Uncategorized

ಗಣೇಶೋತ್ಸವದ ನಿರ್ಬಂಧ ತೆರವುಗೊಳಿಸಿ : ಸರ್ಕಾರಕ್ಕೆ ಪ್ರತಿಪಕ್ಷಗಳ ಆಗ್ರಹ

ಬೆಂಗಳೂರು : ಗಣೇಶೋತ್ಸವಕ್ಕೆ ಜಿಲ್ಲಾಡಳಿತ ವಿಧಿಸಿರುವ ನಿರ್ಬಂಧವನ್ನು ತೆರವುಗೊಳಿಸಬೇಕೆಂದು ಒತ್ತಾಯಿಸಿ ಪ್ರತಿಪಕ್ಷದ ಸದಸ್ಯರು ಸರ್ಕಾರದ ವಿರುದ್ಧ ಮುಗಿಬಿದ್ದ ಪ್ರಸಂಗ ವಿಧಾನಪರಿಷತ್‍ನಲ್ಲಿ ನಡೆಯಿತು.

ಪ್ರಶ್ನೋತ್ತರದ ಅವಧಿಯಲ್ಲಿ ಬಿಜೆಪಿಯ ಸುನಿಲ್ ವಲ್ಯಾಪುರ್ ಅವರು ವಿಷಯ ಪ್ರಸ್ತಾಪಿಸಿ ಗಣೇಶ ಉತ್ಸವಕ್ಕೆ ಕಲಬುರಗಿ ಜಿಲ್ಲಾಡಳಿತ ನಿರ್ಬಂಧ ಹಾಕಿದೆ. ಅನ್ಯಧರ್ಮಗಳ ಆಚರಣೆಗೆ ಇಲ್ಲದ ನಿರ್ಬಂಧ ನಮ್ಮ ಆಚರಣೆಗೆ ಏಕೆ ಎಂದು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

ಇದಕ್ಕೆ ದನಿಗೂಡಿಸಿದ ಪ್ರತಿಪಕ್ಷದ ನಾಯಕ ಛಲವಾದಿ ನಾರಾಯಣ ಸ್ವಾಮಿ, ಎನ್.ರವಿಕುಮಾರ್, ಶಶಿಲ್ ನಮೋಶಿ, ಭಾರತಿ ಶೆಟ್ಟಿ ಮತ್ತಿತರ ಸದಸ್ಯರು, ಇದು ಕೇವಲ ಕಲಬುರಗಿಯಲ್ಲಿ ಮಾತ್ರ ಇಲ್ಲ. ಎಲ್ಲಾ ಜಿಲ್ಲೆಗಳಲ್ಲೂ ಇದೇ ಪರಿಸ್ಥಿತಿ ಇದೆ ಎಂದು ಕಿಡಿಕಾರಿದರು.

ಛಲವಾದಿ ನಾರಾಯಣ ಸ್ವಾಮಿ ಮಾತನಾಡಿ, ನಮ್ಮ ಹಬ್ಬಗಳಿಗೆ ಆಚರಣೆ ಮಾಡಲು ಜಿಲ್ಲಾಧಿಕಾರಿಗಳು ಇಲ್ಲವೇ ಬೇರೊಬ್ಬರು ಏಕೆ ಅನುಮತಿ ಕೊಡಬೇಕು. ಅದರಲ್ಲೂ ಕಲಬುರಗಿಯಲ್ಲಿ ವಿಭಿನ್ನವಾದ ಆಡಳಿತವಿದೆ. ಒಂದು ರೀತಿ ರಿಪಬ್ಲಿಕ್ ಆಫ್ ಕಲಬುರಗಿ ಇದೆ ಎಂದು ಪರೋಕ್ಷವಾಗಿ ಸಚಿವ ಪ್ರಿಯಾಂಕ ಖರ್ಗೆ ಹೆಸರು ಹೇಳದೆ ವಾಗ್ದಾಳಿ ನಡೆಸಿದರು.

