೊಡಲು ಸಮನ್ವಯ ಸಮಿತಿ ರಚಿಸಲಾಗಿದೆ. ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ನಗರಪಾಲಿಕೆ ಆಯುಕ್ತರು, ಅಧಿಕ್ಷಕ ಅಭಿಯಂತರರು, ಕರ್ನಾಟಕ ನಗರ ನೀರು ಸರಬರಾಜು ಮಂಡಳಿ ಕಾರ್ಯಪಾಲಕ ಅಭಿಯಂತರರು, ಲೋಕೋಪಯೋಗಿ ಇಲಾಖೆ ಕಾರ್ಯಪಾಲಕ ಅಭಿಯಂತರರ ನೇತೃತ್ವದಲ್ಲಿ ಸಮಿತಿ ರಚಿಸಲಾಗಿದೆ. ಈ ಸಮಿತಿಯು ವೈಟ್ ಟ್ಯಾಪಿಂಗ್ ರಸ್ತೆ ಕಾಮಗಾರಿ ಆರಂಭಿಸುವ ಮುನ್ನ ಪರಿಶೀಲಿಸಿ ಮಾಹಿತಿ ಪಡೆಯಲಿದೆ. ನಂತರ, ಈ ಬಗ್ಗೆ ಉಂಟಾಗುವ ಸಾಧಕ-ಬಾಧಕಗಳ ಕುರಿತಾಗಿ ವರದಿ ಸಲ್ಲಿಸಿದ ಬಳಿಕ ಡಿಸಿ ಒಪ್ಪಿಗೆ ಕೊಡಲಿದ್ದಾರೆ. ಇದಾದ ಬಳಿಕವಷ್ಟೇ ಕಾಮಗಾರಿ ಶುರು ಮಾಡುವಂತೆ ಲೋಕೋಪಯೋಗಿ ಇಲಾಖೆಗೆ ಸೂಚಿಸಲಾಗಿದೆ ಎಂದು ಗೊತ್ತಾಗಿದೆ.
” ನಗರದಲ್ಲಿ ಯುಜಿ ಕೇಬಲ್ ಅಳವಡಿಕೆಗಾಗಿ ಅಂದಾಜು ೪೦೦ ರಿಂದ ೪೨೦ ಗುಂಡಿಗಳನ್ನು ತೆಗೆಯಲಾಗಿದೆ. ಇದನ್ನು ಮುಚ್ಚಿದ ಬಳಿಕವಷ್ಟೇ ಉಳಿದ ಕಾಮಗಾರಿ ಮುಂದುವರಿಸುವಂತೆ ಹೇಳಲಾಗಿದೆ. ವೈಟ್ ಟ್ಯಾಪಿಂಗ್ ರಸ್ತೆ ಕಾಮಗಾರಿ ಆರಂಭಕ್ಕೂ ಮುನ್ನ ಸಮನ್ವಯ ಸಮಿತಿ ಸದಸ್ಯರು ಭೇಟಿ ನೀಡಿ ಪರಿಶೀಲಿಸಿ ಒಪ್ಪಿಗೆ ಕೊಡುವ ತನಕ ಆರಂಭಿಸದಂತೆ ಹೇಳಲಾಗಿದೆ. ಮಾನಂದವಾಡಿ ರಸ್ತೆಯಲ್ಲಿ ಯಾವುದೇ ಸ್ಥಳಾಂತರ ಇಲ್ಲದ ಕಾರಣ ಕಾಮಗಾರಿ ನಡೆಯುತ್ತಿದೆ. ಬೋಗಾದಿ ರಸ್ತೆಯಲ್ಲಿ ಕಿರು ಸೇತುವೆ ಸ್ಥಳಾಂತರ ಮಾಡಬೇಕಿದೆ.”
