ಎಚ್.ಡಿ.ಕೋಟೆ ತಾಲೂಕಿನ ಭಾಗವಾಗಿದ್ದ ಸರಗೂರು ಈಗ ಸ್ವತಂತ್ರ ತಾಲ್ಲೂಕು. ಹೊಸ ತಾಲ್ಲೂಕು ನಿರ್ಮಾಣಗೊಂಡು ಆರು ವರ್ಷಗಳೇ ಉರುಳಿವೆ. ಸಾಕಷ್ಟು ಹೋರಾಟಗಳು ನಡೆದು ೨೦೧೬ರ ಆಗಸ್ಟ್ ನಲ್ಲಿ ನೂತನ ತಾಲ್ಲೂಕು ಘೋಷಣೆಯಾದಾಗ ಜನರು ಪಟಾಕಿ ಹೊಡೆದು ಸಂಭ್ರಮಿಸಿದ್ದರು. ಆದರೆ ನಂತರ ತಾಲ್ಲೂಕು ಸ್ಥಾನಮಾನಕ್ಕೆ ತಕ್ಕುದಾದ ಯಾವುದೂ ಬಂದಿಲ್ಲ . ತಾಲೂಕಿಗೆ ಬೇಕಾದ ಇಲಾಖೆಗಳು, ಆಡಳಿತ ವ್ಯವಸ್ಥೆಯೂ ಸಹ ಸರಗೂರಿಗೆ ಬಂದಿಲ್ಲ. ಮೂಲ ಸೌಕರ್ಯಗಳ ಕೊರತೆ ಢಾಳಾಗಿ ಎದ್ದು ಕಾಣುತ್ತಿದೆ. ಸರಗೂರು ತಾಲ್ಲೂಕು ಆಗಿರುವ ಖುಷಿಯ ಜತೆಗೆ ಆಗಬೇಕಾದ ಕೆಲಸಗಳನ್ನು ಇಲ್ಲಿನ ಜನತೆ ಪಟ್ಟಿ ಮಾಡುತ್ತಿದ್ದಾರೆ.
ಸರಗೂರು ತಾಲ್ಲೂಕು ಕೇಂದ್ರವಾಗಬೇಕು. ಜನರು ಜಮೀನಿನ ಪತ್ರಗಳಿಗೆ, ಜಾತಿ, ಆದಾಯ ಮತ್ತಿತರ ವೈಯಕ್ತಿಕ ದಾಖಲೆಗಳಿಗೆ ದೂರದ ಎಚ್.ಡಿ.ಕೋಟೆಗೆ ಅಲೆಯುವುದನ್ನು ತಪ್ಪಿಸಬೇಕು. ಈ ಭಾಗದ ಜನರಿಗೆ ಪ್ರತಿಯೊಂದು ಸೌಲಭ್ಯಗಳು ಸರಗೂರು ಕೇಂದ್ರದಲ್ಲಿಯೇ ದೊರಕುವಂತಾಗಬೇಕು ಎಂಬ ಉದ್ದೇಶದಿಂದ ಬರೋಬ್ಬರಿ ೨೦ ವರ್ಷಗಳ ಕಾಲ ನಿರಂತರ ಹೋರಾಟ ನಡೆದಿತ್ತು.
ಸ್ವಾತಂತ್ರ್ಯ ಹೋರಾಟಗಾರರಾಗಿದ್ದ ಸಿ.ಪಿ.ಅಪ್ಪ ಅವರ ಮಾರ್ಗದರ್ಶನದಲ್ಲಿ ಸರಗೂರು ತಾಲ್ಲೂಕು ಅಭಿವೃದ್ಧಿ ಹೋರಾಟ ಸಮಿತಿ ರಚನೆಯಾಗಿ, ಪದ್ಮಪ್ರಸಾದ್ ಅವರ ಅಧ್ಯಕ್ಷತೆಯಲ್ಲಿ ಸರಗೂರು ತಾಲ್ಲೂಕಿಗಾಗಿ ೧೯೯೬ರಲ್ಲಿ ಹೋರಾಟ ಆರಂಭವಾಗಿತ್ತು. ಲಕ್ಷ್ಮಣ್ಣೇಗೌಡ, ಪದ್ಮಪ್ರಸಾದ್, ಎಸ್.ವಿ.ವೆಂಕಟೇಶ್, ಸರಗೂರು ಕೃಷ್ಣ, ಟೋಕನ್ ನಾಗರಾಜು, ಮುಜೀಬ್, ಶಿವಣ್ಣ, ಉಗ್ರಪ್ಪ, ಭೀಮರಾಜ್, ಮಹದೇವಸ್ವಾಮಿ ಸೇರಿದಂತೆ ಸಾಕಷ್ಟು ಮಂದಿ ಈ ಹೋರಾಟದಲ್ಲಿ ಭಾಗಿಯಾಗಿದ್ದರು.
