ಆಂದೋಲನ 50

‘ಆಂದೋಲನ’ದ ಪಂಜಿನಲ್ಲಿ ಬೆಳಕು ಕಂಡವರು

-ರವಿ ಕೋಟೆ

ಹಲವರು ಮರಣದ ನಂತರವೂ ಬದುಕಿರುತ್ತಾರೆ. ಆ ಪೈಕಿ ನಮ್ಮೆಲ್ಲರ ರಾಜಶೇಖರ ಕೋಟಿ ಅವರೂ ಒಬ್ಬರು. ಆಂದೋಲನ ಪತ್ರಿಕೆಯನ್ನು ಸ್ಪರ್ಶಿಸಿದ ತಕ್ಷಣ ನೆನಪಿಗೆ ಬರುವುದೇ ಅವರು. ಸಾರ್ವಜನಿಕ ಬದುಕಿನಲ್ಲಿ ಪ್ರಖರ ದೀಪದಂತೆ ಬಾಳಿದ ಕೋಟಿಯವರ ನಡೆ-ನುಡಿ ಇಡೀ ಪತ್ರಿಕೋದ್ಯಮಕ್ಕೆ ಮಾದರಿಯಾಗುತ್ತಿತ್ತು.

ಪತ್ರಿಕೆ ಹಂಚುವ ಹುಡುಗನಾಗಿ ಚಿಕ್ಕ ವಯಸ್ಸಿನಿಂದಲೇ ಪತ್ರಿಕೋದ್ಯಮದ ಒಡನಾಟದೊಂದಿಗೆ ಬೆಳೆದ ನಾನು ಎಚ್.ಡಿ.ಕೋಟೆಯಲ್ಲಿ ಆಂದೋಲನ ಪ್ರತಿನಿಧಿಯಾಗಿ ೯ ವರ್ಷ ಕಾಲ ಕಾರ್ಯನಿರ್ವಹಿಸಿದೆ. ಅದು ಮರೆಯಲಾಗದ ಜೀವನಾನುಭವ.

ಆ ದಿನಗಳಲ್ಲಿ ರಾಜಶೇಖರ ಕೋಟಿಯವರು ಕೋಟೆ ತಾಲೂಕಿಗೆ ತುಂಬಾ ಹತ್ತಿರವಾಗಿದ್ದರು. ಕೆಎಸ್ಸಾರ್ಟಿಸಿ ಬಸ್ ಮೂಲಕ ಪತ್ರಿಕೆ ಬಂಡಲ್ ಕೋಟೆಗೆ ತಡವಾಗಿ ತಲುಪುತ್ತಿತ್ತು. ಇದರಿಂದ ವಿತರಣೆಗೆ ತೊಂದರೆಯಾಗುತ್ತಿದೆ ಎಂದು ಅವಲತ್ತುಕೊಂಡಾಗ ಕಾರಿನ ವ್ಯವಸ್ಥೆ ಮಾಡಿ ಬೇಗ ತಲುಪುವಂತೆ ಮಾಡಿದ್ದರು. ಒಮ್ಮೆ ಅದು ಕೈಕೊಟ್ಟಾಗ, ಕೋಟಿಯವರೇ ಸ್ವತ: ಕಾರು ಡ್ರೈವ್ ಮಾಡಿಕೊಂಡು ಬಂದು ಬೆಳಗಿನ ಜಾವದಲ್ಲಿ ಪತ್ರಿಕೆ ಬಂಡಲ್ ತಂದುಕೊಟ್ಟಿದ್ದರು. ವೃತ್ತಿ ಮೇಲಿನ ಅವರ ಬದ್ಧತೆಗೆ ಇದು ಸಾಕ್ಷಿ.

