ಬೆಂಗಳೂರು: ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಮಹಿಳಾ ಲೇಖಕಿಯರನ್ನು ಕಡೆಗಣಿಸಿರುವುದಲ್ಲದೇ ಈ ಸಂಬಂಧ ಧಾರ್ಷ್ಟ್ಯದಿಂದ ಉತ್ತರಿಸಿರುವ ಕಸಾಪ ಅಧ್ಯಕ್ಷರ ನಡೆ ಖಂಡಿಸಿ ಸಮ್ಮೇಳನ ಬಹಿಷ್ಕರಿಸಿರುವುದಾಗಿ ಕರ್ನಾಟಕ ಲೇಖಕಿಯರ ಸಂಘ ತಿಳಿಸಿದೆ.
ಸಾಹಿತ್ಯ ಸಮ್ಮೇಳನದ ಆಹ್ವಾನ ಪತ್ರಿಕೆಯನ್ನು ನೋಡಿದರೆ ಕನ್ನಡ ಸಾಹಿತ್ಯದಲ್ಲಿ ಸಾಧನೆ ಮಾಡಿದ ಬೆರಳೆಣಿಕೆಯ ಮಹಿಳೆಯರು ಮಾತ್ರ ಕಾಣುತ್ತಿದ್ದಾರೆ. ಮಹಿಳಾ ಸಾಹಿತ್ಯದಲ್ಲಿ ಎಷ್ಟೊಂದು ಪ್ರತಿಭಾವಂತ ಲೇಖಕಿಯರು ಹೊಸಬರು, ಹಳಬರನ್ನು ಒಳಗೊಂಡಂತೆ ಬರೆಯುತ್ತಿದ್ದಾರೆ. ಕನ್ನಡ ಸಾಹಿತ್ಯ ಪರಿಷತ್ತು ದೊಡ್ಡ ಸಂಖ್ಯೆಯಲ್ಲಿ ಬರೆಯುತ್ತಿರುವ ಲೇಖಕಿಯರನ್ನು ಒಳಗೊಳ್ಳಬೇಕೆಂಬ ವಿವೇಚನೆಯನ್ನು ಮರೆಯಿತೆ ಎಂದು ಕರ್ನಾಟಕ ಲೇಖಕಿಯರ ಸಂಘ, ಅಧ್ಯಕ್ಷೆ ಡಾ. ಎಚ್.ಎಲ್. ಪುಷ್ಪಾ ಪ್ರಶ್ನಿಸಿದ್ದಾರೆ.
ಕನ್ನಡ ಸಾಹಿತ್ಯ ಪರಿಷತ್ತು ಜನಪ್ರತಿನಿಧಿಗಳ, ಲೇಖಕ/ ಲೇಖಕಿಯರ ಪ್ರಾತಿನಿಧಿಕ ಸಂಸ್ಥೆ. ಅಧ್ಯಕ್ಷರು ಈ ಸಂಸ್ಥೆಯನ್ನು ಪ್ರತಿನಿಧಿಸುತ್ತಾರೆ. ಕನ್ನಡಿಗರ ಆಶಯವನ್ನು, ಕನಸುಗಳನ್ನು, ನಿರೀಕ್ಷೆಗಳನ್ನು ಎದೆಯಲ್ಲಿಟ್ಟುಕೊಂಡೇ ಅವರು ಕೆಲಸ ಮಾಡಬೇಕಾಗುತ್ತದೆ. ಆದರೆ, ಸಮ್ಮೇಳನದಲ್ಲಿ ಲೇಖಕಿಯರನ್ನು/ ಮಹಿಳೆಯರನ್ನು ಮೆರವಣಿಗೆಯಲ್ಲಿ ಕೇವಲ ಕುಂಭಗಳನ್ನು ಹೊರುವ ಕೆಲಸಕ್ಕಾಗಿ ಬಳಸಿಕೊಳ್ಳುವುದು ಎಷ್ಟರ ಮಟ್ಟಿಗೆ ಸರಿ? ಕೇವಲ ಅಲಂಕಾರ ನಿರ್ವಹಣೆಗೆ ಮಾತ್ರ ಅವರು ಮೀಸಲಾಗಿದ್ದಾರೆಯೇ? ಸಾಧಕರಿಗೆ ಸನ್ಮಾನವೆಂದರೆ ಮಹಿಳೆಯರೆಂದರೆ ಕೇವಲ ದಾನಿಗಳು, ಸಂಗೀತ ತಜ್ಞರು, ವಿಶೇಷ ಚೇತನರು ಮಾತ್ರ ಆಗಿದ್ದಾರೆಯೇ? ಉಳಿದವರು ಏಕಿಲ್ಲ ಎಂದು ಅವರು ಪ್ರಶ್ನಿಸಿದ್ದಾರೆ.