ಆರಂಭದಲ್ಲಿ ಈ ಹೋರಾಟದ ಮೂಲಕ ಸರಕಾರದ ಗಮನ ಸೆಳೆಯಲು ಸಾಧ್ಯವಾಗಲಿಲ್ಲ. ನಂತರ ಸರಗೂರು ತಾಲ್ಲೂಕು ಅಭಿವೃದ್ಧಿ ಹೋರಾಟ ಸಮಿತಿ ಮೂಲಕ ರಾಜ್ಯದ ಮುಖ್ಯಮಂತ್ರಿಗಳಿಗೆ ನೇರವಾಗಿ ಮನವಿ ನೀಡುವ ಪ್ರಯತ್ನ ಮಾಡಲಾಯಿತು. ಅದರಂತೆ ಎಸ್.ಎಂ.ಕೃಷ್ಣ, ಧರ್ಮಸಿಂಗ್, ಸದಾನಂದ ಗೌಡ, ಯಡಿಯೂರಪ್ಪ, ಸಿದ್ಧರಾಮಯ್ಯರವರನ್ನು ಭೇಟಿಯಾಗಿ ಮನವಿಗಳನ್ನು ಸಲ್ಲಿಸಲಾಯಿತು. ಸದಾನಂದಗೌಡ ಸಿಎಂ ಆಗಿದ್ದ ಅವಧಿಯಲ್ಲಿ ಸರಗೂರು ತಾಲ್ಲೂಕು ರಚನೆ ಸಂಬಂಧ ಸುತ್ತೂರು ಶ್ರೀಗಳ ನೇತೃತ್ವದಲ್ಲಿ ಸಭೆ ನಡೆಯಿತಾದರು, ಕಾರ್ಯರೂಪಕ್ಕೆ ಬರಲಿಲ್ಲ. ಬಳಿಕ ೨೦೧೬ರಲ್ಲಿ ಸಿದ್ಧರಾಮಯ್ಯ ಅವರು ಸಿಎಂ ಮತ್ತು ಆರ್. ಧ್ರುವನಾರಾಯಣ್ ಅವರು ಸಂಸದರಾಗಿದ್ದ ಕಾಲದಲ್ಲಿ ಸರಗೂರನ್ನು ನೂತನ ತಾಲ್ಲೂಕು ಆಗಿ ಘೋಷಣೆ ಮಾಡಲಾಯಿತು.