ಬ್ರಿಟಿಷರ ಕಾಲದಲ್ಲೂ ಇಂತಹ ಪರಿಸ್ಥಿತಿ ಇರಲಿಲ್ಲ. ಗಣೇಶ ಉತ್ಸವವನ್ನು ನಮ್ಮ ಹಿಂದೂಗಳು ಶ್ರದ್ಧಾಭಕ್ತಿಯಿಂದ ಆಚರಿಸುತ್ತೇವೆ. ಇದು ನಮ್ಮ ಒಗ್ಗಟ್ಟಿನ ಸಂಕೇತ. ಇದಕ್ಕೆ ಏಕೆ ನಿರ್ಬಂಧ? ಮೊದಲು ತೆಗೆದುಹಾಕಿ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಈ ವೇಳೆ ಆಡಳಿತ ಮತ್ತು ಪ್ರತಿಪಕ್ಷದ ಸದಸ್ಯರ ನಡುವೆ ಮಾತಿನ ಚಕಮಕಿ ನಡೆಯಿತು. ಈಗಾಗಲೇ ಸಭಾನಾಯಕರು ಇದಕ್ಕೆ ಉತ್ತರ ಕೊಟ್ಟಿದ್ದಾರೆ. ನಾನು ಚರ್ಚೆಗೆ ಅವಕಾಶ ಕೊಡುವುದಿಲ್ಲ ಎಂದು ಸಭಾಪತಿ ಹೊರಟ್ಟಿಯವರು ಹೇಳಿದರು.

ಗಲಾಟೆಯ ಮಧ್ಯೆಯೇ ಸಿ.ಟಿ.ರವಿ ಮಾತನಾಡಿ, ಯಾವುದೋ ಒಂದು ಧರ್ಮದ ತುಷ್ಟೀಕರಣಕ್ಕಾಗಿ ನಮ್ಮ ಹಿಂದೂ ಧರ್ಮದ ಹಬ್ಬಗಳಿಗೆ ನಿರ್ಬಂಧ ಹಾಕಲಾಗುತ್ತಿದೆ. ನಿಮಗೆ ಬೇರೆ ಧರ್ಮದ ಹಬ್ಬಗಳಿಗೆ ಇದೇ ನಿರ್ಬಂಧ ಹಾಕುವ ತಾಕತ್ತು ಇಲ್ಲವೇ? ಎಂದು ಪ್ರಶ್ನಿಸಿದರು.

ಆಗ ಮತ್ತೆ ಸದನದಲ್ಲಿ ಕೋಲಾಹಲ ಉಂಟಾಗಿ ಯಾರು, ಏನು ಹೇಳುತ್ತಿದ್ದಾರೆ ಎಂಬುದೇ ತಿಳಿಯಲಿಲ್ಲ. ನಾನು ಈಗಾಗಲೇ ರೂಲಿಂಗ್ ಕೊಟ್ಟಿದ್ದೇನೆ. ಇದರ ಬಗ್ಗೆ ಚರ್ಚೆಗೆ ಅವಕಾಶ ನೀಡುವುದಿಲ್ಲ ಎಂದು ಸಭಾಪತಿಗಳು ಪುನರುಚ್ಚರಿಸಿದರು. ಪ್ರತಿಪಕ್ಷದ ಸದಸ್ಯರು ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗುತ್ತಿದ್ದಾಗಲೇ ವಿಧಾನಪರಿಷತ್ ಕಲಾಪವನ್ನು ಅನಿರ್ಧಿಷ್ಟಾವಧಿಗೆ ಮುಂದೂಡಲಾಯಿತು.

ಆಂದೋಲನ ಡೆಸ್ಕ್

Recent Posts

ಓದುಗರ ಪತ್ರ: ಕೊನೆಗೊಳ್ಳಲಿ ಸಂಘರ್ಷ!