ಸಾಹಿತ್ಯ ಪರಿಷತ್ತು, ಅಕಾಡೆಮಿಗಳು, ಸರ್ಕಾರದ ಅನುದಾನ ಪಡೆಯುವ ಎಲ್ಲ ಸಂಸ್ಥೆಗಳು ಸಾಮಾಜಿಕ ನ್ಯಾಯವನ್ನು ಪಾಲಿಸಲೇಬೇಕಾಗುತ್ತದೆ. ಯಾವುದೋ ರಾಜಕೀಯ ಪಕ್ಷದ ಹಿತಾಸಕ್ತಿ ಪೂರೈಸಲು ಪರಿಷತ್ತಿನ ಅಧ್ಯಕ್ಷರೆ ಆಗಬೇಕೆ? ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಿಗೆ ಸಾಮಾಜಿಕ ನ್ಯಾಯವನ್ನು ಪಾಲಿಸಲು ಇಷ್ಟೊಂದು ಮಿತಿಗಳಿವೆಯೇ? ಅಂತಃಕರಣ ಕಣ್ಣು ಮುಚ್ಚಿಕೊಂಡಿದೆಯೇ? ಅಥವಾ ಅವರಿಗೆ ವಿವೇಚನೆಯ ಕೊರತೆಯೇ?
ಮಹಿಳಾ ಗೋಷ್ಠಿ ವಿಷಯದಲ್ಲಾದರೂ ಹೊಸತನವಿದೆಯೇ? ಅದೇ ಹಳೆಯ ವಿಷಯಗಳ ಪುನಃರಾವರ್ತನೆಯಾಗುತ್ತಿದೆ.
ಪರಿಷತ್ತು ಇದುವರೆಗೂ ಸಮ್ಮೇಳನದ ಸಂದರ್ಭದಲ್ಲಿ ಕರ್ನಾಟಕ ಲೇಖಕಿಯರ ಸಂಘದ ಸಲಹೆ ಸೂಚನೆಗಳನ್ನು ತನ್ನ ಗಮನಕ್ಕೆ ತಂದುಕೊಂಡೆ ಮಹಿಳೆಗೆ ಸಂಬಂಧಿಸಿದ ಗೋಷ್ಟಿಗಳನ್ನು ವಿನ್ಯಾಸ ಮಾಡುತ್ತಾ ಬಂದಿದೆ. ಆದರೆ ಈಗ ಅದು ಆಗಿಲ್ಲ ಎಂದು ಪುಷ್ಪಾ ಅವರು ದೂರಿದ್ದಾರೆ.
ಕರ್ನಾಟಕ ಲೇಖಕಿಯರ ಸಂಘವು ಲೇಖಕಿಯರ ಪ್ರಾತಿನಿಧಿಕ ಸಂಸ್ಥೆ. 43 ವರ್ಷಗಳ ಇತಿಹಾಸವಿರುವ ಈ ಸಂಸ್ಥೆ ಸತತವಾಗಿ ಕನ್ನಡ ಕಟ್ಟುವ ಕೆಲಸದಲ್ಲಿ ತನ್ನ ಕೈಜೋಡಿಸಿದೆ. “ಲೇಖಕಿಯರ ಅಧ್ಯಕ್ಷರ ಭೇಟಿಗೆ ನಾನು ಸಮಯ ಕೊಟ್ಟಿಲ್ಲವಲ್ಲ” ಎಂಬ ಧಾರ್ಷ್ಟ್ಯದ ಉತ್ತರವನ್ನು ಕೊಟ್ಟಿರುವ ಕಸಾಪ ಅಧ್ಯಕ್ಷ ಮಹೇಶ ಜೋಶಿ, ಲೇಖಕಿಯರ ಸಂಘವನ್ನು ಪಕ್ಕಕಿಟ್ಟು ಸಾಧಿಸುವುದಾದರೂ ಏನನ್ನು? ಈ ಮಾತು ಸಮಸ್ತ ಲೇಖಕಿಯರನ್ನು ಅವಮಾನಿಸಿದಂತೆ ಅಲ್ಲವೇ? ಗಂಡಾಳ್ವಿಕೆಯ ಗೂಂಡಾಗಿರಿಯನ್ನು ಇದು ತೋರಿಸುತ್ತಿಲ್ಲವೇ? ಇದು ಸಂಪೂರ್ಣ ಖಂಡನೀಯ ಎಂದು ಹೇಳಿದ್ದಾರೆ.