ಆರಂಭದಲ್ಲಿ ಹೋರಾಟ ಸರಗೂರು ಪಟ್ಟಣಕ್ಕಷ್ಟೇ ಸೀಮಿತವಾಗಿತ್ತು. ನಂತರ ಸರಗೂರು ತಾಲ್ಲೂಕು ಅಭಿವೃದ್ಧಿ ಹೋರಾಟ ಸಮಿತಿ ಗ್ರಾಮ ಮಟ್ಟದಲ್ಲಿ ಸಂಚರಿಸಿ ಪ್ರತಿಗ್ರಾಮದಿಂದ ಜನರನ್ನು ಸಂಘಟನೆಗೆ ಸೇರಿಸಿಕೊಂಡು ೨೦೦ ಸದಸ್ಯರ ಸಮಿತಿಯನ್ನು ರಚಿಸಲಾಯಿತು. ಇದಾದ ಬಳಿಕ ಹೋರಾಟ ತೀವ್ರತೆ ಪಡೆದುಕೊಂಡಿತು. ಸಾಕಷ್ಟು ಸಂಘ ಸಂಸ್ಥೆಗಳು, ಪ್ರಗತಿಪರ ಹೋರಾಟಗಾರರು, ಚಳವಳಿಗಾರರು ಹೋರಾಟದ ಜತೆ ಕೈ ಜೋಡಿಸಿದರು. ನಿರಂತರ ಪ್ರತಿಭಟನೆ, ಜಾಗೃತಿ, ಪತ್ರಿಕಾಗೋಷ್ಠಿಗಳ ಮೂಲಕ ಹೋರಾಟದ ಕಾವನ್ನು ಜೀವಂತವಾಗಿರಿಸಿಕೊಳ್ಳಲಾಯಿತು. ಸರಗೂರು ತಾಲ್ಲೂಕಾಗಿ ನಿರ್ಮಾಣವಾದರೆ ಸಾರ್ವಜನಿಕರಿಗೆ ಆಗುವ ಅನುಕೂಲಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸುವ ಜೊತೆಗೆ, ಕ್ಷೇತ್ರಕ್ಕೆ ಭೇಟಿ ನೀಡುವ ಚುನಾಯಿತ ಪ್ರತಿನಿಧಿಗಳಿಗೆ ನಿರಂತರವಾಗಿ ಮನವಿ ಪತ್ರಗಳನ್ನು ನೀಡಲಾಯಿತು. ಹೋರಾಟಗಾರರ ಒತ್ತಡಕ್ಕೆ ಮಣಿದ ಸರಕಾರ ೨೦೧೬ರ ಆಗಷ್ಟ್ ೧೮ ರಂದು ಸರಗೂರನ್ನು ನೂತನ ತಾಲ್ಲೂಕಾಗಿ ಘೋಷಣೆ ಮಾಡಿತು.
ಕನಸಾಗಿ ಉಳಿದ ಅಭಿವೃದ್ಧಿ : ಸರಗೂರು ತಾಲ್ಲೂಕು ಅಸ್ತಿತ್ವಕ್ಕೆ ಬಂದರೂ, ತಾಲ್ಲೂಕು ಕೇಂದ್ರಕ್ಕೆ ಬೇಕಾದ ಮೂಲ ಸೌಕರ್ಯ ಮತ್ತು ಕಚೇರಿಗಳು ಇನ್ನೂ ಕನಸಾಗಿಯೇ ಉಳಿದಿದೆ. ನಾಗರಿಕರು ಈ ಸಂಬಂಧ ಅಸಮಾಧಾನ ವ್ಯಕ್ತಪಡಿಸುತ್ತಲೇ ಇದ್ದಾರೆ. ಹೋರಾಟಗಳು ಆಗಾಗ ನಡೆಯುತ್ತಲೇ ಇವೆ.
ಸರಗೂರು ತಾಲ್ಲೂಕಾದ ಬಳಿಕ ಎಲ್ಲಾ ಇಲಾಖೆಗಳು ಇಲ್ಲೆಯೇ ಆರಂಭಗೊಂಡು ಕಾಡಂಚಿನ ಗ್ರಾಮಸ್ಥರಿಗೆ ಅನುಕೂಲವಾಗುತ್ತದೆ. ಎಂಬ ಉದ್ದೇಶವಿತ್ತು. ಆದರೆ ಇಂದಿಗೂ ಈ ಭಾಗದ ಜನರು ತಮ್ಮ ಪ್ರತಿಯೊಂದು ಕಾರ್ಯಚಟುವಟಿಕೆಗೆ ಎಚ್.ಡಿ.ಕೋಟೆಗೆ ಅಲೆಯುವ ಪ್ರಮೇಯ ತಪ್ಪಿಲ್ಲ.