ಆನೆ ಹಾವಳಿ ಕುರಿತು ನಾನು ನೀಡಿದ ಸುದ್ದಿಗೆ ‘ವರದಿ-ರವಿ ಕೋಟೆ’ ಎಂದು ಅವರು ಮೊದಲ ಬಾರಿಗೆ ಬೈಲೈನ್ ಕೊಟ್ಟಾಗ ನಾನು ಸಂಭ್ರಮಿಸಿದ್ದೆ.
ಎಚ್.ಡಿ.ಕೋಟೆ ತಾಲ್ಲೂಕಿನ ಸಮಸ್ಯೆಗಳ ಬಗ್ಗೆ ಆಗಾಗ ತಮ್ಮ ಜನಪ್ರಿಯ ಅಂಕಣ ‘ಇದ್ದದು ಇದ್ದಾಂಗ’ದಲ್ಲಿ ಬರೆಯುತ್ತಿದ್ದರು. ಹಲವಾರು ಸಂದರ್ಭಗಳಲ್ಲಿ ಜನತೆಯ ಕಷ್ಟ ಸುಖಗಳಿಗೆ ಉದಾರ ಮನಸ್ಸಿನಿಂದ ಸ್ಪಂದಿಸುತ್ತಿದ್ದರು. ಪಟ್ಟಣ ಮತ್ತು ಗ್ರಾಮಾಂತರದಲ್ಲಿ ಬಸ್ ತಂಗುದಾಣಗಳನ್ನು ಕಟ್ಟಿಸಿಕೊಟ್ಟಿದ್ದರು. ಒಮ್ಮೆ ಆಂದೋಲನ ಕಚೇರಿಯಲ್ಲಿ ರಿಯಲ್ ಸ್ಟಾರ್ ಉಪೇಂದ್ರ ಅವರ ಫೋನ್ ಇನ್ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಅಭಿಮಾನಿಯಾಗಿ ಅವರೊಂದಿಗೆ ಫೊಟೋ ತೆಗೆಸಿಕೊಳ್ಳಬೇಕೆಂದು ಅಲ್ಲಿಗೆ ಹೋದಾಗ ನೆರೆದಿದ್ದ ಜನಜಂಗುಳಿಯ ಕಂಡು ದೂರ ನಿಂತಿದ್ದೆ. ನನ್ನನ್ನು ಗಮನಿಸಿದ ರಾಜಶೇಖರ ಕೋಟಿಯವರು ಕರೆದು ಉಪೇಂದ್ರ ಅವರೊಂದಿಗೆ ಫೋಟೋ ತೆಗೆಸಿಕೊಳ್ಳುವುದಕ್ಕೆ ಅವಕಾಶ ಮಾಡಿಕೊಟ್ಟರು. ಇಂತಹ ಸೂಕ್ಷ್ಮತೆ ಎಲ್ಲರಲ್ಲೂ ಕಾಣಲು ಸಾಧ್ಯವಿಲ್ಲ.

ಮೈಸೂರು ಕೆ.ಆರ್.ಸರ್ಕಲ್ ಬಳಿ ಅವರು ಬೆಳಗಿನ ಜಾವ ಪತ್ರಿಕೆ ಮಾರಾಟ ಮಾಡುತ್ತಿದ್ದುದನ್ನು ನೋಡಿದ್ದೇನೆ. ಜನಪರ ಹೋರಾಟ ಹಾಗೂ ಕಾರ್ಯಗಳಲ್ಲಿ ಸಕ್ರಿಯವಾಗಿ ಭಾಗಿಯಾಗುತ್ತಿದ್ದರು. ಆಟೋ ಚಾಲಕರ ಕ್ಷೇಮಾಭಿವೃದ್ಧಿ ಸಂಘಕ್ಕೆ ಆಸರೆಯಾಗಿದ್ದರು. ಕಳೆದ ೫೦ ವರ್ಷಗಳಲ್ಲಿ ರಾಜಶೇಖರ ಕೋಟಿಯವರ ಆಂದೋಲನದ ಪಂಜಿನಲ್ಲಿ ಬೆಳಕು ಕಂಡವರು ಅದೆಷ್ಟೋ ಮಂದಿ. ಅವರಲ್ಲಿ ನಾನೂ ಒಬ್ಬನಾಗಿರುವುದಕ್ಕೆ ಹೆಮ್ಮೆಯೂ ಇದೆ, ಧನ್ಯತೆಯೂ ಇದೆ.

