ಎಚ್.ಎಸ್.ದಿನೇಶ್ ಕುಮಾರ್
ವರ್ಷದಿಂದೀಚೆಗೆ ೯೬ ವಾಹನಗಳ ಪತ್ತೆ; ೧೦ಕ್ಕೂ ಹೆಚ್ಚು ಆರೋಪಿಗಳ ಬಂಧನ
ವಾಹನ ಸವಾರರಿಗೆ ಮುನ್ನೆಚ್ಚರಿಕೆ
* ವಾಹನ ನಿಲ್ಲಿಸಲು ಪೇ-ಅಂಡ್ ಪಾರ್ಕ್ ಸ್ಥಳವನ್ನೇ ಆಯ್ಕೆ ಮಾಡಿಕೊಳ್ಳಬೇಕು
* ಪೊಲೀಸ್ ಇಲಾಖೆ ನಗದಿಪಡಿಸುವ ಸ್ಥಳದ ಅಕ್ಕಪಕ್ಕದ ಕಟ್ಟಡಗಳಲ್ಲಿ ಸಿಸಿ ಟಿವಿ ಇರುವ ಬಗ್ಗೆ ಖಚಿತಪಡಿಸಿಕೊಂಡು ಅಂತಹ ಸ್ಥಳದಲ್ಲಿ ವಾಹನವನ್ನು ನಿಲ್ಲಿಸಬೇಕು
* ದ್ವಿಚಕ್ರ ವಾಹನಕ್ಕೆ ಹ್ಯಾಂಡಲ್ ಲಾಕ್ ಜೊತೆಗೆ ಚಕ್ರಕ್ಕೆ ಹೊಂದಿಕೊಂಡು ಅಳವಡಿಸುವ ಮತ್ತೊಂದು ಲಾಕ್ನ್ನೂ ಹಾಕುವುದು ಉತ್ತಮ
* ದೂರ ಪ್ರಯಾಣದ ಸಂದರ್ಭದಲ್ಲಿ ಬಸ್ ನಿಲ್ದಾಣಕ್ಕೆ ಬರಲು ದ್ವಿಚಕ್ರ ವಾಹನದ ಬದಲು ನಗರ ಸಾರಿಗೆ ಬಸ್ನ್ನು ಬಳಸುವುದು ಉತ್ತಮ
* ಖದೀಮರಿಗೆ ಜನನಿಬಿಡ ಪ್ರದೇಶಗಳೇ ಟಾರ್ಗೆಟ್
* ಆಸ್ಪತ್ರೆ, ಹೋಟೆಲ್, ಬಸ್ ನಿಲ್ದಾಣಗಳಲ್ಲಿಯೇ ಕಳವು
* ಇಬ್ಬರು ಅಥವಾ ಮೂವರಿಂದ ಕಳ್ಳತನದ ಕಾರ್ಯಾಚರಣೆ
ಮೈಸೂರು: ಆಸ್ಪತ್ರೆ ಬಳಿ ಬೈಕ್ ನಿಲ್ಲಿಸಿದ್ದೆ, ಅದು ಕಳ್ಳತನವಾಗಿದೆ, ಹೋಟೆಲ್ನಲ್ಲಿ ತಿಂಡಿ ತಿಂದು ಬರುವಷ್ಟರಲ್ಲಿ ನನ್ನ ವಾಹನ ಕಳ್ಳತನವಾಗಿದೆ, ಮೆಡಿಕಲ್ ಶಾಪ್ಗೆ ಹೋಗಿ ಬರುವಷ್ಟರಲ್ಲಿ ವಾಹನ ನಾಪತ್ತೆ… ಇದು ಪ್ರತೀ ದಿನ ನಗರ ವ್ಯಾಪ್ತಿಯ ಒಂದಲ್ಲ ಒಂದು ಪೊಲೀಸ್ ಠಾಣೆಗಳಲ್ಲಿ ದಾಖಲಾಗುತ್ತಿರುವ ಪ್ರಕರಣಗಳು. ಕಳೆದ ಒಂದು ವರ್ಷದಿಂದೀಚೆಗೆ ದ್ವಿಚಕ್ರ ವಾಹನಗಳ ಕಳವು ಪೊಲೀಸರಿಗೆ ತಲೆನೋವಾಗಿ ಪರಿಣಮಿಸುತ್ತಿದೆ.