ಜನಪ್ರತಿನಿಧಿಗಳು ಈ ಭಾಗದಲ್ಲಿ ಒಂದು ತಾಲ್ಲೂಕು ಮಟ್ಟದಲ್ಲಿ ಜನಸ್ಪಂದನಾ ಸಭೆಯನ್ನು ನಡೆಸಿ ಇಲ್ಲಿನ ಜನರ ಸಮಸ್ಯೆಗಳನ್ನು ಅರಿತು ಪ್ರತಿಯೊಂದು ಸೌಲಭ್ಯಗಳನ್ನು ಇಲ್ಲೇಯೇ ಕಲ್ಪಿಸಬೇಕು ಎಂಬುದು ಈ ಭಾಗದ ಜನರ ಬಹುದೊಡ್ಡ ಬೇಡಿಕೆಯಾಗಿದೆ.
ಹೋರಾಡಿ ಕೇಸು ಹಾಕಿಸಿಕೊಂಡರು
೧೯೯೬ರಲ್ಲಿ ಆರಂಭವಾದ ಮೊದಲ ಹೋರಾಟದಲ್ಲಿ ಹ್ಯಾಂಡ್ ಪೋಸ್ಟ್ ಬಳಿ ರಸ್ತೆ ತಡೆ ಮಾಡಿ ಪ್ರತಿಭಟಿಸಲಾಗಿತ್ತು. ಈ ವೇಳೆ ಸರಗೂರಿನ ಬಾಡಗ, ಮಟಕೆರೆ, ಬಡಗಲಪುರ, ಚಾಮಲಾಪುರ, ಮುಳ್ಳೂರು ಸೇರಿಂದಂತೆ ಪ್ರತಿ ಗ್ರಾಮದಿಂದಲೂ ಸುಮಾರು ೨೦೦೦ಕ್ಕೂ ಅಧಿಕ ಮಂದಿ ಭಾಗಿಯಾಗಿ ಪ್ರತಿಭಟನೆ ನಡೆಸಿದ್ದರು. ಪ್ರತಿಭಟನೆಯ ಮುಂಚೂಣಿಯಲ್ಲಿದ್ದ ತಾನು, ಸರಗೂರು ಕೃಷ್ಣ, ಲಕ್ಷ್ಮಣೇಗೌಡ ಸೇರಿದಂತೆ ಸುಮಾರು ೨೭ ಮಂದಿಯ ಮೇಲೆ ಪ್ರಕರಣ ದಾಖಲಾಗಿ ೪ ವರ್ಷ ಕೋರ್ಟ್ಗೆ ಅಲೆದಾಡಿದ್ದನ್ನು ಸಮಿತಿಯ ಅಧ್ಯಕ್ಷ ಪದ್ಮಪ್ರಸಾದ್ ಈಗಲೂ ನೆನಪಿಸಿಕೊಳ್ಳುತ್ತಾರೆ.
ಪ್ರತಿಯೊಬ್ಬರ ಸಹಕಾರವಿತ್ತು..
೧೯೯೬ರಲ್ಲಿ ಆರಂಭವಾದ ನಮ್ಮ ಹೋರಾಟ ೨೦೧೬ರ ವರೆಗೂ ನಿರಂತರವಾಗಿ ನಡೆಯಿತು. ಸಾಕಷ್ಟು ಅಡಚಣೆಗಳು, ತೊಂದರೆಗಳು, ಸಮಸ್ಯೆಗಳನ್ನು ಸೃಷ್ಟಿಸಿದರು. ಆದರೂ ಸಹ ಪಟ್ಟು ಬಿಡದೆ ಈ ಭಾಗದ ಜನರ ಅನುಕೂಲಕ್ಕಾಗಿ ಹೋರಾಡಿದ್ದೆವು. ಇದಕ್ಕಾಗಿ ತಾಲೂಕಿನ ಪ್ರತಿಯೊಂದು ಗ್ರಾಮದ ಜನರ ಸಹಕಾರವಿತ್ತು. ಪರಿಣಾಮ ಸಿದ್ಧರಾಮಯ್ಯ ಮತ್ತು ಧ್ರುವ ನಾರಾಯಣ ಅವರು ಸರಗೂರನ್ನು ತಾಲೂಕಾಗಿಸಿದರು.