ಈ ಸಮ್ಮೇಳನ ಎಂದಿಲ್ಲದ ವಿವಾದಕ್ಕೆ ಸಿಲುಕಿದೆ. ಎಂದಿನ ಸಂಭ್ರಮವಾಗಲೀ, ಸಂತೋಷವಾಗಲೀ ಸಾಹಿತ್ಯ, ಸಂಸ್ಕೃತಿಯ ವಾತಾವರಣ ಕಂಡುಬರುತ್ತಿಲ್ಲ. ಬರೀ ಆಕ್ಷೆಪಣೆ, ದೂರು ದುಮ್ಮಾನಗಳೆ ಕೇಳಿ ಬರುತ್ತಿವೆ. ಸಾಹಿತ್ಯ ಪರಿಷತ್ತು ತನ್ನ ಘನತೆಯನ್ನು, ಜವಾಬ್ದಾರಿಯನ್ನು ಮರೆತುಬಿಟ್ಟಿದೆಯೇ? ಯಾಕೆ ಇಷ್ಟು ವಿವಾದ ನಡೆಯುತ್ತಿದೆ? ಏನಾಗಿದೆ ರಾಜ್ಯಾಧ್ಯಕ್ಷರಿಗೆ ಎಂದು ಅವರು ಪ್ರಶ್ನಿಸಿದ್ದಾರೆ. ವ್ಯಕ್ತಿಗತವಾಗಿ ಎಲ್ಲರಿಗೂ ಅವರದೇ ವೈಚಾರಿಕ ಭಿನ್ನತೆಯಿರುತ್ತದೆ, ಇರಲೇಬೇಕು. ಆದರೆ ಒಂದು ಸಂಸ್ಥೆಯ ನಾಯಕತ್ವ ವಹಿಸಿದ ಮೇಲೆ ವ್ಯಕ್ತಿಗತ ಅಭಿಪ್ರಾಯವನ್ನು ಪಕ್ಕಕ್ಕೆ ಇಟ್ಟು ಕೆಲಸ ಮಾಡಬೇಕಾಗುತ್ತದೆ. ಕನಿಷ್ಟ ಇಷ್ಟು ತಿಳಿವಳಿಕೆಯಿಲ್ಲದೆ ಹೇಗೆ ಬೇಹಾವೇರಿ ಸಾಹಿತ್ಯ ಸಮ್ಮೇಳನಕಾದರೂ ಎಲ್ಲವನ್ನು ನಡೆಸಬಹುದು ಎಂಬ ನಡವಳಿಕೆ ಪರಿಷತ್ತಿನಂತಹ ಜನಪ್ರತಿನಿಧಿ ಸಂಸ್ಥೆಗೆ ತಕ್ಕನಾದುದಲ್ಲ.ಈ ನಡವಳಿಕೆ ಕರ್ನಾಟಕ ಲೇಖಕಿಯರ ಸಂಘ ಹಾಗೂ ಲೇಖಕಿಯರಿಗೆ ಮಾಡಿದ ಅವಮಾನವೆಂದೇ ನಾನು ಭಾವಿಸುತ್ತೇನೆ. ಲೇಖಕಿಯರನ್ನು ಕುರಿತ ಉಪೇಕ್ಷೆಯನ್ನು ಕಲೇಸಂನ ಪ್ರತಿನಿಧಿಯಾಗಿ ಈ ಮೂಲಕ ವಿರೋಧಿಸಿ ಸಮ್ಮೇಳನ ಬಹಿಷ್ಕಾರ ಮಾಡುತ್ತಿದ್ದೇವೆ ಎಂದರು.