ಕೊನೆಗೊಳ್ಳಲಿ ಸಂಘರ್ಷ! ಯುದ್ಧವನು ಕೊನೆಗಾಣಿಸಲು ರಾಜತಾಂತ್ರಿಕ ಮಾತುಕತೆಯೇ ಉತ್ತಮವೆಂಬ ಭಾರತದ ನಿಲುವಿಗೆ ಬ್ರಿಕ್ಸ್ ನಾಯಕರು ಒಕ್ಕೊರಲಿನಿಂದ ಒಪ್ಪಿರುವುದು ಸ್ವಾಗತಾರ್ಹ! ಇದಲ್ಲವೇ…

29 mins ago

ಓದುಗರ ಪತ್ರ: ಚುರುಕಾಗಲಿ 6ರ ಪ್ಲಾಟ್ ಫಾರಂ ಟಿಕೆಟ್ ಕೌಂಟರ್

ಮೈಸೂರಿನ ನೈಋತ್ಯ ರೈಲ್ವೆಗೆ ಸೇರಿರುವ ಅಶೋಕ ಪುರಂ ರೈಲು ನಿಲ್ದಾಣದಲ್ಲಿ ಪ್ಲಾಟ್ ಫಾರಂ ೬ರ ಕಡೆ ರೈಲು ಪ್ರಯಾಣಿಕರಿಗೆ ಅನುಕೂಲವಾಗಲೆಂದು…

31 mins ago

ಓದುಗರ ಪತ್ರ: ಲೆಕ್ಕ ಹಾಕಿಕೊಂಡು ಮುಷ್ಕರ ನಡೆಸುವ ಬ್ಯಾಂಕ್ ಯೂನಿಯನ್‌ಗಳ ವಿರುದ್ಧ ಕ್ರಮ ಕೈಗೊಳ್ಳಲಿ

ಸರ್ಕಾರಿ ಸ್ವಾಮ್ಯದ ಬ್ಯಾಂಕ್ ನೌಕರರು ಕಳೆದ ಶುಕ್ರವಾರ ತಮ್ಮ ಬಹುದಿನಗಳ ಬೇಡಿಕೆಯಾದ ವಾರಕ್ಕೆ ಐದು ದಿನಗಳ ಕಾಲ ಮಾತ್ರ ಕೆಲಸ…

33 mins ago

ಬಾಗಿಲುಗಳನ್ನು ತೆರೆದಿಡಿ, ಸಂವಹನವನ್ನು ಪಾರದರ್ಶಕವಾಗಿಡಿ

ಎಸ್.ಎಲ್.ಚನ್ನಬಸವಣ್ಣ , ಉಪನಿರ್ದೇಶಕರು, ಕರ್ನಾಟಕ ಪೊಲೀಸ್ ಅಕಾಡೆಮಿ, ಮೈಸೂರು ಸಾರ್ವಜನಿಕ ಸಂಸ್ಥೆಗಳಿಗೆ ಅತ್ಯಂತ ಮುಖ್ಯವಾದ ಪಾಠ  ಯಾವುದೇ ನಾಗರಿಕನು ತನ್ನ…

42 mins ago

ಗಾಲಿಕುರ್ಚಿಯಲ್ಲಿ ಕುಳಿತೇ ಯಶಸ್ವೀ ಲೇಖಕಿಯಾದ ಹಿಮಾಂಶಿಕಾ

ಪಂಜುಗಂಗೊಳ್ಳಿ ಅವರ ವಾರದ ಅಂಕಣ  ದೈಹಿಕ ನ್ಯೂನತೆ ನಡುವೆ ಆರ್ಥಿಕ ಪ್ರಗತಿಯ ಮೆಟ್ಟಿಲೇರಿದ ಮಹಿಳೆ ಹರ‍್ಯಾಣದ ಅಂಬಾಲಾದ ಹಿಮಾಂಶಿಕಾ ಶರ್ಮಾರಿಗೆ…

45 mins ago

ಇ-ಕೆವೈಸಿಗೆ ಮುಗಿಬಿದ್ದ ಫಲಾನುಭವಿಗಳು

ಕೆ.ಬಿ.ರಮೇಶನಾಯಕ ರಾಜ್ಯ ಸರ್ಕಾರದ ಗಡುವಿನೊಳಗೆ ಪ್ರಕ್ರಿಯೆ ಮುಗಿಸಲು ಇಲಾಖೆ ಕಸರತ್ತು.  ಮೈಸೂರು: ನಕಲಿ ಫಲಾನುಭವಿಗಳನ್ನು ಕೈಬಿಟ್ಟು ಪಾರದರ್ಶಕತೆ ಕಾಯ್ದುಕೊಳ್ಳಲು ಹಾಗೂ…

50 mins ago