ಸಿ.ಎಸ್.ಮಂಜು, ಅಧಿಕ್ಷಕ ಅಭಿಯಂತರರು, ನಗರಪಾಲಿಕೆ
” ನಗರದಲ್ಲಿ ಯುಜಿ ಕೇಬಲ್ ಅಳವಡಿಕೆ ಕಾರ್ಯ ನಡೆಯುತ್ತಿದೆ. ಒಂದು ಕಡೆಯಿಂದ ಮತ್ತೊಂದು ಕಡೆಗೆ ಸಂಪರ್ಕ ಕಲ್ಪಿಸಬೇಕಿರುವ ಕಾರಣ ಒಂದಿಷ್ಟು ದಿನಗಳ ಕಾಲ ಮುಚ್ಚಿರಲಿಲ್ಲ. ಸ್ವಚ್ಛ ಸರ್ವೇಕ್ಷಣಾ ಸರ್ವೆ ನಡೆಯುವ ಕಾರಣ ಮುಚ್ಚುವಂತೆ ಜಿಲ್ಲಾಧಿಕಾರಿಗಳು ಹೇಳಿದ್ದಾರೆಯೇ ಹೊರತು ಬೇರೇನೂ ಇಲ್ಲ. ಸದ್ಯಕ್ಕೆ ತೆಗೆದಿರುವ ಟ್ರಂಚ್ಗಳನ್ನು ಮುಚ್ಚಿಸುವ ತನಕ ಕಾಮಗಾರಿ ಮುಂದುವರಿಸಲ್ಲ.”
ಸುನಿಲ್ಕುಮಾರ್, ಅಧಿಕ್ಷಕ ಅಭಿಯಂತರ, ಸೆಸ್ಕ್
ಹುಣಸೂರು: ರಸ್ತೆ ಮಣ್ಣಿನ ವಿಚಾರಕ್ಕೆ ಗಲಾಟೆ ನಡೆದ ಪರಿಣಾಮ ಮೂವರಿಗೆ ಗಾಯಗಳಾಗಿ ಆಸ್ಪತ್ರೆಗೆ ದಾಖಲಾಗಿರುವ ಘಟನೆ ಮೈಸೂರು ಜಿಲ್ಲೆ ಹುಣಸೂರಿನ…
ಹುಣಸೂರು: ಪಾಳು ಬಾವಿಗೆ ಬಿದ್ದಿದ್ದ ಕಾಡುಹಂದಿಯನ್ನು ರಕ್ಷಣೆ ಮಾಡುವಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ. ಹುಣಸೂರು ತಾಲ್ಲೂಕಿನ ಹನಗೋಡು ಗ್ರಾಮದಲ್ಲಿ…
ನವದೆಹಲಿ: ವಾಣಿಜ್ಯ ಎಲ್ಪಿಜಿ ಸಿಲಿಂಡರ್ ಬೆಲೆಯಲ್ಲಿ ಭಾರೀ ಏರಿಕೆಯಾಗಿದ್ದು, ಮೇ.1ರಿಂದ ಜಾರಿಗೆ ಬರುವಂತೆ 993ರೂ ಹೆಚ್ಚಳ ಮಾಡಲಾಗಿದೆ. ಬೆಂಗಳೂರಿನಲ್ಲಿ 991…
ಮಂಡ್ಯ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ತೀರ್ಪು ಮಂಡ್ಯ:ಪತ್ನಿಯನ್ನು ಕೊಲೆಗೈದಿದ್ದ ಅಪರಾಧ ಸಾಬೀತಾದ ಹಿನ್ನೆಲೆಯಲ್ಲಿ ಪತಿಗೆ ೨ನೇ ಅಪರ ಜಿಲ್ಲಾ…
ಜಾಗೃತಿ ಉಳುಮೆಗೆ ಮಳೆಯಿಲ್ಲದೆ ಕುಲುಮೆಯಾಗಿದೆ ಇಳೆ ಹೆಚ್ಚಿದ ತಾಪಮಾನ ಬದಲಾವಣೆಯ ಹವಾಮಾನಕೆ ದೇಹದ ಆಂತರಿಕ ತಂಪು ವಿಫಲ ಅದಕೆ ಹೆಚ್ಚುತ್ತಿದೆ…
ಶಾಲಾ ಕಾರ್ಯಕ್ರಮಗಳಲ್ಲಿ ಅಶ್ಲೀಲ ಹಾಡುಗಳಿಗೆ ಶಿಕ್ಷಣ ಇಲಾಖೆ ನಿಷೇಧ ಹೇರಿರುವುದು ಸ್ವಾಗತಾರ್ಹ. ಇಂದಿನ ಶೇ.೮೦ರಷ್ಟು ಸಿನಿಮಾ ಹಾಡುಗಳು ದ್ವಂದ್ವಾರ್ಥ ಹಾಗೂ…