ಮಾನನಷ್ಟದ ನಂಟು..!

ಎಷ್ಟೇ ಪ್ರಭಾವಿಯಾಗಿದ್ದರೂ ತಪ್ಪು ಕಂಡಾಗ ನೇರವಾಗಿ, ನಿರ್ದಾಕ್ಷಿಣ್ಯವಾಗಿ ಬರೆಯುತ್ತಿದ್ದ ಕೋಟಿ ಅವರ ಬರವಣಿಗೆ ಅವರನ್ನು ತಾಲ್ಲೂಕಿಗೆ ಮೊದಲ ಬಾರಿ ಕಾಲಿಡುವಂತೆ ಮಾಡಿತ್ತು ಎಂಬುದು ಕುತೂಹಲಕಾರಿ ಸಂಗತಿ.

ಆ ದಿನಗಳಲ್ಲಿ ಎಚ್.ಡಿ ಕೋಟೆ ತಾಲೂಕಿನಲ್ಲಿ ಮರಗಳ್ಳರ ಹಾವಳಿ ಜಾಸ್ತಿ ಇತ್ತು. ಆಂದೋಲನದಲ್ಲಿ ಈ ಬಗ್ಗೆ ಸರಣಿ ವರದಿಗಳು ಬಂದ ನಂತರ ಲಕ್ಷಾಂತರ ಮೌಲ್ಯದ ಮರಗಳು ಸರ್ಕಾರದ ವಶವಾಯಿತು. ಈ ಮಧ್ಯೆ ಆರ್‌ಎಫ್‌ಓ ಒಬ್ಬರು ಮಾನನಷ್ಟ ಮೊಕದ್ದಮೆ ಹೂಡಿದ್ದರಿಂದ ಕೋಟಿಯವರು ತಾಲ್ಲೂಕು ಕೇಂದ್ರಕ್ಕೆ ಆಗಾಗ ಬರಬೇಕಾಯಿತು. ಆ ಸಂದರ್ಭದಲ್ಲಿ ಕೋಟೆ ತಾಲ್ಲೂಕಿನ ಜನತೆಯೊಂದಿಗೆ ನಿಕಟ ಸಂಪರ್ಕ ಬೆಳೆಯಿತು. ಐದು ವರ್ಷ ಕಾಲ ನಡೆದ ಮಾನನಷ್ಟ ಪ್ರಕರಣದ ತೀರ್ಪು ಪತ್ರಿಕೆ ಪರವಾಗಿ ಬಂದು ಮೊಕದ್ದಮೆ ವಜಾಗೊಂಡಿತು.ಕೋಟಿಯವರು ಕೋಟೆಗೆ ಬಂದಾಗಲೆಲ್ಲ ಜನ ಗುಂಪುಗೂಡಿ ಅವರೊಂದಿಗೆ ಮಾತುಕತೆ ನಡೆಸುತ್ತಿದ್ದರು. ಅದು ಎಂದೂ ಹರಟೆಯಾಗದೆ ತಾಲೂಕಿನ ಸಮಸ್ಯೆಗಳ ಬಗ್ಗೆಯೇ ಗಹನ ಚರ್ಚೆಯಾಗುತ್ತಿತ್ತು.

andolana

Recent Posts

ಆಂದೋಲನ ಸಂಪಾದಕೀಯ | ಅಡ್ಡ ಮತದಾನ : ರಾಜಕಾರಣದ ನೈತಿಕ ದಿವಾಳಿತನ

ಅಡ್ಡ ಮತದಾನ ಮಾಡಿ ‘ಆತ್ಮ ಸಾಕ್ಷಿ’ಯೆಂಬ ತಡೆಗೋಡೆಯ ರಕ್ಷಣೆ ಪಡೆದಿರುವ ಶಾಸಕರ ಪತ್ತೆಗೆ ‘ಸತ್ಯಶೋಧನೆ’, ‘ಆಣೆ-ಪ್ರಮಾಣ’ಗಳೆಲ್ಲವೂ ಗುಡ್ಡ ಅಗೆದು ಇಲಿ…