-ಪದ್ಮಪ್ರಸಾದ್, ಸರಗೂರು ತಾಲೂಕು ಅಭಿವೃದ್ಧಿ ಸಮಿತಿ ಅಧ್ಯಕ್ಷ
ಜನಸ್ಪಂದನಾ ಸಭೆ ಅಗತ್ಯ
ಸರಗೂರಿಗೆ ಸೌಲಭ್ಯಗಳನ್ನು ಒದಗಿಸಿ ಎಂದು ಮತ್ತೆ ಹೋರಾಟ ನಡೆಸಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ. ಜನಪ್ರತಿನಿಧಿಗಳು ಸರಗೂರನ್ನು ಕಡೆಗಣಿಸಿದ್ದಾರೆ. ಇಲ್ಲಿ ಕನಿಷ್ಟ ಮೂಲಭೂತ ಸೌಕರ್ಯವು ಸಹ ಇಲ್ಲದಂತಾಗಿದೆ. ಮೊದಲು ಕೇಂದ್ರಸ್ಥಾನದಲ್ಲಿ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳನ್ನು ಒಳಗೊಂಡ ಒಂದು ಬೃಹತ್ ಜನಸ್ಪಂದನಾ ಸಭೆಯಾಗಬೇಕು.
-ಸರಗೂರು ಕೃಷ್ಣ, ಸರಗೂರು ಅಭಿವೃದ್ಧಿ ಸಮಿತಿ ಸಂಚಾಲಕ
ಮಹಾದೇಶ್ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು ಹನೂರು: ತಾಲ್ಲೂಕಿನ ಪ್ರತಿ ಗ್ರಾಮಗಳಿಗೂ ಕೆಎಸ್ಆರ್ಟಿಸಿ ಸೌಲಭ್ಯ ಕಲ್ಪಿಸಲು ತಾಲೂಕು ಕೇಂದ್ರದಲ್ಲಿ…
ಶ್ರೀರಂಗಪಟ್ಟಣ: ವಿದ್ಯುತ್ ಸ್ಪರ್ಶದಿಂದ ಕರ್ತವ್ಯ ನಿರತ ಲೈನ್ಮ್ಯಾನ್ ಸಾವನ್ನಪ್ಪಿರುವ ಘಟನೆ ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲ್ಲೂಕಿನ ಹೆಬ್ಬಾಡಿ ಗ್ರಾಮದಲ್ಲಿ ನಡೆದಿದೆ.…
ಬೆಂಗಳೂರು: ರಾಜ್ಯದ ಹಲವೆಡೆ ಇಂದು ಧಾರಾಕಾರ ಮಳೆಯಾಗಿದ್ದು, ಭಾರೀ ಅವಾಂತರ ಸೃಷ್ಟಿ ಮಾಡಿದೆ. ಚಿಕ್ಕಮಗಳೂರು, ಶಿವಮೊಗ್ಗ ಸೇರಿದಂತೆ ರಾಜ್ಯದ ಹಲವೆಡೆ…
ಮಹಾದೇಶ್ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು ಹನೂರು: ಮಾರ್ಟಳ್ಳಿ, ಕೌದಳ್ಳಿ, ಶೆಟ್ಟಳ್ಳಿ, ಕುರಟ್ಟಿ ಹೊಸೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ…
ಮೈಸೂರು: ಅರಮನೆಗಳ ನಗರಿ ಮೈಸೂರಿನಲ್ಲಿ ಅವೈಜ್ಞಾನಿಕವಾಗಿ ಟ್ರಾಫಿಕ್ ಸಿಗ್ನಲ್ ಅಳವಡಿಸಲಾಗಿದೆ ಎಂದು ಸಾರ್ವಜನಿಕರು ಕಿಡಿಕಾರುತ್ತಿರುವ ವಿಚಾರಕ್ಕೆ ಸಂಬಂಧಿಸಿದಂತೆ ಸಚಿವ ಮಹದೇವಪ್ಪ…
ಕೋಲ್ಕತ್ತಾ: ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಗೆ ದಿನಗಣನೆ ಶುರುವಾಗಿರುವ ಹಿನ್ನೆಲೆಯಲ್ಲಿ ಸಿಎಂ ಮಮತಾ ಬ್ಯಾನರ್ಜಿ ವಿರುದ್ಧ ಕೇಂದ್ರ ಗೃಹ ಸಚಿವ…