ಕಳೆದ ಒಂದು ವರ್ಷದ ಅವಧಿಯಲ್ಲಿ ನಗರದ ವಿವಿಧ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ೧೮೦ ದ್ವಿಚಕ್ರ ವಾಹನಗಳು ಕಳವು ಆಗಿವೆ. ಈ ಸಂಬಂಧ ಪೊಲೀಸರ ಕಾರ್ಯಾಚರಣೆ ಕೂಡ ಚುರುಕಾಗಿದೆ. ಕಳೆದ ಒಂದು ವರ್ಷದಿಂದೀಚೆಗೆ ಪೊಲೀಸರು ೯೬ ವಾಹನಗಳನ್ನು ಪತ್ತೆ ಹಚ್ಚಿ ಹತ್ತಕ್ಕೂ ಹೆಚ್ಚು ಆರೋಪಿಗಳನ್ನು ಬಂಽಸಿ ಜೈಲಿಗಟ್ಟಿದ್ದಾರೆ.
ಕೆಲ ಜನನಿಬಿಡ ಪ್ರದೇಶದಲ್ಲಿ ಹೊಂಚುಹಾಕುವ ಕಳ್ಳರು ತಮ್ಮ ಕೈ ಚಳಕದ ಮೂಲಕ ಕ್ಷಣ ಮಾತ್ರದಲ್ಲಿ ದ್ವಿಚಕ್ರ ವಾಹನಗಳನ್ನು ಕದ್ದೊಯ್ಯುತ್ತಿದ್ದಾರೆ. ವಾಹನ ಕಳೆದುಕೊಂಡ ಮಾಲೀಕರು ಪ್ರತೀ ದಿನ ಪೊಲೀಸ್ ಠಾಣೆಗಳ ಮೆಟ್ಟಿಲು ಹತ್ತಿಳಿಯುವಂತಾಗಿದೆ.
ಜನನಿಬಿಡ ಪ್ರದೇಶಗಳೇ ಟಾರ್ಗೆಟ್: ಪೊಲೀಸ್ ಅಧಿಕಾರಿಗಳು ಹೇಳುವಂತೆ, ವಾಹನ ಕಳ್ಳರು ಹೆಚ್ಚು ಜನ ಸಂದಣಿ ಇರುವ ಪ್ರದೇಶಗಳನ್ನೇ ಆಯ್ದುಕೊಳ್ಳುತ್ತಾರೆ. ಜನ ಸಂದಣಿ ಹೆಚ್ಚಾಗಿದ್ದಲ್ಲಿ ಅಲ್ಲಿನ ಚಲನವಲನಗಳ ಬಗ್ಗೆ ಯಾರೂ ತಲೆಕೆಡಿಸಿಕೊಳ್ಳುವುದಿಲ್ಲ ಎಂಬುದು ಕಳ್ಳರ ಆಲೋಚನೆ. ಹೀಗಾಗಿ, ಆಸ್ಪತ್ರೆ, ಹೋಟೆಲ್, ಬಸ್ ನಿಲ್ದಾಣ ಮುಂತಾದ ಪ್ರಮುಖ ಸ್ಥಳಗಳನ್ನು ತಮ್ಮ ಕಾರ್ಯಾಚರಣೆಗೆ ಆರಿಸಿಕೊಳ್ಳುತ್ತಾರೆ.
ಇಬ್ಬರು ಅಥವಾ ಮೂವರಿಂದ ಕಾರ್ಯಾಚರಣೆ: ಕೆಲ ಪ್ರಕರಣಗಳ ವಿಚಾರಣೆ ವೇಳೆ ಖದೀಮರು ತಮ್ಮ ಕಾರ್ಯಾಚರಣೆ ಬಗ್ಗೆ ಮಾಹಿತಿ ನೀಡಿದ್ದಾರೆ. ಅವರು ಹೇಳುವಂತೆ; ಇಬ್ಬರು ಅಥವಾ ಮೂವರು ಸೇರಿ ವಾಹನಗಳ ಕಳ್ಳತನಕ್ಕೆ ಸಜ್ಜಾಗುತ್ತಾರೆ. ತಾವು ನಿಂತ ಸ್ಥಳದಲ್ಲಿ ಬಂದು ನಿಲ್ಲುವ ವಾಹನಗಳನ್ನು ಕಣ್ಣಂಚಿನಲ್ಲಿಯೇ ಪರೀಕ್ಷಿಸುತ್ತಾರೆ.