35 mins ago

ಮಹಾಪಂಚ್‌ ಕಾರ್ಟೂನ್‌

ಮಹಾಪಂಚ್‌ ಕಾರ್ಟೂನ್‌ | ಜೂನ್‌ 22 ಸೋಮವಾರ

1 hour ago

ನೀಟ್-ಯುಜಿ ಮರುಪರೀಕ್ಷೆ : ಪರೀಕ್ಷೆ ಬರೆದ 22 ಲಕ್ಷ ವಿದ್ಯಾರ್ಥಿಗಳು

ಹೊಸದಿಲ್ಲಿ : ದೇಶದಾದ್ಯಂತ ವೈದ್ಯಕೀಯ ಕೋರ್ಸ್‌ಗಳ ಪ್ರವೇಶಕ್ಕಾಗಿ ನಡೆದ ನೀಟ್-ಯುಜಿ ಮರುಪರೀಕ್ಷೆಯಲ್ಲಿ 22 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ಬರೆದರು. ದೇಶದ…

12 hours ago

ತಮಿಳುನಾಡು ಸೀಫುಡ್‌ ಘಟಕದಲ್ಲಿ ಅನಿಲ ಸೋರಿಕೆ ; 7 ಜನ ಸಾವು, ಹಲವರು ಗಂಭೀರ

ಚೆನ್ನೆ : ಇಲ್ಲಿನ ತಿರುವಳ್ಳೂರಿನಲ್ಲಿರುವ ಸೀಗಡಿ ಸಂಸ್ಕರಣಾ ಕಾರ್ಖಾನೆಯಲ್ಲಿ ಭಾನುವಾರ ಮಧ್ಯಾಹ್ನ ಅಮೋನಿಯಾ ಅನಿಲ ಸೋರಿಕೆಯಾಗಿ, ಏಳು ಮಂದಿ ಮಹಿಳಾ…

13 hours ago

ಬೆಂಗಾಳಿಗಳನ್ನು ಬಾಂಗ್ಲಾ ವಲಸಿಗರೆಂದು ಗ್ರಹಿಕೆ ; ಮೈಸೂರು ರೈಲ್ವೆ ನಿಲ್ದಾಣದಲ್ಲಿ ಕೆಲಕಾಲ ಆತಂಕ

ಆಧಾರ್‌ ಕಾರ್ಡ್‌ ಪರಿಶೀಲನೆ ನಂತರ ಶಂಕೆ ನಿವಾರಣೆ ಮೈಸೂರು : ಪಶ್ಚಿಮ ಬಂಗಾಳದಿಂದ ಬಂದವರನ್ನು ಬಾಂಗ್ಲಾ ದೇಶದ ನಿವಾಸಿಗಳೆಂದು ತಿಳಿದ…

14 hours ago

ಚಾ.ನಗರ | ಸಿದ್ದಲಿಂಗಪುರ ಬಳಿ ಹುಲಿ ದಾಳಿ ; 4 ಮೇಕೆಗಳು ಸಾವು

ರೈತರು, ದನಗಾಹಿಗಳಲ್ಲಿ ಆತಂಕ ಬೇಗ ಹುಲಿ ಸೆರೆ ಹಿಡಿಯಲು ಆಗ್ರಹ ಚಾಮರಾಜನಗರ : ತಾಲ್ಲೂಕಿನ ಸಿದ್ದಲಿಂಗಪುರದ ಸಮೀಪ ಭಾನುವಾರ ಮಧ್ಯಾಹ್ನ…

15 hours ago