ನಂತರ ಗುಂಪಿನಲ್ಲಿರುವ ಒಬ್ಬ ವಾಹನ ನಿಲ್ಲಿಸಿ ತೆರಳಿದವನನ್ನು ಹಿಂಬಾಲಿಸುತ್ತಾನೆ. ಉಳಿದ ಮತ್ತೊಬ್ಬ ವಾಹನವನ್ನು ಏರಿ ಕುಳಿತುಕೊಳ್ಳುತ್ತಾನೆ. ನಂತರ ಯಾರಿಗೂ ಅನುಮಾನ ಬಾರದ ರೀತಿಯಲ್ಲಿ ನಕಲಿ ಕೀ ಮೂಲಕ ವಾಹನವನ್ನು ಸ್ಟಾರ್ಟ್ ಮಾಡಲು ಯತ್ನಿಸುತ್ತಾನೆ. ಹೀಗೆ ಹಲವಾರು ನಕಲಿ ಕೀ ಬಳಸುವ ಆತ ಯಾವುದಾದರೂ ಒಂದು ಕೀ ಮೂಲಕ ವಾಹನವನ್ನು ಸ್ಟಾರ್ಟ್ ಮಾಡಿ ಅಲ್ಲಿಂದ ಆರಾಮವಾಗಿ ತೆರಳುತ್ತಾನೆ.
ಈ ನಡುವೆ ಮಾಲೀಕನನ್ನು ಹಿಂಬಾಲಿಸಿಕೊಂಡು ಹೋಗಿದ್ದ ಸ್ನೇಹಿತನಿಗೆ ಕಾರ್ಯಾಚರಣೆ ಯಶಸ್ವಿಯಾದ ಬಗ್ಗೆ ದೂರವಾಣಿ ಮೂಲಕ ತಿಳಿಸಿ ತಾವು ಮೊದಲೇ ನಿಗದಿಪಡಿಸಿದ್ದ ಸ್ಥಳದಲ್ಲಿ ಭೇಟಿಯಾಗುತ್ತಾರೆ. ನಂತರ ವಾಹನವನ್ನು ಬಸ್, ರೈಲ್ವೇ ನಿಲ್ದಾಣ ಅಥವಾ ಇನ್ನಾವುದಾದರೂ ನಿಲ್ದಾಣಗಳಲ್ಲಿ ನಿಲ್ಲಿಸಿ ಮನೆಗೆ ತೆರಳುತ್ತಾರೆ. ಮೂರು ಅಥವಾ ನಾಲ್ಕು ದಿನಗಳ ಕಾಲ ಅವರು ವಾಹನದ ಕಡೆ ಸುಳಿಯುವುದಿಲ್ಲ ಎಂಬುದು ಆರೋಪಿಗಳ ವಿಚಾರಣೆ ನಡೆಸಿ ಅನುಭವವಿರುವ ಪೊಲೀಸರು ಹೇಳುವ ಮಾತಿದು.
ಕೆಲ ದಿನಗಳ ನಂತರ ಗ್ರಾಮೀಣ ಪ್ರದೇಶದ ಜನರಿಗೆ ಮಾರಾಟ ಮಾಡಲು ಯತ್ನಿಸುತ್ತಾರೆ. ಅದು ಸಾಧ್ಯವಾಗದಿದ್ದಲ್ಲಿ ತಮಗೆ ಪರಿಚಿತರಾಗಿರುವ ವಾಹನಗಳ ಹಳೆಯ ಬಿಡಿ ಭಾಗಗಳನ್ನು ಮಾರಾಟ ಮಾಡುವ ಮಳಿಗೆಗೆ ತೆರಳಿ ವಾಹನವನ್ನು ಮಾರಾಟ ಮಾಡುತ್ತಾರೆ.
” ದ್ವಿಚಕ್ರ ವಾಹನಗಳ ಕಳವು ಪ್ರಕರಣಗಳು ಹಿಂದಿನ ವರ್ಷಗಳಿಗೆ ಹೋಲಿಸಿದಲ್ಲಿ ಕಡಿಮೆಯಾಗಿದೆ. ಆದರೂ ವಾಹನ ಸವಾರರು ತಮ್ಮ ವಾಹನಗಳ ಬಗ್ಗೆ ನಿಗಾ ವಹಿಸ ಬೇಕು. ಸುರಕ್ಷಿತ ಜಾಗದಲ್ಲಿ ವಾಹನಗಳನ್ನು ನಿಲ್ಲಿಸುವ ಅಭ್ಯಾಸ ರೂಢಿಸಿ ಕೊಳ್ಳಬೇಕು. ಎಲ್ಲೆಂದರಲ್ಲಿ ವಾಹನ ನಿಲ್ಲಿಸಿ ಬೇರೆ ಊರುಗಳಿಗೆ ತೆರಳುವುದು, ಗಂಟೆಗಟ್ಟಲೆ ಹೊರಗೆ ಹೋಗಿ ಬರುವುದನ್ನು ಮಾಡಬಾರದು. ಇದು ಕಳ್ಳರಿಗೆ ಆಹ್ವಾನ ನೀಡಿದಂತೆ.”
-ಸೀಮಾ ಲಾಟ್ಕರ್, ನಗರ ಪೊಲೀಸ್ ಆಯುಕ್ತರು
ಮೈಸೂರಿನ ವಿ.ವಿ.ಮೊಹಲ್ಲದ ೨ನೇ ಮುಖ್ಯರಸ್ತೆಯಲ್ಲಿರುವ (ಕ್ಲಬ್ ಹಿಂಭಾಗ) ವಾರ್ಡ್ ಸಂಖ್ಯೆ ೧೯ರ ವ್ಯಾಪ್ತಿಗೆ ಒಳಪಡುವ ಕನ್ಸರ್ವೆನ್ಸಿಯಲ್ಲಿ ಗಿಡ ಗಂಟಿಗಳು ಬೃಹದಾಕಾರವಾಗಿ…
ಮೈಸೂರು ಜಿಲ್ಲೆಯ ಎಚ್. ಡಿ. ಕೋಟೆ ತಾಲ್ಲೂಕು ವನಸಿರಿ ನಾಡು ಎಂದೇ ಪ್ರಸಿದ್ಧಿ ಪಡೆದಿದೆ. ಹಾಗೆ ಹಲವು ದೇವಾಲಯಗಳ ಬೀಡು, ಈ…
ಚುನಾವಣಾ ಲಾಭಕ್ಕಾಗಿ ಹಳೆ ಪಿಂಚಣಿ ಯೋಜನೆ ಮರುಜರಿಗೆ ಹೊರಟಿರುವುದು ರಾಜ್ಯದ ಆರ್ಥಿಕ ಪರಿಸ್ಥಿತಿ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ. ೩.೫…
ಮೈಸೂರಿನ ದಸರಾ ಚಲನಚಿತ್ರೋತ್ಸವವನ್ನು ಕಳೆದ ಸುಮಾರು ೫೦ ವರ್ಷಗಳಿಂದಲೂ ನಡೆಸಿಕೊಂಡು ಬರಲಾಗುತ್ತಿದೆ. ಪ್ರೇಕ್ಷಕರ ಭಾಗವಹಿಸುವಿಕೆ ಕಡಿಮೆಯಾಗಿದೆ ಎಂಬ ಕಾರಣಕ್ಕೆ ಈ…
ನವೀನ್ ಡಿಸೋಜ ರಾತ್ರಿ ೧೦ರಿಂದ ಬೆಳಿಗ್ಗೆ ೬ರವರೆಗೆ ಧ್ವನಿವರ್ಧಕ, ಡಿಜೆ ಬಳಕೆಗೆ ನಿರ್ಬಂಧ; ನಿಯಮ ಪಾಲಿಸಲು ಪೊಲೀಸ್ ಇಲಾಖೆ ಮನವಿ…
ಭೇರ್ಯ ಮಹೇಶ್ ಕೆ.ಆರ್.ನಗರ ತಾಲ್ಲೂಕು ಪಂಚಾಯಿತಿ ಕಚೇರಿ ಕಟ್ಟಡದ ದುಸ್ಥಿತಿ; ಸಾರ್ವಜನಿಕರ ಅಸಮಾಧಾನ ಕೆ.ಆರ್.ನಗರ: ಬಿರುಕುಬಿಟ್ಟ ಗೋಡೆಗಳು, ಉದುರಿ ಬೀಳುವ…